Posts Tagged ‘ಕವಿತೆ’
ವಾರಾಂತ್ಯದ ಕವಿತೆ: ಈರುಳ್ಳಿ
Posted ಜುಲೈ 31, 2009
on:– ರಂಜಿತ್ ಅಡಿಗ, ಕುಂದಾಪುರ.
ಒಮ್ಮೆಯಾದರೂ ಈ ಸಂಬಂಧಗಳಾಳಕ್ಕೆ
ಇಣುಕಲೇ ಬೇಕು
ಅದು ಈರುಳ್ಳಿ ಸಿಪ್ಪೆ ಸುಲಿದಂತೆ
ಮೊನ್ನೆಮೊನ್ನೆಯವರೆಗೂ ತನ್ನ
ಜೀವಕ್ಕಿಂತ ಹೆಚ್ಚು ಪ್ರೀತಿಸ್ತೀನಿ ಅಂತ
ಒದ್ದೆ ಕಣ್ಣಾಲಿಗಳಿಂದ ಹೇಳಿದ ಗೆಳತಿ
ಕಮ್ಮಿ ಮಾರ್ಕ್ಸು ಬಂದರೆ
ಮನೆಯಿಂದ ಓಡಿಸ್ತೀನಿ ಎಂದು
ಸಿಕ್ಕಾಪಟ್ಟೆ ಬೈದ ಅಪ್ಪ
ಕ್ಯಾಂಪಸ್ಸಿನಲ್ಲಿ ಕೆಲಸ
ಸಿಗಲಿಲ್ಲವೆಂದೊಮ್ಮೆ ಸುಮ್ಮನೆ
ಪರೀಕ್ಷೆ ಮಾಡಲು ಹೇಳಿದ ಕೂಡಲೇ
ಕೆಲಸ ಸಿಗದವನನ್ನು ಮದ್ವೆಯಾಗ್ತೀನಂತ
ಹ್ಯಾಗೆ ತನ್ನಪ್ಪನನ್ನು ಒಪ್ಪಿಸಬೇಕು
ನೀ ನನ್ನ ಮರೆಯಲೇಬೇಕು
ಎಂದು ತನ್ನ ಜೀವವನ್ನೇ ಕಡೆಗಣಿಸಿದಳಾಕೆ
ಮನೆಯನ್ನು ಒತ್ತೆಯಿಡೋಣ
ರಿಟಾಯರ್ಮೆಂಟ್ ಹಣವೂ ಬರಬಹುದು
ಸ್ವಂತ ಬಿಸಿನೆಸ್ಸು ಆರಂಭಿಸು ಮಗನೇ ಅನ್ನುವನು ಅಪ್ಪ
ಎರಡೂ ಮಾತಿಗೂ ಉಕ್ಕಿದ್ದು
ಕಣ್ಣೆದುರಿಗಿನ
ಪರದೆ ಜಾರಿಸೋ ಕಣ್ಣಿರೇ.
ವಾರಾಂತ್ಯದ ಕವಿತೆ: ಒಂದು ತಾಸಿನ ಮಳೆ…
Posted ಜೂನ್ 13, 2009
on:ವಿವೇಕ್ ಘಾಟೆ, ಮಂಗಳೂರು
vive.1990@gmail.com
ಬಾರದ ಮಳೆಯ.. ಸುರಿಯುತ್ತಾ
ಸ್ಪರ್ಶಿಸುವ ಹನಿಗಳ ಮಧ್ಯ,
ತೆರೆದಿದೆ ನೊಂದ ಮನಗಳ
ಸಾಹಿತ್ಯವನ್ನು ಹೊತ್ತ ಗದ್ಯ!
ಪುಟ ಪುಟವೂ ಮೆದುವಾಯಿತು
ಆವರಿಸಿದ ದಟ್ಟ ನೀಲಿ ಆಗಸದ ಕೆಳಗೆ,
ಹರಿದಾಡಿ, ಗೋಳಾಡಿ ಬೇಯುತಲಿದೆ
ಕನಸುಗಳು ಮಿನುಗುವ ಕಣ್ಣ ಪದರದೊಳಗೆ!
ವಿಚಾರಿಸುತ್ತಲೇ ಬಂತು ಗರಿಯುದುರಿದ
ನವಿಲು ಸಹಾಯ ಹಸ್ತದ ಹೊದಿಕೆಗಾಗಿ,
ಬಿಸಿಯುಸಿರ ಮಾತಿನಲ್ಲಿ ನಿರಾಕರಿಸಿದವು ಕೈಗಳು
ತನ್ನ ತನುವ ಚಳಿಯಿಂದ ಬೆಚ್ಚಗಿಡುವ ಸಲುವಾಗಿ!
ಪ್ರಾಣ ನೆತ್ತರ ಚಲನೆಯು ಕ್ಷೀಣಿಸಿತು,
ಹೃದಯ ಬಡಿತವು ಮೆಲ್ಲನೆ ಮೌನ ತಾಳಿತು..
ಹೊಳಪಿನ ಕವನಗಳ ಬಣ್ಣವನ್ನು ಕರಗಿಸಿ
ನಿರ್ನಾಮವಾಗಿಸಿತು, ರೌದ್ರತೆಯಲ್ಲಿ ತೇಗಿತು!
ಮಾಡು ಇಲ್ಲದ ಆಸರೆಯ ಮೇಲೆ ಸಡಗರದಿಂದ
ಸುರಿದ ಮಳೆಯು ಆ ಒಂದು ತಾಸಿನಲ್ಲಿ,
ಶಾಶ್ವತವಾಗಿ ನಿದ್ರಿಸುವಂತೆ ಮಾಡಿತು
ಚಿಗುರಬೇಕಾದ ಪ್ರೇಮ ಬೀಜವ ದ್ವೇಷವೆಂಬ ಹಾಸಿನಲ್ಲಿ!
ಕವಿತೆ: ಒಂದು ಗುಲಾಬ್ ಜಾಮೂನ್!
Posted ಜೂನ್ 4, 2009
on:ರಂಜಿತ್ ಅಡಿಗ, ಕುಂದಾಪುರ
adiga.ranjith@gmail.com
ಅಪರೂಪವಾಗಿ
ಬೇರೆಯೇ ಲೋಕದ ಜನ
ತಿನ್ನುವವರೆಂಬಷ್ಟು ಅಪರಿಚಿತವಾಗಿ
ಹೋಗಿದ್ದ ಜಾಮೂನು ಅಚಾನಕ್ಕಾಗಿ
ಅದೃಷ್ಟದಿಂದ ಆಕೆಗೆ ಸಿಕ್ಕಿದಾಗ
ಅದು ಚಂದ್ರ ಅಪಹಾಸ್ಯ ಮಾಡಿ
ನಗುವ ನಡುರಾತ್ರಿ!
ಮಗುವಿನ ಕನಸನ್ನಲ್ಲಾಡಿಸಿ
ಎಬ್ಬಿಸಿ ತಿನ್ನಿಸಿ
ತಾನು ಖುಷಿಪಟ್ಟಾಗ
ಮಗುವಿನ ಕಣ್ಣಲ್ಲೂ ಅಂದು ಹುಣ್ಣಿಮೆ!
ಹಸಿವಿನ
ಜೋಗುಳ ಹಾಡಿಕೊಂಡೇ
ನಿದಿರಿಸಿದ ಅವ್ವನ ಕನಸಲ್ಲಿ
ಕೊಟ್ಟ ಖುಷಿಯ ಜಾತ್ರೆ
ಬೆಳಗಾತನೆದ್ದು ಕನಸ ಮಧ್ಯದಲ್ಲೇ
ಜಾಮೂನು ತಿಂದು ತೇಗಿದ್ದ ಮಗ
ಅದರ ರುಚಿಯ ನೆನಪಾಗದೇ ಹಲುಬಿದ್ದಾನೆ,
ಬೆಳಿಗ್ಗೆ ಕೊಟ್ಟರಾಗದಿತ್ತೇ ಎಂದು ರೇಗಿದ್ದಾನೆ..
ತಿಂದ ಜಾಮೂನಿನ ರುಚಿ
ಹೇಗಿದ್ದಿರಬಹುದು ಎಂದೂಹೆ ಮಾಡುತ್ತಾ
ಮಗನಿದ್ದರೆ
ಕೈಯ್ಯಲ್ಲಿದ್ದ ಚಂದಿರನಂತಿದ್ದ
ಜಾಮೂನು ಮಗನ ಹೊಟ್ಟೆ ಸೇರಿಯೂ
ಅವನಿಗೆ ಸಂತೋಷವಾಗದಿದ್ದುದ್ದಕ್ಕೆ
ಅವ್ವನನ್ನು ಹಸಿವು ಸುಟ್ಟಿದೆ!
ವೀಣೆ ಇದೆ, ತಂತಿ ಇದೆ
ನುಡಿಸೋ ಬೆರಳುಗಳಲಿ
ಕಸುವು ಇದೆ
ತಾಣವಿದೆ, ಮೌನವಿದೆ
ಆಲಿಸುವ ಕಿವಿಗಳಲಿ
ಹಸಿವು ಇದೆ
ಕಂಪನದಿ ಸ್ವರ
ಕಾಣದಾಗಿದೆ.
ಪದಗಳಿವೆ, ಧ್ವನಿಗಳಿವೆ
ನಲಿಯುವ ಕೈಗಳಲಿ
ಕತ್ತಲು ಬೆಳಕಾಗಿದೆ
ಧ್ಯಾನವಿದೆ, ಅರ್ಥವಿದೆ
ಓಡುವ ಕಣ್ಣಿನಲಿ
ಬೆತ್ತಲು ಬಯಲಾಗಿದೆ
ಬೆಸೆದ ಸೇತುವೆಗೆ
ಮುಪ್ಪಾಗಿದೆ.
ರೂಪವಿದೆ, ದೀಪವಿದೆ
ಕಟೆದ ಮೂರ್ತಿಯಲಿ
ಹೊಳಪು ಇದೆ
ಭಾವವಿದೆ, ಭಕುತಿಯಿದೆ
ಜೋಡಿಸಿದ ಕರಗಳ
ಮುಡಿಪು ಇದೆ
ಪಂಜರದಿ ಪಕ್ಷಿ
ಸತ್ತಿದೆ.
– ‘ಅಂತರ್ಮುಖಿ’
ಇಲ್ಲಿಗೀ ಕಥೆ ಮುಗಿಯಿತು!
Posted ಅಕ್ಟೋಬರ್ 1, 2008
on:‘ಆ ಕಾದಂಬರಿ ಕೊನೆಗೂ ಏನೂ conclusion ಕೊಡಲಿಲ್ಲ. ಅದು ಸಮಸ್ಯೆಗಳೊಂದಿಗೇ ಶುರುವಾಗಿ ಸಮಸ್ಯೆಗಳೊಂದಿಗೇ ಅಂತ್ಯವಾಗುತ್ತದೆ. ಅದರ ಅಂತ್ಯ ನಿನಗೇನಾದರೂ ಗೊತ್ತಾಯಿತಾ?’ ಎಂದು ಕೇಳಿದ್ದಳು ಆಕೆ.
‘ಕನ್ಕ್ಲೂಶನ್ ಇರಲೇ ಬೇಕಾ?’ ಕೇಳಿದ್ದೆ. ಯಾಕೋ ಹಿಂಗೆ ತುಂಬಾ ತಿಳಿದವನ ಹಾಗೆ, ಬುದ್ಧಿವಂತಿಕೆಯನ್ನು ಪ್ರದರ್ಶಿಸುವ ಹಾಗೆ ಮಾತನಾಡುವ ಚಟ ಹತ್ತಿಸಿಕೊಂಡಿದ್ದೇನೆಯೋ ಎಂಬ ಆತಂಕ ಹುಟ್ಟಿಕೊಂಡಿತ್ತು. ನನ್ನ ಅಭಿಪ್ರಾಯ ಎಂದು ನಾನು ಹೇಳುವುದು ನಿಜಕ್ಕೂ ನನ್ನ ಅನಿಸಿಕೆಯೋ ಅಥವಾ ಇತರರು ಇದು ನನ್ನ ಅಭಿಪ್ರಾಯ ಎಂದು ತಿಳಿದುಕೊಳ್ಳಲಿ ಎಂದು ಮುತುವರ್ಜಿಯಿಂದ ಫಾರ್ಮ್ ಮಾಡಿದ ಚಿಂತನೆಯೋ ಎಂದು ಹಲವು ಬಾರಿ ಅಂದುಕೊಂಡಿದ್ದೇನೆ. ಸಹಜವಾಗಿರಬೇಕು ಎಂಬ ಪ್ರಯತ್ನವೂ ಅಸಹಜವಾಗಿಬಿಟ್ಟರೆ ಎಂದು ಗೊಂದಲವಾಗಿ ನನ್ನ ವ್ಯಕ್ತಿತ್ವಕ್ಕೆ ಸಹಜವಾದ ಅಲೆಮಾರಿತನದ ಆಸರೆ ಪಡೆದು ಆಲೋಚಿಸುವ ವಿಷಯದಿಂದಲೇ ಬೇರೊಂದಕ್ಕೆ ಜಿಗಿದುಬಿಡುತ್ತೇನೆ.
***
ಪುರಾಣದ ಕಥೆಗಳನ್ನೋ, ಇತಿಹಾಸವನ್ನೋ ಓದುವಾಗ ವಾಚ್ಯ ಅರ್ಥಗಳಿಗಿಂತ ಗೂಢಾರ್ಥ ಹಾಗೂ ಪ್ರತಿಮಾರ್ಥಗಳನ್ನು ಹುಡುಕುವ, ಕಲ್ಪಿಸುವ ಖಯಾಲಿ ಬೆಳೆದಿದೆ. ಮೊನ್ನೆ ಟಿವಿಯಲ್ಲಿ ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ‘ಏಕಲವ್ಯ’ ಸಿನೆಮಾದ ಟ್ರೈಲರ್ಗಳನ್ನು ನೋಡಿದ ಮೇಲೆ ನನ್ನ ಮನಸ್ಸಿನಲ್ಲಿ ಏಕಲವ್ಯನ ಬಗ್ಗೆ ನಾನು ಓದಿದ, ಕೇಳಿದ ಕಥೆಗಳು ಬಂದು ಸುಳಿದುಹೋದವು. ಪ್ರೈಮರಿಯಲ್ಲಿರುವಾಗ ನಮ್ಮ ಶಾಲೆಯಲ್ಲಿ ನೀತಿಪಾಠ ಎಂಬ ಸಬ್ಜೆಕ್ಟು ಪಠ್ಯದಲ್ಲಿತ್ತು. ಅದರಲ್ಲಿ ಹತ್ತಾರು ನೀತಿ ಕಥೆಗಳಿರುತ್ತಿದ್ದವು. ಆ ಕಥೆಗಳ ಮೇಲೆ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಿರುತ್ತಿದ್ದರು. ಪಠ್ಯವಿಡೀ ಕಥೆಗಳೇ ಇರುತ್ತಿದ್ದರಿಂದ ನಮಗೂ ಕೇಳಲಿಕ್ಕೆ ಎಲ್ಲಿಲ್ಲದ ಆಸಕ್ತಿ. ಅದರಲ್ಲಿ ಮೊದಲ ಬಾರಿಗೆ ಏಕಲವ್ಯನ ಕಥೆಯನ್ನು ನಾನು ಓದಿದ್ದು. ಅನಂತರ ಅಸಂಖ್ಯಾತ ಸಂದರ್ಭಗಳಲ್ಲಿ ಈ ಕಥೆಯನ್ನೋ ಇಲ್ಲವೆ ಅದರ ಉಲ್ಲೇಖವನ್ನೋ ಕೇಳಿದ್ದಿದೆ.
ನೀತಿ ಕಥೆಯಾಗಿದ್ದ ಏಕಲವ್ಯನ ಕಥೆಯಲ್ಲಿ ವಿಜೃಂಭಣೆಗೆ ಒಳಗಾದದ್ದು ಆತನ ಗುರುಭಕ್ತಿ. ಸರಳವಾಗಿ ಕಥೆಯನ್ನು ಓದಿಕೊಂಡರೆ ಏಕಲವ್ಯ ಕೀಳುಜಾತಿಯವನಾದ್ದರಿಂದ ಆತನ ವಿದ್ಯಾಸಕ್ತಿಗೆ ಪುರಸ್ಕಾರ ಸಿಕ್ಕಲಿಲ್ಲ, ಆದರೆ ಆತ ತನ್ನ ಅದಮ್ಯ ಛಲದಿಂದ ಮರೆಯಲ್ಲಿಂದಲೇ ವಿದ್ಯೆಯನ್ನು ಕಲಿತುಕೊಳ್ಳುತ್ತಾನೆ. ದ್ರೋಣರು ಅರ್ಜುನನಿಗೆ ನೀಡಿದ ವಚನಕ್ಕೆ ಕುತ್ತು ತರುವಷ್ಟರ ಮಟ್ಟಿಗೆ ಈತ ಬಿಲ್ಲು ವಿದ್ಯೆಯ ಪರಿಣಿತಿಯನ್ನು ಪಡೆಯುತ್ತಾನೆ. ಆಗ ದ್ರೋಣರು ಏಕಲವ್ಯನ ಬಳಿಗೆ ಬಂದು ‘ನಿನ್ನ ಗುರು ಯಾರು’ ಅನ್ನುತ್ತಾರೆ. ಏಕಲವ್ಯ ದ್ರೋಣರ ಮೂರ್ತಿಯನ್ನು ತೋರಿಸುತ್ತಾನೆ. ‘ಹಾಗಾದರೆ ನನಗೆ ನೀನು ಗುರುದಕ್ಷಿಣೆ ಕೊಡಬೇಕಲ್ಲವಾ’ ಎಂದು ಗುರು ಕೇಳುತ್ತಾನೆ. ‘ನನ್ನಿಂದ ದಕ್ಷಿಣೆಯನ್ನು ಕೇಳಲು ನೀವು ನನಗೇನೂ ಕಲಿಸಿಲ್ಲ. ನಿಮ್ಮ ಮೂರ್ತಿಯನ್ನಿಟ್ಟುಕೊಂಡು ನಾನು ಸ್ವಂತ ಪರಿಶ್ರಮದಿಂದ ವಿದ್ಯೆ ಕಲಿತದ್ದು ಅಷ್ಟೇ, ನಾನೇಕೆ ನಿಮಗೆ ದಕ್ಷಿಣೆ ಕೊಡಬೇಕು’ ಎಂದು ಏಕಲವ್ಯ ಕೇಳಬಹುದಿತ್ತು. ಆದರೆ ಕೇವಲ ಒಂದು ಕಲ್ಲಿನ ವಿಗ್ರಹದಲ್ಲಿ ವಿದ್ಯೆಯನ್ನು ಧಾರೆಯೆರೆಯುವ ಗುರುವಿನ ಭಾವವನ್ನು ಪ್ರತಿಷ್ಠಾಪಿಸಿಕೊಂಡ ಏಕಲವ್ಯನಿಗೆ ಆ ಭಾವ ಹೊಳೆಯುವುದಿಲ್ಲ. ಆತ ‘ನೀವು ಏನು ಕೇಳಿದರೂ ಕೊಡುತ್ತೇನೆ’ ಎನ್ನುತ್ತಾನೆ. ಆತನಲ್ಲಿನ ಸಮರ್ಪಣಾ ಭಾವನೆಯನ್ನು ಕಂಡಾಗ ದ್ರೋಣರಿಗೆ ‘ನನ್ನ ಉಪಾಯ ಫಲಿಸಿತು’ ಎಂಬ ನೆಮ್ಮದಿ ಉಂಟಾಗಬೇಕಿತ್ತು. ಇಷ್ಟು ಸುಲಭವಾಗಿ ಒಪ್ಪಿಕೊಂಡನಲ್ಲಾ ಎಂಬ ಸಮಾಧಾನ ಸಿಕ್ಕಬೇಕಿತ್ತು. ಆದರೆ ಏಕಲವ್ಯನ ಮೇಲೆ ದ್ರೋಣರಿಗೆ ಅದಮ್ಯವಾದ ಪ್ರೀತಿ ಹುಟ್ಟುತ್ತದೆ. ಕರ್ತವ್ಯ ಎಂಬ ಹೆಸರಿನಲ್ಲಿ ಆ ಶಿಷ್ಯನಿಗೆ ಘೋರವಾದ ಅನ್ಯಾಯ ಮಾಡುತ್ತಾರೆ. ಬಿಲ್ಲುಗಾರನ ಹೆಬ್ಬೆರಳನ್ನೇ ದಕ್ಷಿಣೆಯಾಗಿ ಪಡೆದು ಹೊರಡುತ್ತಾರೆ. ಅರ್ಜುನ ಎದುರಾಳಿಗಳಿಲ್ಲದ ಬಿಲ್ವಿದ್ಯೆಯ ಕೋವಿದನಾಗುತ್ತಾನೆ.
ಆ ನೀತಿ ಕಥೆಯಲ್ಲಿ ಏಕಲವ್ಯನ ಗುರುಭಕ್ತಿಯನ್ನು ವಿಜೃಂಭಿಸಿ ಶಿಷ್ಯಂದಿರು ಹಾಗಿರಬೇಕು ಎಂದು ಹೇಳಿದ್ದನ್ನು ತಲೆಯಾಡಿಸಿ ಒಪ್ಪಿಕೊಂಡು, ಮನನ ಮಾಡಿಕೊಂಡು, ಗುರು ಬ್ರಹ್ಮಾ ಎಂದು ಉದಾತ್ತ ಭಾವನೆಯನ್ನು ತಳೆದು ಆ ಕ್ಲಾಸಿನಿಂದ ಮುಂದಿನದಕ್ಕೆ ಹಾರಿದ್ದಾಗಿತ್ತು. ಆದರೆ ಎಂದಿಗೂ ಮಹಾಭಾರತದಲ್ಲಿ ವ್ಯಾಸರು ಈ ಉಪಕಥೆಯನ್ನು
ಹೇಳಿ ಏಕಲವ್ಯನ ಗುರುಭಕ್ತಿಯನ್ನು ಹೊಗಳಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿರಲಿಲ್ಲ. ಕಥೆ ಮುಗಿದ ತಕ್ಷಣ ಅದರ ಕೆಳಗಿನ ಸಾಲಿನಲ್ಲಿ ನೀತಿಯನ್ನು ಓದಿ ನೆನಪಿಟ್ಟುಕೊಳ್ಳುತ್ತಿದ್ದ ನಮಗೆ, ಹಾಗೆ ನೆನಪಿಟ್ಟುಕೊಂಡ ನೀತಿಯ ಆಧಾರದ ಮೇಲೆ ಕಥೆಯನ್ನು ಪುನಃ ಪುನಃ ಎಷ್ಟು ಬಾರಿಯಾದರೂ, ಯಾವ ಸಂದರ್ಭದಲ್ಲಾದರೂ, ಯಾರ ಮುಂದಾದರೂ ಹೇಳಬಲ್ಲವರಾಗಿದ್ದ ನಮಗೆ ಯಾವುದೋ ಹಂತದಲ್ಲಿ ನಾವು ಕಲಿತ ನೀತಿಯಿಂದ ಕಥೆಯನ್ನು ಸಂಕುಚಿತ ಗೊಳಿಸಿದ ಹಾಗೆ, ಅನಂತ ಸಾಧ್ಯತೆಗಳಿರುವ ಆಕಾಶವನ್ನು ಕೇವಲ ಒಂದಡಿ ಚೌಕದಲ್ಲೇ ನೋಡುವ ಪ್ರತಿಜ್ಞೆ ಮಾಡಿಕೊಂಡ ಹಾಗಾಗಲಿಲ್ಲವೇ ಎಂದನ್ನಿಸಿದ್ದು ಅದೇ ಮಹಾಭಾರತದ ಅದೇ ಏಕಲವ್ಯನ ಕಥೆಯನ್ನು ಎರಡನೆಯ ಪಿಯುಸಿಯಲ್ಲಿ ಒಂದು ನಾಟಕದ ರೂಪದಲ್ಲಿ ಓದಿದಾಗ. ಕಿರಂ ನಾಗರಾಜರು ಬರೆದ ನಾಟಕ ‘ಏಕಲವ್ಯ’ ನಮ್ಮ ಕನ್ನಡ ಭಾಷೆಯ ಪಠ್ಯದಲ್ಲಿತ್ತು. ಅದನ್ನು ನಮ್ಮ ಕನ್ನಡದ ಲೆಕ್ಚರ್ರು ತೆರೆದಿಟ್ಟ ಪರಿ ಅಂದು ನನ್ನ ಮಂತ್ರ ಮುಗ್ಧವಾಗಿಸಿತ್ತು.
***
ಕಥೆಗೆ ಕನ್ಕ್ಲೂಷನ್ ಇರಬೇಕಾ? ಅಸಲಿಗೆ ಕಥೆಯೆನ್ನುವುದು ಏನು? ಅದು ಅಕ್ಷರಗಳ ನೇಯ್ಗೆಯಲ್ಲವೇ ಅಲ್ಲ. ಏಕೆಂದರೆ ಅಕ್ಷರಗಳ ಸರ್ಕಸ್ಸಿನಿಂದ ಕಾವ್ಯವೂ ಹುಟ್ಟಬಹುದು, ಪ್ರಬಂಧವೂ ಹುಟ್ಟಬಹುದು, ಡಾಕ್ಟರ್ ಪ್ರಿಸ್ಕ್ರಿಪ್ಷನ್ ಕೂಡ ಹುಟ್ಟಬಹುದು. ಹಾಗಾದರೆ ಕಥನವಾಗಲೀ, ಕಾವ್ಯವಾಗಲೀ ನಮ್ಮೊಳಗಿನ ‘ನಮ್ಮತನದ’ ‘ನಮ್ಮ ಪ್ರಜ್ಞೆ’ಯ ಸ್ಥಿತಿಯಾ? ನೀರು ಶೀತಲವಾಗಿ ಹಿಮವಾಗಿ, ಗಟ್ಟಿ ಮಂಜುಗಡ್ಡೆಯಾಗುವಂತೆ ನಮ್ಮೊಳಗಿನ ನಾವು ತಲುಪಿಕೊಳ್ಳುವ ವಿವಿಧ ಸ್ಥಿತಿಯ, ಭಾವದ ಅಭಿವ್ಯಕ್ತಿಯನ್ನೇ ಕಥನ, ಕಾವ್ಯ ಎನ್ನಬಹುದಾ? ಹಾಗಾದರೆ ಬರೆದವನು ಮಾತ್ರ ಕವಿಯಾಗುವುದಿಲ್ಲ, ಕಥೆಗಳು ಬರಹಕ್ಕಿಳಿಸಿದಾಕ್ಷಣ ಕತೆಗಾರ ಹುಟ್ಟುವುದಿಲ್ಲ. ಕವಿಯಾಗುವುದೂ ಪ್ರೇಮಿಯಾದಂತೆಯೇ, ಆದರೆ ಜಗತ್ತಿನ ರಿವಾಜುಗಳು ವಿಚಿತ್ರ. ಪ್ರೇಮಿಯಾದವನು ಯಾರನ್ನಾದರೂ ಪ್ರೀತಿಸಲೇಬೇಕು. ಕವಿಯಾದವನೂ ಏನನ್ನಾದರೂ ಬರೆಯಲೇ ಬೇಕು. ವಿಚಿತ್ರ ಅಲ್ಲವಾ?
ಇತ್ತೀಚಿನ ಟಿಪ್ಪಣಿಗಳು