Posts Tagged ‘ಮೇರಿ ಮರ್ಜಿ’
ನನ್ನ ಅರ್ಜಿಗೆ ಇನ್ನೂ ಉತ್ತರ ಬಂದಿಲ್ಲ!
Posted ಜುಲೈ 15, 2009
on:- In: ಮೇರಿ ಮರ್ಜಿ
- 3 Comments
– ರೇಶ್ಮಾ ನಾರಾಯಣ, ಉಡುಪಿ
ಅವನು ನಮ್ಮ ಪುಟ್ಟ ಜಗತ್ತಿಗೆ ಅದ್ಭುತ ಹೀರೋ ಆಗಿದ್ದ
ನಾನು ಪ್ರೈಮರಿಯಲ್ಲಿದಾಗ ಟಿ.ವಿ ಯಲ್ಲಿ ಶಕ್ತಿಮಾನ್ ಅಂತ ಒಂದು ಧಾರಾವಾಹಿ ಬರ್ತಿತ್ತು. ನನ್ನ ಥರಾನೇ ಎಲ್ಲ ಮಕ್ಕಳೂ ಇಷ್ಟ ಪಡ್ತಿದ್ದ ಧಾರಾವಾಹಿ ಅದು. ಪ್ರತಿ ಆದಿತ್ಯವಾರ ಮಧ್ಯಾನ್ ೧೨ ಗಂಟೆಗೆ ಬರ್ತಿದ್ದ ಧಾರಾವಾಹಿ ನೋಡ್ಕೊಂಡು ಹೋಗಿ, ಸೋಮವಾರ ಬೆಳಿಗ್ಗೆ study periodನಲ್ಲಿ ಫ್ರೆಂಡ್ಸ್ ಜೊತೆ ಅದರ ಬಗ್ಗೆ ಪಾಠಕ್ಕಿಂತ ಸೀರಿಯಸ್ ಆಗಿ ಚರ್ಚೆ ಮಾಡ್ತಿದ್ವಿ. ಆಕಸ್ಮಾತ್ ಧಾರಾವಾಹಿ ಬರೋ ಟೈಮಲ್ಲಿ ಕರೆಂಟ್ ಇಲ್ಲದಿದ್ರೆ ಮಾತ್ರ ಕೆ. ಇ ಬಿ ಯವರಿಗೆ ಮನಸಾರೆ ಶಾಪ ಹಾಕುತ್ತಿದ್ವಿ. ಕರೆಂಟ್ ಇದ್ದ ಒಂದು ದಿನಾನೂ ’ಶಕ್ತಿಮಾನ್’ ನ ಮಿಸ್ ಮಾಡ್ಕೊಂಡಿರಲಿಲ್ಲ. ಶನಿವಾರನೇ ಹೋಂವರ್ಕ್ ಮುಗಿಸಿ ಕುಳಿತಿರುತ್ತಿದ್ವಿ.
ಆ ಒಂದು ಗಂಟೆಯ ಅವಧಿ ನಮ್ಮ ಪಾಲಿಗೆ ಅತೀ ಪ್ರಿಯವಾಗಿರ್ತಿತ್ತು. ಆ ಟೈಂ ನಲ್ಲಿ ಊಟಕ್ಕೆ ಕರೆದರೂ ನಾವು ಕೇಳಿಸದಂತೆ ಕೂತಿರ್ತಿದ್ವಿ. ಶಕ್ತಿಮಾನ್ ಪಾತ್ರಧಾರಿ ಮುಖೇಶ್ ಖನ್ನಾ ಹಾಕಿಕೊಳ್ತಿದ್ದ ಆ ಕೆಂಪು ಜಾಕೆಟ್, ಅದರ ನಡುವಿನ ಗೋಲ್ಡ್ ಕಲರ್ ಸ್ಟಾರ್ ಎಲ್ಲಾ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಶಕ್ತಿಮಾನ್ ಟ್ಯಾಟ್ಟೂ ಗಳನ್ನಂತೂ ರಾಶಿ ರಾಶಿ ಒಟ್ಟು ಮಾಡಿ ಪುಸ್ತಕ, ಕಂಪಾಸ್ ನ ಮೇಲೆಲ್ಲಾ ಅಂಟಿಸುತ್ತಿದ್ವಿ. ದ್ವಿಜ್ ಎಂಬ ಬಾಲಕನ ಕೈಯಲ್ಲಿನ ಆ ಟೈಮ್ ಮಶೀನ್ ಕನಸಲ್ಲೂ ನಮ್ಮನ್ನು ಕಾಡುತ್ತಿತ್ತು. ಅವನು ಅಲ್ಲಿ ರಾಕ್ಷಸರ ಜೊತೆ ಹೋರಾಡುತ್ತಿದ್ದರೆ ನಾವು ಇಲ್ಲಿ ಕುಳಿತು ನಾವೇ ಹೊಡೆದಾಡ್ತಿದ್ದೀವಿ ಅನ್ನೋ ಥರ ಆಡ್ತಿದ್ವಿ.
ಶಕ್ತಿಮಾನ್ ನ ’ಪಂಡಿತ್ ಗಂಗಾಧರ್ ವಿದ್ಯಾಧರ್ ಮಾಯಾಧರ್ ಓಂಕಾರನಾಥ್ ಶಾಸ್ತ್ರಿ’ ಅನ್ನೋ ಡೈಲಾಗ್ ಅಂತೂ ಫೇವರೀಟ್ ಆಗಿತ್ತು. ಅದರಲ್ಲಿನ ಗಿಲ್ ವಿಶ್ ಅನ್ನೋ ರಾಕ್ಷಸ ಕೈ ಬೆರಳುಗಳನ್ನು ತಿರುಗಿಸೋ ರೀತಿ ಭಯಾನಕವಾಗಿರ್ತಿತ್ತು. ಮಾತಾಡಿದ್ದಕ್ಕೆ ಹೆಸರು ಬರೆದು ಟೀಚರ್ ಗೆ ಕೊಟ್ಟ ನಮ್ಮ ಕ್ಲಾಸ್ ನ ಒಬ್ಬ ಹುಡುಗನಿಗೆ ’ಗಿಲ್ ವಿಶ್’ ಅಂತ ಹೆಸರಿಟ್ಟು ಬೇಕಾದಷ್ಟು ಬೈದು ಸಿಟ್ಟು ತೀರಿಸ್ಕೋತಿದ್ವಿ. ರಜೆಯಲ್ಲಿ ಶಕ್ತಿಮಾನ್ ಆಟ ಆಡೋವಾಗ ’ನಾನಾಗ್ತೀನಿ.. ತಾನಾಗ್ತೀನಿ’ ಅಂತ ಗಲಾಟೆ ಮಾಡಿ ಕೊನೆಗೆ ಆಟ ಜಗಳದಲ್ಲಿ ಮುಗಿದಿರ್ತಿತ್ತು. ಅದರ ಕ್ರೇಜ್ ಎಷ್ಟಿತ್ತು ಅಂದರೆ ಅದು ಮುಗಿದಾಗ, ’ಪುನಃ ಮೊದಲಿನಿಂದನಾದ್ರೂ ತೋರಿಸ್ಬೇಕಿತ್ತು’ ಅಂದುಕೊಂಡಿದ್ವಿ. ಶಕ್ತಿಮಾನ್ ಥರಾನೇ ಮಹಡಿ ಮೇಲಿಂದ ಹಾರೋಕೆ ಹೋಗಿ ಒಬ್ಬ ಹುಡುಗ ಬಿದ್ದು ಪ್ರಾಣ ಕಳೆದುಕೊಂಡ ಅಂತ ಗೊತ್ತಾದಾಗ ತುಂಬಾ ಬೇಜಾರಾಗಿತ್ತು. ಶಕ್ತಿಮಾನ್ ನ ಹಾಗೇ ನಂಗೂ ಅದ್ಭುತವಾದ ಶಕ್ತಿ ಕೊಡು ಅಂತ ದೇವರಿಗೆ ಹಾಕಿದ ಅರ್ಜಿಗೆ ಅವನ ಕಡೆಯಿಂದ ಇನ್ನೂ ಉತ್ತರ ಬಂದಿಲ್ಲ.
ಮೇರಿ ಮರ್ಜಿ: ಬೇಸರದ ಘಳಿಗೆಗಳ ಗೆಳೆಯ
Posted ಜೂನ್ 17, 2009
on:ಹಾಗೆ ನೋಡಿದರೆ ಬೇಸರಿಸಿಕೊಳ್ಳಲು ಕಾರಣಗಳೇ ಬೇಕಿಲ್ಲ. ಬೆಳಿಗ್ಗೆ ಹಾಲಿನವನು ಬರದೇ ರಜೆ
ಹಾಕಿದರೂ ಮನಸ್ಸು ಮುದುಡುತ್ತದೆ.ಗೋಡೆಗೆ ನೇತು ಹಾಕಿದ ಕ್ಯಾಲೆಂಡರ್ ನ್ನು ಕಂಡರೂ ಸಾಕು,
ಇಷ್ಟು ವಯಸ್ಸಾದರೂ ಎನೂ ಸಾಧಿಸದೇ ಹೋದೆನಲ್ಲಾ ಎಂಬುದು ಕೂಡ ಸಾಕು ಮನಸ್ಸು ಬೇಸರಿಸಿ
ಮನದ ಚಿಪ್ಪೊಳಗೆ ಅವಿತು ಕುಳಿತುಕೊಳ್ಳಲು!
ಈ ಥರದ ಬೇಸರದ ಗಳಿಗೆಗಳು ಬಹುಶಃ ಪ್ರತಿ ವರುಷದ ಹುಟ್ಟುಹಬ್ಬದ ದಿನ ತಪ್ಪದೇ ಕಾಡುತ್ತದೆ.
ಹಾಗೆ ಅಲೋಚಿಸಿದರೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬಾರದು,
ಎರಡು ನಿಮಿಷದ ಮೌನ ಆಚರಣೆ ಮಾಡಬೇಕು!
ಅದೇನೆ ಇರಲಿ. ಇಂತಹ ಮುದುಡಿದ ಮನವ ಅರಳಿಸಲು ನಾನು ಮೊರೆ ಹೋಗುವುದು ಪುಸ್ತಕಗಳಿಗೆ. ಕೆಲವೊಂದು ವ್ಯಕ್ತಿಗಳಿಗೆ.ಸುಮ್ಮನೆ ಅರೆಗಳಿಗೆ ನೆನೆದುಕೊಂಡರೂ ಸಾಕು ಮನ ಪುಟಿದೆದ್ದ ಚೆಂಡು.
ಪ್ರತಿ ಮನುಷ್ಯನೊಳಗೂ ಅದಮ್ಯ ಪ್ರತಿಭೆಯ ಊಟೆಯಿರುತ್ತದೆ.ಪ್ರತಿದಿನವೂ ಸ್ವಲ್ಪ ಹೆಚ್ಚು ಕಷ್ಟಪಟ್ಟರೆ
ಅದನ್ನು ಹೊರತರಬಹುದು.ಸ್ವರ್ಗ-ನರಕಗಳೆನ್ನುವುದಿದ್ದರೆ ಸತ್ತ ನಂತರದ ಬದುಕೆನ್ನುವುದಿದ್ದರೆ ಅದನ್ನು ನಿರ್ಧರಿಸುವುದು ನಮ್ಮೊಳಗಿನ
ಪ್ರತಿಭೆಯನ್ನು ಎಷ್ಟರಮಟ್ಟಿಗೆ ಉಪಯೋಗಿಸಿದೆವು ಅನ್ನುವುದರ ಮೇಲೆ ಮಾತ್ರ ಅಂತ ಗಾಢ ವಾಗಿ
ನಂಬುವವನು ನಾನು. ಹೀಗಾಗಿ ಎನೂ ಸಾಧಿಸಲಿಲ್ಲ ಎಂಬ ವಿಷಯ ಬೇರೆಲ್ಲದಕ್ಕಿಂತ ಹೆಚ್ಚು ಆಳವಾಗಿ ಕಾಡಿಸುವ
ವಿಚಾರ ನನ್ನ ಪಾಲಿಗೆ. ಆದ್ದರಿಂದ ಈ ವಿಷಯದ ನಾಸ್ಟಾಲ್ಜಿಯ ಆಗಾಗ್ಗೆ ಹಸಿವಿನಂತೆ ಕಾಡುತಿರುತ್ತದೆ.
ಇದಕ್ಕೆ ಮದ್ದಾಗಿ ಕೆಲ ಸಲ ಯಂಡಮೂರಿ ಪುಸ್ತಕಗಳನ್ನು ಓದುತಿರುತ್ತೇನೆ. ಗುರಿ ಏನಂತ ನಿರ್ಧರಿಸುವುದರಲ್ಲಿ,
ಗುರಿಯತ್ತ ಹೆಜ್ಜೆಯಿಡುವತ್ತ ನಿಜವಾದ ನೆಮ್ಮದಿ ಸಂತೃಪ್ತಿ ಏನೆಂದು ತಿಳಿದುಕೊಳ್ಳಲು ಇದು ಬಹಳ ಸಹಾಯಕಾರಿ.
ಅದೂ ಅಲ್ಲದೇ ಸ್ಟೀಫನ್ ಹಾಕಿಂಗ್, ಹೆಲೆನ್ ಕೆಲ್ಲರ್ ನೀಲ್ ಆರ್ಮ್ ಸ್ಟ್ರಾಂಗ್ ಅಂತವರು ಜೀವನದಲ್ಲಿ ನಡೆದು
ಬಂದ ಹಾದಿಯನ್ನು ನೆನೆದುಕೊಂಡರೂ ನಿಮ್ಮಲ್ಲಿ ಜೀವನದೆಡೆಗೆ ಅನಂತ ಉತ್ಸಾಹ ಉಕ್ಕದಿದ್ದರೆ ನನ್ನಾಣೆ!
ಕಡು ಬಡತನದಲ್ಲಿದ್ದ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಂತ ಪರಿ, ಪದ್ಮನಾಭನಗರದ ರೂಮೊಂದರಲ್ಲಿ
ಕುಳಿತು ಕನ್ನಡದ ಲಕ್ಷ ಲಕ್ಷ ಜನರಿಗೆ ಪ್ರೇರಣೆ ನೀಡುತಿರುವ ಬೆಳಗೆರೆಯ ಬರಹಗಳು ಇವೆಲ್ಲವೂ ಹೇಳುವುದೊಂದೇ,
“ನೀನು ಏರಬೇಕೆಂದಿರುವ ಎತ್ತರ ನೀನು ಈಗಿರುವ ಸ್ಥಿತಿಯಲ್ಲಿಲ್ಲ… ನಿನ್ನ ಮನದೊಳಗಡೆ ನೀನಿರಿಸಿಕೊಂಡಿರುವ
ಎತ್ತರಕ್ಕಿಂತಲೂ ಮಿಗಿಲಾಗಿ ಎಷ್ಟು ಎತ್ತರ ಏರಬಲ್ಲೆ ಎಂಬುವ ಉತ್ಸಾಹದಲ್ಲಿ ಮತ್ತು ಅದರೆಡೆಗೆ ಹೋಗುವ ಶ್ರಧ್ದೆಯಲ್ಲಿದೆ”
ಇಂತಹ ಬದುಕು-ಬರಹಗಳು ನಮ್ಮನ್ನು ಒಳಗಿಂದ ದಿನೇ ದಿನೇ ಬೆಳೆಸುತ್ತಿರುವಾಗ ಇನ್ನು ಬೇಸರವೆಲ್ಲಿಯದು?
ಶ್ರಧ್ದೆ ಅಂಕಿತಭಾವಗಳು ತಮ್ಮ ಬ್ರಹ್ಮಾಂಡ ರೂಪ ಪ್ರದರ್ಶಿಸಬೇಕಾದರೆ ಗುಬ್ಬಚ್ಚಿಯಾಕಾರದ ಬೇಸರ ತಾನೆ
ಏನು ಮಾಡಬಲ್ಲದು?!
ಇತ್ತೀಚಿನ ಟಿಪ್ಪಣಿಗಳು