Author Archive
ಶಾಂತಿ ಮಂತ್ರ!
Posted ಜುಲೈ 23, 2009
on:ನಾನು ನನ್ನ ಸಂಸಾರ!
Posted ಜುಲೈ 20, 2009
on:- In: ಹಾಸ್ಯ
- 6 Comments
ವಾರಾಂತ್ಯದ ಕವಿತೆ: ಬಲೂನು!
Posted ಜುಲೈ 18, 2009
on:-ರಂಜಿತ್ ಅಡಿಗ , ಕುಂದಾಪುರ.
ಮೂರು ಕಾಸಿತ್ತು ಕೊಂಡ ವಸ್ತು
ಎಲ್ಲೆಂದರೆ ಅಲ್ಲೇ ಬಿದ್ದುಕೊಂಡಿತ್ತು
ಎರಡು ಹನಿ ಉಸಿರು ತುಂಬಿದರೆ
ತನ್ನೊಳಗನು ಅರಿಯಿತು, ಎಚ್ಚೆತ್ತಿತು ಆತ್ಮ
ಉಸಿರಿಗೆಲ್ಲ ಬೆಲೆಯಿಲ್ಲ ಎಂದು ನೊಂದು
ಸಾಯಿಸಿಕೊಳ್ಳುವವರನು ನಾಚಿಸುತ್ತ
ಸ್ವತಃ ಬೆಲೆಯ ಮಟ್ಟವನು ಸೂಚಿಸುತ್ತ
ಎತ್ತರೆತ್ತರ ಏರುತಿತ್ತು,ಆಗಸವನೇ ತಲುಪುವತ್ತ
ಯಮನ ಜೋಳಿಗೆಯಂತೆ ಗರ್ಭದೊಳು
ಮುದುಡಿದ ಮಗುವಿನಂತೆ
ತೇಲುತ್ತ ಹಾರುತ್ತ ಆಗುತ್ತ ಚುಕ್ಕಿ
ಸುತ್ತಲಿನ ಜನರೆಲ್ಲ ನೋಡಿ
ಉಸಿರು ಹೋಯಿತು, ಉಸಿರು ಹೋಯಿತು
ಎಂದೆಸೆದರು ಉದ್ಗಾರವನು!
****
ವಾರಾಂತ್ಯದ ಕವಿತೆ: “ಹೋಗುವ ಮುನ್ನ..”
Posted ಜುಲೈ 10, 2009
on:–ಜ್ಞಾನಮೂರ್ತಿ, ಬೆಂಗಳೂರು.
ಮಣ್ಣಲ್ಲಿ ಮಣ್ಣಾಗಿ ಹೋಗುವ ಮುನ್ನ,
ಧರಿತ್ರಿಯ ಸಂಗವ ತೊರೆಯುವ ಮುನ್ನ
ತಾಯ್ಮಡಿಲಿನಲಿ ಶಿರವನಿರಿಸಿ ನಾ ಅಲೆದಿರುವಾ
ನನ್ನ ನೆನಪಿನಂಗಳವನ್ನ ತವೆಯುತ್ತ
ತಾಯ್ಮಡಿಲ ಸೇರಿದ ನೆನಪಾಗಿ,
ಬಾಲ್ಯದ ತುಂಟಾಟ ಕೈಬೀಸಿದಂತಾಗಿ
ಗೆಳೆಯರ ಜಗಳ ಸಂಧಾನಗಳು ಕೂಗಿ ಕರೆದಂತಾಗಿ
ಕೈಹಿಡಿದ ಕೈಯನ್ನು ಹಿಡಿದು ನಡೆಸುವ ಹಂಬಲವಾಗಿ
ಮನಸು ಸಾವಿನ ದಾರಿಯಲಿ ತಾ ಹಿಂದೆ ನೋಡುತಿರೆ,
ವಾಸ್ತವಕೆ ಬಂದು ನಾ ಸುತ್ತ ನೋಡುತಿರೆ
ತೇವದಿ೦ದೆಲ್ಲರ ಕಂಗಳಲಿ ನನ್ನ ಬಿಂಬ
ಕಂಡು ಸಂತಸಗೊಂಡೆ ನಾ ಈ ಕ್ಷಣ
ಮಾತೃದೇವತೆಯ ಮಡಿಲ ತೊರೆಯಲಾಗುತ್ತಿಲ್ಲ
ಮಡದಿಯ ಸಿಂಧೂರ ನೋಡಲಾಗುತ್ತಿಲ್ಲ.
ಕಾಲಚಕ್ರವ ಹಾಗೆ ಹಿಂದೆ ಸರಿಸುವ ಆಸೆ,
ಅಮ್ಮಾ ನಿನ್ನ ಮಡಿಲಲಿ ನಾ ಮತ್ತೆ ಶಿಶುವಾಗುವಾಸೆ
ಬಾಳೆಂಬ ನಾಣ್ಯದ ಎರಡನೇ ಮುಖವ ನೋಡುವ ಸಮಯ
ಓಗೊಟ್ಟು ಸ್ವೀಕರಿಸಲೇಬೇಕು ಜವರಾಯನ ಈ ಕರೆಯ
ಕಣ್ಣಾಲಿಗಳು ತೇಲುತಿರೆ, ಉಸಿರಾಟ ನಿಲ್ಲುತಿರೆ,
ಹೃದಯವಿದು ತನ್ನ ಬಡಿತವಾ ತಾನು ನಿಲ್ಲಿಸಿರೆ,
ಕಣ್ಣ ರೆಪ್ಪೆಯಲೇ ಕಡೆಯ ನಮನವಾ ತಿಳಿಸಿ
ಹೋಗುತಿರುವೆ ನಾ……..
ಜವರಾಯನ ಗೆದ್ದು ಜೀವಿಸಲೇ ಬೇಕೆಂದು ಏಕನಿಸಿತೋ ಕಾಣೆ
ಹೋಗುವ ಮುನ್ನ, ಹೋಗುವಾ ಮುನ್ನ……
ಬರದವನ ದಾರಿ ಕಾಯುತ್ತಾ…!
Posted ಜುಲೈ 8, 2009
on:– ರೇಶ್ಮಾ, ಉತ್ತರ ಕನ್ನಡ.
ಹೊರಗೆ ಬಿಸಿಲಿಲ್ಲ. ಕಪ್ಪು ಮೋಡ. ಇನ್ನೇನು, ಕ್ಷಣಗಳಲ್ಲಿ ಮಳೆ ಶುರುವಾಗತ್ತೆ. ಒಳಗೆ ಎಷ್ಟು ಕೂಗಿಕೊಂಡರೂ ಕೇಳಿಸದ ಹಾಗೆ ಧೋ.. ಅಂತ ಸುರಿವ ಮಳೆ. ಕಿಟಕಿ, ಬಾಗಿಲು ಮುಚ್ಚಿ ಕುಳಿತರೆ ಕೊನೆಗೆ ವೆಂಟಿಲೇಟರ್ ನಲ್ಲಾದರೂ ನುಸುಳಿ ಒಳ ಬಂದು ಥಂಡಿ ಹುಟ್ಟಿಸುವ ಗಾಳಿ. ಅವನೂ ಇದ್ದಿದ್ದರೆ ಚೆನ್ನಾಗಿರ್ತಿತ್ತು.
ತುಂಬಾ ಚಳಿಯಾಗುತ್ತಿದೆ. ಬಿಸಿಯಾಗಿ ಏನಾದರೂ ಹೊಟ್ಟೆಗೆ ಬೇಕು ಅನಿಸ್ತಿದೆ. ಒಬ್ಬಳೇ ಮಾಡಿಕೊಂಡು ಕುಡೀಬೇಕಲ್ಲ ಅಂತ ಸ್ವಲ್ಪ ಉದಾಸೀನ. ಆದರೂ ಬೇಕು ಅನ್ನುತ್ತಿದೆ ಮನಸ್ಸು. ಲೋಟದ ತುಂಬ ಬಿಸಿ ಬಿಸಿ ಕಾಫಿ ಮಾಡಿಕೊಂಡು ಬಾಲ್ಕನಿಗೆ ಬರುವಾಗ ಹೊರಗೆ ಮಳೆ ಇನ್ನೂ ಅದೇ ಆವೇಶದಲ್ಲಿ ಸುರಿಯುತ್ತಿದೆ. ಅವನು ಇದ್ದಿದ್ದರೆ ಬರೀ ಕಾಫಿ ನಾ? ಏನಾದ್ರೂ ತಿಂಡಿ ಪ್ಲೀಸ್ ಮುಖ ಚಿಕ್ಕದು ಮಾಡುತ್ತಿದ್ದ. ಈಗ ತಿಂಡಿ ಮಾಡಬೇಕು ಅನಿಸ್ತಿಲ್ಲ. ಅವನು ಇವತ್ತಷ್ಟೇ ಹೋಗಿದ್ದಾನೆ, ಬರೋಕೆ ಒಂದು ವಾರ ಬೇಕು ಅನ್ನೋದು ಗೊತ್ತಿದ್ದರೂ ಮತ್ತೆ ಮತ್ತೆ ಅವನ ಬರವು ಕಾಯುತ್ತಾ ರಸ್ತೆ ನೋಡುವುದು. ಅವನಿಲ್ಲದೆ ಒಂದು ಕ್ಷಣ ಕಳೆಯೋದು ಸಹ ಕಷ್ಟ ಆಗ್ತಿದೆ. ಮಳೆ ಬರುತ್ತಿರುವಾಗ ಅವನಿರಬೇಕಿತ್ತು ಜೊತೆಗೆ. ಅಲ್ಲಿ ಈಗ ಏನು ಮಾಡ್ತಿರಬಹುದು? ಒಮ್ಮೆ ಫೋನ್ ಮಾಡಿ ಮಾತಾಡಿದರೆ ಹೇಗೆ? ಬೇಡ, ಮೆಸೇಜ್ ಮಾಡಿದ್ರೇ ಒಳ್ಳೇದು. ಮೀಟಿಂಗ್ ನಲ್ಲಿದ್ದರೆ ಡಿಸ್ಟರ್ಬ್ ಆಗೋದಿಲ್ಲ.
ಮೆಸೇಜ್ ಮಾಡಿ ಹತ್ತು ನಿಮಿಷಗಳಾದರೂ ಉತ್ತರವಿಲ್ಲ. ಬಹುಶಃ ನಿದ್ರೆ ಮಾಡ್ತಿರಬಹುದು ಅನಿಸಿದ್ದೇ ಅವನು ಮಲಗುವ ರೀತಿ ನೆನಪಿಗೆ ಬಂತು. ಥೇಟ್ ಚಿಕ್ಕ ಮಕ್ಕಳ ಹಾಗೇ.. ಪ್ರಶಾಂತವಾದ ಮುಖ, ತುಂಟ ಕಣ್ಣುಗಳು.. ಅವನು ಮನೆಯಲ್ಲಿದ್ದರೆ ಒಂದು ನಿಮಿಷವೂ ಬಿಡುವೇ ಸಿಗುವುದಿಲ್ಲ. ಅಮ್ಮ, ಅಪ್ಪನಿಗೆ ಅಂತ ಹೀಗೆ ಒಮ್ಮೆಯಾದರೂ ಹೀಗೇ ಕಾಯುತ್ತಾ ನಿಂತಿದ್ದು ನೆನಪಿಗೆ ಬರುತ್ತಿಲ್ಲ. ಹಳ್ಳಿ ಮನೆಯ ಮುಗಿಯದ ಕೆಲಸಗಳ ಜೊತೆ ಮಕ್ಕಳ ಗಲಾಟೆ ಸುಧಾರಿಸುತ್ತಿದ್ದವಳಿಗೆ ಅಪ್ಪನಿಗೆ ಕಾಯುತ್ತಾ ನಿಲ್ಲಲು ಪುರುಸೊತ್ತೆಲ್ಲಿರ್ತಿತ್ತು?
ಆಗಾಗ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವವಳಿಗೆ ಅಮ್ಮನ ನೆನಪಲ್ಲಿ ಕಣ್ತುಂಬಿ ಬರುತ್ತೆ. ಟಿ. ವಿ ನೋಡುತ್ತಾ ಕುಳಿತವನಿಗೆ ಅದು ಹೇಗೆ ಗೊತ್ತಾಗುತ್ತೋ, ಪಕ್ಕದಲ್ಲಿ ಹಾಜರ್. ಅವನನ್ನು ನೋಡುತ್ತಿದ್ದ ಹಾಗೇ ನಿಯಂತ್ರಿಸಿಕೊಳ್ಳಲಾಗದೇ ಕಣ್ಣೀರ ಹೊಳೆಯೇ ಹರಿದುಬಿಡುತ್ತೆ. ಆಗ ಎದೆಗೊರಗಿಸಿಕೊಂಡು, ನಾಳೆ ಅಮ್ಮನ್ನ ನೋಡ್ಕೊಂಡು ಬರೋಣ ಅನ್ನುತ್ತಾನೆ.
ಅರೇ.. ಮೆಸೇಜ್ ಬಂತು, ಅವನದ್ದೇ. ನಿದ್ರೆ ಮಾಡಿದ್ದೆ. ನಂತರ ಕಾಲ್ ಮಾಡ್ತೀನಿ. ದೂರ ಇದ್ದರೂ ಮೆಸೇಜ್ ಮಾಡೋವಾಗ, ಫೋನನಲ್ಲಿ ಮಾತಾಡೋವಾಗ ಒಮ್ಮೆಯೂ ಮಿಸ್ ಯೂ ಅಂತ ಹೇಳಿದ್ದಿಲ್ಲ. ಕಾಲ್ ಮಾಡಿದ ತಕ್ಷಣ ಕೇಳ್ತಾನೆ, ಅಲ್ಲಿ ಮಳೆ ಇದ್ಯಾ?. ಅವನಿಗೂ ಸಹ ಮಳೆ ಅಂದ್ರೆ ಇಷ್ಟ. ಅರೇ ಮಳೆ ಕಡಿಮೆಯಾಗಿಬಿಡ್ತು. ಎಲ್ಲೋ ನೋಡುತ್ತಾ ಲೋಟ ಬಾಯಿಗಿಟ್ಟರೆ, ಕಾಫಿಯೂ ಖಾಲಿ.
– ರಂಜಿತ್ ಅಡಿಗ, ಕುಂದಾಪುರ
ಅವತ್ತು ನೀ ಹಾಗೆ ಬೆನ್ನು ತೋರಿ ಹೊರಡುವಾಗ ನಿನ್ನ ಕಣ್ಣು ನೋಡಬೇಕೆನ್ನಿಸಿತ್ತು ಕಣೇ. ಪ್ರೀತಿಯಿಂದ ತುಳುಕುತಿದ್ದ ಕಣ್ಣ ಭಾವವನ್ನಷ್ಟೇ ಸವಿದು ಅಭ್ಯಾಸವಾಗಿಬಿಟ್ಟಿತ್ತಲ್ಲ; ಮೋಸದ ಕಹಿಯೂ ಅರಿವಾಗಬೇಕಿತ್ತು. ಮೊದಲು ನನ್ನ ಕಂಡೊಡನೆ ತಾರೆಯಂತೆ ಜಗಮಗಿಸುತ್ತಿದ್ದ ಕಣ್ಣುಗಳಲ್ಲಿ ಈ ಬಗೆಯ ನಿರ್ಲಕ್ಷ್ಯ, ’ನಿನ್ನ ಬದುಕು ನಿನಗೆ; ಎಲ್ಲೋ ಹೇಗೋ ಬದುಕಿಕೊಂಡು ಸಾಯಿ’ ಅನ್ನುವಂಥ ದ್ವೇಷ ಹೇಗೆ ಧಗಧಗಿಸುತ್ತದೆ ಎಂದಾದರೂ ಕಾಣಬೇಕಿತ್ತು.
ಅದರಿಂದಲಾದರೂ ನಿನ್ನ ಮೇಲೊಂದಿಷ್ಟು ಸಿಟ್ಟು ಹುಟ್ಟಿ ನಿನ್ನ ಮರೆಯಲು ಸುಲಭವಾಗುತಿತ್ತಲ್ಲವೇ? ಈ ಪರಿ ರಾತ್ರಿಗಳನ್ನು, ನೆನಪುಗಳು ಸುಡುವ ಅವಕಾಶ ಇಲ್ಲವಾಗುತಿತ್ತಲ್ಲವೇನೆ ಗೆಳತೀ?
ಹಾಗೆ ಅಷ್ಟು ನಿರ್ದುಷ್ಟವಾಗಿ ಹೋಗುವಾಗ, ವಿಲವಿಲ ಒದ್ದಾಡುವ ಹೃದಯವನ್ನು ನೇವರಿಸುವಂತಹ ಪುಟ್ಟನೋಟವೊಂದನ್ನು ಇತ್ತು ಹೋಗಿದ್ದರೆ ಜನುಮದ ಕ್ಷಣಗಳನ್ನೆಲ್ಲಾ ಅದರ ತೆಕ್ಕೆಯಲ್ಲಿ ಹಾಕಿ ಖುಷಿಯಿಂದ ಕಳೆದುಬಿಡುತ್ತಿದ್ದೆ. ’ನಿನ್ನದೇನೂ ತಪ್ಪಿಲ್ಲ; ಏನೋ ಸಮಸ್ಯೆಯಿಂದಾಗಿ ಹೊರಟಿದ್ದೀ, ಬದುಕಿನ ಯಾವುದೋ ಒಂದು ಸುಂದರ ತಿರುವಿನಲ್ಲಿ ನನಗಾಗಿ ಕಾಯುತಿರುತ್ತೀ’ ಎಂಬ ಭ್ರಮೆಯನ್ನು ಸತ್ಯವೆಂದೇ ಮನಸ್ಸಿಗೆ ನಂಬಿಸುತ್ತಾ ಅಂತಿಮವಾಗಿ ಸಾವಿನ ತಿರುವು ಬರುವವರೆಗೂ ಕಾಲ ಕಳೆಯುತ್ತಿದ್ದೆ. ನಮ್ಮ ಯುಗಗಳು ದೇವರಿಗೆ ಕ್ಷಣಗಳಂತೆ. ಅಂತಹ ಸಾವಿರ ಕ್ಷಣಗಳನ್ನು ಯುಗಗಳಂತಾದರೂ ಗರ್ಭಗುಡಿಯೊಳಗಿನ ಮೂರ್ತಿಯಂತೆ ಬಾಳಿ ಕಳೆದುಬಿಡುತ್ತಿದ್ದೆ.
ಹಾಗಾಗಲಿಲ್ಲ.
ನೀ ತೊರೆದ ಘಳಿಗೆಯಲ್ಲಿ ನಿಶ್ಯಬ್ದವೂ ಸಂತೈಸಲಿಲ್ಲ; ತಂಗಾಳಿಯೂ ಸಾಂತ್ವನ ಹೇಳಲಿಲ್ಲ. ಮೌನವಾಗಿ ನಿಂತ ನನ್ನ ಹಿಂದೆ ಅದೇ ಯುಗಗಳಂತಹ ಕ್ಷಣಗಳ ಕ್ಯೂ. ನೆನಪಿನ ಜೋಳಿಗೆ ಹೊತ್ತ ಫಕೀರನೆದುರು ಹಸಿದು ನಿಂತ ಬಕಾಸುರನಂತೆ ಕ್ಷಣಗಳು.
ಹಾಗೆ ಹೊರಟುಹೋಗಲು ಕಾರಣವಾದರೂ ಏನಿತ್ತು? ಕೇಳೋಣ ಅಂದುಕೊಂಡಿದ್ದೆ.
ಕೇಳಿಯೇ ಬಿಟ್ಟಿದ್ದರೆ ಮತ್ತೊಂದು ಅನಾಹುತವಾಗುತಿತ್ತು. ಮೊದಲಿಂದಲೂ ಆಸೆಪಟ್ಟದ್ದನ್ನು ಪಡೆದೇ ಅಭ್ಯಾಸ. ಅಮ್ಮನ ಖಾಲಿ ಕೈಗೆ ವಾಚು ಉಡುಗೊರೆ ಮಾಡಬೇಕೆಂದು ಯಾವಾಗನ್ನಿಸಿತ್ತೋ ಅದೇ ದಿನ ಮನೆಮನೆಗೆ ಪೇಪರ್ ಹಾಕಿ ಹಾಲಿನ ಪ್ಯಾಕೆಟ್ಟೆಸೆದು ತಿಂಗಳು ಮುಗಿಯುವುದರೊಳಗೆ ಟೈಟನ್ ವಾಚು ತಂದುಕೊಟ್ಟಿರಲಿಲ್ಲವೇ?
ಕುಡುಮಿ ವಿಧ್ಯಾರ್ಥಿಯೊಬ್ಬನಿಗಿಂತ ಜಾಸ್ತಿ ಮಾರ್ಕ್ಸು ಪಡೆಯಲೇಬೇಕೆಂದು ಯಾವಾಗನ್ನಿಸಿತ್ತೋ ಆಗೆಲ್ಲಾ ನಿದಿರಿಸುವುದೇ ಕಾಲಹರಣ ಅನ್ನಿಸತೊಡಗಿತ್ತಲ್ಲವ? ಮುಂದಿನ ಪರೀಕ್ಷೆಯಲ್ಲಿಯೇ ಹೆಚ್ಚು ಅಂಕ ಗಳಿಸಿ ತೋರಿಸಿರಲಿಲ್ಲವೇ?
ಹಾಗೆಯೇ (ನೀನೆಲ್ಲಾದರೂ ನನ್ನ ದುಃಖ ಕಡಿಮೆಯಾಗುತ್ತದೆಂದು ಊಹಿಸಿ ಸುಳ್ಳಿಗಾದರೂ) ತೊರೆಯಲು ಏನೋ ಒಂದು ಕಾರಣ ಹೇಳಿದ್ದರೆ ಅದನ್ನು ಜಯಿಸಲು ನನಗೆಷ್ಟು ಸಮಯ ಬೇಕಾಗುತಿತ್ತು ಹೇಳು? ಅದಕ್ಕೇ ಕಾರಣ ಕೇಳುತ್ತಿದ್ದ ಮನದ ಕತ್ತನ್ನು ಹಿಸುಕಿ ಮೌನವಾಗಿಸಿದೆ.
ಇನ್ನು ಮುಂದೇನೂ ಇಲ್ಲ. ಕನಸು, ವಾಸ್ತವಗಳು ಸುತ್ತಲಿಂದಲೂ ಅಟ್ಯಾಕ್ ಮಾಡಿದಾಗ ಆಯುಧ ಕಳಕೊಂಡ ಸೈನಿಕ. ಮನಸ್ಸು, ಸಾಗರದ ನಡುಮಧ್ಯೆ ದಿಕ್ಸೂಚಿ ಬೀಳಿಸಿಕೊಂಡ ನಾವಿಕ. ತೂರಾಡುವ ಹಡಗಿಲ್ಲದೇ ಅಲೆಗಳಿಗೂ ಮಜವಿಲ್ಲ. ತೂಗಾಡಿಸುವ ಗಾಳಿಯಿಲ್ಲದೇ ಹೂಗಳಿಗೂ ಖುಷಿಯಿಲ್ಲ. ಸತ್ತವನಂತಿರುವವನಿಗೆ ಬಡಿದು ಪ್ರಯೋಜನವೇನು ಎಂಬಂತೆ ಬೇರೆ ದುಃಖಗಳೆಲ್ಲ ಇನ್ಯಾರನ್ನೋ ಹುಡುಕಿಕೊಂಡು ಹೊರಟಿದೆ. ಜೀವ ಬಸಿದು ಪದಗಳಾಗುತಿರಲು ಬರೆಯಲೂ ಕೈ ನಡುಗುತಿದೆ ; ಬಹುಶಃ ನಿನ್ನ ಮೇಲೆ, ಬದುಕಿನ ಮೇಲೆ, ಪ್ರೀತಿಯ ಮೇಲೆ ಮತ್ತು ದೇವರ ಮೇಲೆ ಬರೆಯುತ್ತಿರುವ ಕೊನೆಯ ಅಕ್ಷರಗಳಿವು.
ಓದಿ, ಲೊಚಗುಟ್ಟಿಯೋ, ಕನಿಕರಿಸಿಯೋ, ಧಿಕ್ಕರಿಸಿಯೋ, ನೇವರಿಸಿಯೋ, ಹರಿದು ಹಾಕಿಯೋ, ಫ್ರೇಮ್ ಹಾಕಿಸಿಯೋ, ಮದುವೆ ಅಲ್ಬಮ್ಮಿನ ಫೋಟೋ ಹಿಂದುಗಡೆ ಯಾರಿಗೂ ಕಾಣದಂತಿರಿಸಿಯೋ, ಚಿಂದಿ ಮಾಡಿ ಕಸದ ಬುಟ್ಟಿಗೆಸೆದೋ….
ಸಾರ್ಥಕವಾಗಿಸು.
ಅಲ್ಲವೇ? ಅದೇಕೋ ಈ ಪ್ರಶ್ನೆ ತಲೆಯನ್ನು ಹೊಕ್ಕಿ ಕುಂತಿತು. ಇಷ್ಟಕ್ಕು ಒಬ್ಬ ಮನುಷ್ಯ
ತನ್ನ ಆತ್ಮಕತೆಯಲ್ಲಿ ಸತ್ಯವನ್ನೇ ನುಡಿಯಬೇಕೆಂದು ಅಪೇಕ್ಷಿಸುವುದೇ ದೊಡ್ಡ ಮೂರ್ಖತನ.
ಸತ್ಯಕ್ಕೊಂದು ಪರಿಧಿ ಹಾಕಿ ಇದರಾಚೆಗಿನದೆಲ್ಲ ಸುಳ್ಳು ಎಂದು ಹೇಳಲು ಬರುವುದೇ?
ಘಟನೆಗಳು, ಅನುಭವಗಳು, ದಾಖಲಾಗುತ್ತವೆ. ಅದರ ಸತ್ಯಾಸತ್ಯತೆ ಬರೆದವರನ್ನು ಕಾಡುತ್ತದೆ.
ಆತ್ಮಸಾಕ್ಷಿಗೆ ಹೆದರುವವರೆಲ್ಲರು ಸತ್ಯವನ್ನೇ ದಾಖಲಿಸುತ್ತಾರೆ ಎಂಬ ಮಾತುಗಳೆಲ್ಲ
ಎಷ್ಟು ಸಿನಿಕವೆನ್ನಿಸತೊಡಗಿತು. ಒಂದು ಘಟನೆಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ
ತನ್ನದೇ ಅಭಿಪ್ರಾಯಗಳನ್ನು ಹೊಂದಿರುತ್ತಾನೆ, ಅದೂ ಅವನವೇ ಎಂಬುದಕ್ಕೆ ಏನು ಸಾಕ್ಷಿ
ತಂದುಕೊಡಬಲ್ಲ? ಅವನ ಯೋಚನೆಗೆ ನಿಲುಕಬಲ್ಲಷ್ಟು ಪ್ರಾಮಾಣಿಕ ಅಭಿಪ್ರಾಯಗಳನ್ನು
ದಾಖಲಿಸಬಲ್ಲನೆಂದರೆ, ಅಭಿಪ್ರಾಯಗಳ ಪ್ರಾಮಾಣಿಕತೆಯ ಮೇಲೆ ಅವನು ಘಟನೆಯ ಬಗ್ಗೆ ನೀಡಿದ
ವಿವರಗಳನ್ನು ಸತ್ಯ ಸುಳ್ಳು ಎಂದು ವರ್ಗೀಕರಿಸಬಹುದೇ? ಹೀಗೇ ಯೋಚಿಸುತ್ತಿದ್ದೆ.
ನನ್ನನ್ನು ಸದಾ ಕಾಡುವ, ಯೋಚನೆಗೆ ಹಚ್ಚುವ, ನಾನರಿಯದ ವ್ಯಕ್ತಿಗಳನ್ನು ಪರಿಚಯಿಸುವ
ಆತ್ಮ ಕಥನಗಳು ನನಗೆ ಇನ್ನಷ್ಟು ಆಪ್ತವಾಗುತ್ತಿವೆ. ಈ ಸಲದ ಆತ್ಮಕತೆಗಳ ಸರಣಿಯಲ್ಲಿ
ನಾನು ಬರೆಯುತ್ತಿರುವುದು ’ದಾದಾಗಿರಿಯ ದಿನಗಳ’ ಬಗ್ಗೆ ಇದು ’ಅಗ್ನಿ’ ಪತ್ರಿಕೆಯ
ಸಂಪಾದಕ ಶ್ರೀಧರ್ ರ ಆತ್ಮಕತೆ. ಇದರ ಮೊದಲ ಭಾಗವಷ್ಟೇ ಓದಿದ್ದೇನೆ, ಇನ್ನೂ ಎರಡು
ಭಾಗಗಳು ಬಾಕಿ ಇವೆ ಆದ್ದರಿಂದ ಬರೆಯಲೋ ಬೇಡವೋ ಎಂಬ ಗೊಂದಲದಲ್ಲೇ, ಬರೆಯದೆ ಇರಲು
ಸಾಧ್ಯವಿಲ್ಲವೆನಿಸಿ ಬರೆಯುತ್ತಿದ್ದೇನೆ.
ಆತ್ಮಕತೆಗಳನ್ನು ಯಾರ್ಯಾರು ಬರೆಯಬಹುದು? ಯಾರಾದರೂ ಬರೆಯಬಹುದು. ಆದರೂ ಎಲ್ಲರೂ
ಬರೆಯುವುದಿಲ್ಲ ಏಕೆ? ತಮ್ಮ ಜೀವನದಲ್ಲಿ ದಾಖಲಿಸಲು ಅರ್ಹವೆನಿಸುವಂತಹ ಘಟನೆಗಳು
ನಡೆದಿದ್ದರೆ ಸಾಮಾನ್ಯವಾಗಿ ಆತ್ಮಕತೆಗಳನ್ನು ಬರೆದುಕೊಳ್ಳುತ್ತಾರೆ. ದಾಖಲಿಸಲ್ಪಟ್ಟ
ಘಟನೆಗಳು ಪೂರ್ತಿಯಾಗಲ್ಲದಿದ್ದರೂ ಎಲ್ಲೋ ಒಂದು ಕಡೆ ಬರೆಯುತ್ತಿರುವವನ
ಒಳ್ಳೆಯತನಗಳನ್ನೋ ಸಾಧನೆಗಳನ್ನೋ ಪ್ರತಿಬಿಂಬಿಸುತ್ತವೆ. ಇದು ಲೋಕಾರೂಢಿ. ಆದರೆ
ದಾದಾಗಿರಿಯ ದಿನಗಳಲ್ಲಿ ನಾನು ಕಂಡಿದ್ದು ಶ್ರೀಧರರ ಕನ್ಪೆಶನ್. ಅವರ ಮನಸ್ಸು ಬರವಣಿಗೆ
ಎಡೆಗೆ ಪಲ್ಲಟಗೊಳ್ಳುವವರೆಗೂ ಅವರೊಂದಿಗೆ ನಡೆದ ಘಟನೆಗಳು ಯಾವ ಸಿನಿಮಾಕ್ಕಿಂತ ಕಡಿಮೆ
ಇಲ್ಲ. ಅತ್ಯಂತ ರಂಜಕವಾಗಿ, ವಿಜೃಂಬಿಸಿ ಬರೆದಿದ್ದರೆ ಅದೊಂದು ಬೆಸ್ಟ್ ಸೆಲ್ಲರ್
ಪುಸ್ತಕವಾಗುತ್ತಿತ್ತೋ ಏನೋ, ಆದರೆ ಶ್ರೀಧರ್ ಎಲ್ಲೂ ಎಲ್ಲೆ ಮೀರಿಲ್ಲ. ತಮ್ಮ
ಒಳ್ಳೆಯತನಗಳನ್ನು ಸಾಬೀತುಪಡಿಸಹೊರಟಿಲ್ಲ, ಅಲ್ಲಿರುವುದು ಘಟನೆಗಳ ನೇರ ವಿವರ, ಅವುಗಳು
ಜರಗುವಾಗಿನ ಅವರ ಮನಸ್ಥಿತಿ, ತಪ್ಪೊಪ್ಪಿಗೆ ಮತ್ತು ಪಶ್ಚಾತಾಪ. “ನನ್ನ
ಬದುಕಿನಲ್ಲೊಂದು ಕಾಲವಿತ್ತು. ನನ್ನ ಪ್ರತಿಯೊಂದು ಗಳಿಗೆಯನ್ನು ಅಪರಿಚಿತ ಕಣ್ಣುಗಳು
ಹಿಂಬಾಲಿಸುತ್ತಿದ್ದವು. ಕಾಣದ ಕಿವಿಗಳು ಕೇಳಿಸಿಕೊಳ್ಳುತ್ತಿದ್ದವು. ಅದೊಂದು ಪಾತಕಿಗಳ
ಭೀಕರ ಪ್ರಪಂಚವೆಂದು ತಳ್ಳಿ ಹಾಕುವ ಹಾಗಿರಲಿಲ್ಲ. ಪಾತಕಿಗಳಲ್ಲಿ ನಾನೂ
ಒಬ್ಬನಾಗಿದ್ದೆ. ಭೀಕರತೆಯಲ್ಲಿ ನನ್ನ ಕೊಡುಗೆಯೂ ಇತ್ತು” ಎಂದು ಶುರುವಿಡುತ್ತಾರೆ.
೧೯೭೦-೮೦ ರ ಪಾತಕಪ್ರಪಂಚದ ಬಗ್ಗೆ ಬೆಚ್ಚಿಬೀಳಿಸುವ ಒಂದೊಂದೂ ವಿವರವೂ ಅವರ
ಆತ್ಮಕತೆಯಲ್ಲಿ ದಾಖಲಾಗಿದೆ, ಅದರಲ್ಲಿ ಶ್ರೀಧರ್ ರ ಪಾತ್ರವೂ ಇತ್ತೆಂಬುದು
ನಂಬಲಸಾಧ್ಯವಾದ ಸತ್ಯ.

’ಲಾ’ ಓದಿದ್ದ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಎಲ್ಲ ಅವಕಾಶಗಳು ಇದ್ದ ಅವರನ್ನು
ಪಾತಕ ಪ್ರಪಂಚ ಸೆಳೆದದ್ದು ಒಂದು ವಿಚಿತ್ರ. ಒಂದೊಮ್ಮೆ ಅಲ್ಲಿಗೆ ಕಾಲಿಟ್ಟ ಮೇಲೆ
ಹೊರಬರಲಾಗದ ಅನಿವಾರ್ಯತೆ, ಪಾತಕ ಲೋಕದಲ್ಲೆ ಇನ್ನೂ ಹೆಚ್ಚು ಹೆಚ್ಚು ಆಳಕ್ಕಿಳಿಯಬೇಕಾದ
ಸಂಧರ್ಭಗಳು, ತಪ್ಪು ಮತ್ತು ಸರಿಯಲ್ಲಿನ ದ್ವಂದ್ವಗಳೆಲ್ಲವನ್ನು ಅದೆಷ್ಟು ಚೆನ್ನಾಗಿ
ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆಂದರೆ, ಪಾತಕಿಯಾಗಿದ್ದವನ ಕೈಯಲ್ಲರಳಿದ ಕೃತಿಯೇ ಇದು
ಅನಿಸಿಬಿಡುತ್ತದೆ. “ಪಾತಕ ಪ್ರಪಂಚದಿಂದ ನಾನು ಕಳಚಿಕೊಳ್ಳಲೇ ಬೇಕಿತ್ತು. ಆದರೆ
ಕಳಚಿಕೊಳ್ಳುವುದಾದರೂ ಹೇಗೆ? ಆ ಪ್ರಶ್ನೆಯ ತುಡಿತ ನನ್ನನ್ನು ಬರವಣಿಗೆಯ ಜಗತ್ತಿಗೆ
ದೂಡಿತು. ಆ ಪ್ರಕ್ರಿಯೆ ಎದೆಯಾಳದಲ್ಲಿ ವಿಚಿತ್ರ ಘರ್ಷಣೆಯನ್ನು ಹುಟ್ಟಿಸತೊಡಗಿತು.
ತಣ್ಣನೆಯ ಕ್ರೂರಿಗಳು ಅಸಹಾಯಕರಂತೆ ಗೋಚರವಾಗತೊಡಗಿದರು. ಶಿಷ್ಠರು ಮತ್ತು ದುಷ್ಠರ
ನಡುವಿನ ವ್ಯತ್ಯಾಸ ತೆಳುವಾಗುತ್ತ ಹೋಯಿತು. ಎಲ್ಲಾರೂ ಒಂದೇ ದೋಣಿಯಲ್ಲಿ ಸಾಗುತ್ತಿರುವ
ಸಹಪ್ರಯಾಣಿಕರೆನ್ನುವ ಅರಿವು ಮನಸ್ಸನ್ನು ಆಕ್ರಮಿಸತೊಡಗಿತು. ಬರಹ ನನ್ನ ಹಾದಿಯನ್ನು
ಬದಲಿಸತೊಡಗಿತು. ಬದಲಾದ ಹಾದಿ ಹೆಚ್ಚು ಹೆಚ್ಚು ಆಪ್ತವಾಗಿ ಆಶವಾಗಿ ಬರವಣಿಗೆಯಲ್ಲಿ
ತೊಡಗುವಂತೆ ಪ್ರೇರೇಪಿಸಿತು. ಈಗ ನಿಮ್ಮ ಮುಂದೆ ನಿಂತಿದ್ದೇನೆ
ಸಂಪೂರ್ಣವಾಗಲ್ಲದಿದ್ದರೂ ಸಾಕಷ್ಟು ಬೆತ್ತಲೆಯಾಗಿ” ಹೀಗೆ ಅವರ ಮನಸ್ಸು ಕ್ರೈಂ ನಿಂದ
ಬರವಣಿಗೆಗೆ ಹೊರಳಿದ್ದನ್ನು ವಿವರಿಸುತ್ತಾರೆ. ವಿಖ್ಯಾತರದ್ದಷ್ಟೇ ಆತ್ಮಕತೆಗಳು
ಓದಿಸಿಕೊಳ್ಳುತ್ತವೆ ಎಂಬ ನನ್ನ ಭಾವನೆ ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಕೊತ್ವಾಲ್
ಕೊಲೆಯಲ್ಲಿ ಅವರು ಭಾಗಿಯಾಗಿದ್ದಾಗಿನ ವಿವರಗಳನ್ನು ಓದ ತೊಡಗಿದಾಗ, ಬೇಡ
ಬೇಡವೆಂದುಕೊಂಡಿದ್ದ ಕೊತ್ವಾಲನ ಕೊಲೆಯು ಜರುಗಿಯೇ ಬಿಟ್ಟಾಗ ಅದೊಂದು ಕ್ಷಣ ನನ್ನ
ಸುತ್ತಲಿನ ಜಗತ್ತೇ ನಿಂತಂತೇ ಭಾಸವಾಗಿದ್ದು ಸುಳ್ಳಲ್ಲ. ನನಗೆ ತಿಳಿದಂತೆ ಅಷ್ಟು
ತನ್ಮಯಳಾಗಿ ಬೇರಾವ ಕೃತಿಯನ್ನು ಬಹುಶಃ ನಾನು ಓದಿಲ್ಲ.
’ಕಲೆಯ ಶ್ರೇಷ್ಟತೆ ಇರುವುದು ವಸ್ತುಗಳ ಅಭಿವ್ಯಕ್ತಿಯಲ್ಲಿ ವಸ್ತುಗಳ
ಮೌಲ್ಯಮಾಪನದಲ್ಲಲ್ಲ’ ಹೀಗಾಗಿಯೇ ಒಂದು ಕೊಲೆಯ ವಿವರಗಳನ್ನೂ ಕೂಡ ಅದ್ಬುತವಾಗಿ
ಅಭಿವ್ಯಕ್ತಿಸಬಹುದು. ಆದರೆ ಇದೆಲ್ಲದರ ಆಚೆ ನಿಂತು ಮಾನವೀಯ ಮೌಲ್ಯಗಳಿಂದ ನೋಡಿದಾಗ
ಕೊಲೆಯು ಪರಿತಪಿಸಿ ಸುಮ್ಮನಾಗಿಬಿಡುವ ಒಂದು ಕ್ರಿಯೆಯೇ ಎಂಬ ಪ್ರಶ್ನೆ ಕಾಡುತ್ತದೆ.
’ಒಬ್ಬ ವ್ಯಕ್ತಿಯು ಸಾವಿರ ಬಾರಿ ಸಾಯುವಂತಹ ತಪ್ಪು ಮಾಡಬಹುದು, ಆದರೆ ಯಾರಿಗೂ
ಒಬ್ಬನನ್ನು ಕೊಲ್ಲುವಷ್ಟು ಅಧಿಕಾರವಾಗಲೀ ನೈತಿಕತೆಯಾಗಲೀ ಇರುವುದಿಲ್ಲ’ ಎಂದು ಎಲ್ಲೋ
ಓದಿದ ನೆನಪು. ಬಹುಶಃ ಶ್ರೀಧರ್ ಮನಸ್ಸಿನಲ್ಲಿ ಈ ಭಾವವಿತ್ತೆಂದು ಕಾಣುತ್ತದೆ.
ಪಶ್ಚತಾಪವು ಒಮ್ಮೆ ಅನುಭವಿಸಿ ಮುಗಿಸಿಬಿಡುವಂತಹ ಕ್ರಿಯೆಯಲ್ಲ. ಅದು ನಿರಂತರವಾಗಿ
ಕಾಡುತ್ತಲೇ ಇರುವ, ಅನುಭವಿಸುತ್ತಲೇ ಬದುಕಬೇಕಾದ ಮನಸ್ಥಿತಿ. ನಾನು ತಪ್ಪು
ಮಾಡಿಬಿಟ್ಟಿದ್ದೇನೆ, ಅದಕ್ಕೆ ಪಶ್ಚಾತಾಪವಾಗಿದೆ, ನನ್ನನ್ನು ಕ್ಷಮಿಸಿಬಿಡಿ ಎಂದು
ಅವರೆಲ್ಲೂ ಕೇಳಿಕೊಂಡಿಲ್ಲ, ಪ್ರಾಮಾಣಿಕ ವಿವರಗಳೊಡನೆ ತಾವು ಮಾಡಿದ ತಪ್ಪನ್ನೆಲ್ಲ
ತೆರೆದಿಟ್ಟಿದ್ದಾರೆ ಅದನ್ನೋದಿ ಓದುಗನ ಮನಸ್ಸಿನಲ್ಲಿ ಮೊಳೆಯಬಹುದಾದ ಭಾವನೆಗಳನ್ನು
ಅವರು ಅಂದಾಜಿಸ ಬಲ್ಲರು, ಒಂದು ಕೊಲೆ ಯಾವುದೇ ರೀತಿಯಲ್ಲೂ ಸಮರ್ಥಿಸಿಕೊಳ್ಳಲಾರದ್ದು
ಎಂಬುದನ್ನು ಅರಿತೇ ಅವರು ಬರೆಯತೊಡಗಿದ್ದಾರೆ. ಹಾಗಾಗಿಯೇ ’ದಾದಾಗಿರಿಯ ದಿನಗಳು’
ಎಲ್ಲೂ ಸಿನಿಕವೆನ್ನಿಸದೆ ಓದಿಸಿಕೊಳ್ಳುತ್ತದೆ. ಕೇವಲ ಒಂದು ಆತ್ಮಕತೆಯಾಗಷ್ಟೆ
ಅಲ್ಲದೇ, ಮಾನವನ ಗುಣದಲ್ಲಾಗುವ ವೈರುಧ್ಯದ ಪ್ರತೀಕದಂತೆ ಮನಸ್ಸಿನಲ್ಲುಳಿಯುತ್ತದೆ.
– ಜ್ಞಾನಮೂರ್ತಿ, ಬೆಂಗಳೂರು. |
ನಿನ್ನ ಒಳ ಜಗತ್ತಿನಲ್ಲೆಲ್ಲ ಮೂಡಿರುವ ನನ್ನುಸಿರ
ಹೆಜ್ಜೆಗಳು
ಆತನ ಸ್ಪರ್ಶಕ್ಕೆ ಮಾಸುವ ಮುನ್ನ ನೋವ
ಪೆಟ್ಟಿಗೆಯಲ್ಲಿ ಬಚ್ಚಿಟ್ಟುಕೋ
ಏಕಾಂತದಿ ನನ್ನ ಜೊತೆ ಮಿಂದು ಬಂದ
ಮನಸ್ಸನ್ನು
ಸಪ್ಪಳವಿಲ್ಲದೆ ಒಳಕರೆದುಕೋ
ಆತ ಎಚ್ಚರವಾಗುವ ಮುನ್ನ ಮನಸ್ಸಿನ
ಮೈತೊಳೆದು
ಹೊಸ ಬಟ್ಟೆ ತೊಡಿಸಿಬಿಡು
ನನ್ನ ನೆನಪುಗಳ ನಿನ್ನ ಮಗುವಿನ
ಆಟಿಕೆಗಳಾಗಿಸುವುದಾದರೆ
ಅವುಗಳೆಲ್ಲ ಆತನ ಕಾಲ್ತುಳಿತಕ್ಕೆ ಸಿಗದಂತೆ
ಎಚ್ಚರವಹಿಸು!
ನಿನ್ನೊಳಗಣ ನನ್ನ ನೆನಪ ಮೊಟ್ಟೆಗಳಿಗೆ
ಕಾವುಕೊಡುವುದ
ನಿಲ್ಲಿಸಿಬಿಡು
ಇಲ್ಲವಾದರೆ ಮೊಟ್ಟೆಯೊಡೆದ ಜೀವಗಳು ಆತನಿಗೆ
ಸತ್ಯ ಹೇಳಿಬಿಟ್ಟಾವು!
ಹರಿದ ನನ್ನ ನೆನಪುಗಳ ನೀ ಹೊಲೆಯುವಾಗ
ಆತ
ಸೂಜಿಮೊನೆಯಾಗಿ ಚುಚುತ್ತಾನೆ
ಈ ನೋವಲ್ಲೂ ನಾನು ನಿನ್ನ ಕೈ ಕೌದಿಯಾಗಿ
ಅರಳುತ್ತೇನೆ!
ಅಮ್ಮನ ಬುತ್ತಿ ಬೇರಿನಲ್ಲಿ!!
Posted ಜೂನ್ 25, 2009
on:– ನೂತನ್ ಹೆಚ್. ಬಿ., ಹಾಲಾಡಿ.
ಬೇರಿನಲ್ಲಿ ಬುತ್ತಿ ಕಟ್ಟಿಟ್ಟಿದ್ದಳು ಅಮ್ಮ
ಮರಕೆಲ್ಲಿ ಗೊತ್ತು?
ಎಲ್ಲಿಂದಲೋ ಬಂದ ರವಿಕಿರಣಕ್ಕೆ
ಮುಖ ಮಾಡಿತ್ತು!
ಮೈ ಎಲ್ಲ ಮನಮಾಡಿ ಹಸಿರುಗನಸುಗಳ ಹೊತ್ತು
ಮಂದ ಮಾರುತಕ್ಕೆ ಮೈಯ್ಯ ಮರೆತಿತ್ತು!
ಬಳುಕುವ ಬಳ್ಳಿಗೆ ಸೋತು ಅಪ್ಪಿ ಬೆಳೆದಿತ್ತು!
ಬಣ್ಣ ಬಣ್ಣಗಳ ಹಕ್ಕಿಗಳ ಸಂಸಾರ ಮೈಎಲ್ಲಾ ಹೊತ್ತು
ತಾನೊಬ್ಬನೆ ಆಕಾಶಕ್ಕೇಣಿಯಾಗುವವನೆಂದು
ಉಬ್ಬಿ ನಿಂತಿತ್ತು!
ಆಗಸವೂ ಸಿಗದೆ ಅಳುಕಿ ತಡಕಾಡಿ
ಬೇರೂ ಸಿಗದೇ ಬುತ್ತಿಯೂ ಸಿಗದೆ ಕಂಗಾಲಾಗಿತ್ತು!
ಮತ್ತೆ ಬೇರನ್ನರಸಿ ಕೆಳಗಿಳಿದಿತ್ತು!
ತಾನು ತಂದಿದ್ದ ಬುತ್ತಿ ಗೆದ್ದಲ ಗೂಡಿನಲ್ಲಿ ಜೀರ್ಣವಾಗಿತ್ತು
ಬೇರುಗಳ ಸಂಧಿಯಲ್ಲಿ ಎಲ್ಲೋ ಹಣ್ಣಾಗಿದ್ದ ಈಗ
ಮಣ್ಣಾಗಿದ್ದ ಅದರಮ್ಮ ಹೇಳಿದ್ದು
ಆತ್ಮರತಿಗೆ ಮಾತ್ರ ಕೇಳುವಂತಿತ್ತು;
’ಮಗುವೇ, ನೀನಿನ್ನೂ ಬೆಳೆಯಬೇಕಿತ್ತು!’
-ಹೇಮಾ ಪವಾರ್, ಬೆಂಗಳೂರು.
ಆತ್ಮಕತೆಗಳ ಬೆನ್ನು ಬಿದ್ದಿದ್ದೇನೆ. ಕಳೆದ ಎರೆಡು ತಿಂಗಳಿಂದ ಒಂದಾದ ಮೇಲೊಂದು
ಓದುತ್ತಲೇ, ಇನ್ನು ಹೆಚ್ಚು ಹೆಚ್ಚು ಆತ್ಮಕತೆಗಳನ್ನೇ ಓದಬೇಕೆನಿಸಿದೆ. ಒಬ್ಬ
ವ್ಯಕ್ತಿಯು ಪ್ರಾಮಾಣಿಕವಾಗಿ ತನ್ನ ಬಗ್ಗೆ ಎಲ್ಲವನ್ನು ಬರೆದುಕೊಳ್ಳಬಲ್ಲನೆ?
ನನ್ನನ್ನು ಕಾಡಿದ ಪ್ರಶ್ನೆ ಇದು. ಆತ್ಮಕತೆ ಬರೆಯುತ್ತಿರುವವರಿಗೆ ತಮ್ಮ ಬಗ್ಗೆ
ಎಲ್ಲವನ್ನೂ ಹೇಳಿಕೊಳ್ಳಲೇಬೇಕೆಂಬ ಉಮೇದು ಉಂಟಾಗುತ್ತದೆ ಹಾಗು ಹೇಳದೆ ಹೋದರೆ ಅದೊಂದು
ತರಹದ ಚಡಪಡಿಕೆ ಮತ್ತು ಕೃತಿ ಅಪೂರ್ಣವೆಂಬ ಭಾವ ಮತ್ತೆ ಮತ್ತೆ ಕಾಡುತ್ತದೆ ಎಂಬುದು
ಆತ್ಮಕತೆಗಳ ಓದಿನಲ್ಲಿ ನಾನು ಕಂಡುಕೊಂಡ ಸತ್ಯ. ಒಬ್ಬ ವ್ಯಕ್ತಿಯ ಜೀವನದ ಘಟನೆಗಳು,
ಅದಕ್ಕೆ ಆತನು ಸ್ಪಂದಿಸಿದ ರೀತಿ, ಆ ಕ್ಷಣದಲ್ಲಿ ಆತನಿಗೆ ಕಾಡಿದ ಯೋಚನೆಗಳು
ಎಲ್ಲವನ್ನು ಪ್ರಾಮಾಣಿಕವಾಗಿ ಬರಹದಲ್ಲಿ ಮೂಡಿಸುವುದು ಅಷ್ಟು ಸುಲಭವಲ್ಲ ಅದಕ್ಕೂ
ಕಲೆಗಾರಿಕೆ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮುಚ್ಚುಮರೆಯಿಲ್ಲದೆ ಎಲ್ಲವನ್ನು
ಬಿಚ್ಚಿಡುವ ಮನಸಿರಬೇಕು. ಸಾರ್ವಜನಿಕವಾಗಿ ಬೆತ್ತಲಾಗುವ ಧೈರ್ಯವಿರಬೇಕು. ಬಹುಶಃ
ಇದರಿಂದಾಗಿಯೇ ನನಗೆ ಆತ್ಮಕತೆಗಳು ಹೆಚ್ಚು ಹಿಡಿಸುತ್ತಿವೆ. ಈ ಸರಣಿಯಲ್ಲಿ ನಾನು ಓದಿದ
ಆತ್ಮಕತೆಗಳ ಬಗ್ಗೆ ಬರೆಯಬೇಕೆಂದಿದ್ದೇನೆ. ಎಂದಿನಂತೆ ಓದುವ ಕಷ್ಟ ನಿಮ್ಮದು!
ಲಂಕೇಶರ ’ಅಕ್ಕ’ ಓದುವುದಕ್ಕೆ ತುಂಬ ಹಿಂದೆ ದೇವೀರಿ ಸಿನೆಮಾ ನೋಡಿದ್ದೆ. ಅದಾಗ ಅಷ್ಟು
ಹಿಡಿಸಿರಲಿಲ್ಲ. ’ಅಕ್ಕ’ ಕಾದಂಬರಿ ಓದುವಾಗ ಅದರಲ್ಲಿನ ಕ್ಯಾತನ ಪಾತ್ರ ತುಂಬಾ
ಸೆಳೆದಿತ್ತು. ಲೇಖಕನು ಅದ್ಯಾವ ಮನಸ್ಥಿತಿಯಲ್ಲಿ ಈ ಪಾತ್ರ ಸೃಷ್ಟಿಸಿರಬಹುದೆಂದು
ತಲೆಕೆಡಿಸಿಕೊಂಡು ಸುಮ್ಮನಾಗಿದ್ದೆ. ಲಂಕೇಶರು ನನಗೆ ಯಾವತ್ತು ಅತಿ ದೊಡ್ಡ
ವಿಚಿತ್ರವೆನಿಸಿದ್ದಾರೆ. ಅವರ ಮುಸ್ಸಂಜೆಯ ಕಥಾಪ್ರಸಂಗದ ಪಾತ್ರಗಳು ನನ್ನನ್ನು
ಎಡಬಿಡದೇ ಕಾಡಿವೆ. ಏನನ್ನು ಸಮರ್ಥಿಸದ, ತೀರ್ಮಾನಗಳಿಲ್ಲದ, ಪ್ರೀತಿ-ಪ್ರೇಮ ಮುಂತಾದ
ಸಿನಿಕ ಭಾವನೆಗಳಿಗೆ ಒಂದು ಚೌಕಟ್ಟನ್ನು ಹಾಕಿ ಎಲ್ಲವೂ ವಾಸ್ತವಿಕವಾಗಿ ಕಾಮಕ್ಕೆ
ಸಂಬಂಧಿಸಿರುವಂತದ್ದಾಗಿರುತ್ತವೆ ಅದನ್ನು ಮೀರಿದ್ದು ಬೇರೇನು ಇಲ್ಲವೆಂಬಂತೆ
ನಿರೂಪಿಸಿರುವ ಕಾದಂಬರಿ ಮುಸ್ಸಂಜೆಯ ಕಥಾಪ್ರಸಂಗ. ಇಂತಹ ಭಾವನೆಯ ಅರ್ಥವಿಷ್ಟೇ,
ಇದಕ್ಕೆ ಮೀರಿದ್ದೆಲ್ಲ ನಮ್ಮ ಕಲ್ಪನೆಯಲ್ಲಿ ಕಟ್ಟಿಕೊಳ್ಳುವ ರೆಕ್ಕೆಪುಕ್ಕ,
ಆಂತರ್ಯದಲ್ಲಿ ಅದರ ಉದ್ದೇಶವು ತೋರಿಕೆಗೆ ಕಾಣುವಷ್ಟು ಆಳವಾಗಿರುವುದಿಲ್ಲ ಎಂಬ ಗಂಭೀರ
ವಿಷಯಗಳನ್ನು ಅವರ ಪಾತ್ರಗಳ ಮೂಲಕ ಬಿಂಬಿಸಿದ್ದಾರೆ. ಇನ್ನು ನೀಲು ಕವಿತೆಗಳ ಬಗ್ಗೆ
ಹೇಳುವ ಹಾಗೇ ಇಲ್ಲ. ಪ್ರತೀ ಕವಿತೆಯೂ ತನ್ನ ಶಾರ್ಪ್ ನೆಸ್ ನಿಂದಲೇ
ಮನಸೂರೆಗೊಂಡುಬಿಡುತ್ತವೆ. ಕಾದಂಬರಿ, ಕವಿತೆ ಎರಡರಲ್ಲು ಇಣುಕುವ ಗತ್ತಿನ ಅವರ
ಬರವಣಿಗೆಯ ಶೈಲಿ ಇಷ್ಟವಾಯ್ತು. ಹೀಗೆ ಅವರ ಬರಹಗಳನ್ನು ಓದಿ ಬೆರಗಾಗುತ್ತಿದ್ದಾಗಲೇ
ನನ್ನ ಕೈಗೆ ಸಿಕ್ಕಿದ್ದು ’ಹುಳಿಮಾವಿನ ಮರ’. ಇದು ಲಂಕೇಶರ ಆತ್ಮ ಕಥನ. ಹೆಸರೇ
ವಿಶಿಷ್ಟವಾಗಿದೆ. ಅವರ ಚಿಕ್ಕಪ್ಪನ ಗದ್ದೆಯಲ್ಲಿನ ಮಾವಿನ ಮರದ ಬಗ್ಗೆ ಚಿಕ್ಕಂದಿನಿಂದ
ಆಕರ್ಷಿತನಾಗಿದ್ದರಿಂದ ಆ ಹೆಸರಿಟ್ಟೆ ಎಂದು ಮುನ್ನುಡಿಯಲ್ಲಿ ಬರೆಯುತ್ತಾರೆ ಮತ್ತು
ಪುಸ್ತಕವನ್ನು ’ವಾಟೆ’, ’ಸಸಿ’ , ’ಗಿಡ’, ’ಮರ’ ಎಂದು ವಿಂಗಡಿಸುತ್ತಾರೆ.
ಓದುತ್ತಾ ಹೋದಂತೆ ಲಂಕೇಶ್ ಗಿಡದಿಂದ ಮರವಾಗಿ ನಮ್ಮಲ್ಲಿ ಬೆಳೆಯತೊಡಗುತ್ತಾರೆ.
ಮರೆಮಾಚಬಹುದಾದಂತಹ ವಿಷಯಗಳನ್ನೂ ಕೂಡ ಎಳ್ಳಷ್ಟು ಮುಜುಗರವಿಲ್ಲದೇ ಬಿಚ್ಚಿಡುವ ಅವರ
ರೀತಿ, ಸಂಬಂಧಗಳನ್ನೆಲ್ಲ ಒಂದು ಪರದೆ ಇಟ್ಟುಕೊಂಡೇ ನೋಡಿರುವ ಅವರ ಪ್ರವೃತ್ತಿ, ಅವರ
ಸ್ವಾಭಿಮಾನ, ಬೇರೆಯವರ ಬಗ್ಗೆ ಅವರಿಗಿದ್ದ ಕೀಳರಿಮೆ, ಅವರ ಜಾಣತನದ ಬಗ್ಗೆ ಅವರಿಗಿದ್ದ
ಅಹಂಕಾರ, ಉಹೂ ಎಲ್ಲೂ ಮರೆಮಾಚುವ ಪ್ರಯತ್ನವನ್ನೇ ಮಾಡಿಲ್ಲ. ಇದ್ದದ್ದನ್ನು ಇದ್ದ ಹಾಗೇ
ಓದಿಕೊಂಡುಬಿಡಿ ನಾನು ಇಷ್ಟೇ ಎಂಬ ದರ್ಪ. ಆ ದರ್ಪದಿಂದಲೇ ಇನ್ನಷ್ಟು ಹತ್ತಿರವಾಗುವ
ಲಂಕೇಶ್. ಅವರ ಬಗ್ಗೆ ಅಷ್ಟೇ ಅಲ್ಲ, ಅವರ ಸಂಪರ್ಕದಲ್ಲಿದ್ದ ಇನ್ನು ಎಷ್ಟೋ ಜನರ ಬಗ್ಗೆ
ಬೆಚ್ಚಿ ಬೀಳುವಂತ, ತಮಾಶೆ ಎನಿಸುವಂತಹ ಘಟನೆಗಳನ್ನು ದಾಖಲಿಸುತ್ತಾ ಹೋಗಿದ್ದಾರೆ.
’ಅನುರೂಪ’, ’ಎಲ್ಲಿಂದಲೋ ಬಂದವರು’ ಮತ್ತು ’ಪಲ್ಲವಿ’ ಚಿತ್ರಗಳ ತಯಾರಿಕೆಯಲ್ಲಿ ಅವರು
ಪಟ್ಟ ಪಾಡು. ಸೆಂಟ್ರಲ್ ಕಾಲೇಜಿನ ಅಧ್ಯಾಪಕ ವೃತ್ತಿ. ಲಂಕೇಶ್ ಪತ್ರಿಕೆ
ಶುರುಮಾಡಿದ್ದು. ಬಿಡಲಾಗದ ಅವರ ಕುದುರೆ ರೇಸಿನ ಚಟ. ಪ್ರತಿ ಶುಕ್ರವಾರ ರಾತ್ರಿ
ಗೆಳೆಯರೊಂದಿಗೆ ಆಡುತ್ತಿದ್ದ ಕಾರ್ಡ್ಸ್. ದಿನವೊಂದಕ್ಕೆ ನಲವತ್ತಕ್ಕೂ ಹೆಚ್ಚು
ಸುಡುತ್ತಿದ್ದ ಸಿಗರೇಟು, ಆರೋಗ್ಯ ಕೈಕೊಡುವವರೆಗೂ ಕೈಹಿಡಿದಿದ್ದ ಕುಡಿತ, ತಮ್ಮ
ನೆಗೆಟೀವ್ ಗುಣಗಳನ್ನೂ ಪಟ್ಟಿ ಮಾಡುವುದರಲ್ಲಿ ಬೇಸರಿಸಿಕೊಂಡಿಲ್ಲ. ಚಟಗಳಿಂದಾಗಿಯೇ
ಅವರ ಕಣ್ಣೊಂದು ಕಳೆದುಕೊಳ್ಳಬೇಕಾಗಿ ಬಂದಿದ್ದು. ತೀರ ಮಿದುಳಿನ ಭಾಗಕ್ಕೆ ಲಕ್ವಾ
ಹೊಡೆದು, ಎಡಗಾಲು, ಎಡಗೈ ಶಕ್ತಿಹೀವಾಗಿ ತಾನಿನ್ನು ಬದುಕಲಾರೆ ಅಥವಾ ಬದುಕಿದರೂ
ಮೊದಲಿನಷ್ಟು ಚಟುವಟಿಕೆಯಿಂದರಲಾರೆ ಎಂದೆನಿಸಿದಾಗ ಅವರು ತಮ್ಮ ಆತ್ಮಕತೆಯನ್ನು
ಬರೆಯಬೇಕೆಂದುಕೊಂಡದ್ದರವರೆಗಿನ ವಿವರಗಳೆಲ್ಲವೂ ನಮ್ಮಲ್ಲಿ ಬೇರೂರಿ ಬೆಳೆಯ
ತೊಡಗುತ್ತವೆ. ಅವರ ಕಡೆಯ ಸಾಲುಗಳು ಹೀಗಿವೆ ’ನನ್ನ ಗಾಢ ದುಗುಡದ ವೇಳೆಯಲ್ಲಿ, ಸಾವಿನ
ಹತ್ತಿರ ಇದ್ದಂತಿದ್ದಾಗ ಮುತ್ಸದ್ದಿತನ, ಹೊಂದಾಣಿಕೆ, ಖ್ಯಾತಿ, ಪ್ರಶಸ್ತಿ
ಮುಂತಾದವೆಲ್ಲ ಬದುಕಿನೆದುರು, ಸಾವಿನೆದುರು ಗೌಣ ಅನ್ನಿಸುತ್ತಿದ್ದಾಗ ನನ್ನ ಬರವಣಿಗೆಯ
ರೀತಿಯೂ ಬದಲಾಯಿತು. ಸಾವು ಇನ್ನುಮೇಲೆ ನನಗೆ ಕೇವಲ ಕತೆಯಾಗದೆ, ಬದುಕುವ ಅಂತ್ಯ ಎಂಬ
ಸತ್ಯ ಮಾತ್ರವಾಗದೆ ನನ್ನ ಉಳಿದ ದಿನಗಳಲ್ಲಿ, ಬರೆದ ಸಾಲುಗಳಲ್ಲಿ ನೆಲೆಸಿ ಎಚ್ಚರಿಸುವ
ಛಾಯೆ ಅನ್ನಿಸತೊಡಗಿತು’, ಸಾವಿನೆಡೆಗಿನ ಭಯಕ್ಕಿಂತಲೂ ಹೆಚ್ಚಾಗಿ, ಅದರ ಅಸ್ತಿತ್ವ
ಅರಿವಾಗತೊಡಗಿದರಿಂದ ಅವರಲ್ಲುಂಟಾದ ಗೊಂದಲಗಳನ್ನು ಪದಗಳಲ್ಲಿ ಜೋಡಿಸಿಟ್ಟುರುವಂತಿದೆ ಈ
ಸಾಲುಗಳು.
ಒಂದು ಕಡೆ ಲಂಕೇಶ್ ಹೀಗೆ ಕೇಳುತ್ತಾರೆ ’ನೀವು ಈ ಬದುಕಿನಲ್ಲಿ ಯಾವ ಯಾವ
ಆಗುಹೋಗುಗಳಿಗೆ, ಯಾವಯಾವ ವ್ಯಕ್ತಿಗಳಿಗೆ ಕೃತಜ್ಞರಾಗಿರುತ್ತೀರಿ? ಎಂದೋ ಜೊತೆ ಕೂತು
ಸಿಗರೇಟ್ ಸೇದುತ್ತಾ ಕಾಫಿ ಕುಡಿದವರು, ಒಳ್ಳೆಯ ಪುಸ್ತಕ, ಚಿತ್ರ, ಸಂಗೀತದ ಅನುಭವ
ದೊರೆಯುವಂತೆ ಮಾಡಿದವರು, ಪ್ರೀತಿಯಿಂದ ಅಪ್ಪಿಕೊಂಡವರು, ಜೀವದ ಕೆಂಡ ಆರಿ
ಬೂದಿಯಾಗುತ್ತಿದ್ದಾಗ ಕಟ್ಟಿಗೆಯನ್ನು ಹಾಕಿ ಉರಿಸಿದವರು, ನಿಮ್ಮ ಮಿತ್ರರು, ಶತ್ರುಗಳು
ಯಾವುದನ್ನು ಯಾರನ್ನು ನೆನೆಯುತ್ತೀರಿ?’ ಅಷ್ಟೇ ಅಲ್ಲಿಗೆ ಅವರ ಮೌನ. ನಮ್ಮಲ್ಲಿ
ಪ್ರಶ್ನೆಯ ಉತ್ತರದ ತಾಕಲಾಟ ನಡೆಯುತ್ತಿರುವಾಗಲೇ ಅವರು ಗಂಡು ಹೆಣ್ಣಿನ ಸಂಬಂಧದ ಬಗ್ಗೆ
ಹೇಳ ತೊಡಗುತ್ತಾರೆ. ಹೆಣ್ಣುಗಂಡಲ್ಲಿನ ವಾಂಛೆ, ಒಬ್ಬರಿಗೊಬ್ಬರು
ನಿಷ್ಠರಾಗಿರುತ್ತೇವಂಬ ವ್ಯಂಗ್ಯ, ನಿಷ್ಠೆ ಮತ್ತು ವಾಂಛಲ್ಯದೊಂದಿಗಿನ ಕಿತ್ತಾಟದಲ್ಲೇ
ವ್ಯಕ್ತಿಯೊಬ್ಬ ಬದುಕಬೇಕಾದ ಅನಿವಾರ್ಯತೆಯ ಬಗ್ಗೆ ಚರ್ಚಿಸುತ್ತಾರೆ.
‘No doubt alcohol, tobacco and so forth are things that a saint must
avoid, but sainthood also a thing that human beings must avoid –
George Orwell’ ಎಂದು ಆತ್ಮಕಥನದ ಶುರುವಿನಲ್ಲೇ ಇದೆ, ಇಡೀ ಪುಸ್ತಕ ಓದಾದ ಮೇಲೆ
ಬಹುಶಃ ಲಂಕೇಶರು ತಮ್ಮ ಜೀವನಕ್ಕೆ ಹೊಂದಿಸಿ ಈ ಪದಗಳ ಹುಡುಕಿದ್ದಾರೆನಿಸಿತು.
ಒಟ್ಟಿನಲ್ಲಿ ಸದಾ ನೆನಪಿನಲ್ಲುಳಿಸುವ, ಇದುವರೆಗೂ ಎಲ್ಲೂ ಕಾಣದ ಲಂಕೇಶರನ್ನು ನನಗೆ
ಪರಿಚಯಿಸಿದ್ದು ’ಹುಳಿ ಮಾವಿನ ಮರ’.
ಇತ್ತೀಚಿನ ಟಿಪ್ಪಣಿಗಳು