ಕಲರವ

Archive for the ‘ಸಿನೆಮಾ’ Category

– ಇಂಚರ, ಬೆಂಗಳೂರು

ನನ್ನ ಮನಸ್ಸಿಗೆ ತಟ್ಟಿದ ಸಿನೆಮಾದ ಬಗ್ಗೆ ಯೋಚನೆ ಮಾಡುತ್ತಿದ್ದಾಗ, ನೆನಪಾಗಿದ್ದು ‘ರಾಮಚಂದ್ ಪಾಕಿಸ್ತಾನಿ’.  ಮೆಹ್ರೀನ್ ಜಬ್ಬಾರ್ ಎಂಬ ಪಾಕಿಸ್ತಾನಿ ನಿರ್ದೇಶಕಿ ನಿರ್ದೇಶಿಸಿರುವ ಚಿತ್ರ.     ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ವಾಸವಾಗಿರುವ ಒಂದು ಅಲೆಮಾರಿ ಹಿಂದೂ ಕುಟುಂಬದ ಕಥೆ ಇದು. ಗಡಿಭಾಗದಲ್ಲಿ Ramchand-Pakistani-1 ಇವರ ನೋವುನಲಿವು, ಸ್ಥಿತಿಗತಿಗಳನ್ನು ಬಹಳ ಮನೋಜ್ಣವಾಗಿ, ಹೃದಯಸ್ಪರ್ಶಿಯಾಗುವಂತೆ ಚಿತ್ರಿಸಿದ್ದಾರೆ. ಅಮ್ಮ ನ   ಮೇಲೆ ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡ ೭ ವರ್ಷದ ಬಾಲಕನು(ರಾಮಚಂದ್) ಮನೆಯಿಂದ ಹೊರಗೆ ಹೋಗುತ್ತಾನೆ. ಕೈಯಲ್ಲಿ ಕ್ಯಾಟರ್ ಪಿಲ್ಲರ್ ಹಿಡಿದ ಈತನಿಗೆ ಗಡಿ ದಾಟಬಾರದು ಎಂಬ ಅರಿವಿರುವುದಿಲ್ಲ. ಅಲ್ಲೇ ಗದ್ಧೆಯಲ್ಲಿ ದುಡಿಯುತ್ತಿದ್ದ ಆತನ ತಂದೆಗೆ ಮಗ ಗಡಿ ದಾಟುತ್ತಿರುವುದು ಗಮನಕ್ಕೆ ಬಂದು, ಕೂಗಿದರೂ ಕೋಪದಲ್ಲಿದ್ದ ಅವನು ತಂದೆಯ ಮಾತನ್ನು ಕೇಳದೇ ವಾಪಸ್ಸು ಬರುವುದಿಲ್ಲ. ಪಾಕಿಸ್ತಾನದ ಗಡಿ ದಾಟಿಯೇ ಬಿಡುತ್ತಾನೆ.  ಗಡಿ ಕಾಯುತ್ತಿದ್ದ ಸೈನಿಕರು ಆ ಮಗುವನ್ನು ಹಿಡಿಯುತ್ತಾರೆ, ಗಾಬರಿಗೊಂಡ ತಂದೆಯೂ ಕೂಡ ಗಡಿಯನ್ನು ದಾಟುತ್ತಾನೆ. ಹಿಂದೂ ಸೈನಿಕರಿಗೆ ಈತನ ಕೈಯಲ್ಲಿದ್ದ ಆಟದ ಕ್ಯಾಟರ್ ಪಿಲ್ಲರ್ ಆಯುಧದಂತೆ ತೋರುತ್ತದೆ.  ಇವರಿಗೆ ಸುನ್ನತಿ ಚಿಕಿತ್ಸೆಯಾಗಿಲ್ಲದ ಕಾರಣ ಹಿಂದೂಗಳೆಂದು ಗೊತ್ತಾದರೂ, ಪಾಕಿಸ್ತಾನದ ಕಡೆಯ ಸ್ಪೈಗಳಾಗಿರಬಹುದೆಂದು ಇವರನ್ನು ದೆಹಲಿಯ ಜೈಲಿಗೆ ಹಾಕಲಾಗುತ್ತದೆ.

ಇಲ್ಲಿಂದ ಕಥೆ ಶುರುವಾಗುತ್ತದೆ.  ತಂದೆಯ ಅಸಹಾಯಕತೆ – ತನ್ನ ಮಗುವನ್ನು ಇನ್ನಿತರ ಕೈದಿಗಳ ಲೈಂಗಿಕ ಹಸಿವಿನಿಂದ ಬಚಾವ್ ಮಾಡಿಕೊಳ್ಳುವ ಪ್ರಯತ್ನ.  ಬಿಸ್ಕೆಟ್ಟಿನ ಆಸೆ ತೋರಿಸಿ ಆ ಪುಟ್ಟ ಮಗುವನ್ನು ಲೈಂಗಿಕವಾಗಿ ಬಳಸಲು ಪ್ರಯತ್ನಿಸುವ ವಿಕೃತ ಕಾಮಿಯೊಬ್ಬ, ಆತನೊಂದಿಗೆ ಕಾದಾಡುವ ತಂದೆ.  ರಾಮಚಂದ್ ಹಾಗೆ ಪುಟ್ಟ ಹುಡುಗನೊಬ್ಬ ಅಲ್ಲಿಗೆ ಬಂದು, ಈ ವಿಕೃತಿಗಳನ್ನೆಲ್ಲಾ ಅನುಭವಿಸಿ ಹುಚ್ಚನಾಗಿರುತ್ತಾನೆ.  ಜೈಲಿನಲ್ಲಿ ಅಪ್ಪ, ಮಗ ಕಳೆಯುವ ಮೊದಲ ರಾತ್ರಿಯಂತೂ ಮನೋಜ್ನವಾಗಿದೆ.  ಒಂದು ಕಡೆ ಈ ಹುಚ್ಚನ ಆರ್ಭಟ, ಇತ್ತ ಕಡೆ ಈ ವಿಕೃತ ಕಾಮಿಗಳ ಕಾಟ, ಮತ್ತೆ ಇನ್ನೊಬ್ಬನ ದಾದಾಗಿರಿ ಹೀಗೆ….. ಮುಗ್ದ ಬಾಲಕನೊಬ್ಬ ಅಲ್ಲಿ ಒರಟು ಹುಡುಗನಾಗಿ ಬೆಳೆಯುವ ಪರಿಯಂತೂ ಬಹಳ ಸಹಜವಾಗಿ ತೆಗೆದಿದ್ದಾರೆ. ಹೀಗೆ ಜೈಲಿನಲ್ಲಿ ಆರಂಭಗೊಳ್ಳುತ್ತದೆ ಇಬ್ಬರ ಜೀವನ.

ಇತ್ತ ಕಡೆ ತಾಯಿಗೆ ಅಕಸ್ಮಾತ್ತಾಗಿ ಗಂಡ ಮತ್ತು ಮಗ ಕಣ್ಮರೆಯಾದ ಬಗ್ಗೆ ಚಿಂತಿಸಲು ಶುರು ಮಾಡುತ್ತಾಳೆ.  ತಾನು ಕೂಡ ಬಾರ್ಡರ್ ಕ್ರಾಸ್ ಮಾಡಲು ಪ್ರಯತ್ನಿಸುತ್ತಾಳೆ.  ಸುತ್ತಮುತ್ತಲಿನ ಜನರು ಬಿಡುವುದಿಲ್ಲ.  ಅಲ್ಲೊಬ್ಬ ವ್ಯಕ್ತಿ ಆಕೆಯ ಗಂಡನಿಗೆ ವ್ಯವಸಾಯಕ್ಕಾಗಿ ಸಾಲ ಕೊಟ್ಟಿರುತ್ತಾನೆ.  ಪಂಚಾಯಿತಿಯಲ್ಲಿ ಈಕೆಯೇ ಅದನ್ನು ತೀರಿಸಬೇಕೆಂದು ತೀರ್ಮಾನ ಕೈಗೊಳ್ಳುತ್ತಾರೆ.  ಅವಳನ್ನು ಹೇಗಾದರೂ ಮಾಡಿ ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ದುರಾಸೆ ಆ ಸಾಲ ಕೊಟ್ಟಿರುವಾತನಿಗೆ.  ಇನ್ನೊಬ್ಬ ಈಕೆಯ ಕಷ್ಟವನ್ನು ನೋಡಿ ಕನಿಕರದಿಂದ ಅವಳಿಗೆ ಸಹಾಯ ಮಾಡುತ್ತಾ ಇಬ್ಬರೂ ಪ್ರೀತಿಸಲು ಶುರು ಮಾಡುತ್ತಾರೆ.  ೫-೬ ವರ್ಷಗಳು ಕಳೆದರೂ ಮಗ ಮತ್ತು ಗಂಡ ಬರುವುದೇ ಇಲ್ಲ.  ಮಹಿಳೆಯ ನೋವನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ಇಲ್ಲಿ ಮಗುವಿನ ಮೇಲಿನ ದೌರ್ಜನ್ಯ ನೋಡಿ, ಅವನನ್ನು ಒಬ್ಬ ಪೋಲಿಸ್ ಅಧಿಕಾರಿಣಿಯ ಬಳಿ ಶಿಕ್ಷಣಕ್ಕಾಗಿ ಬಿಡುತ್ತಾರೆ.  ಅವಳಿಗೆ ಈ ಹುಡುಗ ದಲಿತನೆಂಬ ಅಸಹ್ಯ.  ಇವನು ರಕ್ಷಾಬಂಧನದ ದಾರವನ್ನು ಕಟ್ಟಲು ಬೇಡಿಕೊಂಡಾಗ ಇವನನ್ನು ಮುಟ್ಟಲು ಹಿಂಜರಿಯುತ್ತಾಳೆ.  (ಅವನಿಗೆ ತನ್ನ ಮಗನಿಗೆ ಏನು ಆಗಬಾರದೆಂದು ಅವನ ಅಮ್ಮ ಕಟ್ಟಿರುತ್ತಾಳೆ).  ಆದರೂ ಇಬ್ಬರ ನಡುವೆ ಒಂದು  ಬಾಂಧವ್ಯ ಬೆಳೆಯುತ್ತದೆ.  ಹಾಗೆಯೇ ಇವನನ್ನು ಬಹು ಮಟ್ಟಿಗೆ ಬೇರೆಯವರ ದೌರ್ಜನ್ಯದಿಂದ ಕಾಪಾಡುತ್ತಾಳೆ.  ಅವಳದೊಂದು ಪ್ರೇಮಕಥೆ, ಈ ಕಥೆಯೊಂದಿಗೆ ಬೇಕಾಗಿರಲಿಲ್ಲ ಅನಿಸುತ್ತದೆ.  ಆದರೂ ಅವಳು ತನ್ನ ಪ್ರೇಮಿಯೊಂದಿಗೆ ಓಡಿಹೋಗಲು ತೀರ್ಮಾನ ಮಾಡಿದಾಗ, ಇವನ ಕೈಗೆ ಇನ್ನೊಂದು ರಕ್ಷಾಬಂಧವನ್ನು ಕಟ್ಟುತ್ತಾಳೆ.  ಆಗ ಇವನ ಮಾನಸಿಕ ತುಮುಲಗಳನ್ನು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ. ramchand-pakistani-wallpaper

ಮುಗ್ಧ ಬಾಲಕ ತನ್ನನ್ನು ತಾನು ಜಗತ್ತಿಗೆ ತೆರೆದುಕೊಳ್ಳುವ ಪರಿ,  ಇವನಿಂದಾಗಿ ಜೈಲು ಸೇರುವಂತಾಯಿತು ಎಂದು ಅಪ್ಪನ ಅಸಹನೆ, ಕೆಟ್ಟ ಚಟಗಳನ್ನು ಕಲಿಯುವುದು (ತಂದೆಗೆ ತಡೆಯಲಾಗದ ಅಸಹಾಯಕತೆ), ಅವನ ಚಟಗಳಿಗಾಗಿ ಆ ಹುಡುಗ ಜೈಲಿನಲ್ಲಿ ಬಿಸ್ಕೆಟ್ ಮುಂತಾದವನ್ನು ಮಾರುವುದು, ಜೈಲಿನಲ್ಲಿ ಪೇದೆಗಳೊಟ್ಟಿಗಿನ ಗೆಳೆತನ, ಅವರ ಸೈಕಲ್ ಕಲಿಯಲು ಪಾಡು ಪಡುವುದು, ಇಷ್ಟೆಲ್ಲಾ ನೋವಿದ್ದರೂ ಮಗನಿಗೆ ಸೈಕಲ್ ತಂದೆ ಕಲಿಸುವಾಗಿನ ಆ ಕ್ಷಣ…….ನಮ್ಮನ್ನು ಕಣ್ಣೀರಿನಲ್ಲಿ ಮುಳುಗುವಂತೆ ಮಾಡುತ್ತದೆ.

ಹೀಗೆ ಜೈಲಿನ್ನೇ ಮನೆ ಮಾಡಿಕೊಂಡ ಹುಡುಗನಿಗೆ ಹಠಾತ್ತಾಗಿ ಸ್ವಾತಂತ್ರ್ಯದ ದಿವಸ ಬಿಡುಗಡೆ ಮಾಡಲಾಗುವುದು.  ತಂದೆಗೆ ಆ ಅವಕಾಶ ದೊರಕುವುದಿಲ್ಲ.  ಆಗ ಮತ್ತೆ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಭಾಸವಾಗುವುದು. 

ಎಲ್ಲೂ ವಿಷಯವನ್ನು ಅನಗತ್ಯವಾಗಿ ಎಳೆದಿಲ್ಲ ಹಾಗೂ ಸಿನೀಮಯ ಅನ್ನಿಸುವಂತಹ ಚಿತ್ರಣವಿಲ್ಲ ಹಾಗೂ ಪಾಕಿಸ್ತಾನವನ್ನಾಗಲೀ, ಭಾರತವನ್ನಾಗಲೀ ದೂಶಿಸುವುದಿಲ್ಲ. ಬಹಳ ನೈಜ ಅಷ್ಟೇ ಮನಸ್ಸನ್ನು ಬಹಳ ಚಿಂತನೆಗೀಡಾಗುವುದಂತೆ ಮಾಡುವುದು. ಉಭಯ ರಾಷ್ಟ್ರಗಳ ನಡುವಣಾ ನಡೆಯುತ್ತಿರುವ ರಾಜಕೀಯ ಸಮರದಲ್ಲಿ, ಇವತ್ತಿನ ದಿವಸ ಯಾರು ಉಗ್ರರೋ ಎಂದು ಎಲ್ಲರೂ ಎಲ್ಲರನ್ನು ಅನುಮಾನಿಸುತ್ತಿರುವ ಕಾಲದಲ್ಲಿ, ಮುಗ್ದ ಜನರ ಬವಣೆಯನ್ನು ತೋರಿಸುವ ಈ ಚಿತ್ರ ಹೃದಯಕ್ಕೆ ತಟ್ಟುವುದರಲ್ಲಿ ಸಂಶಯವೇ ಇಲ್ಲ.


Blog Stats

  • 71,866 hits
ಮಾರ್ಚ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

Top Clicks

  • ಯಾವುದೂ ಇಲ್ಲ