Archive for ಜುಲೈ 2009
ವಾರಾಂತ್ಯದ ಕವಿತೆ: ಈರುಳ್ಳಿ
Posted ಜುಲೈ 31, 2009
on:– ರಂಜಿತ್ ಅಡಿಗ, ಕುಂದಾಪುರ.
ಒಮ್ಮೆಯಾದರೂ ಈ ಸಂಬಂಧಗಳಾಳಕ್ಕೆ
ಇಣುಕಲೇ ಬೇಕು
ಅದು ಈರುಳ್ಳಿ ಸಿಪ್ಪೆ ಸುಲಿದಂತೆ
ಮೊನ್ನೆಮೊನ್ನೆಯವರೆಗೂ ತನ್ನ
ಜೀವಕ್ಕಿಂತ ಹೆಚ್ಚು ಪ್ರೀತಿಸ್ತೀನಿ ಅಂತ
ಒದ್ದೆ ಕಣ್ಣಾಲಿಗಳಿಂದ ಹೇಳಿದ ಗೆಳತಿ
ಕಮ್ಮಿ ಮಾರ್ಕ್ಸು ಬಂದರೆ
ಮನೆಯಿಂದ ಓಡಿಸ್ತೀನಿ ಎಂದು
ಸಿಕ್ಕಾಪಟ್ಟೆ ಬೈದ ಅಪ್ಪ
ಕ್ಯಾಂಪಸ್ಸಿನಲ್ಲಿ ಕೆಲಸ
ಸಿಗಲಿಲ್ಲವೆಂದೊಮ್ಮೆ ಸುಮ್ಮನೆ
ಪರೀಕ್ಷೆ ಮಾಡಲು ಹೇಳಿದ ಕೂಡಲೇ
ಕೆಲಸ ಸಿಗದವನನ್ನು ಮದ್ವೆಯಾಗ್ತೀನಂತ
ಹ್ಯಾಗೆ ತನ್ನಪ್ಪನನ್ನು ಒಪ್ಪಿಸಬೇಕು
ನೀ ನನ್ನ ಮರೆಯಲೇಬೇಕು
ಎಂದು ತನ್ನ ಜೀವವನ್ನೇ ಕಡೆಗಣಿಸಿದಳಾಕೆ
ಮನೆಯನ್ನು ಒತ್ತೆಯಿಡೋಣ
ರಿಟಾಯರ್ಮೆಂಟ್ ಹಣವೂ ಬರಬಹುದು
ಸ್ವಂತ ಬಿಸಿನೆಸ್ಸು ಆರಂಭಿಸು ಮಗನೇ ಅನ್ನುವನು ಅಪ್ಪ
ಎರಡೂ ಮಾತಿಗೂ ಉಕ್ಕಿದ್ದು
ಕಣ್ಣೆದುರಿಗಿನ
ಪರದೆ ಜಾರಿಸೋ ಕಣ್ಣಿರೇ.
ಶಾಂತಿ ಮಂತ್ರ!
Posted ಜುಲೈ 23, 2009
on:ನಾನು ನನ್ನ ಸಂಸಾರ!
Posted ಜುಲೈ 20, 2009
on:- In: ಹಾಸ್ಯ
- 6 Comments
ವಾರಾಂತ್ಯದ ಕವಿತೆ: ಬಲೂನು!
Posted ಜುಲೈ 18, 2009
on:-ರಂಜಿತ್ ಅಡಿಗ , ಕುಂದಾಪುರ.
ಮೂರು ಕಾಸಿತ್ತು ಕೊಂಡ ವಸ್ತು
ಎಲ್ಲೆಂದರೆ ಅಲ್ಲೇ ಬಿದ್ದುಕೊಂಡಿತ್ತು
ಎರಡು ಹನಿ ಉಸಿರು ತುಂಬಿದರೆ
ತನ್ನೊಳಗನು ಅರಿಯಿತು, ಎಚ್ಚೆತ್ತಿತು ಆತ್ಮ
ಉಸಿರಿಗೆಲ್ಲ ಬೆಲೆಯಿಲ್ಲ ಎಂದು ನೊಂದು
ಸಾಯಿಸಿಕೊಳ್ಳುವವರನು ನಾಚಿಸುತ್ತ
ಸ್ವತಃ ಬೆಲೆಯ ಮಟ್ಟವನು ಸೂಚಿಸುತ್ತ
ಎತ್ತರೆತ್ತರ ಏರುತಿತ್ತು,ಆಗಸವನೇ ತಲುಪುವತ್ತ
ಯಮನ ಜೋಳಿಗೆಯಂತೆ ಗರ್ಭದೊಳು
ಮುದುಡಿದ ಮಗುವಿನಂತೆ
ತೇಲುತ್ತ ಹಾರುತ್ತ ಆಗುತ್ತ ಚುಕ್ಕಿ
ಸುತ್ತಲಿನ ಜನರೆಲ್ಲ ನೋಡಿ
ಉಸಿರು ಹೋಯಿತು, ಉಸಿರು ಹೋಯಿತು
ಎಂದೆಸೆದರು ಉದ್ಗಾರವನು!
****
ನನ್ನ ಅರ್ಜಿಗೆ ಇನ್ನೂ ಉತ್ತರ ಬಂದಿಲ್ಲ!
Posted ಜುಲೈ 15, 2009
on:- In: ಮೇರಿ ಮರ್ಜಿ
- 3 Comments
– ರೇಶ್ಮಾ ನಾರಾಯಣ, ಉಡುಪಿ
ಅವನು ನಮ್ಮ ಪುಟ್ಟ ಜಗತ್ತಿಗೆ ಅದ್ಭುತ ಹೀರೋ ಆಗಿದ್ದ
ನಾನು ಪ್ರೈಮರಿಯಲ್ಲಿದಾಗ ಟಿ.ವಿ ಯಲ್ಲಿ ಶಕ್ತಿಮಾನ್ ಅಂತ ಒಂದು ಧಾರಾವಾಹಿ ಬರ್ತಿತ್ತು. ನನ್ನ ಥರಾನೇ ಎಲ್ಲ ಮಕ್ಕಳೂ ಇಷ್ಟ ಪಡ್ತಿದ್ದ ಧಾರಾವಾಹಿ ಅದು. ಪ್ರತಿ ಆದಿತ್ಯವಾರ ಮಧ್ಯಾನ್ ೧೨ ಗಂಟೆಗೆ ಬರ್ತಿದ್ದ ಧಾರಾವಾಹಿ ನೋಡ್ಕೊಂಡು ಹೋಗಿ, ಸೋಮವಾರ ಬೆಳಿಗ್ಗೆ study periodನಲ್ಲಿ ಫ್ರೆಂಡ್ಸ್ ಜೊತೆ ಅದರ ಬಗ್ಗೆ ಪಾಠಕ್ಕಿಂತ ಸೀರಿಯಸ್ ಆಗಿ ಚರ್ಚೆ ಮಾಡ್ತಿದ್ವಿ. ಆಕಸ್ಮಾತ್ ಧಾರಾವಾಹಿ ಬರೋ ಟೈಮಲ್ಲಿ ಕರೆಂಟ್ ಇಲ್ಲದಿದ್ರೆ ಮಾತ್ರ ಕೆ. ಇ ಬಿ ಯವರಿಗೆ ಮನಸಾರೆ ಶಾಪ ಹಾಕುತ್ತಿದ್ವಿ. ಕರೆಂಟ್ ಇದ್ದ ಒಂದು ದಿನಾನೂ ’ಶಕ್ತಿಮಾನ್’ ನ ಮಿಸ್ ಮಾಡ್ಕೊಂಡಿರಲಿಲ್ಲ. ಶನಿವಾರನೇ ಹೋಂವರ್ಕ್ ಮುಗಿಸಿ ಕುಳಿತಿರುತ್ತಿದ್ವಿ.
ಆ ಒಂದು ಗಂಟೆಯ ಅವಧಿ ನಮ್ಮ ಪಾಲಿಗೆ ಅತೀ ಪ್ರಿಯವಾಗಿರ್ತಿತ್ತು. ಆ ಟೈಂ ನಲ್ಲಿ ಊಟಕ್ಕೆ ಕರೆದರೂ ನಾವು ಕೇಳಿಸದಂತೆ ಕೂತಿರ್ತಿದ್ವಿ. ಶಕ್ತಿಮಾನ್ ಪಾತ್ರಧಾರಿ ಮುಖೇಶ್ ಖನ್ನಾ ಹಾಕಿಕೊಳ್ತಿದ್ದ ಆ ಕೆಂಪು ಜಾಕೆಟ್, ಅದರ ನಡುವಿನ ಗೋಲ್ಡ್ ಕಲರ್ ಸ್ಟಾರ್ ಎಲ್ಲಾ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಶಕ್ತಿಮಾನ್ ಟ್ಯಾಟ್ಟೂ ಗಳನ್ನಂತೂ ರಾಶಿ ರಾಶಿ ಒಟ್ಟು ಮಾಡಿ ಪುಸ್ತಕ, ಕಂಪಾಸ್ ನ ಮೇಲೆಲ್ಲಾ ಅಂಟಿಸುತ್ತಿದ್ವಿ. ದ್ವಿಜ್ ಎಂಬ ಬಾಲಕನ ಕೈಯಲ್ಲಿನ ಆ ಟೈಮ್ ಮಶೀನ್ ಕನಸಲ್ಲೂ ನಮ್ಮನ್ನು ಕಾಡುತ್ತಿತ್ತು. ಅವನು ಅಲ್ಲಿ ರಾಕ್ಷಸರ ಜೊತೆ ಹೋರಾಡುತ್ತಿದ್ದರೆ ನಾವು ಇಲ್ಲಿ ಕುಳಿತು ನಾವೇ ಹೊಡೆದಾಡ್ತಿದ್ದೀವಿ ಅನ್ನೋ ಥರ ಆಡ್ತಿದ್ವಿ.
ಶಕ್ತಿಮಾನ್ ನ ’ಪಂಡಿತ್ ಗಂಗಾಧರ್ ವಿದ್ಯಾಧರ್ ಮಾಯಾಧರ್ ಓಂಕಾರನಾಥ್ ಶಾಸ್ತ್ರಿ’ ಅನ್ನೋ ಡೈಲಾಗ್ ಅಂತೂ ಫೇವರೀಟ್ ಆಗಿತ್ತು. ಅದರಲ್ಲಿನ ಗಿಲ್ ವಿಶ್ ಅನ್ನೋ ರಾಕ್ಷಸ ಕೈ ಬೆರಳುಗಳನ್ನು ತಿರುಗಿಸೋ ರೀತಿ ಭಯಾನಕವಾಗಿರ್ತಿತ್ತು. ಮಾತಾಡಿದ್ದಕ್ಕೆ ಹೆಸರು ಬರೆದು ಟೀಚರ್ ಗೆ ಕೊಟ್ಟ ನಮ್ಮ ಕ್ಲಾಸ್ ನ ಒಬ್ಬ ಹುಡುಗನಿಗೆ ’ಗಿಲ್ ವಿಶ್’ ಅಂತ ಹೆಸರಿಟ್ಟು ಬೇಕಾದಷ್ಟು ಬೈದು ಸಿಟ್ಟು ತೀರಿಸ್ಕೋತಿದ್ವಿ. ರಜೆಯಲ್ಲಿ ಶಕ್ತಿಮಾನ್ ಆಟ ಆಡೋವಾಗ ’ನಾನಾಗ್ತೀನಿ.. ತಾನಾಗ್ತೀನಿ’ ಅಂತ ಗಲಾಟೆ ಮಾಡಿ ಕೊನೆಗೆ ಆಟ ಜಗಳದಲ್ಲಿ ಮುಗಿದಿರ್ತಿತ್ತು. ಅದರ ಕ್ರೇಜ್ ಎಷ್ಟಿತ್ತು ಅಂದರೆ ಅದು ಮುಗಿದಾಗ, ’ಪುನಃ ಮೊದಲಿನಿಂದನಾದ್ರೂ ತೋರಿಸ್ಬೇಕಿತ್ತು’ ಅಂದುಕೊಂಡಿದ್ವಿ. ಶಕ್ತಿಮಾನ್ ಥರಾನೇ ಮಹಡಿ ಮೇಲಿಂದ ಹಾರೋಕೆ ಹೋಗಿ ಒಬ್ಬ ಹುಡುಗ ಬಿದ್ದು ಪ್ರಾಣ ಕಳೆದುಕೊಂಡ ಅಂತ ಗೊತ್ತಾದಾಗ ತುಂಬಾ ಬೇಜಾರಾಗಿತ್ತು. ಶಕ್ತಿಮಾನ್ ನ ಹಾಗೇ ನಂಗೂ ಅದ್ಭುತವಾದ ಶಕ್ತಿ ಕೊಡು ಅಂತ ದೇವರಿಗೆ ಹಾಕಿದ ಅರ್ಜಿಗೆ ಅವನ ಕಡೆಯಿಂದ ಇನ್ನೂ ಉತ್ತರ ಬಂದಿಲ್ಲ.
– ಸುಪ್ರೀತ್ ಕೆ. ಎಸ್, ಬೆಂಗಳೂರು.
ಪ್ರತಿನಿತ್ಯ ತಪ್ಪದೆ ಬ್ಲಾಗಿಗೆ ಬರೆಯಬೇಕು ಅಂದುಕೊಂಡಿದ್ದೆ. ಅದನ್ನೊಂದು ಸಾಧನೆ ಎನ್ನುವ ಹಾಗೆ ಭಾವಿಸಿದ್ದೆ. ಏಕೆ ದಿನನಿತ್ಯ ಬರೆಯಬೇಕು ಎಂದು ಕೇಳಿಕೊಳ್ಳುವ ತಾಳ್ಮೆ ಇರುತ್ತಿರಲಿಲ್ಲ. ಏನೋ ಉನ್ಮಾದ. ಬರೀ ಬೇಕು ಅನ್ನಿಸಿದ ತಕ್ಷಣ ಬರೆಯಲು ಶುರುಮಾಡಿಬಿಡಬೇಕು. ಏನಾದರೂ ಮಾಡಬೇಕೆಂಬ ಹುಮ್ಮಸ್ಸು ಹುಟ್ಟಿದಾಗ ದೊಡ್ಡವರು ಅದರ ಇಹಪರಗಳ ಬಗ್ಗೆ ಯೋಚಿಸಿ ಮಾಡು ಎಂದಾಗ ಹುಟ್ಟುವ ರೇಜಿಗೆಯನ್ನೇ ನಮ್ಮನ್ನು ನಾವು ನಿಧಾನಿಸಲು ಪ್ರಯತ್ನಿಸಿದಾಗ ಎದುರಿಸಬೇಕಾಗುತ್ತದೆ. ಈ ಹದಿ ವಯಸ್ಸಿನಲ್ಲಿ ಯಾವಾಗಲೂ ವಿವೇಕಕ್ಕಿಂತ ಸಂಕಲ್ಪಶಕ್ತಿ, ಕ್ರಿಯಾಶೀಲತೆಯೇ ಹೆಚ್ಚಾಗಿರುತ್ತದೆಯೇನೋ! ಹಾಗಾಗಿ ನಾನು ಉಕ್ಕುವ ಉತ್ಸಾಹಕ್ಕೆ ಬ್ರೇಕ್ ಹಾಕುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಆದರೆ ಆ ಕೆಲಸವನ್ನು ನನ್ನ ಸೋಮಾರಿತನ, ಅಶಿಸ್ತುಗಳು ನಿರ್ವಹಿಸುವುದರಿಂದ ನನಗೆ ಹೆಚ್ಚಿನ ಹಾನಿಯೇನೂ ಆಗಿಲ್ಲ!
ಪ್ರತಿದಿನ ಬ್ಲಾಗು ಬರೆಯಬೇಕು ಎಂಬುದರ ಹಿಂದೆ ಕೇವಲ ಬರಹದ ಪ್ರಮಾಣದ ಮೇಲಿನ ಮೋಹ ಕೆಲಸ ಮಾಡುತ್ತಿತ್ತು. ನನ್ನನ್ನು ಪ್ರಭಾವಿಸಿದ ಪತ್ರಕರ್ತನ ಹಾಗೆ ದಿನಕ್ಕಷ್ಟು ಪುಟ ಬರೆಯಬೇಕು, ವಾರಕ್ಕೆ ಇಷ್ಟು ಓದಬೇಕು ಎಂಬ ಅನುಕರಣೆಯ ಗುರಿಗಳನ್ನು ನನ್ನೆದುರು ಇರಿಸಿಕೊಂಡಿದ್ದೆ. ನನ್ನದಲ್ಲದ ಗುರಿಯೆಡೆಗೆ ಓಡುವ ಧಾವಂತ ಪಡುತ್ತಿದ್ದೆ. ನನ್ನದಲ್ಲದ ಹಸಿವಿಗೆ ಊಟ ಮಾಡುವ, ನನ್ನದಲ್ಲದ ಹೊಟ್ಟೆನೋವಿಗೆ ಔಷಧಿ ಕುಡಿಯುವ ಹುಂಬತನದ ಅರಿವೇ ಆಗಿರಲಿಲ್ಲ. ಒಬ್ಬ ಕವಿಯನ್ನೋ, ಲೇಖಕನನ್ನೋ, ಕಥೆಗಾರನನ್ನೋ, ಸಿನೆಮಾ ನಿರ್ದೇಶಕನನ್ನೋ, ಹೀರೋವನ್ನೋ ಪ್ರಾಣ ಹೋಗುವಷ್ಟು ಗಾಢವಾಗಿ ಪ್ರೀತಿಸುವುದು, ಆರಾಧಿಸುವುದು, ಅನುಕರಣೆಯಲ್ಲಿ ಸಾರ್ಥಕ್ಯವನ್ನು ಕಂಡುಕೊಳ್ಳುವುದು, ಅನಂತರ ಸ್ವಂತಿಕೆ ಕಳೆದುಕೊಂಡ ಅಭದ್ರತೆ ಕಾಡಿದಾಗ ಆ ಪ್ರೇರಣೆಯ ಮೂಲವನ್ನೇ ದ್ವೇಷಿಸಲು ತೊಡಗುವುದು ಇದೆಲ್ಲಾ ಯಾಕೆ ಬೇಕು? ಆದರೆ ಈ ಅರಿವು ಒಂದು ಅಚ್ಚಿನಲ್ಲಿ ಮೌಲ್ಡ್ ಆಗುವಾಗಿನ ಸುಖವನ್ನು, ಐಶಾರಾಮವನ್ನು ಅನುಭವಿಸುವಾಗ ಉಂಟಾಗುವುದಿಲ್ಲ. ಅದೇ ತಮಾಷೆಯ ಹಾಗೂ ದುರಂತದ ಸಂಗತಿ.
ವಿಪರೀತ ಬರೆಯಬೇಕು ಅನ್ನಿಸುವುದು ಸಹ ತುಂಬಾ ಮಾತಾಡಬೇಕು ಅನ್ನಿಸುವುದುರ ತದ್ರೂಪು ಭಾವವಾ? ಮಾತು ಹೇಗೆ ಚಟವಾಗಿ ಅಂತಃಸತ್ವವನ್ನು ಕಳೆದುಕೊಂಡು ಕೇವಲ ಶಬ್ಧವಾಗಿಬಿಡಬಲ್ಲುದೋ ಹಾಗೆಯೇ ಬರವಣಿಗೆಯು ಬರಡಾಗಬಲ್ಲದಾ? ವಿಪರೀತ ಬರೆಯಬೇಕು ಎಂದು ತೀರ್ಮಾನಿಸಿದವರು ವಾಚಾಳಿಯಾಗಿಬಿಡಬಲ್ಲರಾ? ಮನಸ್ಸಲ್ಲಿ ಕದಲುವ ಪ್ರತಿ ಭಾವವನ್ನೂ ಅಕ್ಷರಕ್ಕಿಳಿಸಿಬಿಡುವ, ಆ ಮೂಲಕ ತೀರಾ ಖಾಸಗಿಯಾದ ಭಾವವನ್ನು ಪ್ರದರ್ಶನದ ‘ಕಲೆ’ಯಾಗಿಸಿಬಿಡುವುದು ಒಳ್ಳೆಯದಾ? ಇವೆಲ್ಲಕ್ಕೂ ಉತ್ತರವನ್ನೂ ಸಹ ಅಕ್ಷರದ ಮೂಲಕವೇ ಕೇಳಿಕೊಳ್ಳುವ ಅನಿವಾರ್ಯತೆ ಇರುವುದು ನಮ್ಮ ಪರಿಸ್ಥಿತಿಯ ವ್ಯಂಗ್ಯವಲ್ಲವೇ? ನಮ್ಮೊಳಗಿನ ದನಿಗೆ ಅಭಿವ್ಯಕ್ತಿಕೊಡುವ ಮಾಧ್ಯಮವೂ ಕೂಡ ನಮ್ಮ ಚಟವಾಗಿಬಿಡಬಹುದೇ? ಅಕ್ಷರಗಳ ಮೋಹ ನಮ್ಮೊಳಗಿನ ದನಿಯನ್ನು ನಿರ್ಲಕ್ಷಿಸಿಬಿಡುವ ಅಪಾಯವಿದೆಯೇ? ಅಥವಾ ಇವೆಲ್ಲಕ್ಕೂ ಮನ್ನಣೆ, ಪ್ರಸಿದ್ಧಿ, ಹೆಸರುಗಳೆಂಬ ವಿಷಗಳು ಸೇರಿಕೊಂಡು ಬಿಟ್ಟಿವೆಯೇ?
ತುಂಬಾ ಬರೆಯುತ್ತಾ, ಯಾವಾಗಲೋ ಒಮ್ಮೆ ನಾನು ವಿಪರೀತ ವಾಚಾಳಿಯಾಗಿಬಿಟ್ಟೆನಾ ಅನ್ನಿಸತೊಡಗುತ್ತದೆ. ಅದರಲ್ಲೂ ಈ ಬ್ಲಾಗ್ ಬರಹಗಳಲ್ಲಿ ನನ್ನ ವೈಯಕ್ತಿಕ ಅನುಭವ, ವಿಚಾರ, ತಳಮಳಗಳನ್ನೇ ದಾಖಲಿಸುತ್ತಾ ಕೆಲವೊಮ್ಮೆ ನಾನು ಬರೀ ಮಾತುಗಾರನಾಗಿಬಿಟ್ಟೆನಾ ಎಂಬ ಭಯವಾಗುತ್ತದೆ. ನನ್ನ ಓದು ನಿಂತುಹೋಗಿಬಿಟ್ಟಿತಾ ಎಂಬ ಆತಂಕ ಕಾಡುತ್ತದೆ. ಈ ಸಕಲ ವ್ಯವಹಾರಗಳಿಗೂ ತಿಲಾಂಜಲಿಯಿತ್ತು ಕೆಲಕಾಲ ಎಲ್ಲಾದರೂ ಅಡಗಿಕೊಂಡು ಬಿಡಲಾ ಅನ್ನಿಸುತ್ತದೆ. ಬರೆಯುವುದನ್ನೆಲ್ಲಾ ಬಿಟ್ಟು ಓ ಹೆನ್ರಿಯ ಕಥೆಯಲ್ಲಿನ ಪಾತ್ರದ ಹಾಗೆ ಒಬ್ಬಂಟಿ ಕೋಣೆಯಲ್ಲಿ ಓದುತ್ತಾ, ಚಿಂತಿಸುತ್ತಾ, ಧ್ಯಾನಿಸುತ್ತಾ ಬದುಕು ಕಳೆದುಬಿಡಲಾ ಎನ್ನಿಸುತ್ತದೆ. ಹೀಗೆ ಬರೆಯುತ್ತಲೇ ಇದ್ದರೆ ನನ್ನ ತಿಳುವಳಿಕೆ, ಜ್ಞಾನ ಸೀಮಿತವಾಗಿಬಿಡುತ್ತದಾ ಎನ್ನಿಸುತ್ತದೆ. ಈ ಬಗೆಯ ಭಾವಗಳು ಕಾಡಿದಾಗ ಒಂದಷ್ಟು ದಿನ ಬ್ಲಾಗು ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೇನೆ. ನಾವು ಗೆಳೆಯರು ನಡೆಸುತ್ತಿರುವ ಈ ಪತ್ರಿಕೆಗೆ ರಾಜೀನಾಮೆ ಕೊಟ್ಟುಬಿಟ್ಟಿದ್ದೇನೆ. ಒಂದೆರಡು ತಿಂಗಳು ಅದರಿಂದ ದೂರವಾಗಿಬಿಟ್ಟಿದ್ದೇನೆ. ಮತ್ತೆ ಅದನ್ನು ಅಪ್ಪಿಕೊಂಡಿದ್ದೇನೆ.
ಪರಿಸ್ಥಿತಿ ಬದಲಾಯಿಸಿತಾ? ಬ್ಲಾಗು ಬರೆಯುವುದನ್ನು ಬಿಟ್ಟಾಗ ನನಗೆ ತೃಪ್ತಿ ಸಿಕ್ಕಿತಾ? ಸಮಾಧಾನ ಎನ್ನುವುದು ಸಿಕ್ಕಿತಾ? ನನ್ನನ್ನು ನಾನು ನಿರಂತರವಾದ ಓದಿಗೆ, ಅಧ್ಯಯನಕ್ಕೆ ತೊಡಗಿಸಿಕೊಳ್ಳಲು ಸಾಧ್ಯವಾಯಿತಾ? ಖಂಡಿತಾ ಇಲ್ಲ. ಓದು ಅನ್ನೋದು ತೀರಾ ಖಾಸಗಿಯಾದ ಕ್ರಿಯೆಯೇ ಆದರೂ ಅದರಲ್ಲಿ ದೊರೆಯುವ ಸಂತೋಷವನ್ನು, ನಾನು ಕಂಡುಕೊಂಡ ಸಂಗತಿಗಳನ್ನು, ಅನುಭವಿಸಿದ ಬೆರಗನ್ನು ಹಂಚಿಕೊಳ್ಳಬೇಕು ಎನ್ನುವ ಹಂಬಲವನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. ಬರೆಯುವಾಗ ನಾನು ಅದುವರೆಗೂ ಆಲೋಚಿಸಿರದಿದ್ದ ಅನೇಕ ಒಳನೋಟಕಗಳು ದಕ್ಕಿದಂತಾಗಿ ಪುಳಕಗೊಳ್ಳುವ ಸುಖವನ್ನು ಬಿಡಲು ಸಾಧ್ಯವಾಗುವುದಿಲ್ಲ. ಸೃಜನಶೀಲತೆಯಲ್ಲಿ ಸಿಕ್ಕುವ ಸಮಾಧಾನವನ್ನು ಕಳೆದುಕೊಂಡು ಇರುವುದು, ಪ್ರತಿದಿನ ರುಚಿ ರುಚಿಯಾಗಿ ತಿನ್ನುತ್ತಿದ್ದವನಿಗೆ ಒಮ್ಮೆಗೇ ಸಪ್ಪೆ ಊಟ ಹಾಕಲು ಶುರುಮಾಡಿದ ಹಾಗಾಗುತ್ತದೆ. ಬಹುಶಃ ಸ್ವಂತ ಅಭಿವ್ಯಕ್ತಿಗೆ, ನಮ್ಮವೇ ಆದ ಸೃಷ್ಠಿಗೆ ಯಾವ ಅವಕಾಶವನ್ನೂ ಕೊಡದೆ ಕೇವಲ ಹೊರಗಿನಿಂದ ಒಳಗೆ ಫೀಡ್ ಮಾಡಿಕೊಳ್ಳಬೇಕಾದ ನಮ್ಮ ಈ ಶಿಕ್ಷಣ ವ್ಯವಸ್ಥೆಯಿಂದಾಗಿ ಸಣ್ಣ ಸಣ್ಣ ಸೃಜನಶೀಲ ಕೆಲಸಗಳಲ್ಲೂ ಅಪಾರವಾದ ಖುಷಿ ಸಿಕ್ಕುತ್ತದೆಯೇನೋ! ಈ ಸಣ್ಣ ಖುಶಿ, ಅಹಂಕಾರಕ್ಕೆ ಸಿಕ್ಕುವ ಬೆಚ್ಚಗಿನ ಪ್ರೋತ್ಸಾಹಗಳನ್ನು ತೊರೆಯುವುದು ರಾಜಕಾರಣಿ ಕುರ್ಚಿಯ ಮೇಲಿನ ಆಸೆಯನ್ನು ಬಿಟ್ಟಂತೆಯೇ ಏನೋ! ಈ ನಮ್ಮ ಹಪಹಪಿಗೆ ಒಂದು ಗೌರವಯುತವಾದ ಸ್ಥಾನವಿದೆ ಆದರೆ ಅಧಿಕಾರದ ಮೇಲಿನ ಹಂಬಲಕ್ಕೆ ಅದಿಲ್ಲ ಅಷ್ಟೇ ವ್ಯತ್ಯಾಸ!
ಬ್ಲಾಗಿಂಗ್ ಕೂಡಾ ಚಟವಾಗುತ್ತಿದೆ ಎಂಬ ಇತ್ತೀಚಿನ ಕೆಲವು ಇಂಗ್ಲೀಷ್ ಪತ್ರಿಕೆಗಳ ವರದಿಗಳಲ್ಲಿನ ವೈಜ್ಞಾನಿಕ ಕಾರಣಗಳನ್ನು ಅವಲೋಕಿಸುವಾಗ ಇದೆಲ್ಲಾ ಹೊಳೆಯಿತು. ಆದರೆ ಇದನ್ನೆಲ್ಲಾ ಬರೆಯುತ್ತಾ ಹೋದಂತೆ ಹಲವು ಸಂಗತಿಗಳು ಸ್ಪಷ್ಟವಾಗುತ್ತಾ ಹೋದವು. ನಾವು ಬರೆಯುವುದು ನಮ್ಮೊಳಗೆ ಸ್ಪಷ್ಟತೆಯನ್ನು ಸ್ಥಾಪಿಸಿಕೊಳ್ಳುವುದಕ್ಕಾ?
ವಾರಾಂತ್ಯದ ಕವಿತೆ: “ಹೋಗುವ ಮುನ್ನ..”
Posted ಜುಲೈ 10, 2009
on:–ಜ್ಞಾನಮೂರ್ತಿ, ಬೆಂಗಳೂರು.
ಮಣ್ಣಲ್ಲಿ ಮಣ್ಣಾಗಿ ಹೋಗುವ ಮುನ್ನ,
ಧರಿತ್ರಿಯ ಸಂಗವ ತೊರೆಯುವ ಮುನ್ನ
ತಾಯ್ಮಡಿಲಿನಲಿ ಶಿರವನಿರಿಸಿ ನಾ ಅಲೆದಿರುವಾ
ನನ್ನ ನೆನಪಿನಂಗಳವನ್ನ ತವೆಯುತ್ತ
ತಾಯ್ಮಡಿಲ ಸೇರಿದ ನೆನಪಾಗಿ,
ಬಾಲ್ಯದ ತುಂಟಾಟ ಕೈಬೀಸಿದಂತಾಗಿ
ಗೆಳೆಯರ ಜಗಳ ಸಂಧಾನಗಳು ಕೂಗಿ ಕರೆದಂತಾಗಿ
ಕೈಹಿಡಿದ ಕೈಯನ್ನು ಹಿಡಿದು ನಡೆಸುವ ಹಂಬಲವಾಗಿ
ಮನಸು ಸಾವಿನ ದಾರಿಯಲಿ ತಾ ಹಿಂದೆ ನೋಡುತಿರೆ,
ವಾಸ್ತವಕೆ ಬಂದು ನಾ ಸುತ್ತ ನೋಡುತಿರೆ
ತೇವದಿ೦ದೆಲ್ಲರ ಕಂಗಳಲಿ ನನ್ನ ಬಿಂಬ
ಕಂಡು ಸಂತಸಗೊಂಡೆ ನಾ ಈ ಕ್ಷಣ
ಮಾತೃದೇವತೆಯ ಮಡಿಲ ತೊರೆಯಲಾಗುತ್ತಿಲ್ಲ
ಮಡದಿಯ ಸಿಂಧೂರ ನೋಡಲಾಗುತ್ತಿಲ್ಲ.
ಕಾಲಚಕ್ರವ ಹಾಗೆ ಹಿಂದೆ ಸರಿಸುವ ಆಸೆ,
ಅಮ್ಮಾ ನಿನ್ನ ಮಡಿಲಲಿ ನಾ ಮತ್ತೆ ಶಿಶುವಾಗುವಾಸೆ
ಬಾಳೆಂಬ ನಾಣ್ಯದ ಎರಡನೇ ಮುಖವ ನೋಡುವ ಸಮಯ
ಓಗೊಟ್ಟು ಸ್ವೀಕರಿಸಲೇಬೇಕು ಜವರಾಯನ ಈ ಕರೆಯ
ಕಣ್ಣಾಲಿಗಳು ತೇಲುತಿರೆ, ಉಸಿರಾಟ ನಿಲ್ಲುತಿರೆ,
ಹೃದಯವಿದು ತನ್ನ ಬಡಿತವಾ ತಾನು ನಿಲ್ಲಿಸಿರೆ,
ಕಣ್ಣ ರೆಪ್ಪೆಯಲೇ ಕಡೆಯ ನಮನವಾ ತಿಳಿಸಿ
ಹೋಗುತಿರುವೆ ನಾ……..
ಜವರಾಯನ ಗೆದ್ದು ಜೀವಿಸಲೇ ಬೇಕೆಂದು ಏಕನಿಸಿತೋ ಕಾಣೆ
ಹೋಗುವ ಮುನ್ನ, ಹೋಗುವಾ ಮುನ್ನ……
ಬರದವನ ದಾರಿ ಕಾಯುತ್ತಾ…!
Posted ಜುಲೈ 8, 2009
on:– ರೇಶ್ಮಾ, ಉತ್ತರ ಕನ್ನಡ.
ಹೊರಗೆ ಬಿಸಿಲಿಲ್ಲ. ಕಪ್ಪು ಮೋಡ. ಇನ್ನೇನು, ಕ್ಷಣಗಳಲ್ಲಿ ಮಳೆ ಶುರುವಾಗತ್ತೆ. ಒಳಗೆ ಎಷ್ಟು ಕೂಗಿಕೊಂಡರೂ ಕೇಳಿಸದ ಹಾಗೆ ಧೋ.. ಅಂತ ಸುರಿವ ಮಳೆ. ಕಿಟಕಿ, ಬಾಗಿಲು ಮುಚ್ಚಿ ಕುಳಿತರೆ ಕೊನೆಗೆ ವೆಂಟಿಲೇಟರ್ ನಲ್ಲಾದರೂ ನುಸುಳಿ ಒಳ ಬಂದು ಥಂಡಿ ಹುಟ್ಟಿಸುವ ಗಾಳಿ. ಅವನೂ ಇದ್ದಿದ್ದರೆ ಚೆನ್ನಾಗಿರ್ತಿತ್ತು.
ತುಂಬಾ ಚಳಿಯಾಗುತ್ತಿದೆ. ಬಿಸಿಯಾಗಿ ಏನಾದರೂ ಹೊಟ್ಟೆಗೆ ಬೇಕು ಅನಿಸ್ತಿದೆ. ಒಬ್ಬಳೇ ಮಾಡಿಕೊಂಡು ಕುಡೀಬೇಕಲ್ಲ ಅಂತ ಸ್ವಲ್ಪ ಉದಾಸೀನ. ಆದರೂ ಬೇಕು ಅನ್ನುತ್ತಿದೆ ಮನಸ್ಸು. ಲೋಟದ ತುಂಬ ಬಿಸಿ ಬಿಸಿ ಕಾಫಿ ಮಾಡಿಕೊಂಡು ಬಾಲ್ಕನಿಗೆ ಬರುವಾಗ ಹೊರಗೆ ಮಳೆ ಇನ್ನೂ ಅದೇ ಆವೇಶದಲ್ಲಿ ಸುರಿಯುತ್ತಿದೆ. ಅವನು ಇದ್ದಿದ್ದರೆ ಬರೀ ಕಾಫಿ ನಾ? ಏನಾದ್ರೂ ತಿಂಡಿ ಪ್ಲೀಸ್ ಮುಖ ಚಿಕ್ಕದು ಮಾಡುತ್ತಿದ್ದ. ಈಗ ತಿಂಡಿ ಮಾಡಬೇಕು ಅನಿಸ್ತಿಲ್ಲ. ಅವನು ಇವತ್ತಷ್ಟೇ ಹೋಗಿದ್ದಾನೆ, ಬರೋಕೆ ಒಂದು ವಾರ ಬೇಕು ಅನ್ನೋದು ಗೊತ್ತಿದ್ದರೂ ಮತ್ತೆ ಮತ್ತೆ ಅವನ ಬರವು ಕಾಯುತ್ತಾ ರಸ್ತೆ ನೋಡುವುದು. ಅವನಿಲ್ಲದೆ ಒಂದು ಕ್ಷಣ ಕಳೆಯೋದು ಸಹ ಕಷ್ಟ ಆಗ್ತಿದೆ. ಮಳೆ ಬರುತ್ತಿರುವಾಗ ಅವನಿರಬೇಕಿತ್ತು ಜೊತೆಗೆ. ಅಲ್ಲಿ ಈಗ ಏನು ಮಾಡ್ತಿರಬಹುದು? ಒಮ್ಮೆ ಫೋನ್ ಮಾಡಿ ಮಾತಾಡಿದರೆ ಹೇಗೆ? ಬೇಡ, ಮೆಸೇಜ್ ಮಾಡಿದ್ರೇ ಒಳ್ಳೇದು. ಮೀಟಿಂಗ್ ನಲ್ಲಿದ್ದರೆ ಡಿಸ್ಟರ್ಬ್ ಆಗೋದಿಲ್ಲ.
ಮೆಸೇಜ್ ಮಾಡಿ ಹತ್ತು ನಿಮಿಷಗಳಾದರೂ ಉತ್ತರವಿಲ್ಲ. ಬಹುಶಃ ನಿದ್ರೆ ಮಾಡ್ತಿರಬಹುದು ಅನಿಸಿದ್ದೇ ಅವನು ಮಲಗುವ ರೀತಿ ನೆನಪಿಗೆ ಬಂತು. ಥೇಟ್ ಚಿಕ್ಕ ಮಕ್ಕಳ ಹಾಗೇ.. ಪ್ರಶಾಂತವಾದ ಮುಖ, ತುಂಟ ಕಣ್ಣುಗಳು.. ಅವನು ಮನೆಯಲ್ಲಿದ್ದರೆ ಒಂದು ನಿಮಿಷವೂ ಬಿಡುವೇ ಸಿಗುವುದಿಲ್ಲ. ಅಮ್ಮ, ಅಪ್ಪನಿಗೆ ಅಂತ ಹೀಗೆ ಒಮ್ಮೆಯಾದರೂ ಹೀಗೇ ಕಾಯುತ್ತಾ ನಿಂತಿದ್ದು ನೆನಪಿಗೆ ಬರುತ್ತಿಲ್ಲ. ಹಳ್ಳಿ ಮನೆಯ ಮುಗಿಯದ ಕೆಲಸಗಳ ಜೊತೆ ಮಕ್ಕಳ ಗಲಾಟೆ ಸುಧಾರಿಸುತ್ತಿದ್ದವಳಿಗೆ ಅಪ್ಪನಿಗೆ ಕಾಯುತ್ತಾ ನಿಲ್ಲಲು ಪುರುಸೊತ್ತೆಲ್ಲಿರ್ತಿತ್ತು?
ಆಗಾಗ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವವಳಿಗೆ ಅಮ್ಮನ ನೆನಪಲ್ಲಿ ಕಣ್ತುಂಬಿ ಬರುತ್ತೆ. ಟಿ. ವಿ ನೋಡುತ್ತಾ ಕುಳಿತವನಿಗೆ ಅದು ಹೇಗೆ ಗೊತ್ತಾಗುತ್ತೋ, ಪಕ್ಕದಲ್ಲಿ ಹಾಜರ್. ಅವನನ್ನು ನೋಡುತ್ತಿದ್ದ ಹಾಗೇ ನಿಯಂತ್ರಿಸಿಕೊಳ್ಳಲಾಗದೇ ಕಣ್ಣೀರ ಹೊಳೆಯೇ ಹರಿದುಬಿಡುತ್ತೆ. ಆಗ ಎದೆಗೊರಗಿಸಿಕೊಂಡು, ನಾಳೆ ಅಮ್ಮನ್ನ ನೋಡ್ಕೊಂಡು ಬರೋಣ ಅನ್ನುತ್ತಾನೆ.
ಅರೇ.. ಮೆಸೇಜ್ ಬಂತು, ಅವನದ್ದೇ. ನಿದ್ರೆ ಮಾಡಿದ್ದೆ. ನಂತರ ಕಾಲ್ ಮಾಡ್ತೀನಿ. ದೂರ ಇದ್ದರೂ ಮೆಸೇಜ್ ಮಾಡೋವಾಗ, ಫೋನನಲ್ಲಿ ಮಾತಾಡೋವಾಗ ಒಮ್ಮೆಯೂ ಮಿಸ್ ಯೂ ಅಂತ ಹೇಳಿದ್ದಿಲ್ಲ. ಕಾಲ್ ಮಾಡಿದ ತಕ್ಷಣ ಕೇಳ್ತಾನೆ, ಅಲ್ಲಿ ಮಳೆ ಇದ್ಯಾ?. ಅವನಿಗೂ ಸಹ ಮಳೆ ಅಂದ್ರೆ ಇಷ್ಟ. ಅರೇ ಮಳೆ ಕಡಿಮೆಯಾಗಿಬಿಡ್ತು. ಎಲ್ಲೋ ನೋಡುತ್ತಾ ಲೋಟ ಬಾಯಿಗಿಟ್ಟರೆ, ಕಾಫಿಯೂ ಖಾಲಿ.
– ರಂಜಿತ್ ಅಡಿಗ, ಕುಂದಾಪುರ
ಅವತ್ತು ನೀ ಹಾಗೆ ಬೆನ್ನು ತೋರಿ ಹೊರಡುವಾಗ ನಿನ್ನ ಕಣ್ಣು ನೋಡಬೇಕೆನ್ನಿಸಿತ್ತು ಕಣೇ. ಪ್ರೀತಿಯಿಂದ ತುಳುಕುತಿದ್ದ ಕಣ್ಣ ಭಾವವನ್ನಷ್ಟೇ ಸವಿದು ಅಭ್ಯಾಸವಾಗಿಬಿಟ್ಟಿತ್ತಲ್ಲ; ಮೋಸದ ಕಹಿಯೂ ಅರಿವಾಗಬೇಕಿತ್ತು. ಮೊದಲು ನನ್ನ ಕಂಡೊಡನೆ ತಾರೆಯಂತೆ ಜಗಮಗಿಸುತ್ತಿದ್ದ ಕಣ್ಣುಗಳಲ್ಲಿ ಈ ಬಗೆಯ ನಿರ್ಲಕ್ಷ್ಯ, ’ನಿನ್ನ ಬದುಕು ನಿನಗೆ; ಎಲ್ಲೋ ಹೇಗೋ ಬದುಕಿಕೊಂಡು ಸಾಯಿ’ ಅನ್ನುವಂಥ ದ್ವೇಷ ಹೇಗೆ ಧಗಧಗಿಸುತ್ತದೆ ಎಂದಾದರೂ ಕಾಣಬೇಕಿತ್ತು.
ಅದರಿಂದಲಾದರೂ ನಿನ್ನ ಮೇಲೊಂದಿಷ್ಟು ಸಿಟ್ಟು ಹುಟ್ಟಿ ನಿನ್ನ ಮರೆಯಲು ಸುಲಭವಾಗುತಿತ್ತಲ್ಲವೇ? ಈ ಪರಿ ರಾತ್ರಿಗಳನ್ನು, ನೆನಪುಗಳು ಸುಡುವ ಅವಕಾಶ ಇಲ್ಲವಾಗುತಿತ್ತಲ್ಲವೇನೆ ಗೆಳತೀ?
ಹಾಗೆ ಅಷ್ಟು ನಿರ್ದುಷ್ಟವಾಗಿ ಹೋಗುವಾಗ, ವಿಲವಿಲ ಒದ್ದಾಡುವ ಹೃದಯವನ್ನು ನೇವರಿಸುವಂತಹ ಪುಟ್ಟನೋಟವೊಂದನ್ನು ಇತ್ತು ಹೋಗಿದ್ದರೆ ಜನುಮದ ಕ್ಷಣಗಳನ್ನೆಲ್ಲಾ ಅದರ ತೆಕ್ಕೆಯಲ್ಲಿ ಹಾಕಿ ಖುಷಿಯಿಂದ ಕಳೆದುಬಿಡುತ್ತಿದ್ದೆ. ’ನಿನ್ನದೇನೂ ತಪ್ಪಿಲ್ಲ; ಏನೋ ಸಮಸ್ಯೆಯಿಂದಾಗಿ ಹೊರಟಿದ್ದೀ, ಬದುಕಿನ ಯಾವುದೋ ಒಂದು ಸುಂದರ ತಿರುವಿನಲ್ಲಿ ನನಗಾಗಿ ಕಾಯುತಿರುತ್ತೀ’ ಎಂಬ ಭ್ರಮೆಯನ್ನು ಸತ್ಯವೆಂದೇ ಮನಸ್ಸಿಗೆ ನಂಬಿಸುತ್ತಾ ಅಂತಿಮವಾಗಿ ಸಾವಿನ ತಿರುವು ಬರುವವರೆಗೂ ಕಾಲ ಕಳೆಯುತ್ತಿದ್ದೆ. ನಮ್ಮ ಯುಗಗಳು ದೇವರಿಗೆ ಕ್ಷಣಗಳಂತೆ. ಅಂತಹ ಸಾವಿರ ಕ್ಷಣಗಳನ್ನು ಯುಗಗಳಂತಾದರೂ ಗರ್ಭಗುಡಿಯೊಳಗಿನ ಮೂರ್ತಿಯಂತೆ ಬಾಳಿ ಕಳೆದುಬಿಡುತ್ತಿದ್ದೆ.
ಹಾಗಾಗಲಿಲ್ಲ.
ನೀ ತೊರೆದ ಘಳಿಗೆಯಲ್ಲಿ ನಿಶ್ಯಬ್ದವೂ ಸಂತೈಸಲಿಲ್ಲ; ತಂಗಾಳಿಯೂ ಸಾಂತ್ವನ ಹೇಳಲಿಲ್ಲ. ಮೌನವಾಗಿ ನಿಂತ ನನ್ನ ಹಿಂದೆ ಅದೇ ಯುಗಗಳಂತಹ ಕ್ಷಣಗಳ ಕ್ಯೂ. ನೆನಪಿನ ಜೋಳಿಗೆ ಹೊತ್ತ ಫಕೀರನೆದುರು ಹಸಿದು ನಿಂತ ಬಕಾಸುರನಂತೆ ಕ್ಷಣಗಳು.
ಹಾಗೆ ಹೊರಟುಹೋಗಲು ಕಾರಣವಾದರೂ ಏನಿತ್ತು? ಕೇಳೋಣ ಅಂದುಕೊಂಡಿದ್ದೆ.
ಕೇಳಿಯೇ ಬಿಟ್ಟಿದ್ದರೆ ಮತ್ತೊಂದು ಅನಾಹುತವಾಗುತಿತ್ತು. ಮೊದಲಿಂದಲೂ ಆಸೆಪಟ್ಟದ್ದನ್ನು ಪಡೆದೇ ಅಭ್ಯಾಸ. ಅಮ್ಮನ ಖಾಲಿ ಕೈಗೆ ವಾಚು ಉಡುಗೊರೆ ಮಾಡಬೇಕೆಂದು ಯಾವಾಗನ್ನಿಸಿತ್ತೋ ಅದೇ ದಿನ ಮನೆಮನೆಗೆ ಪೇಪರ್ ಹಾಕಿ ಹಾಲಿನ ಪ್ಯಾಕೆಟ್ಟೆಸೆದು ತಿಂಗಳು ಮುಗಿಯುವುದರೊಳಗೆ ಟೈಟನ್ ವಾಚು ತಂದುಕೊಟ್ಟಿರಲಿಲ್ಲವೇ?
ಕುಡುಮಿ ವಿಧ್ಯಾರ್ಥಿಯೊಬ್ಬನಿಗಿಂತ ಜಾಸ್ತಿ ಮಾರ್ಕ್ಸು ಪಡೆಯಲೇಬೇಕೆಂದು ಯಾವಾಗನ್ನಿಸಿತ್ತೋ ಆಗೆಲ್ಲಾ ನಿದಿರಿಸುವುದೇ ಕಾಲಹರಣ ಅನ್ನಿಸತೊಡಗಿತ್ತಲ್ಲವ? ಮುಂದಿನ ಪರೀಕ್ಷೆಯಲ್ಲಿಯೇ ಹೆಚ್ಚು ಅಂಕ ಗಳಿಸಿ ತೋರಿಸಿರಲಿಲ್ಲವೇ?
ಹಾಗೆಯೇ (ನೀನೆಲ್ಲಾದರೂ ನನ್ನ ದುಃಖ ಕಡಿಮೆಯಾಗುತ್ತದೆಂದು ಊಹಿಸಿ ಸುಳ್ಳಿಗಾದರೂ) ತೊರೆಯಲು ಏನೋ ಒಂದು ಕಾರಣ ಹೇಳಿದ್ದರೆ ಅದನ್ನು ಜಯಿಸಲು ನನಗೆಷ್ಟು ಸಮಯ ಬೇಕಾಗುತಿತ್ತು ಹೇಳು? ಅದಕ್ಕೇ ಕಾರಣ ಕೇಳುತ್ತಿದ್ದ ಮನದ ಕತ್ತನ್ನು ಹಿಸುಕಿ ಮೌನವಾಗಿಸಿದೆ.
ಇನ್ನು ಮುಂದೇನೂ ಇಲ್ಲ. ಕನಸು, ವಾಸ್ತವಗಳು ಸುತ್ತಲಿಂದಲೂ ಅಟ್ಯಾಕ್ ಮಾಡಿದಾಗ ಆಯುಧ ಕಳಕೊಂಡ ಸೈನಿಕ. ಮನಸ್ಸು, ಸಾಗರದ ನಡುಮಧ್ಯೆ ದಿಕ್ಸೂಚಿ ಬೀಳಿಸಿಕೊಂಡ ನಾವಿಕ. ತೂರಾಡುವ ಹಡಗಿಲ್ಲದೇ ಅಲೆಗಳಿಗೂ ಮಜವಿಲ್ಲ. ತೂಗಾಡಿಸುವ ಗಾಳಿಯಿಲ್ಲದೇ ಹೂಗಳಿಗೂ ಖುಷಿಯಿಲ್ಲ. ಸತ್ತವನಂತಿರುವವನಿಗೆ ಬಡಿದು ಪ್ರಯೋಜನವೇನು ಎಂಬಂತೆ ಬೇರೆ ದುಃಖಗಳೆಲ್ಲ ಇನ್ಯಾರನ್ನೋ ಹುಡುಕಿಕೊಂಡು ಹೊರಟಿದೆ. ಜೀವ ಬಸಿದು ಪದಗಳಾಗುತಿರಲು ಬರೆಯಲೂ ಕೈ ನಡುಗುತಿದೆ ; ಬಹುಶಃ ನಿನ್ನ ಮೇಲೆ, ಬದುಕಿನ ಮೇಲೆ, ಪ್ರೀತಿಯ ಮೇಲೆ ಮತ್ತು ದೇವರ ಮೇಲೆ ಬರೆಯುತ್ತಿರುವ ಕೊನೆಯ ಅಕ್ಷರಗಳಿವು.
ಓದಿ, ಲೊಚಗುಟ್ಟಿಯೋ, ಕನಿಕರಿಸಿಯೋ, ಧಿಕ್ಕರಿಸಿಯೋ, ನೇವರಿಸಿಯೋ, ಹರಿದು ಹಾಕಿಯೋ, ಫ್ರೇಮ್ ಹಾಕಿಸಿಯೋ, ಮದುವೆ ಅಲ್ಬಮ್ಮಿನ ಫೋಟೋ ಹಿಂದುಗಡೆ ಯಾರಿಗೂ ಕಾಣದಂತಿರಿಸಿಯೋ, ಚಿಂದಿ ಮಾಡಿ ಕಸದ ಬುಟ್ಟಿಗೆಸೆದೋ….
ಸಾರ್ಥಕವಾಗಿಸು.
ಇತ್ತೀಚಿನ ಟಿಪ್ಪಣಿಗಳು