Posts Tagged ‘ಪ್ರೀತಿ’
ವಾರಾಂತ್ಯದ ಕವಿತೆ: ಈರುಳ್ಳಿ
Posted ಜುಲೈ 31, 2009
on:– ರಂಜಿತ್ ಅಡಿಗ, ಕುಂದಾಪುರ.
ಒಮ್ಮೆಯಾದರೂ ಈ ಸಂಬಂಧಗಳಾಳಕ್ಕೆ
ಇಣುಕಲೇ ಬೇಕು
ಅದು ಈರುಳ್ಳಿ ಸಿಪ್ಪೆ ಸುಲಿದಂತೆ
ಮೊನ್ನೆಮೊನ್ನೆಯವರೆಗೂ ತನ್ನ
ಜೀವಕ್ಕಿಂತ ಹೆಚ್ಚು ಪ್ರೀತಿಸ್ತೀನಿ ಅಂತ
ಒದ್ದೆ ಕಣ್ಣಾಲಿಗಳಿಂದ ಹೇಳಿದ ಗೆಳತಿ
ಕಮ್ಮಿ ಮಾರ್ಕ್ಸು ಬಂದರೆ
ಮನೆಯಿಂದ ಓಡಿಸ್ತೀನಿ ಎಂದು
ಸಿಕ್ಕಾಪಟ್ಟೆ ಬೈದ ಅಪ್ಪ
ಕ್ಯಾಂಪಸ್ಸಿನಲ್ಲಿ ಕೆಲಸ
ಸಿಗಲಿಲ್ಲವೆಂದೊಮ್ಮೆ ಸುಮ್ಮನೆ
ಪರೀಕ್ಷೆ ಮಾಡಲು ಹೇಳಿದ ಕೂಡಲೇ
ಕೆಲಸ ಸಿಗದವನನ್ನು ಮದ್ವೆಯಾಗ್ತೀನಂತ
ಹ್ಯಾಗೆ ತನ್ನಪ್ಪನನ್ನು ಒಪ್ಪಿಸಬೇಕು
ನೀ ನನ್ನ ಮರೆಯಲೇಬೇಕು
ಎಂದು ತನ್ನ ಜೀವವನ್ನೇ ಕಡೆಗಣಿಸಿದಳಾಕೆ
ಮನೆಯನ್ನು ಒತ್ತೆಯಿಡೋಣ
ರಿಟಾಯರ್ಮೆಂಟ್ ಹಣವೂ ಬರಬಹುದು
ಸ್ವಂತ ಬಿಸಿನೆಸ್ಸು ಆರಂಭಿಸು ಮಗನೇ ಅನ್ನುವನು ಅಪ್ಪ
ಎರಡೂ ಮಾತಿಗೂ ಉಕ್ಕಿದ್ದು
ಕಣ್ಣೆದುರಿಗಿನ
ಪರದೆ ಜಾರಿಸೋ ಕಣ್ಣಿರೇ.
ಒಂದು ಕತೆ: ನಿರೀಕ್ಷೆ
Posted ಜೂನ್ 15, 2009
on:‘ಜಟಾಯು’, ಬೆಂಗಳೂರು
ಅವಳನ್ನು ನೋಡಲು ತುಂಬಾ ಹುಡುಗರು ಬರುತ್ತಿರುತ್ತಾರೆ.ಆದರೆ ಯಾರೂ ಅವಳನ್ನು ಒಪ್ಪುತ್ತಿರಲಿಲ್ಲ. ಅವಳಲ್ಲಿ ಹಣವಿಲ್ಲವೆಂದಲ್ಲ. ಅವಳ ಮೊಮ್ಮಗನೂ ತಿಂದು ತೇಗುವಷ್ಟು ಆಸ್ತಿಯಿದೆ. ಹಾಗಾದರೆ ಅವಳು ಸೌಂದರ್ಯವತಿಯಲ್ಲವೇ? ಕುರೂಪಿಯೇ? ಉಹೂಂ.. ಪದ್ಮಿನಿ ಜಾತಿಯ ಹುಡುಗಿ; ಸ್ವಂತ ಕಣ್ಣು ಬೀಳಬೇಕು ಅಂಥ ಸ್ಪುರದ್ರೂಪಿ ಹೆಣ್ಣವಳು.
ಅದೂ ಅಲ್ಲವಾದರೆ, ಸಿನೆಮಾದಲ್ಲಿ ತೋರಿಸುವಂತೆ " ಹಣವಂತರೆಲ್ಲಾ ಗುಣವಿರುವವರಲ್ಲ" ಎಂದುಕೊಂಡು ಕೆಟ್ಟವಳಿರಬೇಕು ಅಂತ ಊಹಿಸುವುದಾದರೆ ಅದೂ ನಿಜವಲ್ಲ. ಅವಳು ಒಳ್ಳೆಯವಳೇ.
ಅವಳಿಗಿರುವ ಒಂದೇ ಕೆಟ್ಟ(?) ಗುಣವೆಂದರೆ ನಿರೀಕ್ಷೆ! ಅದೇ ಅವಳನ್ನು ಎಲ್ಲರಿಂದ ದೂರ ಮಾಡುತ್ತಿರುವುದು!!
**********
ಅವತ್ತು ಮನೆಯಲ್ಲಿ ಸಡಗರ, ಸಂಭ್ರಮ. ಯಾಕೆಂದರೆ ಆ ದಿನ ಶ್ಯಾಮಲಾಳನ್ನು ನೋಡಲು ಹುಡುಗನೊಬ್ಬ ಬಂದಿದ್ದ. ಅದು ಶ್ಯಾಮಲಾಳ ತಂದೆ-ತಾಯಿಗೆ ಮಾತ್ರ ಸಡಗರ. ಅವಳಿಗದು ಮಾಮೂಲಿಯಾಗಿಬಿಟ್ಟಿದೆ.
ಅವಳು ಮರೆಯಲ್ಲಿ ನಿಂತು ತಂದೆ-ತಾಯಿಯ ಮಾತನ್ನು ಆಲಿಸುತ್ತಿದ್ದಳು. ಹುಡುಗ ಡಾಕ್ಟರಂತೆ. ಒಳ್ಳೆಯ ಮನೆತನದವನಂತೆ.
ಶ್ಯಾಮಲಾಳೇ ಅವರೆಲ್ಲರಿಗೂ ಕಾಫಿಯನ್ನು ತಂದುಕೊಟ್ಟು ತಂದೆಯ ಪಕ್ಕದಲ್ಲೇ ನಿಂತುಕೊಂಡಳು.
ಹುಡುಗನ ದೃಷ್ಟಿ ಅವಳ ಮೇಲೆಯೇ ನೆಟ್ಟಿತ್ತು. ತೆಳು ನೀಲಿ ಬಣ್ಣದ ಸೀರೆಯಲ್ಲಿ ಅಂದವಾಗಿ, ಮುದ್ದಾಗಿ ಕಾಣುತ್ತಿದ್ದಳು.
ಔಪಚಾರಿಕತೆಯ ಮಾತು ಮುಗಿದ ಬಳಿಕ ಶ್ಯಾಮಲ ಅವಳ ಬಳಿ ಮಾತನಾಡಬಯಸಿದಳು.
*********
ಶ್ಯಾಮಲಳ ಹವ್ಯಾಸ ಸಿನೆಮಾ ನೋಡುವುದು, ಕಾದಂಬರಿ ಓದುವುದು ಇತ್ಯಾದಿ. ಯಾವುದಾದರೂ ಸಿನೆಮಾದ ಅಥವ ಕಾದಂಬರಿಯ ನಾಯಕಿಯನ್ನು ಊಹಿಸಿದರೆ ಅವಳಿಗೆ ಅಸೂಯೆಯಾಗುತ್ತಿತ್ತು. ಕಾರಣ ನಾಯಕಿಯ ತುಂಟತನ, ಬುದ್ಧಿವಂತಿಕೆಯಲ್ಲ. ನಾಯಕನ ಒಳ್ಳೆಯತನ, ನಿಯತ್ತುಗಳು. ಅಂಥ ಗುಣವಂತ ನಾಯಕಿಗೆ ದೊರಕುತಿರುವುದಕ್ಕೆ ಹೊಟ್ಟೆ ಉರಿದುಕೊಳ್ಳುತ್ತಿದ್ದಳು.
ಪ್ರಸ್ತುತ ಅವಳು ಓದುತ್ತಿರುವ ಕಾದಂಬರಿಯಲ್ಲಿ ನಾಯಕಿ ಅವನನ್ನು ಮೋಸ ಮಾಡಿ ಒಂದು ಕೇಸಿನಲ್ಲಿ ಜೈಲಿಗೆ ಹೋಗುವಂತೆ ಮಾಡಿದರೆ ಅವನು ಮಾತ್ರ ಅವಳ ತಾಯಿಯ ಆಪರೇಷನ್ ಗೆ ಬೇಕಾದ ಖರ್ಚುಗಳನ್ನು ನೀಡಿಯೇ ಜೈಲಿಗೆ ಹೋಗುತ್ತಾನೆ. ಶ್ಯಾಮಲಾಗೆ ಅಂಥ ಕಾದಂಬರಿಗಳೇ ಹೆಚ್ಚು ಇಷ್ಟವಾಗುತ್ತದೆ…
ತೋಟದ ಮಧ್ಯದಲ್ಲಿ ತೆಳುವಾಗಿ ಹಾವಿನಂತೆ ಬಳುಕುವ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು ಅವರಿಬ್ಬರೂ.
ತುಂಬ ಹೊತ್ತಿನಿಂದ ಅವಳೇನೂ ಮಾತಾಡಿಸಲಿಲ್ಲದ ಕಾರಣ ಅವನೇ ಮಾತಿಗಾರಂಭಿಸಿದ.
"ನನ್ನ ಹೆಸರು ಮಹೇಂದ್ರ. ನೀವು ನನ್ನ ಜತೆ ಮಾತಡಲು ಬಯಸಿದ್ದು ಖುಷಿಯಾಯಿತು. ಒಬ್ಬರನ್ನೊಬ್ಬರು ಅರಿಯದೇ ಮದುವೆಯಾಗುವುದು ಸರಿಯಲ್ಲ ಅನ್ನುವುದು ನನ್ನ ಅಭಿಮತ. ಹೀಗೆ ಕೊಂಚ ಏಕಾಂತ ಸಿಕ್ಕಿದರೆ ನಮ್ಮ ನಮ್ಮ ಅಭಿರುಚಿಗಳನ್ನು ಹಂಚಿಕೊಳ್ಳಬಹುದು.. ಅದನ್ನು ನೀವಾಗಿಯೇ ಎಲ್ಲರೆದುರು ಕೇಳಿದ್ದು ನನಗಿಷ್ಟವಾಯಿತು…"
ಅವಳು ಥ್ಯಾಂಕ್ಯೂ ಕೂಡ ಅನ್ನಲಿಲ್ಲ.
ಅವನು ಸೌಜನ್ಯಕ್ಕಾಗಿ ನಕ್ಕ ನಗೆ ನಿಲ್ಲಿಸಿದ.
ಶ್ಯಾಮಲಾ ಏನನ್ನೋ ಹೇಳಲು ಬಯಸುತ್ತಿದ್ದಾಗ್ಯೂ, ಹೇಳಲು ಒದ್ದಾಡುತಿರುವುದನ್ನು ಆತ ಗಮನಿಸುತ್ತಲೇ ಇದ್ದ.
ಏನಾದರಾಗಲಿ ಎಂದು ಅವಳು ಹೇಳತೊಡಗಿದಳು." ನಾನು ಶ್ಯಾಮಲ… ನಿಮಗೆ ಈಗ ಒಂದು ವಿಷಯ ತಿಳಿಸಬೇಕಿದ್ದು.. ಅದು.. ಅದನ್ನು ಹೇಗೆ ಹೇಳಲಿ ಎಂದೇ ತಿಳಿಯುತ್ತಿಲ್ಲ.."
ಆಗ ತಣ್ಣನೇ ಗಾಳಿ ಬೀಸಿತು. ಕೋಗಿಲೆಯೊಂದು ಆಗಲಿಂದಲೂ ಹಾಡುತ್ತಿತ್ತು. ಮಹೇಂದ್ರ ಉದ್ವೇಗದಿಂದ ಕೇಳಿಸಿಕೊಳ್ಳುತ್ತಿದ್ದು, "ಹೇಳಿ , ಪರವಾಗಿಲ್ಲ.." ಎಂದ.
"ಇದುವರೆಗೂ ನನ್ನ ನೋಡಲು ಬಂದವರೆಲ್ಲ ಈ ವಿಷಯ ಕೇಳಿಯೇ ಒಪ್ಪಿಕೊಳ್ತಾ ಇಲ್ಲ. ನನಗೆ.. ನನಗೆ.. ಏಯ್ಡ್ಸ್ ಇದೆ!!!"
ಆಗ ಚಲಿಸಿದ ಅವನು.
ಅವಳು ನಿರ್ಲಿಪ್ತಳಾಗಿಯೇ ಇದ್ದಳು.
ಅವನ ಮುಖ ಪೂರ್ತಿಯಾಗಿ ಬಿಳಿಚಿಕೊಂಡಿತ್ತು. ಮಾತನಾಡಲು ಪದಗಳಿಗಾಗಿ ತಡವರಿಸುತ್ತಿದ್ದ. ಸಹಾನುಭೂತಿ ಹೇಳಬೇಕೋ ? ಅಥವ ತಂದೆ-ತಾಯಿಗೆ ಈ ವಿಷಯ ತಿಳಿಸದೇ ಇದ್ದುದ್ದಕ್ಕೆ ಬೈದು ಬುದ್ಧಿವಾದ ಹೇಳಬೇಕೋ ತಿಳಿಯಲಿಲ್ಲ.
ಅವಳು ಅವನ ಪ್ರತಿಕ್ರಿಯೆಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದಳು.
ಅವನು ಚೇತರಿಸಿಕೊಂಡ. ನಿರ್ಣಯ ತೆಗೆದುಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಯಾವ ಕಾರಣದಿಂದ ಏಯ್ಡ್ಸ್ ಬಂದರೂ, ಏಯ್ಡ್ಸ್ ಇರುವ ಹುಡುಗಿಯನ್ನು ಯಾರಾದರೂ ಮದುವೆಯಾಗ ಬಯಸುವುದಿಲ್ಲ. ಅದನ್ನೇ ಅವಳ ಬಳಿ ಹೇಳಲಾಗದೇ ತಿರುಗಿ ಅಲ್ಲಿಂದ ಚಲಿಸಿ ತಂದೆಯನ್ನು ಕರೆದುಕೊಂಡು ಏನೂ ಹೇಳದೇ ಹೊರಟುಬಿಟ್ಟ.
ಅವಳು ನಿಶ್ಯಬ್ದವಾಗಿ ನೋಡುತ್ತಾ ನಿಂತುಬಿಟ್ಟಳು.
ಅವಳನ್ನು ತಂಗಾಳಿಯೊಂದು ಸ್ಪರ್ಶಿಸಿಕೊಂಡುಹೋಯಿತು.
ಮರದೆಡೆಯಿಂದ ಎರಡು ಕಣ್ಣುಗಳೂ ನೀರಿನಿಂದ ತುಂಬಿಬಂದ ಒಂದು ಆಕೃತಿಯೊಂದು ಮನೆಯೆಡೆಗೆ ಚಲಿಸಿತು.
********
ಅಂದು ರಾತ್ರಿ…
ಅವಳು ಮುಖವನ್ನು ದಿಂಬಿನಲ್ಲಿ ಹುದುಗಿಸಿ ಅಳುತ್ತಿದ್ದಳು. ವಿಷಾದ ಎಂಬ ಭಾವನೆ ಕಣ್ಣೀರಿನಲ್ಲಿ ತುಂಬಿಕೊಂಡು ದಿಂಬನ್ನು ಒದ್ದೆ ಮಾಡುತ್ತಿದ್ದವು.
ಮನಸಿನಲ್ಲೆಲ್ಲ ಒಂದೇ ದುಃಖ ಬುಗುರಿಯಂತೆ ಸುತ್ತುತ್ತಿದ್ದವು.
" ಮನುಷ್ಯರೆಲ್ಲಾ ಸ್ವಾರ್ಥಿಗಳು..ಪ್ರೇಮವೆಂದರೆ ಕೇವಲ ಕೊಡುವುದು ಅನ್ನುವುದನ್ನು ಮರೆತಿದ್ದಾರೆ.ಎಲ್ಲರೂ ಕಿತ್ತುಕೊಳ್ಳಲು ನೋಡುತ್ತಾರೆ. ನನ್ನ ಸೌಂದರ್ಯ, ಹಣ ನೋಡಿದ ಕೂಡಲೇ ಎಲ್ಲರೂ ಮದುವೆಯಾಗಲು ಒಪ್ಪಿಕೊಳ್ಳುತ್ತಾರೆ. ಆದರೆ ನನ್ನಲ್ಲಿ ಕೇವಲ ಒಂದು ಕೆಟ್ಟ ಗುಣವಿದ್ದರೆ ಹಾವನ್ನು ಕಂಡಂತೆ ಹೆದರಿ ಓಡುಹೋಗುತ್ತಾರೆ.." ಎಂಬುದೇ ಆಕೆಯ ಮನಸಿನಲ್ಲಿ ತಾಳಮದ್ದಳೆ ಆಡುತ್ತಿದೆ.
ಆಗ ಅವಳ ತಂದೆ ಅವಳ ರೂಮನ್ನು ಪ್ರವೇಶಿಸಿದರು.
ಅವಳು ಅವರತ್ತ ನಿರ್ವಿಕಾರವಾಗಿ ನೋಡಿದಳು.ಅವರ ಕಣ್ಣಲ್ಲಿ ಆರ್ದ್ರತಾಭಾವ ನಲಿದಾಡುತಿತ್ತು. " ಅಮ್ಮಾ.." ನಿಲ್ಲಿಸಿ ಸ್ವಲ್ಪ ಸಮಯದ ನಂತರ "…. ನನ್ನ ಚಿನ್ನದಂಥಾ ಮಗಳನ್ನು ಯಾರೊಬ್ಬನೂ ಒಪ್ಪಿಕೊಳ್ಳದಿರುವುದನ್ನು ನೋಡಿ ನನಗಾಶ್ಚರ್ಯವಾಗುತ್ತಿತ್ತು. ಅವರ ಬಳಿ ಕಾರಣ ಕೇಳಿದರೂ ಹೇಳುತ್ತಿರಲಿಲ್ಲ. ಅದಕ್ಕೆ ನಾನೇ ತಿಳಿದುಕೊಳ್ಳಬೇಕೆಂಬ ಹಂಬಲ ಬೆಳೆಯಿತು. ಅದಕ್ಕೆ…. ನೀನು ಮಹೇಂದ್ರನ ಬಳಿ ಮಾತಾಡಿದ್ದನ್ನು ಕದ್ದು ಕೇಳಿಸಿಕೊಂಡೆನಮ್ಮಾ…"
ಅವಳು ಚಕ್ಕನೆ ತಲೆಯೆತ್ತಿ ಅಳುವುದನ್ನು ನಿಲ್ಲಿಸಿ ತಂದೆಯತ್ತ ನೋಡಿದಳು.
ಅವರು ಮುಂದುವರಿಸಿದರು." ನಿನ್ನ ನೋವು ನನಗರ್ಥವಾಗುತ್ತದಮ್ಮಾ.. ತಾನು ಸಾಯುತ್ತಿದ್ದೇನೆಂದು ತಂದೆಗೆ ತಿಳಿಸಲಾಗದೇ ಒಳಗೊಳಗೇ ಸ್ವಲ್ಪ ಸ್ವಲ್ಪವಾಗಿ ನಶಿಸಿಹೋಗುತ್ತಾ, ತನ್ನ ತಂದೆ ಒಬ್ಬೊಬ್ಬರೇ ಹುಡುಗರನ್ನು ಮದುವೆಗಾಗಿ ಕರೆತರುತ್ತಿದ್ದರೆ ತಂದೆಯೆದುರಿಗೆ ಏನೂ ಹೇಳಲಾಗದೇ ಮನಸ್ಸು ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.. ಪ್ರತೀ ಹುಡುಗನ ಬಳಿಯೂ ನನಗೆ ಏಯ್ಡ್ಸ್ ಇದೆ ಎಂದು ಹೇಳಿದ ಬಳಿಕ ನಂತರ ಅವರ ಮೌನದ ಚಾಟಿಯೇಟನ್ನು ನಾನು ಗುರುತಿಸಲಾಗದೇ ಹೋಗುತ್ತೇನೆಂದು ತಿಳಿದಿದ್ದೀಯಾ?"
ಅವಳು ತಲೆತಗ್ಗಿಸಿಕೊಂಡು ತಂದೆಯ ಮಾತನ್ನು ಆಶ್ಚರ್ಯದಿಂದ ಆಲಿಸುತ್ತಿದ್ದಳು.
ಅವರ ನೋವನ್ನು ಅವರ ಮಾತುಗಳೇ ಸ್ಪಷ್ಟವಾಗಿ ಪ್ರತಿಧ್ವನಿಸುತ್ತಿದ್ದವು.ಪ್ರತಿಯೊಂದು ಶಬ್ದವೂ ಅವಳನ್ನು ಇರಿಯುತ್ತಿದ್ದವು. ಅವರ ಮಾತು ಅವಳ ಬಾಯನ್ನು ಕಟ್ಟಿಹಾಕಿತ್ತು.
ಅವರು ತಮ್ಮ ಮಾತನ್ನು ನಿಲ್ಲಿಸಿದರು.
ಇರುವೆ ಚಲಿಸಿದರೂ ಕೇಳುವಷ್ಟು ನಿಶ್ಯಬ್ದ ಆವರಿಸಿಕೊಂಡಿತ್ತು. ಆ ನಿಶ್ಯಬ್ದದಲ್ಲಿ ಆ ತಂದೆಯ ಹೃದಯ ಮಗಳಿಗಾಗಿ ವಿಲವಿಲ ಒದ್ದಾಡುತಿತ್ತು.
ಒಂದು ನಿರ್ಧಾರಕ್ಕೆ ಬಂದವರಂತೆ, " ನೀನು ಹೋಗುವ ಸಮಯದಲ್ಲೂ ವಿಷಾದ ಇಟ್ಟುಕೊಂಡು ಎದುರಿಗಿರುವವರ ಸಂತೋಷ ಬಯಸಿದ್ದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಆದರೆ ನೀನು ಹೀಗೆ ಅಳುತ್ತಿರುವುದು ನನಗೆ ನೆಮ್ಮದಿ ನೀಡದು.. ಕೊನೆಯ ದಿನಗಳಲ್ಲಿ ನಿನ್ನನ್ನು ಆನಂದದಿಂದ ಕಳುಹಿಸಿಕೊಡುವೆನಮ್ಮಾ…"ಎಂದು ನುಡಿದರು.
ಉಕ್ಕಿಬಂದ ಅಳುವನ್ನು ತಡೆದುಕೊಳ್ಳುತ್ತಾ ರೂಮಿನಿಂದ ಹೊರಕ್ಕೆ ಹೋದ ತಂದೆಯತ್ತ ನಂತರ ಶೂನ್ಯದತ್ತ ನೋಡುತ್ತಾ ನಿಂತುಬಿಟ್ಟಳು ಶ್ಯಾಮಲಾ.
********
ಈಗ ಅವಳು ಮನುಷ್ಯರೆಲ್ಲಾ ಸ್ವಾರ್ಥಪರರು ಎಂದು ಆಲೋಚಿಸುತ್ತಿರಲಿಲ್ಲ. ಏನೋ ಮಾಡಲು ಹೋಗಿ ಅದು ಏನೇನೋ ಆಗುತ್ತಿದ್ದುದನ್ನು ಗಮನಿಸುತ್ತಿದ್ದಳು. ತನ್ನ ತಂದೆ ತನ್ನೆದುರೇ ಅಪಾರ್ಥ ಮಾಡಿಕೊಂಡು ನೋವನುಭವಿಸುತ್ತಿರುವುದನ್ನು ಕಂಡಿದ್ದಳು.
ಅವಳಿಗೆ ರಾತ್ರಿಯಿಡೀ ನಿದ್ದೆ ಬರಲಿಲ್ಲ. ಮತ್ತೆ ಮತ್ತೆ ಆಲೋಚಿಸಿದಳು.
ನಂತರ ಒಂದು ನಿರ್ಧಾರಕ್ಕೆ ಬಂದಳು. ಅದು ತನ್ನ ತಂದೆಗೆ ಎಲ್ಲ ನಿಜವನೂ ಹೇಳುವ ನಿರ್ಧಾರ. ನಂತರ ಎಲ್ಲ ಸರಿಹೋಗುತ್ತದೆಂದು ಅನ್ನಿಸಿ ನಿಟ್ಟುಸಿರಿಟ್ಟಳು.
ಆದರೆ ವಿಧಿಬರಹ ಬರೆಯುವವನು ಅವಳನ್ನು ನೋಡಿ ಮರುಕಪಟ್ಟ. ಏಕೆಂದರೆ ಅವಳಿಗೆ ಮರುದಿನವೇ ಮತ್ತೊಂದು ಆಘಾತ ಕಾದಿತ್ತು.
******
ಅರುಣೋದಯವಾಗಿತ್ತು. ಸೂರ್ಯನ ಕಿರಣಗಳು ಎಲ್ಲೆಂದರಲ್ಲಿ ಚೆಲ್ಲುತ್ತಿದ್ದವು.
ಅವಳು ತಂದೆಯನ್ನು ಮನೆಯಲ್ಲೆಲ್ಲಾ ಹುಡುಕಿದಳು. ಎಲ್ಲೂ ಇರಲಿಲ್ಲ. ತೋಟಕ್ಕೆ ಹೋದಾಗ ಮರದ ಕೆಳಗೆ ಖುರ್ಚಿ ಹಾಕಿಕೊಂಡು ಶೂನ್ಯದತ್ತ ನೋಡುತ್ತಾ ಸಿಗರೇಟು ಸೇದುತ್ತಾ ಕುಳಿತಿದ್ದರು.
"ಸಿಗರೇಟ್ ಮತ್ತೆ ಪ್ರಾರಂಭಿಸಿದೆಯಾ ಅಪ್ಪಾ?"
"ಓ.. ಬಾಮ್ಮಾ… ಸಿಗರೇಟ್.. ಇದೀಗ ಅವಶ್ಯಕತೆ ಅನ್ನಿಸಿದೆಯಮ್ಮಾ.."
"ಅಪ್ಪಾ.. ಅದು.. ನಾನು ನಿಮಗೊಂದು ವಿಷಯ ಹೇಳಬೇಕು. ಕೋಪ ಮಾಡಿಕೊಳ್ಳೋಲ್ಲ ತಾನೆ?"
"ಕೋಪ? ಇಲ್ಲಮ್ಮಾ.. ಸಿಗರೇಟನ್ನು ಶುರು ಮಾಡಿದ ನಂತರ ಕೋಪ, ಆನಂದ, ವಿಷಾದ ಎಲ್ಲವನ್ನೂ ಬಿಟ್ಟಿದ್ದೇನೆ"
"ಅಪ್ಪಾ.. ನನಗೆ.. ನನಗೆ ಏಯ್ಡ್ಸ್ ಇಲ್ಲವಪ್ಪ.. ನಾನು ಸುಳ್ಳು ಹೇಳಿದ್ದೆ!"
" ಇನ್ನೂ ನನಗೆ ನೋವುಂಟು ಮಾಡಬಾರದೆಂಬ ಆಲೋಚನೆಯೇನಮ್ಮಾ..?"
"ಇಲ್ಲಪ್ಪ. ನಾನು ನಿಜ ಹೇಳ್ತಿದ್ದೀನಿ. ನ..ನ..ಗೆ ಏಯ್ಡ್ಸ್ ಇಲ್ಲ.."
ತಕ್ಷಣದ ಅವರ ಖುಷಿಗೆ ಪಾರವೇ ಇರಲಿಲ್ಲ. ನಂಬಲಾಗದಷ್ಟು ಖುಷಿಯಾಗ್ತಿದೆ ಅನ್ನುತ್ತಾ ಸಂತೋಷದಿಂದ ಅವಳನ್ನೆತ್ತಿ ಎರಡು ಸುತ್ತು ತಿರುಗಿಸಿದರು. ಅವರ ಖುಷಿ ಆನಂದ ನೋಡಿ ಅವಳೂ ಸಂತಸಪಟ್ಟಳು. ಅವರ ಕಣ್ಣಿನಿಂದ ಆನಂದ ಭಾಷ್ಪವೊಂದು ಕೆನ್ನೆ ಸವರಿಕೊಂಡು ಕೆಳಕ್ಕೆ ಜಾರಿ ಮಣ್ಣುಪಾಲಾಯಿತು.
ಸ್ವಲ್ಪ ಹೊತ್ತಿನ ಬಳಿಕ " ಆದರೂ.. ಒಮ್ಮೆ ಪರೀಕ್ಷೆ ಮಾಡಿ ನೋಡಬೇಕು" ಎಂದರು.
*********
"ನೀನು ಯಾಕೆ ಹೀಗೆ ಮಾಡಿದಿ?" ಎಂದು ತಂದೆ ಶ್ಯಾಮಲಳ ಬಳಿ ಕೇಳಿದರು.
" ಹಿಂದೆ ವಧುಪರೀಕ್ಷೆ ಇದ್ದ ಹಾಗೆ ಇದು ವರ ಪರೀಕ್ಷೆಯಪ್ಪ. ಕಾಲೇಜಿನಲ್ಲಿ ಓದುತ್ತಿದ್ದಾಗ ಅನೇಕ ಹುಡುಗರು ’ಐ ಲವ್ ಯೂ’ ಎನ್ನುತ್ತಾ ನನಗೋಸ್ಕರ ಏನು ಮಾಡಲೂ ತಯಾರಾಗಿ ಬರುತ್ತಿದ್ದರು. ನನ್ನ ಬಳಿ ಹಣವಿದೆಯೆಂದೋ, ರೂಪಕ್ಕಾಗಿಯೋ ನಾನು ಕೇಳದಿದ್ದರೂ ನನಗೆ ಸಹಾಯ ಮಾಡುತ್ತಿದ್ದರು. ಇವರ ನಿಜಾಂಶ ತಿಳಿದುಕೊಳ್ಳುವುದಕ್ಕೋಸ್ಕರ ಒಂದು ಮಾಸ್ಟರ್ ಪ್ಲಾನ್ ಮಾಡುತ್ತಿದ್ದೆ. ಆಗಲೇ ನಿರ್ಧರಿಸಿದ್ದೆ. ನನಗೆ ಮಾರಣಾಂತಿಕ ಖಾಯಿಲೆಯಿದ್ದರೂ ನನ್ನನ್ನು ಮದುವೆಯಾಗುತ್ತೇನೆನ್ನುವವನೇ ನನಗೆ ಸರಿಯಾದ ಗಂಡು ಎಂದು…. ಆದರೆ ಇದುವರೆಗೂ ಸ್ವಾರ್ಥವಿಲ್ಲದ ಪುರುಷರು ಸಿಗಲಿಲ್ಲವಪ್ಪಾ… "
"ಇದು ತಪ್ಪಮ್ಮಾ.. ನೀನು ಊಹಿಸಿದಂತಹ ಗುಣವುಳ್ಳವರು ಯಾವ ಕಾಲದಲ್ಲಾದರೂ ಸಿಗುವುದಿಲ್ಲ. ಸ್ವಾರ್ಥವಿಲ್ಲದೇ ಬದುಕುವುದೇ ಅಸಾಧ್ಯ. ಅಂತಹ ಬೇಡಿಕೆಯನ್ನು ಮರೆತುಬಿಡಮ್ಮ.. ಅಂತವರ್ಯಾರೂ ಸಿಗಲಾರರು.." ಅವರ ಅನುಭವವೇ ಈ ಮಾತನ್ನು ಆಡಿಸಿತ್ತು.
"ಇನ್ನು ಒಂದು ವರ್ಷ ಅಷ್ಟೇ ಅಪ್ಪ. ಅಲ್ಲಿಯವರೆಗೂ ಹುಡುಕುತ್ತೇನೆ. ಅಷ್ಟರವರೆಗೂ ಸಿಗಲಿಲ್ಲವಾದರೆ ನೀವು ಹೇಳಿದ ಗಂಡನ್ನೇ ಮದುವೆಯಾಗುವೆ"
ನಿನ್ನಿಷ್ಟವಮ್ಮಾ.." ನಿಟ್ಟುಸಿರು ಬಿಡುತ್ತ ಶ್ಯಾಮಲಳ ತಂದೆ ಹೇಳಿದರು.
******
ಮಗಳು ಎಷ್ಟು ಬಾರಿ ಹೇಳಿದರೂ ಕೇಳದೇ ಟೆಸ್ಟ್ ಮಾದಿಸಿದರೇನೆ ಮನ್ಸಿಗೆ ನೆಮ್ಮದಿ ಎಂದರು ಶ್ಯಾಮಲಳ ತಂದೆ. ಒಂದು ದಿನ ಡಾಕ್ಟರನು ಭೇಟಿಯಾಗಲು ಹೊರಟರು.
"ಡಾಕ್ಟರ್.. ನನ್ನ ಮಗಳಿಗೆ ಏಯ್ಡ್ಸ್ ಇಲ್ಲವೆಂಬ ರಿಪೋರ್ಟ್ ನೀಡುವ ಟೆಸ್ಟ್ ಮಾಡಿಸಬೇಕಾಗಿತ್ತು.."
" ಈಕೆ ಶ್ಯಾಮಲಳಲ್ಲವೇ?"
ತಂದೆ ಆಶ್ಚರ್ಯದಿಂದ, " ಅರೆ.. ನಿಮಗೆ ಹೇಗೆ ಗೊತ್ತು ನನ್ನ ಮಗಳು?" ಕೇಳಿದರು.
"ನಿಮ್ಮ ಮಗಳ ಕಾಲೇಜಿನ ಕನ್ಸಲ್ಟಿಂಗ್ ಡಾಕ್ಟರ್ ನಾನೇ. ಇವಳು ಡಿಸ್ಟಿಂಕ್ಷನ್ ಸ್ಟೂಡೆಂಟ್ ಎಂದ ಬಳಿಕ ಮರೆಯಲು ಸಾಧ್ಯವೇ?"
ಶ್ಯಾಮಲ ಮಾತ್ರ ಅವರತ್ತ ಆಶ್ಚರ್ಯದಿಂದ ನೋಡಿದಳು. ಹಿಂದೆಂದೂ ನೋಡಿದ ನೆನಪಿರಲಿಲ್ಲ ಆ ಚಹರೆಯನ್ನು.
ಡಾಕ್ಟರ್ ಮುಗುಳ್ನಗೆಯೊಂದಿಗೆ "ನರ್ಸ್… ಎಲಿಸಾ ಟೆಸ್ಟಿಗೆ ತಯಾರಿ ಮಾಡಿ" ಎಂದರು.
*********
ಸಂಜೆಯಾಗಿತ್ತು.
’ಎಲಿಸಾ’ ಪರೀಕ್ಷೆಯ ಫಲಿತಾಂಶಕ್ಕಾಗಿ ಎದುರುನೋಡುತ್ತಿದ್ದಾರೆ, ತಂದೆ ಮತ್ತು ಮಗಳು. ನರ್ಸ್ ’ಒಳಕ್ಕೆ ಹೋಗಿ’ ಎಂದಾಗ ಉದ್ವೇಗದಿಂದ ಒಳ ನಡೆದರು.
ಡಾಕ್ಟರ್ ನ ಮುಖ ನಿರ್ಲಿಪ್ತತೆಯಿಂದ ತುಳುಕಾಡುತ್ತಿತ್ತು.
"ಏನಾತು ಡಾಕ್ಟ್ರೇ" ಎಂದರು ತಂದೆ ಉದ್ವೇಗದಿಂದ.
"ಕುಳಿತುಕೊಳ್ಳಿ" ಎಂದರು. "ಮನಸ್ಸು ಸ್ವಲ್ಪ ಗಟ್ಟಿಮಾಡಿಕೊಳ್ಳಿಸರ್ .. ಎಲ್ಲರಿಗೂ ಹಣೆಬರಹ ಮೊದಲೇ ಬರೆದಿಟ್ಟಿರುತ್ತಾರೆ ಆ ದೇವರು…" ಎಂದು ಸ್ವಲ್ಪ ಕಾಲ ಮೌನವಹಿಸಿ, ನಿಟ್ಟುಸಿರಿಟ್ಟು "ನಿಮ್ಮ ಮಗಳಿಗೆ ಏ…ಯ್ಡ್ಸ್.. ಇ..ದೆ..!" ಎಂದರು.
ಶ್ಯಾಮಲಳ ತಂದೆ ತತ್ತರಿಸಿ ಹೋದರು.
ಅವಳಿಗೆ ಭೂಮಿ ಬಾಯ್ತೆರೆದು ತನ್ನನ್ನು ಒಳಕ್ಕೆಳೆದುಕೊಳ್ಳಬಾರದೇ ಎನಿಸಿತು. ಮನದಲ್ಲಿ ವಿಷಾದದ ಜ್ವಾಲಾಮುಖಿಯೊಂದು ಹತ್ತಿ ಉರಿಯಿತು. ನೀರಸತ್ವವೆಂಬ ಲಾವಾರಸ ಉಕ್ಕಿ ಹರಿಯಿತು.
ಏನೋ ತಮಾಷೆಗಾಗಿ ’ ಏಯ್ಡ್ಸ್ ಇದೆ’ ಎನ್ನುವುದಕ್ಕೂ, ನಿಜಕ್ಕೂ ಏಯ್ಡ್ಸ್ ಬಂದರೆ ಹೇಗಿರುತ್ತದೆಂದು ಮನಸು ಊಹಿಸಿಯೇ ಇರಲಿಲ್ಲ. ಅಷ್ಟು ವಿಷಾದವನ್ನು ಅವಳ ಮನಸ್ಸು ಸಹಿಸುತ್ತಿಲ್ಲ. ಕಾಣದ ಕೈಯ್ಯೊಂದು ಹೃದಯವನ್ನು ಹಿಂಡಿದಂತಾಗುತ್ತಿದೆ ಅವಳಿಗೆ.
ಮೃತ್ಯು ತನ್ನನ್ನು ಗಬಳಿಸಲು ಹೊಂಚು ಹಾಕುತ್ತಿದೆಯೆಂದು ಊಹಿಸಿದೊಡನೆ ಮೈ ನಡುಗಲಾರಂಭಿಸಿತು.
ಯಾರಾದರೂ ಇದುವರೆಗೆ ತನ್ನನ್ನು ಮದುವೆಯಾಗಿದ್ದರೆ ಅವರ ಗತಿ ಊಹಿಸಿಕೊಂದಳು. ವಿಧಿಗೆ ಏಟು ಕೊಡಬೇಕೆಂದುಕೊಂಡಿದ್ದಳು; ಆದರೆ ವಿಧಿ ತನಗೆ ಈ ರೀತಿಯಾದ ಶಿಕ್ಷೆ ಕೊಡುತ್ತದೆಂದು ಅವಳು ಕಿಂಚಿತ್ತೂ ಊಹೆ ಮಾಡಿರಲಿಲ್ಲ.
ತಂದೆ ಹೃದಯವೇ ಹೋಳಾದಂತೆ ಕುಳಿತಿದ್ದರು.
ಆಗ ಆ ರೂಮನ್ನು ಮಹೇಂದ್ರ ಪ್ರವೇಶಿಸಿದ.
**********
ಹಠಾತ್ತನೆ ಬಂದಿದ್ದರಿಂದ ಡಾಕ್ಟರ್ ಒಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಆಶ್ಚರ್ಯಗೊಂಡರು.
ಶ್ಯಾಮಲಳ ಬಳಿ ತೆರಳಿ," ನನ್ನನ್ನು ಮದುವೆಯಾಗುತ್ತೀಯಾ ಶ್ಯಾಮಲಾ?" ಎಂದು ಮಹೇಂದ್ರ ಶಾಂತವಾಗಿ ಕೇಳಿದನು.
ಎರಗಿ ಬಂದ ಪ್ರಶ್ನೆಗೆ ಅವಳು ತಕ್ಷಣಕ್ಕೆ ಉತ್ತರಿಸದಾದಳು. ನಂತರ ಸಾವರಿಸಿಕೊಂಡು, "ನನಗೆ ಏಯ್ಡ್ಸ್ ಇದೆ ಮಹೇಂದ್ರ" ಅವಳ ದನಿ ಅವಳಿಗೇ ಕೇಳಿಸಲಿಲ್ಲ. ಕಣ್ಣೀರು ಕೆನ್ನೆಯನ್ನೆಲ್ಲಾ ಒದ್ದೆ ಮಾಡಿಬಿಟ್ಟಿತು.
"ನನ್ನ ಪ್ರಶ್ನೆಗೆ ಉತ್ತರ ಅದಲ್ಲ, ನಿನಗೆ ನಾನು ಇಷ್ಟವಾಗಿರುವೆನಾ?"
ಅವಳ ನಿರೀಕ್ಷೆ ದುಃಖದೇಟಿನಿಂದ ಸತ್ತಿತ್ತು. ಜಂಬವೆಲ್ಲ ನೀರಿನಂತೆ ಕರಗಿತ್ತು. "ಹ..ಹೌ..ದು!" ಎಂದು ಮತ್ತಷ್ಟು ಅತ್ತಳು.
ಅವಳ ತಂದೆ ಈ ಪರಿಣಾಮಗಳನ್ನು ಎವೆಯಿಕ್ಕದೇ ನೋಡುತ್ತಿದ್ದರು.
ಮಹೇಂದ್ರನಿಗೆ ಅವಳ ಪಶ್ಚಾತ್ತಾಪ ಸ್ಪಷ್ಟವಾಗಿ ತಿಳಿಯುತ್ತಿತ್ತು. ಇನ್ನೂ ಮುಚ್ಚಿಟ್ಟು ಪ್ರಯೋಜನವಿಲ್ಲವೆಂದು ಅರಿತು," ಐ ಯಾಮ್ ರಿಯಲಿ ಸಾರಿ. ನಾನೂ ಈ ಡಾಕ್ಟರ್ ಇಬ್ಬರೂ ಸ್ನೇಹಿತರು. ಕೊಲೀಗ್ಸ್ ಕೂಡ. ಇಲ್ಲೀಗ ನಡೆದದ್ದು ಸುಳ್ಳು. ಈ ಕಪಟ ನಾಟಕದ ಸೂತ್ರಧಾರಿ ನಾನೇ"
ಶ್ಯಾಮಲ ತಕ್ಷಣ "ಹಾಗಾದರೆ ನನಗೆ ಏಯ್ಡ್ಸ್ ಇ..ಲ್ಲ…ವಾ..?" ಏನೋ ಅದ್ಭುತವಾದದ್ದನ್ನು ಕೇಳುವಂತೆ ಕೇಳಿದಳು.
ಆಗ ಡಾಕ್ಟರ್, " ಇಲ್ಲ. ನಾನು ಸುಮ್ಮನೇ ಸುಳ್ಳು ಹೇಳಿದೆ. ಮೊದಲು ಆಗೋಲ್ಲವೆಂದೆ. ಒಬ್ಬ ಪೇಷೆಂಟ್ ಗೆ ಹೀಗೆ ಸುಳ್ಳು ಹೇಳಲಾರೆನೆಂದೆ. ಆದರೆ ಮಹೇಂದ್ರ ಕಾರಣ ಹೇಳಿದಾಗ ಒಪ್ಪಿಕೊಂಡೆ. ನನ್ನಿಂದ ತಪ್ಪಾಗಿದ್ದಲ್ಲಿ ಕ್ಷಮಿಸಿ. ಐ ಯಾಮ್ ಸಾರಿ.."
ಅವಳ ತಂದೆ ಇದನ್ನೇ ಎಂಟನೇ ಅದ್ಭುತವೆಂಬಂತೆ ನೋಡುತ್ತಿದ್ದರು.
**********
"ಅವನೇ ನನ್ನ ಗಂಡ" ಸಿನೆಮಾ ಬಿಟ್ಟಿತು. ಜನಸಂದಣಿಯ ಮಧ್ಯದಲ್ಲಿ ಶ್ಯಾಮಲಾ ಮತ್ತು ಮಹೇಂದ್ರ ನಗುತ್ತಾ ಬರುತ್ತಿದ್ದರು.
"ನಿನ್ನ ಗಂಡ ಹೇಗಿರಬೇಕು?" ತುಂಟತನದಿಂದ ಕೇಳಿದನು.
ಅದಕ್ಕವಳು," ನಿನ್ನ ಹಾಗಂತೂ ಇರಕೂಡದು" ಎಂದಳೂ ಚೂಟಿಯಾಗಿ.
ಇಬ್ಬರೂ ನಕ್ಕರು.
ಮನದ ಹನಿ
Posted ಜೂನ್ 11, 2009
on:ರಂಜಿತ್ ಅಡಿಗ, ಕುಂದಾಪುರ
adiga.ranjith@gmail.com
ಅವಳು ಆಗಸ
ಸುಮ್ಮನೆ ಏಣಿ ಕಟ್ಟದಿರು ಅಂದರು
ನನಗೆ
ರೆಕ್ಕೆ ಮೂಡುತಿತ್ತು,
ಅವಳು ನಿನಗೆ ಸರಿಯಾದವಳಲ್ಲ
ಎಂದರು,
ತಪ್ಪುಗಳನ್ನು ಮಾಡುವುದು
ತಪ್ಪಲ್ಲವೆನಿಸತೊಡಗಿತು!
…………………………………………………………………………
ಒಂದು ಕತೆ: ಏಳು ಮಲ್ಲಿಗೆ ತೂಕದ ಹುಡುಗಿ
Posted ಜೂನ್ 10, 2009
on:- In: ಒಂದು ಕತೆ
- 5 Comments
– ರಂಜಿತ್ ಅಡಿಗ, ಕುಂದಾಪುರ
"ಬೇಕಾಗಿದ್ದಾರೆ!
ಇಪ್ಪತ್ತರ ಆಸುಪಾಸಿನಲ್ಲಿರುವ, ಮುಗ್ಧ ಕಂಗಳ, ಚೆಲುವಾದ ಏಳುಮಲ್ಲಿಗೆ ತೂಕವಿರುವ ಹುಡುಗಿಯೊಬ್ಬಳು ಬೇಕಾಗಿದ್ದಾಳೆ. ಕೂಡಲೇ ಸಂಪರ್ಕಿಸಿ,"
ಜನಪ್ರಿಯ ಪತ್ರಿಕೆಯೊಂದರ ಮೂರನೇ ಪುಟದ ಮೂಲೆಯಲ್ಲಿದ್ದ ಈ ಚಿಕ್ಕ-ಚೊಕ್ಕ ಜಾಹೀರಾತನ್ನು ಓದಿ ಯಾವುದೋ ಶ್ರೀಮಂತ ಪಡ್ಡೆ ಹುಡುಗನ ಕರಾಮತ್ತಿರಬೇಕೆಂದುಕೊಂಡು ಪುಟ ಮಗುಚಿ ಹಾಕಿದವರು ಕೆಲವರಾದರೆ, ’ಏಳು ಮಲ್ಲಿಗೆ ತೂಕದ ಹುಡುಗಿಯಾ!’ ಎಂದು ಮನದಲ್ಲೇ ಚಪ್ಪರಿಸಿ ತಮ್ಮ ಫ್ರೆಂಡ್ಸ್ ಗಳಿಗೆ ಹೇಳಿ ನಗಲು ಒಳ್ಳೆಯ ವಿಷಯ ಸಿಕ್ಕಿತಲ್ಲ ಎಂದು ಸಂಭ್ರಮ ಪಟ್ಟವರು ಕೆಲವರು. ಇನ್ನೂ ಬೇರೆ ಥರದವರು ಎದುರು ಮನೆಯ ಧಡೂತಿ ಹುಡುಗಿಯನ್ನು ಸಂಪರ್ಕಿಸಲು ಹೇಳಿದರೆ ಹೇಗೆ? ಎಂದು ಜೋಕ್ ಮಾಡಿ ನಕ್ಕರು.
ಇಂತಹ ವಿಚಿತ್ರ ಜಾಹೀರಾತು ಪತ್ರಿಕೆಗೆ ನೀಡಿದ ಮಹಾನುಭಾವ ಸಂದೀಪ್ ಜಾಹೀರಾತನ್ನು ನೋಡಿ ಮುಗುಳ್ನಗೆ ಸೂಸಿದ. ಕೂಡಲೇ ಮೊಬೈಲ್ ನಿಂದ ಪತ್ರಿಕೆಗೆ ಕರೆ ಮಾಡಿದ. ಯಾವುದಾದರೂ ಲೆಟರ್ ಬಂದಲ್ಲಿ ತಕ್ಷಣವೇ ತನಗೆ ಕಾಲ್ ಮಾಡುವಂತೆ ತಿಳಿಸಿದ. ನಂತರ ಅಲೋಚನಾಮಗ್ನನಾದ. ಮನದ ತುಂಬಾ ಒಂದೇ ಪ್ರಶ್ನೆ ಲಾಸ್ಯವಾಡುತಿತ್ತು. ಅಂತಹ ಹುಡುಗಿ ಸಿಗುತ್ತಾಳಾ? ಆ ರೀತಿಯ ಹುಡುಗಿಯೆಂದರೆ ಏಳು ಮಲ್ಲಿಗೆ ತೂಕದ ಹುಡುಗಿಯಲ್ಲ!
ಮತ್ತೆ..?
************
ಬದುಕಿನ ತುಂಬ ಖಾಲಿ ಆಕಾಶದಂತಹ ಏಕತಾನತೆ. ಆಸ್ತಿ, ಅಂತಸ್ತು, ಬಂಗಲೆ ಬ್ಯಾಂಕ್ ಬ್ಯಾಲನ್ಸ್, ತಾಯಿ ಮಮತೆ, ಫ್ರೆಂಡ್ಸ್ ಹರಟೆ, ಹಣ ನೀಡುವ ಆನಂದ ಎಲ್ಲಾ ಇದ್ದರೂ ತುಂಬಿದ ಕೊಡದ ಚಿಕ್ಕ ತೂತಿನಂತಹ ಸಣ್ಣ ಕೊರತೆ. ಮನದಲ್ಲಿ ಬತ್ತಿದ ಉತ್ಸಾಹದ ಒರತೆ.
ಇಂತಹಾ ಖಾಲಿ-ಖಾಲಿಯಾದ ಬದುಕಿನ ಕೊಡದಲ್ಲಿ ಕೊಂಚ ಉತ್ಸಾಹ, ಉನ್ಮಾದ, ರೋಚಕತೆ, ರಮ್ಯತೆ ತುಂಬುವುದು ಹೇಗೆ?
ಅದಕ್ಕೆ ಉತ್ತರವಾಗಿ ಹೊಳೆದದ್ದೇ ಆ ವಿಚಿತ್ರ ಜಾಹೀರಾತು.
ಎಲ್ಲೋ ದೂರದಲ್ಲಿ, ರೂಮಿನ ಕದವಿಕ್ಕಿ ಮೂಲೆಯೊಂದರಲ್ಲಿ ಕುಳಿತು, ಜಾಹೀರಾತು ಓದಿ ಜಾಣತನದ ಉತ್ತರ ನೀಡುವ ತುಂಟ ಹುಡುಗಿಗಾಗಿ ಈ ಶೈಲಿಯ ಅನ್ವೇಷಣೆಗೆ ಕೈ ಹಾಕಿದ್ದ ಸಂದೀಪ್. ಅಂತಹ ಒಂದು ಅಲೋಚನೆ, ಅದರಲ್ಲಿರುವ ಕುತೂಹಲದಿಂದ ಅವನ ಬದುಕಿಗೆ ಎಂದೂ ಇರದಂತಹ ವಿಚಿತ್ರ ಕಳೆ ಬಂದುಬಿಟ್ಟಿತ್ತು. ತಾನೆಂದೂ ಅರಿಯದ ವಿಚಿತ್ರ ಹುರುಪು ಹುಟ್ಟಿತ್ತು. ಪ್ರತಿದಿನ ಪತ್ರಿಕೆಯ ಫೋನ್ ಕರೆಗಾಗಿ ಕಾಯುತ್ತ ಪರಿತಪಿಸುವುದರಲ್ಲಿ ಏನೋ ಆನಂದ, ಹರುಷ ಅವನಲ್ಲಿ.
ಮೂರು ದಿನ ಕಳೆದರೂ ಪತ್ರಿಕೆಯಿಂದ ಏನೂ ಉತ್ತರ ಬರದಾದಾಗ ತಾನೇ ಪರಿಸ್ಥಿತಿ ತಿಳಿದುಕೊಳ್ಳಲೋಸುಗ ಫೋನ್ ಮಾಡಿದ. "ನಾನು ಸಂದೀಪ್ ಮಾತಾಡ್ತಿರೋದು, ಏನಾದ್ರೂ ರೆಸ್ಪಾನ್ಸ್ ಬಂತೇ ನನ್ನ ಜಾಹೀರಾತಿಗೆ?"
"ಸಾರ್.. ನಿಮ್ಗೆ ಒಂದು ಸ್ಯಾಡ್ ನ್ಯೂಸ್..!" ಅಂದನಾತ.
ಆಶ್ಚರ್ಯದಿಂದ," ಒಂದೂ ಲೆಟರ್ ಬಂದಿಲ್ವಾ?!"
"ಅಯ್ಯೋ! ಹಾಗಲ್ಲ ಸರ್… ರಾಶಿ-ರಾಶಿ ಲೆಟರ್ಸ್ ಬಂದಿವೆ, ಒಟ್ಟೂ ಸಧ್ಯಕ್ಕೆ ಮುನ್ನೂರ ಎಪ್ಪತ್ನಾಕು ಸರ್!…"
"ಉಸ್ಸ್ ಸ್.." ಎಂಬ ಉದ್ಗಾರ ಅವನಿಗರಿವಿರದಂತೆಯೇ ಹೊರಹೊಮ್ಮಿತು. ಫೋನ್ ಇಟ್ಟ ನಂತರ ಆಲೋಚಿಸಿದಾಗ ನಗು ಉಕ್ಕಿತವನಿಗೆ. ಯಾವುದೇ ಹುಡುಗಿ ತನ್ನ ಸೌಂದರ್ಯದ ಹೊಗಳಿಕೆಯನ್ನು ತನ್ನದಲ್ಲ ಅಂದುಕೊಳ್ಳುತ್ತಾಳಾ? ತನ್ನ ವಯಸ್ಸು ಇಪ್ಪತ್ತಲ್ಲವೆಂದೂ, ತನ್ನ ಕಣ್ಣಲ್ಲಿ ಮುಗ್ಧತೆ ಇಲ್ಲವೆಂದೂ ಯಾವತ್ತಾದರೂ ಒಂದು ಕ್ಷಣವಾದರೂ ಅಲೋಚಿಸುತ್ತಾಳಾ?
ಇಂತಹ ವಿಚಾರ ಮನದಲ್ಲಿ ಮೂಡಿ ಮೊಗದಲ್ಲಿ ನಗು ತರಿಸಿತು.
ಮತ್ತೆ ಆಲೋಚನಾಲಹರಿ ಆ ಕನಸಿನ ಏಳುಮಲ್ಲಿಗೆ ತೂಕದ ಹುಡುಗಿಯತ್ತ ವಾಲಿತು. ಮುನ್ನೂರ ಎಪ್ಪತ್ನಾಕರಲ್ಲಿ ಒಬ್ಬಳಾದರೂ ಅಂತವಳು ಇರುವುದಿಲ್ಲವಾ ಎನ್ನುವ ಆಸೆ ಅವನಲ್ಲಿ ಅರಳಿ ಒಂದು ನಿರ್ಧಾರಕ್ಕೆ ಬಂದ.
ತಾಳ್ಮೆಯಿಂದ, ಪ್ರೀತಿಯಿಂದ ಆ ಎಲ್ಲಾ ಪತ್ರಗಳನ್ನು ಒಂದೊಂದಾಗಿ ಓದುವ ನಿರ್ಧಾರವದು.
***********
"ತೂಕವೇನೋ ಏಳುಮಲ್ಲಿಗೆಯದೇ.. ಕಣ್ಣತಕ್ಕಡಿ ಪ್ರೀತಿಯಿಂದ ಅಳೆದರೆ ಮಾತ್ರ!
ಹೂವ ತೂಕ ಕಟ್ಟಿಕೊಂಡು ದುಂಬಿಗೇನಾಗಬೇಕು? ಅದಕ್ಕೆ ಸರಾಗವಾಗಿ ಪರಾಗ ಸಿಕ್ಕರೆ ಆಯಿತು. ಆದರೆ ಅನುರಾಗಕ್ಕಾಗಿ ಹುಡುಕುವ ದುಂಬಿ ನೋಡಿದ್ದು ಇದೇ ಮೊದಲ ಬಾರಿ ಕಣ್ರೀ..:)"
ರಾತ್ರಿ ಮೂರು ಘಂಟೆಯಾದರೂ ನಿದ್ರಿಸದೇ, ಸದ್ದಿರದ ನಿಶ್ಯಬ್ಧದಲ್ಲಿ ರಾಶಿ ರಾಶಿ ಪತ್ರಗಳನ್ನು ಗುಡ್ಡೆಹಾಕಿಕೊಂಡು ಒಂದೊಂದೇ ಬಿಡಿಸಿ ಓದುತ್ತಿದ್ದರೆ ಚಿಕ್ಕ ಲಹರಿ ಮೂಡಿಸಿದ್ದೆಂದರೆ ಈ ಪತ್ರವೇ. ಹುಡುಗಿಯನ್ನು ಹೂವಿಗೆ ಹೋಲಿಸಿದರೆ ಆಕೆ ತನ್ನನು ದುಂಬಿಗೆ ಹೋಲಿಸಿ, ಅಲ್ಪ ಕಾವ್ಯಾತ್ಮಕವಾಗಿಯೂ ಸ್ವಲ್ಪ ಹುಡುಗಾಟಿಕೆಯಿಂದಲೂ ಬರೆದದ್ದು ನೋಡಿ ಈಕೆ ಬುದ್ಧಿವಂತೆ ಅನ್ನಿಸಿತವನಿಗೆ. ಪತ್ರದ ಅಡಿಭಾಗದಲ್ಲಿ ಹೆಸರಿಗಾಗಿ ಕಣ್ಣಲ್ಲೇ ತಡಕಾಡಿದ. ಅಲ್ಲಿ ಹೆಸರಿರಲಿಲ್ಲ. ಬದಲಿಗೆ ಚಿಕ್ಕ ನಕ್ಷತ್ರ ಚಿಹ್ನೆಯೂ ಅದರ ಕೆಳಗೆ ದೂರದಿಂದ ನೋಡಿದರೆ ಸಹಿಯಂತೆ ಕಾಣುವ ಪು. ತಿ. ನೋ. ಎಂಬ ಸೂಚನೆಯೂ ಇತ್ತು. ಲಗುಬಗನೇ ಪುಟ ಮಗುಚಿದ.
ಅಲ್ಲಿ-
"ನೀವಿಟ್ಟ ಪರೀಕ್ಷೆಯಲಿ ನಾನು ಯಶಸ್ವಿಯಾಗದೇ ಇದ್ದಿದ್ದರೆ ಈ ಪತ್ರ ಕಸದ ಬುಟ್ಟಿಯಲ್ಲಿರುತ್ತಿತ್ತು. ನನ್ನ ಹೆಸರಿಗಾಗಿ ಇಲ್ಲಿ ನೋಡಿದಿರೆಂದರೆ ಕೊನೆ ಪಕ್ಷ ಇಷ್ಟವಾಯಿತು ಎಂದಾಯ್ತು. ಥ್ಯಾಂಕ್ಸ್. ಆದರೆ ನನ್ನ ಹೆಸರು ಖಂಡಿತಾ ಹೇಳಲಾರೆ.
ನಾನು ಯಾರು ಎಂದು ತಿಳಿದುಕೊಳ್ಳಬೇಕಾದರೆ ತಕ್ಷಣ ಕೆಳಗಿನ ನಂಬರ್ ಗೆ ಡಯಲ್ ಮಾಡಿ.
ಇಷ್ಟವಾಗಿರದಿದ್ದರೆ ಕಸದ ಬುಟ್ಟಿ ಕಾಯುತಿದೆ, ತುಂಬಿಸಿ."
ತಾನು ಮಾಡುತ್ತಿರುವುದು ಪರೀಕ್ಷೆ ಅಂತಲೂ, ತನ್ನೆದುರಿಗೆ ಪತ್ರಗಳ ರಾಶಿ ಇರುವುದೆಂದೂ ಸರಿಯಾಗಿ ಊಹಿಸಿದ್ದಾಳೆ. ಕಸದ ಬುಟ್ಟಿಯನ್ನು ಕರೆಕ್ಟಾಗಿ ಕಲ್ಪಿಸಿಕೊಂಡಿದ್ದಾಳೆ. ಆದರೆ ಮುಂಜಾವಿನ ಮೂರು ಘಂಟೆ ಎಂಬ ಈಗಿನ ಯುವಜನರ ಅರ್ಧರಾತ್ರಿಯಲ್ಲಿ ಪತ್ರ ಓದುತ್ತಿರುವೆನೆಂದು ಅಂದುಕೊಂಡಿರಲಿಕ್ಕಿಲ್ಲ. ಅಂದುಕೊಂಡಿರಲಾರಳು ಎಂಬ ಕಾರಣಕ್ಕೇ ಈಗಲೇ ಫೋನ್ ಮಾಡಿ ತಾನೇ ಬುದ್ಧಿವಂತನೆನ್ನಿಸಿಕೊಳ್ಳಬೇಕು. ಉಳಿದೆಲ್ಲ ಪತ್ರಗಳನ್ನು ಬದಿಗೆಸೆದು ಫೋನ್ ಗೆ ಕೈ ಹಾಕಿದ.
ಆ ಕಡೆ ಫೋನ್ ರಿಂಗಾಗುತಿತ್ತು. ಸಂದೀಪ್ ಉಸಿರು ಬಿಗಿ ಹಿಡಿದಿದ್ದ. ಮನೆಯಲ್ಲಿ ಬೇರೆ ಯಾರಾದರೂ ಫೋನ್ ಎತ್ತಿದರೆ? .. " ಹಲೋ.." ಎಂದ ನಿಧಾನವಾಗಿ. ಆ ಕಡೆ ಲೈನ್ ನಲ್ಲಿರುವವರ ಪ್ರತಿಸ್ಪಂದನೆ ಕೇಳುವುದಕ್ಕಾಗಿ ಉತ್ಸುಕನಾಗಿದ್ದ.
"ಯಾರ್ರೀ.. ಅದು ಇಷ್ಟ್ ಹೊತ್ನಲ್ಲಿ..?" ಗಡಸು ಹೆಂಗಸಿನ ಬೈಗುಳದಂತಹ ಉತ್ತರ!
" ನಾನು.. ನಾನು.. ಸಂದೀಪ್.. ಅದೂ.. ಏಳು..ಮ.." ಎಮ್ದು ಬಡಬಡಿಸುತ್ತಿರುವಾಗ "ಬೆಳ್ಳಂಬೆಳಿಗ್ಗೆ ಮೂರುಘಂಟೆಗೆ ನಿದ್ರೆ ಹಾಳುಮಾಡಿ ಏಳು ಅನ್ನೋಕೆ ನೀನ್ಯಾವನಯ್ಯ?!" ಎಂದು ಸಿಡುಕಿನಿಂದ ಉತ್ತರಿಸಿದಳಾಕೆ.
ಗೊಂದಲಮಯನಾದ ಸಂದೀಪ್ ಇನ್ನೇನು ಫೋನ್ ಇಡಬೇಕು ಅಂದುಕೊಳ್ಳುತಿರುವಾಗ ಆ ಕಡೆಯಿಂದ ಸಿಟ್ಟಿನ ಗಡಸು ಹೆಂಗಸಿನ ಧ್ವನಿ ಮರೆಯಾಗಿ ಸಿಹಿಯಾದ ಉಲಿತವೊಂದು ಕೇಳಿಸಿತು.." ಪ್ಲೀಸ್.. ಫೋನ್ ಇಟ್ಟುಬಿಡಬೇಡಿ!"
ಆಶ್ಚರ್ಯವಾಯಿತವನಿಗೆ. "ಅಂದರೆ ಇಷ್ಟು ಹೊತ್ತು ಮಾತಾಡಿದ್ದು ನೀವೇನಾ?!"
ಅವಳು ನಸುನಕ್ಕು," ಹ್ಮ್.. ಕಾಲೇಜಿನಲ್ಲಿ ಓದುತ್ತಿದ್ದಾಗ ಮಿಮಿಕ್ರಿಯಲ್ಲಿ ಪ್ರೈಜ್ ಬಂದಿತ್ತು, ಅಮಿತಾಭ್ ಬಚ್ಚನ್ ತರಹ ಮಾತಾಡೋಣ ಅಂದ್ಕೊಂಡೆ. ನಿಮ್ಗೆ ಅನುಮಾನವಾಗುತ್ತದೆಂದು…"
ಸಂದೀಪ್ ಬೇಸ್ತುಬಿದ್ದಿದ್ದ. ತುಂಟ ಹುಡುಗಿಯೊಬ್ಬಳನ್ನು ಗೆಳತಿಯನ್ನಾಗಿ ಮಾಡಿಕೊಳ್ಳೋಣವೆಂದರೆ ತನ್ನನ್ನೇ ಸುಲಭವಾಗಿ ಗೋಳುಹೋಯ್ದುಕೊಂಡಳಲ್ಲಾ ಅಂದುಕೊಂಡ. ಅವಳ ಬಗ್ಗೆ ಮನಸ್ಸು ಏನೆಲ್ಲಾ ಕಲ್ಪಿಸಿಕೊಳ್ಳುತಿತ್ತು. ಕೊಂಚ ಕ್ಷಣಗಳ ಮೌನದಲ್ಲಿ ಅವನ ಮನದಾಳದೊಳಗೆ ಒಂದು ನಿರ್ಧಾರ ಮೆದುವಾಗಿ ಹದಗಟ್ಟುತ್ತಿತ್ತು.
"ಹಲೋ… ಏನಾಲೋಚಿಸುತ್ತಿದ್ದೀರಿ?"
ನಿರ್ಧಾರ ಗಟ್ಟಿಯಾಯಿತು. " ನನ್ನನ್ನು ಮದುವೆಯಾಗುವಿರಾ?" ಕೇಳಿದ.
"ವ್ಹಾಟ್?!" ಎಂಬ ಉದ್ಗಾರ ಅವಳಾಶ್ಚರ್ಯದ ಮೇರೆ ಸೂಚಿಸಿತು.
ಅವನಲ್ಲಿ ಅದೇ ಮಾತಿನ ಖಚಿತತೆ. ಅದೇ ನಿರ್ಧಾರದ ಗಟ್ಟಿತನ. ಪುನಃ ಅದೇ ಪ್ರಶ್ನೆ ಕೇಳಿದ.
"ಅಲ್ರೀ.. ನೀವು ನನ್ನನ್ನ ನೋಡೇ ಇಲ್ಲ?!"
" ನೋಡಬೇಕಾಗಿಲ್ಲ!"
"ನಾನು ಮುದ್ಕಿಯಾಗಿರಬಹುದು!" ಎಂದಳು; ದನಿಯಲ್ಲಿ ಶುದ್ಧ ತುಂಟತನ.
"ಪರವಾಗಿಲ್ಲ!"
"ಮ್..ನಿಮಗೆ ಬೇಕಾಗಿರೋದು ಏಳುಮಲ್ಲಿಗೆ ತೂಕದವಳಲ್ಲವೇ? ಆದ್ರೆ ನಾನು ಸ್ವಲ್ಪ ಡುಮ್ಮಿ ರೀ.."
"ಆದರೂ ಸರಿ"
"ಇಷ್ಟಕ್ಕೂ ನನ್ನಲ್ಲೇನು ಇಷ್ಟ ಆಯಿತು ನಿಮಗೆ?"
"ನಿಮ್ಮಲ್ಲಿರೋ ಜೀವಂತಿಕೆ!"
ಒಂದು ಕ್ಷಣದ ಮೌನ. ಆ ಅವಧಿಯಲ್ಲಿ ಇಬ್ಬರೂ ಭಾವವನ್ನು ಅರಗಿಸಿಕೊಳ್ಳಲು ಪ್ರಯತ್ನಿಸಿದರು. ಅವನ ಆ ನಿಜಾಯಿತಿಯ ಉತ್ತರಕ್ಕೆ ಅವಳ ತುಂಟತನ ಅಡಗಿ ತಂಪು ಹವೆಯೊಂದು ತಟ್ಟಿಹೋದಂತೆ ತನ್ಮಯಳಾದಳು. ಸಂದೀಪ್ ಮತ್ತೆ ಮುಂದುವರಿಸಿದ." … ಹೌದು. ಬತ್ತಿದ ಬದುಕಲ್ಲಿ ಉತ್ಸಾಹ ಮೂಡಿಸುವ ಚಿಲುಮೆ ನಿಮ್ಮಲ್ಲಿ ಧ್ವನಿಸುತ್ತಿದೆ. ನಿಮ್ಮ ಮುಖ ನಿಮ್ಮ ಮಾತಿನ ಲಹರಿಯಲ್ಲೇ ಕಾಣಿಸುತಿದೆ. ನಿಜವಾಗಿಯೂ ನನಗೆ ಬೇಕಿರುವುದು ಏಳುಮಲ್ಲಿಗೆತೂಕದ ಹುಡುಗಿಯ ಸ್ನೇಹವೇ. ಆದರೆ ಆ ತೂಕ ಮನಸ್ಸಿಗೆ ಸಂಬಂಧಿಸಿದ್ದು.ನಿಮ್ಮ ಮನಸ್ಸೂ ಮಲ್ಲಿಗೆಯಂಥದ್ದು, ಅಷ್ಟೇ ಮಧುರ… ಅಷ್ಟೇ ಕಂಪು!"
ಅವಳು ನಕ್ಕಳು," ಮತ್ತೆ..?"
"ಚೈತನ್ಯದ ಸುಗಂಧ ನಿಮ್ಮಲ್ಲಿದೆ. ಅದರ ಘಮ ಇಲ್ಲೂ ನನಗರಿವಾಗುತಿದೆ. ಹೇಳಿ ನನ್ನನ್ನು ಮದುವೆಯಾಗುತ್ತೀರಾ?"
ಅವಳು ಮತ್ತೊಮ್ಮೆ ನಕ್ಕು ಫೋನ್ ಇಟ್ಟುಬಿಟ್ಟಳು.
ಸಂದೀಪ್ ವಿಜಯದ ನಿಟ್ಟುಸಿರಿಟ್ಟು ಮೆಲುವಾದ ಅವಳ ದನಿಯ ಗುಂಗಿನಲ್ಲಿಯೇ ಪರವಶನಾಗುತ್ತಿದ್ದ.
ಅವಳು ಫೋನಿಟ್ಟು ಎದುರಿಗಿರುವ ಕನ್ನಡಿಯಲ್ಲಿ ತನ್ನ ಮೊಗ ನೋಡಿ ನಸುನಕ್ಕಳು.
ನೀನು ನನ್ನ ಬದುಕಿನಲ್ಲಿ ಬಂದ ಮೇಲೆ ನಾನು ಅದೆಷ್ಟು ಬದಲಾಗಿ ಹೋಗಿದ್ದೆನಲ್ಲವಾ? ನಿನ್ನ ಪರಿಚಯ, ಸಾಹಚರ್ಯದಿಂದಾಗಿ ನನ್ನಲ್ಲಿ ಹೊಸತೊಂದು ಹುಮ್ಮಸ್ಸು ಹುಟ್ಟಿಕೊಂಡಿತ್ತು. ನಿನ್ನೊಂದಿಗೆ ಪ್ರತಿದಿನ ಒಂದಷ್ಟು ಸಮಯ ಕಳೆದರೆ ವಿಲಕ್ಷಣವಾದ ಧೈರ್ಯ ಬರುತ್ತಿತ್ತು. ನೀನು ನನ್ನ ಬೆರಳುಗಳ ನಡುವೆ ನುಲಿಯುತ್ತಿರುವಾಗ ನಾನು ಇಡೀ ಜಗತ್ತನ್ನೇ ಜಯಿಸುವ ಕನಸನ್ನು ಕಾಣುತ್ತಿದ್ದೆ. ಸುತ್ತಲಿನ ಜಗತ್ತೂ ಕೊಂಚ ಬದಲಾದ ಹಾಗೆ ಅನ್ನಿಸುತ್ತಿತ್ತು. ಅದುವರೆಗೂ ಕಣ್ಣೆತ್ತಿಯೂ ನೋಡದವರೆಲ್ಲಾ ನಾನು ನಿನ್ನೊಂದಿಗಿರುವಾಗ ನಮ್ಮಿಬ್ಬರನ್ನು ದುರುದುರನೆ ನೋಡಿ ಮುಂದೆ ಹೋಗುತ್ತಿದ್ದರು. ಕೆಲವರ ಕಣ್ಣಲ್ಲಿ ನಾನು ನೀನು ಆದರ್ಶ
ಪ್ರೇಮಿಗಳಾಗಿದ್ದೆವು. ನಾನು ಒಬ್ಬನೇ ತಿರುಗಾಡುವಾಗ ಎದುರಲ್ಲಿ ಕಂಡ ಕೆಲವು ಹುಡುಗರ ಕಣ್ಣಲ್ಲಿನ ಭಯ, ಭಕ್ತಿ, ಗೌರವ ಬೆರೆತ ಭಾವವನ್ನು ಗು
ರುತಿಸುತ್ತಿದ್ದೆ. ಕೆಲವು ಮುದುಕರು ವಾಕಿಂಗ್ ಸ್ಟಿಕ್ಕನ್ನು ಕುಟ್ಟುತ್ತಾ ಎದುರು ಸಾಗುವಾಗ ನನ್ನ ಮೇಲೆ ದುಸುಮುಸು ಮಾಡಿಕೊಳ್ಳುತ್ತಿದ್ದನ್ನೂ ಕಂಡಿದ್ದೆ. ಆದರೆ ನನಗೆ ಅವ್ಯಾವೂ ಮುಖ್ಯವಾಗಿರಲಿಲ್ಲ. ನಾನು ಹಾಗೂ ನೀನು ಇಬ್ಬರೇ ಇಡೀ ಜಗತ್ತಿನಲ್ಲಿ ಸಮಯ ಕೊನೆಯಾಗುವರೆಗೆ ಹಾಯಾಗಿರಬೇಕು ಅನ್ನಿಸುತ್ತಿತ್ತು.
ನಿನ್ನೊಳಗೆ ನಾನು, ನನ್ನೊಳಗೆ ನೀನು ಬೆರೆತು ಹೋಗಿ ಇಬ್ಬರೂ ಇಲ್ಲವಾಗಿ ಬಿಡಬೇಕು ಎಂಬ ಕಾತರ ನನ್ನಲ್ಲಿದ್ದರೂ ಈ ಸುತ್ತಲ ಸಮಾಜದ ನಿಯಮಗಳು ಅದಕ್ಕೆ ಅವಕಾಶಕೊಡುವುದಿಲ್ಲ ಎಂಬುದು ನಮ್ಮಿಬ್ಬರಿಗೂ ಗೊತ್ತಿತ್ತು. ನಾನು ನೀನು ಎಲ್ಲೆಂದರಲ್ಲಿ ಸಂಧಿಸುವ ಹಾಗಿರಲಿಲ್ಲ. ನಮ್ಮ ಸಮಾಗಮಕ್ಕಾಗಿ ಅತೀ ಎಚ್ಚರಿಕೆಯಿಂದ ಸಮಯವನ್ನೂ, ಸ್ಥಳವನ್ನೂ ನಾವು ಆಯ್ಕೆ ಮಾಡಿಕೊಳ್ಳಬೇಕಿತ್ತು. ಕಾಲೇಜು ಇರುವಾಗಲೆಲ್ಲಾ ಇಲ್ಲಿ ಹಾಸ್ಟೆಲ್ಲಿನಲ್ಲಿ ಉಳಿದುಕೊಂಡಾಗ ನನಗಷ್ಟು ತೊಂದರೆಯಾಗುತ್ತಿರಲಿಲ್ಲ. ನೀನು ಯಾವ ಘಳಿಗೆಯಲ್ಲಿ ಕಳೆದರೂ ಉಟ್ಟ ಬಟ್ಟೆಯಲ್ಲಿ ಧಾವಿಸುವಷ್ಟು ಸ್ವಾತಂತ್ರ್ಯವಿರುತ್ತಿತ್ತು. ನನ್ನನ್ನು ತಡೆಯುವುದಕ್ಕೆ ಯಾರಿಗೂ ಸಾಧ್ಯವಿರಲಿಲ್ಲ. ಮೇಲಾಗಿ ಈ ಊರಿಗೆ ನಾನು ಅಪರಿಚಿತ. ಈ ಬೆಂಗಳೂರಿನ ಸಂಗತಿ ನಿನಗೆ ಗೊತ್ತಿಲ್ಲ ಅನ್ನಿಸುತ್ತೆ, ಇಲ್ಲಿ ನಿನ್ನ ಬೆನ್ನ ಹಿಂದಿರುವ ಒಂದು ಅಡಿ ದಪ್ಪನೆಯ ಗೋಡೆಯ ಆಚೆ ಬದಿಯಲ್ಲಿ ಕೂತ ವ್ಯಕ್ತಿಗೆ ನಿನ್ನ ಪರಿಚಯವಿರುವುದಿಲ್ಲ. ಪಕ್ಕದ ಮನೆಯಲ್ಲಿ ಮನುಷ್ಯರು ಇದ್ದಾರೆ, ಅವರು ಇನ್ನೂ ಉಸಿರಾಡುತ್ತಿದ್ದಾರೋ ಇಲ್ಲವೋ ಎಂಬುದು ಇಲ್ಲಿನವರಿಗೆ ಆಸಕ್ತಿಯ ವಿಷಯವಾಗುವುದಿಲ್ಲ. ಹೀಗಾಗಿ ನಾನು ಹಾಸ್ಟೆಲ್ಲಿನ ಕಾಂಪೌಂಡು ದಾಟುತ್ತಿದ್ದ ಹಾಗೆಯೇ ಕಿಸೆಯಲ್ಲಿ ಭದ್ರವಾಗಿದ್ದ ನಿನ್ನನ್ನು ಹೊರಕ್ಕೆಳೆದು ಪ್ರೀತಿಯಿಂದ ಕಿಚ್ಚು ಹೊತ್ತಿಸುವಾಗಲೂ ಭಯವಾಗುತ್ತಿರಲಿಲ್ಲ. ತೀರಾ ನನ್ನ ಕಾಲೇಜಿನವರು, ನನ್ನ ವರ್ತಮಾನವನ್ನು ಊರಿಗೆ ತಲುಪಿಸುವಂಥವರು, ಕಾಲೇಜಿನ ಲೆಕ್ಛರುಗಳು- ಇವರ ಕಣ್ಣಿಗಾದರೂ ನಾವಿಬ್ಬರೂ ಒಟ್ಟಾಗಿರುವುದು ಬೀಳದಂತೆ ಎಚ್ಚರ ವಹಿಸುತ್ತಿದ್ದೆ.
ದಿನಕ್ಕೆ ಒಂದು ಬಾರಿ ಎರಡು ಬಾರಿಯೆಲ್ಲಾ ಸಂಧಿಸುವುದರಿಂದ ನನಗೆ ತೃಪ್ತಿಯಾಗುತ್ತಿರಲಿಲ್ಲ. ಐದು, ಆರು ಕಡೆ ಕಡೆಗೆ ಹತ್ತು ಹದಿನೈದು ಸಲವಾದರೂ ನಿನ್ನ ಮಡಿಲಿಗೆ ನನ್ನನ್ನು ನಾನು ಒಪ್ಪಿಸಿಕೊಂಡುಬಿಡಲು ಶುರು ಮಾಡಿದೆ. ನೀನೂ ಏನೂ ಅಷ್ಟು ಸುಲಭಕ್ಕೆ ಸಿಕ್ಕುವವಳಾಗಿರಲಿಲ್ಲ. ನಿನ್ನ ಬೇಡಿಕೆಯೇನು ಸಣ್ಣ ಪ್ರಮಾಣದ್ದಲ್ಲ. ಮನೆಯಿಂದ ಬರುತ್ತಿದ್ದ ತಿಂಗಳ ಕಾಸಿನಲ್ಲಿ ಒಂದಷ್ಟನ್ನು ಕದ್ದು ಮುಚ್ಚಿ ನಿನಗೆ ತಲುಪಿಸುತ್ತಿದ್ದೆ. ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದೆನಾದ್ದರಿಂದ ನಿನ್ನನ್ನು ಸಾಕಲು ಕಷ್ಟವಾಗುತ್ತಿರಲಿಲ್ಲ. ಆದರೆ ಕೆಲವೊಮ್ಮೆ ವಿಪರೀತವಾಗಿ ಕೈ ಕಟ್ಟಿ ಹೋಗಿ ಬಿಡುತ್ತಿತ್ತು. ಕೈಲಿ ಬಿಡುಗಾಸೂ ಇರುತ್ತಿರಲಿಲ್ಲ. ಹಿಂದೆಂದೂ ಅಮ್ಮನಿಗೆ ಸುಳ್ಳು ಹೇಳದ ನಾನು ಆಕೆಗೆ ಅರ್ಥವಾಗದ ಪುಸ್ತಕಗಳ ಹೆಸರು ಹೇಳಿ ಬ್ಯಾಂಕ್ ಅಕೌಂಟು ತುಂಬಿಸಿ ಕೊಳ್ಳುತ್ತಿದ್ದೆ. ನಮ್ಮ ಪ್ರೀತಿಗಾಗಿ ನಾನು ಅಪ್ರಮಾಣಿಕನಾದೆ, ಸ್ವಾಭಿಮಾನವನ್ನೂ ಕಳೆದುಕೊಂಡು ಗೆಳೆಯರ ಬಳಿ ಅಂಗಲಾಚಿದೆ. ಆಪ್ತರ ಕಣ್ಣಲಿ ಸಣ್ಣವನಾದೆ, ಆದರೆ ನಿನ್ನ ಕಣ್ಣಲ್ಲಿ ನಾನು ದೊಡ್ಡವನಾಗುತ್ತಿದ್ದೆ ಎಂದುಕೊಂಡಿದ್ದೆ. ನಾನು ನಿನ್ನ ಕಾಣುವುದಕ್ಕಾಗಿ, ನಿನ್ನನ್ನು ಸೇರುವುದಕ್ಕಾಗಿ ಇಷ್ಟೆಲ್ಲಾ ತ್ಯಾಗಗಳನ್ನು ಮಾಡುತ್ತಿದ್ದೆ. ಆದರೆ ನೀನೋ ಅಂತಃಪುರದ ಮಹಾರಾಣಿಯ ಹಾಗೆ ಕೂದಲೂ ಸಹ ಕೊಂಕದ ಹಾಗೆ ಇರುತ್ತಿದ್ದೆ. ಪಾಪ ಇದರಲ್ಲಿ ನಿನ್ನದೇನೂ ತಪ್ಪಿರಲಿಲ್ಲ ಬಿಡು. ನಿನಗೆ ನನ್ನ ಎಷ್ಟೇ ಪ್ರೀತಿಯಿದ್ದರೂ ನೀನಾದರೂ ಏನು ಮಾಡಲು ಸಾಧ್ಯವಿತ್ತು? ನೀನು ಅಬಲೆ, ಅಸಹಾಯಕಿ ನಾನು ನಿನ್ನ ಪೊರೆಯುವ, ಸದಾ ನಿನ್ನ ಹಿತವನ್ನು ಕಾಯುವ, ನಿನ್ನ ಕೋಮಲತೆಯನ್ನು ಕಾಪಾಡುವ ಶಕ್ತಿವಂತ ಯೋಧನಾಗಿದ್ದೆ. ನಮ್ಮಿಬ್ಬರ ಮಿಲನಕ್ಕೆ ನಾನು ಈ ಸುಂಕವನ್ನು ತೆರಲೇ ಬೇಕಿತ್ತು.
ನಿಜಕ್ಕೂ ನನಗೆ ಹಾಗೆ ಅನ್ನಿಸುತ್ತಿತ್ತೋ ಅಥವಾ ಅದು ಕೇವಲ ನನ್ನ ಭ್ರಮೆಯಾಗಿತ್ತೋ ನನಗಿನ್ನೂ ಸರಿಯಾಗಿ ತೀರ್ಮಾನಿಸಲು ಸಾಧ್ಯವಾಗುತ್ತಿಲ್ಲ. ಆಗಿನ ನನ್ನ ಬದುಕಿಗೇ ನೀನೇ ಸ್ಪೂರ್ತಿಯಾಗಿದ್ದೆ. ನನ್ನ ಅಂತರಂಗದ ಪ್ರೇರಕ ಶಕ್ತಿಯಾಗಿದ್ದೆ. ನಾನು ಹೆದರಿ ಹೆಜ್ಜೆ ಹಿಂದಿಟ್ಟಾಗಲೆಲ್ಲಾ ನೀನು ಧೈರ್ಯ ತುಂಬಿ ಮುಂದಕ್ಕೆ ತಳ್ಳುತ್ತಿದ್ದೆ. ದಣಿದು ಕುಳಿತಾಗಲೆಲ್ಲಾ ಶಕ್ತಿಯನ್ನು ಧಾರೆಯೆರೆದು ಜಿಗಿದು ನಿಲ್ಲುವಂತೆ ಮಾಡುತ್ತಿದ್ದೆ. ನನ್ನ ಸೃಜನಶಿಲತೆ, ನನ್ನ ಸಾಧನೆಗಳಿಗೆ ನೀನೇ ಬೆಂಬಲವಾಗಿದ್ದೆ. ಒಮ್ಮೆ ನಿನ್ನೊಡನೆ ಕೈಯೊಳಗೆ ಕೈ ಬೆಸೆದುಕೊಂಡು ಕುಳಿತು ಐದು ನಿಮಿಷ ಕಳೆದರೆ ನನ್ನೆಲ್ಲಾ ಸಭಾ ಕಂಪನ ಕಾಣೆಯಾಗಿ ನೂರಾರು ಮಂದಿಯೆದುರು ನಿರ್ಭಯವಾಗಿ, ಅದ್ಭುತವವಾಗಿ ಮಾತಾಡುತ್ತಿದ್ದೆ. ಹಿಂದೆಲ್ಲಾ ಪದಗಳು ಸಿಕ್ಕದೆ ತಡವರಿಸುತ್ತಿದ್ದವನು ನಾನೇನಾ ಎಂದು ಆಶ್ಚರ್ಯ ಪಡುವಷ್ಟರ ಮಟ್ಟಿಗೆ ನಿನ್ನ ಸ್ಪೂರ್ತಿ ನನ್ನನ್ನು ಬದಲಾಯಿಸಿತ್ತು. ಅಪರೂಪಕ್ಕೆ ಕಾಲೇಜಿನ ಪತ್ರಿಕೆಗಾಗಿಯೋ, ಇಲ್ಲವೇ ‘ಮಯೂರ’, ‘ತುಷಾರ’ಕ್ಕಾಗಿಯೋ ಕಥೆಯೊಂದನ್ನು ಬರೆಯುವುದಕ್ಕೆ ಕೂತಾಗ ಗಂಟೆ ಗಟ್ಟಲೆ ಮೇಜಿನ ಮುಂದೆ ಜಿಮ್ನಾಸ್ಟಿಕ್ ನಡೆಸಿದರೂ, ಹಾಸಿಗೆಯ ಮೇಲೆ ಶೀರ್ಷಾಸನ ಹಾಕಿದರೂ ಹೊಳೆಯದಿದ್ದ ವಿಚಾರಗಳು, ಕೈಯಿಂದ ತಪ್ಪಿಸಿಕೊಂಡು ಓಡುತ್ತಿದ್ದ ಕಥೆಯ ಎಳೆಗಳು ನಿನ್ನನ್ನು ಜೊತೆಯಲ್ಲಿಟ್ಟುಕೊಂಡು ಕೂತೊಡನೆ ಬಾಲ ಮುದುರಿಕೊಂಡ ಬೆಕ್ಕಿನ ಮರಿಯ ಹಾಗೆ ಕಾಗದದ ಮೇಲೆ ಇಳಿಯುತ್ತಿದ್ದವು. ನಾನು ನನ್ನ ಬದುಕಿನ ಅತಿ ಶ್ರೇಷ್ಠ ಕಥೆಗಳನ್ನು, ಕವಿತೆಗಳನ್ನು ಬರೆದದ್ದು, ತುಂಬಾ ಒಳ್ಳೆಯ ಐಡಿಯಾಗಳನ್ನು ಪಡೆದದ್ದು ನಿನ್ನೊಂದಿಗಿದ್ದಾಗಲೇ. ಅದ್ಯಾರೋ ಮಹಾನ್ ಲೇಖಕ, ‘ಬರೆಯುವಾಗ ಯಾರೆಂದರೆ ಯಾರೂ ಇರಬಾರದು ನನ್ನನ್ನೂ ಸೇರಿಸಿ’ ಎಂದು ಹೇಳಿದ್ದಾನೆ. ಆ ಸ್ಥಿತಿಯನ್ನು ತಲುಪಿಕೊಳ್ಳಲು ನೀ ನನಗೆ ನೆರವಾಗುತ್ತಿದ್ದೆ ಎಂದುಕೊಳ್ಳುತ್ತಿದ್ದೆ. ಕಾರಂತರು, ಲಂಕೇಶರು, ಅಡಿಗರು, ರವಿ ಬೆಳಗೆರೆಯಂಥವರೆಲ್ಲಾ ನಿನ್ನ ಪರಿವಾರವನ್ನು ನೆಚ್ಚಿಕೊಂಡವರು ಎಂದು ತಿಳಿದು ಪುಳಕಿತನಾಗುತ್ತಿದ್ದೆ. ಕಡೆ ಕಡೆಗೆ ಅದ್ಯಾವ ಪರಿ ನಿನ್ನನ್ನು ಹಚ್ಚಿಕೊಂಡೆನೆಂದರೆ ನೀನಿಲ್ಲದೆ ನನ್ನಲ್ಲಿ ಕಥೆಯಿರಲಿ, ಒಂದು ಸಾಲು ಕೂಡ ಹುಟ್ಟಲು ಸಾಧ್ಯವಾಗುತ್ತಿರಲಿಲ್ಲ. ನಿನ್ನೊಡನೆ ಇರದಿದ್ದ ಘಳಿಗೆಯಲ್ಲಿ ಯಾರಾದರೂ ಬಂದು ಈ ಐಡಿಯಾಗಳು ನಿಮ್ಮದೇನಾ ಅಂತ ಕೇಳಿಬಿಟ್ಟರೆ ಎಂದು ಕಲ್ಪಿಸಿಕೊಂಡು ಭಯವಾಗಿ ನಡುಗಿಹೋಗುತ್ತಿದ್ದೆ.
(ಮುಂದಿನ ಸಂಚಿಕೆಗೆ)
ಪ್ರಿಯ ಆತ್ಮಬಂಧು,
ಹೌದು ನಿನ್ನ ಹೀಗಂತ ಮಾತ್ರ ಕರೆಯಲು ಸಾಧ್ಯ. ಒಮ್ಮೆ ಹೀಗೆ ಕರೆದುಬಿಟ್ಟ ನಂತರ ನನ್ನಲ್ಲಿ ಅದೆಷ್ಟು ನಿರಾಳತೆ ಆವರಿಸಿಕೊಂಡಿದೆ ಎಂಬುದು ನಿನಗೆ ತಿಳಿಯುವುದಿಲ್ಲ. ಇಷ್ಟು ವರ್ಷಗಳಲ್ಲಿ ನಾನು ನಿನ್ನಲ್ಲಿ ಹುಡುಕುತ್ತಿದ್ದದ್ದು ಏನನ್ನು ಎನ್ನುವುದು ತಿಳಿಯದೆ ಗೊಂದಲಗೊಂಡಿದ್ದೆ, ಕ್ಷಣಕ್ಷಣವೂ ಮುಂದೆ ಏನಾಗುವುದೋ ಎಂಬ ಆತಂಕದಲ್ಲೇ ನಾನು ನನ್ನ ಎಂ.ಬಿ.ಬಿ.ಎಸ್ ಮುಗಿಸಿದೆ. ರಾತ್ರಿ ಕಳೆದು ಹಗಲಾಗುವುದರೊಳಗೆ ನನ್ನ ನಿನ್ನ ನಡುವಿನ ಸಂಬಂಧ ಯಾವ ರೂಪವನ್ನು ತಳೆದು ಕಣ್ಣ ಮುಂದೆ ಎದ್ದು ನಿಂತು ಬಿಡುವುದೋ ಎಂಬ ಕಳವಳದಲ್ಲಿ ರಾತ್ರಿಗಳನ್ನು ತಳ್ಳುತ್ತಿದ್ದೆ. ನನ್ನ ಬಗ್ಗೆ ನಿನ್ನ ಮನಸ್ಸಿನಲ್ಲಿರುವ ಭಾವನೆಯೇನು ಎಂಬುದನ್ನು ತಿಳಿದುಕೊಳ್ಳುವ ಇಂದ್ರಜಾಲದ ವಿದ್ಯೆಯಾವುದಾದರೂ ಇದ್ದರೆ ನನಗೆ ಕಲಿಸಪ್ಪ ಎಂದು ನಾನು ದೇವರನ್ನು ಪ್ರಾರ್ಥಿಸುವಾಗಲೆಲ್ಲಾ ಬೇಡಿಕೊಳ್ಳುತ್ತಿದ್ದೆ. ನಿನ್ನಲ್ಲಿ ನನ್ನೆಡೆಗೆ ಯಾವ ಭಾವನೆಯಿದು ಎನ್ನುವುದು ತಿಳಿಯುವುದಿರಲಿ, ನನೆಗೆ ನಿನ್ನ ಬಗ್ಗೆ ಏನು ಅನ್ನಿಸುತ್ತಿದೆ ಎಂಬುದನ್ನು ಗ್ರಹಿಸುವುದಕ್ಕೇ ನಾನು ವಿಫಲಳಾಗಿದ್ದೆ.
ಆ ಐದು ವರ್ಷಗಳಲ್ಲಿ ಏನೇನೆಲ್ಲಾ ನಡೆಯಿತು ಅಲ್ಲವಾ? ಗಾರ್ಮೆಂಟ್ ಕೆಲಸಕ್ಕೆ ಎಂದು ಸೇರಲು ತಯಾರಾಗಿದ್ದ ನಾನು ಡಾಕ್ಟರ್ ಆಗಬಹುದು ಎಂದು ಕನಸಿನಲ್ಲಷ್ಟೇ ಬಯಸಬಹುದಾಗಿದ್ದ ಸವಲತ್ತಾಗಿತ್ತು. ನೀನು ನನ್ನ ಕನಸನ್ನು ನನಸು ಮಾಡಿದೆ. ನಮ್ಮೆಲ್ಲಾ ಕಥೆಗಳಲ್ಲಿ ರಾಜಕುಮಾರಿಯರಿಗೆ ಕನಸಿನಲ್ಲಿ ರಾಜಕುಮಾರರು ಕಾಣಿಸಿಕೊಂಡು ತಮ್ಮ ಪರಾಕ್ರಮ ತೋರುತ್ತಾರಂತೆ! ನೀನು ನನ್ನ ಕನಸಿನಲ್ಲಿ ಬರುವ ಕಷ್ಟವನ್ನು ತೆಗೆದುಕೊಳ್ಳಲಿಲ್ಲ. ನನ್ನ ಕನಸನ್ನೇ ಎಳೆದು ತಂದು ಬದುಕಾಗಿಸಿದೆ. ಆ ಬದುಕಿನಲ್ಲಿ ಸಹಜವಾಗಿ ನೀನು ಇದ್ದೆ.
ನೀನು ಬರುವ ಮುಂಚೆ ನನ್ನ ಬದುಕು ಹೇಗಿತ್ತು? ಅಲ್ಲಿ ಇರಬೇಕಾದದ್ದೆಲ್ಲಾ ಕನ್ನಡಿಯೊಳಗಿನ ಗಂಟಾಗಿತ್ತು. ಅಪ್ಪನಿಗೆ ಮತಿಭ್ರಮಣೆ. ತಾನು ಮಾಡುತ್ತಿರುವುದೇನು ಎಂಬುದನ್ನು ಅರ್ಥ ಮಾಡಿಕೊಳ್ಳಲಾಗದ ಅಸಹಾಯಕತೆ. ಕೆಲವೊಮ್ಮೆ ದಿನವಿಡೀ ಮಂಕಾಗಿ ಕುಳಿತರೆ ಮತ್ತೊಂದಷ್ಟು ದಿನ ವಿನಾಕಾರಣದ ರಗಳೆಗಳನ್ನು ಮಾಡಿ, ಕೂಗಾಡಿ ಗದ್ದಲವೆಬ್ಬಿಸಿ ಎಲ್ಲರ ನೆಮ್ಮದಿಯನ್ನು ಕೆಡಿಸುತ್ತಿದ್ದ. ಇದನ್ನೆಲ್ಲಾ ನನ್ನಮ್ಮ ಹೇಗೋ ಸಹಿಸಿಕೊಳ್ಳುತ್ತಿದ್ದಳು. ಇವೆಲ್ಲದರ ಮಧ್ಯೆಯೂ ನಮ್ಮಿಬ್ಬರಿಗೆ – ನಾನು ಹಾಗೂ ತಮ್ಮನಿಗೆ- ಅಪ್ಪನ ಬಗ್ಗೆ ಅಗೌರವ, ಅಸಹ್ಯ ಬರದ ಹಾಗೆ ಆಕೆ ನಡೆಸಿಕೊಳ್ಳುತ್ತಿದ್ದಳು. ಆಕೆಯ ಮುಖದಲ್ಲೆಂದೂ ಅಪ್ಪನ ಬಗೆಗೆ ಅಪ್ರಸನ್ನತೆಯ ಗೆರೆ ಮೂಡಿರಲಿಲ್ಲ. ಆದರೆ ಅಂಥಾ ಸಂಯಮಿಯೂ ತಾಳ್ಮೆ ಕಳೆದುಕೊಳ್ಳಬೇಕಾಯ್ತು. ಅಪ್ಪ ತನಗಿದ್ದ ಮತಿಭ್ರಮಣೆಯ ಜೊತೆಗೆ ಕುಡಿತದ ಹುಚ್ಚನ್ನೂ ಅಂಟಿಸಿಕೊಂಡು ಬಿಟ್ಟ. ಅಮ್ಮನಿಗೆ ಸಂಯಮ ತಪ್ಪಿಹೋಯ್ತು. ದಿನವೂ ಕುಡಿಯಲು ಕಾಸು ಬೇಡುತ್ತಾ ನಿಲ್ಲುವ ಅಪ್ಪನನ್ನು ನಿಷ್ಕೃಷ್ಟ ಪ್ರಾಣಿಯ ಹಾಗೆ ಅಮ್ಮ ಕಾಣಲು ಶುರುವಾದಾಗಿನಿಂದ ಮನೆಯಲ್ಲಿ ನೆಮ್ಮದಿಯೆಂಬುದು ಕಾಣೆಯಾಯ್ತು. ಅಲ್ಲಿಯವರೆಗೂ ಅಸಮಾಧಾನ, ದುಸುಮುಸುಗಳು ದೇವರ ಕೋಣೆಯಲ್ಲಿ, ಮಲಗುವ ಕೋಣೆಯ ದಿಂಗಿನ ಹೆಗಲಲ್ಲಿ ಇಳಿದು ಹೋಗುತ್ತಿದ್ದವು. ನಾನು ಪಿಯುಸಿ ಮುಗಿಸಿ ಸಿಇಟಿ ಪರೀಕ್ಷೆ ಬರೆದು ವೈದ್ಯಳಾಗುವ ಕನಸನ್ನು ಕಾಣುತ್ತಾ ದಿನಗಳನ್ನು ಕಳೆಯುತ್ತಲಿದ್ದೆ. ರಜೆಯಲ್ಲಿ ಅಮ್ಮನಿಗೆ ನೆರವಾಗಲೆಂದು ಇಂಗ್ಲೀಷ್ ಗ್ರಾಮರ್ ಕಲಿಸುವ ಶಾಲೆಯೊಂದರಲ್ಲಿ ಕೆಲಸ ಮಾಡಲು ಶುರು ಮಾಡಿದೆ.
ಸಿಇಟಿಯಲ್ಲಿ ಒಳ್ಳೆಯ ರಿಸಲ್ಟೇನೋ ಬಂತು ಆದರೆ ಆ ರ್ಯಾಂಕಿಗೆ ಮೆಡಿಕಲ್ ಸೀಟು ಕಟ್ಟಲು ಬೇಕಾದಷ್ಟು ಹಣವಿರಲಿಲ್ಲ. ಬ್ಯಾಂಕಿನಲ್ಲಿ ಸಾಲ ಎತ್ತಲು ಏನನ್ನಾದರೂ ಅಡವಿಡಲೇ ಬೇಕಲ್ಲವೇ? ನಮ್ಮ ಬಳಿ ಹೇಳಿಕೊಳ್ಳುವಂಥದ್ದೇನೂ ಇರಲಿಲ್ಲ. ಪ್ರತಿ ದಿನ ಗ್ರಾಮರ್ ಕಲಿಸುವ ಶಾಲೆಯ ಸೈಬರಿನಲ್ಲಿ ಕುಳಿತು ದಿನ ದಿನಕ್ಕೆ ಕರಗುತ್ತಿದ್ದ ಮೆಡಿಕಲ್ ಸೀಟುಗಳನ್ನು, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ಲಾಟ್ ಫಾರಂ ಬಿಟ್ಟು ಹೊರಡುವ ಬಸ್ಸುಗಳನ್ನು ನೋಡಿದ ಹಾಗೆ ನೋಡುತ್ತಾ ಕುಳಿತಿದ್ದಾಗ ನಿನ್ನ ತಂಗಿಗೆ ನನ್ನ ನೆನಪಾದದ್ದು. ನನ್ನ ಮನೆಯ ಸ್ಥಿತಿಯನ್ನು ಹೇಳಿಕೊಂಡು ಸಮಾಧಾನ ಪಡೆಯಲು ನಾನು ಆಯ್ದುಕೊಂಡದ್ದು ತರಗತಿಯಲ್ಲಿನ ಮೂವತ್ತು ಮಂದಿ ಹುಡುಗಿಯರಲ್ಲಿ ನಿನ್ನ ತಂಗಿಯನ್ನೇ. ಆಕೆಯಲ್ಲಿನ ಮುಗ್ಧತೆ, ಅಪಾರ ಸಹಾನುಭೂತಿ ಹಾಗೂ ಆ ವಯಸ್ಸಿನಲ್ಲಿ ಹುಡುಗಿಯರಿಗೆ ಸಹಜವಾಗಿ ಇರುವ ಮತ್ಸರದ ಲವಲೇಶವೂ ಇಲ್ಲಂಥ ಆಕೆಯನ್ನು ಕಂಡಾಗ ನನಗೆ ಜನುಮವಿಡೀ ಹುಡುಕುತ್ತಿದ್ದ ಗೆಳತಿ ಸಿಕ್ಕಂತಾಗಿತ್ತು. ತನ್ನ ಕಷ್ಟಗಳಲ್ಲೇ ಹೈರಾಣಾಗಿ ಹೋಗಿದ್ದ ಅಮ್ಮ, ಏನೂ ತಿಳಿಯದ, ಅರ್ಥಮಾಡಿಕೊಳ್ಳಲಾಗದ ತಮ್ಮ -ಇವರಲ್ಲಿ ನನಗೆ ಬೇಕಾದ ಭಾವನಾತ್ಮಕ ವಾತಾವರಣ ಸಿಕ್ಕದೆ ನಾನು ಭಾವನೆಗಳಿಲ್ಲದ ಸೂತ್ರದ ಬೊಂಬೆಯಂತಾಗಿ ಹೋಗಿದ್ದೆ. ಬಡವರು, ಕಷ್ಟದಲ್ಲಿರುವವರು ಸೂಕ್ಷ್ಮ ಮನಸ್ಸಿನವರಾಗಬಾರದು, ಆರ್ದ್ರತೆ, ಭಾವನಾತ್ಮಕತೆ ಎಂಬುವೆಲ್ಲಾ ಬಡವರ ಬಜೆಟ್ಟಿಗೆ ದಕ್ಕದ ಸಂಗತಿಗಳು ಎಂದು ಕಂಡುಕೊಂಡು ಕಲ್ಲು ಮನಸ್ಸಿನವಳಾಗಿದ್ದೆ. ಸುಮ ಸಿಕ್ಕ ಮೇಲೆ ನನ್ನ ಭಾವನೆಗಳಿಗೂ ಬೆಲೆಯಿದೆ ಎನ್ನಿಸತೊಡಗಿತು. ಅಂಥ ವಯಸ್ಸಿನಲ್ಲಿ ಆಕೆಯಲ್ಲಿ ತಾಯಿಯಂತಹ ವ್ಯಕ್ತಿತ್ವ ಹೇಗೆ ಬೆಳೆಯಿತು ಎಂದು ನಾನು ಆಗಾಗ ಯೋಚಿಸುತ್ತಿದ್ದೆ.
ನನ್ನ ಕೌನ್ಸೆಲಿಂಗಿಗೆ ಮೂರು ದಿನಗಳಿವೆ ಎಂದಾಗ ಅಮ್ಮ ಅಲ್ಲಿ ಇಲ್ಲಿ ಕೈಲಾದಲ್ಲೆಲ್ಲಾ ಪ್ರಯತ್ನಿಸಿ ಫೀಸು ಕಟ್ಟುವುದಕ್ಕೆ ಬೇಕಾವ ಹಣವನ್ನು ಹೊಂದಿಸುವ ಪ್ರಯತ್ನ ಕೈ ಬಿಟ್ಟಿದ್ದಳು. ಆಕೆ ಅದೆಷ್ಟೇ ಕಷ್ಟ ಪಟ್ಟರೂ ಫೀಸಿಗೆ ಬೇಕಾದ ದುಡ್ಡಿನ ಅರ್ಧ ಭಾಗವೂ ಸೇರಿರಲಿಲ್ಲ. ಇನ್ನು ಮೆಡಿಸಿನ್ ಮಾಡುವುದೆಂದರೆ ಸುಮ್ಮನೆಯಲ್ಲ, ಕಾಲೇಜು ಫೀಸಿನ ಜೊತೆಗೆ ದೊಡ್ಡ ದೊಡ್ಡ ಪುಸ್ತಕಗಳು.. ಇತರ ಖರ್ಚುಗಳು… ಸರಿ ಡಾಕ್ಟರಾಗಬೇಕೆಂಬ ಗುರಿಗೆ ರಾತ್ರಿಯ ಕನಸಿನಲ್ಲಿ ಬರುವ ಆದೇಶವನ್ನು ಕೊಟ್ಟು ಇದ್ದ ದುಡ್ಡಿನಲ್ಲಿ ಸಿಕ್ಕುವ ವಿದ್ಯಾಭ್ಯಾಸವನ್ನು ಪಡೆದರಾಯಿತು ಎಂದು ತೀರ್ಮಾನಿಸಿದ್ದೆ. ನನ್ನ ಕನಸನ್ನು ನನಸಾಗಿಸಿಕೊಳ್ಳಲು ಬೇಕಾದ ನೆರವು ನೀಡಲಾಗದ ಅಪ್ಪ-ಅಮ್ಮನ ಮೇಲೆ ಸಿಟ್ಟು ಉಕ್ಕಿ ಉಕ್ಕಿ ಬರುತ್ತಿತ್ತು. ಅಪ್ಪನಿಗೆ ಏನೂ ನಾಟವುದಿಲ್ಲ, ಅಮ್ಮನಿಗೆ ಏನೂ ಮಾಡಲಾಗದ ಅಸಹಾಯಕತೆ. ಇನ್ನು ತಮ್ಮನ ವಿದ್ಯಾಭ್ಯಾಸವೂ ನಡೆಯಬೇಕು. ಬಡತನವೆಂಬ ರಕ್ಕಸ ಹೇಗೆ ಕನಸುಗಳೆಂಬ ಅಬೋಧ ಶಿಶುಗಳನ್ನು ಹೊಸಕಿ ಹಾಕುತ್ತದೆ ಎಂದು ರಸವತ್ತಾಗಿ ಕಥೆ ಹೇಳುತ್ತಾ ತಮ್ಮನು ಮಲಗುತ್ತಿದ್ದ ಹಾಗೆ ಆ ಕಥೆಯ ವಿಸ್ತರಣೆಯನ್ನು ಕನಸಲ್ಲಿ ಎಳೆದುಕೊಂಡು ಆ ರಕ್ಕಸನನ್ನು ಸದೆಬಡಿದು ಮೇಲಕ್ಕೇಳುವ ಸಾಹಸ ಮೆರೆದು ಬೆಳಗಾಗೆದ್ದು ಮುಸುರೆ ತಿಕ್ಕುವುದಕ್ಕೆ ಸಿದ್ಧಳಾಗುತ್ತಿದ್ದೆ.
ಅಂದು ವಿಪರೀತ ದುಃಖದಲ್ಲಿದ್ದೆ. ಎರಡು ದಿನ ಕಳೆದರೆ ಸಿಇಟಿ ಕೌನ್ಸೆಲಿಂಗು. ನನ್ನ ಪ್ರತಿಭೆಗೆಯನ್ನು ಪರೀಕ್ಷಿಸಿ ನನಗೆ ನ್ಯಾಯಯುತವಾಗಿ ದಕ್ಕಬೇಕಾದ ವಿದ್ಯಾಭ್ಯಾಸವನ್ನು ಕೊಡುವ ದಿನ. ನನ್ನದು ಮಾತ್ರ, ಯಾವ ಅರ್ಹತೆಯೂ ಇಲ್ಲದಿದ್ದರೂ ಅಪ್ಪನ ಸಂಪಾದನೆ ಎಂಬ ‘ಪ್ರಭಾವಿ ವ್ಯಕ್ತಿ’ಯ ಮುಖ ತೋರಿಸಿ ಬೇಕಾದ ವಿದ್ಯಾಭಾಸದ ಹಕ್ಕನ್ನು ಪಡೆಯುವವರನ್ನು ಅಸಹನೆಯಿಂದ ನೋಡುತ್ತಾ ಕೂರುವ ಕರ್ಮ. ಇನ್ನು ನನಗೆ ಬದುಕಿಡೀ ಇದೇ ವೃತ್ತಿಯಾಗಬಹುದು ಎಂದು ಆಲೋಚಿಸುತ್ತಾ, ಮುಂದೆ ಎಷ್ಟೇ ಕಷ್ಟವಾದರೂ ನನ್ನ ಮಗಳಿಗೆ ಮೆಡಿಕಲ್ ಓದಿಸಬೇಕು ಎಂದು ಯೋಜನೆ ಹಾಕುತ್ತಾ, ಅಪ್ಪನಂತಲ್ಲದ ಗಂಡನನ್ನು ವರಿಸುವ ಕನಸು ಕಾಣುತ್ತಾ ಹೊಸ್ತಿಲ ಮೇಲೆ ಕುಳಿತಿದ್ದೆ. ಮೆಲ್ಲಗೆ ಎದುರು ನಿಂತ ನೆರಳು, ‘ಹಾಯ್, ರಂಜು…’ ಎಂದಂತಾಯ್ತು. ತಲೆ ಎತ್ತಿ ನೋಡಿದೆ, ಸುಮ! ಅಂದು ತಾನೆ ಆಕೆ ಕೌನ್ಸೆಲಿಂಗ್ ಮುಗಿಸಿಕೊಂಡು ತನಗೆ ಸಿಕ್ಕ ಮೆಡಿಕಲ್ ಸೀಟಿನ ಆರ್ಡರ್ ಕಾಪಿ, ಒಂದು ಪೊಟ್ಟಣದಲ್ಲಿ ಸ್ವೀಟು ಹಿಡಿದು ಬಂದಿದ್ದಳು. ಕಾಟಾಚಾರದ ಹೆಲೋ, ಹಾಯ್ಗಳು ಮುಗಿದ ಮೇಲೆ ಆಕೆ ನನ್ನ ಕೌನ್ಸೆಲಿಂಗಿಗೆ ಡಿಡಿ ಮಾಡಿಸಿಯಾಯ್ತಾ ಎಂದು ಕೇಳಿದಳು. ನನ್ನ ಪರಿಸ್ಥಿತಿಯ ಅರಿವಿದ್ದ ಆಕೆಗೆ ವಿವರಿಸಿ ಹೇಳುವುದು ಕಷ್ಟವಾಗಲಿಲ್ಲ. ಎರಡು ಕ್ಷಣ ಸುಮ್ಮನಿದ್ದ ಆಕೆ ಒಡನೆಯೇ ಸರಬರನೆ ತನ್ನ ಪುಟ್ಟ ವ್ಯಾನಿಟಿ ಬ್ಯಾಗಿನಿಂದ ಚೆಂದದ ಮೊಬೈಲ್ ತೆಗೆದುಕೊಂಡು ಕೊಂಚ ಮರೆಗೆ ಹೋಗಿ ಯಾರಿಗೋ ಕರೆ ಮಾಡಿದಳು. ಎರಡು ನಿಮಿಷ ಮಾತಾಡಿದವಳೇ ನನ್ನ ಬಳಿಗೆ ಬಂದು ಮೊಬೈಲ್ ಕೈಯಲ್ಲಿ ತುರುಕಿ, ‘ನಮ್ಮಣ್ಣ… ಮಾತಾಡಬೇಕಂತೆ’ ಅಂದ್ಳು.
ನಾನು ಗಾಬರಿಯಾಗಿ ಏನು ಮಾತಾಡುವುದು ಎಂದು ತೋಚದೆ, ಒಣಗಿದ ಗಂಟಲಿನಿಂದ ಪ್ರಯಾಸ ಪಟ್ಟು ಹೊರಡಿಸಲು ಸಾಧ್ಯವಾದದ್ದು ‘ಹೆಲೋ’ ಎಂಬಂತೆ ಕೇಳಿಸುವ ಶಬ್ಧವನ್ನು ಮಾತ್ರ. ‘ಹ್ಹ ಹೆಲೋ ರಂಜಿತಾನಾ? ನನ್ನ ಹೆಸರು ಸುನೀಲ್. ನಿಮ್ಮಮ್ಮ ಇದ್ದಾರಾ ಮನೆಯಲ್ಲಿ..’ ಕೇಳಿದ್ದೆ ನೀನು. ಮೊದಲ ಮಾತಲ್ಲೇ ನಮ್ಮಿಬ್ಬರ ನಡುವಿನ ಅಪರಿಚಿತತೆಯ ಗೋಡೆಯನ್ನು ಕೆಡವಿ ಹಾಕಿದ್ದೆ. ನಾಲ್ಕು ನಿಮಿಷ ಮಾತಾಡುವಷ್ಟರಲ್ಲಿ ಜಗತ್ತಿನಲ್ಲಿ ನೀನೊಬ್ಬನಿದ್ದರೆ ನನಗೆ ಯಾವ ಅಂಜಿಕೆಯೂ ಇಲ್ಲ ಎನ್ನುವ ಧೈರ್ಯವನ್ನು ಮೂಡಿಸಿಬಿಟ್ಟಿದ್ದೆ.
(ಮುಂದಿನ ಸಂಚಿಕೆಗೆ)
- In: ಮಾತುಕತೆ
- 2 Comments
ಅಕ್ಟೋಬರ್ ತಿಂಗಳ ‘ಸಡಗರ’ ಪತ್ರಿಕೆಯ ತಯಾರಿಯಲ್ಲಿ ಮುಳುಗಿಹೋಗಿದ್ದೇನೆ. ಪತ್ರಿಕೆಯು ಸರಿಯಾದ ಸಮಯಕ್ಕೆ ಪ್ರಕಟವಾಗುವುದಿಲ್ಲ ಎಂಬುದು ನಮ್ಮ ಮೇಲಿರುವ ಆರೋಪಗಳಲ್ಲಿ ಬಹಳ ಪ್ರಮುಖವಾದದ್ದು. ಈ ಆರೋಪ ಕೇಳಿಬರದ ಹಾಗೆ ನಾವು ಕೆಲಸ ಮಾಡಬೇಕು ಎಂಬುದು ಒಂದು ಬಗೆಯ ಚಿಂತನೆಯಾದರೂ, ಪತ್ರಿಕೆಯು ಸಮಯಕ್ಕೆ ಸರಿಯಾಗಿ ಬರದದ್ದನ್ನು ಕಂಡು ಬೇಸರಗೊಳ್ಳುವ, ಅದರ ದಾರಿ ಕಾಯುತ್ತಾ ಗೊಣಗುವವರ ಸಂಖ್ಯೆ ಇಷ್ಟು ದೊಡ್ಡದಿದೆಯಲ್ಲ ಎಂದು ಸಂತೋಷ ಪಡುವುದು ನಮಗೆ ಇಷ್ಟವಾದದ್ದು. ಹಾಗಂತ ನಾವು ಸಂಪೂರ್ಣ ಬೇಜವಾಬ್ದಾರಿಯ ದಾರಿ ಹಿಡಿಯುತ್ತೇವೆ ಎಂದುಕೊಳ್ಳಬೇಡಿ. ನಮ್ಮ ಮಿತಿಯಲ್ಲೇ ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮ ನಿರೀಕ್ಷೆಯನ್ನು ಮುಟ್ಟಲು ಪ್ರಯತ್ನಿಸುತ್ತೇವೆ.
ಪ್ರತಿ ತಿಂಗಳು ನಮ್ಮಿಡೀ ತಂಡ ಒಂದು ವಿಷಯವನ್ನು ಧೇನಿಸಬೇಕು. ಅದರ ನಾನಾ ಮಜಲುಗಳನ್ನು ಕೂಲಂಕುಶವಾಗಿ ಪರಿಶೀಲಿಸಬೇಕು. ಆ ವಿಷಯದ ಬಗೆಗಿನ ನಮ್ಮ-ನಮ್ಮ ಗ್ರಹಿಕೆಗಳನ್ನು ಪುನರ್ ಪರಿಶೀಲಿಸಿಕೊಳ್ಳಬೇಕು. ಹೊಸ ಆಯಾಮಗಳನ್ನು ಕಂಡುಕೊಳ್ಳಬೇಕು. ನಮ್ಮ ಚಿಂತನೆಯಲ್ಲಿನ, ಗ್ರಹಿಕೆಯಲ್ಲಿನ ಲೋಪಗಳನ್ನು ತಿಳಿದು ತಿದ್ದಿಕೊಳ್ಳಬೇಕು. ಈ ಇಡೀ ಪ್ರಕ್ರಿಯೆಯಲ್ಲಿ ನಮ್ಮ ಓದುಗರನ್ನೂ ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಮುಖಪುಟದ ವಿಷಯವನ್ನು ಆಯ್ದುಕೊಳ್ಳುತ್ತೇವೆ. ಈ ಹಿಂದಿನ ಸಂಚಿಕೆಗಳಲ್ಲಿ ಸ್ನೇಹ, ಪ್ರೀತಿ, ಸ್ವಾತಂತ್ರ್ಯದ ಬಗೆಗೆ ಮುಖಪುಟವನ್ನು ರೂಪಿಸಿ ಲೇಖನಗಳನ್ನು ಪ್ರಕಟಿಸಿದ್ದೇವು. ಅಕ್ಟೋಬರ್ ಸಂಚಿಕೆಗಾಗಿ ನಾವು ಆಯ್ಕೆ ಮಾಡಿಕೊಂಡಿರುವ ವಿಷಯ: ಗೂಡಿನಿಂದ ದೂರಾದ ಹಕ್ಕಿಗಳು.
ಓದಿಗಾಗಿ, ನೌಕರಿಗಾಗಿ, ಯಶಸ್ಸಿಗಾಗಿ, ಬಾಳ ಸಂಗಾತಿಗಾಗಿ, ಆಧ್ಯಾತ್ಮಕ್ಕಾಗಿ, ಸುಖಕ್ಕಾಗಿ, ಶಿಕ್ಷೆಗಾಗಿ, ಸ್ವಾತಂತ್ರ್ಯಕ್ಕಾಗಿ, ವಿಧಿಯ ವಿಲಾಸದಿಂದಾಗಿ ಮನೆಯಿಂದ, ಮನೆಯವರಿಂದ ದೂರಾದವರ ಬಗೆಗಿನ ಮಾತುಕತೆಯೇ ಈ ಸಂಚಿಕೆಯ ಫೋಕಸ್. ಬುದ್ಧಿ ಬೆಳೆಯುವ ಮೊದಲೇ ಓದುವುದಕ್ಕೆಂದು ದೂರದ ರೆಸಿಡೆನ್ಷಿಯಲ್ ಸ್ಕೂಲುಗಳಿಗೆ ಹಾಕಲ್ಪಟ್ಟ ಮಕ್ಕಳಿಂದ ಹಿಡಿದು ಮನೆ ಭವ ಬಂಧನ ಎಂದು ಬಗೆದು ಮೋಕ್ಷಕ್ಕಾಗಿ ಹಿಮಾಲಯಕ್ಕೆ ಹೊರಟು ನಿಲ್ಲುವ ಸರ್ವಪರಿತ್ಯಾಗಿಯವರೆಗೆ ಎಲ್ಲರನ್ನೂ ಕೂರಿಸಿಕೊಂಡು ಮಾತಾಡುವುದು, ಅವರಂತರಾಳವನ್ನು ಕೆದಕುವುದು, ಪ್ರಶ್ನೆಗಳನ್ನು ಎಸೆಯುವುದು, ಸಲಹೆ ಪಡೆಯುವುದು, ಕೆಲವು ಸಲಹೆ ಕೊಡುವುದು – ಇದು ಈ ಸಂಚಿಕೆಯಲ್ಲಿನ ಮುಖಪುಟದ ಬರಹಗಳಲ್ಲಿ ನಾವು ನಡೆಸುವ ಪ್ರಯತ್ನಗಳು.
ಇಷ್ಟಲ್ಲದೇ ನಮ್ಮ ಪತ್ರಿಕೆಯ ಮೂಲಗುಣವಾದ ‘ಅಶಿಸ್ತು’ ಹಾಗೂ ಅದರ ಫಲವಾಗಿ ಆಗುವ ಅನೇಕಾನೇಕ ಬದಲಾವಣೆಗಳು, ಹೊಸ ಪ್ರಯತ್ನಗಳು ನಿಮ್ಮನ್ನು ಸೆಳೆಯಲಿವೆ ಎಂಬುದು ನಮ್ಮ ನಂಬಿಕೆ.
-ಸಂ
(‘ಸಡಗರ’ಕ್ಕೆ ಚಂದಾದಾರರಾಗಿ ನಮ್ಮ ಪ್ರಯತ್ನವನ್ನು ಜೀವಂತವಾಗಿರಿಸಲು ಸಹಾಯ ಮಾಡಿ)
ಪ್ರೀತಿಯ ಸಿಗರೇಟೇ,
ಹೇಗಿರುವೆ… ನಿನ್ನನ್ನು ಕಂಡು ತುಂಬಾ ದಿನಗಳಾದವು ಅಲ್ಲವಾ? ನಿನಗೆ ನನ್ನ ನೆನಪಿದೆಯೋ ಇಲ್ಲವೋ ಕಾಣೆ. ಆದರೆ ನಾನು ಮಾತ್ರ ಕಳೆದ ಹದಿನೈದೋ, ಇಪ್ಪತ್ತೋ ದಿನಗಳಿಂದ ನಿನ್ನನ್ನು ನೆನದು ನೆನೆದು ವಿಪರೀತ ಹಿಂಸೆಯನ್ನು ಅನುಭವಿಸಿದ್ದೇನೆ. ಮರೆವು ಇಷ್ಟು ದುಬಾರಿ ಎಂತ ನನಗೆ ಎಂದೂ ಅನಿಸಿದ್ದೇ ಇಲ್ಲ. ಪರೀಕ್ಷೆಗಾಗಿ ಓದಿದ್ದ ವಿಷಯಗಳನ್ನು ಬಿಡು, ಉಪನಯನ ಮಾಡಿಸಿದ ಮೂರನೆಯ ದಿನಕ್ಕೆ ಅಪ್ಪ ಆಕ್ಸಿಡೆಂಟಿನಲ್ಲಿ ಉಸಿರುಬಿಟ್ಟ ದಿನದ ನೆನಪು ಮಸುಕು ಮಸುಕಾಗಿಯಾದರೂ ನೆನಪಿಲ್ಲ. ಆದರೆ ನಿನ್ನ ಮರೆಯುವುದಕ್ಕೆ ನಾನು ಪಟ್ಟ ಪಾಡಿದೆಯಲ್ಲ, ಅದನ್ನ ಹೇಗೆ ವಿವರಿಸಲಿ? ನಿನ್ನ ನೆನಪು ಬರೀ ನನ್ನ ಮನಸ್ಸಿಗೆ ಸಂಬಂಧಿಸಿದ್ದಾಗಿದ್ದರೆ ಮನಸ್ಸಿನ ಮೇಲೆ ಹೇರಲ್ಪಡುವ ಸಾವಿರಾರು ಸಂಗತಿಗಳಲ್ಲಿ ಅದೂ ಕಳೆದುಹೋಗಿಬಿಡುತ್ತಿತ್ತು. ಆದರೆ ನಿನ್ನ ನೆನಪಿಗೆ ನನ್ನ ದೇಹದ ನರ-ನರವೂ, ಶ್ವಾಸಕೋಶದ ಪ್ರತಿ ಗಾಳಿ ಚೀಲವೂ ತುಡಿಯುತ್ತಿದ್ದುದರಿಂದ ನಿನ್ನ ಮರೆಯುವುದು ಎಂದರೆ ನನ್ನನ್ನೇ ನಾನು ನಿರಾಕರಿಸಿದಂತಾಗಿತ್ತು. ನಿನ್ನಿಂದ ದೂರವಾಗಿ ಇಷ್ಟು ದಿನ ಕಳೆದ ಮೇಲೂ ನಿನ್ನ ನೆನಪು ಅಳಿದಿಲ್ಲ. ಅದಕ್ಕೆ ಈ ಓಲೆ ನಿನಗಾಗಿ…
ನೀನು ನನಗೆ ಪರಿಚಯವಾದ ಘಳಿಗೆಯನ್ನು ಏನೆಂದು ಕರೆಯಲಿ? ಅಮೃತ ಘಳಿಗೆಯೆನ್ನಲ್ಲಾ, ದೇವರು ನನ್ನ ಬದುಕಿನಲ್ಲಿ ಮಾರ್ಕು ಮಾಡಿಟ್ಟ ಸಮಯವೆನ್ನಲಾ, ನನ್ನ ಅವನತಿಗೆ ವಿಧಿ ಇಟ್ಟುಕಳುಹಿಸಿದ್ದ ಮುಹೂರ್ತವೆನ್ನಲಾ? ನಿನ್ನ ಬಗ್ಗೆ ನನಗೇನೂ ಅಂಥಾ ಅಜ್ಞಾನವಿರಲಿಲ್ಲ. ಎತ್ತೆತ್ತಲೂ ನಿನ್ನನ್ನೇ ನೋಡುತ್ತಿದ್ದೆ. ಬೀದಿಯ ಕೊನೆಯ ಬೀಡಾ ಸ್ಟಾಲಿನ ಎದುರು ಗುಂಪು ನಿಂತ ಜನರಿಗೆ ಬೆಚ್ಚಗೆ ಕಾವು ಕೊಡುವಂತೆ ಬೆಂಕಿ ಹಾಕಿಸಿಕೊಳ್ಳುತ್ತಿದ್ದೆ. ಕಾಲೇಜಿನಲ್ಲಿ ಸಿನಿಯರುಗಳ ಎರಡು ಬೆರಳುಗಳ ಮಧ್ಯದಲ್ಲಿ ತೂರಿ, ‘ಇವರಿಗೆ ಸಿನಿಯಾರಿಟಿಯನ್ನು ಕೊಟ್ಟಿದ್ದೇ ನಾನು’ ಎಂದು ಬೀಗುತ್ತಿದ್ದೆ. ಸಿನೆಮಾ ನಟರ ತುಟಿಯಲ್ಲಿ ಕುಣಿದಾಡುತ್ತಾ ಅವರ ಸ್ಟೈಲಿಗೆ ಮೆಚ್ಚಿ ತಲೆದೂಗುತ್ತಿದ್ದೆ. ಆದರೂ ಹದಿನೆಂಟು ದಾಟುವವರೆಗೆ ನಾನು ನಿನಗಾಗಿ ಕೈಚಾಚಿರಲಿಲ್ಲ. ಅಲ್ಲಿಯವರೆಗೆ ಸಂಯಮಿಯಾಗಿದ್ದೆ ಅಂತೇನಲ್ಲ, ಅವಕಾಶ ಸಿಕ್ಕಿರಲಿಲ್ಲ ಅಷ್ಟೇ. ಮುಂದೆಂದಾದರೂ ಬೇರೆಯವರಿಗೆ ನನ್ನ ನಿನ್ನ ಚರಿತ್ರೆಯನ್ನು ಹೇಳುವಾಗ ನಾನು ಹದಿನೆಂಟು ದಾಟುವವರೆಗೆ ನಿನ್ನನ್ನು ದ್ವೇಷಿಸುತ್ತಿದ್ದೆ, ನೀನು ಎಂದರೆ ಅಲರ್ಜಿ ಎಂದು ಮೂಗು ಮುರಿಯುತ್ತಿದ್ದೆ. ನಿನ್ನ ಬಳಗದವರೊಂದಿಗೆ ಚೆಲ್ಲಾಟವಾಡುತ್ತಾ ನಿಂತವರನ್ನು ಕಂಡು ರೇಗಿಕೊಳ್ಳುತ್ತಿದ್ದೆ ಎಂದೆಲ್ಲಾ ಹೇಳಬಹುದೇನೋ, ಆದರೆ ನಿನಗೆ ನನ್ನ ಅಂತರಂಗ ತಿಳಿದಿಲ್ಲವೇ? ನಿನ್ನಲ್ಲೇಕೆ ಮುಚ್ಚು ಮರೆ.
ಅದೊಂದು ದಿನ ವಿಪರೀತ ತಲೆಬಿಸಿಯಾಗಿತ್ತು. ನಾಲ್ಕಾರು ದಿನಗಳಿಂದ ಕಾಲೇಜಿಗೆ ಹೋಗಿರಲಿಲ್ಲ. ಪ್ರಿನ್ಸಿಪಾಲರು ಬಂದು ನೋಡಲು ಹೇಳಿದ್ದರು. ಹೋಟೆಲಿನ ಕೌಂಟರಿನಲ್ಲಿ ಕುಳಿತವನಿಗೆ ಮುಖ ತೋರಿಸಬೇಕಾಗುತ್ತದೆ ಎಂದು ಹೊಟ್ಟೆ ಹಸಿದಿದ್ದರೂ ಹೋಟೆಲಿಗೆ ಹೋಗದ ಮಖೇಡಿಯಾದ ನನಗೆ ಪ್ರಿನ್ಸಿಪಾಲರನ್ನು ಏಕಾಂಗಿಯಾಗಿ ಭೇಟಿಯಾಗುವುದು ಭಯ ಹುಟ್ಟಿಸಿತ್ತು. ಬೇರಾವ ಸಂಗತಿಗೂ ಗಮನ ಕೊಡಲಾಗದ ಹಾಗೆ ಆ ಭಯ ನನ್ನ, ಹಿಂಜರಿಕೆ ನನ್ನನ್ನು ಆವರಿಸಿತ್ತು. ಇಡೀ ಸಂಜೆ ನಾನು ಪ್ರಿನ್ಸಿಪಾಲರ ಕೊಠಡಿಗೆ ಹೋದಂತೆ, ಅವರೆದುರು ಧೈರ್ಯವಾಗಿ ಮಾತಾಡಿದಂತೆ, ನನ್ನ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದಂತೆ ಕಲ್ಪಿಸಿಕೊಂಡು – ಹಾಗೆ ಮಾಡುವ ಧೈರ್ಯವಿದೆಯೇ ಎಂದು ಯೋಚಿಸಿ ಕಂಗಾಲಾಗಿದ್ದೆ. ರೂಮಿನಲ್ಲಿ ಕೂತರೆ ತಲೆ ಒಡೆದು ನೂರು ಚೂರಾದೀತು ಅನ್ನಿಸಿ ಹೊರಕ್ಕೆ ಜಿಗಿದೆ. ರಸ್ತೆಯ ಮೇಲೆ ಓಡಾಡುವ ಪ್ರತಿ ಮುಖದಲ್ಲೂ ನನ್ನೆಡೆಗೆ ತಿರಸ್ಕಾರ ಕಂಡಂತಾಗಿ ದಿಗಿಲಾಯಿತು. ಟೀ ಅಂಗಡಿಯ ಬಳಿ ನಿಂತು ಅರ್ಧ ಕಪ್ ಟೀ ಬೇಡಿದೆ. ಆತ ಡಿಕಾಕ್ಷನ್ನಿಗೆ ಹಾಲು ಬೆರೆಸುತ್ತಾ ಸಮಯ ದೂಡುತ್ತಿರುವಾಗ ಆಕಸ್ಮಿಕವಾಗಿ ನೀನು ಕಣ್ಣಿಗೆ ಬಿದ್ದೆ. ಅದೇನನ್ನಿಸಿತೋ, ಒಮ್ಮೆ ನಿನ್ನ ಸಂಗಾತವನ್ನು ಅನುಭವಿಸಬೇಕು ಎಂಬ ಹಂಬಲ ಹುಟ್ಟಿಕೊಂಡುಬಿಟ್ಟಿತು. ನಿನ್ನ ಸನ್ನಿಧಿಯಲ್ಲಿ ನನ್ನೆಲ್ಲಾ ದುಗುಡ, ಆತಂಕಗಳು ಕಳೆದು ನನ್ನ ಬದುಕು ಬಂಗಾರದ್ದಾಗಿ ಬಿಡುತ್ತದೆ ಅನ್ನಿಸಿತು. ನಿನ್ನ ಬಗ್ಗೆ ಅವರಿವರು ಹೇಳಿದ್ದು, ಅಲ್ಲಲ್ಲಿ ಓದಿದ್ದು ಎಲ್ಲಾ ಅಪರೂಪಕ್ಕೊಮ್ಮೆಮ್ಮೆ ನಿನ್ನೆಡೆಗೆ ಹುಟ್ಟಿಕೊಂಡಿದ್ದ ಬೆರಗು, ಆಸಕ್ತಿ ಎಲ್ಲಾ ಸೇರಿ ಕೈ ಎಳೆದು ನಿನ್ನ ಕೈಕುಲುಕಿಸಿತು. ನಿನ್ನ ಪ್ರೀತಿಯಲ್ಲೂ ಅದೇಷ್ಟೆಷ್ಟೋ ವಿಧಗಳಿವೆ ಎಂಬುದನ್ನು ಟೀ ಅಂಗಡಿಯವ ಟೀ ಬಸಿದು ಕೊಟ್ಟು ನನಗ್ಯಾವ ಟೈಪು ಬೇಕು ಅಂದಾಗಲೇ ತಿಳಿದದ್ದು. ಚಿಕ್ಕದಾಗಿದ್ದ ನಿನ್ನ ಒಲವನ್ನು ಆಯ್ದುಕೊಂಡೆ. ಕಿಂಗ್ ಸೈಜಿನಲ್ಲೂ ನಿನ್ನ ಒಲವು ದೊರೆಯುತ್ತದೆ ಎಂದು ಅನಂತರ ಗೆಳೆಯರಿಂದ ತಿಳೀತು.
ನಿನ್ನ ಕೋಮಲವಾದ ಫಿಲ್ಟರನ್ನು ತುಟಿಗಳಿಗೆ ಚುಂಬಿಸುತ್ತಿರುವಾಗ ನಡುಗುತ್ತಿದ್ದ ನನ್ನ ತುಟಿಗಳನ್ನು ಯಾರಾದರೂ ನೋಡುತ್ತಿದ್ದಾರಾ ಎಂದು ಆತಂಕವಾಗಿದ್ದನ್ನು ನೀನು ಗಮನಿಸಿದ್ದೆಯಾ? ಕಡ್ಡಿ ಗೀರಿ ನಿನ್ನ ಮೂತಿಗೆ ಕಿಚ್ಚು ಹೊತ್ತಿಸಿ ಅರೆಕ್ಷಣ ಮುಂದೇನು ಮಾಡಬೇಕು ಎನ್ನುವುದು ತೋಚದೆ ಹಾಗೇ ನಿಂತಿದ್ದೆ. ಯಾರಾದರೂ ನೋಡಿಬಿಟ್ಟರೆ ಎಂಬ ಆತಂಕಕ್ಕಿಂತ ನಿನ್ನೆದುರು ನಾನು ಸೋತು ಬಿಟ್ಟರೆ ಎಂಬ ಭಯ ಕಾಡುತ್ತಿತ್ತು. ನಾನು ನಾಲಾಯಕ್ಕು ಅಂತ ನೀನು ಕೈ ಬಿಟ್ಟರೆ ಎಂಬ ಅಭದ್ರತೆಯು ಕಾಡುತ್ತಿತ್ತು. ಇದೇ ದುಗುಡದಲ್ಲಿ ಉಸಿರಾಡುವುದನ್ನೂ ಮರೆತವನಂತೆ ನಿಂತಿದ್ದ ನಾನು ಒಮ್ಮೆಗೇ ಬಾಯಲ್ಲಿ ಗಾಳಿಯೆಳೆದುಕೊಂಡೆ, ಕಾದ ಸೀಸವನ್ನು ಬಾಯ ಮೂಲಕ ಎದೆಯ ಗೂಡಿಗೆ ಸುರಿದಂತಾಗಿ ಕೆಮ್ಮು ಒತ್ತರಿಸಿ ಬಂತು. ಕಣ್ಣಲ್ಲಿ ನೀರು ಚಿಮ್ಮಿ ‘ಕವ್ವು ಕವ್ವು’ ಎಂದು ಕೆಮ್ಮುತ್ತಾ ಯಾರಿಗೂ ಕಾಣದ ಮೂಲೆಯೊಂದನ್ನು ತಲುಪಿಕೊಂಡೆ. ಎದೆಯ ಬಣವೆಗೆ ಬೆಂಕಿ ಬಿದ್ದಿದೆ ಎಂಬ ವರ್ತಮಾನವನ್ನು ಹೃದಯದ ಗಂಟೆ ಢಣ ಢಣನೆ ಬಾರಿಸುವ ಮೂಲಕ ದೇಹ ತಿಳಿಸುತ್ತಿತ್ತು. ಎದೆಯನ್ನು ಹೊಕ್ಕಿದ್ದ ನಿನ್ನ ಗಂಧ ಕೆಮ್ಮಿದಾಗೆಲ್ಲಾ ಮೂಗು, ಬಾಯೊಳಗಿಂದ ಇಷ್ಟಿಷ್ಟೇ ಹೊರ ಬರುತ್ತಿತ್ತು. ಪಕ್ಕೆಯನ್ನು ಒದಾಗಲೆಲ್ಲಾ ಬೈಕು ಕೆಮ್ಮುವಾಗ ಹೊಮ್ಮುವ ಹೊಗೆಯ ಹಾಗೆ!
ಹೇಗೋ ಸಾವರಿಸಿಕೊಂಡು ನಿನನ್ನು ಇಡಿಯಾಗಿ ಹೀರಿಕೊಳ್ಳುವಷ್ಟರಲ್ಲಿ ಟೀ ತಣ್ಣಗಾಗಿತ್ತು. ನನ್ನ ಆತಂಕ, ತಳಮಳದಲ್ಲಿ ನಿನ್ನ ಫಿಲ್ಟರು ಒದ್ದೆಯಾಗಿತ್ತು. ಟೀ ಅಂಗಡಿಯ ಮುದುಕನಿಗೆ ಇನ್ನೊಂದು ಟೀ ಬಸಿದುಕೊಡುವಂತೆ ಹೇಳಿ ಮತ್ತೆ ನಿನ್ನನ್ನು ಬರಸೆಳೆದೆ. ನಳನಳಿಸುವ ಹೊಸ ಫಿಲ್ಟರು, ಘಮಘಮಿಸುವ ಬಿಳಿಯ ನಳಿಕೆ. ಮೊದಲ ಚುಂಬನದಲ್ಲಿ ಆದ ಅವಾಂತರಗಳು ಈಗಾಗಲಿಲ್ಲ. ನಾನು ಬಲು ನಾಜೂಕಾಗಿ, ನಯವಾಗಿ ನಿನ್ನನ್ನು ಹ್ಯಾಂಡಲ್ ಮಾಡಿದೆ. ನೀನೂ ಕೂಡ ನನ್ನ ಮೊದಲ ಮಿಲನದ ಒರಟೊರಟು ಬಿಹೇವಿಯರನ್ನು ಮರೆತು ಲವಲವಿಕೆಯಿಂದ ಬೆರಳುಗಳ ಮಧ್ಯೆ ಒರಗಿಕೊಂಡಿದ್ದೆ. ತಾತ ಬಸಿದುಕೊಟ್ಟ ಟೀಯಲ್ಲಿ ಒಂದೇ ಒಂದು ಗುಟುಕು ಹೀರುವುದು, ಎದೆಯ ಮೂಲೆ ಮೂಲೆ ತಲುಪುವಷ್ಟು ದೀರ್ಘವಾಗಿ ನಿನ್ನನ್ನು ಚುಂಬಿಸುವುದು, ಮತ್ತೆ ಒಂದು ಗುಟುಕು ಟೀ… ಮತ್ತೆ ನಿನ್ನ ಸುದೀರ್ಘ ಚುಂಬನ… ಅನಾಯಾಸವಾಗಿ ನನ್ನನ್ನು ಮೌನಿಯಾಗಿಸಿಬಿಟ್ಟಿದ್ದೆ ನೀನು. ಹೌದು ಆ ನಾಲ್ಕಾರು ನಿಮಿಷಗಳಲ್ಲಿ ನಾನು ಅಕ್ಷರಶಃ ಮೌನಿಯಾಗಿದ್ದೆ, ಬಾಯೂ ಬಂದ್, ಮನಸ್ಸೂ ಬಂದ್! ಯಾವ ಧ್ಯಾನದಲ್ಲೂ ಸಾಧ್ಯವಾಗದ ಮೌನವನ್ನು ಪರಿಚಯಿಸಿದ್ದೆ ನೀನು. ನಿನ್ನ ಬೀಳ್ಕೊಡುವಾಗ ನಾನು ಉನ್ಮತ್ತನಾದ ಗಂಧರ್ವನಾಗಿದ್ದೆ!
ಟೀ ಅಂಗಡಿಯ ತಾತನಿಗೆ ಚಿಲ್ಲರೆ ಎಣಿಸಿಕೊಟ್ಟು ವಾಪಸ್ಸು ಬರುವಾಗ ನಾನು ನಿರಾಳನಾಗಿದ್ದೆ. ಹಗಲಿಡೀ ಕಾಡುತ್ತಿದ್ದ ಪ್ರಿನ್ಸಿಪಾಲನ ಮುಖ ಮಾಯವಾಗಿತ್ತು. ನನ್ನ ಮಖೇಡಿತನ, ಕೀಳರಿಮೆ, ಆತಂಕಗಳು ಮನಸ್ಸಿನ ಅಂಗಳದಿಂದ ಜಾಗ ಖಾಲಿ ಮಾಡಿದ್ದವು. ಎಲ್ಲವೂ ಹಗುರಾದ ಅನುಭವ. ಲೋಕದಲ್ಲಿ ಯಾಕಿಷ್ಟು ದುಃಖವಿದೆ ಎನ್ನಿಸುವಂತೆ ಮಾಡಿದ್ದು ನೀನು ಕೊಟ್ಟ ಅನುಭೂತಿ. ರಾತ್ರಿ ಊಟವಾದೊಡನೆ ವಾರ್ಡನ್ನಿನ ಕಣ್ಣು ತಪ್ಪಿಸಿ ಬಂದು ನಿನ್ನ ತೆಕ್ಕೆಯನ್ನು ಸೇರಿದ್ದೆ. ನಿನ್ನದು ಅದೇ ಒಲುಮೆ, ಕೊಂಚವೂ ಊನವಿಲ್ಲದ ಪ್ರೀತಿ. ಸಿಕ್ಕು ಬೀಳಬಹುದೆಂಬ ಆತಂಕದಲ್ಲಿ ಹೊಡೆದುಕೊಳ್ಳುತ್ತಿದ್ದ ಎದೆಗೆ ನೀನೇ ಸಮಾಧಾನ ಹೇಳುತ್ತಿದ್ದ. ನಿನ್ನ ಪ್ರೀತಿಯ ಕಾವಿನಲ್ಲಿ ನನ್ನ ಮನಸ್ಸಿನ ಗಂಟುಗಳೆಲ್ಲಾ ಕರಗಿ ಕರಗಿ ನೀರಾದಂಥ ಭಾವ. ನಿನ್ನೊಂದಿಗಿನ ಸರಸವನ್ನು ಮುಗಿಸಿ ನೇರವಾಗಿ ಹಾಸ್ಟೆಲ್ಲಿಗೆ ನುಗ್ಗಿದರೆ ವಾರ್ಡನ್ನು ನಮ್ಮ ಗುಟ್ಟನ್ನು ತಿಳಿದುಬಿಡಬಹುದು ಎನಿಸಿ ಬೇರೆಲ್ಲಾ ಪ್ರೇಮಿಗಳು ಮಾಡುವಂತೆ ನಮ್ಮ ಮಿಲನದ ಸುಳಿವು ಅಳಿಸಿಹಾಕಲು ಎರಡು ಕ್ಲೊರೊಮಿಂಟ್ ಬಾಯಿಗೆ ಎಸೆದುಕೊಂಡು ನಡೆದೆ. ಮರುದಿನ ಬೆಳಿಗ್ಗೆ ನಿನ್ನನ್ನೊಮ್ಮೆ ಕಂಡು ಬೇಕಿದ್ದ ಸ್ಪೂರ್ತಿ, ಧೈರ್ಯವನ್ನೆಲ್ಲಾ ಪಡೆದುಕೊಂಡು ಪ್ರಿನ್ಸಿಪಾಲರ ಎದುರು ಹೋದೆ. ನನ್ನ ಪ್ರಾಮಾಣಿಕ ಕ್ಷಮಾಪಣೆಯನ್ನು ಮಾನ್ಯ ಮಾಡಿ ನನ್ನ ತಪ್ಪು ಮಾಫಿ ಮಾಡಿದರು. ಕೂಡಲೇ ನಿನಗೆ ಅದನ್ನು ತಿಳಿಸಿ ಅಪ್ಪಿ ಮುದ್ದಾಡ ಬೇಕು ಅನ್ನಿಸಿತ್ತು ಗೊತ್ತಾ?
(ಮುಂದಿನ ಸಂಚಿಕೆಗೆ)
‘ನಾನಾಗಿಯೇ ಮೇಲೆ ಬಿದ್ದು ಮಾತನಾಡಿಸಲು ಹೋದರೆ ಹುಡುಗೀರು ನನ್ನನ್ನು ಚೀಪ್ ಅಂತ ನೋಡುವುದಿಲ್ಲವಾ? ನನ್ನ ಗೆಳೆಯರನೇಕರು ಹಾಗೆ ಮಾಡುವುದನ್ನು ನೋಡಿದ್ದೇನೆ. ನನಗೇ ಅವರು ಜೊಲ್ಲು ಪಾರ್ಟಿಗಳ ಹಾಗೆ ಕಾಣಿಸಿಬಿಡುತ್ತಾರೆ. ಇನ್ನು ಹುಡುಗಿಯರು ಅವರನ್ನು ಹೇಗೆ ಕಾಣಬಹುದು ಅಲ್ಲವಾ? ಅದಕ್ಕೇ ನಾನಾಗಿ ಯಾವ ಹುಡುಗಿಯನ್ನೂ ಮಾತನಾಡಿಸುವುದಿಲ್ಲ, ಎಲ್ಲಾದರೂ ಮಾತನಾಡುವ ಅವಕಾಶ ಸಿಕ್ಕರೂ ತೀರಾ ಚುಟುಕಾಗಿ, ಎಲ್ಲೂ ನನ್ನ ಆತ್ಮಾಭಿಮಾನಕ್ಕೆ ಧಕ್ಕೆಯಾಗದ ಹಾಗೆ, ಆಕೆ ಬೇರೇನನ್ನೂ ಕಲ್ಪಿಸಿಕೊಳ್ಳದ ಹಾಗೆ, ಅಸಲಿಗೆ ಇಬ್ಬರ ನಡುವೆ ಯಾವುದಾದರೂ ಸೆಳೆತಕ್ಕೆ ಆಸ್ಪದವನ್ನೂ ಕೊಡದ ಹಾಗೆ ಮಾತನಾಡಿ ಮುಗಿಸಿಬಿಡುತ್ತೇನೆ.’ ನಾನು ನಿನ್ನೊಂದಿಗೆ ಫೋನಿನಲ್ಲಿ ಮಾತನಾಡುತ್ತಿರುವೆ ಎಂಬುದನ್ನೇ ಮರೆತವನಂತೆ, ಯಾವುದೋ ಕೌನ್ಸಿಲಿಂಗ್ ರೂಮಿನಲ್ಲಿ ಮನಃಶಾಸ್ತ್ರಜ್ಞನ ಎದುರು ಕುಳಿತು ಮಾತನಾಡಿದ ಹಾಗೆ ಪಿಸುಗುಡುತ್ತಿದ್ದೆ.
ನೀನು ನನ್ನನ್ನು ಗೇಲಿ ಮಾಡಲಿಲ್ಲ. ನೀನು ಅಂಜುಬುರುಕ, ಮಖೇಡಿ ಎಂದು ಕಾಲೆಳೆಯಲಿಲ್ಲ. ‘ಹುಡುಗಿಯೊಂದಿಗೆ ಸಲುಗೆಯಲ್ಲಿ ಮಾತನಾಡಿದರೆ ಆಕೆ ನಿನ್ನನ್ನು ಚೀಪ್ ಅಂತ ತಿಳಿದಿಕೊಳ್ಳಬಹುದು ಎಂಬುದು ನಿನ್ನ ಭಯ. ಯೋಚನೆ ಮಾಡು, ನೀನೊಬ್ಬ ಹುಡುಗ, ಈ ಸೊಸೈಟಿಯಲ್ಲಿ ಹುಡುಗಿಗಿಂತ ಹೆಚ್ಚು ಸ್ವತಂತ್ರನಾದವನು. ನಿನಗೇ ಇಷ್ಟು ಆತಂಕವಿರುವಾಗ, ಯಾವ ಹುಡುಗಿ ತಾನೆ ಮೇಲೆ ಬಿದ್ದು ನಿನ್ನನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತಾಳೆ ಹೇಳು? ಒಂದು ವೇಳೆ ಆಕೆಯೇನಾದರೂ ಸ್ವಲ್ಪ ಸಲುಗೆ ತೋರಿಸಿದರೂ ಅದಕ್ಕೆ ತಪ್ಪಾದ ಅರ್ಥ ಅಂಟಿಕೊಳ್ಳುತ್ತೆ. ಹುಡುಗರಿಗೆ ಇಲ್ಲದ ಅಸಂಖ್ಯಾತ ಅದೃಶ್ಯವಾದ ಕಟ್ಟಳೆಗಳು ಹುಡುಗಿಗೆ ಇರುತ್ತವೆ ತಿಳಿದುಕೋ. ನಮ್ಮಮ್ಮ ಯಾವಾಗಲೂ ಹೇಳ್ತಾಳೆ, ‘ಹುಡುಗಿಯ ವ್ಯಕ್ತಿತ್ವ ಅನ್ನೋದು ಹೂವಿನ ಪಕಳೆಯ ಹಾಗೆ, ತಾನಾಗಿ ಮುಳ್ಳನ್ನು ಸವರಿದರೂ, ಮುಳ್ಳೇ ಬಂದು ಇರಿದರೂ ಹರಿಯುವುದು ಪಕಳೆಯ ಎದೆಯೇ’ ಅಂತ. ನಾನು ಆಗ ಆಕೆ ನನ್ನಲ್ಲಿ ಕೀಳರಿಮೆ ಬಿತ್ತುತ್ತಿದ್ದಾಳೆ ಅಂತ ಭಾವಿಸಿ ವಿರೋಧಿಸುತ್ತಿದ್ದೆ. ಕೋಪಮಾಡಿಕೊಂಡು ಕೂಗಾಡುತ್ತಿದ್ದೆ. ಆದರೆ ಅದು ವಾಸ್ತವಕ್ಕೆ ತೀರಾ ಹತ್ತಿರವಾದದ್ದು ಅಂತ ಅನ್ನಿಸುತ್ತಿದೆ…’ ಹುಡುಕಿ ಹುಡುಕಿ ನೋಡಿದರೂ ನಿನ್ನ ಮಾತಿನಲ್ಲಿ ಚೂರೂ ನಂಜು ಕಾಣಲಿಲ್ಲ. ನನ್ನ ಆತಂಕ, ತಳಮಳಗಳೆಡೆಗೆ ನಿನ್ನ ಮಾತಿನಲ್ಲಿದ್ದದ್ದು ಶುದ್ಧ ಸಹಾನುಭೂತಿ. ಬದುಕಿನಲ್ಲಿ ಹೆಚ್ಚು ವಸಂತಗಳನ್ನು ಕಂಡ ತಂದೆ ಮಗನನ್ನು ಸಂತೈಸುವಂತೆ ನೀನು ಮಾತನಾಡುತ್ತಲಿದ್ದೆ. ಗೆಳತಿಯೊಬ್ಬಳನ್ನು ಗುರುವಾಗುವ ಪರಿಯನ್ನು ನಾನು ಮೌನವಾಗಿ ಅನುಭವಿಸುತ್ತಿದ್ದೆ.
ಪ್ರತಿರಾತ್ರಿ ನಿನ್ನ ಕರೆಗಾಗಿ ನಾನು ಚಡಪಡಿಸುವುದನ್ನು ಗಮನಿಸಿ ನನಗೇ ವಿಚಿತ್ರ ಎನ್ನಿಸುತ್ತಿತ್ತು. ನಾನೇಕೆ ಹೀಗೆ ನಿನ್ನ ಗುಂಗಿನಲ್ಲಿ ಸಿಕ್ಕಿಹಾಕಿಕೊಂಡಿರುವೆ ಎಂದು ಕೇಳಿಕೊಳ್ಳುತ್ತಿದ್ದೆ. ನನ್ನ ಬುದ್ಧಿ, ‘ಎಚ್ಚರವಾಗಿರು ಗುರು, ಹುಡುಗೀರ ಸಂಗತಿ ಸ್ವಲ್ಪ ಕೇರ್ ಫುಲ್ಲಾಗಿರು. ಯಾಕೆ ಹಿಂಗೆ ನೀನು ಅವಳೊಂದಿಗೆ ಮಾತಾಡಲು, ಹರಟೆ ಹೊಡೆಯಲು ಕಾತರಿಸುತ್ತಿದ್ದೀಯ?’ ಅಂತ ಹೇಳಿದರೂ ನನ್ನ ಮನಸ್ಸು ಅದಕ್ಕೆ ಕವಡೆ ಕಾಸಿನ ಬೆಲೆಯನ್ನೂ ಕೊಡದಂತೆ, ಅಸಲಿಗೆ ಪ್ರಶ್ನೆಯೇ ಕೇಳಲಿಲ್ಲವೆನ್ನುವಂತೆ ಲಹರಿಯಲ್ಲಿರುತ್ತಿತ್ತು. ನಿನ್ನ ನಂಬರು ನನ್ನ ಮೊಬೈಲಿನ ಹಣೆಯ ಮೇಲೆ ಕುಣಿಯುತ್ತಿದ್ದ ಹಾಗೆ ನಾನು ಪುಟಿಯುವ ಹೃದಯವನ್ನು ಹೊತ್ತುಕೊಂಡು ರೂಮಿನಿಂದ ಹೊರಕ್ಕೆ ಹಾರುತ್ತಿದ್ದೆ. ಟೆರೇಸಿನ ಮೇಲೇರಿ, ಅಲ್ಲಿನ ಏಕಾಂತದಲ್ಲಿ ನಿನ್ನ ಧ್ವನಿಗೆ ಕಿವಿಯಾಗುತ್ತಿದ್ದೆ. ಎಷ್ಟೇ ಹತ್ತಿರದ ಗೆಳೆಯನೇ ಆದರೂ ಎರಡು ನಿಮಿಷ ಕಳೆಯುತ್ತಿದ್ದ ಹಾಗೆಯೇ ವಿಷಯಗಳು ಮುಗಿದು ಅಧಿಕೃತ ವಂದನಾರ್ಪಣೆಗಾಗಿ ಕಾಯುತ್ತಿರುವವನಂತೆ ಮಾತನಾಡುತ್ತಿದ್ದ ನನಗೆ ನೀನು ಸಾಮು ಕಲಿಸುವ ಗರಡಿಯ ಪೈಲ್ವಾನನ ಹಾಗೆ ಮಾತನಾಡುವ ಕಲೆಯ ಒಂದೊಂದೇ ಮಟ್ಟುಗಳನ್ನು ಕಲಿಸುತ್ತಾ ಹೋದೆ. ನಾನು ದಿನವಿಡೀ ಓದಿದ ಪುಸ್ತಕದ ಬಗ್ಗೆ, ಎಂದೋ ನೋಡಿದ್ದ ಸಿನೆಮಾದ ಬಗ್ಗೆ, ಇಬ್ಬರಿಗೂ ಇಷ್ಟವಾದ ಲೇಖಕನ ಬಗ್ಗೆ, ಟಿವಿ ಪರ್ಸನಾಲಿಟಿಯ ಬಗ್ಗೆ, ನನಗಷ್ಟೇ ಇಷ್ಟವಾದ ಓಶೋ ಬಗ್ಗೆ – ಹೀಗೆ ಮಾತೆಂಬ ಮಹಾನದಿಗೆ ಎಷ್ಟೆಲ್ಲಾ ಪಾತ್ರಗಳು ಸೃಷ್ಟಿಯಾಗುತ್ತಿದ್ದವು!
ಎರಡು ಮೂರು ತಿಂಗಳಾಗಿತ್ತು ನಾವು ಪರಿಚಯವಾಗಿ. ಆದರೆ ನಾವು ಒಬ್ಬರನ್ನೊಬ್ಬರು ನೋಡಿಯೇ ಇರಲಿಲ್ಲ. ಮೊಬೈಲಿನಲ್ಲಿ ಪರಸ್ಪರರ ಧ್ವನಿ ಪರಿಚಿತವಾಗಿದ್ದರೆ ಆರ್ಕುಟ್ಟಿನ ಆಲ್ಬಮ್ಮಿನಲ್ಲಿ ಇಬ್ಬರ ಪುಟ್ಟ ಪುಟ್ಟ ಫೋಟೊಗಳು ಮಾತಾಡಿಕೊಂಡಿದ್ದವು. ಈ ಮನುಷ್ಯನೆಂಬ ಬುದ್ಧಿವಂತ ಮೊಬೈಲು, ಇಂಟರ್ನೆಟ್ಟುಗಳನ್ನು ಕಂಡುಹಿಡಿಯದೇ ಹೋಗಿದ್ದರೆ ನಾವಿಬ್ಬರೂ ಜಗತ್ತಿನ ಒಂದೊಂದು ಮೂಲೆಯಲ್ಲಿ ಪರಿಚಯವೇ ಇಲ್ಲದವರ ಹಾಗೆ, ಬಂಧನದ ಯಾವ ಎಳೆಯೂ ಇಲ್ಲದ ಹಾಗೆ ಜೀವಮಾನವಿಡೀ ಕಳೆದುಬಿಡುತ್ತಿದ್ದೆವಲ್ಲವಾ? ಏನಾದರಾಗಲಿ ಒಮ್ಮೆ ಮುಖಾಮುಖಿಯಾಗಿ ಭೇಟಿಯಾಗಿ ನಮ್ಮ ತಂತ್ರಜ್ಞಾನದ ‘ಸಂಬಂಧ’ವನ್ನು ವೈಯಕ್ತಿಕ ಮಟ್ಟಕ್ಕೆ ವಿಸ್ತರಿಸಬೇಕು ಅಂತ ನಾನು ತೀರ್ಮಾನಿಸುವಷ್ಟರಲ್ಲಿ ನೀನು ಕೇಳಿದ್ದೆ, ‘ಎಲ್ಲಿ ಭೇಟಿಯಾಗೋಣ?’
ಮೊದಲೇ ಮಾತಾಡಿಕೊಂಡ ಜಾಗಕ್ಕೆ ಬಂದು ಅಲ್ಲಿನ ಮುಖಗಳಲ್ಲಿ ನಿನ್ನ ಆತ್ಮೀಯತೆಯನ್ನು ಹುಡುಕುತ್ತಾ ನಿಂತಿದ್ದೆ. ನೀನು ಬರುವ ಮುಂಚಿನ ಐದಾರು ನಿಮಿಷ ನನ್ನ ತಲೆಯಲ್ಲಿ ಗೊಂದಲದ ಅಲೆಗಳು ಮೊರೆತ. ನೀನು ಬಂದು ಎದುರು ನಿಂತು ‘ಹೆಲೋ!’ ಎಂದಾಗ ನಾನು ಅಕ್ಷರಶಃ ಬೆಚ್ಚಿ ಬಿದ್ದಿದ್ದೆ. ಫೋನಿನಲ್ಲಿ, g-ಣಚಿಟಞನ ಕೋಣೆಯಲ್ಲಿ ನಾವೆಷ್ಟು ಪರಿಚಿತರು, ಆತ್ಮೀಯರಾಗಿದ್ದರೂ ಧುತ್ತೆಂದು ಎದುರು ಬಂದು ನಿಂತಾಗ ನನ್ನ ಮೈ ಮನಸ್ಸುಗಳಿಗೆ ಆ ಆತ್ಮೀಯತೆಯನ್ನು ಒಪ್ಪಿಕೊಳ್ಳಲು ಕೊಂಚ ಸಮಯ ಹಿಡಿಯಿತು. ಒಬ್ಬರ ಪಕ್ಕ ಒಬ್ಬರು ಕುಳಿತು ನಾವು ತಾಸುಗಟ್ಟಲೆ ಮಾತನಾಡುತ್ತಿದ್ದರೆ ನನಗೆ ಸುತ್ತಲಿದ್ದವರ ಕಣ್ಣುಗಳಲ್ಲಿ ನಮ್ಮೆಡೆಗೆ ಪ್ರತಿಫಲಿತವಾಗುತ್ತಿದ್ದ ಭಾವದ್ದೇ ಚಿಂತೆ. ನನ್ನೊಳಗಿನ ಪ್ರಶ್ನೆಯನ್ನು ಸುತ್ತಲ ಜಗತ್ತು ಮೈಯೆಲ್ಲಾ ಬಾಯಾಗಿ ಕೇಳಿದಂತೆ ಭಾಸವಾಗುತ್ತಿತ್ತು, ಈಕೆ ನನಗೇನಾಗಬೇಕು!
ನನ್ನ ಈ ಪ್ರಶ್ನೆ ನಿನಗೆ ತಿಳಿದುಬಿಟ್ಟಿತೇನೋ ಎಂಬಂತೆ ನೀನು ಕೆಲವೇ ದಿನಗಳಲ್ಲಿ ಒಂದು ಬಾಂಬು ಸಿಡಿಸಿದೆ. ಜಿ-ಟಾಕಿಯ ಪರದೆಯ ಮೇಲೆ ನಿನ್ನ ಅಕ್ಷರಗಳು ಮೂಡುತ್ತಿದ್ದ ಹಾಗೆ ನನ್ನ ನೆಮ್ಮದಿ ಚೂರು ಚೂರಾಗುತ್ತಿತ್ತು. ‘ನನಗೊಬ್ಬ ಬಾಯ್ ಫ್ರೆಂಡ್ ಇದ್ದಾನೆ. ಕಳೆದ ಆರು ತಿಂಗಳಿಂದ ನಮ್ಮ ಅಫೇರ್ ನಡೆಯುತ್ತಿದೆ’. ಒಂದು ಕ್ಷಣ ನಾನು ದಿಗ್ಮೂಢನಾಗಿ ಕುಳಿತಿದ್ದೆ. ನೀನು ಟೈಪಿಸಿ ಕಳುಹಿಸಿದ ಈ ಸಾಲುಗಳೊಳಗೆ ಯಾವ ಭಾವವಿರಬಹುದು ಎಂದು ಯೋಚಿಸಿ ಮನಸ್ಸು ವಿಹ್ವಲಗೊಂಡಿತು. ನಾನು ನಿನ್ನೊಂದಿಗಿನ ಸಂಬಂಧದಲ್ಲಿ ಎಲ್ಲೆ ಮೀರುತ್ತಿದ್ದೇನೆ ಎಂಬುದನ್ನು ನೆನಪಿಸಲು ಹೀಗೆ ಹೇಳಿದ್ದೆಯಾ, ‘ನೋಡು, ಇದು ವಾಸ್ತವ. ನೀನು ಸುಮ್ಮನೆ ಆಶಾಗೋಪುರವನ್ನು ಕಟ್ಟಿಕೊಳ್ಳಬೇಡ’ ಎಂಬ ಎಚ್ಚರಿಕೆ ಕೊಟ್ಟೆಯಾ, ಇಲ್ಲ, ಸಹಜವಾಗಿ ನಿನ್ನ ಇತರ ವೈಯಕ್ತಿಕ ರಹಸ್ಯಗಳನ್ನು ಹೇಳಿಕೊಳ್ಳುವ ಸಲುಗೆಯಲ್ಲಿ ಇದನ್ನು ಹೇಳಿದ್ದೆಯಾ? ಗೊತ್ತಾಗಲಿಲ್ಲ. ನಾನು ನಿನ್ನೆದುರು ಚೀಪ್ ಆದ ಅನುಭವವಾಯ್ತು. ‘ಇದ್ದರೇನಂತೆ, ನನಗೂ ಒಬ್ಬಳು ಗರ್ಲ್ ಫ್ರೆಂಡ್ ಇದ್ದಾಳೆ. ಏನೀಗ’ ಎಂದು ಮುಯ್ಯಿ ತೀರಿಸಿಕೊಳ್ಳುವ ಮನಸ್ಸಾಯಿತು. ಶುಭ್ರವಾದ ನೀರಿನ ಪಾತ್ರೆಯಲ್ಲಿ ಬಿದ್ದ ಒಂದು ಹನಿ ಇಂಕು ಪಾತ್ರೆಯನ್ನೆಲ್ಲಾ ವಿಷಾನಿಲದ ಹಾಗೆ ಆವರಿಸುವಂತೆ ನಿನ್ನ ಮಾತಿನೊಳಗಿನ ಕಹಿ ನನ್ನ ಮನಸ್ಸನ್ನು ಆವರಿಸಿತು. ನಿನಗೆ ನಾನು ಏನು ಉತ್ತರಿಸಿದೆನೋ ನೆನಪಿಲ್ಲ. ಆದರೆ ಆ ಸಂಜೆಯೆಲ್ಲಾ ನಾನು ಮೋಸ ಹೋದವನಂತೆ, ಬೆನ್ನಿಗೆ ಚೂರಿ ಹಾಕಿಸಿಕೊಂಡವನಂತೆ ಹಿಂಸೆ ಅನುಭವಿಸಿದ್ದೆ. ರಾತ್ರಿಯಿಡೀ ಅವ್ಯಕ್ತವಾದ ಬೇನಯಲ್ಲಿ ನರಳಾಡಿದ್ದೆ. ‘ನಾನು ನಿನ್ನನ್ನು ಪ್ರೀತಿಸಲು ಶುರು ಮಾಡಿಬಿಟ್ಟೆನಾ?’ ಎಂದು ಕೇಳಿಕೊಳ್ಳಲೂ ಸಹ ಸಮಯವಿಲ್ಲದ ಹಾಗೆ ನೋವು ನನ್ನನ್ನು ತಿನ್ನುತ್ತಿತ್ತು.
ಬೆಳಗಾಯಿತೆಂದು ಸೂರ್ಯ ಕಿಟಕಿಯ ಮುಖಾಂತರ ವರ್ತಮಾನ ಕೊಟ್ಟಾಗ ಕಣ್ಣು ಬಿಟ್ಟೆ. ರಾತ್ರಿಯಿಡೀ ನಿದ್ದೆ ಮಾಡದಿದ್ದುದರಿಂದಲೋ ಏನೋ ಕಣ್ಣುಗಳು ಕೆಂಡದಂತೆ ಕೆಂಪಾಗಿದ್ದವು.ನಿದ್ದೆ ಬಾರದೆ ಹಾಸಿಗೆಯಲ್ಲಿ ಹೊರಳಾಡಿ ಕೂದಲು ಕೆದರಿ ಹೋಗಿತ್ತು. ನನ್ನ ಅವತಾರವನ್ನು ಕಂಡ ನನ್ನ ರೂಂ ಮೇಟು ‘ಏನೋ, ಹುಶಾರಿಲ್ಲವಾ?’ ಎಂದು ವಿಚಾರಿಸಿದ. ನಾನು ಭಗ್ನ ಪ್ರೇಮಿಯ ಹಾಗೆ, ಶಾಪಗ್ರಸ್ತ ಗಂಧರ್ವನ ಹಾಗೆ ಬೆಳಗನ್ನು ಕಳೆದೆ. ಆ ದರಿದ್ರ ಮೂಡಿನಲ್ಲಿ ಕಾಲೇಜಿಗೂ ಹೋಗಲಾಗಲಿಲ್ಲ. ಸಂಜೆಯವರೆಗೆ ಯಾವುದೋ ಆಲಸ್ಯ ಮೈಯನ್ನೆಲ್ಲಾ ಆವರಿಸಿತ್ತು. ಸಂಜೆಯಾಗುತ್ತಿದ್ದ ಹಾಗೆ ನನ್ನ ಮೊಬೈಲಿನ ಮೆಸೇಜು ಡಬ್ಬಿ ತೆಗೆದು ಕುಟ್ಟಿ ಕಳಿಸಿದ್ದು ಒಂದೇ ಸಾಲು, ‘ಐ ಲವ್ ಯೂ’. ತಲೆಯ ಮೇಲಿನ ದೊಡ್ಡ ಹೊರೆ ಇಳಿಸಿದಷ್ಟು ನಿರಾಳ. ಮರುಕ್ಷಣದಲ್ಲೇ ನಿನ್ನ ಸಂದೇಶ ಬಂದಿತ್ತು, ‘ಏನು ತಮಾಶೆ ಮಾಡ್ತಿದ್ದೀಯಾ?’ ಅಂತ ಕೇಳಿದ್ದೆ. ನಾನು ಉತ್ತರಿಸಲಿಲ್ಲ, ‘ತಲೆ ಕೆಟ್ಟಿದೆಯಾ…’ ‘…’ ‘ಇದು ಸರಿಯಲ್ಲ, ನಾನು ಯಾವತ್ತೂ ನಿನ್ನ ಹಾಗೆ ನೋಡಿಲ್ಲ..’ ಉತ್ತರಿಸುವ ಗೋಜಿಗೆ ಹೋಗಲಿಲ್ಲ.
ಮೊಬೈಲು ಮೊರೆಯತೊಡಗಿತು. ಆಕೆಯದೇ ಕರೆ. ನಾಲ್ಕು ಬಾರಿ ರಿಂಗಣಿಸಿದ ಮೇಲೆ ಎತ್ತಿಕೊಂಡೆ.
‘ಏನಾಗಿದೆ ನಿನಗೆ? ಯಾಕೆ ಹಿಂಗೆ ಮೆಸೇಜ್ ಮಾಡಿದೆ?’
‘ನಾನು ನಿನ್ನ ಪ್ರೀತಿಸ್ತಿದ್ದೀನಿ’
‘ಯೂ ಈಡಿಯಟ್! ನಾನು ನಿನ್ನ ಫ್ರೆಂಡ್ ಆಗಿ ಒಪ್ಪಿಕೊಂಡಿದ್ದೀನಿ. ಲವರ್ ಅಂತ ಬೇರೊಬ್ಬನನ್ನು ಒಪ್ಪಿಕೊಂಡಿದ್ದೀನಿ…’
‘…’
‘ನಾವು ಫ್ರೆಂಡ್ಸಾಗಿ ಇರೋದಾದರೆ ಸರಿ, ಇಲ್ಲಾಂದ್ರೆ ನಮ್ಮ ಪರಿಚಯವನ್ನ ಇಲ್ಲಿಗೇ ಕೊನೆ ಮಾಡಿಬಿಡೋಣ. ಛೇ! ನೀನು ಈ ರೀತಿ ವರ್ತಿಸುತ್ತೀಯ ಅಂತ ನಾನು ಅಂದುಕೊಂಡಿರಲಿಲ್ಲ’
ಫೋನು ಕಟ್ ಮಾಡಿದೆ. ಎದೆಯಲ್ಲಿ ಕಾಳ್ಗಿಚ್ಚಿನ ಧಗೆ. ಮುಖದ ತುಂಬಾ ಅಳು ಒತ್ತರಿಸಿಬಂದಂತಾಗಿ ಮುಖ ಮುಚ್ಚಿಕೊಂಡು ಕುಳಿತೆ. ನಾಲ್ಕು ಹನಿ ಕಣ್ಣಿರು ನನ್ನ ಅನುಮತಿಯಿಲ್ಲದೆ ಹರಿದುಹೋದವು. ಮೊಬೈಲಿನ ಮೆಸೇಜು ಡಬ್ಬಿ ಬಿಚ್ಚಿ ನಿನ್ನ ಸಂದೇಶಗಳೆಲ್ಲವನ್ನೂ ನಾಶ ಮಾಡಿದೆ. ನಿನ್ನ ಮೊಬೈಲ್ ನಂಬರನ್ನೇ ಅಳಿಸಿ ಹಾಕಿದೆ. ನಿನ್ನ ನೆನಪನ್ನೇ ನಾಶ ಮಾಡುತ್ತಿದ್ದೇನೆಂಬ ಭ್ರಮೆಯಲ್ಲಿ. ಇನ್ನೆಂದೂ ನಿನ್ನ ಮಾತನಾಡಿಸಬಾರದು ಅಂತ ತೀರ್ಮಾನಿಸಿದೆ. ಈ ಪ್ರೀತಿ ಪ್ರೇಮದ ಗುಂಗಿಗೆ ಬಿದ್ದು ನನ್ನ ಬದುಕಿನ ಗುರಿಯಿಂದ ವಿಮುಖನಾದ ತಪ್ಪಿತಸ್ಥ ಭಾವ ಕವಿಯತೊಡಗಿತು. ಮನಸಾರೆ ಅತ್ತು ಸಂಜೆಗೇ ಮಲಗಿಬಿಟ್ಟೆ. ಕನಸಲ್ಲಿ ನೀನು ಕಾಣಲಿಲ್ಲ.
***
ಇದೆಲ್ಲಾ ಆಗಿ ನಾಲ್ಕು ವರ್ಷಗಳೇ ಕಳೆದಿವೆ. ಈಗ ಇವನ್ನೆಲ್ಲಾ ನೆನಪಿಸಿಕೊಂಡರೆ ಮಜವೆನಿಸುತ್ತದೆ. ಎಂದಿಗೂ ಒಬ್ಬ ಹುಡುಗಿಯನ್ನು ಮಾತನಾಡಿಸಿ ಅಭ್ಯಾಸವಿಲ್ಲದ ನಾನು ನಿನ್ನ ಗೆಳೆತನ, ನಿನ್ನ ಆತ್ಮೀಯತೆಯನ್ನು ಅದರದೇ ಆದ ಭಾವದಲ್ಲಿ ಸ್ವೀಕರಿಸುವಲ್ಲಿ ಸೋತಿದ್ದೆ. ಚಿಕ್ಕ ವಯಸ್ಸಿನಲ್ಲೇ ನನಗೆ ಗೆಳತಿಯರಿದ್ದಿದ್ದರೆ ಇಂತ ಲೋಪ ಆಗುತ್ತಿರಲಿಲ್ಲವಾ ಗೊತ್ತಿಲ್ಲ. ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು ಬೇಕಿರುವುದು ವಿವೇಕವಾ, ಅನುಭವವಾ, ಬುದ್ಧಿವಂತಿಕೆಯಾ? ಗೆಳೆತನ, ಪ್ರೇಮದ ನಡುವಿನೆ ಗಡಿಯನ್ನು ಮೀರದಿರುವ ವಿವೇಕವಿಲ್ಲದೆ ಪ್ರೀತಿಯಲ್ಲಿ ಬಿದ್ದರೆ ಗೆಳೆತನವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ನನಗೇಕೆ ತಿಳಿಯಲಿಲ್ಲ.
ಇಷ್ಟು ದಿನಗಳ ನಂತರ ಈಗೇಕೆ ಪತ್ರ ಬರೆಯುತ್ತಿರುವೆ ಅಂತ ನಿನಗೆ ಆಶ್ಚರ್ಯವಾಗಬಹುದು. ತುಂಬಾ ಹಿಂದೆಯೇ ನಿನ್ನ ಬಾಯ್ ಫ್ರೆಂಡ್ ಬೇರೊಬ್ಬಳನ್ನು ಮದುವೆಯಾದ ಅನ್ನೋದು ತಿಳಿಯಿತು. ನನಗೆ ನಾಲ್ಕೈದು ಮಂದಿ ಗರ್ಲ್ ಫ್ರೆಂಡ್ಗಳ ಅನುಭವವಾಗಿದೆ. ಪ್ರೀತಿಸಲು ಎಷ್ಟಾದರೂ ಹುಡುಗಿಯರು ಸಿಕ್ಕಾರು ಆದರೆ ಗುರುವಿನಂಥ, ತಾಯಿಯಂಥ, ಹಿರಿಯಕ್ಕನಂತಹ ನಿನ್ನಂತಹ ಗೆಳತಿ ನನಗ್ಯಾರೂ ಸಿಕ್ಕುವುದಿಲ್ಲ. ಆ ದಿನಗಳಲ್ಲಿ ನಾನು ನಿನ್ನಲ್ಲಿ ಕಾಣುತ್ತಿದ್ದ ಆತ್ಮೀಯತೆ ನೀನು ಕೊಡುತ್ತಿದ್ದ ರಿಲೀಫ್, ಸಮಾಧಾನ ನನಗೆ ಜಗತ್ತಿನಲ್ಲಿ ಬೇರಾರ ಬಳಿಯೂ ಸಿಕ್ಕದು. ನನ್ನ ಕೋರಿಕೆಯನ್ನು ಮನ್ನಿಸಿ ನನ್ನ ಪುನಃ ಗೆಳೆಯನಾಗಿ ಸ್ವೀಕರಿಸುವೆಯಾ? ನನ್ನನ್ನು ಶಾಪ ವಿಮುಕ್ತನಾಗಿಸುವೆಯಾ?
ಇಂತಿ ನಿನ್ನ,
ಶಾಪಗ್ರಸ್ತ ಗಂಧರ್ವ
ಪ್ರೀತಿ ಎಂಬ ಅಮೃತ
Posted ಅಕ್ಟೋಬರ್ 1, 2008
on:– ರಂಜಿತ್ ಅಡಿಗ
ಪ್ರೀತಿಯೇ ಹಾಗೆ!
ಬದುಕಿನಲ್ಲಿ ಎಲ್ಲಾ ಸಾಧಿಸಿದವನಿಗೆ ತೃಪ್ತಿ ಸಿಗಬಹುದು. ‘ಅಬ್ಬ! ಎಲ್ಲ ಸಾಧಿಸಿದೆ… ಇನ್ನು ಸಾಕು’ ಅನ್ನಿಸಬಹುದು. ಆದರೆ ಪ್ರೀತಿಯ ವಿಷಯದಲ್ಲಿ ಎದೆಯ ಮಡಿಕೆಗೆ ಎಂದಿಗೂ ತೂತು. ಪ್ರೀತಿ ಎಷ್ಟು ಸಿಕ್ಕಿದರೂ ಅವರ ದಾಹ ನೀಗದು. ಜಗತ್ತನ್ನೇ ಗೆದ್ದೆ ಅಂದವನೂ ಪ್ರೀತಿಯ ವಿಷಯದಲ್ಲಿ ಮೊಣಕಾಲೂರಿ ಬೇಡಲೇಬೇಕು. ಹಿಡಿ ಪ್ರೀತಿಗಾಗಿ ಫಕೀರನಾಗಲೇ ಬೇಕು. ಯಾಕೆಂದರೆ…
ಪ್ರೀತಿಯೇ ಹಾಗೆ!
ಪ್ರೀತಿಯೆಂದರೆ ಎದೆಯ ಹಸಿವು. ಉಸಿರು, ನೀರು, ಆಹಾರ ದೇಹಕ್ಕೆಷ್ಟು ಅಗತ್ಯವೋ ಅಷ್ಟೇ ಅಗತ್ಯ ಹೃದಯದ ಹಸಿವು ನೀಗಲೂ ಇದೆ. ಪ್ರೀತಿ ಎಂಬುದು ಬೊಗಳೆ… ಇಂಪ್ರಾಕ್ಟಿಕಲ್ ಅಂದವನೂ ಒಂದು ಘಟ್ಟದಲ್ಲಿ ಪ್ರೀತಿಯ ಕೊರತೆಯಿಂದ ಹಪಹಪಿಸಲೇಬೇಕು. ಎದೆಯ ಏಕಾಂಗಿತನಕ್ಕೆ ಸಂಗಾತಿಯನ್ನು ಅರಸಲೇ ಬೇಕು.
ಪ್ರೀತಿಯೆಂದರೆ ಹೃದಯದ ಹಸಿವು, ಯಾಕೆಂದರೆ… ಹೃದಯವುಳ್ಳ ಪ್ರತಿ ಜೀವವೂ ಪ್ರೀತಿಗಾಗಿ ತುಡಿಯುತ್ತಿರುತ್ತದೆ. ಸ್ವಲ್ಪ ಪ್ರೀತಿಯ ತೋರಿದರೆ ನಾಯಿಗಳು ಕೊನೆವರೆಗೂ ನೆನಪಿರಿಸಿಕೊಳ್ಳುತ್ತವೆ. ದನಗಳು ತೋರುವ ಪ್ರೀತಿ ಅದನ್ನು ಸಾಕಿದವರಿಗೇ ಗೊತ್ತು. ಬೆಕ್ಕಿನಿಂದ ಸಿಕ್ಕುವ ಪ್ರೀತಿಯ ನೆಕ್ಕುವಿಕೆ ಅದನ್ನು ಪ್ರೀತಿಸಿದವರಿಗೆ ಮಾತ್ರ. ಬರಿಯ ಸಾಕು-ಪ್ರಾಣಿಗಳಷ್ಟೇ ಅಲ್ಲ. ಭಾವನೆಗಳು, ಪ್ರೀತಿಯ ಹಂಚುವಿಕೆ ಕ್ರೂರ ಪ್ರಾಣಿಗಳಲ್ಲೂ ಇರುತ್ತದೆ. ವ್ಯಾಘ್ರನ ಇನ್ನೊಂದು ಮುಖ ‘ಧರಣಿ ಮಂಡಲ ಮಧ್ಯದೊಳಗೆ’ ಕಥೆಯಲ್ಲೂ ಕಾಣಸಿಗುತ್ತದೆ.
ಪ್ರೀತಿ-ಪ್ರೇಮ ಯಾವಾಗಲೂ ಹಚ್ಚ ಹಸಿರು. ಮಾನವ ಜನ್ಮ ಉಗಮವಾದಾಗಿನಿಂದಲೂ ಪ್ರತಿ ಮನಸ್ಸನ್ನು ಕಾಡಿದೆ. ಪ್ರತಿಯೊಬ್ಬರನ್ನೂ ಕ್ಷಣಕಾಲ ಚಲಿಸುವಂತೆ ಮಾಡಿದೆ. ಎಲ್ಲ ರೀತಿಯ ಕಥೆಗಳು ಮನುಷ್ಯನಿಗೆ ಬೋರ್ ಹೊಡೆಸಿದರೂ… ಪ್ರೀತಿ ಪ್ರೇಮ ಅಂದೊಡನೆ ಮನ ಅರಳುತ್ತದೆ. ಅದೇ ಕಥೆಯನ್ನು ಮತ್ತೆ ಮತ್ತೆ ಕೇಳುವಂತೆ ಅನುಭವಿಸುವಂತೆ ಮಾಡುವ ಶಕ್ತಿ ಪ್ರೇಮಕ್ಕಿದೆ. ಹೀಗಾಗಿ ಪ್ರೇಮದ ವಿಷಯ ಮಾತ್ರ ಸಾಹಿತ್ಯದಲ್ಲಿ, ಸಿನೆಮಾದಲ್ಲಿ ಅಜರಾಮರ.
ಕಲಿಗಾಲದಲ್ಲಿ ಎಲ್ಲದರಲ್ಲೂ ಕಲಬೆರಕೆ ಉಂಟಾಗುವಂತೆ ಪ್ರೀತಿಯಲ್ಲೂ ಆಗಿದೆ. ಪ್ರೇಮವೆಂಬುದು ಪೊಸೆಸಿವ್ನೆಸ್ ಆದಾಗ… ವಿಕೃತಿಯ ಹುಟ್ಟು. ತನಗೇ ಬೇಕೆಂಬ ಸ್ವಾರ್ಥ. ಹೀಗಾಗಿ ಪ್ರೇಮ ಎಂಬ ಪವಿತ್ರ ಪದದ ಮೇಲೆ ಮನುಷ್ಯನಿಗೆ ಹೇಕರಿಕೆ ಉಂಟಾಗುತ್ತಿದೆ. ಅನ್ ಕಂಡೀಶನಲ್ ಆಗಿ ಪ್ರೇಮಿಸುವ, ಪ್ರೇಮವೆಂದರೆ ಕೊನೆಯವರೆಗೆ ಸಂಗಾತಿಯನ್ನು ಕಂಫರ್ಟ್ ಆಗಿರಿಸುವ… ಅದೂ ಖಾಯಂ ಆಗಿರುವ ಭಾವನೆ ಎಂಬುದು ಅರ್ಥ ಮಾಡಿಕೊಳ್ಳದೇ, ಕ್ಷಣಿಕ ಆವೇಶಗಳಿಗೆ ಮಣಿದು, ಆಕರ್ಷಣೆಗಳಿಗೇ ಸೋಲುವ ಯುವ ಹೃದಯಗಳು ಸಾಕಷ್ಟು.
ಪ್ರೇಮವೆಂದರೆ ಪರಸ್ಪರ ನೀಡುವ ಗೌರವ. ‘ನಿನಗೆ ಬೇಕಾದ್ದನ್ನು ನೀಡಲು ಸಾಧ್ಯವಾಗದೇ ಇರಬಹುದು… ಆದರೆ ಎಂದಿಗೂ ಕಣ್ಣೀರು ಹಾಕಿಸಲಾರೆ… ಕೊನೆವರೆಗೂ ಕಷ್ಟದಲ್ಲಿ- ಇಷ್ಟದಲ್ಲಿ ಜತೆಗೇ ಇರುವೆ… ನೆಮ್ಮದಿಯನ್ನು ನೀಡುವೆ’ ಎಂಬ ಭಾವನೆಯೇ ಪ್ರೇಮ.
ಪಕ್ವ ಪ್ರೇಮಕ್ಕೆ ಹಣದ, ಸೌಂದರ್ಯದ ಹಂಗಿಲ್ಲ. ಸುಂದರ ಭವಿಷ್ಯಕ್ಕೆ ಜತೆಯಾಗಿ ನಡೆವುದೇ ಪ್ರೇಮ.
ಬದುಕು ಎಲ್ಲವನ್ನೂ ಸುಲಭವಾಗಿ ನೀಡದು. ಅದರ ದಾರಿ ಬಲುದೂರ. ಸಾಧನೆಯ, ನೆಮ್ಮದಿಯ ಗುರಿ ತಲುಪಲು ಕಷ್ಟದ ಬಿಸಿಲಿನಲ್ಲಿ ಬರಿಗಾಲ ನಡಿಗೆ. ಪ್ರೇಮವೆಂಬುದು ಅದರಲ್ಲಿನ ತಂಪು ನೆರಳು. ಬದುಕಿನ ದಾರಿಯಲ್ಲಿ ಸುಸ್ತಾದವನಿಗೆ ದೊರಕುವ ಅಮೃತ. ಅಮೃತ ಕುಡಿದೊಡನೆ ಮತ್ತೆ ಸುಸ್ತನ್ನೆಲ್ಲ ಕೊಡವಿ ಎದ್ದು ನಿಲ್ಲಬೇಕು. ಮತ್ತೆ ನೆಮ್ಮದಿಯತ್ತ ನಡೆಯಬೇಕು.
ಪ್ರೇಮವೆಂದರೆ ಬರಿಯ ಅಮೃತವಷ್ಟೇ ಅಲ್ಲ. ಪರಸ್ಪರ ಗೌರವ, ತ್ಯಾಗ, ಹೊಂದಾಣಿಕೆ, ಕಾಳಜಿ, ಕೊನೆವರೆಗೂ ಜತೆಗಿರುವ ಸ್ಥೈರ್ಯಗಳೆಂಬ ಪಂಚಾಮೃತ. ಸಾಧನೆಯ ಮಾರ್ಗದಲ್ಲಿ ಬೇಸರ, ಸುಸ್ತಾಗದೇ ಪ್ರೇಮದ ಅಮೃತ ಪಾತ್ರೆ ಜತೆಗಿರಲಿ; ಅನುದಿನವೂ ಪಕ್ವ ಪ್ರೇಮಕ್ಕೆ ಜಯವಾಗಲಿ!
ಇತ್ತೀಚಿನ ಟಿಪ್ಪಣಿಗಳು