Archive for the ‘ಪ್ರತಿಧ್ವನಿ’ Category
ಪ್ರತಿಧ್ವನಿ : ಗೂಡು ಬಿಟ್ಟ ಹಕ್ಕಿಗಳು!
Posted ಮೇ 23, 2009
on:
– ಸುಪ್ರಿಯಾ.ಎಸ್, ಬೆಂಗಳೂರು
(ಕಳೆದ ಸಂಚಿಕೆಯಲ್ಲಿ ಮುಖಪುಟದ ವಿಷಯ ‘ಗೂಡು ಬಿಟ್ಟ ಹಕ್ಕಿಗಳು’ ಸಂಬಂಧಿಸಿದಂತೆ ಪ್ರಕಟವಾದ ಲೇಖನಗಳಿಗೆ ಪ್ರತಿಕ್ರಿಯೆಯಾಗಿ ಬಂದ ಲೇಖನ)
ಓದಿಗಾಗಿ, ಕೆಲಸಕ್ಕಾಗಿ, ಸೌಕರ್ಯಗಳಿಗಾಗಿ ಮನೆಯಿಂದ ದೂರ ಇದ್ದು ಬದುಕುವ ಪದ್ಧತಿ ಸರಿಯೇ?
ಇಲ್ಲ, ಓದು, ಕೆಲಸ ಮತ್ಯಾವುದೋ ಕಾರಣಕ್ಕೆ ಮನೆಯಿಂದ ದೂರ ಉಳಿಯುವುದು ಸರಿಯಲ್ಲ. ಇದರಿಂದ ಪರಂಪರಾಗತವಾಗಿ ಬಂದ ಬಾಂಧವ್ಯಕ್ಕೆ ಕುಂದುಂಟಾಗುತ್ತದೆ. ಮನುಷ್ಯನಿಗೆ ಸಹಜವಾಗಿ ಸಿಕ್ಕಬೇಕಾದ ಕೌಟುಂಬಿಕ ಸಂಸ್ಕಾರಗಳು ದೊರೆಯದೆ ಆತನ ವ್ಯಕ್ತಿತ್ವ ಅಪೂರ್ಣವಾಗಿ ಉಳಿಯುತ್ತದೆ.
ತಂದೆ ತಾಯಿ ಇಬ್ಬರೂ ದುಡಿಯುವ, ನಗರದ ಅನೇಕ ಕುಟುಂಬಗಳಲ್ಲಿ ಮಕ್ಕಳು ಮನೆಯಲ್ಲಿರುವುದಿಲ್ಲ. ದುಡಿಮೆಯ ಗಡಿಬಿಡಿಯಲ್ಲಿ ಮಕ್ಕಳ ಕಡೆಗೆ ಹೆಚ್ಚಿನ ಗಮನ ಕೊಡಲಾಗುವುದಿಲ್ಲವೆಂದು ತಂದೆ ತಾಯಿಯರು ಅವರನ್ನು ದೂರದ ರೆಸಿಡೆನ್ಷಿಯಲ್ ಸ್ಕೂಲುಗಳಲ್ಲಿ ಬಿಡುತ್ತಾರೆ. ಚಿಕ್ಕ ವಯಸ್ಸಿನಲ್ಲಿ ತಾಯಿಯ ಆರೈಕೆಯಲ್ಲಿ, ತಂದೆಯ ಕಣ್ಣಳತೆಯ ಶಿಸ್ತಿನಲ್ಲಿ ಬೆಳೆಯಬೇಕಾದ ಮಗು ಅನಾಮಿಕರಾದ ಶಿಕ್ಷಕರ ಬಳಿ ಬೆಳೆಯುತ್ತದೆ. ತಾಯಿಯ ಪ್ರೀತಿಯಿಂದ, ಕಕ್ಕುಲತೆಯಿಂದ ಅದು ವಂಚಿತವಾಗುತ್ತದೆ. ಮುಂದೆ ಅದೆಷ್ಟೇ ಬಯಸಿದರೂ ಆ ಮಗುವಿಗೆ ಕಳೆದು ಹೋದ ಬಾಲ್ಯದ ಮಮಕಾರವನ್ನು, ಪ್ರೀತಿಯನ್ನು ಕೊಡುವುದಕ್ಕೆ ಯಾರಿಗೂ ಸಾಧ್ಯವಾಗುವುದಿಲ್ಲ. ಮಗುವಿನ ಬಾಲ್ಯ ಅಪೂರ್ಣವಾಗಿಯೇ ಉಳಿದುಹೋಗುತ್ತದೆ.
ಓದಿಗಾಗಿ ದೂರದ ಊರುಗಳಿಗೆ ಹೋಗುವವರು ಹೆಚ್ಚಿನ ಸ್ವಾತಂತ್ರ್ಯವನ್ನು ಪಡೆಯುತ್ತಾರಾದರೂ, ಓದಿನಲ್ಲಿ ವಿನಿಯೋಗಿಸುವುದಕ್ಕೆ ಹೆಚ್ಚಿನ ಸಮಯ ಅವರಿಗೆ ಲಭ್ಯವಾಗುತ್ತದೆಯಾದರೂ ಮನೆಯೆಂಬ ಘಟಕದಲ್ಲಿ ದೊರೆಯುವ ಅನುಭವದಿಂದ ವಂಚಿತರಾಗುತ್ತಾರೆ. ತಮ್ಮ ಜವಾಬ್ದಾರಿಗಳು, ತಮ್ಮ ವ್ಯಕ್ತಿತ್ವದ ಓರೆಕೋರೆಗಳು, ತಾಯಿ ತಂದೆಯರ ವ್ಯಕ್ತಿತ್ವದ ಪ್ರಭಾವ ಅವರಿಗೆ ಸಿಕ್ಕುವುದಿಲ್ಲ. ಜೊತೆಗೆ ಮನೆಯಿಂದ ದೂರ ಉಳಿದಾಗ ಹಾದಿ ತಪ್ಪಲು ಸಾವಿರಾರು ಪ್ರಲೋಭನೆಗಳು ಸಿಕ್ಕುತ್ತವೆ. ಮನೆಯಲ್ಲಿ ದುಶ್ಚಟಗಳಿಗೆ ಸಿಕ್ಕದಿದ್ದ ಸ್ವಾತಂತ್ರ ಹೊರಗೆ ಸಿಕ್ಕುತ್ತದೆ. ಇದರಿಂದ ಓದಿನಲ್ಲಿ ಅಡಚಣೆಯಾಗುತ್ತದೆ. ಓದಿನಲ್ಲಿ, ವಯ್ಯಕ್ತಿಕ ಬದುಕಿನಲ್ಲಿ ಅನಿರೀಕ್ಷಿತ ಅವಘಡಗಳು ಸಂಭವಿಸಿದಾಗ, ವಯೋ ಸಹಜವಾದ ಗೊಂದಲಗಳಲ್ಲಿ ಮುಳುಗಿದಾಗ ಮನಸ್ಸು ಕದಡಿದಾಗ ಅವನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಾ ಸೂಕ್ತವಾದ ಸಲಹೆ, ಬೆಂಬಲ ನೀಡುವ ಆತ್ಮವಿಶ್ವಾಸ ವೃದ್ಧಿಸುವ ಮನೆಯ ಪರಿಸರ ಮನೆಯಿಂದ ದೂರವಿರುವವರಿಗೆ ಸಿಕ್ಕುವುದಿಲ್ಲ.
ಓದು, ಕೆಲಸ ಎಂದು ದೂರದ ಊರುಗಳಲ್ಲಿ,ದೇಶಗಳಲ್ಲಿ ಇರುವ ಜನರು ತಮ್ಮವರೆಲ್ಲಾ ಇದ್ದರೂ ಅನಾಥರಂತೆ ಬದುಕಬೇಕಾಗುತ್ತದೆ. ನಮ್ಮವರ, ಅಕಾರಣವಾಗಿ ನಮ್ಮನ್ನು ಪ್ರೀತಿಸುವವರ ಆತ್ಮೀಯತೆಯಿಲ್ಲದೆ ಬದುಕನ್ನು ಕೃತಕ ನಗೆಗಳ, ಸ್ವಾರ್ಥದಿಂದ ಕೂಡಿದ ಮೆಚ್ಚುಗೆಗಳ ನಡುವೆ ಕಳೆಯಬೇಕಾಗುತ್ತದೆ.
ದುಡ್ಡಿನ ಹಿಂದೆ ಬಿದ್ದು, ಸ್ವಾರ್ಥಕ್ಕಾಗಿ, ಸುಖ ಸೌಕರ್ಯದ ಆಸೆಯಿಂದ ಮನೆಯಿಂದ ದೂರಾಗುವವರಿಗೆ ಅವೆಲ್ಲಾ ದೊರಕಬಹುದು ಇಲ್ಲವೇ ದೊರಕದಿರಬಹುದು. ಅವರು ತಮ್ಮ ಮನೆಯಲ್ಲಿ ಇದ್ದದ್ದಕ್ಕಿಂತ ಹೆಚ್ಚು ಸುಖವಾಗಿ, ಸೌಕರ್ಯಗಳನ್ನು ಸಂಪಾದಿಸಬಹುದು. ಆದರೆ ಅವರ ಬದುಕಿನ ಪುಸ್ತಕದಲ್ಲಿನ ಅನೇಕ ಹಾಳೆಗಳು ಖಾಲಿಯಾಗಿ ಉಳಿದುಹೋಗುತ್ತವೆ. ಏನೆಲ್ಲ ಇದ್ದರೆ ಏನು, ಮನುಷ್ಯನ ಮನಸ್ಸು ತುಂಬಿದ ಮನೆಯಾಗದಿದ್ದ ಮೇಲೆ?
ಅಲ್ಲವೇ?
ಇತ್ತೀಚಿನ ಟಿಪ್ಪಣಿಗಳು