ಕಲರವ

Posts Tagged ‘ಸ್ವಾತಂತ್ರ್ಯ ದಿನಾಚರಣೆ

– ಹೇಮಾ ಪವಾರ್, ಬೆಂಗಳೂರು

ಸ್ವಾತಂತ್ರ್ಯದ ದಿನದಲ್ಲಿ ಬರೆಯಬಹುದಾದ ಮಾಡಬಹುದಾದ ವಿಷಯಗಳು ನನಗೆ
ಸ್ಪಷ್ಟವಾಗಿಲ್ಲವಾದರೂ ಈ ಸಲದ ಸ್ವಾತಂತ್ರ್ಯ ದಿನ ನನ್ನ ಪಾಲಿಗೆ ಅತಿ ಮುಖ್ಯ ದಿನ
ಎನಿಸಿದ್ದರಿಂದ ಬರೆಯುತ್ತಿದ್ದೇನೆ. ಮೊದಲೆಲ್ಲಾ ಇತರೆ ರಜದ ದಿನಗಳ ಹಾಗೆ
ಸ್ವಾತಂತ್ರ್ಯದಿನಾಚರಣೆಯೂ ಮುಗಿದು ಹೋಗುತ್ತಿತ್ತು ಮತ್ತು ಹಾಗೆ ಕಳೆದುಬಿಟ್ಟಿದ್ದರ
ಬಗ್ಗೆ ಸಣ್ಣದೊಂದು ಗಿಲ್ಟ್ ಮನಸಲ್ಲುಳಿದುಬಿಡುತ್ತಿತ್ತು, ಈ ಸಲ ಹಾಗಾಗಲಿಲ್ಲವೆಂಬುದೇ
ಖುಷಿಯ ವಿಚಾರ. ನಾನು ಬೆಳ್ಳಂಬೆಳಿಗ್ಗೆ ಎದ್ದು ರೆಡಿಯಾಗಿ ಸ್ಯಾಟಲೈಟ್ ಬಸ್ಟಾಪ್
ತಲುಪಿಕೊಂಡು, ಇಡ್ಲಿ ತಿಂದು, ಬಿಸೀ ಬಿಸಿ ಕಾಫಿ ಕಪ್ ಹಿಡಿದು ವಾಚ್ ನೋಡಿಕೊಂಡಾಗ ಸಮಯ
ಆರುಗಂಟೆ. ಅಲ್ಲಿಂದ ನನ್ನ ಪಯಣ ಸಾಗಿದ್ದು ಮದ್ದೂರಿನ ಹತ್ತಿರವಿರುವ ನಂಬಿನಾಯಕನಹಳ್ಳಿ
ಎಂಬ ಗ್ರಾಮಕ್ಕೆ. ಹಳ್ಳಿಗಳು ನನಗೇ ಪ್ರತಿ ವಿಷಯದಲ್ಲೂ ವಿಸ್ಮಯದ ಸಂತೆ, ದೊಡ್ಡ ದೊಡ್ಡ
ಹೆಂಚಿನ ಮನೆಗಳು, ಮನೆಯಲ್ಲೇ ಸಾಕಿರುವ ರೇಷ್ಮೆ ಹುಳುಗಳು, ಆಡು, ಕುರಿ, ಹಸು, ಎತ್ತು,
ಎಮ್ಮೆ, ಕೋಳಿ ಮತ್ತು ಅವೆಲ್ಲಕ್ಕೂ ಮನೆಮಂದಿ ಮಾಡುವ ಆರೈಕೆ, ಹಳ್ಳಿಯ ನಿರ್ಮಲ ಗಾಳಿ,india_flag_sketch1
ಹಸಿರು ಎಲ್ಲವೂ ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಒಂದು
ಅಪೂರ್ವ ಸೆಳೆತವನ್ನುಂಟು ಮಾಡುತ್ತದೆ. ಅಲ್ಲಿನ ಪರಿಚಿತರ ಮನೆ ಹೊಕ್ಕು ಎಲ್ಲರನ್ನು
ಮಾತಾಡಿಸುತ್ತಿದ್ದಾಗಲೇ ಟಿ.ವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮವೊಂದು ಗಮನ ಸೆಳೆಯಿತು,
ನಟಿ ರಮ್ಯ ಯಡಿಯೂರಪ್ಪನವರ ಸಂದರ್ಶನ ಮಾಡಿತ್ತಿದ್ದುದ್ದು. ಚಾನೆಲ್ ಸರ್ಫ್
ಮಾಡುತ್ತಿದ್ದ ಸಣ್ಣ ಹುಡುಗ ರಮ್ಯಳ ಮುಖ ನೋಡುತ್ತಿದ್ದ ಹಾಗೆ ನಿಲ್ಲಿಸಿದ,
ಪರವಾಗಿಲ್ವೆ ನಮ್ಮ ಮುಖ್ಯಮಂತ್ರಿಗಳು ಹೀರೋಯಿನ್ ರಿಗೆಲ್ಲಾ ಸಂದರ್ಶನ ಕೊಡುವ ಧೈರ್ಯ
ಮಾಡಿದ್ದಾರೆಂದು ನಾನೂ ಕಿವಿಗೊಟ್ಟೆ, ಆಕೆಯ ಪ್ರಶ್ನೆಗಳನ್ನು ಕೇಳುತ್ತಿದ್ದ ಹಾಗೇ
ನನಗೆ ಮೈ ಉರಿದು ಹೋಯಿತು, ನೀವೇಕೆ ವೈಟ್ ಸಫಾರಿ ಹಾಕುತ್ತೀರಿ? ನೀವು ಮ್ಯಾನಿಕ್ಯೂರ್
ಪೆಡಿಕ್ಯೂರ್ ಮಾಡಿಸುತ್ತೀರ? ಬ್ಯೂಟಿ ಪಾರ್ಲರಿಗೆ ಹೋಗುತ್ತೀರ? ಅರೆ ರಾಜ್ಯದ ಮುಖ್ಯ
ಮಂತ್ರಿಗಳಿಗೆ ಕೇಳುವ ಪ್ರಶ್ನೆಯಾ ಇದು?! ಇರಲಿ ಅದರ ಬಗ್ಗೆ ಮುಂದೆ ಬರೆಯುವೆ.

ಅಲ್ಲಿನ ವಾತಾವರಣ ಅನುಭವಿಸಿ ಖುಷಿ ಪಡಲು ಇನ್ನೊಂದು ಅವಕಾಶವೆಂಬಂತೆ ಪಕ್ಕದ ಹಳ್ಳಿಗೆ
ಹೋಗಬೇಕಿದ್ದ ಬಸ್ ಆ ದಿನ ನಾಪತ್ತೆಯಾಗಿತ್ತು, ಮೂರು ಕಿ.ಮೀ ನಷ್ಟು ದೂರವಿದ್ದ ಊರಿಗೇ
ನಡೆದೇ ಹೊರಟೆವು. ನನ್ನ ಜೊತೆಯಲ್ಲಿ ಬರುತ್ತಿದ್ದ ಗೆಳೆಯರೊಬ್ಬರೊಡನೆ ಹಳ್ಳಿಯ ಆಗು
ಹೋಗುಗಳ ಬಗ್ಗೆ, ಪಟ್ಟಣದ ಯಾಂತ್ರಿಕತೆಯ ಬಗ್ಗೆ ಲೋಕಾಭಿರಾಮವಾಗಿ ಮಾತು ಸಾಗಿತ್ತು.
ಮಾತು ಒಳ್ಳೆಯ ಬಿರುಸು ಪಡೆದು ನಾನು ಹಳ್ಳಿಯ ಜನರೆಲ್ಲ ನೆಮ್ಮದಿ ಉಳ್ಳವರೆಂದು
ಪಟ್ಟಣದವರ ಚೆನ್ನಾಗಿರುವಿಕೆ ಬರಿಯ ತೋರಿಕೆಯೆಂದೂ ಹೇಳಿದೆ. ಆದರೆ ಆ ಹಳ್ಳಿಯ ಜನರ ಇತರ
ಸ್ವಭಾವಗಳ ಬಗ್ಗೆ (ಅವರು ಸ್ವತಃ ಅದೇ ಊರಿನವರಾದ್ದರಿಂದ) ಹೇಳುತ್ತಾ, ಹೇಗೆ ರೈತನ
ಶ್ರಮವು ಸರಿಯಾದ ಅನುಕೂಲಗಳಿಲ್ಲದೆ ಇರುವುದರಿಂದ ಫಲ ದೊರೆಯದೇ ಪೋಲಾಗುತ್ತಿದೆ,
ಅನಕ್ಷರಸ್ಥ ಹಳ್ಳಿಗರು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದೆ ಅವುಗಳಿಗೆ
ವಿಮುಖರಾಗುತ್ತಾರೆ,  ಸಮಯ ಬಂದಾಗ ಒಗ್ಗಟ್ಟಾಗಿರಲು ಒದ್ದಾಡುತ್ತಾರೆ, ಕಷ್ಟವಿಲ್ಲದ
ಪಟ್ಟಣದ ಜೀವನಕ್ಕೆ ಹಾತೊರೆಯುತ್ತಾರೆ, ಸರ್ಕಾರವು ರೈತನಿಗೆ ಕೊಟ್ಟಿರುವ
ಸೌಲಭ್ಯಗಳನ್ನು ಬಳಸಿಕೊಳ್ಳುವಲ್ಲಿ ಎಡವುತ್ತಾರೆ, ಸರ್ಕಾರವು ಒದಗಿಸಿರುವ
ಸೌಲಭ್ಯಗಳಲ್ಲಿ ರೈತನಿಗೆ ಆಗುತ್ತಿರುವ ಅನುಕೂಲವೆಷ್ಟು ಎಂದೆಲ್ಲ ವಿವರಿಸಿ ಒಂದು
ಉದಾಹರಣೆಯನ್ನು ಕೊಟ್ಟರು.

ಅದನ್ನು ವಿವರಿಸುವ ಮೊದಲು ಕಬ್ಬಿನ ಬಗ್ಗೆ ಸ್ವಲ್ಪ ವಿವರಣೆ ಅಗತ್ಯ. ಕಬ್ಬು ಒಂದು
ದೀರ್ಘ ಕಾಲದ ಬೆಳೆ, ಕಬ್ಬನ್ನು ಸಸಿಯಿಂದ ಕಟಾವಿನ ಹಂತದವರೆಗು ಬೆಳೆಯಲು ಕನಿಷ್ಟ
ಹನ್ನೊಂದು ತಿಂಗಳು ಬೇಕಾಗುತ್ತದೆ. ಕಬ್ಬು ಬೆಳೆಗಾರರಿಗೆ ಸರ್ಕಾರದಿಂದ ಸಾಲ
ದೊರೆಯುತ್ತದೆ. ಸರ್ಕಾರ, ರೈತನು ಬೆಳೆದ ಕಬ್ಬನ್ನು ತನ್ನದೇ ಅಧೀನದಲ್ಲಿರುವ
ಕಾರ್ಖಾನೆಗೆ ಕೊಡುವಂತೆ ಒಪ್ಪಂದ ಮಾಡಿಕೊಂಡು ಕಡಿಮೆ ಬಡ್ಡಿ ದರದಲ್ಲಿ ಸಾಲ
ಕೊಡುತ್ತದೆ. ನಿಗಧಿತ ಸಮಯದಲ್ಲಿ ಕಬ್ಬನ್ನು ಕಾರ್ಖಾನೆಗೆ ಒದಗಿಸದ ಪಕ್ಷದಲ್ಲಿ,
ಸಾಲವನ್ನು ಬಡ್ಡಿ ಮತ್ತು ಇತರೆ ದಂಡಗಳ ಸಮೇತ ಹಿಂತಿರುಗಿಬೇಕಾಗುತ್ತದೆ. ಇತ್ತ
ಸರ್ಕಾರದ ಅಧೀನದಲ್ಲಿರುವ ಕಾರ್ಖಾನೆಯ ಫೀಲ್ಡ್ ಮ್ಯಾನ್ ನಿಂದ ರೈತನ ಜಮೀನನ್ನು
ಪರಿಶೀಲಿಸಿ ಆ ಜಾಗದಲ್ಲಿ ಬೆಳೆಯಬಹುದಾದ ಕಬ್ಬನ್ನು ಅಂದಾಜಿಸಿ, ಕಟಾವಿನ ಸಮಯದಲ್ಲಿ
ಅಂದಾಜಿಸದಷ್ಟೇ ಕಬ್ಬು ಜಮೀನಿನಲ್ಲಿ ದೊರೆಯಬೇಕೆಂದು ಒಪ್ಪಂದದಲ್ಲಿ ಹೇಳಿರುತ್ತಾರೆ.
ಇದು ಸಾಲ ನೀಡಿ ರೈತನಿಂದ ಮರುಪಾವತಿ ಪಡೆಯುವುದಕ್ಕೆ ಸರ್ಕಾರ ಮಾಡಿರುವ ನಿಯಮ. ಆದರೆ
ಇಲ್ಲಾಗುವ ವ್ಯತಿರಿಕ್ತ ಪರಿಣಾಮಗಳೆಂದರೆ ಕಾರ್ಖಾನೆಯು ಒಂದೊಮ್ಮೆ ಫೀಲ್ಡ್ ಮ್ಯಾನ್
ನನ್ನು ಕಳಿಸಿ ಬೆಳೆಯನ್ನು ಅಂದಾಜಿಸಿದ ಮೇಲೂ ಕೆಲವೊಮ್ಮೆ ಸರಿಯಾದ ಸಮಯದಲ್ಲಿ ಕಟಾವು
ಮಾಡಿಸುವಲ್ಲಿ ತಡಮಾಡುತ್ತದೆ. (ಇದಕ್ಕೆ ಬೇರೆ ಬೇರೆಯದೇ ಕಾರಣಗಳಿರುತ್ತವೆ,
ಕಾರ್ಖಾನೆಯೂ ಅದಾಗಲೇ ಬೇರೆ ಕಡೆಯಿಂದ ಕಡಿಮೆ ಬೆಲೆಯ ಕಬ್ಬು ತರಿಸಿದ್ದರೆ,
ಕಾರ್ಖಾನೆಯಲ್ಲಿ ಕಡಿಮೆ ಕಬ್ಬನ್ನು ಅರೆಯುವ ಅವಕಾಶವಿದ್ದು ಜಾಸ್ತಿ ಜಮೀನಿಗೆ ಒಪ್ಪಂದ
ಮಾಡಿಕೊಂಡಿದ್ದರೆ, ಮಳೆ ಸರಿಯಾಗಿ ಆಗದೇ ಬೆಳೆಯೇ ತಡವಾಗಿದ್ದರೆ, ಇತ್ಯಾದಿ) ಆಗ ತಪ್ಪು
ಸರ್ಕಾರದ ಅಧೀನದಲ್ಲಿರುವ ಕಾರ್ಖಾನೆಯದ್ದೇ ಆದರೂ ರೈತ ತಾನು ಪಡೆದಿರುವ ಸಾಲಕ್ಕೆ
ಬಡ್ಡಿ ಕಟ್ಟಲೇ ಬೇಕು. ಸರ್ಕಾರದ್ದೇ ಅಧೀನದಲ್ಲಿರುವ ಎರೆಡು ವಿಭಾಗಗಳು ಒಂದಕ್ಕೊಂದು
ಪೂರಕವಲ್ಲದೆ ರೈತನಿಗೆ ಅನಾನುಕೂಲಕರವಾಗಿದೆ ಎಂಬುದು ಒಂದು ಅಂಶವಾದರೆ, ಒಂದೊಮ್ಮೆ
ಕಬ್ಬಿನ ಬೆಲೆಯಲ್ಲಿ ಏರಿಕೆ ಇದ್ದರೆ ಕೆಲವು ರೈತರು ಖಾಸಗೀ ಕಾರ್ಖಾನೆಯವರಿಗೆ
(ಬಂಡವಾಳಶಾಹಿಗಳಾದ ಖಾಸಗೀ ಕಾರ್ಖಾನೆಯವರು ತಮ್ಮ ಉತ್ಪನ್ನಗಳನ್ನು ಹೆಚ್ಚಿನ
ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಂಡಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಿ
ಹೆಚ್ಚಿನ ಬೆಲೆಗೆ ಮಾರುತ್ತಾರೆ) ತಮ್ಮ ಬೆಳೆಯನ್ನು ಹೆಚ್ಚಿನ ಬೆಲೆಗೆ ಮುಂಚೆಯೇ
ಮಾರಿಕೊಂಡು ಕಾರ್ಖಾನೆಯವರು ಬಂದಾಗ ಬೆಳೆಯಿಲ್ಲದ ಜಮೀನನ್ನು ತೋರಿಸುತ್ತಾರೆ.
ಕಾರ್ಖಾನೆಯಲ್ಲಾಗ ಕಬ್ಬಿನ ಪೂರೈಕೆ ಇಲ್ಲದೆ ಅರೆಯುವ ಮಶೀನುಗಳು ಬಳಕೆಯಾಗದೆ ಸರ್ಕಾರವು
ಅದರಲ್ಲಿ ತೊಡಗಿಸಿದ ಹಣ ಪೋಲಾಗುತ್ತದೆ. ಕಬ್ಬಿನ ಬೆಲೆಯ ಹೆಚ್ಚಳಕ್ಕೆ, ಸಾಲ ಮನ್ನಾ
ಮಾಡಲಿಕ್ಕೆ ಮುಷ್ಕರಗಳು ಹೂಡಲಾಗುತ್ತದೆಯಾದರೂ ನಿಜವಾಗಿಯೂ ತೊಡಕಾಗಿರುವ ಈ
ಕಾರಣಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸರ್ಕಾರ ಮತ್ತು ಇತರ ಹೋರಾಟಗಾರರೆನಿಸಿಕೊಂಡವರು
ಸೋಲುತ್ತಾರೆ.

ಇದು ಗಮನಕ್ಕೆ ಬಂದ ಉದಾಹರಣೆಯಾಗಿದ್ದು ವ್ಯವಸಾಯ ಮಾಡುವಾಗ ಇಂತಹ ಹಲವು ಹತ್ತು
ಸಮಸ್ಯೆಗಳನ್ನು ರೈತನು ಎದುರಿಸಬೇಕಾಗುತ್ತದೆ. ರೈತನ ಜೀವನ ನಾನಂದುಕೊಂಡಷ್ಟು ಸುಲಭವೂ,
ಸಲೀಸೂ ಅಲ್ಲ ಎಂಬುದರ ಅರಿವಾಯಿತು. ಇವೆಲ್ಲದರ ಅರಿವು ಎಷ್ಟು ಜನಕ್ಕೆ ಇರುತ್ತದೆ?
ಅರಿವು ಮೂಡಿದ ಮೇಲಾದರೂ ಯುವಜನಾಂಗವೆನಿಸಿಕೊಂಡ ನಾವು ಮಾಡಬೇಕಾದದ್ದೇನು? ಇಂದಿನ ಯುವ
ಪೀಳಿಗೆ ವ್ಯವಸಾಯದಲ್ಲಿ ತೊಡಗುತ್ತಿಲ್ಲ ಎಂದು ದೂರುವ ಹಿರಿಯರಿಗೆ, ಇಲ್ಲಿನ
ಅನಾನುಕೂಲಗಳ ಅರಿವಿಲ್ಲವೇ? ಹಾಯಾದ ಪಟ್ಟಣದ ಜೀವನ ನೌಕರಿ ಎಲ್ಲವನ್ನು ಬಿಟ್ಟು
ವ್ಯವಸಾಯ ಮಾಡಲು ಯುವಕರಾದರೂ ಏಕೆ ಮುಂದೆ ಬಂದಾರು? ಮುಂದೆ ಬರುವಂತೆ ನಮ್ಮ ಸರ್ಕಾರ
ಏನು ಕ್ರಮ ತೆಗೆದುಕೊಂಡಿದೆ? ನಮ್ಮ ಶಿಕ್ಷಣ ಪದ್ದತಿಯು ರೈತರ ಸಮಸ್ಯೆಗಳುindia_flag_sketch1
ಯುವಜನಾಂಗಕ್ಕೆ ಎಷ್ಟರ ಮಟ್ಟಿಗೆ ಮುಟ್ಟಿಸುತ್ತಿದೆ? ನಗರದ ಜನತೆಗೆ ಹೀಗೆ
ಹಳ್ಳಿಗಳಲ್ಲಿ ರೈತರು ಅನುಭವಿಸುತ್ತಿರುವ ಬವಣೆ ತಿಳಿದಿದೆಯೇ? ನಮ್ಮಲ್ಲಿಲ್ಲಿ ದೇಶದ
ತುಂಬಾ ಸಮಸ್ಯೆಗಳಿವೆ, ಸ್ವಾತಂತ್ರ್ಯದದಿನ, ನಟಿಯೊಬ್ಬಳು ಮುಖ್ಯಮಂತ್ರಿಯನ್ನು
ಕೇಳುತ್ತಾಳೆ ’ನೀವೇಕೆ ವೈಟ್ ಸಫಾರಿ ಹಾಕುತ್ತೀರಿ? ನೀವು ಮ್ಯಾನಿಕ್ಯೂರ್ ಪೆಡಿಕ್ಯೂರ್
ಮಾಡಿಸುತ್ತೀರ? ಬ್ಯೂಟಿ ಪಾರ್ಲರಿಗೆ ಹೋಗುತ್ತೀರ?’ ನಗುವುದೋ ಅಳುವುದೋ ನೀವೆ ಹೇಳಿ?!

(ಮುಗಿಸುವ ಮುನ್ನ: ಇದನ್ನೆಲ್ಲ ತಿಳಿದುಕೊಂಡು ಹೀಗೆ ಬರೆಯುತ್ತಿರುವುದರಿಂದ ನನ್ನ
ದೇಶಕ್ಕೆ ಅದರ ಸಮಸ್ಯೆಗಳ ನಿವಾರಣೆಗೆ ನಾನು ಉಪಕಾರ ಮಾಡುತ್ತಿದ್ದೇನೆ ಎಂದು
ನನಗನಿಸುತ್ತಿಲ್ಲ. ನಗರದ ನೌಕರಿಯಲ್ಲಿ ಆರಾಮವಾಗಿ ಕಾಲ ಕಳೆಯುತ್ತಿರುವ ನಾನು ಹಳ್ಳಿಗೆ
ಹೋಗಿ ಎಂದಾದರು ಮೈ ಬಗ್ಗಿಸಿ ದುಡಿಯಬಲ್ಲೆನೇ? ಬಡಕಲು ದನಗಳಿಗೆ ನೇಗಿಲನ್ನು ಕಟ್ಟಿ
ವ್ಯವಸಾಯ ಮಾಡುತ್ತಿರುವ ರೈತನಿಗೆ ನಗರದಲ್ಲಿ ನಮಗೆ ಸಿಗುವ ಸಾರ್ವಜನಿಕ ಸೌಲಭ್ಯಗಳ ಶೇ
೫ ರಷ್ಟೂ ಸಿಗುತ್ತಿಲ್ಲ. ಓದಿರುವ ನಾವು ಸರ್ಕಾರಿ ನೌಕರಿಗಳಲ್ಲಿನ ಮೀಸಲಾತಿ,
ಕನ್ನಡಪರಚಳವಳಿಗಳಲ್ಲಿ ತುಸು ಹೆಚ್ಚೇ ಎನಿಸುವಷ್ಟು ಹೋರಾಡುತ್ತೀವಾದರೂ, ರೈತನ ಕಷ್ಟಗಳ
ಬಗ್ಗೆ ಎಂದಾದರೂ ಯೋಚಿಸಿದ್ದೇವೆಯೇ? ನಿಜವಾಗಿಯೂ ಅತಿ ಹೆಚ್ಚಿನ ಪ್ರಾಮುಖ್ಯತೆ,
ಸೌಲಭ್ಯಗಳು ಸಿಗಬೇಕಾಗಿರುವುದು ನಮ್ಮ ದೇಶದ ಬೆನ್ನೆಲುಬಾದ ರೈತನಿಗಲ್ಲವೇ?)


Blog Stats

  • 71,866 hits
ಮಾರ್ಚ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

Top Clicks

  • ಯಾವುದೂ ಇಲ್ಲ