Author Archive
ಹೇಮಾಂತರಂಗ: ನಾ ಕಂಡ ಸ್ವಾತಂತ್ರ್ಯ ದಿನ
Posted ಆಗಷ್ಟ್ 17, 2009
on:– ಹೇಮಾ ಪವಾರ್, ಬೆಂಗಳೂರು
ಸ್ವಾತಂತ್ರ್ಯದ ದಿನದಲ್ಲಿ ಬರೆಯಬಹುದಾದ ಮಾಡಬಹುದಾದ ವಿಷಯಗಳು ನನಗೆ
ಸ್ಪಷ್ಟವಾಗಿಲ್ಲವಾದರೂ ಈ ಸಲದ ಸ್ವಾತಂತ್ರ್ಯ ದಿನ ನನ್ನ ಪಾಲಿಗೆ ಅತಿ ಮುಖ್ಯ ದಿನ
ಎನಿಸಿದ್ದರಿಂದ ಬರೆಯುತ್ತಿದ್ದೇನೆ. ಮೊದಲೆಲ್ಲಾ ಇತರೆ ರಜದ ದಿನಗಳ ಹಾಗೆ
ಸ್ವಾತಂತ್ರ್ಯದಿನಾಚರಣೆಯೂ ಮುಗಿದು ಹೋಗುತ್ತಿತ್ತು ಮತ್ತು ಹಾಗೆ ಕಳೆದುಬಿಟ್ಟಿದ್ದರ
ಬಗ್ಗೆ ಸಣ್ಣದೊಂದು ಗಿಲ್ಟ್ ಮನಸಲ್ಲುಳಿದುಬಿಡುತ್ತಿತ್ತು, ಈ ಸಲ ಹಾಗಾಗಲಿಲ್ಲವೆಂಬುದೇ
ಖುಷಿಯ ವಿಚಾರ. ನಾನು ಬೆಳ್ಳಂಬೆಳಿಗ್ಗೆ ಎದ್ದು ರೆಡಿಯಾಗಿ ಸ್ಯಾಟಲೈಟ್ ಬಸ್ಟಾಪ್
ತಲುಪಿಕೊಂಡು, ಇಡ್ಲಿ ತಿಂದು, ಬಿಸೀ ಬಿಸಿ ಕಾಫಿ ಕಪ್ ಹಿಡಿದು ವಾಚ್ ನೋಡಿಕೊಂಡಾಗ ಸಮಯ
ಆರುಗಂಟೆ. ಅಲ್ಲಿಂದ ನನ್ನ ಪಯಣ ಸಾಗಿದ್ದು ಮದ್ದೂರಿನ ಹತ್ತಿರವಿರುವ ನಂಬಿನಾಯಕನಹಳ್ಳಿ
ಎಂಬ ಗ್ರಾಮಕ್ಕೆ. ಹಳ್ಳಿಗಳು ನನಗೇ ಪ್ರತಿ ವಿಷಯದಲ್ಲೂ ವಿಸ್ಮಯದ ಸಂತೆ, ದೊಡ್ಡ ದೊಡ್ಡ
ಹೆಂಚಿನ ಮನೆಗಳು, ಮನೆಯಲ್ಲೇ ಸಾಕಿರುವ ರೇಷ್ಮೆ ಹುಳುಗಳು, ಆಡು, ಕುರಿ, ಹಸು, ಎತ್ತು,
ಎಮ್ಮೆ, ಕೋಳಿ ಮತ್ತು ಅವೆಲ್ಲಕ್ಕೂ ಮನೆಮಂದಿ ಮಾಡುವ ಆರೈಕೆ, ಹಳ್ಳಿಯ ನಿರ್ಮಲ ಗಾಳಿ,
ಹಸಿರು ಎಲ್ಲವೂ ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಒಂದು
ಅಪೂರ್ವ ಸೆಳೆತವನ್ನುಂಟು ಮಾಡುತ್ತದೆ. ಅಲ್ಲಿನ ಪರಿಚಿತರ ಮನೆ ಹೊಕ್ಕು ಎಲ್ಲರನ್ನು
ಮಾತಾಡಿಸುತ್ತಿದ್ದಾಗಲೇ ಟಿ.ವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮವೊಂದು ಗಮನ ಸೆಳೆಯಿತು,
ನಟಿ ರಮ್ಯ ಯಡಿಯೂರಪ್ಪನವರ ಸಂದರ್ಶನ ಮಾಡಿತ್ತಿದ್ದುದ್ದು. ಚಾನೆಲ್ ಸರ್ಫ್
ಮಾಡುತ್ತಿದ್ದ ಸಣ್ಣ ಹುಡುಗ ರಮ್ಯಳ ಮುಖ ನೋಡುತ್ತಿದ್ದ ಹಾಗೆ ನಿಲ್ಲಿಸಿದ,
ಪರವಾಗಿಲ್ವೆ ನಮ್ಮ ಮುಖ್ಯಮಂತ್ರಿಗಳು ಹೀರೋಯಿನ್ ರಿಗೆಲ್ಲಾ ಸಂದರ್ಶನ ಕೊಡುವ ಧೈರ್ಯ
ಮಾಡಿದ್ದಾರೆಂದು ನಾನೂ ಕಿವಿಗೊಟ್ಟೆ, ಆಕೆಯ ಪ್ರಶ್ನೆಗಳನ್ನು ಕೇಳುತ್ತಿದ್ದ ಹಾಗೇ
ನನಗೆ ಮೈ ಉರಿದು ಹೋಯಿತು, ನೀವೇಕೆ ವೈಟ್ ಸಫಾರಿ ಹಾಕುತ್ತೀರಿ? ನೀವು ಮ್ಯಾನಿಕ್ಯೂರ್
ಪೆಡಿಕ್ಯೂರ್ ಮಾಡಿಸುತ್ತೀರ? ಬ್ಯೂಟಿ ಪಾರ್ಲರಿಗೆ ಹೋಗುತ್ತೀರ? ಅರೆ ರಾಜ್ಯದ ಮುಖ್ಯ
ಮಂತ್ರಿಗಳಿಗೆ ಕೇಳುವ ಪ್ರಶ್ನೆಯಾ ಇದು?! ಇರಲಿ ಅದರ ಬಗ್ಗೆ ಮುಂದೆ ಬರೆಯುವೆ.
ಅಲ್ಲಿನ ವಾತಾವರಣ ಅನುಭವಿಸಿ ಖುಷಿ ಪಡಲು ಇನ್ನೊಂದು ಅವಕಾಶವೆಂಬಂತೆ ಪಕ್ಕದ ಹಳ್ಳಿಗೆ
ಹೋಗಬೇಕಿದ್ದ ಬಸ್ ಆ ದಿನ ನಾಪತ್ತೆಯಾಗಿತ್ತು, ಮೂರು ಕಿ.ಮೀ ನಷ್ಟು ದೂರವಿದ್ದ ಊರಿಗೇ
ನಡೆದೇ ಹೊರಟೆವು. ನನ್ನ ಜೊತೆಯಲ್ಲಿ ಬರುತ್ತಿದ್ದ ಗೆಳೆಯರೊಬ್ಬರೊಡನೆ ಹಳ್ಳಿಯ ಆಗು
ಹೋಗುಗಳ ಬಗ್ಗೆ, ಪಟ್ಟಣದ ಯಾಂತ್ರಿಕತೆಯ ಬಗ್ಗೆ ಲೋಕಾಭಿರಾಮವಾಗಿ ಮಾತು ಸಾಗಿತ್ತು.
ಮಾತು ಒಳ್ಳೆಯ ಬಿರುಸು ಪಡೆದು ನಾನು ಹಳ್ಳಿಯ ಜನರೆಲ್ಲ ನೆಮ್ಮದಿ ಉಳ್ಳವರೆಂದು
ಪಟ್ಟಣದವರ ಚೆನ್ನಾಗಿರುವಿಕೆ ಬರಿಯ ತೋರಿಕೆಯೆಂದೂ ಹೇಳಿದೆ. ಆದರೆ ಆ ಹಳ್ಳಿಯ ಜನರ ಇತರ
ಸ್ವಭಾವಗಳ ಬಗ್ಗೆ (ಅವರು ಸ್ವತಃ ಅದೇ ಊರಿನವರಾದ್ದರಿಂದ) ಹೇಳುತ್ತಾ, ಹೇಗೆ ರೈತನ
ಶ್ರಮವು ಸರಿಯಾದ ಅನುಕೂಲಗಳಿಲ್ಲದೆ ಇರುವುದರಿಂದ ಫಲ ದೊರೆಯದೇ ಪೋಲಾಗುತ್ತಿದೆ,
ಅನಕ್ಷರಸ್ಥ ಹಳ್ಳಿಗರು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದೆ ಅವುಗಳಿಗೆ
ವಿಮುಖರಾಗುತ್ತಾರೆ, ಸಮಯ ಬಂದಾಗ ಒಗ್ಗಟ್ಟಾಗಿರಲು ಒದ್ದಾಡುತ್ತಾರೆ, ಕಷ್ಟವಿಲ್ಲದ
ಪಟ್ಟಣದ ಜೀವನಕ್ಕೆ ಹಾತೊರೆಯುತ್ತಾರೆ, ಸರ್ಕಾರವು ರೈತನಿಗೆ ಕೊಟ್ಟಿರುವ
ಸೌಲಭ್ಯಗಳನ್ನು ಬಳಸಿಕೊಳ್ಳುವಲ್ಲಿ ಎಡವುತ್ತಾರೆ, ಸರ್ಕಾರವು ಒದಗಿಸಿರುವ
ಸೌಲಭ್ಯಗಳಲ್ಲಿ ರೈತನಿಗೆ ಆಗುತ್ತಿರುವ ಅನುಕೂಲವೆಷ್ಟು ಎಂದೆಲ್ಲ ವಿವರಿಸಿ ಒಂದು
ಉದಾಹರಣೆಯನ್ನು ಕೊಟ್ಟರು.
ಅದನ್ನು ವಿವರಿಸುವ ಮೊದಲು ಕಬ್ಬಿನ ಬಗ್ಗೆ ಸ್ವಲ್ಪ ವಿವರಣೆ ಅಗತ್ಯ. ಕಬ್ಬು ಒಂದು
ದೀರ್ಘ ಕಾಲದ ಬೆಳೆ, ಕಬ್ಬನ್ನು ಸಸಿಯಿಂದ ಕಟಾವಿನ ಹಂತದವರೆಗು ಬೆಳೆಯಲು ಕನಿಷ್ಟ
ಹನ್ನೊಂದು ತಿಂಗಳು ಬೇಕಾಗುತ್ತದೆ. ಕಬ್ಬು ಬೆಳೆಗಾರರಿಗೆ ಸರ್ಕಾರದಿಂದ ಸಾಲ
ದೊರೆಯುತ್ತದೆ. ಸರ್ಕಾರ, ರೈತನು ಬೆಳೆದ ಕಬ್ಬನ್ನು ತನ್ನದೇ ಅಧೀನದಲ್ಲಿರುವ
ಕಾರ್ಖಾನೆಗೆ ಕೊಡುವಂತೆ ಒಪ್ಪಂದ ಮಾಡಿಕೊಂಡು ಕಡಿಮೆ ಬಡ್ಡಿ ದರದಲ್ಲಿ ಸಾಲ
ಕೊಡುತ್ತದೆ. ನಿಗಧಿತ ಸಮಯದಲ್ಲಿ ಕಬ್ಬನ್ನು ಕಾರ್ಖಾನೆಗೆ ಒದಗಿಸದ ಪಕ್ಷದಲ್ಲಿ,
ಸಾಲವನ್ನು ಬಡ್ಡಿ ಮತ್ತು ಇತರೆ ದಂಡಗಳ ಸಮೇತ ಹಿಂತಿರುಗಿಬೇಕಾಗುತ್ತದೆ. ಇತ್ತ
ಸರ್ಕಾರದ ಅಧೀನದಲ್ಲಿರುವ ಕಾರ್ಖಾನೆಯ ಫೀಲ್ಡ್ ಮ್ಯಾನ್ ನಿಂದ ರೈತನ ಜಮೀನನ್ನು
ಪರಿಶೀಲಿಸಿ ಆ ಜಾಗದಲ್ಲಿ ಬೆಳೆಯಬಹುದಾದ ಕಬ್ಬನ್ನು ಅಂದಾಜಿಸಿ, ಕಟಾವಿನ ಸಮಯದಲ್ಲಿ
ಅಂದಾಜಿಸದಷ್ಟೇ ಕಬ್ಬು ಜಮೀನಿನಲ್ಲಿ ದೊರೆಯಬೇಕೆಂದು ಒಪ್ಪಂದದಲ್ಲಿ ಹೇಳಿರುತ್ತಾರೆ.
ಇದು ಸಾಲ ನೀಡಿ ರೈತನಿಂದ ಮರುಪಾವತಿ ಪಡೆಯುವುದಕ್ಕೆ ಸರ್ಕಾರ ಮಾಡಿರುವ ನಿಯಮ. ಆದರೆ
ಇಲ್ಲಾಗುವ ವ್ಯತಿರಿಕ್ತ ಪರಿಣಾಮಗಳೆಂದರೆ ಕಾರ್ಖಾನೆಯು ಒಂದೊಮ್ಮೆ ಫೀಲ್ಡ್ ಮ್ಯಾನ್
ನನ್ನು ಕಳಿಸಿ ಬೆಳೆಯನ್ನು ಅಂದಾಜಿಸಿದ ಮೇಲೂ ಕೆಲವೊಮ್ಮೆ ಸರಿಯಾದ ಸಮಯದಲ್ಲಿ ಕಟಾವು
ಮಾಡಿಸುವಲ್ಲಿ ತಡಮಾಡುತ್ತದೆ. (ಇದಕ್ಕೆ ಬೇರೆ ಬೇರೆಯದೇ ಕಾರಣಗಳಿರುತ್ತವೆ,
ಕಾರ್ಖಾನೆಯೂ ಅದಾಗಲೇ ಬೇರೆ ಕಡೆಯಿಂದ ಕಡಿಮೆ ಬೆಲೆಯ ಕಬ್ಬು ತರಿಸಿದ್ದರೆ,
ಕಾರ್ಖಾನೆಯಲ್ಲಿ ಕಡಿಮೆ ಕಬ್ಬನ್ನು ಅರೆಯುವ ಅವಕಾಶವಿದ್ದು ಜಾಸ್ತಿ ಜಮೀನಿಗೆ ಒಪ್ಪಂದ
ಮಾಡಿಕೊಂಡಿದ್ದರೆ, ಮಳೆ ಸರಿಯಾಗಿ ಆಗದೇ ಬೆಳೆಯೇ ತಡವಾಗಿದ್ದರೆ, ಇತ್ಯಾದಿ) ಆಗ ತಪ್ಪು
ಸರ್ಕಾರದ ಅಧೀನದಲ್ಲಿರುವ ಕಾರ್ಖಾನೆಯದ್ದೇ ಆದರೂ ರೈತ ತಾನು ಪಡೆದಿರುವ ಸಾಲಕ್ಕೆ
ಬಡ್ಡಿ ಕಟ್ಟಲೇ ಬೇಕು. ಸರ್ಕಾರದ್ದೇ ಅಧೀನದಲ್ಲಿರುವ ಎರೆಡು ವಿಭಾಗಗಳು ಒಂದಕ್ಕೊಂದು
ಪೂರಕವಲ್ಲದೆ ರೈತನಿಗೆ ಅನಾನುಕೂಲಕರವಾಗಿದೆ ಎಂಬುದು ಒಂದು ಅಂಶವಾದರೆ, ಒಂದೊಮ್ಮೆ
ಕಬ್ಬಿನ ಬೆಲೆಯಲ್ಲಿ ಏರಿಕೆ ಇದ್ದರೆ ಕೆಲವು ರೈತರು ಖಾಸಗೀ ಕಾರ್ಖಾನೆಯವರಿಗೆ
(ಬಂಡವಾಳಶಾಹಿಗಳಾದ ಖಾಸಗೀ ಕಾರ್ಖಾನೆಯವರು ತಮ್ಮ ಉತ್ಪನ್ನಗಳನ್ನು ಹೆಚ್ಚಿನ
ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಂಡಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಿ
ಹೆಚ್ಚಿನ ಬೆಲೆಗೆ ಮಾರುತ್ತಾರೆ) ತಮ್ಮ ಬೆಳೆಯನ್ನು ಹೆಚ್ಚಿನ ಬೆಲೆಗೆ ಮುಂಚೆಯೇ
ಮಾರಿಕೊಂಡು ಕಾರ್ಖಾನೆಯವರು ಬಂದಾಗ ಬೆಳೆಯಿಲ್ಲದ ಜಮೀನನ್ನು ತೋರಿಸುತ್ತಾರೆ.
ಕಾರ್ಖಾನೆಯಲ್ಲಾಗ ಕಬ್ಬಿನ ಪೂರೈಕೆ ಇಲ್ಲದೆ ಅರೆಯುವ ಮಶೀನುಗಳು ಬಳಕೆಯಾಗದೆ ಸರ್ಕಾರವು
ಅದರಲ್ಲಿ ತೊಡಗಿಸಿದ ಹಣ ಪೋಲಾಗುತ್ತದೆ. ಕಬ್ಬಿನ ಬೆಲೆಯ ಹೆಚ್ಚಳಕ್ಕೆ, ಸಾಲ ಮನ್ನಾ
ಮಾಡಲಿಕ್ಕೆ ಮುಷ್ಕರಗಳು ಹೂಡಲಾಗುತ್ತದೆಯಾದರೂ ನಿಜವಾಗಿಯೂ ತೊಡಕಾಗಿರುವ ಈ
ಕಾರಣಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸರ್ಕಾರ ಮತ್ತು ಇತರ ಹೋರಾಟಗಾರರೆನಿಸಿಕೊಂಡವರು
ಸೋಲುತ್ತಾರೆ.
ಇದು ಗಮನಕ್ಕೆ ಬಂದ ಉದಾಹರಣೆಯಾಗಿದ್ದು ವ್ಯವಸಾಯ ಮಾಡುವಾಗ ಇಂತಹ ಹಲವು ಹತ್ತು
ಸಮಸ್ಯೆಗಳನ್ನು ರೈತನು ಎದುರಿಸಬೇಕಾಗುತ್ತದೆ. ರೈತನ ಜೀವನ ನಾನಂದುಕೊಂಡಷ್ಟು ಸುಲಭವೂ,
ಸಲೀಸೂ ಅಲ್ಲ ಎಂಬುದರ ಅರಿವಾಯಿತು. ಇವೆಲ್ಲದರ ಅರಿವು ಎಷ್ಟು ಜನಕ್ಕೆ ಇರುತ್ತದೆ?
ಅರಿವು ಮೂಡಿದ ಮೇಲಾದರೂ ಯುವಜನಾಂಗವೆನಿಸಿಕೊಂಡ ನಾವು ಮಾಡಬೇಕಾದದ್ದೇನು? ಇಂದಿನ ಯುವ
ಪೀಳಿಗೆ ವ್ಯವಸಾಯದಲ್ಲಿ ತೊಡಗುತ್ತಿಲ್ಲ ಎಂದು ದೂರುವ ಹಿರಿಯರಿಗೆ, ಇಲ್ಲಿನ
ಅನಾನುಕೂಲಗಳ ಅರಿವಿಲ್ಲವೇ? ಹಾಯಾದ ಪಟ್ಟಣದ ಜೀವನ ನೌಕರಿ ಎಲ್ಲವನ್ನು ಬಿಟ್ಟು
ವ್ಯವಸಾಯ ಮಾಡಲು ಯುವಕರಾದರೂ ಏಕೆ ಮುಂದೆ ಬಂದಾರು? ಮುಂದೆ ಬರುವಂತೆ ನಮ್ಮ ಸರ್ಕಾರ
ಏನು ಕ್ರಮ ತೆಗೆದುಕೊಂಡಿದೆ? ನಮ್ಮ ಶಿಕ್ಷಣ ಪದ್ದತಿಯು ರೈತರ ಸಮಸ್ಯೆಗಳು
ಯುವಜನಾಂಗಕ್ಕೆ ಎಷ್ಟರ ಮಟ್ಟಿಗೆ ಮುಟ್ಟಿಸುತ್ತಿದೆ? ನಗರದ ಜನತೆಗೆ ಹೀಗೆ
ಹಳ್ಳಿಗಳಲ್ಲಿ ರೈತರು ಅನುಭವಿಸುತ್ತಿರುವ ಬವಣೆ ತಿಳಿದಿದೆಯೇ? ನಮ್ಮಲ್ಲಿಲ್ಲಿ ದೇಶದ
ತುಂಬಾ ಸಮಸ್ಯೆಗಳಿವೆ, ಸ್ವಾತಂತ್ರ್ಯದದಿನ, ನಟಿಯೊಬ್ಬಳು ಮುಖ್ಯಮಂತ್ರಿಯನ್ನು
ಕೇಳುತ್ತಾಳೆ ’ನೀವೇಕೆ ವೈಟ್ ಸಫಾರಿ ಹಾಕುತ್ತೀರಿ? ನೀವು ಮ್ಯಾನಿಕ್ಯೂರ್ ಪೆಡಿಕ್ಯೂರ್
ಮಾಡಿಸುತ್ತೀರ? ಬ್ಯೂಟಿ ಪಾರ್ಲರಿಗೆ ಹೋಗುತ್ತೀರ?’ ನಗುವುದೋ ಅಳುವುದೋ ನೀವೆ ಹೇಳಿ?!
(ಮುಗಿಸುವ ಮುನ್ನ: ಇದನ್ನೆಲ್ಲ ತಿಳಿದುಕೊಂಡು ಹೀಗೆ ಬರೆಯುತ್ತಿರುವುದರಿಂದ ನನ್ನ
ದೇಶಕ್ಕೆ ಅದರ ಸಮಸ್ಯೆಗಳ ನಿವಾರಣೆಗೆ ನಾನು ಉಪಕಾರ ಮಾಡುತ್ತಿದ್ದೇನೆ ಎಂದು
ನನಗನಿಸುತ್ತಿಲ್ಲ. ನಗರದ ನೌಕರಿಯಲ್ಲಿ ಆರಾಮವಾಗಿ ಕಾಲ ಕಳೆಯುತ್ತಿರುವ ನಾನು ಹಳ್ಳಿಗೆ
ಹೋಗಿ ಎಂದಾದರು ಮೈ ಬಗ್ಗಿಸಿ ದುಡಿಯಬಲ್ಲೆನೇ? ಬಡಕಲು ದನಗಳಿಗೆ ನೇಗಿಲನ್ನು ಕಟ್ಟಿ
ವ್ಯವಸಾಯ ಮಾಡುತ್ತಿರುವ ರೈತನಿಗೆ ನಗರದಲ್ಲಿ ನಮಗೆ ಸಿಗುವ ಸಾರ್ವಜನಿಕ ಸೌಲಭ್ಯಗಳ ಶೇ
೫ ರಷ್ಟೂ ಸಿಗುತ್ತಿಲ್ಲ. ಓದಿರುವ ನಾವು ಸರ್ಕಾರಿ ನೌಕರಿಗಳಲ್ಲಿನ ಮೀಸಲಾತಿ,
ಕನ್ನಡಪರಚಳವಳಿಗಳಲ್ಲಿ ತುಸು ಹೆಚ್ಚೇ ಎನಿಸುವಷ್ಟು ಹೋರಾಡುತ್ತೀವಾದರೂ, ರೈತನ ಕಷ್ಟಗಳ
ಬಗ್ಗೆ ಎಂದಾದರೂ ಯೋಚಿಸಿದ್ದೇವೆಯೇ? ನಿಜವಾಗಿಯೂ ಅತಿ ಹೆಚ್ಚಿನ ಪ್ರಾಮುಖ್ಯತೆ,
ಸೌಲಭ್ಯಗಳು ಸಿಗಬೇಕಾಗಿರುವುದು ನಮ್ಮ ದೇಶದ ಬೆನ್ನೆಲುಬಾದ ರೈತನಿಗಲ್ಲವೇ?)
ವಾರಾಂತ್ಯದ ಕವಿತೆ: ಈರುಳ್ಳಿ
Posted ಜುಲೈ 31, 2009
on:– ರಂಜಿತ್ ಅಡಿಗ, ಕುಂದಾಪುರ.
ಒಮ್ಮೆಯಾದರೂ ಈ ಸಂಬಂಧಗಳಾಳಕ್ಕೆ
ಇಣುಕಲೇ ಬೇಕು
ಅದು ಈರುಳ್ಳಿ ಸಿಪ್ಪೆ ಸುಲಿದಂತೆ
ಮೊನ್ನೆಮೊನ್ನೆಯವರೆಗೂ ತನ್ನ
ಜೀವಕ್ಕಿಂತ ಹೆಚ್ಚು ಪ್ರೀತಿಸ್ತೀನಿ ಅಂತ
ಒದ್ದೆ ಕಣ್ಣಾಲಿಗಳಿಂದ ಹೇಳಿದ ಗೆಳತಿ
ಕಮ್ಮಿ ಮಾರ್ಕ್ಸು ಬಂದರೆ
ಮನೆಯಿಂದ ಓಡಿಸ್ತೀನಿ ಎಂದು
ಸಿಕ್ಕಾಪಟ್ಟೆ ಬೈದ ಅಪ್ಪ
ಕ್ಯಾಂಪಸ್ಸಿನಲ್ಲಿ ಕೆಲಸ
ಸಿಗಲಿಲ್ಲವೆಂದೊಮ್ಮೆ ಸುಮ್ಮನೆ
ಪರೀಕ್ಷೆ ಮಾಡಲು ಹೇಳಿದ ಕೂಡಲೇ
ಕೆಲಸ ಸಿಗದವನನ್ನು ಮದ್ವೆಯಾಗ್ತೀನಂತ
ಹ್ಯಾಗೆ ತನ್ನಪ್ಪನನ್ನು ಒಪ್ಪಿಸಬೇಕು
ನೀ ನನ್ನ ಮರೆಯಲೇಬೇಕು
ಎಂದು ತನ್ನ ಜೀವವನ್ನೇ ಕಡೆಗಣಿಸಿದಳಾಕೆ
ಮನೆಯನ್ನು ಒತ್ತೆಯಿಡೋಣ
ರಿಟಾಯರ್ಮೆಂಟ್ ಹಣವೂ ಬರಬಹುದು
ಸ್ವಂತ ಬಿಸಿನೆಸ್ಸು ಆರಂಭಿಸು ಮಗನೇ ಅನ್ನುವನು ಅಪ್ಪ
ಎರಡೂ ಮಾತಿಗೂ ಉಕ್ಕಿದ್ದು
ಕಣ್ಣೆದುರಿಗಿನ
ಪರದೆ ಜಾರಿಸೋ ಕಣ್ಣಿರೇ.
ನನ್ನ ಅರ್ಜಿಗೆ ಇನ್ನೂ ಉತ್ತರ ಬಂದಿಲ್ಲ!
Posted ಜುಲೈ 15, 2009
on:- In: ಮೇರಿ ಮರ್ಜಿ
- 3 Comments
– ರೇಶ್ಮಾ ನಾರಾಯಣ, ಉಡುಪಿ
ಅವನು ನಮ್ಮ ಪುಟ್ಟ ಜಗತ್ತಿಗೆ ಅದ್ಭುತ ಹೀರೋ ಆಗಿದ್ದ
ನಾನು ಪ್ರೈಮರಿಯಲ್ಲಿದಾಗ ಟಿ.ವಿ ಯಲ್ಲಿ ಶಕ್ತಿಮಾನ್ ಅಂತ ಒಂದು ಧಾರಾವಾಹಿ ಬರ್ತಿತ್ತು. ನನ್ನ ಥರಾನೇ ಎಲ್ಲ ಮಕ್ಕಳೂ ಇಷ್ಟ ಪಡ್ತಿದ್ದ ಧಾರಾವಾಹಿ ಅದು. ಪ್ರತಿ ಆದಿತ್ಯವಾರ ಮಧ್ಯಾನ್ ೧೨ ಗಂಟೆಗೆ ಬರ್ತಿದ್ದ ಧಾರಾವಾಹಿ ನೋಡ್ಕೊಂಡು ಹೋಗಿ, ಸೋಮವಾರ ಬೆಳಿಗ್ಗೆ study periodನಲ್ಲಿ ಫ್ರೆಂಡ್ಸ್ ಜೊತೆ ಅದರ ಬಗ್ಗೆ ಪಾಠಕ್ಕಿಂತ ಸೀರಿಯಸ್ ಆಗಿ ಚರ್ಚೆ ಮಾಡ್ತಿದ್ವಿ. ಆಕಸ್ಮಾತ್ ಧಾರಾವಾಹಿ ಬರೋ ಟೈಮಲ್ಲಿ ಕರೆಂಟ್ ಇಲ್ಲದಿದ್ರೆ ಮಾತ್ರ ಕೆ. ಇ ಬಿ ಯವರಿಗೆ ಮನಸಾರೆ ಶಾಪ ಹಾಕುತ್ತಿದ್ವಿ. ಕರೆಂಟ್ ಇದ್ದ ಒಂದು ದಿನಾನೂ ’ಶಕ್ತಿಮಾನ್’ ನ ಮಿಸ್ ಮಾಡ್ಕೊಂಡಿರಲಿಲ್ಲ. ಶನಿವಾರನೇ ಹೋಂವರ್ಕ್ ಮುಗಿಸಿ ಕುಳಿತಿರುತ್ತಿದ್ವಿ.
ಆ ಒಂದು ಗಂಟೆಯ ಅವಧಿ ನಮ್ಮ ಪಾಲಿಗೆ ಅತೀ ಪ್ರಿಯವಾಗಿರ್ತಿತ್ತು. ಆ ಟೈಂ ನಲ್ಲಿ ಊಟಕ್ಕೆ ಕರೆದರೂ ನಾವು ಕೇಳಿಸದಂತೆ ಕೂತಿರ್ತಿದ್ವಿ. ಶಕ್ತಿಮಾನ್ ಪಾತ್ರಧಾರಿ ಮುಖೇಶ್ ಖನ್ನಾ ಹಾಕಿಕೊಳ್ತಿದ್ದ ಆ ಕೆಂಪು ಜಾಕೆಟ್, ಅದರ ನಡುವಿನ ಗೋಲ್ಡ್ ಕಲರ್ ಸ್ಟಾರ್ ಎಲ್ಲಾ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಶಕ್ತಿಮಾನ್ ಟ್ಯಾಟ್ಟೂ ಗಳನ್ನಂತೂ ರಾಶಿ ರಾಶಿ ಒಟ್ಟು ಮಾಡಿ ಪುಸ್ತಕ, ಕಂಪಾಸ್ ನ ಮೇಲೆಲ್ಲಾ ಅಂಟಿಸುತ್ತಿದ್ವಿ. ದ್ವಿಜ್ ಎಂಬ ಬಾಲಕನ ಕೈಯಲ್ಲಿನ ಆ ಟೈಮ್ ಮಶೀನ್ ಕನಸಲ್ಲೂ ನಮ್ಮನ್ನು ಕಾಡುತ್ತಿತ್ತು. ಅವನು ಅಲ್ಲಿ ರಾಕ್ಷಸರ ಜೊತೆ ಹೋರಾಡುತ್ತಿದ್ದರೆ ನಾವು ಇಲ್ಲಿ ಕುಳಿತು ನಾವೇ ಹೊಡೆದಾಡ್ತಿದ್ದೀವಿ ಅನ್ನೋ ಥರ ಆಡ್ತಿದ್ವಿ.
ಶಕ್ತಿಮಾನ್ ನ ’ಪಂಡಿತ್ ಗಂಗಾಧರ್ ವಿದ್ಯಾಧರ್ ಮಾಯಾಧರ್ ಓಂಕಾರನಾಥ್ ಶಾಸ್ತ್ರಿ’ ಅನ್ನೋ ಡೈಲಾಗ್ ಅಂತೂ ಫೇವರೀಟ್ ಆಗಿತ್ತು. ಅದರಲ್ಲಿನ ಗಿಲ್ ವಿಶ್ ಅನ್ನೋ ರಾಕ್ಷಸ ಕೈ ಬೆರಳುಗಳನ್ನು ತಿರುಗಿಸೋ ರೀತಿ ಭಯಾನಕವಾಗಿರ್ತಿತ್ತು. ಮಾತಾಡಿದ್ದಕ್ಕೆ ಹೆಸರು ಬರೆದು ಟೀಚರ್ ಗೆ ಕೊಟ್ಟ ನಮ್ಮ ಕ್ಲಾಸ್ ನ ಒಬ್ಬ ಹುಡುಗನಿಗೆ ’ಗಿಲ್ ವಿಶ್’ ಅಂತ ಹೆಸರಿಟ್ಟು ಬೇಕಾದಷ್ಟು ಬೈದು ಸಿಟ್ಟು ತೀರಿಸ್ಕೋತಿದ್ವಿ. ರಜೆಯಲ್ಲಿ ಶಕ್ತಿಮಾನ್ ಆಟ ಆಡೋವಾಗ ’ನಾನಾಗ್ತೀನಿ.. ತಾನಾಗ್ತೀನಿ’ ಅಂತ ಗಲಾಟೆ ಮಾಡಿ ಕೊನೆಗೆ ಆಟ ಜಗಳದಲ್ಲಿ ಮುಗಿದಿರ್ತಿತ್ತು. ಅದರ ಕ್ರೇಜ್ ಎಷ್ಟಿತ್ತು ಅಂದರೆ ಅದು ಮುಗಿದಾಗ, ’ಪುನಃ ಮೊದಲಿನಿಂದನಾದ್ರೂ ತೋರಿಸ್ಬೇಕಿತ್ತು’ ಅಂದುಕೊಂಡಿದ್ವಿ. ಶಕ್ತಿಮಾನ್ ಥರಾನೇ ಮಹಡಿ ಮೇಲಿಂದ ಹಾರೋಕೆ ಹೋಗಿ ಒಬ್ಬ ಹುಡುಗ ಬಿದ್ದು ಪ್ರಾಣ ಕಳೆದುಕೊಂಡ ಅಂತ ಗೊತ್ತಾದಾಗ ತುಂಬಾ ಬೇಜಾರಾಗಿತ್ತು. ಶಕ್ತಿಮಾನ್ ನ ಹಾಗೇ ನಂಗೂ ಅದ್ಭುತವಾದ ಶಕ್ತಿ ಕೊಡು ಅಂತ ದೇವರಿಗೆ ಹಾಕಿದ ಅರ್ಜಿಗೆ ಅವನ ಕಡೆಯಿಂದ ಇನ್ನೂ ಉತ್ತರ ಬಂದಿಲ್ಲ.
– ಸುಪ್ರೀತ್ ಕೆ. ಎಸ್, ಬೆಂಗಳೂರು.
ಪ್ರತಿನಿತ್ಯ ತಪ್ಪದೆ ಬ್ಲಾಗಿಗೆ ಬರೆಯಬೇಕು ಅಂದುಕೊಂಡಿದ್ದೆ. ಅದನ್ನೊಂದು ಸಾಧನೆ ಎನ್ನುವ ಹಾಗೆ ಭಾವಿಸಿದ್ದೆ. ಏಕೆ ದಿನನಿತ್ಯ ಬರೆಯಬೇಕು ಎಂದು ಕೇಳಿಕೊಳ್ಳುವ ತಾಳ್ಮೆ ಇರುತ್ತಿರಲಿಲ್ಲ. ಏನೋ ಉನ್ಮಾದ. ಬರೀ ಬೇಕು ಅನ್ನಿಸಿದ ತಕ್ಷಣ ಬರೆಯಲು ಶುರುಮಾಡಿಬಿಡಬೇಕು. ಏನಾದರೂ ಮಾಡಬೇಕೆಂಬ ಹುಮ್ಮಸ್ಸು ಹುಟ್ಟಿದಾಗ ದೊಡ್ಡವರು ಅದರ ಇಹಪರಗಳ ಬಗ್ಗೆ ಯೋಚಿಸಿ ಮಾಡು ಎಂದಾಗ ಹುಟ್ಟುವ ರೇಜಿಗೆಯನ್ನೇ ನಮ್ಮನ್ನು ನಾವು ನಿಧಾನಿಸಲು ಪ್ರಯತ್ನಿಸಿದಾಗ ಎದುರಿಸಬೇಕಾಗುತ್ತದೆ. ಈ ಹದಿ ವಯಸ್ಸಿನಲ್ಲಿ ಯಾವಾಗಲೂ ವಿವೇಕಕ್ಕಿಂತ ಸಂಕಲ್ಪಶಕ್ತಿ, ಕ್ರಿಯಾಶೀಲತೆಯೇ ಹೆಚ್ಚಾಗಿರುತ್ತದೆಯೇನೋ! ಹಾಗಾಗಿ ನಾನು ಉಕ್ಕುವ ಉತ್ಸಾಹಕ್ಕೆ ಬ್ರೇಕ್ ಹಾಕುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಆದರೆ ಆ ಕೆಲಸವನ್ನು ನನ್ನ ಸೋಮಾರಿತನ, ಅಶಿಸ್ತುಗಳು ನಿರ್ವಹಿಸುವುದರಿಂದ ನನಗೆ ಹೆಚ್ಚಿನ ಹಾನಿಯೇನೂ ಆಗಿಲ್ಲ!
ಪ್ರತಿದಿನ ಬ್ಲಾಗು ಬರೆಯಬೇಕು ಎಂಬುದರ ಹಿಂದೆ ಕೇವಲ ಬರಹದ ಪ್ರಮಾಣದ ಮೇಲಿನ ಮೋಹ ಕೆಲಸ ಮಾಡುತ್ತಿತ್ತು. ನನ್ನನ್ನು ಪ್ರಭಾವಿಸಿದ ಪತ್ರಕರ್ತನ ಹಾಗೆ ದಿನಕ್ಕಷ್ಟು ಪುಟ ಬರೆಯಬೇಕು, ವಾರಕ್ಕೆ ಇಷ್ಟು ಓದಬೇಕು ಎಂಬ ಅನುಕರಣೆಯ ಗುರಿಗಳನ್ನು ನನ್ನೆದುರು ಇರಿಸಿಕೊಂಡಿದ್ದೆ. ನನ್ನದಲ್ಲದ ಗುರಿಯೆಡೆಗೆ ಓಡುವ ಧಾವಂತ ಪಡುತ್ತಿದ್ದೆ. ನನ್ನದಲ್ಲದ ಹಸಿವಿಗೆ ಊಟ ಮಾಡುವ, ನನ್ನದಲ್ಲದ ಹೊಟ್ಟೆನೋವಿಗೆ ಔಷಧಿ ಕುಡಿಯುವ ಹುಂಬತನದ ಅರಿವೇ ಆಗಿರಲಿಲ್ಲ. ಒಬ್ಬ ಕವಿಯನ್ನೋ, ಲೇಖಕನನ್ನೋ, ಕಥೆಗಾರನನ್ನೋ, ಸಿನೆಮಾ ನಿರ್ದೇಶಕನನ್ನೋ, ಹೀರೋವನ್ನೋ ಪ್ರಾಣ ಹೋಗುವಷ್ಟು ಗಾಢವಾಗಿ ಪ್ರೀತಿಸುವುದು, ಆರಾಧಿಸುವುದು, ಅನುಕರಣೆಯಲ್ಲಿ ಸಾರ್ಥಕ್ಯವನ್ನು ಕಂಡುಕೊಳ್ಳುವುದು, ಅನಂತರ ಸ್ವಂತಿಕೆ ಕಳೆದುಕೊಂಡ ಅಭದ್ರತೆ ಕಾಡಿದಾಗ ಆ ಪ್ರೇರಣೆಯ ಮೂಲವನ್ನೇ ದ್ವೇಷಿಸಲು ತೊಡಗುವುದು ಇದೆಲ್ಲಾ ಯಾಕೆ ಬೇಕು? ಆದರೆ ಈ ಅರಿವು ಒಂದು ಅಚ್ಚಿನಲ್ಲಿ ಮೌಲ್ಡ್ ಆಗುವಾಗಿನ ಸುಖವನ್ನು, ಐಶಾರಾಮವನ್ನು ಅನುಭವಿಸುವಾಗ ಉಂಟಾಗುವುದಿಲ್ಲ. ಅದೇ ತಮಾಷೆಯ ಹಾಗೂ ದುರಂತದ ಸಂಗತಿ.
ವಿಪರೀತ ಬರೆಯಬೇಕು ಅನ್ನಿಸುವುದು ಸಹ ತುಂಬಾ ಮಾತಾಡಬೇಕು ಅನ್ನಿಸುವುದುರ ತದ್ರೂಪು ಭಾವವಾ? ಮಾತು ಹೇಗೆ ಚಟವಾಗಿ ಅಂತಃಸತ್ವವನ್ನು ಕಳೆದುಕೊಂಡು ಕೇವಲ ಶಬ್ಧವಾಗಿಬಿಡಬಲ್ಲುದೋ ಹಾಗೆಯೇ ಬರವಣಿಗೆಯು ಬರಡಾಗಬಲ್ಲದಾ? ವಿಪರೀತ ಬರೆಯಬೇಕು ಎಂದು ತೀರ್ಮಾನಿಸಿದವರು ವಾಚಾಳಿಯಾಗಿಬಿಡಬಲ್ಲರಾ? ಮನಸ್ಸಲ್ಲಿ ಕದಲುವ ಪ್ರತಿ ಭಾವವನ್ನೂ ಅಕ್ಷರಕ್ಕಿಳಿಸಿಬಿಡುವ, ಆ ಮೂಲಕ ತೀರಾ ಖಾಸಗಿಯಾದ ಭಾವವನ್ನು ಪ್ರದರ್ಶನದ ‘ಕಲೆ’ಯಾಗಿಸಿಬಿಡುವುದು ಒಳ್ಳೆಯದಾ? ಇವೆಲ್ಲಕ್ಕೂ ಉತ್ತರವನ್ನೂ ಸಹ ಅಕ್ಷರದ ಮೂಲಕವೇ ಕೇಳಿಕೊಳ್ಳುವ ಅನಿವಾರ್ಯತೆ ಇರುವುದು ನಮ್ಮ ಪರಿಸ್ಥಿತಿಯ ವ್ಯಂಗ್ಯವಲ್ಲವೇ? ನಮ್ಮೊಳಗಿನ ದನಿಗೆ ಅಭಿವ್ಯಕ್ತಿಕೊಡುವ ಮಾಧ್ಯಮವೂ ಕೂಡ ನಮ್ಮ ಚಟವಾಗಿಬಿಡಬಹುದೇ? ಅಕ್ಷರಗಳ ಮೋಹ ನಮ್ಮೊಳಗಿನ ದನಿಯನ್ನು ನಿರ್ಲಕ್ಷಿಸಿಬಿಡುವ ಅಪಾಯವಿದೆಯೇ? ಅಥವಾ ಇವೆಲ್ಲಕ್ಕೂ ಮನ್ನಣೆ, ಪ್ರಸಿದ್ಧಿ, ಹೆಸರುಗಳೆಂಬ ವಿಷಗಳು ಸೇರಿಕೊಂಡು ಬಿಟ್ಟಿವೆಯೇ?
ತುಂಬಾ ಬರೆಯುತ್ತಾ, ಯಾವಾಗಲೋ ಒಮ್ಮೆ ನಾನು ವಿಪರೀತ ವಾಚಾಳಿಯಾಗಿಬಿಟ್ಟೆನಾ ಅನ್ನಿಸತೊಡಗುತ್ತದೆ. ಅದರಲ್ಲೂ ಈ ಬ್ಲಾಗ್ ಬರಹಗಳಲ್ಲಿ ನನ್ನ ವೈಯಕ್ತಿಕ ಅನುಭವ, ವಿಚಾರ, ತಳಮಳಗಳನ್ನೇ ದಾಖಲಿಸುತ್ತಾ ಕೆಲವೊಮ್ಮೆ ನಾನು ಬರೀ ಮಾತುಗಾರನಾಗಿಬಿಟ್ಟೆನಾ ಎಂಬ ಭಯವಾಗುತ್ತದೆ. ನನ್ನ ಓದು ನಿಂತುಹೋಗಿಬಿಟ್ಟಿತಾ ಎಂಬ ಆತಂಕ ಕಾಡುತ್ತದೆ. ಈ ಸಕಲ ವ್ಯವಹಾರಗಳಿಗೂ ತಿಲಾಂಜಲಿಯಿತ್ತು ಕೆಲಕಾಲ ಎಲ್ಲಾದರೂ ಅಡಗಿಕೊಂಡು ಬಿಡಲಾ ಅನ್ನಿಸುತ್ತದೆ. ಬರೆಯುವುದನ್ನೆಲ್ಲಾ ಬಿಟ್ಟು ಓ ಹೆನ್ರಿಯ ಕಥೆಯಲ್ಲಿನ ಪಾತ್ರದ ಹಾಗೆ ಒಬ್ಬಂಟಿ ಕೋಣೆಯಲ್ಲಿ ಓದುತ್ತಾ, ಚಿಂತಿಸುತ್ತಾ, ಧ್ಯಾನಿಸುತ್ತಾ ಬದುಕು ಕಳೆದುಬಿಡಲಾ ಎನ್ನಿಸುತ್ತದೆ. ಹೀಗೆ ಬರೆಯುತ್ತಲೇ ಇದ್ದರೆ ನನ್ನ ತಿಳುವಳಿಕೆ, ಜ್ಞಾನ ಸೀಮಿತವಾಗಿಬಿಡುತ್ತದಾ ಎನ್ನಿಸುತ್ತದೆ. ಈ ಬಗೆಯ ಭಾವಗಳು ಕಾಡಿದಾಗ ಒಂದಷ್ಟು ದಿನ ಬ್ಲಾಗು ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೇನೆ. ನಾವು ಗೆಳೆಯರು ನಡೆಸುತ್ತಿರುವ ಈ ಪತ್ರಿಕೆಗೆ ರಾಜೀನಾಮೆ ಕೊಟ್ಟುಬಿಟ್ಟಿದ್ದೇನೆ. ಒಂದೆರಡು ತಿಂಗಳು ಅದರಿಂದ ದೂರವಾಗಿಬಿಟ್ಟಿದ್ದೇನೆ. ಮತ್ತೆ ಅದನ್ನು ಅಪ್ಪಿಕೊಂಡಿದ್ದೇನೆ.
ಪರಿಸ್ಥಿತಿ ಬದಲಾಯಿಸಿತಾ? ಬ್ಲಾಗು ಬರೆಯುವುದನ್ನು ಬಿಟ್ಟಾಗ ನನಗೆ ತೃಪ್ತಿ ಸಿಕ್ಕಿತಾ? ಸಮಾಧಾನ ಎನ್ನುವುದು ಸಿಕ್ಕಿತಾ? ನನ್ನನ್ನು ನಾನು ನಿರಂತರವಾದ ಓದಿಗೆ, ಅಧ್ಯಯನಕ್ಕೆ ತೊಡಗಿಸಿಕೊಳ್ಳಲು ಸಾಧ್ಯವಾಯಿತಾ? ಖಂಡಿತಾ ಇಲ್ಲ. ಓದು ಅನ್ನೋದು ತೀರಾ ಖಾಸಗಿಯಾದ ಕ್ರಿಯೆಯೇ ಆದರೂ ಅದರಲ್ಲಿ ದೊರೆಯುವ ಸಂತೋಷವನ್ನು, ನಾನು ಕಂಡುಕೊಂಡ ಸಂಗತಿಗಳನ್ನು, ಅನುಭವಿಸಿದ ಬೆರಗನ್ನು ಹಂಚಿಕೊಳ್ಳಬೇಕು ಎನ್ನುವ ಹಂಬಲವನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. ಬರೆಯುವಾಗ ನಾನು ಅದುವರೆಗೂ ಆಲೋಚಿಸಿರದಿದ್ದ ಅನೇಕ ಒಳನೋಟಕಗಳು ದಕ್ಕಿದಂತಾಗಿ ಪುಳಕಗೊಳ್ಳುವ ಸುಖವನ್ನು ಬಿಡಲು ಸಾಧ್ಯವಾಗುವುದಿಲ್ಲ. ಸೃಜನಶೀಲತೆಯಲ್ಲಿ ಸಿಕ್ಕುವ ಸಮಾಧಾನವನ್ನು ಕಳೆದುಕೊಂಡು ಇರುವುದು, ಪ್ರತಿದಿನ ರುಚಿ ರುಚಿಯಾಗಿ ತಿನ್ನುತ್ತಿದ್ದವನಿಗೆ ಒಮ್ಮೆಗೇ ಸಪ್ಪೆ ಊಟ ಹಾಕಲು ಶುರುಮಾಡಿದ ಹಾಗಾಗುತ್ತದೆ. ಬಹುಶಃ ಸ್ವಂತ ಅಭಿವ್ಯಕ್ತಿಗೆ, ನಮ್ಮವೇ ಆದ ಸೃಷ್ಠಿಗೆ ಯಾವ ಅವಕಾಶವನ್ನೂ ಕೊಡದೆ ಕೇವಲ ಹೊರಗಿನಿಂದ ಒಳಗೆ ಫೀಡ್ ಮಾಡಿಕೊಳ್ಳಬೇಕಾದ ನಮ್ಮ ಈ ಶಿಕ್ಷಣ ವ್ಯವಸ್ಥೆಯಿಂದಾಗಿ ಸಣ್ಣ ಸಣ್ಣ ಸೃಜನಶೀಲ ಕೆಲಸಗಳಲ್ಲೂ ಅಪಾರವಾದ ಖುಷಿ ಸಿಕ್ಕುತ್ತದೆಯೇನೋ! ಈ ಸಣ್ಣ ಖುಶಿ, ಅಹಂಕಾರಕ್ಕೆ ಸಿಕ್ಕುವ ಬೆಚ್ಚಗಿನ ಪ್ರೋತ್ಸಾಹಗಳನ್ನು ತೊರೆಯುವುದು ರಾಜಕಾರಣಿ ಕುರ್ಚಿಯ ಮೇಲಿನ ಆಸೆಯನ್ನು ಬಿಟ್ಟಂತೆಯೇ ಏನೋ! ಈ ನಮ್ಮ ಹಪಹಪಿಗೆ ಒಂದು ಗೌರವಯುತವಾದ ಸ್ಥಾನವಿದೆ ಆದರೆ ಅಧಿಕಾರದ ಮೇಲಿನ ಹಂಬಲಕ್ಕೆ ಅದಿಲ್ಲ ಅಷ್ಟೇ ವ್ಯತ್ಯಾಸ!
ಬ್ಲಾಗಿಂಗ್ ಕೂಡಾ ಚಟವಾಗುತ್ತಿದೆ ಎಂಬ ಇತ್ತೀಚಿನ ಕೆಲವು ಇಂಗ್ಲೀಷ್ ಪತ್ರಿಕೆಗಳ ವರದಿಗಳಲ್ಲಿನ ವೈಜ್ಞಾನಿಕ ಕಾರಣಗಳನ್ನು ಅವಲೋಕಿಸುವಾಗ ಇದೆಲ್ಲಾ ಹೊಳೆಯಿತು. ಆದರೆ ಇದನ್ನೆಲ್ಲಾ ಬರೆಯುತ್ತಾ ಹೋದಂತೆ ಹಲವು ಸಂಗತಿಗಳು ಸ್ಪಷ್ಟವಾಗುತ್ತಾ ಹೋದವು. ನಾವು ಬರೆಯುವುದು ನಮ್ಮೊಳಗೆ ಸ್ಪಷ್ಟತೆಯನ್ನು ಸ್ಥಾಪಿಸಿಕೊಳ್ಳುವುದಕ್ಕಾ?
ಮೇರಿ ಮರ್ಜಿ: ಬೇಸರದ ಘಳಿಗೆಗಳ ಗೆಳೆಯ
Posted ಜೂನ್ 17, 2009
on:ಹಾಗೆ ನೋಡಿದರೆ ಬೇಸರಿಸಿಕೊಳ್ಳಲು ಕಾರಣಗಳೇ ಬೇಕಿಲ್ಲ. ಬೆಳಿಗ್ಗೆ ಹಾಲಿನವನು ಬರದೇ ರಜೆ
ಹಾಕಿದರೂ ಮನಸ್ಸು ಮುದುಡುತ್ತದೆ.ಗೋಡೆಗೆ ನೇತು ಹಾಕಿದ ಕ್ಯಾಲೆಂಡರ್ ನ್ನು ಕಂಡರೂ ಸಾಕು,
ಇಷ್ಟು ವಯಸ್ಸಾದರೂ ಎನೂ ಸಾಧಿಸದೇ ಹೋದೆನಲ್ಲಾ ಎಂಬುದು ಕೂಡ ಸಾಕು ಮನಸ್ಸು ಬೇಸರಿಸಿ
ಮನದ ಚಿಪ್ಪೊಳಗೆ ಅವಿತು ಕುಳಿತುಕೊಳ್ಳಲು!
ಈ ಥರದ ಬೇಸರದ ಗಳಿಗೆಗಳು ಬಹುಶಃ ಪ್ರತಿ ವರುಷದ ಹುಟ್ಟುಹಬ್ಬದ ದಿನ ತಪ್ಪದೇ ಕಾಡುತ್ತದೆ.
ಹಾಗೆ ಅಲೋಚಿಸಿದರೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬಾರದು,
ಎರಡು ನಿಮಿಷದ ಮೌನ ಆಚರಣೆ ಮಾಡಬೇಕು!
ಅದೇನೆ ಇರಲಿ. ಇಂತಹ ಮುದುಡಿದ ಮನವ ಅರಳಿಸಲು ನಾನು ಮೊರೆ ಹೋಗುವುದು ಪುಸ್ತಕಗಳಿಗೆ. ಕೆಲವೊಂದು ವ್ಯಕ್ತಿಗಳಿಗೆ.ಸುಮ್ಮನೆ ಅರೆಗಳಿಗೆ ನೆನೆದುಕೊಂಡರೂ ಸಾಕು ಮನ ಪುಟಿದೆದ್ದ ಚೆಂಡು.
ಪ್ರತಿ ಮನುಷ್ಯನೊಳಗೂ ಅದಮ್ಯ ಪ್ರತಿಭೆಯ ಊಟೆಯಿರುತ್ತದೆ.ಪ್ರತಿದಿನವೂ ಸ್ವಲ್ಪ ಹೆಚ್ಚು ಕಷ್ಟಪಟ್ಟರೆ
ಅದನ್ನು ಹೊರತರಬಹುದು.ಸ್ವರ್ಗ-ನರಕಗಳೆನ್ನುವುದಿದ್ದರೆ ಸತ್ತ ನಂತರದ ಬದುಕೆನ್ನುವುದಿದ್ದರೆ ಅದನ್ನು ನಿರ್ಧರಿಸುವುದು ನಮ್ಮೊಳಗಿನ
ಪ್ರತಿಭೆಯನ್ನು ಎಷ್ಟರಮಟ್ಟಿಗೆ ಉಪಯೋಗಿಸಿದೆವು ಅನ್ನುವುದರ ಮೇಲೆ ಮಾತ್ರ ಅಂತ ಗಾಢ ವಾಗಿ
ನಂಬುವವನು ನಾನು. ಹೀಗಾಗಿ ಎನೂ ಸಾಧಿಸಲಿಲ್ಲ ಎಂಬ ವಿಷಯ ಬೇರೆಲ್ಲದಕ್ಕಿಂತ ಹೆಚ್ಚು ಆಳವಾಗಿ ಕಾಡಿಸುವ
ವಿಚಾರ ನನ್ನ ಪಾಲಿಗೆ. ಆದ್ದರಿಂದ ಈ ವಿಷಯದ ನಾಸ್ಟಾಲ್ಜಿಯ ಆಗಾಗ್ಗೆ ಹಸಿವಿನಂತೆ ಕಾಡುತಿರುತ್ತದೆ.
ಇದಕ್ಕೆ ಮದ್ದಾಗಿ ಕೆಲ ಸಲ ಯಂಡಮೂರಿ ಪುಸ್ತಕಗಳನ್ನು ಓದುತಿರುತ್ತೇನೆ. ಗುರಿ ಏನಂತ ನಿರ್ಧರಿಸುವುದರಲ್ಲಿ,
ಗುರಿಯತ್ತ ಹೆಜ್ಜೆಯಿಡುವತ್ತ ನಿಜವಾದ ನೆಮ್ಮದಿ ಸಂತೃಪ್ತಿ ಏನೆಂದು ತಿಳಿದುಕೊಳ್ಳಲು ಇದು ಬಹಳ ಸಹಾಯಕಾರಿ.
ಅದೂ ಅಲ್ಲದೇ ಸ್ಟೀಫನ್ ಹಾಕಿಂಗ್, ಹೆಲೆನ್ ಕೆಲ್ಲರ್ ನೀಲ್ ಆರ್ಮ್ ಸ್ಟ್ರಾಂಗ್ ಅಂತವರು ಜೀವನದಲ್ಲಿ ನಡೆದು
ಬಂದ ಹಾದಿಯನ್ನು ನೆನೆದುಕೊಂಡರೂ ನಿಮ್ಮಲ್ಲಿ ಜೀವನದೆಡೆಗೆ ಅನಂತ ಉತ್ಸಾಹ ಉಕ್ಕದಿದ್ದರೆ ನನ್ನಾಣೆ!
ಕಡು ಬಡತನದಲ್ಲಿದ್ದ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಂತ ಪರಿ, ಪದ್ಮನಾಭನಗರದ ರೂಮೊಂದರಲ್ಲಿ
ಕುಳಿತು ಕನ್ನಡದ ಲಕ್ಷ ಲಕ್ಷ ಜನರಿಗೆ ಪ್ರೇರಣೆ ನೀಡುತಿರುವ ಬೆಳಗೆರೆಯ ಬರಹಗಳು ಇವೆಲ್ಲವೂ ಹೇಳುವುದೊಂದೇ,
“ನೀನು ಏರಬೇಕೆಂದಿರುವ ಎತ್ತರ ನೀನು ಈಗಿರುವ ಸ್ಥಿತಿಯಲ್ಲಿಲ್ಲ… ನಿನ್ನ ಮನದೊಳಗಡೆ ನೀನಿರಿಸಿಕೊಂಡಿರುವ
ಎತ್ತರಕ್ಕಿಂತಲೂ ಮಿಗಿಲಾಗಿ ಎಷ್ಟು ಎತ್ತರ ಏರಬಲ್ಲೆ ಎಂಬುವ ಉತ್ಸಾಹದಲ್ಲಿ ಮತ್ತು ಅದರೆಡೆಗೆ ಹೋಗುವ ಶ್ರಧ್ದೆಯಲ್ಲಿದೆ”
ಇಂತಹ ಬದುಕು-ಬರಹಗಳು ನಮ್ಮನ್ನು ಒಳಗಿಂದ ದಿನೇ ದಿನೇ ಬೆಳೆಸುತ್ತಿರುವಾಗ ಇನ್ನು ಬೇಸರವೆಲ್ಲಿಯದು?
ಶ್ರಧ್ದೆ ಅಂಕಿತಭಾವಗಳು ತಮ್ಮ ಬ್ರಹ್ಮಾಂಡ ರೂಪ ಪ್ರದರ್ಶಿಸಬೇಕಾದರೆ ಗುಬ್ಬಚ್ಚಿಯಾಕಾರದ ಬೇಸರ ತಾನೆ
ಏನು ಮಾಡಬಲ್ಲದು?!
ಝೆನ್ ಕಥೆಗಳು
Posted ಜೂನ್ 15, 2009
on:ಕಣ್ಣು ಮಿಟುಕಿಸದೆ
ಆಂತರಿಕ ಯುದ್ಧಗಳಲ್ಲಿ ತೊಡಗಿದ್ದ ಜಪಾನಿನಲ್ಲಿ ಸೈನ್ಯ ಊರೊಂದಕ್ಕೆ ನುಗ್ಗಿದರೆ ಕೈಗೆ ಸಿಕ್ಕವರನ್ನೆಲ್ಲ ಕೊಂದು ಊರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದರು. ಆ ಒಂದು ಹಳ್ಳಿಯಲ್ಲಿನ ಜನರು ಸೈನ್ಯ ಆಕ್ರಮಣ ಮಾಡುವ ಮುನ್ನವೇ ತಮ್ಮ ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು ಪಲಾಯನ ಗೈದಿದ್ದರು.
ಹಳ್ಳಿಗೆ ದಾಳಿಯಿಟ್ಟ ಸೈನ್ಯಕ್ಕೆ ಬರಿದಾದ ಮನೆಗಳು, ಮಾರುಕಟ್ಟೆಗಳು ಕಂಡವು. ಆದರೆ ಒಂದು ವಿಹಾರದಲ್ಲಿ ವಯಸ್ಸಾದ ಒಬ್ಬ ಝೆನ್ ಗುರು ಮಾತ್ರ ಉಳಿದಿದ್ದ. ಆ ವೃದ್ಧ ಗುರುವಿನ ಬಗ್ಗೆ ಕುತೂಹಲ ಉಂಟಾಗಿ ಸೈನ್ಯದ ದಂಡನಾಯಕ ಆತನನ್ನು ನೋಡಲು ವಿಹಾರಕ್ಕೆ ಬಂದ.
ದಂಡನಾಯಕನನ್ನು ಕಂಡೂ ಗುರುವು ವಿಚಲಿತನಾಗಲಿಲ್ಲ. ತನ್ನನ್ನು ಕಂಡು ನಡುಗುವ, ಮಂಡಿಯೂರಿ ಕುಳಿತುಕೊಳ್ಳುವವರನ್ನೇ ಎಲ್ಲೆಡೆ ಕಂಡಿದ್ದ ದಂಡನಾಯಕನಿಗೆ ಕೋಪ ನೆತ್ತಿಗೇರಿತು.
“ಮೂರ್ಖ! ನೀನು ಯಾರ ಎದುರು ನಿಂತಿದ್ದೀಯ ಅಂತ ಗೊತ್ತಿದೆಯಾ? ಕಣ್ಣು ಮಿಟುಕಿಸದೆ ನಾನು ನಿನ್ನ ಕತ್ತು ಸೀಳಿಹಾಕಬಲ್ಲೆ” ದಂಡನಾಯಕ ಅಬ್ಬರಿಸಿದ.
ಗುರು ತಣ್ಣನೆಯ ಧ್ವನಿಯಲ್ಲಿ ಉತ್ತರಿಸಿದ, “ನೀನು ಯಾರ ಎದುರು ನಿಂತಿದ್ದೀಯ ಅಂತ ತಿಳಿದಿದೆಯಾ? ಕಣ್ಣು ಮಿಟುಕಿಸದೆ ನಾನು ನಿನ್ನ ಕತ್ತಿಗೆ ಕತ್ತು ಒಡ್ಡಬಲ್ಲೆ.”
ಈಗ ಹೇಗಿದೆ
ಸುಪ್ರಸಿದ್ಧ ಝೆನ್ ದೇವಾಲಯವೊಂದರಲ್ಲಿ ಯುವಕ ಸನ್ಯಾಸಿಯೊಬ್ಬನಿಗೆ ತೋಟವನ್ನು ನೋಡಿಕೊಳ್ಳುವ ಕೆಲಸ ಕೊದಲಾಗಿತ್ತು. ಅವನಿಗೆ ಹೂಗಳು, ಗಿಡಮರಗಳು ಎಂದರೆ ಬಹಳ ಪ್ರೀತಿ, ಅದಕ್ಕೇ ಆ ಕೆಲಸ ಕೊಟ್ಟಿದ್ದರು. ಆ ದೇವಸ್ಥಾನದ ಪಕ್ಕದಲ್ಲಿ ಇನ್ನೊಂದು ಹಳೆಯ ಪುಟ್ಟ ದೇವಸ್ಥಾನವಿತ್ತು. ಅಲ್ಲೊಬ್ಬ ವಯಸ್ಸಾದ ಝೆನ್ ಗುರು ಇದ್ದ.
ಒಂದು ದಿನ ಈ ಸುಪ್ರಸಿದ್ಧ ದೇವಾಲಯಕ್ಕೆ ಯಾರೋ ಅತಿಥಿಗಳುಬರುವರಿದ್ದರು. ಯುವಕ ಸನ್ಯಾಸಿ ಹೆಚ್ಚು ಎಚ್ಚರಿಕೆಯಿಂದ ತೋಟದ ಕೆಲಸ ಮಾಡುತ್ತಿದ್ದ. ಕಳೆಗಳನ್ನು ಕಿತ್ತ, ತರಗೆಲೆಗಳನ್ನೆಲ್ಲ ಗುಡಿಸಿದ, ಮುಳ್ಳಿನ ಪೊದೆಗಳನ್ನು ಸವರಿದ, ಸೊಟ್ಟ ಪಟ್ಟ ಬೆಳೆದಿದ್ದ ಬಳ್ಳಿಗಳನ್ನು ನೇರ ಮಾಡಿದ…ಹೀಗೇ. ತೋಟ ಅತ್ಯಂತ ಸ್ವಚ್ಛವಾಗಿಬಿಟ್ಟಿತ್ತು. ಇದನ್ನೆಲ್ಲ ಪಕ್ಕದ ಪುಟ್ಟ ದೇವಾಲಯದ ಮುದುಕ ಸನ್ಯಾಸಿ ಕುತೂಹಲದಿಂದ ನೋಡುತ್ತಿದ್ದ. ಎರಡೂ ದೇವಾಲಯಗಳ ನಡುವೆ ಪುಟ್ಟ ಗೋಡೆ ಇತ್ತು.
ಕೆಲಸ ಮುಗಿಸಿದ ಯುವಕ ಸನ್ಯಾಸಿ ಹೆಮ್ಮೆಯಿಂದ "ಹೇಗಿದೆ? ಚೆನ್ನಾಗಿದೆ ಅಲ್ಲವೇ?" ಎಂದು ಕೇಳಿದ. ವೃದ್ಧ ಸನ್ಯಾಸಿ ತನ್ನ ಕೆಲಸ ಮೆಚ್ಚುವನೆಂಬ ವಿಶ್ವಾಸ ಅವನಿಗೆ.
"ಓಹೋ, ಚೆನ್ನಾಗಿದೆ! ಆದರೆ ಏನೋ ಕೊರತೆ ಅನ್ನಿಸುತ್ತದೆ. ದಯವಿಟ್ಟು ಈ ಗೋಡೆ ಹತ್ತಿ ಬರುವುದಕ್ಕೆ ಸಹಾಯಮಾಡು, ಸರಿ ಮಾಡಿಕೊಡುತ್ತೇನೆ" ಅಂದ ವೃದ್ಧ.
ಕೊಂಚ ಹಿಂಜರಿದರೂ ಯುವಕ ಸನ್ಯಾಸಿ ವೃದ್ಧನು ಗೋಡೆ ಏರಿ ಬರುವುದಕ್ಕೆ ಸಹಾಯ ಮಾಡಿದ. ಸರಿ, ವೃದ್ಧ ನೇರವಾಗಿ ತೋಟದ ನಡುವೆ ಇದ್ದ ಮರದ ಬಳಿಗೆ ಹೋದ. ಜೋರಾಗಿ ಮರವನ್ನು ಹಿಡಿದು ಅಲುಗಿಸಿದ. ದಳದಳನೆ ಮರದೆಲೆಗಳು ಸುತ್ತಲೆಲ್ಲ ನೆಲದ ಮೇಲೆ ಉದುರಿ ಬಿದ್ದವು. "ನೋಡಿದೆಯಾ, ಈಗ ಹೇಗಿದೆ? ಸರಿ, ನನ್ನನ್ನು ಆಚೆಕಡೆಗೆ ಕಳಿಸು" ಎಂದ ವೃದ್ಧ.
ಈ ಕ್ಷಣ
ಜಪಾನಿನ ಯೋಧನೊಬ್ಬ ಯುದ್ಧದಲ್ಲಿ ಬಂಧಿತನಾಗಿ ಸೆರೆಮನೆಗೆ ತಳ್ಳಲ್ಪಟ್ಟ. ಆ ರಾತ್ರಿ ಆತನಿಗೆ ನಿದ್ದೆ ಹತ್ತಲಿಲ್ಲ. ಮರುದಿನವನ್ನು ನೆನೆಸಿಕೊಂಡು ಆತ ಕಂಗಾಲಾಗಿದ್ದ. ಮರುದಿನ ತನಗೆ ಎದುರಾಗಲಿರುವ ಹಿಂಸೆ, ಅವಮಾನಗಳನ್ನು ನೆನೆದು ಆತ ಆತಂಕಗೊಂಡಿದ್ದ. ಆಗ ಆತನಿಗೆ ತನ್ನ ಝೆನ್ ಗುರುವಿನ ಮಾತುಗಳು ನೆನಪಾದವು,
“ನಾಳೆ ಎಂಬುದು ಸತ್ಯವಲ್ಲ. ಅದೊಂದು ಮಾಯೆ. ಈ ಕ್ಷಣ ಎಂಬುದು ಮಾತ್ರ ಸತ್ಯ.”
ಯೋಧ ಗುರುವಿನ ಮಾತುಗಳನ್ನು ಮನನ ಮಾಡುತ್ತ ತನ್ನೊಳಗಿಳಿಸಿಕೊಂಡ. ಆತನ ಮನಸ್ಸು ಶಾಂತವಾಯಿತು, ಕೂಡಲೆ ನಿದ್ದೆಗೆ ಜಾರಿದ.
ಒಂದು ಕತೆ: ನಿರೀಕ್ಷೆ
Posted ಜೂನ್ 15, 2009
on:‘ಜಟಾಯು’, ಬೆಂಗಳೂರು
ಅವಳನ್ನು ನೋಡಲು ತುಂಬಾ ಹುಡುಗರು ಬರುತ್ತಿರುತ್ತಾರೆ.ಆದರೆ ಯಾರೂ ಅವಳನ್ನು ಒಪ್ಪುತ್ತಿರಲಿಲ್ಲ. ಅವಳಲ್ಲಿ ಹಣವಿಲ್ಲವೆಂದಲ್ಲ. ಅವಳ ಮೊಮ್ಮಗನೂ ತಿಂದು ತೇಗುವಷ್ಟು ಆಸ್ತಿಯಿದೆ. ಹಾಗಾದರೆ ಅವಳು ಸೌಂದರ್ಯವತಿಯಲ್ಲವೇ? ಕುರೂಪಿಯೇ? ಉಹೂಂ.. ಪದ್ಮಿನಿ ಜಾತಿಯ ಹುಡುಗಿ; ಸ್ವಂತ ಕಣ್ಣು ಬೀಳಬೇಕು ಅಂಥ ಸ್ಪುರದ್ರೂಪಿ ಹೆಣ್ಣವಳು.
ಅದೂ ಅಲ್ಲವಾದರೆ, ಸಿನೆಮಾದಲ್ಲಿ ತೋರಿಸುವಂತೆ " ಹಣವಂತರೆಲ್ಲಾ ಗುಣವಿರುವವರಲ್ಲ" ಎಂದುಕೊಂಡು ಕೆಟ್ಟವಳಿರಬೇಕು ಅಂತ ಊಹಿಸುವುದಾದರೆ ಅದೂ ನಿಜವಲ್ಲ. ಅವಳು ಒಳ್ಳೆಯವಳೇ.
ಅವಳಿಗಿರುವ ಒಂದೇ ಕೆಟ್ಟ(?) ಗುಣವೆಂದರೆ ನಿರೀಕ್ಷೆ! ಅದೇ ಅವಳನ್ನು ಎಲ್ಲರಿಂದ ದೂರ ಮಾಡುತ್ತಿರುವುದು!!
**********
ಅವತ್ತು ಮನೆಯಲ್ಲಿ ಸಡಗರ, ಸಂಭ್ರಮ. ಯಾಕೆಂದರೆ ಆ ದಿನ ಶ್ಯಾಮಲಾಳನ್ನು ನೋಡಲು ಹುಡುಗನೊಬ್ಬ ಬಂದಿದ್ದ. ಅದು ಶ್ಯಾಮಲಾಳ ತಂದೆ-ತಾಯಿಗೆ ಮಾತ್ರ ಸಡಗರ. ಅವಳಿಗದು ಮಾಮೂಲಿಯಾಗಿಬಿಟ್ಟಿದೆ.
ಅವಳು ಮರೆಯಲ್ಲಿ ನಿಂತು ತಂದೆ-ತಾಯಿಯ ಮಾತನ್ನು ಆಲಿಸುತ್ತಿದ್ದಳು. ಹುಡುಗ ಡಾಕ್ಟರಂತೆ. ಒಳ್ಳೆಯ ಮನೆತನದವನಂತೆ.
ಶ್ಯಾಮಲಾಳೇ ಅವರೆಲ್ಲರಿಗೂ ಕಾಫಿಯನ್ನು ತಂದುಕೊಟ್ಟು ತಂದೆಯ ಪಕ್ಕದಲ್ಲೇ ನಿಂತುಕೊಂಡಳು.
ಹುಡುಗನ ದೃಷ್ಟಿ ಅವಳ ಮೇಲೆಯೇ ನೆಟ್ಟಿತ್ತು. ತೆಳು ನೀಲಿ ಬಣ್ಣದ ಸೀರೆಯಲ್ಲಿ ಅಂದವಾಗಿ, ಮುದ್ದಾಗಿ ಕಾಣುತ್ತಿದ್ದಳು.
ಔಪಚಾರಿಕತೆಯ ಮಾತು ಮುಗಿದ ಬಳಿಕ ಶ್ಯಾಮಲ ಅವಳ ಬಳಿ ಮಾತನಾಡಬಯಸಿದಳು.
*********
ಶ್ಯಾಮಲಳ ಹವ್ಯಾಸ ಸಿನೆಮಾ ನೋಡುವುದು, ಕಾದಂಬರಿ ಓದುವುದು ಇತ್ಯಾದಿ. ಯಾವುದಾದರೂ ಸಿನೆಮಾದ ಅಥವ ಕಾದಂಬರಿಯ ನಾಯಕಿಯನ್ನು ಊಹಿಸಿದರೆ ಅವಳಿಗೆ ಅಸೂಯೆಯಾಗುತ್ತಿತ್ತು. ಕಾರಣ ನಾಯಕಿಯ ತುಂಟತನ, ಬುದ್ಧಿವಂತಿಕೆಯಲ್ಲ. ನಾಯಕನ ಒಳ್ಳೆಯತನ, ನಿಯತ್ತುಗಳು. ಅಂಥ ಗುಣವಂತ ನಾಯಕಿಗೆ ದೊರಕುತಿರುವುದಕ್ಕೆ ಹೊಟ್ಟೆ ಉರಿದುಕೊಳ್ಳುತ್ತಿದ್ದಳು.
ಪ್ರಸ್ತುತ ಅವಳು ಓದುತ್ತಿರುವ ಕಾದಂಬರಿಯಲ್ಲಿ ನಾಯಕಿ ಅವನನ್ನು ಮೋಸ ಮಾಡಿ ಒಂದು ಕೇಸಿನಲ್ಲಿ ಜೈಲಿಗೆ ಹೋಗುವಂತೆ ಮಾಡಿದರೆ ಅವನು ಮಾತ್ರ ಅವಳ ತಾಯಿಯ ಆಪರೇಷನ್ ಗೆ ಬೇಕಾದ ಖರ್ಚುಗಳನ್ನು ನೀಡಿಯೇ ಜೈಲಿಗೆ ಹೋಗುತ್ತಾನೆ. ಶ್ಯಾಮಲಾಗೆ ಅಂಥ ಕಾದಂಬರಿಗಳೇ ಹೆಚ್ಚು ಇಷ್ಟವಾಗುತ್ತದೆ…
ತೋಟದ ಮಧ್ಯದಲ್ಲಿ ತೆಳುವಾಗಿ ಹಾವಿನಂತೆ ಬಳುಕುವ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು ಅವರಿಬ್ಬರೂ.
ತುಂಬ ಹೊತ್ತಿನಿಂದ ಅವಳೇನೂ ಮಾತಾಡಿಸಲಿಲ್ಲದ ಕಾರಣ ಅವನೇ ಮಾತಿಗಾರಂಭಿಸಿದ.
"ನನ್ನ ಹೆಸರು ಮಹೇಂದ್ರ. ನೀವು ನನ್ನ ಜತೆ ಮಾತಡಲು ಬಯಸಿದ್ದು ಖುಷಿಯಾಯಿತು. ಒಬ್ಬರನ್ನೊಬ್ಬರು ಅರಿಯದೇ ಮದುವೆಯಾಗುವುದು ಸರಿಯಲ್ಲ ಅನ್ನುವುದು ನನ್ನ ಅಭಿಮತ. ಹೀಗೆ ಕೊಂಚ ಏಕಾಂತ ಸಿಕ್ಕಿದರೆ ನಮ್ಮ ನಮ್ಮ ಅಭಿರುಚಿಗಳನ್ನು ಹಂಚಿಕೊಳ್ಳಬಹುದು.. ಅದನ್ನು ನೀವಾಗಿಯೇ ಎಲ್ಲರೆದುರು ಕೇಳಿದ್ದು ನನಗಿಷ್ಟವಾಯಿತು…"
ಅವಳು ಥ್ಯಾಂಕ್ಯೂ ಕೂಡ ಅನ್ನಲಿಲ್ಲ.
ಅವನು ಸೌಜನ್ಯಕ್ಕಾಗಿ ನಕ್ಕ ನಗೆ ನಿಲ್ಲಿಸಿದ.
ಶ್ಯಾಮಲಾ ಏನನ್ನೋ ಹೇಳಲು ಬಯಸುತ್ತಿದ್ದಾಗ್ಯೂ, ಹೇಳಲು ಒದ್ದಾಡುತಿರುವುದನ್ನು ಆತ ಗಮನಿಸುತ್ತಲೇ ಇದ್ದ.
ಏನಾದರಾಗಲಿ ಎಂದು ಅವಳು ಹೇಳತೊಡಗಿದಳು." ನಾನು ಶ್ಯಾಮಲ… ನಿಮಗೆ ಈಗ ಒಂದು ವಿಷಯ ತಿಳಿಸಬೇಕಿದ್ದು.. ಅದು.. ಅದನ್ನು ಹೇಗೆ ಹೇಳಲಿ ಎಂದೇ ತಿಳಿಯುತ್ತಿಲ್ಲ.."
ಆಗ ತಣ್ಣನೇ ಗಾಳಿ ಬೀಸಿತು. ಕೋಗಿಲೆಯೊಂದು ಆಗಲಿಂದಲೂ ಹಾಡುತ್ತಿತ್ತು. ಮಹೇಂದ್ರ ಉದ್ವೇಗದಿಂದ ಕೇಳಿಸಿಕೊಳ್ಳುತ್ತಿದ್ದು, "ಹೇಳಿ , ಪರವಾಗಿಲ್ಲ.." ಎಂದ.
"ಇದುವರೆಗೂ ನನ್ನ ನೋಡಲು ಬಂದವರೆಲ್ಲ ಈ ವಿಷಯ ಕೇಳಿಯೇ ಒಪ್ಪಿಕೊಳ್ತಾ ಇಲ್ಲ. ನನಗೆ.. ನನಗೆ.. ಏಯ್ಡ್ಸ್ ಇದೆ!!!"
ಆಗ ಚಲಿಸಿದ ಅವನು.
ಅವಳು ನಿರ್ಲಿಪ್ತಳಾಗಿಯೇ ಇದ್ದಳು.
ಅವನ ಮುಖ ಪೂರ್ತಿಯಾಗಿ ಬಿಳಿಚಿಕೊಂಡಿತ್ತು. ಮಾತನಾಡಲು ಪದಗಳಿಗಾಗಿ ತಡವರಿಸುತ್ತಿದ್ದ. ಸಹಾನುಭೂತಿ ಹೇಳಬೇಕೋ ? ಅಥವ ತಂದೆ-ತಾಯಿಗೆ ಈ ವಿಷಯ ತಿಳಿಸದೇ ಇದ್ದುದ್ದಕ್ಕೆ ಬೈದು ಬುದ್ಧಿವಾದ ಹೇಳಬೇಕೋ ತಿಳಿಯಲಿಲ್ಲ.
ಅವಳು ಅವನ ಪ್ರತಿಕ್ರಿಯೆಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದಳು.
ಅವನು ಚೇತರಿಸಿಕೊಂಡ. ನಿರ್ಣಯ ತೆಗೆದುಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಯಾವ ಕಾರಣದಿಂದ ಏಯ್ಡ್ಸ್ ಬಂದರೂ, ಏಯ್ಡ್ಸ್ ಇರುವ ಹುಡುಗಿಯನ್ನು ಯಾರಾದರೂ ಮದುವೆಯಾಗ ಬಯಸುವುದಿಲ್ಲ. ಅದನ್ನೇ ಅವಳ ಬಳಿ ಹೇಳಲಾಗದೇ ತಿರುಗಿ ಅಲ್ಲಿಂದ ಚಲಿಸಿ ತಂದೆಯನ್ನು ಕರೆದುಕೊಂಡು ಏನೂ ಹೇಳದೇ ಹೊರಟುಬಿಟ್ಟ.
ಅವಳು ನಿಶ್ಯಬ್ದವಾಗಿ ನೋಡುತ್ತಾ ನಿಂತುಬಿಟ್ಟಳು.
ಅವಳನ್ನು ತಂಗಾಳಿಯೊಂದು ಸ್ಪರ್ಶಿಸಿಕೊಂಡುಹೋಯಿತು.
ಮರದೆಡೆಯಿಂದ ಎರಡು ಕಣ್ಣುಗಳೂ ನೀರಿನಿಂದ ತುಂಬಿಬಂದ ಒಂದು ಆಕೃತಿಯೊಂದು ಮನೆಯೆಡೆಗೆ ಚಲಿಸಿತು.
********
ಅಂದು ರಾತ್ರಿ…
ಅವಳು ಮುಖವನ್ನು ದಿಂಬಿನಲ್ಲಿ ಹುದುಗಿಸಿ ಅಳುತ್ತಿದ್ದಳು. ವಿಷಾದ ಎಂಬ ಭಾವನೆ ಕಣ್ಣೀರಿನಲ್ಲಿ ತುಂಬಿಕೊಂಡು ದಿಂಬನ್ನು ಒದ್ದೆ ಮಾಡುತ್ತಿದ್ದವು.
ಮನಸಿನಲ್ಲೆಲ್ಲ ಒಂದೇ ದುಃಖ ಬುಗುರಿಯಂತೆ ಸುತ್ತುತ್ತಿದ್ದವು.
" ಮನುಷ್ಯರೆಲ್ಲಾ ಸ್ವಾರ್ಥಿಗಳು..ಪ್ರೇಮವೆಂದರೆ ಕೇವಲ ಕೊಡುವುದು ಅನ್ನುವುದನ್ನು ಮರೆತಿದ್ದಾರೆ.ಎಲ್ಲರೂ ಕಿತ್ತುಕೊಳ್ಳಲು ನೋಡುತ್ತಾರೆ. ನನ್ನ ಸೌಂದರ್ಯ, ಹಣ ನೋಡಿದ ಕೂಡಲೇ ಎಲ್ಲರೂ ಮದುವೆಯಾಗಲು ಒಪ್ಪಿಕೊಳ್ಳುತ್ತಾರೆ. ಆದರೆ ನನ್ನಲ್ಲಿ ಕೇವಲ ಒಂದು ಕೆಟ್ಟ ಗುಣವಿದ್ದರೆ ಹಾವನ್ನು ಕಂಡಂತೆ ಹೆದರಿ ಓಡುಹೋಗುತ್ತಾರೆ.." ಎಂಬುದೇ ಆಕೆಯ ಮನಸಿನಲ್ಲಿ ತಾಳಮದ್ದಳೆ ಆಡುತ್ತಿದೆ.
ಆಗ ಅವಳ ತಂದೆ ಅವಳ ರೂಮನ್ನು ಪ್ರವೇಶಿಸಿದರು.
ಅವಳು ಅವರತ್ತ ನಿರ್ವಿಕಾರವಾಗಿ ನೋಡಿದಳು.ಅವರ ಕಣ್ಣಲ್ಲಿ ಆರ್ದ್ರತಾಭಾವ ನಲಿದಾಡುತಿತ್ತು. " ಅಮ್ಮಾ.." ನಿಲ್ಲಿಸಿ ಸ್ವಲ್ಪ ಸಮಯದ ನಂತರ "…. ನನ್ನ ಚಿನ್ನದಂಥಾ ಮಗಳನ್ನು ಯಾರೊಬ್ಬನೂ ಒಪ್ಪಿಕೊಳ್ಳದಿರುವುದನ್ನು ನೋಡಿ ನನಗಾಶ್ಚರ್ಯವಾಗುತ್ತಿತ್ತು. ಅವರ ಬಳಿ ಕಾರಣ ಕೇಳಿದರೂ ಹೇಳುತ್ತಿರಲಿಲ್ಲ. ಅದಕ್ಕೆ ನಾನೇ ತಿಳಿದುಕೊಳ್ಳಬೇಕೆಂಬ ಹಂಬಲ ಬೆಳೆಯಿತು. ಅದಕ್ಕೆ…. ನೀನು ಮಹೇಂದ್ರನ ಬಳಿ ಮಾತಾಡಿದ್ದನ್ನು ಕದ್ದು ಕೇಳಿಸಿಕೊಂಡೆನಮ್ಮಾ…"
ಅವಳು ಚಕ್ಕನೆ ತಲೆಯೆತ್ತಿ ಅಳುವುದನ್ನು ನಿಲ್ಲಿಸಿ ತಂದೆಯತ್ತ ನೋಡಿದಳು.
ಅವರು ಮುಂದುವರಿಸಿದರು." ನಿನ್ನ ನೋವು ನನಗರ್ಥವಾಗುತ್ತದಮ್ಮಾ.. ತಾನು ಸಾಯುತ್ತಿದ್ದೇನೆಂದು ತಂದೆಗೆ ತಿಳಿಸಲಾಗದೇ ಒಳಗೊಳಗೇ ಸ್ವಲ್ಪ ಸ್ವಲ್ಪವಾಗಿ ನಶಿಸಿಹೋಗುತ್ತಾ, ತನ್ನ ತಂದೆ ಒಬ್ಬೊಬ್ಬರೇ ಹುಡುಗರನ್ನು ಮದುವೆಗಾಗಿ ಕರೆತರುತ್ತಿದ್ದರೆ ತಂದೆಯೆದುರಿಗೆ ಏನೂ ಹೇಳಲಾಗದೇ ಮನಸ್ಸು ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.. ಪ್ರತೀ ಹುಡುಗನ ಬಳಿಯೂ ನನಗೆ ಏಯ್ಡ್ಸ್ ಇದೆ ಎಂದು ಹೇಳಿದ ಬಳಿಕ ನಂತರ ಅವರ ಮೌನದ ಚಾಟಿಯೇಟನ್ನು ನಾನು ಗುರುತಿಸಲಾಗದೇ ಹೋಗುತ್ತೇನೆಂದು ತಿಳಿದಿದ್ದೀಯಾ?"
ಅವಳು ತಲೆತಗ್ಗಿಸಿಕೊಂಡು ತಂದೆಯ ಮಾತನ್ನು ಆಶ್ಚರ್ಯದಿಂದ ಆಲಿಸುತ್ತಿದ್ದಳು.
ಅವರ ನೋವನ್ನು ಅವರ ಮಾತುಗಳೇ ಸ್ಪಷ್ಟವಾಗಿ ಪ್ರತಿಧ್ವನಿಸುತ್ತಿದ್ದವು.ಪ್ರತಿಯೊಂದು ಶಬ್ದವೂ ಅವಳನ್ನು ಇರಿಯುತ್ತಿದ್ದವು. ಅವರ ಮಾತು ಅವಳ ಬಾಯನ್ನು ಕಟ್ಟಿಹಾಕಿತ್ತು.
ಅವರು ತಮ್ಮ ಮಾತನ್ನು ನಿಲ್ಲಿಸಿದರು.
ಇರುವೆ ಚಲಿಸಿದರೂ ಕೇಳುವಷ್ಟು ನಿಶ್ಯಬ್ದ ಆವರಿಸಿಕೊಂಡಿತ್ತು. ಆ ನಿಶ್ಯಬ್ದದಲ್ಲಿ ಆ ತಂದೆಯ ಹೃದಯ ಮಗಳಿಗಾಗಿ ವಿಲವಿಲ ಒದ್ದಾಡುತಿತ್ತು.
ಒಂದು ನಿರ್ಧಾರಕ್ಕೆ ಬಂದವರಂತೆ, " ನೀನು ಹೋಗುವ ಸಮಯದಲ್ಲೂ ವಿಷಾದ ಇಟ್ಟುಕೊಂಡು ಎದುರಿಗಿರುವವರ ಸಂತೋಷ ಬಯಸಿದ್ದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಆದರೆ ನೀನು ಹೀಗೆ ಅಳುತ್ತಿರುವುದು ನನಗೆ ನೆಮ್ಮದಿ ನೀಡದು.. ಕೊನೆಯ ದಿನಗಳಲ್ಲಿ ನಿನ್ನನ್ನು ಆನಂದದಿಂದ ಕಳುಹಿಸಿಕೊಡುವೆನಮ್ಮಾ…"ಎಂದು ನುಡಿದರು.
ಉಕ್ಕಿಬಂದ ಅಳುವನ್ನು ತಡೆದುಕೊಳ್ಳುತ್ತಾ ರೂಮಿನಿಂದ ಹೊರಕ್ಕೆ ಹೋದ ತಂದೆಯತ್ತ ನಂತರ ಶೂನ್ಯದತ್ತ ನೋಡುತ್ತಾ ನಿಂತುಬಿಟ್ಟಳು ಶ್ಯಾಮಲಾ.
********
ಈಗ ಅವಳು ಮನುಷ್ಯರೆಲ್ಲಾ ಸ್ವಾರ್ಥಪರರು ಎಂದು ಆಲೋಚಿಸುತ್ತಿರಲಿಲ್ಲ. ಏನೋ ಮಾಡಲು ಹೋಗಿ ಅದು ಏನೇನೋ ಆಗುತ್ತಿದ್ದುದನ್ನು ಗಮನಿಸುತ್ತಿದ್ದಳು. ತನ್ನ ತಂದೆ ತನ್ನೆದುರೇ ಅಪಾರ್ಥ ಮಾಡಿಕೊಂಡು ನೋವನುಭವಿಸುತ್ತಿರುವುದನ್ನು ಕಂಡಿದ್ದಳು.
ಅವಳಿಗೆ ರಾತ್ರಿಯಿಡೀ ನಿದ್ದೆ ಬರಲಿಲ್ಲ. ಮತ್ತೆ ಮತ್ತೆ ಆಲೋಚಿಸಿದಳು.
ನಂತರ ಒಂದು ನಿರ್ಧಾರಕ್ಕೆ ಬಂದಳು. ಅದು ತನ್ನ ತಂದೆಗೆ ಎಲ್ಲ ನಿಜವನೂ ಹೇಳುವ ನಿರ್ಧಾರ. ನಂತರ ಎಲ್ಲ ಸರಿಹೋಗುತ್ತದೆಂದು ಅನ್ನಿಸಿ ನಿಟ್ಟುಸಿರಿಟ್ಟಳು.
ಆದರೆ ವಿಧಿಬರಹ ಬರೆಯುವವನು ಅವಳನ್ನು ನೋಡಿ ಮರುಕಪಟ್ಟ. ಏಕೆಂದರೆ ಅವಳಿಗೆ ಮರುದಿನವೇ ಮತ್ತೊಂದು ಆಘಾತ ಕಾದಿತ್ತು.
******
ಅರುಣೋದಯವಾಗಿತ್ತು. ಸೂರ್ಯನ ಕಿರಣಗಳು ಎಲ್ಲೆಂದರಲ್ಲಿ ಚೆಲ್ಲುತ್ತಿದ್ದವು.
ಅವಳು ತಂದೆಯನ್ನು ಮನೆಯಲ್ಲೆಲ್ಲಾ ಹುಡುಕಿದಳು. ಎಲ್ಲೂ ಇರಲಿಲ್ಲ. ತೋಟಕ್ಕೆ ಹೋದಾಗ ಮರದ ಕೆಳಗೆ ಖುರ್ಚಿ ಹಾಕಿಕೊಂಡು ಶೂನ್ಯದತ್ತ ನೋಡುತ್ತಾ ಸಿಗರೇಟು ಸೇದುತ್ತಾ ಕುಳಿತಿದ್ದರು.
"ಸಿಗರೇಟ್ ಮತ್ತೆ ಪ್ರಾರಂಭಿಸಿದೆಯಾ ಅಪ್ಪಾ?"
"ಓ.. ಬಾಮ್ಮಾ… ಸಿಗರೇಟ್.. ಇದೀಗ ಅವಶ್ಯಕತೆ ಅನ್ನಿಸಿದೆಯಮ್ಮಾ.."
"ಅಪ್ಪಾ.. ಅದು.. ನಾನು ನಿಮಗೊಂದು ವಿಷಯ ಹೇಳಬೇಕು. ಕೋಪ ಮಾಡಿಕೊಳ್ಳೋಲ್ಲ ತಾನೆ?"
"ಕೋಪ? ಇಲ್ಲಮ್ಮಾ.. ಸಿಗರೇಟನ್ನು ಶುರು ಮಾಡಿದ ನಂತರ ಕೋಪ, ಆನಂದ, ವಿಷಾದ ಎಲ್ಲವನ್ನೂ ಬಿಟ್ಟಿದ್ದೇನೆ"
"ಅಪ್ಪಾ.. ನನಗೆ.. ನನಗೆ ಏಯ್ಡ್ಸ್ ಇಲ್ಲವಪ್ಪ.. ನಾನು ಸುಳ್ಳು ಹೇಳಿದ್ದೆ!"
" ಇನ್ನೂ ನನಗೆ ನೋವುಂಟು ಮಾಡಬಾರದೆಂಬ ಆಲೋಚನೆಯೇನಮ್ಮಾ..?"
"ಇಲ್ಲಪ್ಪ. ನಾನು ನಿಜ ಹೇಳ್ತಿದ್ದೀನಿ. ನ..ನ..ಗೆ ಏಯ್ಡ್ಸ್ ಇಲ್ಲ.."
ತಕ್ಷಣದ ಅವರ ಖುಷಿಗೆ ಪಾರವೇ ಇರಲಿಲ್ಲ. ನಂಬಲಾಗದಷ್ಟು ಖುಷಿಯಾಗ್ತಿದೆ ಅನ್ನುತ್ತಾ ಸಂತೋಷದಿಂದ ಅವಳನ್ನೆತ್ತಿ ಎರಡು ಸುತ್ತು ತಿರುಗಿಸಿದರು. ಅವರ ಖುಷಿ ಆನಂದ ನೋಡಿ ಅವಳೂ ಸಂತಸಪಟ್ಟಳು. ಅವರ ಕಣ್ಣಿನಿಂದ ಆನಂದ ಭಾಷ್ಪವೊಂದು ಕೆನ್ನೆ ಸವರಿಕೊಂಡು ಕೆಳಕ್ಕೆ ಜಾರಿ ಮಣ್ಣುಪಾಲಾಯಿತು.
ಸ್ವಲ್ಪ ಹೊತ್ತಿನ ಬಳಿಕ " ಆದರೂ.. ಒಮ್ಮೆ ಪರೀಕ್ಷೆ ಮಾಡಿ ನೋಡಬೇಕು" ಎಂದರು.
*********
"ನೀನು ಯಾಕೆ ಹೀಗೆ ಮಾಡಿದಿ?" ಎಂದು ತಂದೆ ಶ್ಯಾಮಲಳ ಬಳಿ ಕೇಳಿದರು.
" ಹಿಂದೆ ವಧುಪರೀಕ್ಷೆ ಇದ್ದ ಹಾಗೆ ಇದು ವರ ಪರೀಕ್ಷೆಯಪ್ಪ. ಕಾಲೇಜಿನಲ್ಲಿ ಓದುತ್ತಿದ್ದಾಗ ಅನೇಕ ಹುಡುಗರು ’ಐ ಲವ್ ಯೂ’ ಎನ್ನುತ್ತಾ ನನಗೋಸ್ಕರ ಏನು ಮಾಡಲೂ ತಯಾರಾಗಿ ಬರುತ್ತಿದ್ದರು. ನನ್ನ ಬಳಿ ಹಣವಿದೆಯೆಂದೋ, ರೂಪಕ್ಕಾಗಿಯೋ ನಾನು ಕೇಳದಿದ್ದರೂ ನನಗೆ ಸಹಾಯ ಮಾಡುತ್ತಿದ್ದರು. ಇವರ ನಿಜಾಂಶ ತಿಳಿದುಕೊಳ್ಳುವುದಕ್ಕೋಸ್ಕರ ಒಂದು ಮಾಸ್ಟರ್ ಪ್ಲಾನ್ ಮಾಡುತ್ತಿದ್ದೆ. ಆಗಲೇ ನಿರ್ಧರಿಸಿದ್ದೆ. ನನಗೆ ಮಾರಣಾಂತಿಕ ಖಾಯಿಲೆಯಿದ್ದರೂ ನನ್ನನ್ನು ಮದುವೆಯಾಗುತ್ತೇನೆನ್ನುವವನೇ ನನಗೆ ಸರಿಯಾದ ಗಂಡು ಎಂದು…. ಆದರೆ ಇದುವರೆಗೂ ಸ್ವಾರ್ಥವಿಲ್ಲದ ಪುರುಷರು ಸಿಗಲಿಲ್ಲವಪ್ಪಾ… "
"ಇದು ತಪ್ಪಮ್ಮಾ.. ನೀನು ಊಹಿಸಿದಂತಹ ಗುಣವುಳ್ಳವರು ಯಾವ ಕಾಲದಲ್ಲಾದರೂ ಸಿಗುವುದಿಲ್ಲ. ಸ್ವಾರ್ಥವಿಲ್ಲದೇ ಬದುಕುವುದೇ ಅಸಾಧ್ಯ. ಅಂತಹ ಬೇಡಿಕೆಯನ್ನು ಮರೆತುಬಿಡಮ್ಮ.. ಅಂತವರ್ಯಾರೂ ಸಿಗಲಾರರು.." ಅವರ ಅನುಭವವೇ ಈ ಮಾತನ್ನು ಆಡಿಸಿತ್ತು.
"ಇನ್ನು ಒಂದು ವರ್ಷ ಅಷ್ಟೇ ಅಪ್ಪ. ಅಲ್ಲಿಯವರೆಗೂ ಹುಡುಕುತ್ತೇನೆ. ಅಷ್ಟರವರೆಗೂ ಸಿಗಲಿಲ್ಲವಾದರೆ ನೀವು ಹೇಳಿದ ಗಂಡನ್ನೇ ಮದುವೆಯಾಗುವೆ"
ನಿನ್ನಿಷ್ಟವಮ್ಮಾ.." ನಿಟ್ಟುಸಿರು ಬಿಡುತ್ತ ಶ್ಯಾಮಲಳ ತಂದೆ ಹೇಳಿದರು.
******
ಮಗಳು ಎಷ್ಟು ಬಾರಿ ಹೇಳಿದರೂ ಕೇಳದೇ ಟೆಸ್ಟ್ ಮಾದಿಸಿದರೇನೆ ಮನ್ಸಿಗೆ ನೆಮ್ಮದಿ ಎಂದರು ಶ್ಯಾಮಲಳ ತಂದೆ. ಒಂದು ದಿನ ಡಾಕ್ಟರನು ಭೇಟಿಯಾಗಲು ಹೊರಟರು.
"ಡಾಕ್ಟರ್.. ನನ್ನ ಮಗಳಿಗೆ ಏಯ್ಡ್ಸ್ ಇಲ್ಲವೆಂಬ ರಿಪೋರ್ಟ್ ನೀಡುವ ಟೆಸ್ಟ್ ಮಾಡಿಸಬೇಕಾಗಿತ್ತು.."
" ಈಕೆ ಶ್ಯಾಮಲಳಲ್ಲವೇ?"
ತಂದೆ ಆಶ್ಚರ್ಯದಿಂದ, " ಅರೆ.. ನಿಮಗೆ ಹೇಗೆ ಗೊತ್ತು ನನ್ನ ಮಗಳು?" ಕೇಳಿದರು.
"ನಿಮ್ಮ ಮಗಳ ಕಾಲೇಜಿನ ಕನ್ಸಲ್ಟಿಂಗ್ ಡಾಕ್ಟರ್ ನಾನೇ. ಇವಳು ಡಿಸ್ಟಿಂಕ್ಷನ್ ಸ್ಟೂಡೆಂಟ್ ಎಂದ ಬಳಿಕ ಮರೆಯಲು ಸಾಧ್ಯವೇ?"
ಶ್ಯಾಮಲ ಮಾತ್ರ ಅವರತ್ತ ಆಶ್ಚರ್ಯದಿಂದ ನೋಡಿದಳು. ಹಿಂದೆಂದೂ ನೋಡಿದ ನೆನಪಿರಲಿಲ್ಲ ಆ ಚಹರೆಯನ್ನು.
ಡಾಕ್ಟರ್ ಮುಗುಳ್ನಗೆಯೊಂದಿಗೆ "ನರ್ಸ್… ಎಲಿಸಾ ಟೆಸ್ಟಿಗೆ ತಯಾರಿ ಮಾಡಿ" ಎಂದರು.
*********
ಸಂಜೆಯಾಗಿತ್ತು.
’ಎಲಿಸಾ’ ಪರೀಕ್ಷೆಯ ಫಲಿತಾಂಶಕ್ಕಾಗಿ ಎದುರುನೋಡುತ್ತಿದ್ದಾರೆ, ತಂದೆ ಮತ್ತು ಮಗಳು. ನರ್ಸ್ ’ಒಳಕ್ಕೆ ಹೋಗಿ’ ಎಂದಾಗ ಉದ್ವೇಗದಿಂದ ಒಳ ನಡೆದರು.
ಡಾಕ್ಟರ್ ನ ಮುಖ ನಿರ್ಲಿಪ್ತತೆಯಿಂದ ತುಳುಕಾಡುತ್ತಿತ್ತು.
"ಏನಾತು ಡಾಕ್ಟ್ರೇ" ಎಂದರು ತಂದೆ ಉದ್ವೇಗದಿಂದ.
"ಕುಳಿತುಕೊಳ್ಳಿ" ಎಂದರು. "ಮನಸ್ಸು ಸ್ವಲ್ಪ ಗಟ್ಟಿಮಾಡಿಕೊಳ್ಳಿಸರ್ .. ಎಲ್ಲರಿಗೂ ಹಣೆಬರಹ ಮೊದಲೇ ಬರೆದಿಟ್ಟಿರುತ್ತಾರೆ ಆ ದೇವರು…" ಎಂದು ಸ್ವಲ್ಪ ಕಾಲ ಮೌನವಹಿಸಿ, ನಿಟ್ಟುಸಿರಿಟ್ಟು "ನಿಮ್ಮ ಮಗಳಿಗೆ ಏ…ಯ್ಡ್ಸ್.. ಇ..ದೆ..!" ಎಂದರು.
ಶ್ಯಾಮಲಳ ತಂದೆ ತತ್ತರಿಸಿ ಹೋದರು.
ಅವಳಿಗೆ ಭೂಮಿ ಬಾಯ್ತೆರೆದು ತನ್ನನ್ನು ಒಳಕ್ಕೆಳೆದುಕೊಳ್ಳಬಾರದೇ ಎನಿಸಿತು. ಮನದಲ್ಲಿ ವಿಷಾದದ ಜ್ವಾಲಾಮುಖಿಯೊಂದು ಹತ್ತಿ ಉರಿಯಿತು. ನೀರಸತ್ವವೆಂಬ ಲಾವಾರಸ ಉಕ್ಕಿ ಹರಿಯಿತು.
ಏನೋ ತಮಾಷೆಗಾಗಿ ’ ಏಯ್ಡ್ಸ್ ಇದೆ’ ಎನ್ನುವುದಕ್ಕೂ, ನಿಜಕ್ಕೂ ಏಯ್ಡ್ಸ್ ಬಂದರೆ ಹೇಗಿರುತ್ತದೆಂದು ಮನಸು ಊಹಿಸಿಯೇ ಇರಲಿಲ್ಲ. ಅಷ್ಟು ವಿಷಾದವನ್ನು ಅವಳ ಮನಸ್ಸು ಸಹಿಸುತ್ತಿಲ್ಲ. ಕಾಣದ ಕೈಯ್ಯೊಂದು ಹೃದಯವನ್ನು ಹಿಂಡಿದಂತಾಗುತ್ತಿದೆ ಅವಳಿಗೆ.
ಮೃತ್ಯು ತನ್ನನ್ನು ಗಬಳಿಸಲು ಹೊಂಚು ಹಾಕುತ್ತಿದೆಯೆಂದು ಊಹಿಸಿದೊಡನೆ ಮೈ ನಡುಗಲಾರಂಭಿಸಿತು.
ಯಾರಾದರೂ ಇದುವರೆಗೆ ತನ್ನನ್ನು ಮದುವೆಯಾಗಿದ್ದರೆ ಅವರ ಗತಿ ಊಹಿಸಿಕೊಂದಳು. ವಿಧಿಗೆ ಏಟು ಕೊಡಬೇಕೆಂದುಕೊಂಡಿದ್ದಳು; ಆದರೆ ವಿಧಿ ತನಗೆ ಈ ರೀತಿಯಾದ ಶಿಕ್ಷೆ ಕೊಡುತ್ತದೆಂದು ಅವಳು ಕಿಂಚಿತ್ತೂ ಊಹೆ ಮಾಡಿರಲಿಲ್ಲ.
ತಂದೆ ಹೃದಯವೇ ಹೋಳಾದಂತೆ ಕುಳಿತಿದ್ದರು.
ಆಗ ಆ ರೂಮನ್ನು ಮಹೇಂದ್ರ ಪ್ರವೇಶಿಸಿದ.
**********
ಹಠಾತ್ತನೆ ಬಂದಿದ್ದರಿಂದ ಡಾಕ್ಟರ್ ಒಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಆಶ್ಚರ್ಯಗೊಂಡರು.
ಶ್ಯಾಮಲಳ ಬಳಿ ತೆರಳಿ," ನನ್ನನ್ನು ಮದುವೆಯಾಗುತ್ತೀಯಾ ಶ್ಯಾಮಲಾ?" ಎಂದು ಮಹೇಂದ್ರ ಶಾಂತವಾಗಿ ಕೇಳಿದನು.
ಎರಗಿ ಬಂದ ಪ್ರಶ್ನೆಗೆ ಅವಳು ತಕ್ಷಣಕ್ಕೆ ಉತ್ತರಿಸದಾದಳು. ನಂತರ ಸಾವರಿಸಿಕೊಂಡು, "ನನಗೆ ಏಯ್ಡ್ಸ್ ಇದೆ ಮಹೇಂದ್ರ" ಅವಳ ದನಿ ಅವಳಿಗೇ ಕೇಳಿಸಲಿಲ್ಲ. ಕಣ್ಣೀರು ಕೆನ್ನೆಯನ್ನೆಲ್ಲಾ ಒದ್ದೆ ಮಾಡಿಬಿಟ್ಟಿತು.
"ನನ್ನ ಪ್ರಶ್ನೆಗೆ ಉತ್ತರ ಅದಲ್ಲ, ನಿನಗೆ ನಾನು ಇಷ್ಟವಾಗಿರುವೆನಾ?"
ಅವಳ ನಿರೀಕ್ಷೆ ದುಃಖದೇಟಿನಿಂದ ಸತ್ತಿತ್ತು. ಜಂಬವೆಲ್ಲ ನೀರಿನಂತೆ ಕರಗಿತ್ತು. "ಹ..ಹೌ..ದು!" ಎಂದು ಮತ್ತಷ್ಟು ಅತ್ತಳು.
ಅವಳ ತಂದೆ ಈ ಪರಿಣಾಮಗಳನ್ನು ಎವೆಯಿಕ್ಕದೇ ನೋಡುತ್ತಿದ್ದರು.
ಮಹೇಂದ್ರನಿಗೆ ಅವಳ ಪಶ್ಚಾತ್ತಾಪ ಸ್ಪಷ್ಟವಾಗಿ ತಿಳಿಯುತ್ತಿತ್ತು. ಇನ್ನೂ ಮುಚ್ಚಿಟ್ಟು ಪ್ರಯೋಜನವಿಲ್ಲವೆಂದು ಅರಿತು," ಐ ಯಾಮ್ ರಿಯಲಿ ಸಾರಿ. ನಾನೂ ಈ ಡಾಕ್ಟರ್ ಇಬ್ಬರೂ ಸ್ನೇಹಿತರು. ಕೊಲೀಗ್ಸ್ ಕೂಡ. ಇಲ್ಲೀಗ ನಡೆದದ್ದು ಸುಳ್ಳು. ಈ ಕಪಟ ನಾಟಕದ ಸೂತ್ರಧಾರಿ ನಾನೇ"
ಶ್ಯಾಮಲ ತಕ್ಷಣ "ಹಾಗಾದರೆ ನನಗೆ ಏಯ್ಡ್ಸ್ ಇ..ಲ್ಲ…ವಾ..?" ಏನೋ ಅದ್ಭುತವಾದದ್ದನ್ನು ಕೇಳುವಂತೆ ಕೇಳಿದಳು.
ಆಗ ಡಾಕ್ಟರ್, " ಇಲ್ಲ. ನಾನು ಸುಮ್ಮನೇ ಸುಳ್ಳು ಹೇಳಿದೆ. ಮೊದಲು ಆಗೋಲ್ಲವೆಂದೆ. ಒಬ್ಬ ಪೇಷೆಂಟ್ ಗೆ ಹೀಗೆ ಸುಳ್ಳು ಹೇಳಲಾರೆನೆಂದೆ. ಆದರೆ ಮಹೇಂದ್ರ ಕಾರಣ ಹೇಳಿದಾಗ ಒಪ್ಪಿಕೊಂಡೆ. ನನ್ನಿಂದ ತಪ್ಪಾಗಿದ್ದಲ್ಲಿ ಕ್ಷಮಿಸಿ. ಐ ಯಾಮ್ ಸಾರಿ.."
ಅವಳ ತಂದೆ ಇದನ್ನೇ ಎಂಟನೇ ಅದ್ಭುತವೆಂಬಂತೆ ನೋಡುತ್ತಿದ್ದರು.
**********
"ಅವನೇ ನನ್ನ ಗಂಡ" ಸಿನೆಮಾ ಬಿಟ್ಟಿತು. ಜನಸಂದಣಿಯ ಮಧ್ಯದಲ್ಲಿ ಶ್ಯಾಮಲಾ ಮತ್ತು ಮಹೇಂದ್ರ ನಗುತ್ತಾ ಬರುತ್ತಿದ್ದರು.
"ನಿನ್ನ ಗಂಡ ಹೇಗಿರಬೇಕು?" ತುಂಟತನದಿಂದ ಕೇಳಿದನು.
ಅದಕ್ಕವಳು," ನಿನ್ನ ಹಾಗಂತೂ ಇರಕೂಡದು" ಎಂದಳೂ ಚೂಟಿಯಾಗಿ.
ಇಬ್ಬರೂ ನಕ್ಕರು.
ವಾರಾಂತ್ಯದ ಕವಿತೆ: ಒಂದು ತಾಸಿನ ಮಳೆ…
Posted ಜೂನ್ 13, 2009
on:ವಿವೇಕ್ ಘಾಟೆ, ಮಂಗಳೂರು
vive.1990@gmail.com
ಬಾರದ ಮಳೆಯ.. ಸುರಿಯುತ್ತಾ
ಸ್ಪರ್ಶಿಸುವ ಹನಿಗಳ ಮಧ್ಯ,
ತೆರೆದಿದೆ ನೊಂದ ಮನಗಳ
ಸಾಹಿತ್ಯವನ್ನು ಹೊತ್ತ ಗದ್ಯ!
ಪುಟ ಪುಟವೂ ಮೆದುವಾಯಿತು
ಆವರಿಸಿದ ದಟ್ಟ ನೀಲಿ ಆಗಸದ ಕೆಳಗೆ,
ಹರಿದಾಡಿ, ಗೋಳಾಡಿ ಬೇಯುತಲಿದೆ
ಕನಸುಗಳು ಮಿನುಗುವ ಕಣ್ಣ ಪದರದೊಳಗೆ!
ವಿಚಾರಿಸುತ್ತಲೇ ಬಂತು ಗರಿಯುದುರಿದ
ನವಿಲು ಸಹಾಯ ಹಸ್ತದ ಹೊದಿಕೆಗಾಗಿ,
ಬಿಸಿಯುಸಿರ ಮಾತಿನಲ್ಲಿ ನಿರಾಕರಿಸಿದವು ಕೈಗಳು
ತನ್ನ ತನುವ ಚಳಿಯಿಂದ ಬೆಚ್ಚಗಿಡುವ ಸಲುವಾಗಿ!
ಪ್ರಾಣ ನೆತ್ತರ ಚಲನೆಯು ಕ್ಷೀಣಿಸಿತು,
ಹೃದಯ ಬಡಿತವು ಮೆಲ್ಲನೆ ಮೌನ ತಾಳಿತು..
ಹೊಳಪಿನ ಕವನಗಳ ಬಣ್ಣವನ್ನು ಕರಗಿಸಿ
ನಿರ್ನಾಮವಾಗಿಸಿತು, ರೌದ್ರತೆಯಲ್ಲಿ ತೇಗಿತು!
ಮಾಡು ಇಲ್ಲದ ಆಸರೆಯ ಮೇಲೆ ಸಡಗರದಿಂದ
ಸುರಿದ ಮಳೆಯು ಆ ಒಂದು ತಾಸಿನಲ್ಲಿ,
ಶಾಶ್ವತವಾಗಿ ನಿದ್ರಿಸುವಂತೆ ಮಾಡಿತು
ಚಿಗುರಬೇಕಾದ ಪ್ರೇಮ ಬೀಜವ ದ್ವೇಷವೆಂಬ ಹಾಸಿನಲ್ಲಿ!
ಮನದ ಹನಿ
Posted ಜೂನ್ 11, 2009
on:ರಂಜಿತ್ ಅಡಿಗ, ಕುಂದಾಪುರ
adiga.ranjith@gmail.com
ಅವಳು ಆಗಸ
ಸುಮ್ಮನೆ ಏಣಿ ಕಟ್ಟದಿರು ಅಂದರು
ನನಗೆ
ರೆಕ್ಕೆ ಮೂಡುತಿತ್ತು,
ಅವಳು ನಿನಗೆ ಸರಿಯಾದವಳಲ್ಲ
ಎಂದರು,
ತಪ್ಪುಗಳನ್ನು ಮಾಡುವುದು
ತಪ್ಪಲ್ಲವೆನಿಸತೊಡಗಿತು!
…………………………………………………………………………
ಒಂದು ಕತೆ: ಏಳು ಮಲ್ಲಿಗೆ ತೂಕದ ಹುಡುಗಿ
Posted ಜೂನ್ 10, 2009
on:- In: ಒಂದು ಕತೆ
- 5 Comments
– ರಂಜಿತ್ ಅಡಿಗ, ಕುಂದಾಪುರ
"ಬೇಕಾಗಿದ್ದಾರೆ!
ಇಪ್ಪತ್ತರ ಆಸುಪಾಸಿನಲ್ಲಿರುವ, ಮುಗ್ಧ ಕಂಗಳ, ಚೆಲುವಾದ ಏಳುಮಲ್ಲಿಗೆ ತೂಕವಿರುವ ಹುಡುಗಿಯೊಬ್ಬಳು ಬೇಕಾಗಿದ್ದಾಳೆ. ಕೂಡಲೇ ಸಂಪರ್ಕಿಸಿ,"
ಜನಪ್ರಿಯ ಪತ್ರಿಕೆಯೊಂದರ ಮೂರನೇ ಪುಟದ ಮೂಲೆಯಲ್ಲಿದ್ದ ಈ ಚಿಕ್ಕ-ಚೊಕ್ಕ ಜಾಹೀರಾತನ್ನು ಓದಿ ಯಾವುದೋ ಶ್ರೀಮಂತ ಪಡ್ಡೆ ಹುಡುಗನ ಕರಾಮತ್ತಿರಬೇಕೆಂದುಕೊಂಡು ಪುಟ ಮಗುಚಿ ಹಾಕಿದವರು ಕೆಲವರಾದರೆ, ’ಏಳು ಮಲ್ಲಿಗೆ ತೂಕದ ಹುಡುಗಿಯಾ!’ ಎಂದು ಮನದಲ್ಲೇ ಚಪ್ಪರಿಸಿ ತಮ್ಮ ಫ್ರೆಂಡ್ಸ್ ಗಳಿಗೆ ಹೇಳಿ ನಗಲು ಒಳ್ಳೆಯ ವಿಷಯ ಸಿಕ್ಕಿತಲ್ಲ ಎಂದು ಸಂಭ್ರಮ ಪಟ್ಟವರು ಕೆಲವರು. ಇನ್ನೂ ಬೇರೆ ಥರದವರು ಎದುರು ಮನೆಯ ಧಡೂತಿ ಹುಡುಗಿಯನ್ನು ಸಂಪರ್ಕಿಸಲು ಹೇಳಿದರೆ ಹೇಗೆ? ಎಂದು ಜೋಕ್ ಮಾಡಿ ನಕ್ಕರು.
ಇಂತಹ ವಿಚಿತ್ರ ಜಾಹೀರಾತು ಪತ್ರಿಕೆಗೆ ನೀಡಿದ ಮಹಾನುಭಾವ ಸಂದೀಪ್ ಜಾಹೀರಾತನ್ನು ನೋಡಿ ಮುಗುಳ್ನಗೆ ಸೂಸಿದ. ಕೂಡಲೇ ಮೊಬೈಲ್ ನಿಂದ ಪತ್ರಿಕೆಗೆ ಕರೆ ಮಾಡಿದ. ಯಾವುದಾದರೂ ಲೆಟರ್ ಬಂದಲ್ಲಿ ತಕ್ಷಣವೇ ತನಗೆ ಕಾಲ್ ಮಾಡುವಂತೆ ತಿಳಿಸಿದ. ನಂತರ ಅಲೋಚನಾಮಗ್ನನಾದ. ಮನದ ತುಂಬಾ ಒಂದೇ ಪ್ರಶ್ನೆ ಲಾಸ್ಯವಾಡುತಿತ್ತು. ಅಂತಹ ಹುಡುಗಿ ಸಿಗುತ್ತಾಳಾ? ಆ ರೀತಿಯ ಹುಡುಗಿಯೆಂದರೆ ಏಳು ಮಲ್ಲಿಗೆ ತೂಕದ ಹುಡುಗಿಯಲ್ಲ!
ಮತ್ತೆ..?
************
ಬದುಕಿನ ತುಂಬ ಖಾಲಿ ಆಕಾಶದಂತಹ ಏಕತಾನತೆ. ಆಸ್ತಿ, ಅಂತಸ್ತು, ಬಂಗಲೆ ಬ್ಯಾಂಕ್ ಬ್ಯಾಲನ್ಸ್, ತಾಯಿ ಮಮತೆ, ಫ್ರೆಂಡ್ಸ್ ಹರಟೆ, ಹಣ ನೀಡುವ ಆನಂದ ಎಲ್ಲಾ ಇದ್ದರೂ ತುಂಬಿದ ಕೊಡದ ಚಿಕ್ಕ ತೂತಿನಂತಹ ಸಣ್ಣ ಕೊರತೆ. ಮನದಲ್ಲಿ ಬತ್ತಿದ ಉತ್ಸಾಹದ ಒರತೆ.
ಇಂತಹಾ ಖಾಲಿ-ಖಾಲಿಯಾದ ಬದುಕಿನ ಕೊಡದಲ್ಲಿ ಕೊಂಚ ಉತ್ಸಾಹ, ಉನ್ಮಾದ, ರೋಚಕತೆ, ರಮ್ಯತೆ ತುಂಬುವುದು ಹೇಗೆ?
ಅದಕ್ಕೆ ಉತ್ತರವಾಗಿ ಹೊಳೆದದ್ದೇ ಆ ವಿಚಿತ್ರ ಜಾಹೀರಾತು.
ಎಲ್ಲೋ ದೂರದಲ್ಲಿ, ರೂಮಿನ ಕದವಿಕ್ಕಿ ಮೂಲೆಯೊಂದರಲ್ಲಿ ಕುಳಿತು, ಜಾಹೀರಾತು ಓದಿ ಜಾಣತನದ ಉತ್ತರ ನೀಡುವ ತುಂಟ ಹುಡುಗಿಗಾಗಿ ಈ ಶೈಲಿಯ ಅನ್ವೇಷಣೆಗೆ ಕೈ ಹಾಕಿದ್ದ ಸಂದೀಪ್. ಅಂತಹ ಒಂದು ಅಲೋಚನೆ, ಅದರಲ್ಲಿರುವ ಕುತೂಹಲದಿಂದ ಅವನ ಬದುಕಿಗೆ ಎಂದೂ ಇರದಂತಹ ವಿಚಿತ್ರ ಕಳೆ ಬಂದುಬಿಟ್ಟಿತ್ತು. ತಾನೆಂದೂ ಅರಿಯದ ವಿಚಿತ್ರ ಹುರುಪು ಹುಟ್ಟಿತ್ತು. ಪ್ರತಿದಿನ ಪತ್ರಿಕೆಯ ಫೋನ್ ಕರೆಗಾಗಿ ಕಾಯುತ್ತ ಪರಿತಪಿಸುವುದರಲ್ಲಿ ಏನೋ ಆನಂದ, ಹರುಷ ಅವನಲ್ಲಿ.
ಮೂರು ದಿನ ಕಳೆದರೂ ಪತ್ರಿಕೆಯಿಂದ ಏನೂ ಉತ್ತರ ಬರದಾದಾಗ ತಾನೇ ಪರಿಸ್ಥಿತಿ ತಿಳಿದುಕೊಳ್ಳಲೋಸುಗ ಫೋನ್ ಮಾಡಿದ. "ನಾನು ಸಂದೀಪ್ ಮಾತಾಡ್ತಿರೋದು, ಏನಾದ್ರೂ ರೆಸ್ಪಾನ್ಸ್ ಬಂತೇ ನನ್ನ ಜಾಹೀರಾತಿಗೆ?"
"ಸಾರ್.. ನಿಮ್ಗೆ ಒಂದು ಸ್ಯಾಡ್ ನ್ಯೂಸ್..!" ಅಂದನಾತ.
ಆಶ್ಚರ್ಯದಿಂದ," ಒಂದೂ ಲೆಟರ್ ಬಂದಿಲ್ವಾ?!"
"ಅಯ್ಯೋ! ಹಾಗಲ್ಲ ಸರ್… ರಾಶಿ-ರಾಶಿ ಲೆಟರ್ಸ್ ಬಂದಿವೆ, ಒಟ್ಟೂ ಸಧ್ಯಕ್ಕೆ ಮುನ್ನೂರ ಎಪ್ಪತ್ನಾಕು ಸರ್!…"
"ಉಸ್ಸ್ ಸ್.." ಎಂಬ ಉದ್ಗಾರ ಅವನಿಗರಿವಿರದಂತೆಯೇ ಹೊರಹೊಮ್ಮಿತು. ಫೋನ್ ಇಟ್ಟ ನಂತರ ಆಲೋಚಿಸಿದಾಗ ನಗು ಉಕ್ಕಿತವನಿಗೆ. ಯಾವುದೇ ಹುಡುಗಿ ತನ್ನ ಸೌಂದರ್ಯದ ಹೊಗಳಿಕೆಯನ್ನು ತನ್ನದಲ್ಲ ಅಂದುಕೊಳ್ಳುತ್ತಾಳಾ? ತನ್ನ ವಯಸ್ಸು ಇಪ್ಪತ್ತಲ್ಲವೆಂದೂ, ತನ್ನ ಕಣ್ಣಲ್ಲಿ ಮುಗ್ಧತೆ ಇಲ್ಲವೆಂದೂ ಯಾವತ್ತಾದರೂ ಒಂದು ಕ್ಷಣವಾದರೂ ಅಲೋಚಿಸುತ್ತಾಳಾ?
ಇಂತಹ ವಿಚಾರ ಮನದಲ್ಲಿ ಮೂಡಿ ಮೊಗದಲ್ಲಿ ನಗು ತರಿಸಿತು.
ಮತ್ತೆ ಆಲೋಚನಾಲಹರಿ ಆ ಕನಸಿನ ಏಳುಮಲ್ಲಿಗೆ ತೂಕದ ಹುಡುಗಿಯತ್ತ ವಾಲಿತು. ಮುನ್ನೂರ ಎಪ್ಪತ್ನಾಕರಲ್ಲಿ ಒಬ್ಬಳಾದರೂ ಅಂತವಳು ಇರುವುದಿಲ್ಲವಾ ಎನ್ನುವ ಆಸೆ ಅವನಲ್ಲಿ ಅರಳಿ ಒಂದು ನಿರ್ಧಾರಕ್ಕೆ ಬಂದ.
ತಾಳ್ಮೆಯಿಂದ, ಪ್ರೀತಿಯಿಂದ ಆ ಎಲ್ಲಾ ಪತ್ರಗಳನ್ನು ಒಂದೊಂದಾಗಿ ಓದುವ ನಿರ್ಧಾರವದು.
***********
"ತೂಕವೇನೋ ಏಳುಮಲ್ಲಿಗೆಯದೇ.. ಕಣ್ಣತಕ್ಕಡಿ ಪ್ರೀತಿಯಿಂದ ಅಳೆದರೆ ಮಾತ್ರ!
ಹೂವ ತೂಕ ಕಟ್ಟಿಕೊಂಡು ದುಂಬಿಗೇನಾಗಬೇಕು? ಅದಕ್ಕೆ ಸರಾಗವಾಗಿ ಪರಾಗ ಸಿಕ್ಕರೆ ಆಯಿತು. ಆದರೆ ಅನುರಾಗಕ್ಕಾಗಿ ಹುಡುಕುವ ದುಂಬಿ ನೋಡಿದ್ದು ಇದೇ ಮೊದಲ ಬಾರಿ ಕಣ್ರೀ..:)"
ರಾತ್ರಿ ಮೂರು ಘಂಟೆಯಾದರೂ ನಿದ್ರಿಸದೇ, ಸದ್ದಿರದ ನಿಶ್ಯಬ್ಧದಲ್ಲಿ ರಾಶಿ ರಾಶಿ ಪತ್ರಗಳನ್ನು ಗುಡ್ಡೆಹಾಕಿಕೊಂಡು ಒಂದೊಂದೇ ಬಿಡಿಸಿ ಓದುತ್ತಿದ್ದರೆ ಚಿಕ್ಕ ಲಹರಿ ಮೂಡಿಸಿದ್ದೆಂದರೆ ಈ ಪತ್ರವೇ. ಹುಡುಗಿಯನ್ನು ಹೂವಿಗೆ ಹೋಲಿಸಿದರೆ ಆಕೆ ತನ್ನನು ದುಂಬಿಗೆ ಹೋಲಿಸಿ, ಅಲ್ಪ ಕಾವ್ಯಾತ್ಮಕವಾಗಿಯೂ ಸ್ವಲ್ಪ ಹುಡುಗಾಟಿಕೆಯಿಂದಲೂ ಬರೆದದ್ದು ನೋಡಿ ಈಕೆ ಬುದ್ಧಿವಂತೆ ಅನ್ನಿಸಿತವನಿಗೆ. ಪತ್ರದ ಅಡಿಭಾಗದಲ್ಲಿ ಹೆಸರಿಗಾಗಿ ಕಣ್ಣಲ್ಲೇ ತಡಕಾಡಿದ. ಅಲ್ಲಿ ಹೆಸರಿರಲಿಲ್ಲ. ಬದಲಿಗೆ ಚಿಕ್ಕ ನಕ್ಷತ್ರ ಚಿಹ್ನೆಯೂ ಅದರ ಕೆಳಗೆ ದೂರದಿಂದ ನೋಡಿದರೆ ಸಹಿಯಂತೆ ಕಾಣುವ ಪು. ತಿ. ನೋ. ಎಂಬ ಸೂಚನೆಯೂ ಇತ್ತು. ಲಗುಬಗನೇ ಪುಟ ಮಗುಚಿದ.
ಅಲ್ಲಿ-
"ನೀವಿಟ್ಟ ಪರೀಕ್ಷೆಯಲಿ ನಾನು ಯಶಸ್ವಿಯಾಗದೇ ಇದ್ದಿದ್ದರೆ ಈ ಪತ್ರ ಕಸದ ಬುಟ್ಟಿಯಲ್ಲಿರುತ್ತಿತ್ತು. ನನ್ನ ಹೆಸರಿಗಾಗಿ ಇಲ್ಲಿ ನೋಡಿದಿರೆಂದರೆ ಕೊನೆ ಪಕ್ಷ ಇಷ್ಟವಾಯಿತು ಎಂದಾಯ್ತು. ಥ್ಯಾಂಕ್ಸ್. ಆದರೆ ನನ್ನ ಹೆಸರು ಖಂಡಿತಾ ಹೇಳಲಾರೆ.
ನಾನು ಯಾರು ಎಂದು ತಿಳಿದುಕೊಳ್ಳಬೇಕಾದರೆ ತಕ್ಷಣ ಕೆಳಗಿನ ನಂಬರ್ ಗೆ ಡಯಲ್ ಮಾಡಿ.
ಇಷ್ಟವಾಗಿರದಿದ್ದರೆ ಕಸದ ಬುಟ್ಟಿ ಕಾಯುತಿದೆ, ತುಂಬಿಸಿ."
ತಾನು ಮಾಡುತ್ತಿರುವುದು ಪರೀಕ್ಷೆ ಅಂತಲೂ, ತನ್ನೆದುರಿಗೆ ಪತ್ರಗಳ ರಾಶಿ ಇರುವುದೆಂದೂ ಸರಿಯಾಗಿ ಊಹಿಸಿದ್ದಾಳೆ. ಕಸದ ಬುಟ್ಟಿಯನ್ನು ಕರೆಕ್ಟಾಗಿ ಕಲ್ಪಿಸಿಕೊಂಡಿದ್ದಾಳೆ. ಆದರೆ ಮುಂಜಾವಿನ ಮೂರು ಘಂಟೆ ಎಂಬ ಈಗಿನ ಯುವಜನರ ಅರ್ಧರಾತ್ರಿಯಲ್ಲಿ ಪತ್ರ ಓದುತ್ತಿರುವೆನೆಂದು ಅಂದುಕೊಂಡಿರಲಿಕ್ಕಿಲ್ಲ. ಅಂದುಕೊಂಡಿರಲಾರಳು ಎಂಬ ಕಾರಣಕ್ಕೇ ಈಗಲೇ ಫೋನ್ ಮಾಡಿ ತಾನೇ ಬುದ್ಧಿವಂತನೆನ್ನಿಸಿಕೊಳ್ಳಬೇಕು. ಉಳಿದೆಲ್ಲ ಪತ್ರಗಳನ್ನು ಬದಿಗೆಸೆದು ಫೋನ್ ಗೆ ಕೈ ಹಾಕಿದ.
ಆ ಕಡೆ ಫೋನ್ ರಿಂಗಾಗುತಿತ್ತು. ಸಂದೀಪ್ ಉಸಿರು ಬಿಗಿ ಹಿಡಿದಿದ್ದ. ಮನೆಯಲ್ಲಿ ಬೇರೆ ಯಾರಾದರೂ ಫೋನ್ ಎತ್ತಿದರೆ? .. " ಹಲೋ.." ಎಂದ ನಿಧಾನವಾಗಿ. ಆ ಕಡೆ ಲೈನ್ ನಲ್ಲಿರುವವರ ಪ್ರತಿಸ್ಪಂದನೆ ಕೇಳುವುದಕ್ಕಾಗಿ ಉತ್ಸುಕನಾಗಿದ್ದ.
"ಯಾರ್ರೀ.. ಅದು ಇಷ್ಟ್ ಹೊತ್ನಲ್ಲಿ..?" ಗಡಸು ಹೆಂಗಸಿನ ಬೈಗುಳದಂತಹ ಉತ್ತರ!
" ನಾನು.. ನಾನು.. ಸಂದೀಪ್.. ಅದೂ.. ಏಳು..ಮ.." ಎಮ್ದು ಬಡಬಡಿಸುತ್ತಿರುವಾಗ "ಬೆಳ್ಳಂಬೆಳಿಗ್ಗೆ ಮೂರುಘಂಟೆಗೆ ನಿದ್ರೆ ಹಾಳುಮಾಡಿ ಏಳು ಅನ್ನೋಕೆ ನೀನ್ಯಾವನಯ್ಯ?!" ಎಂದು ಸಿಡುಕಿನಿಂದ ಉತ್ತರಿಸಿದಳಾಕೆ.
ಗೊಂದಲಮಯನಾದ ಸಂದೀಪ್ ಇನ್ನೇನು ಫೋನ್ ಇಡಬೇಕು ಅಂದುಕೊಳ್ಳುತಿರುವಾಗ ಆ ಕಡೆಯಿಂದ ಸಿಟ್ಟಿನ ಗಡಸು ಹೆಂಗಸಿನ ಧ್ವನಿ ಮರೆಯಾಗಿ ಸಿಹಿಯಾದ ಉಲಿತವೊಂದು ಕೇಳಿಸಿತು.." ಪ್ಲೀಸ್.. ಫೋನ್ ಇಟ್ಟುಬಿಡಬೇಡಿ!"
ಆಶ್ಚರ್ಯವಾಯಿತವನಿಗೆ. "ಅಂದರೆ ಇಷ್ಟು ಹೊತ್ತು ಮಾತಾಡಿದ್ದು ನೀವೇನಾ?!"
ಅವಳು ನಸುನಕ್ಕು," ಹ್ಮ್.. ಕಾಲೇಜಿನಲ್ಲಿ ಓದುತ್ತಿದ್ದಾಗ ಮಿಮಿಕ್ರಿಯಲ್ಲಿ ಪ್ರೈಜ್ ಬಂದಿತ್ತು, ಅಮಿತಾಭ್ ಬಚ್ಚನ್ ತರಹ ಮಾತಾಡೋಣ ಅಂದ್ಕೊಂಡೆ. ನಿಮ್ಗೆ ಅನುಮಾನವಾಗುತ್ತದೆಂದು…"
ಸಂದೀಪ್ ಬೇಸ್ತುಬಿದ್ದಿದ್ದ. ತುಂಟ ಹುಡುಗಿಯೊಬ್ಬಳನ್ನು ಗೆಳತಿಯನ್ನಾಗಿ ಮಾಡಿಕೊಳ್ಳೋಣವೆಂದರೆ ತನ್ನನ್ನೇ ಸುಲಭವಾಗಿ ಗೋಳುಹೋಯ್ದುಕೊಂಡಳಲ್ಲಾ ಅಂದುಕೊಂಡ. ಅವಳ ಬಗ್ಗೆ ಮನಸ್ಸು ಏನೆಲ್ಲಾ ಕಲ್ಪಿಸಿಕೊಳ್ಳುತಿತ್ತು. ಕೊಂಚ ಕ್ಷಣಗಳ ಮೌನದಲ್ಲಿ ಅವನ ಮನದಾಳದೊಳಗೆ ಒಂದು ನಿರ್ಧಾರ ಮೆದುವಾಗಿ ಹದಗಟ್ಟುತ್ತಿತ್ತು.
"ಹಲೋ… ಏನಾಲೋಚಿಸುತ್ತಿದ್ದೀರಿ?"
ನಿರ್ಧಾರ ಗಟ್ಟಿಯಾಯಿತು. " ನನ್ನನ್ನು ಮದುವೆಯಾಗುವಿರಾ?" ಕೇಳಿದ.
"ವ್ಹಾಟ್?!" ಎಂಬ ಉದ್ಗಾರ ಅವಳಾಶ್ಚರ್ಯದ ಮೇರೆ ಸೂಚಿಸಿತು.
ಅವನಲ್ಲಿ ಅದೇ ಮಾತಿನ ಖಚಿತತೆ. ಅದೇ ನಿರ್ಧಾರದ ಗಟ್ಟಿತನ. ಪುನಃ ಅದೇ ಪ್ರಶ್ನೆ ಕೇಳಿದ.
"ಅಲ್ರೀ.. ನೀವು ನನ್ನನ್ನ ನೋಡೇ ಇಲ್ಲ?!"
" ನೋಡಬೇಕಾಗಿಲ್ಲ!"
"ನಾನು ಮುದ್ಕಿಯಾಗಿರಬಹುದು!" ಎಂದಳು; ದನಿಯಲ್ಲಿ ಶುದ್ಧ ತುಂಟತನ.
"ಪರವಾಗಿಲ್ಲ!"
"ಮ್..ನಿಮಗೆ ಬೇಕಾಗಿರೋದು ಏಳುಮಲ್ಲಿಗೆ ತೂಕದವಳಲ್ಲವೇ? ಆದ್ರೆ ನಾನು ಸ್ವಲ್ಪ ಡುಮ್ಮಿ ರೀ.."
"ಆದರೂ ಸರಿ"
"ಇಷ್ಟಕ್ಕೂ ನನ್ನಲ್ಲೇನು ಇಷ್ಟ ಆಯಿತು ನಿಮಗೆ?"
"ನಿಮ್ಮಲ್ಲಿರೋ ಜೀವಂತಿಕೆ!"
ಒಂದು ಕ್ಷಣದ ಮೌನ. ಆ ಅವಧಿಯಲ್ಲಿ ಇಬ್ಬರೂ ಭಾವವನ್ನು ಅರಗಿಸಿಕೊಳ್ಳಲು ಪ್ರಯತ್ನಿಸಿದರು. ಅವನ ಆ ನಿಜಾಯಿತಿಯ ಉತ್ತರಕ್ಕೆ ಅವಳ ತುಂಟತನ ಅಡಗಿ ತಂಪು ಹವೆಯೊಂದು ತಟ್ಟಿಹೋದಂತೆ ತನ್ಮಯಳಾದಳು. ಸಂದೀಪ್ ಮತ್ತೆ ಮುಂದುವರಿಸಿದ." … ಹೌದು. ಬತ್ತಿದ ಬದುಕಲ್ಲಿ ಉತ್ಸಾಹ ಮೂಡಿಸುವ ಚಿಲುಮೆ ನಿಮ್ಮಲ್ಲಿ ಧ್ವನಿಸುತ್ತಿದೆ. ನಿಮ್ಮ ಮುಖ ನಿಮ್ಮ ಮಾತಿನ ಲಹರಿಯಲ್ಲೇ ಕಾಣಿಸುತಿದೆ. ನಿಜವಾಗಿಯೂ ನನಗೆ ಬೇಕಿರುವುದು ಏಳುಮಲ್ಲಿಗೆತೂಕದ ಹುಡುಗಿಯ ಸ್ನೇಹವೇ. ಆದರೆ ಆ ತೂಕ ಮನಸ್ಸಿಗೆ ಸಂಬಂಧಿಸಿದ್ದು.ನಿಮ್ಮ ಮನಸ್ಸೂ ಮಲ್ಲಿಗೆಯಂಥದ್ದು, ಅಷ್ಟೇ ಮಧುರ… ಅಷ್ಟೇ ಕಂಪು!"
ಅವಳು ನಕ್ಕಳು," ಮತ್ತೆ..?"
"ಚೈತನ್ಯದ ಸುಗಂಧ ನಿಮ್ಮಲ್ಲಿದೆ. ಅದರ ಘಮ ಇಲ್ಲೂ ನನಗರಿವಾಗುತಿದೆ. ಹೇಳಿ ನನ್ನನ್ನು ಮದುವೆಯಾಗುತ್ತೀರಾ?"
ಅವಳು ಮತ್ತೊಮ್ಮೆ ನಕ್ಕು ಫೋನ್ ಇಟ್ಟುಬಿಟ್ಟಳು.
ಸಂದೀಪ್ ವಿಜಯದ ನಿಟ್ಟುಸಿರಿಟ್ಟು ಮೆಲುವಾದ ಅವಳ ದನಿಯ ಗುಂಗಿನಲ್ಲಿಯೇ ಪರವಶನಾಗುತ್ತಿದ್ದ.
ಅವಳು ಫೋನಿಟ್ಟು ಎದುರಿಗಿರುವ ಕನ್ನಡಿಯಲ್ಲಿ ತನ್ನ ಮೊಗ ನೋಡಿ ನಸುನಕ್ಕಳು.
ಇತ್ತೀಚಿನ ಟಿಪ್ಪಣಿಗಳು