ಕಲರವ

Archive for the ‘ಇದು ಕತೆಯಂತೆ!’ Category

– ರಂಜಿತ್ ಅಡಿಗ, ಕುಂದಾಪುರ

ಅಪ್ಪನ ಬೈಗುಳ ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಕಾರಣ ಚಿಕ್ಕದು, ಅಕ್ಕನಿಂದ ಪತ್ರ ಬಂದಿತ್ತು ಅಕ್ಕನೆಂದರೆ ನನ್ನ ಪಾಲಿಗಂತೂ ದೊಡ್ಡ ಧೈರ್ಯಸ್ಥೆ! ಅಷ್ಟುವರ್ಷ ಪ್ರೀತಿಯಿಂದ ಸಾಕಿದ ಅಪ್ಪನನ್ನು ಧಿಕ್ಕರಿಸಿ ಯಾವುದೋ ಹುಡುಗನ ಪ್ರೀತಿಯ ಮಾಯಾಮೃಗಕ್ಕೆ ಆಸೆಪಟ್ಟು, ಕಟ್ಟು ಪಾಡಿನ ಲಕ್ಷಣ ರೇಖೆಯನ್ನು ದಾಟಿದವಳು. ಸದಾ ಮುಗುದೆಯಂತೆ ಮಾಡುತ್ತಿದ್ದ ಅಕ್ಕನಿಗೆ ಅಂತಹ ಮಾನಸಿಕ ಶಕ್ತಿಯನ್ನು ನೀಡಿದ ಮಹಾನ್ ಶಕ್ತಿ ಪ್ರೇಮವೆಂದು ಅಚ್ಚರಿಪಟ್ಟಿದ್ದೆ!flower

ಅಪ್ಪನ ಕೋಪಕ್ಕೆ ತಲೆಕೆಡಿಸಿಕೊಳ್ಳದೆ ’ಆದದ್ದು ಆಗಿ ಹೋಯಿತು, ಇನ್ನಾದರು ಒಟ್ಟಿಗೆ ಇರೋಣ….’ ಎಂಬ ಸಂಧಾನ ಪತ್ರ ಆಗಾಗ್ಗೆ ಕಳುಹಿಸುತ್ತಲೇ ಇರುತ್ತಾಳೆ. ಈ ಪತ್ರಗಳ ಬಿಸಿಗೆ ಅಪ್ಪನ ಕೋಪದ ಮಂಜುಗಡ್ಡೆ ಇನ್ನು ಕರಗಲೇ ಇಲ್ಲ. ಮತ್ತೆ ಇನ್ನೊಂದು ಪತ್ರ ಹಾಕಿದ್ದಳು.

ಅವಳಿಗಾಗಲೇ ಈ ಬೈಗುಳ. ನನಗೆ ಯಾಕೋ ಕಸಿವಿಸಿ, ಅವರು ಬೈದ ಮಾತುಗಳು ನನಗೂ ತಾಗುತ್ತಿದ್ದವು. ಪ್ರೇಮವೆಂದೊಡನೆ ಎಲ್ಲರ ಮನೆಗಳಲ್ಲಿಯೂ ತಂದೆ ತಾಯಿಗಳ ಮಾಮೂಲಿ ಮಾತುಗಳಿರಬಹುದು ಆದರೆ ನಿಜವಾದ ಪ್ರೀತಿಯಲ್ಲಿ ತೋಯ್ದಿರುವ ನನ್ನಂತವಳಿಗೆ ಇದು ಚುಚ್ಚುವ ಈಟಿಯಂತದ್ದು. ಅಸಲು ದೊಡ್ಡವರಿಗೆ ಪ್ರೀತಿಯ ಮೇಲಿಷ್ಟು ದ್ವೇಷ ಯಾಕೆ ಅಂತ ಅರ್ಥವಾಗುವುದಿಲ್ಲ. ಹರೆಯದ ವಯಸ್ಸಿನಲ್ಲಿ ಅವರೂ ಪ್ರೇಮಿಸಿರಲಿಲ್ಲವೇ? ಪ್ರೇಮದ ಗಾಢತೆ, ಅದರ ಸವಿಸ್ಪರ್ಶ ಅವರೂ ಅನುಭವಿಸಿರಲಿಲ್ಲವೇ? ಆದರೂ ಇದನ್ನೆಲ್ಲ ಧೈರ್ಯವಾಗಿ ನಿರ್ಭಯತೆಯಿಂದ ತಂದೆಯೆದುರು ಹೇಳುವಂತಹ ಅಕ್ಕನ ಧೈರ್ಯ ಧಿಮಾಕು ನನ್ನ ಬಳಿ ಇಲ್ಲ. ಆ ಭಯ ನಿಜಕ್ಕೂ ಧೈರ್ಯವಿಲ್ಲದೆಯಷ್ಟೇ ಅಲ್ಲ, ಇಷ್ಟು ದಿನ ತಂದೆ ತೋರಿದ ಪ್ರೀತಿಯೆ ಅಂತಹ ಮಾತಾಡದಂತೆ ಕಟ್ಟಿಹಾಕಿರುವುದು.

ಹೌದು…. ತಂದೆಗೆ ನನ್ನ ಮೇಲೆ ಅಗಾಧ ಪ್ರೀತಿ. ಅಕ್ಕ ಹೋದ ಮೇಲಂತೂ ಅವರಿಗೆ ನನ್ನ ಮೇಲೆ ಪ್ರೀತಿ ಇಮ್ಮಡಿಯಾಗಿದೆ. ಯಾವ ವಿಷಯಕ್ಕೂ ನನ್ನ ನಿರ್ಧಾರಕ್ಕೆ ಅಡ್ಡಿ ಬರುವವರಲ್ಲ ಅಲ್ಲದೇ ಜಬ್ದಾರಿಯಿಂದ ಬೆಳೆಸಿದ್ದರು. ಆದರೆ ಮದುವೆ ವಿಷಯಕ್ಕೆ ಬಂದರೆ
ಮಾತ್ರ ನನಗೆ ನಿರ್ಣಯದ ಸ್ವಾತಂತ್ರ್ಯ ನೀಡುವುದು ಅನುಮಾನವೇ!  ಅದಕ್ಕೆ ಕಾರಣವನ್ನೂ ಆಗಾಗ್ಗೆ ಹೇಳುತ್ತಿರುತ್ತಾರೆ. ‘ಹರೆಯಕ್ಕೆ ಬಂದವರ ಕಣ್ಣು ಕುರುಡಂತೆ’. ಆದರೆ ನನಗೆ ಈ ಅಭಿಪ್ರಾಯದ ಬಗ್ಗೆ ಕೊಂಚವೂ ನಂಬಿಕೆ, ಒಪ್ಪಿಗೆಯಿಲ್ಲ.

ಪಕ್ಕದಲ್ಲೇ ಬಿದ್ದಿದ್ದ ಎಕನಾಮಿಕ್ಸ್ ಪುಸ್ತಕದ ಮಧ್ಯಭಾಗದಲ್ಲಿ ಬಚ್ಚಿಟ್ಟಿದ್ದ ಅವನ ಫೋಟೊ ಕೈಗೆತ್ತಿಕೊಂಡೆ. ಅವನ ತುಟಿಯಂಚಿನ ಮುಗ್ಧ ನಗು ಸೂಜಿಗಲ್ಲಂತೆ ಸೆಳೆಯುತ್ತಿತ್ತು. ಕಣ್ಣ ಹೊಳಪು, ಆಕರ್ಷಣೆಗೆ ಮನ ತಲೆಬಾಗಿತ್ತು. ನಿಜವಾಗಿಯೂ ಹೇಳೆಬೇಕೆಂದರೆ ಆತನ ಸೌಂದರ್ಯವನ್ನು ಇಷ್ಟಪಟ್ಟು ಪ್ರೇಮಿಸಿದ್ದಲ್ಲ. ಸೌಂದರ್ಯಕ್ಕೆ ಮೀರಿದ ರಹಸ್ಯವೇನೋ ಆತನಲ್ಲಿದೆ. ಅದು ಆತನ ನಡೆ, ಮಾತು, ನಗು, ದಿರಿಸು ಏನೂ ಆಗಿರಬಹುದು. ಒಟ್ಟಿನಲ್ಲಿ ಆತನೆಂದರೆ ನಂಗಿಷ್ಟ.

ಆದರೆ ಇವತ್ತಿಗೂ ಚಿಕ್ಕ ಅನುಮಾನದ ಮೊಳಕೆ ಎದೆಯ ಭೂಮಿಯಲ್ಲಿ ಇದ್ದೇ ಇದೆ. ಅದೇನೆಂದರೆ, ಆತನೊಳಗೆ ನನ್ನ ಬಗ್ಗೆ ಪ್ರೇಮದ ಭಾವನೆ ಇದೆಯಾ ಎಂದು. ಯಾಕೆಂದರೆ ಯಾವತ್ತೂ ಅದನ್ನು ಅವನ ಬಳಿ ಕೇಳಿಲ್ಲ. ನನ್ನ ಇಂಟ್ರಾವರ್ಟ್ ಮನಸತ್ವಕ್ಕೆ ಅದು ಸಾಧ್ಯವಾಗುತ್ತದಾ ಇಲ್ಲವಾ ಎಂಬ ಭಯ ನನ್ನಲ್ಲಿದೆ. ಅವನು ಮೊದಲು ಭೇಟಿಯಾದಾಗಿನಿಂದ ಇಲ್ಲಿಯವರೆಗೂ ಒಮ್ಮೆ ಅದೂ ಕಾಲೇಜ್ ಡೇ ದಿನದ ಫೋಟೊ ಆಲ್ಬಮ್‌ನಿಂದ ಆತನ ಫೋಟೊ ಕದ್ದಿದ್ದನ್ನು ಬಿಟ್ಟರೆ, ಪ್ರೇಮ ನಿವೇದನೆಯ ಪ್ರಯತ್ನವಾಗಲೀ, ಲೆಟರ್ ಮೂಲಕ ಹೇಳುವ ಧೈರ್ಯವಂತ ನಿರ್ಧಾರವಾಗಲೀ ಮಾಡಿದ ನೆನಪಿಲ್ಲ. ಆದರೆ ಆತ ನನ್ನೆಡೆಗೆ ನೋಡುವ ನೋಟದಲ್ಲಿನ ಚಿಲುಮೆ, ನೀಡುವ ಗೌರವ, ಯಾವತ್ತೂ ನನ್ನ ಹೃದಯದಲ್ಲಿ ‘ಅವನೂ ಪ್ರೀತಿಸುತ್ತಿದ್ದಾನೆ’ ಎಂಬ ಮಾತು ಮಾರ್ದವಗೊಳ್ಳುವಂತೆ ಮಾಡುತ್ತಿರುತ್ತದೆ.

ಕ್ಲಾಸಿನಲ್ಲಿ ಕೆಲವೊಮ್ಮೆ ಆತನನ್ನು ಗಮನಿಸುತ್ತಿರುತ್ತೇನೆ. ಯಾರ ಬಳಿಯೂ ಹೆಚ್ಚು ಮಾತಿಲ್ಲ. ಅವನಾಯಿತು. ಓದಾಯಿತು ಎಂಬಂತಿರುತ್ತಾನೆ. ನನ್ನಂತೆಯೇ ಶುದ್ಧ ಇಂಟ್ರಾವರ್ಟ್ ಇರಬೇಕು. ಅವನೊಳಗಿರುವ ನನ್ನ ಬಗೆಗಿನ ಪ್ರೇಮವನ್ನು ತೋಡಿಕೊಳ್ಳಲು ಅದೇ ಅಡ್ಡಿ ಬರುತ್ತದೆ ಅಂದುಕೊಂಡು ವಿಲಪಿಸುವ ಹೃದಯಕ್ಕೆ ಸಮಾಧಾನ ಹೇಳುತ್ತಿರುತ್ತದೆ.

ಅವನನ್ನು ಭೇಟಿ ಮಾಡಿದ ಕ್ಷಣಗಳೆಲ್ಲ ಅವಿಸ್ಮರಣೀಯ. ನನ್ನೆಡೆಗೆ ಆತ ನೋಡಿದ ಚಿಕ್ಕ ನೋಟವನ್ನೂ ಕೂಡ ಮನಸ್ಸು ರೆಕಾರ್ಡ್ ಮಾಡಿಟ್ಟುಕೊಂಡಿರುತ್ತದೆ. ಅದನ್ನು ಮನಸ್ಸು ಮೆಲುಕು ಹಾಕಿದಾಗಲೆಲ್ಲ ಹೃದಯ ನವಿಲುಗರಿಬಿಚ್ಚಿ ಕುಣಿದಾಡುತ್ತದೆ. ಅಬ್ಬ! ಪ್ರೇಮವೇ, ನಿನ್ನ ಒಂದು ಚಿಕ್ಕಲಹರಿ ಇಷ್ಟು ಗಾಢವಾಗಿ ಮನ ತಟ್ಟುತ್ತಾ ಎಂದು ಚಿಕ್ಕ ಮಗುವಿನಂತೆ ಅಚ್ಚರಿ ಪಡುತ್ತೇನೆ! ಅಂತಹ ಅನುಭವ ಪಡೆಯದ ಜೀವಗಳನ್ನು ನೋಡಿ ಗೆಲುವಿನ ನಗೆ ಮೂಡುತ್ತದೆ ನನ್ನೊಳಗೆ.

ಸದ್ಯಕ್ಕೆ ಅವನ ಸ್ನಿಗ್ಧ ನಗುವಿನ ಚಿಕ್ಕ ಫೋಟೋನೇ ನನ್ನ ಆಸ್ತಿ. ಅವನ ನಗುವಿನೊಳಗೆ ಮುಳುಗಿ ಒದ್ದೆ ತಂಪಿನ ಸುಲ್ಹ ಅನುಭವಿಸುತ್ತೇನೆ. ಖುಷಿಯಾದಾಗ ದುಃಖವಾದಾಗ ಏನೂ ಭಾವನೆ ಮೂಡದಿರುವಾಗ – ಯಾವಾಗಲೂ ಅವನೊಳಗೇ ಇರುವಾಸೆ ಮನಸ ಬಸಿರಿಗೆ. ಈ ಆಸೆಯ ಬಸಿರಿಗೆ ಹೆರಿಗೆ ಯಾವಾಗ?

ಸ್ವಲ್ಪ ದಿನ ಕಳೆಯಿತು. ಒಮ್ಮೆ ತಂದೆ ಮನೆಗೆ ಬರುವಾಗ ಎಂದಿನಂತಲ್ಲದೆ ಬಹಳ ಉತ್ಸಾಹದಿಂದ ಬಂದರು. ಅವರು ತಂದ ಸುದ್ದಿಗೆ ನನ್ನ ಮನಕ್ಕೆ ಬುದ್ಧಿ ಭ್ರಮಣೆಯಾದಂತಾಯಿತು. ನನ್ನ ಮದುವೆಗೆ ಯಾವುದೋ ಹುಡುಗನನ್ನು ಹುಡುಕಿದ್ದು ನನ್ನ ನೋಡಲು ಒಂದೆರಡು ದಿನಗಳಲ್ಲಿ ಬರುತ್ತಾನಂತೆ. ಒಂದೇ ಉಸಿರಿಗೆ ರೂಮಿಗೆ ಓಡಿದೆ. ಅವರು ನಾಚಿಕೆ ಅಂದುಕೊಂಡರು. ಬಾಗಿಲು ಹಾಕಿಕೊಂಡು ಹಾಸಿಗೆಯಲ್ಲಿ ಬಿದ್ದು ಮನಸಾರೆ ಅತ್ತೆ. ಮನದ ರೋದನ ಮುಸಲ ಧಾರೆಯಾಗಿ ದಿಂಬನ್ನೆಲ್ಲ ಒದ್ದೆಯಾಗಿಸಿತು. ಮೌನ ಎಷ್ಟು ಅಸಹನೀಯ! ಪ್ರೀತಿ ಅವನಲ್ಲೂ ಇದೆ. ಆದರೆ ಅವರ ಮಧ್ಯೆ ಹಾಳು ಭಯವಿದೆಯಲ್ಲ! ಭಯದ ಮಗುವಾದ ಮೌನದ ಹೊರೆಯಿದೆಯಲ್ಲ ಅದನ್ನು ಸರಿಸುವವರು ಯಾರು? ಅವನಾ..? ನಾನಾ..?

ಗಂಡಸರಿಗೇನಾಗಬೇಕು? ಮರೆತೂ ಸುಖವಾಗಿರಬಲ್ಲರು. ಆದರೆ ಹೆಂಗಸಿನ ಪ್ರಥಮ ಪ್ರೇಮವಿದೆಯಲ್ಲ, ಅಂಟಿಕೊಂಡರೆ ಬಿಡದು. ಬದುಕಿನುದ್ದಕ್ಕೂ ಹೃದಯದ ಹೊಟ್ಟೆಯಲ್ಲಿಟ್ಟುಕೊಂಡೇ ಬಾಳಬೇಕು. ಆ ಹಾಳು ಹಾದರ ಯಾರಿಗೆ ಬೇಕು?

ಇಷ್ಟಕ್ಕೂ ಒಂದು ವಿಷಯ ಮಾತ್ರ ಖಂಡಿತ. ಹೃದಯಕ್ಕೆ ಬೇರಾರೂ ಬೇಡ. ಅವನಿಗೇ ಮೀಸಲಾಗಿದೆ ಈ ಬದುಕು. ಬೇರೆ ಯಾರನ್ನೂ ಪ್ರೀತಿಸಲಾರೆ. ಬೇರಾರಿಗೂ ಒಲವಧಾರೆ ಎರೆಯಲಾರೆ.

ಆದರೆ ಇದನ್ನೆಲ್ಲ ತಂದೆಗೆ ಹೇಗೆ ಹೇಳಲಿ? ಹತ್ತೊಂಭತ್ತು ವರ್ಷ ಪೋಷಿಸಿದವರವರು. ತಿದ್ದಿ ತೀಡಿದವರು… ಹೇಗೆ ಎದುರಾಡಲಿ ಅಕ್ಕನಂತೆ.

ಸ್ವಲ್ಪ ಹೊತ್ತು ಕುಳಿತು ಆಲೋಚಿಸಿದೆ. ಇಬ್ಬರ ಪ್ರೀತಿ ನಡುವೆ ಮೌನ ಭಾರ, ಅಸಹನೀಯ. ಅವನ ಬಳಿಯೇ ಹೋಗಬೇಕು. ಭಯ, ಸಂಕೋಚ ಎಲ್ಲದಕ್ಕೂ ತಿಲಾಂಜಲಿ ಕೊಟ್ಟು ಬಿಡಬೇಕು. ನನ್ನೊಳಗಿನೊಲವು ತಿಳಿಸಿಬಿಡಬೇಕು. ನಾಳೆ ಹೇಳುವೆನೆಂದರೆ ಬಾಳೆ ಕೂಪದಲ್ಲಿ ಬಿದ್ದೀತು. ಇವತ್ತೇ ಏನಾದರಾಗಲೀ ಹೇಳಿ ಬಿಡಬೇಕೆಂದು ನಿರ್ಧರಿಸಿದೆ.

ಒಂದುವೇಳೆ ಆತ ಒಲ್ಲೆ ಎಂದರೆ? ದಡ ಕಾಣದ ಹಡಗಿನಂತಾದೀತು ಮನಸು. ಅಂತಹ ಪರಿಸ್ಥಿತಿ ಊಹಿಸಲೂ ನಿರಾಕರಿಸಿತು ಮನ.
……………….

ಪ್ರಿಯ ಸಖನಿಗೆ,
ಭರಿಸಲಾಗದಷ್ಟು ಹೊರೆಯಾಗಿದೆ ಈ ಪ್ರೀತಿ. ಹಂಚಿಕೊಳ್ಳದೇ ವಿಧಿಯಿಲ್ಲ ಎಂಬಂತಾಗಿದೆ. ಕಣ್ಣ ಕುಡಿಯಂಚಿನ ಪ್ರೇಮದಾಟ ಸಾಕು. ಹೃದಯದ ‘ನೀನೇ ಬೇಕೆಂಬ’ ಹಠ ಹೆಚ್ಚಾಗಿದೆ. ನಿನ್ನೊಳಗೂ ನನ್ನ ಬಗ್ಗೆ ಪ್ರೇಮವಿದೆಯಾ? ಇದೆಯಾದರೆ ಹಂಚಿಕೋ. ಇಲ್ಲವಾದರೆ ಈ ಪತ್ರ ಹರಿದು ಚೂರು ಮಾಡು.
        ನಿನ್ನ
        ಶರ್ಮಿಳ

ಹೀಗೆ ಬರೆದು ಮಡಚಿ ಪುಸ್ತಕದೊಳಗಿಟ್ಟುಕೊಂಡಳು. ಕಾಲೇಜು ಬಿಡುವ ಸಮಯಕ್ಕಾಗಿ ಕಾಯತೊಡಗಿದೆ. ಕ್ಲಾಸಿನಲ್ಲಿ ಅನ್ಯಮನಸ್ಕತೆ ಬದುಕು ಏನಾದೀತೋ ಎಂಬ ಭೀತಿ. ಆತನ ಉತ್ತರವೇನೋ ಎಂಬ ಆತಂಕ. ಏನಾದರಾಗಲಿ ಇಂದೇ ನಿರ್ಧಾರವಾಗಿ ಹೋಗುವುದೆಂಬ ನಿರುಮ್ಮಳತೆ ಮತ್ತೊಂದು ಕಡೆ.

ಸಂಜೆ ಕಾಲೇಜು ಬೀಡುವ ಸಮಯದಲ್ಲಿ ಆಗಸದ ತುಂಬ ಮೋಡ. ಸಣ್ಣ ಮಬ್ಬುಗತ್ತಲೆ. ಉಸಿರು ಬಿಗಿ ಹಿಡಿದು ಕಾಲೇಜು ಗೇಟ ಬಳಿ ನಿಂತೆ. ತುಂಬು ಜನಸಂದಣಿ ಮಧ್ಯೆ ಜಾಗ ಮಾಡಿಕೊಂಡು ಆತ ಬರುತ್ತಿದ್ದ. ಹತ್ತಿರ. ಇನ್ನೂ ಹತ್ತಿರ ಬಂದ. ಹತ್ತಿರ ಬಂದಷ್ಟೂ ಹೆಚ್ಚುವ ಭಯ, ನಡುಕ.

“ಒಂದ್ನಿಮಿಷ ನನ್ನ ಜೊತೆ ಬರ್ತೀರಾ?” ಕೇಳಿದೆ. ಆಶ್ಚರ್ಯಕರ ಮುಖಭಾವದೊಂದಿಗೆ ‘ಸರಿ’ ಎಂದನಾತ.

ಮೈದಾನದೆಡೆಗೆ ಏಕಾಂತವನ್ನರಸಿ ಹೋಗುತ್ತಿದ್ದರೆ ನನ್ನ ಹಿಂದೆಯೇ ಬರುತ್ತಿದ್ದ, ಚಿಕ್ಕದಾಗಿ ಊಟದೆಲೆಗೆ ನೀರು ಚಿಮುಕಿಸಿದಂತೆ ಹೊಯ್ಯುತ್ತಿತ್ತು ಮಳೆ.

flower ಮೈದಾನದ ಮೂಲೆಗೆ ಕರೆದೊಯ್ದು ನೀಡಿದ ಪತ್ರ, ಆತನ ಕೈಗಿಟ್ಟು ಆತನನ್ನು ಎದುರಿಸಲಾಗದೆ ಈ ಕಡೆ ಬಂದು ಬಿಟ್ಟೆ. ಮರದ ಕೆಳಗೆ ಮರೆಯಲ್ಲಿ ನಿಂತು ಆತನನ್ನು ಗಮನಿಸುತ್ತಿದ್ದೆ.

ಮಳೆ ಸಣ್ಣಗೆ ಬರುತ್ತಿದ್ದುದು ಹೆಚ್ಚುತ್ತಾ ಹೋಯಿತು. ಅಂತೆಯೇ ನನ್ನ ಆತಂಕವೂ! ಆತ ಓದುವುದ ಮುಗಿಸಿ ಕಣ್ಣು ಮುಚ್ಚಿ ನಿಂತಿದ್ದ. ಮೊಗದ ತುಂಬ ಮಳೆನೀರು. ಅಳುತ್ತಿರುವನಾ? ಗೊತ್ತಾಗಲಿಲ್ಲ.

ಸ್ವಲ್ಪಹೊತ್ತು ಕಾದೆ. ಬರಲಿಲ್ಲ. ತಿರುಗಿ ನೋಡಲೂ ಇಲ್ಲ. ಭಯವಾಯಿತು. ಆತನ ಬಳಿ ಓಡಿದೆ. ಆತನಿನ್ನೂ ತೊಯ್ಯುತ್ತಲೇ ಇದ್ದ; ಬಯಲ ಮಧ್ಯದ ಮರದಂತೆ. ಅವನ ಶರಟು ಹಿಡಿದೆ. “ಏನಾಯ್ತು” ಕೇಳಿದೆ. ನಿರ್ಭಾವುಕ ನೋಟ ನನ್ನತ್ತ ಎಸೆದ. “ಸಾರಿ ಶರ್ಮಿಳ ಶರ್ಮಿಳ ಇಷ್ಟು ದಿನ ನಿನ್ನನ್ನು ಕಾಡಿದ್ದಕ್ಕೆ ಪ್ರೀತಿ ನನ್ನಲ್ಲೂ ಇದೆ” ಅಂದ. ನನ್ನ ಮೇಲೆ ಬೀಳುತ್ತಿರುವುದು ನೀರಹನಿಯಲ್ಲ ಪನ್ನೀರ ಸುರಿಮಳೆ ಅನ್ನಿಸಿತು. ಆನಂದದಿಂದ ತಬ್ಬಿಕೊಂಡೆ ಮತ್ತೆ ಹೇಳಿದೆ, “ನಾನೇ ನಿನ್ನ ಬಳಿ ಬಂದು ಕೇಳಬೇಕಿತ್ತು. ಕ್ಷಮಿಸು ಇಷ್ಟು ದಿನ ಹೇಳದಿದುದಕ್ಕೆ ಕಾರಣ ನನಗಿದ್ದ ಭಯವೇ. ನಿನ್ನ ನಿರಾಕರಣೆಯ ಭಯ. ನೀನೇ ಒಪ್ಪಿಕೊಂಡ ಮೇಲೆ ಇನ್ನು ಯಾವ ಭಯವೂ ಇಲ್ಲ.”

“ಆದರೆ ನನ್ನ ತಂದೆ ನನಗೆ ಬೇರೆ ಹುಡುಗನನ್ನು ನೋಡುತ್ತಿದ್ದಾರೆ…” ಅಂದೆ.

“ಇವತ್ತೇ ಹೋಗಿ ಮಾತಾಡುತ್ತೇನೆ. ಪ್ರೀತಿ ಮಾಡಿದರೆ ಭಯ ಪಡಬಾರದು. ಇದೇ ನಾನು ಕಲಿತ ಪಾಠ.”

“ನನ್ನ ತಂದೆ ಒಪ್ಪದಿದ್ದರೆ…?”

“ಒಪ್ಪಿಸುವೆ ಎಂಬ ನಂಬಿಕೆ ನನಗಿದೆ.” ಅಂದ.

ಜಡಿ ಮಳೆಯಲ್ಲಿ ಇಬ್ಬರೂ ಒಟ್ಟಾಗಿ ಒದ್ದೆಯಾದೆವು. ಇನ್ನು ಯಾವ ಬೆದರು ಮಳೇಗೂ ಬಗ್ಗುವವಳಲ್ಲ ನಾನು, ಸಂಗಾತಿಯಾಗಿ ಅವನಿರುವ ತನಕ…

ಈ ಕಥೆಯನ್ನು ಬರೆದವರು ಸುಪ್ರೀತ್.ಕೆ.ಎಸ್

ಓದುತ್ತಿದ್ದ ಪುಸ್ತಕದ ವಿಚಾರ ಬಹಳ ಸೂಕ್ಷ್ಮದ್ದಾಗಿತ್ತು. ಮನುಷ್ಯನ ಮನಸ್ಸಿನ ಪದರಗಳನ್ನು ಎಳೆಯೆಳೆಯಾಗಿ ಬಿಡಿಸಿಡುತ್ತಾ ಮನುಷ್ಯನ ನಂಬಿಕೆಗಳು, ಆತನು ಬಯಸುವ ಶ್ರದ್ಧೆಯ ಮೂಲ ಸೆಲೆಗಳು, ಆತನ ಅಭದ್ರತೆಗಳನ್ನು ವಿವರವಾಗಿ ಬಿಡಿಸಿಡುತ್ತಾ ಮನುಷ್ಯ ದೇವರನ್ನು ಏಕೆ ನಂಬುತ್ತಾನೆ? ಧರ್ಮ ವಿಧಿಸುವ ಆಚರಣೆಗಳನ್ನು ಏಕೆ ಒಪ್ಪಿಕೊಳ್ಳುತ್ತಾನೆ ಎಂಬುದನ್ನು ತಾರ್ಕಿಕವಾಗಿ, ವೈಜ್ಞಾನಿಕವಾಗಿ, ಮನಃಶಾಸ್ತ್ರದ ಹಿನ್ನೆಲೆಯಲ್ಲಿ ವಿವರಿಸುವ ಪ್ರಯತ್ನವನ್ನು ಲೇಖಕ ಮಾಡಿದ್ದ. ಓದುತ್ತಾ ಓದುತ್ತಾ ಸುನೀಲನಿಗೆ ಏನೋ ಒಂದು ಬಗೆಯ ನೆಮ್ಮದಿಯ ಭಾವ ಮನಸ್ಸಿನಲ್ಲಿ ಹರಡಿದಂತಾಗುತ್ತಿತ್ತು. ಪ್ರತಿದಿನ ದೇವರ ಪೂಜೆ ಮಾಡುವ, ಭಜನೆ, ವ್ರತಗಳಲ್ಲಿಯೇ ಸಮಯವನ್ನು ಕಳೆಯುವ ತನ್ನ ತಾಯಿಯನ್ನು, ಅಷ್ಟೇನು ಆಚರಣೆಗಳನ್ನು ಮಾಡದಿದ್ದರೂ ‘ದೇವರ ಮನಸ್ಸಿಲ್ಲದಿದ್ದರೆ ಒಂದು ಹುಲ್ಲು ಕಡ್ಡಿಯೂ ಅಲುಗಾಡದು’ ಎಂದು ನಂಬಿದ ತಂದೆಯೊಂದಿಗೆ ವಾದ ಮಾಡಲು ಆತನಿಗೆ ಈ ಪುಸ್ತಕ ಒಳ್ಳೆಯ ಸಾಮಗ್ರಿಯಾಗಬಹುದು ಎನ್ನಿಸುತ್ತಿತ್ತು. ದೇವರನ್ನು ನಂಬುವ ತನ್ನ ಓರಗೆಯ ಗೆಳೆಯರೊಂದಿಗೆ ತಾನು ತನ್ನ ನಾಸ್ತಿಕವಾದವನ್ನು ಸಮರ್ಥಿಸಿಕೊಳ್ಳಲು ಈ ಪುಸ್ತಕದ ಅಂಶಗಳನ್ನು ಬಳಸಿಕೊಳ್ಳಬಹುದಲ್ಲ ಎಂದು ಯೋಚಿಸಿಯೇ ಅವನು ಪುಳಕಗೊಳ್ಳುತ್ತಿದ್ದ. ಲೇಖಕನ ಒಂದೊಂದು ವಿಚಾರವನ್ನು ಓದುತ್ತಲೂ ಆತನಿಗೆ ತಾನೇನೋ ಹೆಚ್ಚೆಚ್ಚು ಎತ್ತರಕ್ಕೆ ಏರಿದವನಂತೆ, ದೇವರು-ದಿಂಡಿರ ಮೂಢನಂಬಿಕೆಗಳಲ್ಲಿ ಮುಳುಗಿದ ಜನರಿಗಿಂತ ಹೆಚ್ಚಿನ ಪ್ರಾಮುಖ್ಯತೆ ಉಳ್ಳವನಂತೆ ಭಾವಿಸಿಕೊಳ್ಳುತ್ತಿದ್ದ. ಸ್ವಲ್ಪ ರೋಮಾಂಚನದ, ಸ್ವಲ್ಪ ಸಮರೋತ್ಸಾಹದ ಒಂದು ವಿಚಿತ್ರವಾದ ವಾತಾವರಣ ಅವನ ಮನಸ್ಸಿನಲ್ಲಿ ಮೂಡಿತ್ತು. ಸೂರ್ಯ ಅಸ್ತಂಗತನಾದ ವರ್ತಮಾನವನ್ನು ಹಬ್ಬಿಕೊಳ್ಳುತ್ತಿದ್ದ ಅಮಾವಾಸ್ಯೆಯ ಕತ್ತಲೆ ಕಿಟಕಿಯೊಳಗೆ ಕಳ್ಳನಂತೆ ನುಸುಳುತ್ತಾ ಸಾಬೀತುಪಡಿಸುತ್ತಿತ್ತು.2067513000_256550352f.jpg

ಗಂಟೆ ಏಳಾಗಿತ್ತು. ಪುಸ್ತಕದಲ್ಲಿ ತಲೆ ಹುದುಗಿಸಿ ಓದುವುದರಲ್ಲಿ ತಲ್ಲೀನನಾದ ಸುನೀಲನಿಗೆ ಸಂಜೆಯಾದುದರ ಅರಿವೇ ಆಗಿರಲಿಲ್ಲ. ಹೊರಗಿನ ಕತ್ತಲು ಕೋಣೆಯನ್ನಾವರಿಸಿ ಇನ್ನು ಓದುವುದಕ್ಕೆ ಸಾಧ್ಯವೇ ಇಲ್ಲ ಎನ್ನಿಸಿದಾಗ ಆತನಿಗೆ ಇಹಲೋಕದ ಪರಿವೆ ಬಂದದ್ದು. ಪುಸ್ತಕವನ್ನು ತೆರೆದಂತೆಯೇ ಹೊಟ್ಟೆಯ ಮೇಲೆ ಅಂಗಾತ ಮಲಗಿಸಿದಂತೆ ಮೇಜಿನ ಮೇಲಿಟ್ಟು ಲೈಟು ಹಾಕಲು ಎದ್ದ. ಆಗ ಗೆಳೆಯನೊಬ್ಬ ಹಿಂದೊಮ್ಮೆ ಪುಸ್ತಕವನ್ನು ತೆರೆದು ಹಾಗೆ ಅಂಗಾತ ಇರಿಸಿದರೆ ವಿದ್ಯೆ ತಲೆಗೆ ಹತ್ತಲ್ಲ ಎಂದು ಎಚ್ಚರಿಸಿದ್ದು ನೆನಪಾಯಿತು. ಕೂಡಲೇ ‘ಎಂಥಾ ಮೂರ್ಖ ನಂಬಿಕೆ?’ ಎಂದುಕೊಂಡ, ಬಹುಶಃ ಪುಸ್ತಕವನ್ನು ಹಾಗೆ ಇಟ್ಟರೆ ಅದರ ಬೈಂಡು ಕಿತ್ತುಹೋಗಬಹುದು ಅಂತ ಹಾಗೆ ಹೇಳಿದ್ದಾರೇನೊ ಅಂದುಕೊಂಡ. ರೂಮಿನ ಟ್ಯೂಬ್ ಲೈಟು ಹತ್ತಿಸಿ, ಓರೆಯಾಗಿ ತೆರೆದಿದ್ದ ಬಾಗಿಲ ಚಿಲಕ ಹಾಕಿಕೊಂಡು ಬಂದು ಪುಸ್ತಕದ ಓದನ್ನು ಮುಂದುವರೆಸಿದ.

‘ದೇವರು ಮನುಷ್ಯನ ನಂಬಿಕೆಯ ಭಾಗವಾಗಿ ಬೇರೂರಲು ಆತನಿಗೆ ಒಂದು ಪಾಶವಿ ಶಕ್ತಿಯ ಆಸರೆ ಬೇಕಿತ್ತು. ಹಾಗೆ ಭಯದ ಮೂಲದಲ್ಲಿ ಹುಟ್ಟಿಕೊಂಡದ್ದು ದೆವ್ವದ ನಂಬಿಕೆ. ಮನುಷ್ಯ ತನ್ನ ನಿಯಂತ್ರಣಕ್ಕೊಳಪಡದ, ತನ್ನಿಚ್ಛೆಯಂತೆ ನಡೆಯದ ಸಂಗತಿಗಳನ್ನು ನಿಯಂತ್ರಿಸುವ, ತನಗಿಂತ ಬಲಶಾಲಿಯಾದ ವ್ಯಕ್ತಿಯೊಬ್ಬನಿದ್ದಾನೆ ಎಂಬ ನಂಬಿಕೆಯ ಫಲವಾಗಿಯೇ ದೇವರು ಹುಟ್ಟಿಕೊಂಡ. ಅವನನ್ನು ಒಲಿಸಿಕೊಂಡರೆ ನಮಗೆ ಆಪತ್ತು ಬರದು ಎಂದು ಭಾವಿಸಿದ ಮನುಷ್ಯ ಅವನ ಗುಣಗಾನವನ್ನು, ಅವನಿಗೆ ಬಲಿಕೊಡುವುದು,ತನ್ನ ಉತ್ಪತ್ತಿಯಲ್ಲಿ ಪಾಲು ಕೊಡುವುದನ್ನು ಪ್ರಾರಂಭಿಸಿದ. ಆದರೆ ಯಾವಾಗ ತತ್ವಜ್ಞಾನದ ಬೆಳವಣಿಗೆಯಿಂದ ದೇವರು ದಯಾಮಯಿ, ಆತ ಸರ್ವಶಕ್ತ ಎಂದೆಲ್ಲಾ ಕೇವಲ ಒಳ್ಳೆಯ ಗುಣಗಳ ಆರೋಪ ನಡೆಯಿತೋ ಆಗ ನಮಗುಂಟಾಗುವ ಕೆಡುಕು, ದುರ್ಘಟನೆಗಳಿಗೆ, ಲೋಕದಲ್ಲಿರುವ ಪಾಪಕ್ಕೆ ಕಾರಣವಾಗಿಸಲು ಹುಟ್ಟಿಕೊಂಡದ್ದು ದೆವ್ವ, ಭೂತದ ನಂಬಿಕೆ…’ ಓತಪ್ರೋತವಾಗಿ ಹರಿದಿತ್ತು ಲೇಖಕನ ವಿಚಾರಧಾರೆ. ಸುನೀಲನಿಗಂತೂ ದೆವ್ವದ ಬಗೆಗಿನ ಲೇಖಕನ ಸವಿವರವಾದ ಸ್ಪಷ್ಟನೆ ಓದಿ ಖುಷಿಯಾಯಿತು. ಈ ಸಮಾಜ ಎಷ್ಟು ಚೆನ್ನಾಗಿ ಬ್ರೈನ್ ವಾಷ್ ಮಾಡುತ್ತದೆಯಲ್ಲವೇ? ದೇವರ ಕರುಣೆಯ ಆಸೆ ತೋರಿಸಿ, ದೆವ್ವದ ಹೆದರಿಕೆ ಹುಟ್ಟಿಸಿ, ಸ್ವರ್ಗದ ಮೋಹ ಹುಟ್ಟಿಸಿ, ನರಕದ ಭಯ ಬೆಳೆಸಿ ಹೇಗೆ ಮನುಷ್ಯನ ಮೇಲೆ ನಿಯಂತ್ರಣ ಸಾಧಿಸುತ್ತದೆಯಲ್ಲಾ ಎಂದು ಬೆರಗುಂಟಾಯಿತು. ಇಡೀ ಪುಸ್ತಕ ಓದಿ ಮುಗಿಸಿ ಮೇಜಿನ ಮೇಲಿಟ್ಟು ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಂಡು ವಿಚಾರ ಮಾಡಿದ ಸುನೀಲ ಈ ದೇವರು, ದೆವ್ವಗಳನ್ನು ನಂಬುವವರು ಒಂದೋ ಮೂಢರು ಇಲ್ಲವೇ ವಂಚಕರು ಎಂದುಕೊಂಡ.

ಮೇಜಿನ ಮೇಲಿದ್ದ ವಾರಪತ್ರಿಕೆಯೊಂದನ್ನು ಕೈಗೆತ್ತಿಕೊಂಡು ಅದರ ಪುಟಗಳನ್ನು ತಿರುವಲಾರಂಭಿಸಿದ. ಪುಟಗಳನ್ನು ತಿರುಗಿಸುತ್ತಿದ್ದ ಕೈಗಳು ಆ ಪುಟದ ಬಳಿ ಬರುತ್ತಿದ್ದಂತೆಯೇ ನಿಧಾನವಾದವು. ಆ ಕತೆಯ ಶೀರ್ಷಿಕೆ ನೋಡಿ ಅವನ ಕುತೂಹಲ ಬೆಳೆಯಿತು. ಅದು ದೆವ್ವದ ಬಗೆಗಿನ ಕತೆ ಎಂದು ತಿಳಿದ ಮೇಲೆ ಕೊಂಚ ತಮಾಷೆಯೆನಿಸಿತು. ಮಾಡಲು ಬೇರೆ ಕೆಲಸವಿರದಿದ್ದರಿಂದ ಆ ಕತೆಯನ್ನು ಓದಲು ಪ್ರಾರಂಭಿಸಿದ.

ಕತ್ತಲೆಯ ರಾತ್ರಿ… ಅದೊಂದು ಒಂಟಿ ಮನೆ. ಆ ಕೋಣೆಯಲ್ಲಿ ನಾಯಕ ಒಬ್ಬನೇ ಒಂದು ಪುಸ್ತಕ ಓದುತ್ತಾ ಕುಳಿತಿದ್ದಾನೆ. ಹೊರಗೆ ಅಮಾವಾಸ್ಯೆ ಕತ್ತಲು ಗಾಢವಾಗಿ ಕವಿದಿದೆ. ಸ್ವಲ್ಪ ಹೊತ್ತಿನ ಹಿಂದೆ ಪ್ರಶಾಂತವಾಗಿದ್ದ ಗಿಡಮರಗಳು ವೇಗವಾಗಿ ಬೀಸಲಾರಂಭಿಸಿದ ಗಾಳಿಗೆ ತೊಯ್ದಾಡುತ್ತಿವೆ. ಕತ್ತಲ ಆಗಸದ ಎದೆಯನ್ನು ಮಿಂಚು ಫಳ್ಳನೆ ಹರಿತವಾದ ಕತ್ತಿಯಂತೆ ಇರಿಯುತ್ತಿದೆ. ಒಮ್ಮೆಗೇ ಜೋರಾಗಿ ಮಳೆ ಶುರುವಾಗಿಬಿಡುತ್ತದೆ. ಗಾಳಿಯ ರಭಸಕ್ಕೆ ಆತನ ಕೋಣೆಯ ಕಿಟಕಿಗಳು ಫಟ-ಫಟನೆ ಬಡಿದುಕೊಳ್ಳುತ್ತಿವೆ. ಆತನಿಗೆ ಓದುತ್ತಿದ್ದ ಪುಸ್ತಕದಿಂದ ಕಣ್ಣು ಕೀಳಲು ಸಾಧ್ಯವಾಗುತ್ತಿಲ್ಲ. ‘ಪಕ್’ ಅಂತ ಕರೆಂಟು ಹೊರಟು ಹೋಗುತ್ತದೆ. ಓದುತ್ತಿದ್ದ ಪುಸ್ತಕವನ್ನು ಮೇಜಿನ ಮೇಲಿರಿಸಿದ ನಾಯಕ ಬೆಂಕಿ ಪೊಟ್ಟಣಕ್ಕಾಗಿ ರೂಮನ್ನು ತಡಕಾಡಲು ಪ್ರಾರಂಭಿಸುತ್ತಾನೆ. ತುಂಬಾ ಸಮಯವಾದರೂ ಬೆಂಕಿ ಪೊಟ್ಟಣವೂ ಸಿಗಲಿಲ್ಲ, ಕ್ಯಾಂಡಲ್ ಕೂಡ ಸಿಗುವುದಿಲ್ಲ. ತನ್ನ ಅಶಿಸ್ತನ್ನು ಶಪಿಸುತ್ತಾ ಅಲ್ಲಿ ಇಲ್ಲಿ ತಡಕಾಡುತ್ತಾ ಕೈಕಾಲು ಮಂಚಕ್ಕೆ, ಮೇಜಿಗೆ ಬಡಿಸಿಕೊಳ್ಳುತ್ತಿರುತ್ತಾನೆ. ಹೊರಗೆ ಮಳೆ ಧೋ ಎಂದು ಸುರಿಯುತ್ತಿದೆ. ಕೋಣೆಯ ಮೌನದ ಒಡಲನ್ನು ಬೀಧಿಸಿ ಬಂದ ‘ಟ್ರಿಣ್…ಟ್ರಿಣ್…’ ಎಂಬ ಫೋನಿನ ಸದ್ದು ಕೇಳಿ ಅವನಿಗೆ ಒಮ್ಮೆಗೇ ಭಯವಾಗುತ್ತದೆ.

ಸಾವರಿಸಿಕೊಂಡು ಬಂದು ರಿಸೀವರ್ ಎತ್ತಿಕೊಂಡು ‘ಹೆಲೋ…’ ಎನ್ನುತ್ತಾನೆ.

‘….’ ಅತ್ತ ಕಡೆಯಿಂದ ಯಾವ ಸದ್ದೂ ಇಲ್ಲ.

‘ಹೆಲೋ, ಯಾರದು ಮಾತನಾಡುತ್ತಿರುವುದು…’,

‘….’

ಬಹುಶಃ ಸಂಪರ್ಕ ಸರಿಯಿಲ್ಲವೆಂದುಕೊಂಡ ಆತ ರಿಸೀವರನ್ನು ಕ್ರೆಡಲ್ ಮೇಲಿಟ್ಟು ಬೆಂಕಿ ಪೊಟ್ಟಣ ಹುಡುಕುವುದರಲ್ಲಿ ಮಗ್ನನಾಗುತ್ತಾನೆ. ನಿಮಿಷ ಕಳೆದಿರಲಿಲ್ಲ ಅಷ್ಟರಲ್ಲಿ…

‘ಟ್ರಿಣ್… ಟ್ರಿಣ್…’ ಮತ್ತೆ ರಿಂಗಣಿಸಲಾರಂಭಿಸುತ್ತದೆ ದೂರವಾಣಿ.

‘ಹೆಲೋ….’

‘…’ ಉತ್ತರವಿಲ್ಲ.

‘ಹೆಲೋ… ಜೋರಾಗಿ ಮಾತನಾಡಿ, ಕೇಳಿಸುತ್ತಿಲ್ಲ’ ಒದರುತ್ತಾನೆ ಆತ.

‘….’

ಮತ್ತೆ ರಿಸೀವರ್ ಕುಕ್ಕಿದ ಆತನಿಗೆ ಯಾರಾದರೂ ತನ್ನ ಆಟವಾಡಿಸಲು ಹೀಗೆ ಮಾಡುತ್ತಿರಬಹುದಾ ಎನ್ನಿಸಿತು. ಇರಲಿಕ್ಕಿಲ್ಲ, ಮಳೆ-
ಗಾಳಿಗೆ ಟೆಲಿಫೋನ್ ಕಂಬ ಬಿದ್ದು ಸಂಪರ್ಕದಲ್ಲಿ ತೊಂದರೆಯಾಗಿರಬಹುದು ಎಂದುಕೊಂಡ. ಮತ್ತೆ…

‘ಟ್ರಿಣ್… ಟ್ರಿಣ್…’

ಈ ಬಾರಿ ಆತ ಮೌನವಾಗಿ ರಿಸೀವರ್ ಎತ್ತಿ ಕಿವಿಯ ಬಳಿ ಹಿಡಿದು ನಿಂತ.

‘….’

‘…’

ಬೆಚ್ಚಿಬೀಳಿಸುವ ಮೌನ ಎರಡೂ ಬದಿಯಲ್ಲಿ…ಅತ್ತಕಡೆಯಿಂದ ಉಸಿರು ಏರುವ ಇಳಿಯುವ ಸದ್ದು ಮಾತ್ರ ಕೇಳಿದಂತಾಯಿತು. ಲೈನ್ ಸರಿಯಾಗಿಯೇ ಇದೆ ಎಂದು ಆತನಿಗೆ ಮನವರಿಕೆಯಾಯಿತು. ಅತ್ತ ಕಡೆಯಿಂದ ಯಾರೋ ಕೀಟಲೆ ಮಾಡಲು ಕರೆ ಮಾಡುತ್ತಿದ್ದಾರೆ ಎಂದುಕೊಂಡು ಸಿಟ್ಟಿನಿಂದ ಆತ ರಿಸೀವರ್ ತೆಗೆದು ಪಕ್ಕದಲ್ಲಿಟ್ಟ. ಅನಂತರ ತಾನು ಕೇಳಿದ ಸದ್ದು ಬಹುಶಃ ತನ್ನ ಉಸಿರಾಟದ ಸದ್ದೇ ಆಗಿರಬಹುದೇನೋ ಅನ್ನಿಸಿತು. ಆದರೂ ರಿಸೀವರ್‌ನ್ನು ಸರಿಯಾಗಿರಿಸುವ ಪ್ರಯತ್ನ ಮಾಡಲಿಲ್ಲ.
ಹಾಳಾದ್ದು ಮ್ಯಾಚ್ ಬಾಕ್ಸ್ ಎಲ್ಲಿಹೋಯ್ತೊ ಎಂದುಕೊಂಡು ಅದನ್ನು ಹುಡುಕುವುದರಲ್ಲಿ ತೊಡಗಿಕೊಂಡ. ಸ್ವಲ್ಪ ಸಮಯ ಕಳೆಯಿತು. ಮಳೆ ಕಡಿಮೆಯಾಗುವುದರ ಲಕ್ಷಣವೇ ಕಾಣುತ್ತಿರಲಿಲ್ಲ. ರಾತ್ರಿ ಇಡೀ ಹೀಗೇ ಸುರಿದರೆ ಕರೆಂಟು ಬರೋಕೆ ಸಾಧ್ಯವೇ ಇಲ್ಲ ಎಂದುಕೊಂಡ. ಬೆಂಕಿ ಪೊಟ್ಟಣ ಸಿಗದಿದ್ದರೆ ರಾತ್ರಿ ಎಲ್ಲಾ ಕತ್ತಲಲ್ಲಿ ಕಳೆಯಬೇಕಲ್ಲಾ ಎಂದುಕೊಂಡು ಪುಸ್ತದ ರ್ಯಾಕಿನೊಳಗೆ ಕೈಗಿರಿಸಿದವನಿಗೆ ಬೆಂಕಿಪೊಟ್ಟಣ ಸಿಕ್ಕಿತು. ಕಡ್ಡಿ ಗೀರಿ ಕ್ಯಾಂಡಲ್ ಹುಡುಕಿ ಇನ್ನೇನು ಅದನ್ನು ಬೆಳೆಗಿಸಬೇಕು ಎನ್ನುವಷ್ಟರಲ್ಲಿ…

‘ಟಿಂಗ್ ಟಾಂಗ್….’ ಬಾಗಿಲಿನ ಕರೆಗಂಟೆಯ ಸದ್ದು ಇರುಳಿನ ಮೌನವನ್ನು ಬೇಧಿಸುವಂತೆ ಅಬ್ಬರಿಸಿತು.

ಬೆಂಕಿಪೊಟ್ಟಣ ಹಿಡಿದ ಆತನ ಕೈಗಳು ಮೆಲ್ಲಗೆ ಕಂಪಿಸಿದವು. ಆ ಕಂಪನದ ರಭಸಕ್ಕೆ ಕೈಲಿದ್ದ ಬೆಂಕಿಪೊಟ್ಟಣ ಹಿಡಿತ ತಪ್ಪಿಸಿಕೊಂಡಂತೆನಿಸಿತು. ಇಷ್ಟು ಹೊತ್ತಿನಲ್ಲಿ ಯಾರಿರಬಹುದು ಎಂದುಕೊಂಡು ಬಾಗಿಲು ತೆರಯಲು ಮುಂದಾದ, ಬೆಂಕಿ ಕಡ್ಡಿಯ ಬೆಳಕಿನಲ್ಲಿ. ಬಾಗಿಲಿನ ಅಗುಳಿ ಸರಿಸಿ ಬಾಗಿಲು ತೆರೆದವನಿಗೆ ಹೊರಗಿನ ಗಾಳಿಯ ರಭಸಕ್ಕೆ ಕೈಲಿದ್ದ ಬೆಂಕಿ ಕಡ್ಡಿ ನಂದಿಹೋದದ್ದು ಅರಿವಿಗೆ ಬರುವಷ್ಟರಲ್ಲಿ ಮೈಗೆ ಶೀತಲವಾದ ಗಾಳಿಯೊಂದಿಗೆ ಕಪ್ಪನೆಯ ಅಮಾವಾಸ್ಯೆಯ ಕತ್ತಲು ಅಪ್ಪಳಿಸಿದ್ದು ಅರಿವಿಗೆ ಬಂದಿತ್ತು. ಕೈಲಿದ್ದ ಬೆಂಕಿಕಡ್ಡಿಯಿಂದ ಮತ್ತೊಂದು ಕಡ್ಡಿಗೀರಿದವನನ್ನು ಸ್ವಾಗತಿಸಿದ್ದು ಮತ್ತದೇ ಕಗ್ಗತ್ತಲು. ಬಾಗಿಲು ಬಡಿದವರು ಯಾರೂ ಅಲ್ಲಿರಲೇ ಇಲ್ಲ…

ಅಷ್ಟರಲ್ಲಿ ಸುನೀಲನ ರೂಮು ಇದ್ದಕ್ಕಿದ್ದಂತೆ ಕತ್ತಲೆಯಲ್ಲಿ ಮುಳುಗಿಬಿಟ್ಟಿತು. ಕುತೂಹಲದಿಂದ ಕಥೆ ಓದುತ್ತಿದ್ದ ಸುನೀಲನಿಗೆ ಕರೆಂಟ್ ಹೋದದ್ದು ತಿಳಿಯಲು ಕೆಲಸಮಯ ಬೇಕಾಯಿತು. ಮೆಲ್ಲಗೆ ಓದುತ್ತಿದ್ದ ವಾರಪತ್ರಿಕೆಯನ್ನು ಮೇಜಿನ ಮೇಲಿಟ್ಟು, ಮೊದಲೇ ಮೇಜಿನ ಡ್ರಾದೊಳಕ್ಕೆ ಇಟ್ಟುಕೊಂಡಿದ್ದ ಬೆಂಕಿಕಡ್ಡಿ, ಕ್ಯಾಂಡಲ್ ಹೊರತೆಗೆದು ಕ್ಯಾಂಡಲ್ ಹೊತ್ತಿಸಿದ. ಹೊರಗೆ ಬಿರುಮಳೆ ಪ್ರಾರಂಭವಾಗಿತ್ತು. ಗೋಲಿಗಾತ್ರದ ನೀರ ಹನಿಗಳು ಕಿಟಕಿಯ ಗಾಜುಗಳಿಗೆ ಅಪ್ಪಳಿಸುವ ಸದ್ದು ಬಿಟ್ಟರೆ ಸುನೀಲನಿಗೆ ಬೇರಾವ ಸದ್ದೂ ಕೇಳುತ್ತಿರಲಿಲ್ಲ. ಇನ್ನೇನು ಅರ್ಧಕ್ಕೆ ನಿಲ್ಲಿಸಿದ್ದ ಕಥೆಯನ್ನು ಓದಬೇಕು ಅಂದುಕೊಂಡು ಪತ್ರಿಕೆಯನ್ನು ಕೈಗೆತ್ತಿಕೊಂಡ ಅಷ್ಟರಲ್ಲಿ ಮಳೆ ಹನಿಗಳ ಏಕತಾನದ ಸದ್ದನ್ನು ಅಡಗಿಸುವಂತೆ ಟೆಲಿಫೋನ್ ರಿಂಗಣಿಸಲಾರಂಭಿಸಿತು…

‘ಟ್ರಿಣ್…ಟ್ರಿಣ್…’

‘ಹಲೋ…’

‘…’

‘ಯಾರು ಮಾತಾಡ್ತಿರೋದು? ಸ್ವಲ್ಪ ಜೋರಾಗಿ ಮಾತಾಡಿ ಕೇಳ್ತಿಲ್ಲ…’

‘…’

ಸುನೀಲನ ತಲೆಯೊಳಗೆ ಒಂದೇ ಸಮನೆ ಸಂಶಯದ ಹೊಗೆ ಭುಗಿಲೇಳತೊಡಗಿತು. ಯಾರಿರಬಹುದು ಎಂಬ ಪ್ರಶ್ನೆ ಒಂದೆಡೆಯಾದರೆ, ಯಾಕೆ ಮಾತನಾಡುತ್ತಿಲ್ಲ ಎಂಬ ಪ್ರಶ್ನೆ ಮತ್ತೊಂದೆಡೆ. ಏನಾದ್ರೂ ದೆವ್ವ, ಗಿವ್ವ… ಸ್ವಲ್ಪ ಹೊತ್ತಿನ ಹಿಂದೆ ತಾನೆ ಓದಿದ ಕತೆಯ ಪ್ರಭಾವ ಚೆನ್ನಾಗಿಯೇ ಆಗಿದ್ದಂತಿತ್ತು. ‘ಛೇ, ದೆವ್ವಗಳೆಲ್ಲಾ ಫೋನ್ ಮಾಡಿ ಹೆದರಿಸ್ತವಾ? ಮಳೆಗೆ ನೆಟ್‌ವರ್ಕ್ ಕೆಟ್ಟುಹೋಗಿರಬೇಕು…’ ಅಂತ ಸಮಾಧಾನ ಮಾಡಿಕೊಂಡು, ರಿಸೀವರನ್ನು ಕ್ರೆಡಲ್ ಮೇಲಿಂದ ತೆಗೆದು ಫೋನ್ ಪಕ್ಕದಲ್ಲಿ ಇರಿಸಿದ.

ಮೇಜಿನ ಮೇಲಿಟ್ಟಿದ್ದ ಪತ್ರಿಕೆಗೆ ಕೈ ಹಾಕಿ ಅರ್ಧಕ್ಕೆ ನಿಲ್ಲಿಸಿದ್ದ ಕಥೆಯನ್ನು ಮುಂದುವರೆಸಿದ.

… ಬಾಗಿಲು ತೆರೆದು ನೋಡಿದವನ ಎದೆ ಝಲ್ಲೆನ್ನುವಂತಹ ನಿಶ್ಯಬ್ಧ. ಹೊರಗೆ ಯಾರೂ ಇಲ್ಲ. ಈತ ಕೈಲಿರುವ ಬೆಂಕಿ ಕಡ್ಡಿಯ ಬೆಳಕಿನಲ್ಲಿ ಮನೆಯ ಅಕ್ಕ ಪಕ್ಕ ಕಣ್ಣು ಹಾಯಿಸಿ ಪರೀಕ್ಷಿಸಿದ ಒಂದು ನರಪಿಳ್ಳೆಯ ಸುಳಿವೂ ಸಿಗಲಿಲ್ಲ. ಈತನ ಎದೆ ಬಡಿತದ ಸದ್ದು ತನ್ನ ಕಿವಿಗಳಲ್ಲೇ ಮಾರ್ದನಿಸತೊಡಗಿತು…

‘ಟರ್ರ್‌ರ್… ಟರ್ರ್‌ರ್…’

ಮತ್ತೊಮ್ಮೆ ಬೆಚ್ಚಿಬಿದ್ದ ಸುನೀಲ. ಆತನ ಕೋಣೆಯ ಕಾಲಿಂಗ್ ಬೆಲ್ ಯಾರೋ ಒತ್ತುತ್ತಿದ್ದಾರೆ. ಇಂಥಾ ಬಿರು ಮಳೆಯಲ್ಲಿ ಯಾರು ಬಂದಿರಬಹುದು ಎಂಬ ಸಂಶಯದಲ್ಲಿ ಸುನೀಲ ಬಾಗಿಲು ತೆರೆದ. ಕೈಯಲ್ಲಿದ್ದ ಕ್ಯಾಂಡಲ್‌ ಗಾಳಿಗೆ ಆರದ ಹಾಗೆ ಬಲಗೈಯನ್ನು ಅಡ್ಡ ಹಿಡಿಯುತ್ತ.

ಹೊರಗೆ ಮಳೆ ರಚ್ಚೆ ಹಿಡಿದಂತೆ ಸುರಿಯುತ್ತಿದೆ. ಕಾಲಿಂಗ್ ಬೆಲ್ ಒತ್ತಿದ ಪ್ರಾಣಿಯ ಸುಳಿವಿಲ್ಲ! ಯಾರದು ಆಟವಾಡಿಸುತ್ತಿರೋದು ಎಂದು ಸುನೀಲನಿಗೆ ರೇಗಿತು. ರೂಮಿನ ಸುತ್ತಲೂ ಒಮ್ಮೆ ತಿರುಗಿದ, ಮಳೆಯಲ್ಲಿ ಮೈ ಕೊಂಚ ನೆನೆಯಿತು. ತನಗಾದ ಕಿರಿಕಿರಿಯನ್ನು ನಿವಾರಿಸಿಕೊಳ್ಳುವ ಯಾವ ಪ್ರಯತ್ನವನ್ನೂ ಮಾಡದೆ ಆತ ಬಾಗಿಲನ್ನು ಅರೆಯಾಗಿ ತೆರೆದು ಬಂದು ಮೇಜಿನ ಮುಂದೆ ಕುಳಿತ. ಆತ ಕುಳಿತಿದ್ದ ಕುರ್ಚಿ ಬಾಗಿಲುಗೆ ಬೆನ್ನು ಮಾಡಿತ್ತಾದ್ದರಿಂದ ಬಾಗಿಲಿನಿಂದ ಒಳಕ್ಕೆ ಬೀಸುತ್ತಿದ್ದ ಶೀತಲವಾದ ಗಾಳಿ ಸುನೀಲನ ಬೆನ್ನು ಸೋಕುತ್ತಿತ್ತು.

ಈ ಕರೆಂಟು ಯಾವಾಗ ಬರುತ್ತದೆಯೋ ಎಂದುಕೊಳ್ಳುತ್ತಾ ಟವೆಲ್ಲಿನಿಂದ ತಲೆ ಒರೆಸಿಕೊಳ್ಳುತ್ತಿದ್ದ ಸುನೀಲನಿಗೆ ತಾನೇಕೆ ಕತ್ತಲಿಗೆ ಹೆದರುತ್ತಿದ್ದೇನೆ ಎನ್ನಿಸಿತು. ‘ಇದೆಂಥಾ ಕಾಕತಾಳೀಯ! ನಾನು ಓದುತ್ತಿರೋ ಕಥೆಯಲ್ಲಿ ನಡೆಯುತ್ತಿರುವ ಘಟನೆಗಳೇ ನನ್ನ ಮುಂದೆ ಜರಗುತ್ತಿವೆಯಲ್ಲಾ? ಆ ಕಥೆ ಪೂರ್ತಿ ಓದಿ ಮುಂದೇನಾಗುತ್ತೆ ನೋಡಿಬಿಡಬೇಕು’ ಅಂದುಕೊಂಡು ಕಥೆಯಿದ್ದ ಪತ್ರಿಕೆಯನ್ನು ಕೈಗೆತ್ತಿಕೊಂಡ. ತಾನು ಎಲ್ಲಿ ನಿಲ್ಲಿಸಿದ್ದೆ ಎಂಬುದನ್ನು ಕ್ಯಾಂಡಲ್ಲಿನ ಓಲಾಡುವ ಬೆಳಕಿನಲ್ಲಿ ಹುಡುಕುತ್ತಿರುವಾಗ ಬೆನ್ನ ಹಿಂದೆ ಯಾವುದೋ ಆಕೃತಿ ಚಲಿಸಿದ ಹಾಗೆ ಭಾಸವಾಯ್ತು. ಕೂಡಲೇ ಹಿಂದೆ ತಿರುಗಿ ನೋಡಿದ. ಯಾರೂ ಇಲ್ಲ! ಇವನ ಉಸಿರು ಘನವಾಗ ತೊಡಗಿತು. ಸ್ವಲ್ಪ ಕಾಲ ಬಾಗಿಲ ಕಡೆಗೇ ನೋಡುತ್ತಿದ್ದವನು ತಿರುಗಿ ಮತ್ತೆ ಪುಸ್ತಕದಲ್ಲಿ ಮಗ್ನನಾಗಲು ಪ್ರಯತ್ನಿಸಿದ. ಮತ್ತೆ… ಅದೇ ಆಕೃತಿ, ಆಗ ಕಂಡದ್ದೇ… ಇನ್ನೂ ಹತ್ತಿರವಾದ ಹಾಗೆ ತನ್ನ ಹಿಂಬದಿಯಿಂದ ಬಲಕ್ಕೆ ಚಲಿಸಿದ ಹಾಗೆ ಕಂಡಿತು. ಬೆಚ್ಚಿ ಬಿದ್ದು ತಿರುಗಿ ನೋಡಿದ ಗಾಳಿಗೆ ಓಲಾಡುವ ಕ್ಯಾಂಡಲ್ಲಿನ ಬೆಳಕಿನಲ್ಲಿ ತನ್ನದೇ ನೆರಳು ಗೋಡೆಯ ಮೇಲೆ ತೇಲುತ್ತಿತ್ತು. ಬೇರಾವ ಆಕೃತಿಯೂ ಆತನ ಕಣ್ಣಿಗೆ ಬೀಳಲಿಲ್ಲ.

‘ಇದೆಂಥಾ ಮರುಳು…’ ಅಂತ ಹಣೆಗೆ ಕೈಲಿದ್ದ ಪತ್ರಿಕೆ ಬಡಿದುಕೊಳ್ಳುವಾಗ ಅದರಲ್ಲಿರುವ ಕಥೆಯಲ್ಲಿನ ನಾಯಕನಿಗೂ ಹೀಗೇ ಆಗುತ್ತಾ ನೋಡೋಣ ಎನ್ನಿಸಿತು. ಕುತೂಹಲದಲ್ಲಿ ಮತ್ತೆ ಕಥೆ ಓದತೊಡಗಿದ.

…. ತನ್ನ ಬೆನ್ನ ಹಿಂದೆ ಚಲಿಸಿದಂತಾದ ಆಕೃತಿಯ ಹುಡುಕಾಟದಲ್ಲಿ ಆತ ಕಳೆದು ಹೋಗಿದ್ದ…. ‘ಅಯ್ಯೋ ಒಂದು ಪ್ಯಾರಾ ಬಿಟ್ಟೇ ಬಿಟ್ಟೆನಲ್ಲಾ, ಇರಲಿ ಮುಂದೇನಾಗುತ್ತೋ ನೋಡ್ಬೇಕು, ಇವನಿಗೂ ಆಕೃತಿ ಕಾಣಿಸಿದೆ!’ … ಎದೆಯ ನಗಾರಿ ಹುಚ್ಚೆದ್ದು ಬಡಿದುಕೊಳ್ಳುತ್ತಿತ್ತು. ಅಮ್ಮ ಹೇಳಿ ಕೊಟ್ಟಿದ್ದ ರಾಮ ರಕ್ಷಾ ಸ್ತೋತ್ರವನ್ನು ನೆನಪಿನಿಂದ ಹೆಕ್ಕಿ ತೆಗೆದು ಜೋರಾಗಿ ಪಠಿಸುತ್ತಾ ಆತ ಹಾಸಿಗೆಯೆಡೆಗೆ ನಡೆದ. ಮಲಗಿ ನಿದ್ರೆ ಮಾಡಿದರೆ ಯಾವ ಕೆಟ್ಟ ಆಲೋಚನೆಯೂ ಬರುವುದಿಲ್ಲ ಅಂದುಕೊಂಡು ಹಾಸಿಗೆಯ ಮೇಲೆ ಮೈಚಾಚಿದ.

ಕಣ್ಣು ಮುಚ್ಚಿ ನಾಲ್ಕೈದು ನಿಮಿಷ ಕಳೆದಿರಬೇಕು, ತನ್ನ ಉಸಿರಾಟವನ್ನು ಮೀರಿಸುವಂತಹ ಉಸಿರಿನ ಸದ್ದು ಕಿವಿಯನ್ನು ತಲುಪುತ್ತಿತ್ತು. ಮುಖದ ಮೇಲೆ ಬಿಸಿ ಗಾಳಿ ಹರಿದಾಡಿದಂತಾಯ್ತು. ಪ್ರಯಾಸದಿಂದ ಕಣ್ಣು ತೆರೆದವನಿಗೆ ಎದೆ ಹಾರಿಹೋಗುವಂತಹ ಆಕೃತಿ ಗೋಚರಿಸಿತು. ಅಂತಹ ವಿಕಾರವಾದ ಮುಖವನ್ನು ಆತ ಕನಸಿನಲ್ಲೂ ಕಂಡಿರಲಿಲ್ಲ. ಎದೆ ಪೌಂಡಿಂಗ್ ಮಶೀನಿನ ಹಾಗೆ ಕುಟ್ಟುತ್ತಿತ್ತು. ಮುಖದ ಮೇಲೆ ಬೆವರ ಸಾಲು. ತಾನೆಂದೂ ಕಲ್ಪಿಸಿಕೊಂಡಿರದಷ್ಟು ಭಯಾನಕವಾದ ಭೂತ ಆತನೆದುರು ನಿಂತಿತ್ತು. ಕೈ ಕಾಲು ಮರಗಟ್ಟಿದಂತಾಗಿಬಿಟ್ಟಿತ್ತು. ಬುದ್ಧಿಗೆ ಮಂಕು ಕವಿದಂತಾಯಿತು. ಆ ದಿಗ್ಭ್ರಾಂತಿಯ ಸಮಯದಲ್ಲೂ ಮನೆಯ ಪುರೋಹಿತರು ಕೊಟ್ಟಿದ್ದ ಬಂಗಾರದ ಬಣ್ಣದ ಕಟ್ಟು ಹಾಕಿಸಿದ್ದ ಗಣಪತಿಯೆ ಫೋಟೊ ನೆನಪಾಯ್ತು. ಹಾಸಿಗೆಯಿಂದ ನೆಗೆದವನೇ ಗಣಪತಿಯ ಫೋಟೊ ಕೈಗೆತ್ತಿಕೊಂಡ. ತಿರುಗಿ ನೋಡುವಷ್ಟರಲ್ಲಿ ಆ ಆಕೃತಿ ವಿಕಾರವಾಗಿ ಕೂಗುತ್ತಾ ನೆಲದೊಳಕ್ಕೆ ಇಂಗಿಹೋಯಿತು…

ಇಷ್ಟನ್ನು ಓದಿ ನಿಟ್ಟುಸಿರುಬಿಟ್ಟು ಮೇಜಿನೆದುರಿನ ಗೋಡೆ ನೋಡಿದ ಸುನೀಲ ಗಾಬರಿಯಲ್ಲಿ ಕುರ್ಚಿಯಿಂದ ಕೆಳಕ್ಕುರುಳಿದ. ಗೋಡೆಯ ಮೇಲಿನ ವಿಚ್ಛಿದ್ರಕಾರಿ ಆಕೃತಿಯನ್ನು ಕಂಡು ಆತ ಎಚ್ಚರ ತಪ್ಪಿ ಬಿದ್ದಿದ್ದ.

ಮರುದಿನ ಬೆಳಕು ಹರಿದಾಗ ಸುನೀಲ ರೂಮಿನಲ್ಲಿ ಆತನ ಮೇಜಿನ ಎದುರಿನ ಗೋಡೆಗೆ ಮೊಳೆ ಹೊಡೆಯಲಾಗಿತ್ತು. ಅದರ ಮೇಲೆ ಬಂಗಾರದ ಬಣ್ಣದ ಕಟ್ಟು ಹಾಕಿದ ಗಣಪತಿಯ ಫೋಟೊ ನೇತುಹಾಕಲ್ಪಟ್ಟಿತ್ತು.


Technorati : , ,


Blog Stats

  • 71,866 hits
ಮಾರ್ಚ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

Top Clicks

  • ಯಾವುದೂ ಇಲ್ಲ