ಕಲರವ

Archive for ಜೂನ್ 2009

– ಹೇಮಾ ಪವಾರ್, ಬೆಂಗಳೂರು.
ಆತ್ಮಕತೆಗಳಲ್ಲಿ ಇರುವುದೆಲ್ಲವೂ ಸತ್ಯವಾ? ಸುಳ್ಳಾದರೂ ಅದನ್ನು ಪರೀಕ್ಷಿಸಲು ಬರದು
ಅಲ್ಲವೇ? ಅದೇಕೋ ಈ ಪ್ರಶ್ನೆ ತಲೆಯನ್ನು ಹೊಕ್ಕಿ ಕುಂತಿತು. ಇಷ್ಟಕ್ಕು ಒಬ್ಬ ಮನುಷ್ಯ
ತನ್ನ ಆತ್ಮಕತೆಯಲ್ಲಿ ಸತ್ಯವನ್ನೇ ನುಡಿಯಬೇಕೆಂದು ಅಪೇಕ್ಷಿಸುವುದೇ ದೊಡ್ಡ ಮೂರ್ಖತನ.
ಸತ್ಯಕ್ಕೊಂದು ಪರಿಧಿ ಹಾಕಿ ಇದರಾಚೆಗಿನದೆಲ್ಲ ಸುಳ್ಳು ಎಂದು ಹೇಳಲು ಬರುವುದೇ?
ಘಟನೆಗಳು, ಅನುಭವಗಳು, ದಾಖಲಾಗುತ್ತವೆ. ಅದರ ಸತ್ಯಾಸತ್ಯತೆ ಬರೆದವರನ್ನು ಕಾಡುತ್ತದೆ.
ಆತ್ಮಸಾಕ್ಷಿಗೆ ಹೆದರುವವರೆಲ್ಲರು ಸತ್ಯವನ್ನೇ ದಾಖಲಿಸುತ್ತಾರೆ ಎಂಬ ಮಾತುಗಳೆಲ್ಲ
ಎಷ್ಟು ಸಿನಿಕವೆನ್ನಿಸತೊಡಗಿತು. ಒಂದು ಘಟನೆಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ
ತನ್ನದೇ ಅಭಿಪ್ರಾಯಗಳನ್ನು ಹೊಂದಿರುತ್ತಾನೆ, ಅದೂ ಅವನವೇ ಎಂಬುದಕ್ಕೆ ಏನು ಸಾಕ್ಷಿ
ತಂದುಕೊಡಬಲ್ಲ? ಅವನ ಯೋಚನೆಗೆ ನಿಲುಕಬಲ್ಲಷ್ಟು ಪ್ರಾಮಾಣಿಕ ಅಭಿಪ್ರಾಯಗಳನ್ನು
ದಾಖಲಿಸಬಲ್ಲನೆಂದರೆ, ಅಭಿಪ್ರಾಯಗಳ ಪ್ರಾಮಾಣಿಕತೆಯ ಮೇಲೆ ಅವನು ಘಟನೆಯ ಬಗ್ಗೆ ನೀಡಿದ
ವಿವರಗಳನ್ನು ಸತ್ಯ ಸುಳ್ಳು ಎಂದು ವರ್ಗೀಕರಿಸಬಹುದೇ? ಹೀಗೇ ಯೋಚಿಸುತ್ತಿದ್ದೆ.
ನನ್ನನ್ನು ಸದಾ ಕಾಡುವ, ಯೋಚನೆಗೆ ಹಚ್ಚುವ, ನಾನರಿಯದ ವ್ಯಕ್ತಿಗಳನ್ನು ಪರಿಚಯಿಸುವ
ಆತ್ಮ ಕಥನಗಳು ನನಗೆ ಇನ್ನಷ್ಟು ಆಪ್ತವಾಗುತ್ತಿವೆ. ಈ ಸಲದ ಆತ್ಮಕತೆಗಳ ಸರಣಿಯಲ್ಲಿ
ನಾನು ಬರೆಯುತ್ತಿರುವುದು ’ದಾದಾಗಿರಿಯ ದಿನಗಳ’ ಬಗ್ಗೆ ಇದು ’ಅಗ್ನಿ’  ಪತ್ರಿಕೆಯ
ಸಂಪಾದಕ ಶ್ರೀಧರ್ ರ ಆತ್ಮಕತೆ. ಇದರ ಮೊದಲ ಭಾಗವಷ್ಟೇ ಓದಿದ್ದೇನೆ, ಇನ್ನೂ ಎರಡು
ಭಾಗಗಳು ಬಾಕಿ ಇವೆ ಆದ್ದರಿಂದ ಬರೆಯಲೋ ಬೇಡವೋ ಎಂಬ ಗೊಂದಲದಲ್ಲೇ, ಬರೆಯದೆ ಇರಲು
ಸಾಧ್ಯವಿಲ್ಲವೆನಿಸಿ ಬರೆಯುತ್ತಿದ್ದೇನೆ.

ಆತ್ಮಕತೆಗಳನ್ನು ಯಾರ್ಯಾರು ಬರೆಯಬಹುದು? ಯಾರಾದರೂ ಬರೆಯಬಹುದು. ಆದರೂ ಎಲ್ಲರೂ
ಬರೆಯುವುದಿಲ್ಲ ಏಕೆ? ತಮ್ಮ ಜೀವನದಲ್ಲಿ ದಾಖಲಿಸಲು ಅರ್ಹವೆನಿಸುವಂತಹ ಘಟನೆಗಳು
ನಡೆದಿದ್ದರೆ ಸಾಮಾನ್ಯವಾಗಿ ಆತ್ಮಕತೆಗಳನ್ನು ಬರೆದುಕೊಳ್ಳುತ್ತಾರೆ. ದಾಖಲಿಸಲ್ಪಟ್ಟ
ಘಟನೆಗಳು ಪೂರ್ತಿಯಾಗಲ್ಲದಿದ್ದರೂ ಎಲ್ಲೋ ಒಂದು ಕಡೆ ಬರೆಯುತ್ತಿರುವವನ
ಒಳ್ಳೆಯತನಗಳನ್ನೋ ಸಾಧನೆಗಳನ್ನೋ ಪ್ರತಿಬಿಂಬಿಸುತ್ತವೆ. ಇದು ಲೋಕಾರೂಢಿ. ಆದರೆ
ದಾದಾಗಿರಿಯ ದಿನಗಳಲ್ಲಿ ನಾನು ಕಂಡಿದ್ದು ಶ್ರೀಧರರ ಕನ್ಪೆಶನ್. ಅವರ ಮನಸ್ಸು ಬರವಣಿಗೆ
ಎಡೆಗೆ ಪಲ್ಲಟಗೊಳ್ಳುವವರೆಗೂ ಅವರೊಂದಿಗೆ ನಡೆದ ಘಟನೆಗಳು ಯಾವ ಸಿನಿಮಾಕ್ಕಿಂತ ಕಡಿಮೆ
ಇಲ್ಲ. ಅತ್ಯಂತ ರಂಜಕವಾಗಿ, ವಿಜೃಂಬಿಸಿ ಬರೆದಿದ್ದರೆ ಅದೊಂದು ಬೆಸ್ಟ್ ಸೆಲ್ಲರ್
ಪುಸ್ತಕವಾಗುತ್ತಿತ್ತೋ ಏನೋ, ಆದರೆ ಶ್ರೀಧರ್ ಎಲ್ಲೂ ಎಲ್ಲೆ ಮೀರಿಲ್ಲ. ತಮ್ಮ
ಒಳ್ಳೆಯತನಗಳನ್ನು ಸಾಬೀತುಪಡಿಸಹೊರಟಿಲ್ಲ, ಅಲ್ಲಿರುವುದು ಘಟನೆಗಳ ನೇರ ವಿವರ, ಅವುಗಳು
ಜರಗುವಾಗಿನ ಅವರ ಮನಸ್ಥಿತಿ,  ತಪ್ಪೊಪ್ಪಿಗೆ ಮತ್ತು ಪಶ್ಚಾತಾಪ. “ನನ್ನ
ಬದುಕಿನಲ್ಲೊಂದು ಕಾಲವಿತ್ತು. ನನ್ನ ಪ್ರತಿಯೊಂದು ಗಳಿಗೆಯನ್ನು ಅಪರಿಚಿತ ಕಣ್ಣುಗಳು
ಹಿಂಬಾಲಿಸುತ್ತಿದ್ದವು. ಕಾಣದ ಕಿವಿಗಳು ಕೇಳಿಸಿಕೊಳ್ಳುತ್ತಿದ್ದವು. ಅದೊಂದು ಪಾತಕಿಗಳ
ಭೀಕರ ಪ್ರಪಂಚವೆಂದು ತಳ್ಳಿ ಹಾಕುವ ಹಾಗಿರಲಿಲ್ಲ. ಪಾತಕಿಗಳಲ್ಲಿ ನಾನೂ
ಒಬ್ಬನಾಗಿದ್ದೆ. ಭೀಕರತೆಯಲ್ಲಿ ನನ್ನ ಕೊಡುಗೆಯೂ ಇತ್ತು” ಎಂದು ಶುರುವಿಡುತ್ತಾರೆ.
೧೯೭೦-೮೦ ರ ಪಾತಕಪ್ರಪಂಚದ ಬಗ್ಗೆ  ಬೆಚ್ಚಿಬೀಳಿಸುವ ಒಂದೊಂದೂ ವಿವರವೂ ಅವರ
ಆತ್ಮಕತೆಯಲ್ಲಿ ದಾಖಲಾಗಿದೆ, ಅದರಲ್ಲಿ ಶ್ರೀಧರ್ ರ ಪಾತ್ರವೂ ಇತ್ತೆಂಬುದು
ನಂಬಲಸಾಧ್ಯವಾದ ಸತ್ಯ.

IMG_6284

’ಲಾ’ ಓದಿದ್ದ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಎಲ್ಲ ಅವಕಾಶಗಳು ಇದ್ದ ಅವರನ್ನು
ಪಾತಕ ಪ್ರಪಂಚ ಸೆಳೆದದ್ದು ಒಂದು ವಿಚಿತ್ರ. ಒಂದೊಮ್ಮೆ ಅಲ್ಲಿಗೆ ಕಾಲಿಟ್ಟ ಮೇಲೆ
ಹೊರಬರಲಾಗದ ಅನಿವಾರ್ಯತೆ, ಪಾತಕ ಲೋಕದಲ್ಲೆ ಇನ್ನೂ ಹೆಚ್ಚು ಹೆಚ್ಚು ಆಳಕ್ಕಿಳಿಯಬೇಕಾದ
ಸಂಧರ್ಭಗಳು, ತಪ್ಪು ಮತ್ತು ಸರಿಯಲ್ಲಿನ ದ್ವಂದ್ವಗಳೆಲ್ಲವನ್ನು ಅದೆಷ್ಟು ಚೆನ್ನಾಗಿ
ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆಂದರೆ, ಪಾತಕಿಯಾಗಿದ್ದವನ ಕೈಯಲ್ಲರಳಿದ ಕೃತಿಯೇ ಇದು
ಅನಿಸಿಬಿಡುತ್ತದೆ. “ಪಾತಕ ಪ್ರಪಂಚದಿಂದ ನಾನು ಕಳಚಿಕೊಳ್ಳಲೇ ಬೇಕಿತ್ತು. ಆದರೆ
ಕಳಚಿಕೊಳ್ಳುವುದಾದರೂ ಹೇಗೆ? ಆ ಪ್ರಶ್ನೆಯ ತುಡಿತ ನನ್ನನ್ನು ಬರವಣಿಗೆಯ ಜಗತ್ತಿಗೆ
ದೂಡಿತು. ಆ ಪ್ರಕ್ರಿಯೆ ಎದೆಯಾಳದಲ್ಲಿ ವಿಚಿತ್ರ ಘರ್ಷಣೆಯನ್ನು ಹುಟ್ಟಿಸತೊಡಗಿತು.
ತಣ್ಣನೆಯ ಕ್ರೂರಿಗಳು ಅಸಹಾಯಕರಂತೆ ಗೋಚರವಾಗತೊಡಗಿದರು. ಶಿಷ್ಠರು ಮತ್ತು ದುಷ್ಠರ
ನಡುವಿನ ವ್ಯತ್ಯಾಸ ತೆಳುವಾಗುತ್ತ ಹೋಯಿತು. ಎಲ್ಲಾರೂ ಒಂದೇ ದೋಣಿಯಲ್ಲಿ ಸಾಗುತ್ತಿರುವ
ಸಹಪ್ರಯಾಣಿಕರೆನ್ನುವ ಅರಿವು ಮನಸ್ಸನ್ನು ಆಕ್ರಮಿಸತೊಡಗಿತು. ಬರಹ ನನ್ನ ಹಾದಿಯನ್ನು
ಬದಲಿಸತೊಡಗಿತು. ಬದಲಾದ ಹಾದಿ ಹೆಚ್ಚು ಹೆಚ್ಚು ಆಪ್ತವಾಗಿ ಆಶವಾಗಿ ಬರವಣಿಗೆಯಲ್ಲಿ
ತೊಡಗುವಂತೆ ಪ್ರೇರೇಪಿಸಿತು. ಈಗ ನಿಮ್ಮ ಮುಂದೆ ನಿಂತಿದ್ದೇನೆ
ಸಂಪೂರ್ಣವಾಗಲ್ಲದಿದ್ದರೂ ಸಾಕಷ್ಟು ಬೆತ್ತಲೆಯಾಗಿ” ಹೀಗೆ ಅವರ ಮನಸ್ಸು ಕ್ರೈಂ ನಿಂದ
ಬರವಣಿಗೆಗೆ ಹೊರಳಿದ್ದನ್ನು ವಿವರಿಸುತ್ತಾರೆ. ವಿಖ್ಯಾತರದ್ದಷ್ಟೇ ಆತ್ಮಕತೆಗಳು
ಓದಿಸಿಕೊಳ್ಳುತ್ತವೆ ಎಂಬ ನನ್ನ ಭಾವನೆ ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಕೊತ್ವಾಲ್
ಕೊಲೆಯಲ್ಲಿ ಅವರು ಭಾಗಿಯಾಗಿದ್ದಾಗಿನ ವಿವರಗಳನ್ನು ಓದ ತೊಡಗಿದಾಗ, ಬೇಡ
ಬೇಡವೆಂದುಕೊಂಡಿದ್ದ ಕೊತ್ವಾಲನ ಕೊಲೆಯು ಜರುಗಿಯೇ ಬಿಟ್ಟಾಗ ಅದೊಂದು ಕ್ಷಣ ನನ್ನ
ಸುತ್ತಲಿನ ಜಗತ್ತೇ ನಿಂತಂತೇ ಭಾಸವಾಗಿದ್ದು ಸುಳ್ಳಲ್ಲ. ನನಗೆ ತಿಳಿದಂತೆ ಅಷ್ಟು
ತನ್ಮಯಳಾಗಿ ಬೇರಾವ ಕೃತಿಯನ್ನು ಬಹುಶಃ ನಾನು ಓದಿಲ್ಲ.

’ಕಲೆಯ ಶ್ರೇಷ್ಟತೆ ಇರುವುದು ವಸ್ತುಗಳ ಅಭಿವ್ಯಕ್ತಿಯಲ್ಲಿ ವಸ್ತುಗಳ
ಮೌಲ್ಯಮಾಪನದಲ್ಲಲ್ಲ’ ಹೀಗಾಗಿಯೇ ಒಂದು ಕೊಲೆಯ ವಿವರಗಳನ್ನೂ ಕೂಡ ಅದ್ಬುತವಾಗಿ
ಅಭಿವ್ಯಕ್ತಿಸಬಹುದು. ಆದರೆ ಇದೆಲ್ಲದರ ಆಚೆ ನಿಂತು ಮಾನವೀಯ ಮೌಲ್ಯಗಳಿಂದ ನೋಡಿದಾಗ
ಕೊಲೆಯು ಪರಿತಪಿಸಿ ಸುಮ್ಮನಾಗಿಬಿಡುವ ಒಂದು ಕ್ರಿಯೆಯೇ ಎಂಬ ಪ್ರಶ್ನೆ ಕಾಡುತ್ತದೆ.
’ಒಬ್ಬ ವ್ಯಕ್ತಿಯು ಸಾವಿರ ಬಾರಿ ಸಾಯುವಂತಹ ತಪ್ಪು ಮಾಡಬಹುದು, ಆದರೆ ಯಾರಿಗೂ
ಒಬ್ಬನನ್ನು ಕೊಲ್ಲುವಷ್ಟು ಅಧಿಕಾರವಾಗಲೀ ನೈತಿಕತೆಯಾಗಲೀ ಇರುವುದಿಲ್ಲ’ ಎಂದು ಎಲ್ಲೋ
ಓದಿದ ನೆನಪು. ಬಹುಶಃ ಶ್ರೀಧರ್ ಮನಸ್ಸಿನಲ್ಲಿ ಈ ಭಾವವಿತ್ತೆಂದು ಕಾಣುತ್ತದೆ.
ಪಶ್ಚತಾಪವು ಒಮ್ಮೆ ಅನುಭವಿಸಿ ಮುಗಿಸಿಬಿಡುವಂತಹ ಕ್ರಿಯೆಯಲ್ಲ. ಅದು ನಿರಂತರವಾಗಿ
ಕಾಡುತ್ತಲೇ ಇರುವ, ಅನುಭವಿಸುತ್ತಲೇ ಬದುಕಬೇಕಾದ ಮನಸ್ಥಿತಿ. ನಾನು ತಪ್ಪು
ಮಾಡಿಬಿಟ್ಟಿದ್ದೇನೆ, ಅದಕ್ಕೆ ಪಶ್ಚಾತಾಪವಾಗಿದೆ, ನನ್ನನ್ನು ಕ್ಷಮಿಸಿಬಿಡಿ ಎಂದು
ಅವರೆಲ್ಲೂ ಕೇಳಿಕೊಂಡಿಲ್ಲ, ಪ್ರಾಮಾಣಿಕ ವಿವರಗಳೊಡನೆ ತಾವು ಮಾಡಿದ ತಪ್ಪನ್ನೆಲ್ಲ
ತೆರೆದಿಟ್ಟಿದ್ದಾರೆ ಅದನ್ನೋದಿ ಓದುಗನ ಮನಸ್ಸಿನಲ್ಲಿ ಮೊಳೆಯಬಹುದಾದ ಭಾವನೆಗಳನ್ನು
ಅವರು ಅಂದಾಜಿಸ ಬಲ್ಲರು, ಒಂದು ಕೊಲೆ ಯಾವುದೇ ರೀತಿಯಲ್ಲೂ ಸಮರ್ಥಿಸಿಕೊಳ್ಳಲಾರದ್ದು
ಎಂಬುದನ್ನು ಅರಿತೇ ಅವರು ಬರೆಯತೊಡಗಿದ್ದಾರೆ. ಹಾಗಾಗಿಯೇ ’ದಾದಾಗಿರಿಯ ದಿನಗಳು’
ಎಲ್ಲೂ ಸಿನಿಕವೆನ್ನಿಸದೆ ಓದಿಸಿಕೊಳ್ಳುತ್ತದೆ. ಕೇವಲ ಒಂದು ಆತ್ಮಕತೆಯಾಗಷ್ಟೆ
ಅಲ್ಲದೇ, ಮಾನವನ ಗುಣದಲ್ಲಾಗುವ ವೈರುಧ್ಯದ ಪ್ರತೀಕದಂತೆ ಮನಸ್ಸಿನಲ್ಲುಳಿಯುತ್ತದೆ.

 – ಜ್ಞಾನಮೂರ್ತಿ, ಬೆಂಗಳೂರು.

 

ನಿನ್ನ ಒಳ ಜಗತ್ತಿನಲ್ಲೆಲ್ಲ ಮೂಡಿರುವ ನನ್ನುಸಿರ
ಹೆಜ್ಜೆಗಳು 
ಆತನ ಸ್ಪರ್ಶಕ್ಕೆ ಮಾಸುವ ಮುನ್ನ ನೋವ
ಪೆಟ್ಟಿಗೆಯಲ್ಲಿ ಬಚ್ಚಿಟ್ಟುಕೋ

ಏಕಾಂತದಿ ನನ್ನ ಜೊತೆ ಮಿಂದು ಬಂದ
ಮನಸ್ಸನ್ನು
ಸಪ್ಪಳವಿಲ್ಲದೆ ಒಳಕರೆದುಕೋ
ಆತ ಎಚ್ಚರವಾಗುವ ಮುನ್ನ ಮನಸ್ಸಿನ
ಮೈತೊಳೆದು
ಹೊಸ ಬಟ್ಟೆ ತೊಡಿಸಿಬಿಡು

ನನ್ನ ನೆನಪುಗಳ ನಿನ್ನ ಮಗುವಿನ
ಆಟಿಕೆಗಳಾಗಿಸುವುದಾದರೆ
ಅವುಗಳೆಲ್ಲ ಆತನ ಕಾಲ್ತುಳಿತಕ್ಕೆ ಸಿಗದಂತೆ
ಎಚ್ಚರವಹಿಸು!

ನಿನ್ನೊಳಗಣ ನನ್ನ ನೆನಪ ಮೊಟ್ಟೆಗಳಿಗೆ
ಕಾವುಕೊಡುವುದ
ನಿಲ್ಲಿಸಿಬಿಡು
ಇಲ್ಲವಾದರೆ ಮೊಟ್ಟೆಯೊಡೆದ ಜೀವಗಳು ಆತನಿಗೆ
ಸತ್ಯ ಹೇಳಿಬಿಟ್ಟಾವು!
ಹರಿದ ನನ್ನ ನೆನಪುಗಳ ನೀ ಹೊಲೆಯುವಾಗ
ಆತ
ಸೂಜಿಮೊನೆಯಾಗಿ ಚುಚುತ್ತಾನೆ
ಈ ನೋವಲ್ಲೂ ನಾನು ನಿನ್ನ ಕೈ ಕೌದಿಯಾಗಿ
ಅರಳುತ್ತೇನೆ!

– ನೂತನ್ ಹೆಚ್. ಬಿ., ಹಾಲಾಡಿ.

8expose


ಬೇರಿನಲ್ಲಿ ಬುತ್ತಿ ಕಟ್ಟಿಟ್ಟಿದ್ದಳು ಅಮ್ಮ
ಮರಕೆಲ್ಲಿ ಗೊತ್ತು?
ಎಲ್ಲಿಂದಲೋ ಬಂದ ರವಿಕಿರಣಕ್ಕೆ
ಮುಖ ಮಾಡಿತ್ತು!

ಮೈ ಎಲ್ಲ ಮನಮಾಡಿ ಹಸಿರುಗನಸುಗಳ ಹೊತ್ತು
ಮಂದ ಮಾರುತಕ್ಕೆ ಮೈಯ್ಯ ಮರೆತಿತ್ತು!
ಬಳುಕುವ ಬಳ್ಳಿಗೆ ಸೋತು ಅಪ್ಪಿ ಬೆಳೆದಿತ್ತು!
ಬಣ್ಣ ಬಣ್ಣಗಳ ಹಕ್ಕಿಗಳ ಸಂಸಾರ ಮೈಎಲ್ಲಾ ಹೊತ್ತು
ತಾನೊಬ್ಬನೆ ಆಕಾಶಕ್ಕೇಣಿಯಾಗುವವನೆಂದು
ಉಬ್ಬಿ ನಿಂತಿತ್ತು!

ಆಗಸವೂ ಸಿಗದೆ ಅಳುಕಿ ತಡಕಾಡಿ
ಬೇರೂ ಸಿಗದೇ ಬುತ್ತಿಯೂ ಸಿಗದೆ ಕಂಗಾಲಾಗಿತ್ತು!
ಮತ್ತೆ ಬೇರನ್ನರಸಿ ಕೆಳಗಿಳಿದಿತ್ತು!

ತಾನು ತಂದಿದ್ದ ಬುತ್ತಿ ಗೆದ್ದಲ ಗೂಡಿನಲ್ಲಿ ಜೀರ್ಣವಾಗಿತ್ತು
ಬೇರುಗಳ ಸಂಧಿಯಲ್ಲಿ ಎಲ್ಲೋ ಹಣ್ಣಾಗಿದ್ದ ಈಗ
ಮಣ್ಣಾಗಿದ್ದ ಅದರಮ್ಮ ಹೇಳಿದ್ದು
ಆತ್ಮರತಿಗೆ ಮಾತ್ರ ಕೇಳುವಂತಿತ್ತು;
’ಮಗುವೇ, ನೀನಿನ್ನೂ ಬೆಳೆಯಬೇಕಿತ್ತು!’

-ಹೇಮಾ ಪವಾರ್, ಬೆಂಗಳೂರು.

ಆತ್ಮಕತೆಗಳ ಬೆನ್ನು ಬಿದ್ದಿದ್ದೇನೆ. ಕಳೆದ ಎರೆಡು ತಿಂಗಳಿಂದ ಒಂದಾದ ಮೇಲೊಂದು
ಓದುತ್ತಲೇ, ಇನ್ನು ಹೆಚ್ಚು ಹೆಚ್ಚು ಆತ್ಮಕತೆಗಳನ್ನೇ ಓದಬೇಕೆನಿಸಿದೆ. ಒಬ್ಬ
ವ್ಯಕ್ತಿಯು ಪ್ರಾಮಾಣಿಕವಾಗಿ ತನ್ನ ಬಗ್ಗೆ ಎಲ್ಲವನ್ನು ಬರೆದುಕೊಳ್ಳಬಲ್ಲನೆ?
ನನ್ನನ್ನು ಕಾಡಿದ ಪ್ರಶ್ನೆ ಇದು. ಆತ್ಮಕತೆ ಬರೆಯುತ್ತಿರುವವರಿಗೆ ತಮ್ಮ ಬಗ್ಗೆ
ಎಲ್ಲವನ್ನೂ ಹೇಳಿಕೊಳ್ಳಲೇಬೇಕೆಂಬ ಉಮೇದು ಉಂಟಾಗುತ್ತದೆ ಹಾಗು ಹೇಳದೆ ಹೋದರೆ ಅದೊಂದು
ತರಹದ ಚಡಪಡಿಕೆ ಮತ್ತು ಕೃತಿ ಅಪೂರ್ಣವೆಂಬ ಭಾವ ಮತ್ತೆ ಮತ್ತೆ ಕಾಡುತ್ತದೆ ಎಂಬುದು
ಆತ್ಮಕತೆಗಳ ಓದಿನಲ್ಲಿ ನಾನು ಕಂಡುಕೊಂಡ ಸತ್ಯ. ಒಬ್ಬ ವ್ಯಕ್ತಿಯ ಜೀವನದ ಘಟನೆಗಳು,
ಅದಕ್ಕೆ ಆತನು ಸ್ಪಂದಿಸಿದ ರೀತಿ, ಆ ಕ್ಷಣದಲ್ಲಿ ಆತನಿಗೆ ಕಾಡಿದ ಯೋಚನೆಗಳು
ಎಲ್ಲವನ್ನು ಪ್ರಾಮಾಣಿಕವಾಗಿ ಬರಹದಲ್ಲಿ ಮೂಡಿಸುವುದು ಅಷ್ಟು ಸುಲಭವಲ್ಲ ಅದಕ್ಕೂ
ಕಲೆಗಾರಿಕೆ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮುಚ್ಚುಮರೆಯಿಲ್ಲದೆ ಎಲ್ಲವನ್ನು
ಬಿಚ್ಚಿಡುವ ಮನಸಿರಬೇಕು. ಸಾರ್ವಜನಿಕವಾಗಿ ಬೆತ್ತಲಾಗುವ ಧೈರ್ಯವಿರಬೇಕು.  ಬಹುಶಃ
ಇದರಿಂದಾಗಿಯೇ ನನಗೆ ಆತ್ಮಕತೆಗಳು ಹೆಚ್ಚು ಹಿಡಿಸುತ್ತಿವೆ. ಈ ಸರಣಿಯಲ್ಲಿ ನಾನು ಓದಿದ
ಆತ್ಮಕತೆಗಳ ಬಗ್ಗೆ ಬರೆಯಬೇಕೆಂದಿದ್ದೇನೆ. ಎಂದಿನಂತೆ ಓದುವ ಕಷ್ಟ ನಿಮ್ಮದು!

ಲಂಕೇಶರ ’ಅಕ್ಕ’ ಓದುವುದಕ್ಕೆ ತುಂಬ ಹಿಂದೆ ದೇವೀರಿ ಸಿನೆಮಾ ನೋಡಿದ್ದೆ. ಅದಾಗ ಅಷ್ಟು
ಹಿಡಿಸಿರಲಿಲ್ಲ. ’ಅಕ್ಕ’ ಕಾದಂಬರಿ ಓದುವಾಗ ಅದರಲ್ಲಿನ ಕ್ಯಾತನ ಪಾತ್ರ ತುಂಬಾ
ಸೆಳೆದಿತ್ತು. ಲೇಖಕನು ಅದ್ಯಾವ ಮನಸ್ಥಿತಿಯಲ್ಲಿ ಈ ಪಾತ್ರ ಸೃಷ್ಟಿಸಿರಬಹುದೆಂದು
ತಲೆಕೆಡಿಸಿಕೊಂಡು ಸುಮ್ಮನಾಗಿದ್ದೆ. ಲಂಕೇಶರು ನನಗೆ ಯಾವತ್ತು ಅತಿ ದೊಡ್ಡ
ವಿಚಿತ್ರವೆನಿಸಿದ್ದಾರೆ. ಅವರ ಮುಸ್ಸಂಜೆಯ ಕಥಾಪ್ರಸಂಗದ ಪಾತ್ರಗಳು ನನ್ನನ್ನು
ಎಡಬಿಡದೇ ಕಾಡಿವೆ. ಏನನ್ನು ಸಮರ್ಥಿಸದ, ತೀರ್ಮಾನಗಳಿಲ್ಲದ, ಪ್ರೀತಿ-ಪ್ರೇಮ ಮುಂತಾದ
ಸಿನಿಕ ಭಾವನೆಗಳಿಗೆ ಒಂದು ಚೌಕಟ್ಟನ್ನು ಹಾಕಿ ಎಲ್ಲವೂ ವಾಸ್ತವಿಕವಾಗಿ ಕಾಮಕ್ಕೆ
ಸಂಬಂಧಿಸಿರುವಂತದ್ದಾಗಿರುತ್ತವೆ ಅದನ್ನು ಮೀರಿದ್ದು ಬೇರೇನು ಇಲ್ಲವೆಂಬಂತೆ
ನಿರೂಪಿಸಿರುವ ಕಾದಂಬರಿ ಮುಸ್ಸಂಜೆಯ ಕಥಾಪ್ರಸಂಗ. ಇಂತಹ ಭಾವನೆಯ ಅರ್ಥವಿಷ್ಟೇ,
ಇದಕ್ಕೆ ಮೀರಿದ್ದೆಲ್ಲ ನಮ್ಮ ಕಲ್ಪನೆಯಲ್ಲಿ ಕಟ್ಟಿಕೊಳ್ಳುವ ರೆಕ್ಕೆಪುಕ್ಕ,
ಆಂತರ್ಯದಲ್ಲಿ ಅದರ ಉದ್ದೇಶವು ತೋರಿಕೆಗೆ ಕಾಣುವಷ್ಟು ಆಳವಾಗಿರುವುದಿಲ್ಲ ಎಂಬ ಗಂಭೀರ
ವಿಷಯಗಳನ್ನು ಅವರ ಪಾತ್ರಗಳ ಮೂಲಕ ಬಿಂಬಿಸಿದ್ದಾರೆ. ಇನ್ನು ನೀಲು ಕವಿತೆಗಳ ಬಗ್ಗೆ
ಹೇಳುವ ಹಾಗೇ ಇಲ್ಲ. ಪ್ರತೀ ಕವಿತೆಯೂ ತನ್ನ ಶಾರ್ಪ್ ನೆಸ್ ನಿಂದಲೇ
ಮನಸೂರೆಗೊಂಡುಬಿಡುತ್ತವೆ. ಕಾದಂಬರಿ, ಕವಿತೆ ಎರಡರಲ್ಲು  ಇಣುಕುವ ಗತ್ತಿನ ಅವರ
ಬರವಣಿಗೆಯ ಶೈಲಿ ಇಷ್ಟವಾಯ್ತು. ಹೀಗೆ ಅವರ ಬರಹಗಳನ್ನು ಓದಿ ಬೆರಗಾಗುತ್ತಿದ್ದಾಗಲೇ
ನನ್ನ ಕೈಗೆ ಸಿಕ್ಕಿದ್ದು ’ಹುಳಿಮಾವಿನ ಮರ’. ಇದು ಲಂಕೇಶರ ಆತ್ಮ ಕಥನ. ಹೆಸರೇ
ವಿಶಿಷ್ಟವಾಗಿದೆ. ಅವರ ಚಿಕ್ಕಪ್ಪನ ಗದ್ದೆಯಲ್ಲಿನ ಮಾವಿನ ಮರದ ಬಗ್ಗೆ ಚಿಕ್ಕಂದಿನಿಂದ
ಆಕರ್ಷಿತನಾಗಿದ್ದರಿಂದ ಆ ಹೆಸರಿಟ್ಟೆ ಎಂದು ಮುನ್ನುಡಿಯಲ್ಲಿ ಬರೆಯುತ್ತಾರೆ ಮತ್ತು
ಪುಸ್ತಕವನ್ನು ’ವಾಟೆ’, ’ಸಸಿ’ , ’ಗಿಡ’, ’ಮರ’ ಎಂದು ವಿಂಗಡಿಸುತ್ತಾರೆ.

ಓದುತ್ತಾ ಹೋದಂತೆ ಲಂಕೇಶ್ ಗಿಡದಿಂದ ಮರವಾಗಿ ನಮ್ಮಲ್ಲಿ ಬೆಳೆಯತೊಡಗುತ್ತಾರೆ.
ಮರೆಮಾಚಬಹುದಾದಂತಹ ವಿಷಯಗಳನ್ನೂ ಕೂಡ ಎಳ್ಳಷ್ಟು ಮುಜುಗರವಿಲ್ಲದೇ ಬಿಚ್ಚಿಡುವ ಅವರ
ರೀತಿ, ಸಂಬಂಧಗಳನ್ನೆಲ್ಲ ಒಂದು ಪರದೆ ಇಟ್ಟುಕೊಂಡೇ ನೋಡಿರುವ ಅವರ ಪ್ರವೃತ್ತಿ, ಅವರ
ಸ್ವಾಭಿಮಾನ, ಬೇರೆಯವರ ಬಗ್ಗೆ ಅವರಿಗಿದ್ದ ಕೀಳರಿಮೆ, ಅವರ ಜಾಣತನದ ಬಗ್ಗೆ ಅವರಿಗಿದ್ದ
ಅಹಂಕಾರ, ಉಹೂ ಎಲ್ಲೂ ಮರೆಮಾಚುವ ಪ್ರಯತ್ನವನ್ನೇ ಮಾಡಿಲ್ಲ. ಇದ್ದದ್ದನ್ನು ಇದ್ದ ಹಾಗೇ
ಓದಿಕೊಂಡುಬಿಡಿ ನಾನು ಇಷ್ಟೇ ಎಂಬ ದರ್ಪ. ಆ ದರ್ಪದಿಂದಲೇ ಇನ್ನಷ್ಟು ಹತ್ತಿರವಾಗುವ
ಲಂಕೇಶ್. ಅವರ ಬಗ್ಗೆ ಅಷ್ಟೇ ಅಲ್ಲ, ಅವರ ಸಂಪರ್ಕದಲ್ಲಿದ್ದ ಇನ್ನು ಎಷ್ಟೋ ಜನರ ಬಗ್ಗೆ
ಬೆಚ್ಚಿ ಬೀಳುವಂತ, ತಮಾಶೆ ಎನಿಸುವಂತಹ ಘಟನೆಗಳನ್ನು ದಾಖಲಿಸುತ್ತಾ ಹೋಗಿದ್ದಾರೆ.

Abstract_Painting

’ಅನುರೂಪ’, ’ಎಲ್ಲಿಂದಲೋ ಬಂದವರು’ ಮತ್ತು ’ಪಲ್ಲವಿ’ ಚಿತ್ರಗಳ ತಯಾರಿಕೆಯಲ್ಲಿ ಅವರು
ಪಟ್ಟ ಪಾಡು. ಸೆಂಟ್ರಲ್ ಕಾಲೇಜಿನ ಅಧ್ಯಾಪಕ ವೃತ್ತಿ. ಲಂಕೇಶ್ ಪತ್ರಿಕೆ
ಶುರುಮಾಡಿದ್ದು. ಬಿಡಲಾಗದ ಅವರ ಕುದುರೆ ರೇಸಿನ ಚಟ. ಪ್ರತಿ ಶುಕ್ರವಾರ ರಾತ್ರಿ
ಗೆಳೆಯರೊಂದಿಗೆ ಆಡುತ್ತಿದ್ದ ಕಾರ್ಡ್ಸ್. ದಿನವೊಂದಕ್ಕೆ ನಲವತ್ತಕ್ಕೂ ಹೆಚ್ಚು
ಸುಡುತ್ತಿದ್ದ ಸಿಗರೇಟು, ಆರೋಗ್ಯ ಕೈಕೊಡುವವರೆಗೂ ಕೈಹಿಡಿದಿದ್ದ ಕುಡಿತ, ತಮ್ಮ
ನೆಗೆಟೀವ್ ಗುಣಗಳನ್ನೂ ಪಟ್ಟಿ ಮಾಡುವುದರಲ್ಲಿ ಬೇಸರಿಸಿಕೊಂಡಿಲ್ಲ. ಚಟಗಳಿಂದಾಗಿಯೇ
ಅವರ ಕಣ್ಣೊಂದು ಕಳೆದುಕೊಳ್ಳಬೇಕಾಗಿ ಬಂದಿದ್ದು. ತೀರ ಮಿದುಳಿನ ಭಾಗಕ್ಕೆ ಲಕ್ವಾ
ಹೊಡೆದು, ಎಡಗಾಲು, ಎಡಗೈ ಶಕ್ತಿಹೀವಾಗಿ ತಾನಿನ್ನು ಬದುಕಲಾರೆ ಅಥವಾ ಬದುಕಿದರೂ
ಮೊದಲಿನಷ್ಟು ಚಟುವಟಿಕೆಯಿಂದರಲಾರೆ ಎಂದೆನಿಸಿದಾಗ ಅವರು ತಮ್ಮ ಆತ್ಮಕತೆಯನ್ನು
ಬರೆಯಬೇಕೆಂದುಕೊಂಡದ್ದರವರೆಗಿನ ವಿವರಗಳೆಲ್ಲವೂ ನಮ್ಮಲ್ಲಿ ಬೇರೂರಿ ಬೆಳೆಯ
ತೊಡಗುತ್ತವೆ. ಅವರ ಕಡೆಯ ಸಾಲುಗಳು ಹೀಗಿವೆ ’ನನ್ನ ಗಾಢ ದುಗುಡದ ವೇಳೆಯಲ್ಲಿ, ಸಾವಿನ
ಹತ್ತಿರ ಇದ್ದಂತಿದ್ದಾಗ ಮುತ್ಸದ್ದಿತನ, ಹೊಂದಾಣಿಕೆ, ಖ್ಯಾತಿ, ಪ್ರಶಸ್ತಿ
ಮುಂತಾದವೆಲ್ಲ ಬದುಕಿನೆದುರು, ಸಾವಿನೆದುರು ಗೌಣ ಅನ್ನಿಸುತ್ತಿದ್ದಾಗ ನನ್ನ ಬರವಣಿಗೆಯ
ರೀತಿಯೂ ಬದಲಾಯಿತು. ಸಾವು ಇನ್ನುಮೇಲೆ ನನಗೆ ಕೇವಲ ಕತೆಯಾಗದೆ, ಬದುಕುವ ಅಂತ್ಯ ಎಂಬ
ಸತ್ಯ ಮಾತ್ರವಾಗದೆ ನನ್ನ ಉಳಿದ ದಿನಗಳಲ್ಲಿ, ಬರೆದ ಸಾಲುಗಳಲ್ಲಿ ನೆಲೆಸಿ ಎಚ್ಚರಿಸುವ
ಛಾಯೆ ಅನ್ನಿಸತೊಡಗಿತು’, ಸಾವಿನೆಡೆಗಿನ ಭಯಕ್ಕಿಂತಲೂ ಹೆಚ್ಚಾಗಿ, ಅದರ ಅಸ್ತಿತ್ವ
ಅರಿವಾಗತೊಡಗಿದರಿಂದ ಅವರಲ್ಲುಂಟಾದ ಗೊಂದಲಗಳನ್ನು ಪದಗಳಲ್ಲಿ ಜೋಡಿಸಿಟ್ಟುರುವಂತಿದೆ ಈ
ಸಾಲುಗಳು.

ಒಂದು ಕಡೆ ಲಂಕೇಶ್ ಹೀಗೆ ಕೇಳುತ್ತಾರೆ ’ನೀವು ಈ ಬದುಕಿನಲ್ಲಿ ಯಾವ ಯಾವ
ಆಗುಹೋಗುಗಳಿಗೆ, ಯಾವಯಾವ ವ್ಯಕ್ತಿಗಳಿಗೆ ಕೃತಜ್ಞರಾಗಿರುತ್ತೀರಿ? ಎಂದೋ ಜೊತೆ ಕೂತು
ಸಿಗರೇಟ್ ಸೇದುತ್ತಾ ಕಾಫಿ ಕುಡಿದವರು, ಒಳ್ಳೆಯ ಪುಸ್ತಕ, ಚಿತ್ರ, ಸಂಗೀತದ ಅನುಭವ
ದೊರೆಯುವಂತೆ ಮಾಡಿದವರು, ಪ್ರೀತಿಯಿಂದ ಅಪ್ಪಿಕೊಂಡವರು, ಜೀವದ ಕೆಂಡ ಆರಿ
ಬೂದಿಯಾಗುತ್ತಿದ್ದಾಗ ಕಟ್ಟಿಗೆಯನ್ನು ಹಾಕಿ ಉರಿಸಿದವರು, ನಿಮ್ಮ ಮಿತ್ರರು, ಶತ್ರುಗಳು
ಯಾವುದನ್ನು ಯಾರನ್ನು ನೆನೆಯುತ್ತೀರಿ?’ ಅಷ್ಟೇ ಅಲ್ಲಿಗೆ ಅವರ ಮೌನ. ನಮ್ಮಲ್ಲಿ
ಪ್ರಶ್ನೆಯ ಉತ್ತರದ ತಾಕಲಾಟ ನಡೆಯುತ್ತಿರುವಾಗಲೇ ಅವರು ಗಂಡು ಹೆಣ್ಣಿನ ಸಂಬಂಧದ ಬಗ್ಗೆ
ಹೇಳ ತೊಡಗುತ್ತಾರೆ. ಹೆಣ್ಣುಗಂಡಲ್ಲಿನ ವಾಂಛೆ, ಒಬ್ಬರಿಗೊಬ್ಬರು
ನಿಷ್ಠರಾಗಿರುತ್ತೇವಂಬ ವ್ಯಂಗ್ಯ, ನಿಷ್ಠೆ ಮತ್ತು ವಾಂಛಲ್ಯದೊಂದಿಗಿನ ಕಿತ್ತಾಟದಲ್ಲೇ
ವ್ಯಕ್ತಿಯೊಬ್ಬ ಬದುಕಬೇಕಾದ ಅನಿವಾರ್ಯತೆಯ ಬಗ್ಗೆ ಚರ್ಚಿಸುತ್ತಾರೆ.

‘No doubt alcohol, tobacco and so forth are things that a saint must
avoid, but sainthood also a thing that human beings must avoid –
George Orwell’ ಎಂದು ಆತ್ಮಕಥನದ ಶುರುವಿನಲ್ಲೇ ಇದೆ, ಇಡೀ ಪುಸ್ತಕ ಓದಾದ ಮೇಲೆ
ಬಹುಶಃ ಲಂಕೇಶರು ತಮ್ಮ ಜೀವನಕ್ಕೆ ಹೊಂದಿಸಿ ಈ ಪದಗಳ ಹುಡುಕಿದ್ದಾರೆನಿಸಿತು.
ಒಟ್ಟಿನಲ್ಲಿ ಸದಾ ನೆನಪಿನಲ್ಲುಳಿಸುವ, ಇದುವರೆಗೂ ಎಲ್ಲೂ ಕಾಣದ ಲಂಕೇಶರನ್ನು ನನಗೆ
ಪರಿಚಯಿಸಿದ್ದು ’ಹುಳಿ ಮಾವಿನ ಮರ’.

-ರಂಜಿತ್ ಅಡಿಗ, ಕುಂದಾಪುರ

 

“ಕೊಡುವುದು ಬೇಡ ಜೀವಕ್ಕೆ ಜೀವ
ಹಂಚಿಕೊಂಡರೆ ಸಾಕು ನನ್ನೊಡಲ ನೋವ”

ಎಲ್ಲ ಸಂಬಂಧಗಳೂ ಏನನ್ನಾದರೂ ಬೇಡುತ್ತವೆ. ಆದರೆ ಸ್ನೇಹ ಎಂಬ ಬಗೆಯ ಸಂಬಂಧ ಮಾತ್ರ ವಿಶಿಷ್ಟವಾದದ್ದು. ಜೊತೆಗೆ ಅಚ್ಚರಿ ಉಂಟುಮಾಡುವಂತದ್ದು ಕೂಡ. ಅದಕ್ಕೆ ರಕ್ತ ಸಂಬಂಧವಿರಬೇಕಾದ್ದಿಲ್ಲ. ತಂದೆ-ತಾಯಿಯೊಡನೆ ಮಕ್ಕಳಿಗಿರಬೇಕಾದ ಭಯ-ಭಕ್ತಿ ಬೇಡ. ಗಂಡನ ಕಿರಿಕಿರಿ ಸಹಿಸುವ ಹೆಂಡತಿಯ ಸಹನೆ ಬೇಕಿಲ್ಲ. ಸ್ನೇಹಕ್ಕೆ ಬೇಕಾದ್ದು ರಹಸ್ಯಗಳಿಲ್ಲದ ಮುಕ್ತ ಮತ್ತು ಶುದ್ಧ ಮನಸ್ಸು. ಜತೆಗೆ ಬೊಗಸೆ ಪ್ರೀತಿ. ಇವಿಷ್ಟಿದ್ದರೆ ಸ್ನೇಹಕ್ಕೆ ಸಲ್ಲುವ ಸಮಯ ಸಹ್ಯ. ಅರಿವಾಗದೇ ನೋವುಗಳೆಲ್ಲ ಮಾಯ. ಸುಖ-ದುಃಖ ಹಂಚಿಕೊಂಡ ಬಳಿಕ ಮನದಲ್ಲಿ ಮಿಂದ ಭಾವ. ಜತೆಗೆ ಕಳೆದ ಸ್ವಲ್ಪ ಸಮಯದಲ್ಲೇ ಮನಸ್ಸೆಲ್ಲ ಫ್ರೆಶ್!

ಗೆಳೆತನಗಳು ಅನಿರೀಕ್ಷಿತವಾಗಿ ಹುಟ್ಟಬಹುದು ಅಥವ ಅಭಿರುಚಿಗಳ ಕೃಪೆಯಿಂದ ನಾವೇ ಉಂಟುಮಾಡಿಕೊಂಡದ್ದಾಗಿರಬಹುದು. ಕೆಟ್ಟ ಮನದ ಜತೆಗಿನ ಸ್ನೇಹ ಬದುಕನ್ನು ಅಲ್ಲೋಲಕಲ್ಲೋಲ ಮಾಡಿಬಿಡಬಹುದು. ಹಾಗೆಯೇ ಒಳ್ಳೆಯ ಸರ್ಕಲ್ ಬದುಕಿನ ಪಯಣವನ್ನು ಸುಮಧುರವಾಗಿಸಬಹುದು. ಅದೃಷ್ಟವೆಂದರೆ ಈ ಒಳ್ಳೆಯ ಅಥವ ಕೆಟ್ಟವೆಂಬ ಎರಡು ಬಗೆಯನ್ನು ನಾವೇ ವಿಂಗಡಿಸಿ ಬೇಕಾದ್ದನ್ನು ಮಾತ್ರ ಸವಿಯಬಹುದಾದಂತ ಅವಕಾಶ ಈ ಸ್ನೇಹಸಂಬಂಧದಲ್ಲಿ ಇದೆ. ಅಂದರೆ ಸ್ನೇಹಿತರನ್ನು ಆಯ್ಕೆ ಮಾಡಬಹುದು. ಒಮ್ಮೊಮ್ಮೆ ಗೋಮುಖವ್ಯಾಘ್ರರಂತಹ ಮನಸ್ಸುಗಳು ಹೊರನೋಟಕ್ಕೆ ತಿಳಿಯದೇಹೋಗಬಹುದು; ಅಂತವರನ್ನು ಬಲುಬೇಗ ಗುರುತಿಸಿ ವಿಮುಖರಾಗುವುದು ಮನಸ್ಸಿಗೆ ಮತ್ತು ಬದುಕಿಗೆ ಅವಶ್ಯಕತೆ, ಕರ್ತವ್ಯ.

ಗೋಮುಖವ್ಯಾಘ್ರರ ಜಾತಿಗೆ ಸೇರಿದವರೊಡಗಿನ ಸ್ನೇಹ ಕುತ್ತಿಗೆಗೆ ಕತ್ತಿ ಕಟ್ಟಿದಂತೆ. ಕಷ್ಟಬಂದೊಡನೆ ಅಪಾಯವನ್ನು ನಮ್ಮ ಮಡಿಲಿಗೆ ಹಾಕಿ ನಗುತ್ತಾರೆ. ಅಷ್ಟರಲ್ಲಿ ಸಮಯ ಮೀರಿಹೋಗಿರುತ್ತದೆ. ಅದಕ್ಕೇ ಸ್ನೇಹಿತರನ್ನು ಆಯ್ಕೆ ಮಾಡುವಾಗ ಸೂಕ್ಷ್ಮವಾಗಿ ಗಮನಿಸಬೇಕು. ಅವರ ಅಭಿರುಚಿ, ಕಷ್ಟ ಎದುರಾದಾಗ ಅವರ ನಡೆವಳಿಕೆ, ಸ್ಪಂದಿಸುವ ಗುಣ ಇತ್ಯಾದಿ ಎಲ್ಲವೂ ತಾಳೆ ಹೊಂದಿದರೆ ಅವರೇ ನಿಜವಾದ ಸ್ನೇಹಿತರು ಅನ್ನಬಹುದು.

ಸ್ನೇಹ ಕೊಡುವ ಮತ್ತು ಕೂಡ ಹತ್ತು ಹಲವು.ಒಮ್ಮೊಮ್ಮೆ ಗೆಳೆಯನೊಡನೆ ಕಳೆಯಬೇಕಿರುವ ಸಂಜೆಗಾಗಿ ಮನಸ್ಸು ಬೆಳಗ್ಗಿನಿಂದಲೇ ತಹತಹಿಸುತ್ತಿರುತ್ತದೆ.ಒಂದು ದಿನ ಭೇಟಿಯಾಗದೇ ಹೋದರೂ ತೀವ್ರ ಚಡಪಡಿಕೆ. ಮತ್ತೆ ಗೆಳೆಯನ ಮುಖ ಕಂಡಾಗ ಮಾತು ಒಡೆದ ಅಣೆಕಟ್ಟು. ಎಲ್ಲ ಸಂಗತಿ ಕಕ್ಕಿದ ನಂತರ ಮನಸ್ಸು ಹಕ್ಕಿಹಗುರು.

friendship

ಅಂತೆಯೇ ಗೆಳೆತನದ ಉಪಯೋಗವೂ ಬಹಳಷ್ಟುಂಟು. ತಂದೆ-ತಾಯಿಯೊಡನೆ ಚರ್ಚಿಸಲಾಗದ ಸಮಸ್ಯೆಗಳನ್ನು ಜತೆಗೂಡಿ ಪರಿಹರಿಸಿಕೊಳ್ಳಬಹುದು. ನೋವುಗಳಿಗೆ ಸಾಂತ್ವನವಿದೆ. ಮಾತುಗಳಲ್ಲಿ ಜೋಕುಗಳಿರುತ್ತವೆ. ಚರ್ಚೆಯಲ್ಲಿ ಚಿಂತನೆಯ ಘಮವಿರುತ್ತದೆ. ಕೆಲವೊಮ್ಮೆ ಜ್ಞಾನದ ಕೊಟ್ಟು ತೆಗೆದುಕೊಳ್ಳುವಿಕೆಗೂ ಸ್ನೇಹವೇ ವೇದಿಕೆ.

ನಿಜವಾಗಿಯೂ ಈ ಗೆಳೆತನ ಎಂದರೇನು? ಎಲ್ಲರನ್ನೂ ರಕ್ತಸಂಬಂಧಿಗಲಾಗಿ ಮಾಡಲಾಗದ ದೇವರು ನಿಸ್ಸಹಾಯಕತೆಯಿಂದ ಸೃಷ್ಟಿಸಿದ ಸೆಳೆತವಾ? ಭೇಟಿಗಳಲಿ ಬೀಜ ಹಾಕಿ ಅಭಿರುಚಿಗಳಿಂದ ಪೋಷಿಸಿ ಕೊನೆಗೆ ಅಗತ್ಯವೆಂಬ ಫಲ ಬಿಡುವ ಕಲ್ಪವೃಕ್ಷವಾ? ಪ್ರಪಂಚವೆಲ್ಲಾ ಎದುರಾದಾಗ ನಿನ್ನೊಡನಿರುವವನೆ ನಿಜವಾದ ಗೆಳೆಯ ಅಂದರು ಯಂಡಮೂರಿ.ಕಷ್ಟಕಾಲದಲ್ಲಿ ನೆರವಾಗುವುದೇ ಸ್ನೇಹಿತನ ಗುಣ ಎಂದಿತು ಇಂಗ್ಲೀಷ್ ನಾಣ್ಣುಡಿ. ಆದರೆ ಸ್ನೇಹದ ಸೆಳೆತಕ್ಕೊಳಗಾದ ಪ್ರತೀ ಜೀವ ಅನ್ನುವುದೊಂದೇ

 ” ಎಲ್ಲಾ ಅರ್ಥಗಳಿಗೂ ಮೀರಿದ ಬಂಧ ಸ್ನೇಹ!”

ರೂಪಾ ಸತೀಶ್, ಬೆಂಗಳೂರು.

 

42-15426165

ಜೀವತಾಣದ ಜನಜಾತ್ರೆಯ ನಡುವೆ
ಕಳೆದು ಅಳೆದು ಪ್ರತಿ ಘಳಿಗೆ,
ವಿರಸದ ಏರಿಳಿತಗಳಲ್ಲಿ ಬೇಸತ್ತು ಬಡವಾಗಿದ್ದರು ಮನ….
ಜಿನುಗುತಿರಲಿ ಬಾಳೆಂಬ ಚಿಮ್ಮುವ ಚೇತನ !!

ಬಯಸಿ ಬಯಸದೆಯೋ ಹೃದಯಗಳಿಗೆ
ಆಗಿ ಹೋಗುವ ನಿಶ್ಚಿತ ಪೆಟ್ಟು ಕಲೆಗಳು,
ಅಗ್ನಿಕುಂಡದ ನೋವನ್ನು ನುಂಗಿ ಬೆಂದರು ಜೀವ….
ಬೆಳಗುತಿರಲಿ ಬಾಳೆಂಬ ಹುರಿದುಂಬಿದ ಚೇತನ !!

ಬದುಕಿನ ಲೆಕ್ಕಾಚಾರಗಳು ತಲೆಕೆಳಗಾಗುತ್ತ
ಬವಣೆಗಳನ್ನರಿತ ಗಣಿತಶಾಸ್ತ್ರಜ್ಞ ಮೇಲೆ ಕುಂತು ನೋಡುತ್ತಾ,
ನಿನ್ನ ಗಣನೆ ತಪ್ಪು ತಪ್ಪು ಎಂದು ಪ್ರತೀಸಾರಿ ಸಾರಿದರೂ….
ಆರದಿರಲಿ ಬಾಳೆಂಬ ಪ್ರಜ್ವಲಿತ ಚೇತನ !!

ತುಳಿದು ಅಳಿದು ಹೊಸಕಿಹಾಕುವ ಮಾತುಗಳ ಗಾಣ
ಹರಿದು ಒಗೆದು ಜಡಿದುಹಾಕುವ ಮನುಜಕುಲದ ತಾಣ,
ಅಲ್ಲಲ್ಲಿ ಬೀಳುವ ಛಡಿ ಏಟಿನ ಅವಮಾನಗಳ ನಡುವೆಯೂ….
ಕುಗ್ಗದಿರಲಿ ಬಾಳೆಂಬ ಉತ್ತೇಜಿತ ಚೇತನ !!

-ಹೇಮಾ ಪವಾರ್ , ಬೆಂಗಳೂರು.
ಮನಸು ಹೇಳಬಯಸಿದೆ ನೂರೊಂದು,
ತುಟಿಯ ಮೇಲೆ ಬಾರದಿದೆ ಮಾತೊಂದು,
ವಿದಾಯ ಗೆಳಯನೆ, ವಿದಾಯ ಗೆಳತಿಯೆ
ವಿದಾಯ ಹೇಳಬಂದಿರುವೆ ನಾನಿಂದು!

ಮತ್ತೊಮ್ಮೆ ಈ ಹಾಡು ಪದೇ ಪದೇ ನೆನಪಾಗುತ್ತಿದೆ. ಮೊದಲ ಬಾರಿಗೆ ಶಾಲೆಯಲ್ಲಿ
ಕೇಳಿದ್ದೆ, ಅವತ್ತು ನಮಗೆ ಅಂದರೆ ಆ ವರ್ಶದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸೆಂಡ್
ಆಫ್ ಕಾರ್ಯಕ್ರಮವಿತ್ತು. ಶಾಲೆಯ ಜೀವನ ಮುಗಿಯ ಹೊರಟಿತ್ತು, ಕಾಲೇಜಿನ ಬಣ್ಣಬಣ್ಣದ
ಬದುಕು ಆ ಕಡೆ ನಿಂತು ಕೈ ಬೀಸಿ ಕರೆಯುತಿತ್ತು. ಎಷ್ಟೇ ಪ್ರಭುದ್ದವಾಗಿ ಆಲೋಚಿಸಿದರೂ,
ಸ್ಕೂಲ್ ಯುನಿಫಾರಂನಲ್ಲಿದ್ದರೆ ನಾವು ಚಿಕ್ಕವರೆಂದೇ ದೊಡ್ಡವರ (?) ಅಭಿಪ್ರಾಯ.
ದಿನಕ್ಕೊಂದು ಬಣ್ಣದ ಬಟ್ಟೆ, ಶಾಲೆಯ ಪ್ರಾರ್ಥನೆ, ಎಕ್ಸರ್ಸೈಸ್ ಗಳಿಂದ ಮುಕ್ತಿ,
ಬೇಕಿದ್ದ ಕ್ಲಾಸಿಗೆ ಹೋಗುವ ಸ್ವಾತಂತ್ರ್ಯ, ನಿಜಕ್ಕೂ ಕಾಲೇಜೊಂದು ಕಿನ್ನರ ಲೋಕ ಎಂಬ
ಭ್ರಮೆ. ಸಂಭ್ರಮ, ಭಯ, ಬೇಸರಗಳ ಮಿಶ್ರಭಾವದಿಂದ ದಿಗ್ಮೂಢರಾಗಿ, ಒಬ್ಬರಿಗೊಬ್ಬರು ಏನು
ಮಾತಾಡಿಕೊಳ್ಳಬೇಕು ಎಂಬುದೂ ಹೊಳೆಯುತ್ತಿರಲಿಲ್ಲ. ತಮ್ಮ ಕಡೆಯ ಕರ್ತವ್ಯವೆಂಬಂತೆ
ಉಪಧ್ಯಾಯರೆಲ್ಲ, ’ಯಾವ ಕಾಲೇಜ್ ಸೇರ್ತಿ?’ ’ಸೈನ್ಸಾ ಕಾಮರ್ಸಾ?’ ಎಂದು
ಕೇಳುತ್ತಿದ್ದರೆ, ಪಕ್ಕದವಳು ಕಾಮರ್ಸ್ ಅಂದಿದ್ದನ್ನೇ ನಿಷ್ಠೆ ಇಂದ
ಪುನರುಚ್ಚರಿಸಿದ್ದು, ಆಗಿನ್ನು ಸ್ಲಾಮ್ ಬುಕ್ ಗಳ ಅಭ್ಯಾಸವಾಗಿರಲಿಲ್ಲವಾದ್ದರಿಂದ,
ಕಡೆಯ ದಿನದ ಗ್ರೂಪ್ ಫೋಟೋಗೆ ಫೋಸ್ ಕೊಟ್ಟು, ಗುಂಪು ಗುಂಪಾಗಿ ಸಹಪಾಠಿಗಳ ಜೊತೆ
ಶಾಲೆಯಿಂದ ಹೊರಹೊರಟ ಚಿತ್ರ ಮೊನ್ನೆ ಮೊನ್ನೆಯಷ್ಟೇ ನಡೆಯಿತೇನೋ ಎಂಬಂತೆ ಹಸಿಯಾಗಿದೆ.

ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ, ಕಾಲೇಜಲ್ಲಿ ನಾವಂದುಕೊಂಡದ್ದೆಲ್ಲ ಇತ್ತು, ಆದರೆ
ಕೆಲವೇ ದಿನಗಳಲ್ಲಿ ಇಷ್ಟೇನೆ ಅನ್ನಿಸಹತ್ತಿತ್ತು. ಶಾಲೆಯ ಸಹಪಾಠಿಗಳ ನೆನಪು
ಮಾಸತೊಡಗಿತ್ತು. ಹೊಸ ಗೆಳತಿ/ಗೆಳೆಯರು ಅದಾಗಲೇ ಹಳಬರಾಗ ತೊಡಗಿದ್ದರು. ಕ್ಲಾಸ್ ಬಂಕ್
ಮಾಡುವುದು, ಸಿನಿಮಾ ನೋಡುವುದು, ದುಡ್ಡಿಗಾಗಿ ಮನೆಯಲ್ಲಿ ಸುಳ್ಳು ಹೇಳುವುದು ಯಾವುದೂ
ತಪ್ಪೆನಿಸದ ಮಟ್ಟಿಗೆ ಒಗ್ಗಿ ಹೋಗಿತ್ತು. ಕನ್ನಡ ಟೀಚರ್ ಹೇಳಿದ್ದ ಪದ್ಯವನ್ನು ಕಂಠಪಾಠ
ಮಾಡಿ, ರಾಗವಾಗಿ ಒಪ್ಪಿಸುತ್ತಿದ್ದಾಗಿನ ಮುಗ್ಧತೆ ಅದೆಲ್ಲೋ ಕಾಣದಂತೆ ಕಳೆದು
ಹೋಗಿತ್ತು. ಗೆಳತಿಯರ ಗುಂಪಲ್ಲಿನ ತರಲೆಗಳು, ಇಷ್ಟಿಷ್ಟೇ ಮಾತಿಗೂ ಇಷ್ಟಗಲ ನಗು,
ಕ್ಯಾಂಪಸ್ಸಿನಲ್ಲಿ ಹಾದು ಹೋಗುತ್ತಿದ್ದರೆ ಬೆನ್ನಿಗೇ ಅಂಟಿಕೊಂಡಂತೆನಿಸುತ್ತಿದ್ದವನ
ಕಣ್ಣುಗಳು, ಕಾಲೇಜಿನ ಪುಸ್ತಕಗಳಲ್ಲಿನ ಪಾತ್ರಗಳು, ರಂಗು ರಂಗೆನಿಸಿದ್ದ ಕಾಲೇಜ್ ಡೇ,
ಕಡೆಗೂ ಸೀರೆ ಉಡಿಸಿದ ಎತ್ನಿಕ್ ಡೇ, ಬಹುಮಾನ ತಂದುಕೊಟ್ಟ ಪ್ರಬಂಧ ಸ್ಪರ್ಧೆ,
ಅರ್ಧಕ್ಕೆ ಓಡಿ ವಾಪಸ್ ಬಂದ ರನ್ನಿಂಗ್ ರೈಸ್ ಕಾಂಪಿಟೇಶನ್ನು, ಹಹ್! ಮುಗಿಯದ
ನೆನಪುಗಳು. ಅಷ್ಟೇ, ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಅಂತಾರಲ್ಲ ಹಾಗೆ ಮುಗಿದು
ಹೋಗಿತ್ತು ಪಿ.ಯು.ಸಿ ಯ ಎರಡು ವರ್ಷ.

ಮತ್ತೊಂದು ಫೇರ್ ವೆಲ್. ಇಡೀ ವರ್ಷದ ತರಲೆಗಳನ್ನು ನೆನಪಿಸಿಕೊಳ್ಳುತ್ತ,
ದೂರವಾಗುತ್ತಿರುವುದಕ್ಕೆ ಬೇಸರಿಸಿಕೊಳ್ಳುತ್ತಾ, ಮತ್ತೆ ಸಿಗಬೇಕೆಂದು ಒಬ್ಬರಿಗೊಬ್ಬರು
ಆಜ್ಞಾಪಿಸುತ್ತಾ. ಚಿತ್ರ ವಿಚಿತ್ರವಾಗಿ ಸ್ಲಾಮ್ ಬುಕ್ ಗಳನ್ನು ತುಂಬಿಸುತ್ತಾ
ಸಂಭ್ರಮಿಸುತ್ತಿದ್ದೆವು. ಪದವಿ ಓದಲು ಹೊರಟಿದ್ದವರು, ಮದುವೆಯಾಗ ಹೊರಟಿದ್ದವರು,
ಮತ್ತಿತರ ಕೋರ್ಸ್ ಗಳಿಗೆ ಸೇರಬೇಕೆಂದಿದ್ದವರು, ಕೆಲಸ ಮಾಡುತ್ತೇನೆನ್ನುತ್ತಿದ್ದವರು,
ಹೀಗೆ ಪ್ರತಿಯೊಬ್ಬರ ಅಭಿಪ್ರಾಯವೂ ಕೇಳಿ, ಹಿಂದಿನ ಹಾಗೇ ಅದರಲ್ಲೊಂದು ಪುನರುಚ್ಚರಿಸಿ
ಪಿ.ಯು.ಸಿ. ಮುಗಿಸಿದ್ದಾಯ್ತು.

emptyness

ಪದವಿ ಸೇರಿದ ಮೇಲೆ ಕ್ಲಾಸುಗಳಿಗೆ ಹಾಜರಾಗಲು ಇನ್ನಷ್ಟು ಸೋಂಬೇರಿತನ. ದಿನವೂ ತಪ್ಪದೇ
ಕಾಲೇಜಿನ ಕ್ಯಾಂಪಸ್ಸಿನಲ್ಲಿರುತ್ತಿದ್ದ ನಾವು, ಕ್ಲಾಸುಗಳಿಗಂತೂ ತೀರ ಅಪರೂಪ.
ಕ್ಯಾಂಟೀನ್ ನಲ್ಲಿ, ಥೇಟರಿನಲ್ಲಿ, ಗೆಳೆಯ ಗೆಳತಿಯರ ಮನೆಗಳಲ್ಲೇ ನಮ್ಮ ಓದು
ಸಾಗುತ್ತಿದ್ದಿದ್ದು. ಪರೀಕ್ಷೆ ಹಿಂದಿನ ದಿನ ಒಂದು ನಿಮಿಷವೂ ಹಾಳು ಮಾಡದೇ
ನಿಷ್ಠೆಯಿಂದ ಓದಿ ಅಷ್ಟೇ ನಿಷ್ಠೆಯಿಂದ ಅಲ್ಲಿ ಇಲ್ಲಿ ಕಾಪಿ ಮಾಡಿ ಬರೆದು ಅದು ಹೇಗೋ
ಪಾಸ್ ಮಾಡಿ ಮುಂದಿನ ಸೆಮಿಸ್ಟರಿಗೆ ಹಾರುತ್ತಿದ್ದೆವು. ನಮ್ಮ ಲೆಕ್ಕಾಚಾರ ಚೂರು
ತಪ್ಪಾಗಿದ್ದಲ್ಲಿ ಆಗೊಮ್ಮೆ ಈಗೊಮ್ಮೆ ಒಂದೊಂದು ಸೆಮಿಸ್ಟರ್ ನಲ್ಲಿ ಒಂದೋ ಎರೆಡೋ
ವಿಷಯಗಳು ಉಳಿದುಕೊಳ್ಳುವುದು, ಊಟ ತಿಂಡಿಯಷ್ಟೇ ಸಹಜವೆಂಬುದು ನಮ್ಮೆಲ್ಲರ ಒಮ್ಮತದ
ಅಭಿಪ್ರಾಯವಾಗಿಬಿಟ್ಟಿತ್ತು. ಹಾಗೂ ಹೀಗೂ ಕಡೆಯ ಸೆಮಿಸ್ಟರು ಮುಟ್ಟಿ, ಪರೀಕ್ಷೆಗಳನ್ನು
ಮುಗಿಸಿ  ಹೊರಬಂದರೆ, ಮನಸ್ಸು ಮತ್ತೊಮ್ಮೆ ವಿದಾಯ ಹೇಳಲು ತಯಾರಾಗುತ್ತಿತ್ತು. ’ಫೋನ್
ಮಾಡ್ತಿರು, ಮೆಸೇಜ್ ಮಾಡ್ತಿರು, ಮೇಲ್ ಮಾಡ್ತಿರು, ಟಚ್ ನಲ್ಲಿರು’ ಎಲ್ಲವೂ
ಹೇಳಿಕೊಂಡಿದ್ದಾಯ್ತು, ಕಡೆಯ ಭೇಟಿಯ ಸೆಲೆಬ್ರೇಶನ್ ಎಂಬಂತೆ ಒಂದು ಸಿನಿಮಾ ನೋಡಿ
ಬಂದ್ವಿ. ಗುಂಪು ಚದುರಿತು. ಮನಸು ಹೇಳಬಯಸಿದ್ದ ನೂರೊಂದು ಮಾತೂ, ಮೌನದಲ್ಲೇ
ವ್ಯಕ್ತವಾಗುತ್ತಿತ್ತು.

ಹಾಗೆ ನೋಡಿದರೆ ಬೇಸರಿಸಿಕೊಳ್ಳಲು ಕಾರಣಗಳೇ ಬೇಕಿಲ್ಲ. ಬೆಳಿಗ್ಗೆ ಹಾಲಿನವನು ಬರದೇ ರಜೆ
ಹಾಕಿದರೂ ಮನಸ್ಸು ಮುದುಡುತ್ತದೆ.ಗೋಡೆಗೆ ನೇತು ಹಾಕಿದ ಕ್ಯಾಲೆಂಡರ್ ನ್ನು ಕಂಡರೂ ಸಾಕು,
ಇಷ್ಟು ವಯಸ್ಸಾದರೂ ಎನೂ ಸಾಧಿಸದೇ ಹೋದೆನಲ್ಲಾ ಎಂಬುದು ಕೂಡ ಸಾಕು ಮನಸ್ಸು ಬೇಸರಿಸಿ
ಮನದ ಚಿಪ್ಪೊಳಗೆ ಅವಿತು ಕುಳಿತುಕೊಳ್ಳಲು!       

ಈ ಥರದ ಬೇಸರದ ಗಳಿಗೆಗಳು ಬಹುಶಃ ಪ್ರತಿ ವರುಷದ ಹುಟ್ಟುಹಬ್ಬದ ದಿನ ತಪ್ಪದೇ ಕಾಡುತ್ತದೆ.
ಹಾಗೆ ಅಲೋಚಿಸಿದರೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬಾರದು,pen-and-paper
ಎರಡು ನಿಮಿಷದ ಮೌನ ಆಚರಣೆ ಮಾಡಬೇಕು!

ಅದೇನೆ ಇರಲಿ. ಇಂತಹ ಮುದುಡಿದ ಮನವ ಅರಳಿಸಲು ನಾನು ಮೊರೆ ಹೋಗುವುದು ಪುಸ್ತಕಗಳಿಗೆ.   ಕೆಲವೊಂದು ವ್ಯಕ್ತಿಗಳಿಗೆ.ಸುಮ್ಮನೆ ಅರೆಗಳಿಗೆ ನೆನೆದುಕೊಂಡರೂ ಸಾಕು ಮನ ಪುಟಿದೆದ್ದ ಚೆಂಡು.
ಪ್ರತಿ ಮನುಷ್ಯನೊಳಗೂ ಅದಮ್ಯ ಪ್ರತಿಭೆಯ ಊಟೆಯಿರುತ್ತದೆ.ಪ್ರತಿದಿನವೂ ಸ್ವಲ್ಪ ಹೆಚ್ಚು ಕಷ್ಟಪಟ್ಟರೆ
ಅದನ್ನು ಹೊರತರಬಹುದು.ಸ್ವರ್ಗ-ನರಕಗಳೆನ್ನುವುದಿದ್ದರೆ ಸತ್ತ ನಂತರದ ಬದುಕೆನ್ನುವುದಿದ್ದರೆ ಅದನ್ನು ನಿರ್ಧರಿಸುವುದು ನಮ್ಮೊಳಗಿನ
ಪ್ರತಿಭೆಯನ್ನು ಎಷ್ಟರಮಟ್ಟಿಗೆ ಉಪಯೋಗಿಸಿದೆವು ಅನ್ನುವುದರ ಮೇಲೆ ಮಾತ್ರ ಅಂತ ಗಾಢ ವಾಗಿ
ನಂಬುವವನು ನಾನು.  ಹೀಗಾಗಿ ಎನೂ ಸಾಧಿಸಲಿಲ್ಲ ಎಂಬ ವಿಷಯ ಬೇರೆಲ್ಲದಕ್ಕಿಂತ ಹೆಚ್ಚು ಆಳವಾಗಿ ಕಾಡಿಸುವ
ವಿಚಾರ ನನ್ನ ಪಾಲಿಗೆ. ಆದ್ದರಿಂದ ಈ ವಿಷಯದ ನಾಸ್ಟಾಲ್ಜಿಯ ಆಗಾಗ್ಗೆ ಹಸಿವಿನಂತೆ ಕಾಡುತಿರುತ್ತದೆ.
ಇದಕ್ಕೆ ಮದ್ದಾಗಿ ಕೆಲ ಸಲ ಯಂಡಮೂರಿ ಪುಸ್ತಕಗಳನ್ನು ಓದುತಿರುತ್ತೇನೆ. ಗುರಿ ಏನಂತ ನಿರ್ಧರಿಸುವುದರಲ್ಲಿ,
ಗುರಿಯತ್ತ ಹೆಜ್ಜೆಯಿಡುವತ್ತ ನಿಜವಾದ ನೆಮ್ಮದಿ ಸಂತೃಪ್ತಿ ಏನೆಂದು ತಿಳಿದುಕೊಳ್ಳಲು ಇದು ಬಹಳ ಸಹಾಯಕಾರಿ.
ಅದೂ ಅಲ್ಲದೇ ಸ್ಟೀಫನ್ ಹಾಕಿಂಗ್, ಹೆಲೆನ್ ಕೆಲ್ಲರ್ ನೀಲ್ ಆರ್ಮ್ ಸ್ಟ್ರಾಂಗ್ ಅಂತವರು ಜೀವನದಲ್ಲಿ ನಡೆದು
ಬಂದ ಹಾದಿಯನ್ನು ನೆನೆದುಕೊಂಡರೂ ನಿಮ್ಮಲ್ಲಿ ಜೀವನದೆಡೆಗೆ ಅನಂತ ಉತ್ಸಾಹ ಉಕ್ಕದಿದ್ದರೆ ನನ್ನಾಣೆ!

ಕಡು ಬಡತನದಲ್ಲಿದ್ದ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಂತ ಪರಿ, ಪದ್ಮನಾಭನಗರದ ರೂಮೊಂದರಲ್ಲಿ
ಕುಳಿತು ಕನ್ನಡದ ಲಕ್ಷ ಲಕ್ಷ ಜನರಿಗೆ ಪ್ರೇರಣೆ ನೀಡುತಿರುವ ಬೆಳಗೆರೆಯ ಬರಹಗಳು ಇವೆಲ್ಲವೂ ಹೇಳುವುದೊಂದೇ,
“ನೀನು ಏರಬೇಕೆಂದಿರುವ ಎತ್ತರ ನೀನು ಈಗಿರುವ ಸ್ಥಿತಿಯಲ್ಲಿಲ್ಲ… ನಿನ್ನ ಮನದೊಳಗಡೆ ನೀನಿರಿಸಿಕೊಂಡಿರುವ
ಎತ್ತರಕ್ಕಿಂತಲೂ ಮಿಗಿಲಾಗಿ ಎಷ್ಟು ಎತ್ತರ ಏರಬಲ್ಲೆ ಎಂಬುವ ಉತ್ಸಾಹದಲ್ಲಿ ಮತ್ತು ಅದರೆಡೆಗೆ ಹೋಗುವ ಶ್ರಧ್ದೆಯಲ್ಲಿದೆ”

ಇಂತಹ ಬದುಕು-ಬರಹಗಳು ನಮ್ಮನ್ನು ಒಳಗಿಂದ ದಿನೇ ದಿನೇ ಬೆಳೆಸುತ್ತಿರುವಾಗ ಇನ್ನು ಬೇಸರವೆಲ್ಲಿಯದು?
ಶ್ರಧ್ದೆ ಅಂಕಿತಭಾವಗಳು ತಮ್ಮ ಬ್ರಹ್ಮಾಂಡ ರೂಪ ಪ್ರದರ್ಶಿಸಬೇಕಾದರೆ ಗುಬ್ಬಚ್ಚಿಯಾಕಾರದ ಬೇಸರ ತಾನೆ
ಏನು ಮಾಡಬಲ್ಲದು?!

ಕಣ್ಣು ಮಿಟುಕಿಸದೆ

ಆಂತರಿಕ ಯುದ್ಧಗಳಲ್ಲಿ ತೊಡಗಿದ್ದ ಜಪಾನಿನಲ್ಲಿ ಸೈನ್ಯ ಊರೊಂದಕ್ಕೆ ನುಗ್ಗಿದರೆ zen ಕೈಗೆ ಸಿಕ್ಕವರನ್ನೆಲ್ಲ ಕೊಂದು ಊರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದರು. ಆ ಒಂದು ಹಳ್ಳಿಯಲ್ಲಿನ ಜನರು ಸೈನ್ಯ ಆಕ್ರಮಣ  ಮಾಡುವ ಮುನ್ನವೇ ತಮ್ಮ ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು ಪಲಾಯನ ಗೈದಿದ್ದರು.

ಹಳ್ಳಿಗೆ ದಾಳಿಯಿಟ್ಟ ಸೈನ್ಯಕ್ಕೆ ಬರಿದಾದ ಮನೆಗಳು, ಮಾರುಕಟ್ಟೆಗಳು ಕಂಡವು. ಆದರೆ ಒಂದು ವಿಹಾರದಲ್ಲಿ ವಯಸ್ಸಾದ ಒಬ್ಬ ಝೆನ್ ಗುರು ಮಾತ್ರ ಉಳಿದಿದ್ದ. ಆ ವೃದ್ಧ ಗುರುವಿನ ಬಗ್ಗೆ ಕುತೂಹಲ ಉಂಟಾಗಿ ಸೈನ್ಯದ ದಂಡನಾಯಕ ಆತನನ್ನು ನೋಡಲು ವಿಹಾರಕ್ಕೆ ಬಂದ.

ದಂಡನಾಯಕನನ್ನು ಕಂಡೂ ಗುರುವು ವಿಚಲಿತನಾಗಲಿಲ್ಲ. ತನ್ನನ್ನು ಕಂಡು ನಡುಗುವ, ಮಂಡಿಯೂರಿ ಕುಳಿತುಕೊಳ್ಳುವವರನ್ನೇ ಎಲ್ಲೆಡೆ ಕಂಡಿದ್ದ ದಂಡನಾಯಕನಿಗೆ ಕೋಪ ನೆತ್ತಿಗೇರಿತು.

“ಮೂರ್ಖ! ನೀನು ಯಾರ ಎದುರು ನಿಂತಿದ್ದೀಯ ಅಂತ ಗೊತ್ತಿದೆಯಾ? ಕಣ್ಣು ಮಿಟುಕಿಸದೆ ನಾನು ನಿನ್ನ ಕತ್ತು ಸೀಳಿಹಾಕಬಲ್ಲೆ” ದಂಡನಾಯಕ ಅಬ್ಬರಿಸಿದ.

ಗುರು ತಣ್ಣನೆಯ ಧ್ವನಿಯಲ್ಲಿ ಉತ್ತರಿಸಿದ, “ನೀನು ಯಾರ ಎದುರು ನಿಂತಿದ್ದೀಯ ಅಂತ ತಿಳಿದಿದೆಯಾ? ಕಣ್ಣು ಮಿಟುಕಿಸದೆ ನಾನು ನಿನ್ನ ಕತ್ತಿಗೆ ಕತ್ತು ಒಡ್ಡಬಲ್ಲೆ.”

ಈಗ ಹೇಗಿದೆ

ಸುಪ್ರಸಿದ್ಧ ಝೆನ್ ದೇವಾಲಯವೊಂದರಲ್ಲಿ ಯುವಕ ಸನ್ಯಾಸಿಯೊಬ್ಬನಿಗೆ ತೋಟವನ್ನು ನೋಡಿಕೊಳ್ಳುವ ಕೆಲಸ ಕೊದಲಾಗಿತ್ತು. ಅವನಿಗೆ ಹೂಗಳು, ಗಿಡಮರಗಳು ಎಂದರೆ ಬಹಳ ಪ್ರೀತಿ, ಅದಕ್ಕೇ ಆ ಕೆಲಸ ಕೊಟ್ಟಿದ್ದರು. ಆ ದೇವಸ್ಥಾನದ ಪಕ್ಕದಲ್ಲಿ ಇನ್ನೊಂದು ಹಳೆಯ ಪುಟ್ಟ ದೇವಸ್ಥಾನವಿತ್ತು. ಅಲ್ಲೊಬ್ಬ ವಯಸ್ಸಾದ ಝೆನ್ ಗುರು ಇದ್ದ.
ಒಂದು ದಿನ ಈ ಸುಪ್ರಸಿದ್ಧ ದೇವಾUntitled pictureಲಯಕ್ಕೆ ಯಾರೋ ಅತಿಥಿಗಳುಬರುವರಿದ್ದರು. ಯುವಕ ಸನ್ಯಾಸಿ ಹೆಚ್ಚು ಎಚ್ಚರಿಕೆಯಿಂದ ತೋಟದ ಕೆಲಸ ಮಾಡುತ್ತಿದ್ದ. ಕಳೆಗಳನ್ನು ಕಿತ್ತ, ತರಗೆಲೆಗಳನ್ನೆಲ್ಲ ಗುಡಿಸಿದ, ಮುಳ್ಳಿನ ಪೊದೆಗಳನ್ನು ಸವರಿದ,  ಸೊಟ್ಟ ಪಟ್ಟ ಬೆಳೆದಿದ್ದ ಬಳ್ಳಿಗಳನ್ನು ನೇರ ಮಾಡಿದ…ಹೀಗೇ. ತೋಟ ಅತ್ಯಂತ ಸ್ವಚ್ಛವಾಗಿಬಿಟ್ಟಿತ್ತು. ಇದನ್ನೆಲ್ಲ  ಪಕ್ಕದ  ಪುಟ್ಟ ದೇವಾಲಯದ  ಮುದುಕ ಸನ್ಯಾಸಿ ಕುತೂಹಲದಿಂದ ನೋಡುತ್ತಿದ್ದ.  ಎರಡೂ ದೇವಾಲಯಗಳ ನಡುವೆ ಪುಟ್ಟ ಗೋಡೆ ಇತ್ತು.

ಕೆಲಸ ಮುಗಿಸಿದ ಯುವಕ ಸನ್ಯಾಸಿ ಹೆಮ್ಮೆಯಿಂದ "ಹೇಗಿದೆ? ಚೆನ್ನಾಗಿದೆ ಅಲ್ಲವೇ?" ಎಂದು ಕೇಳಿದ. ವೃದ್ಧ ಸನ್ಯಾಸಿ ತನ್ನ ಕೆಲಸ ಮೆಚ್ಚುವನೆಂಬ ವಿಶ್ವಾಸ ಅವನಿಗೆ.
"ಓಹೋ, ಚೆನ್ನಾಗಿದೆ! ಆದರೆ ಏನೋ ಕೊರತೆ ಅನ್ನಿಸುತ್ತದೆ. ದಯವಿಟ್ಟು ಈ ಗೋಡೆ ಹತ್ತಿ ಬರುವುದಕ್ಕೆ ಸಹಾಯಮಾಡು, ಸರಿ ಮಾಡಿಕೊಡುತ್ತೇನೆ" ಅಂದ ವೃದ್ಧ.
ಕೊಂಚ ಹಿಂಜರಿದರೂ ಯುವಕ ಸನ್ಯಾಸಿ ವೃದ್ಧನು ಗೋಡೆ ಏರಿ ಬರುವುದಕ್ಕೆ ಸಹಾಯ ಮಾಡಿದ. ಸರಿ, ವೃದ್ಧ ನೇರವಾಗಿ ತೋಟದ ನಡುವೆ ಇದ್ದ ಮರದ ಬಳಿಗೆ ಹೋದ. ಜೋರಾಗಿ ಮರವನ್ನು ಹಿಡಿದು ಅಲುಗಿಸಿದ. ದಳದಳನೆ ಮರದೆಲೆಗಳು ಸುತ್ತಲೆಲ್ಲ ನೆಲದ ಮೇಲೆ ಉದುರಿ ಬಿದ್ದವು. "ನೋಡಿದೆಯಾ, ಈಗ ಹೇಗಿದೆ? ಸರಿ, ನನ್ನನ್ನು ಆಚೆಕಡೆಗೆ ಕಳಿಸು" ಎಂದ ವೃದ್ಧ.

zen-stones

ಈ ಕ್ಷಣ

ಜಪಾನಿನ ಯೋಧನೊಬ್ಬ ಯುದ್ಧದಲ್ಲಿ ಬಂಧಿತನಾಗಿ ಸೆರೆಮನೆಗೆ ತಳ್ಳಲ್ಪಟ್ಟ. ಆ ರಾತ್ರಿ ಆತನಿಗೆ ನಿದ್ದೆ ಹತ್ತಲಿಲ್ಲ. ಮರುದಿನವನ್ನು ನೆನೆಸಿಕೊಂಡು ಆತ ಕಂಗಾಲಾಗಿದ್ದ. ಮರುದಿನ ತನಗೆ ಎದುರಾಗಲಿರುವ ಹಿಂಸೆ, ಅವಮಾನಗಳನ್ನು ನೆನೆದು ಆತ ಆತಂಕಗೊಂಡಿದ್ದ. ಆಗ ಆತನಿಗೆ ತನ್ನ ಝೆನ್ ಗುರುವಿನ ಮಾತುಗಳು ನೆನಪಾದವು,
“ನಾಳೆ ಎಂಬುದು ಸತ್ಯವಲ್ಲ. ಅದೊಂದು ಮಾಯೆ. ಈ ಕ್ಷಣ ಎಂಬುದು ಮಾತ್ರ ಸತ್ಯ.”

ಯೋಧ ಗುರುವಿನ ಮಾತುಗಳನ್ನು ಮನನ ಮಾಡುತ್ತ ತನ್ನೊಳಗಿಳಿಸಿಕೊಂಡ. ಆತನ ಮನಸ್ಸು ಶಾಂತವಾಯಿತು, ಕೂಡಲೆ ನಿದ್ದೆಗೆ ಜಾರಿದ.

‘ಜಟಾಯು’, ಬೆಂಗಳೂರು

ಅವಳನ್ನು ನೋಡಲು ತುಂಬಾ ಹುಡುಗರು ಬರುತ್ತಿರುತ್ತಾರೆ.ಆದರೆ ಯಾರೂ ಅವಳನ್ನು ಒಪ್ಪುತ್ತಿರಲಿಲ್ಲ. ಅವಳಲ್ಲಿ ಹಣವಿಲ್ಲವೆಂದಲ್ಲ. ಅವಳ ಮೊಮ್ಮಗನೂ ತಿಂದು ತೇಗುವಷ್ಟು ಆಸ್ತಿಯಿದೆ. ಹಾಗಾದರೆ ಅವಳು ಸೌಂದರ್ಯವತಿಯಲ್ಲವೇ? ಕುರೂಪಿಯೇ? ಉಹೂಂ.. ಪದ್ಮಿನಿ ಜಾತಿಯ ಹುಡುಗಿ; ಸ್ವಂತ ಕಣ್ಣು ಬೀಳಬೇಕು ಅಂಥ ಸ್ಪುರದ್ರೂಪಿ ಹೆಣ್ಣವಳು.
ಅದೂ ಅಲ್ಲವಾದರೆ, ಸಿನೆಮಾದಲ್ಲಿ ತೋರಿಸುವಂತೆ " ಹಣವಂತರೆಲ್ಲಾ ಗುಣವಿರುವವರಲ್ಲ" ಎಂದುಕೊಂಡು ಕೆಟ್ಟವಳಿರಬೇಕು ಅಂತ ಊಹಿಸುವುದಾದರೆ ಅದೂ ನಿಜವಲ್ಲ. ಅವಳು ಒಳ್ಳೆಯವಳೇ.
ಅವಳಿಗಿರುವ ಒಂದೇ ಕೆಟ್ಟ(?) ಗುಣವೆಂದರೆ ನಿರೀಕ್ಷೆ! ಅದೇ ಅವಳನ್ನು ಎಲ್ಲರಿಂದ ದೂರ ಮಾಡುತ್ತಿರುವುದು!!

**********

ಅವತ್ತು ಮನೆಯಲ್ಲಿ ಸಡಗರ, ಸಂಭ್ರಮ. ಯಾಕೆಂದರೆ ಆ ದಿನ ಶ್ಯಾಮಲಾಳನ್ನು ನೋಡಲು ಹುಡುಗನೊಬ್ಬ ಬಂದಿದ್ದ. ಅದು ಶ್ಯಾಮಲಾಳ ತಂದೆ-ತಾಯಿಗೆ ಮಾತ್ರ ಸಡಗರ. ಅವಳಿಗದು ಮಾಮೂಲಿಯಾಗಿಬಿಟ್ಟಿದೆ.
ಅವಳು ಮರೆಯಲ್ಲಿ ನಿಂತು ತಂದೆ-ತಾಯಿಯ ಮಾತನ್ನು ಆಲಿಸುತ್ತಿದ್ದಳು. ಹುಡುಗ ಡಾಕ್ಟರಂತೆ. ಒಳ್ಳೆಯ ಮನೆತನದವನಂತೆ.
ಶ್ಯಾಮಲಾಳೇ ಅವರೆಲ್ಲರಿಗೂ ಕಾಫಿಯನ್ನು ತಂದುಕೊಟ್ಟು ತಂದೆಯ ಪಕ್ಕದಲ್ಲೇ ನಿಂತುಕೊಂಡಳು.
ಹುಡುಗನ ದೃಷ್ಟಿ ಅವಳ ಮೇಲೆಯೇ ನೆಟ್ಟಿತ್ತು. ತೆಳು ನೀಲಿ ಬಣ್ಣದ ಸೀರೆಯಲ್ಲಿ ಅಂದವಾಗಿ, ಮುದ್ದಾಗಿ ಕಾಣುತ್ತಿದ್ದಳು.
ಔಪಚಾರಿಕತೆಯ ಮಾತು ಮುಗಿದ ಬಳಿಕ ಶ್ಯಾಮಲ ಅವಳ ಬಳಿ ಮಾತನಾಡಬಯಸಿದಳು.

*********

ಶ್ಯಾಮಲಳ ಹವ್ಯಾಸ ಸಿನೆಮಾ ನೋಡುವುದು, ಕಾದಂಬರಿ ಓದುವುದು ಇತ್ಯಾದಿ. ಯಾವುದಾದರೂ ಸಿನೆಮಾದ ಅಥವ ಕಾದಂಬರಿಯ ನಾಯಕಿಯನ್ನು ಊಹಿಸಿದರೆ ಅವಳಿಗೆ ಅಸೂಯೆಯಾಗುತ್ತಿತ್ತು. ಕಾರಣ ನಾಯಕಿಯ ತುಂಟತನ, ಬುದ್ಧಿವಂತಿಕೆಯಲ್ಲ. ನಾಯಕನ ಒಳ್ಳೆಯತನ, ನಿಯತ್ತುಗಳು. ಅಂಥ ಗುಣವಂತ ನಾಯಕಿಗೆ ದೊರಕುತಿರುವುದಕ್ಕೆ ಹೊಟ್ಟೆ ಉರಿದುಕೊಳ್ಳುತ್ತಿದ್ದಳು.
ಪ್ರಸ್ತುತ ಅವಳು ಓದುತ್ತಿರುವ ಕಾದಂಬರಿಯಲ್ಲಿ ನಾಯಕಿ ಅವನನ್ನು ಮೋಸ ಮಾಡಿ ಒಂದು ಕೇಸಿನಲ್ಲಿ ಜೈಲಿಗೆ ಹೋಗುವಂತೆ ಮಾಡಿದರೆ ಅವನು ಮಾತ್ರ ಅವಳ ತಾಯಿಯ ಆಪರೇಷನ್ ಗೆ ಬೇಕಾದ ಖರ್ಚುಗಳನ್ನು ನೀಡಿಯೇ ಜೈಲಿಗೆ ಹೋಗುತ್ತಾನೆ. ಶ್ಯಾಮಲಾಗೆ ಅಂಥ ಕಾದಂಬರಿಗಳೇ ಹೆಚ್ಚು ಇಷ್ಟವಾಗುತ್ತದೆ…
ತೋಟದ ಮಧ್ಯದಲ್ಲಿ ತೆಳುವಾಗಿ ಹಾವಿನಂತೆ ಬಳುಕುವ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು ಅವರಿಬ್ಬರೂ.
ತುಂಬ ಹೊತ್ತಿನಿಂದ ಅವಳೇನೂ ಮಾತಾಡಿಸಲಿಲ್ಲದ ಕಾರಣ ಅವನೇ ಮಾತಿಗಾರಂಭಿಸಿದ.

"ನನ್ನ ಹೆಸರು ಮಹೇಂದ್ರ. ನೀವು ನನ್ನ ಜತೆ ಮಾತಡಲು ಬಯಸಿದ್ದು ಖುಷಿಯಾಯಿತು. ಒಬ್ಬರನ್ನೊಬ್ಬರು ಅರಿಯದೇ ಮದುವೆಯಾಗುವುದು ಸರಿಯಲ್ಲ ಅನ್ನುವುದು ನನ್ನ ಅಭಿಮತ. ಹೀಗೆ ಕೊಂಚ ಏಕಾಂತ ಸಿಕ್ಕಿದರೆ ನಮ್ಮ ನಮ್ಮ ಅಭಿರುಚಿಗಳನ್ನು ಹಂಚಿಕೊಳ್ಳಬಹುದು.. ಅದನ್ನು ನೀವಾಗಿಯೇ ಎಲ್ಲರೆದುರು ಕೇಳಿದ್ದು ನನಗಿಷ್ಟವಾಯಿತು…"

ಅವಳು ಥ್ಯಾಂಕ್ಯೂ ಕೂಡ ಅನ್ನಲಿಲ್ಲ.
ಅವನು ಸೌಜನ್ಯಕ್ಕಾಗಿ ನಕ್ಕ ನಗೆ ನಿಲ್ಲಿಸಿದ.
ಶ್ಯಾಮಲಾ ಏನನ್ನೋ ಹೇಳಲು ಬಯಸುತ್ತಿದ್ದಾಗ್ಯೂ, ಹೇಳಲು ಒದ್ದಾಡುತಿರುವುದನ್ನು ಆತ ಗಮನಿಸುತ್ತಲೇ ಇದ್ದ.
ಏನಾದರಾಗಲಿ ಎಂದು ಅವಳು ಹೇಳತೊಡಗಿದಳು." ನಾನು ಶ್ಯಾಮಲ… ನಿಮಗೆ ಈಗ ಒಂದು ವಿಷಯ ತಿಳಿಸಬೇಕಿದ್ದು.. ಅದು.. ಅದನ್ನು  ಹೇಗೆ ಹೇಳಲಿ ಎಂದೇ ತಿಳಿಯುತ್ತಿಲ್ಲ.."

ಆಗ ತಣ್ಣನೇ ಗಾಳಿ ಬೀಸಿತು. ಕೋಗಿಲೆಯೊಂದು ಆಗಲಿಂದಲೂ ಹಾಡುತ್ತಿತ್ತು. ಮಹೇಂದ್ರ ಉದ್ವೇಗದಿಂದ ಕೇಳಿಸಿಕೊಳ್ಳುತ್ತಿದ್ದು, "ಹೇಳಿ , ಪರವಾಗಿಲ್ಲ.." ಎಂದ.

"ಇದುವರೆಗೂ ನನ್ನ ನೋಡಲು ಬಂದವರೆಲ್ಲ ಈ ವಿಷಯ ಕೇಳಿಯೇ ಒಪ್ಪಿಕೊಳ್ತಾ ಇಲ್ಲ. ನನಗೆ.. ನನಗೆ.. ಏಯ್ಡ್ಸ್ ಇದೆ!!!"

ಆಗ ಚಲಿಸಿದ ಅವನು.

ಅವಳು ನಿರ್ಲಿಪ್ತಳಾಗಿಯೇ ಇದ್ದಳು.

ಅವನ ಮುಖ ಪೂರ್ತಿಯಾಗಿ ಬಿಳಿಚಿಕೊಂಡಿತ್ತು. ಮಾತನಾಡಲು ಪದಗಳಿಗಾಗಿ ತಡವರಿಸುತ್ತಿದ್ದ. ಸಹಾನುಭೂತಿ ಹೇಳಬೇಕೋ ? ಅಥವ ತಂದೆ-ತಾಯಿಗೆ ಈ ವಿಷಯ ತಿಳಿಸದೇ ಇದ್ದುದ್ದಕ್ಕೆ ಬೈದು ಬುದ್ಧಿವಾದ ಹೇಳಬೇಕೋ ತಿಳಿಯಲಿಲ್ಲ.
ಅವಳು ಅವನ ಪ್ರತಿಕ್ರಿಯೆಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದಳು.

ಅವನು ಚೇತರಿಸಿಕೊಂಡ. ನಿರ್ಣಯ ತೆಗೆದುಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಯಾವ ಕಾರಣದಿಂದ ಏಯ್ಡ್ಸ್ ಬಂದರೂ, ಏಯ್ಡ್ಸ್ ಇರುವ ಹುಡುಗಿಯನ್ನು ಯಾರಾದರೂ ಮದುವೆಯಾಗ ಬಯಸುವುದಿಲ್ಲ. ಅದನ್ನೇ ಅವಳ ಬಳಿ ಹೇಳಲಾಗದೇ ತಿರುಗಿ ಅಲ್ಲಿಂದ ಚಲಿಸಿ ತಂದೆಯನ್ನು ಕರೆದುಕೊಂಡು ಏನೂ ಹೇಳದೇ ಹೊರಟುಬಿಟ್ಟ.

ಅವಳು ನಿಶ್ಯಬ್ದವಾಗಿ ನೋಡುತ್ತಾ ನಿಂತುಬಿಟ್ಟಳು.

ಅವಳನ್ನು ತಂಗಾಳಿಯೊಂದು ಸ್ಪರ್ಶಿಸಿಕೊಂಡುಹೋಯಿತು.

ಮರದೆಡೆಯಿಂದ ಎರಡು ಕಣ್ಣುಗಳೂ ನೀರಿನಿಂದ ತುಂಬಿಬಂದ ಒಂದು ಆಕೃತಿಯೊಂದು ಮನೆಯೆಡೆಗೆ ಚಲಿಸಿತು.

********

ಅಂದು ರಾತ್ರಿ…

ಅವಳು ಮುಖವನ್ನು ದಿಂಬಿನಲ್ಲಿ ಹುದುಗಿಸಿ ಅಳುತ್ತಿದ್ದಳು. ವಿಷಾದ ಎಂಬ ಭಾವನೆ ಕಣ್ಣೀರಿನಲ್ಲಿ ತುಂಬಿಕೊಂಡು ದಿಂಬನ್ನು ಒದ್ದೆ ಮಾಡುತ್ತಿದ್ದವು.nireekshe
ಮನಸಿನಲ್ಲೆಲ್ಲ ಒಂದೇ ದುಃಖ ಬುಗುರಿಯಂತೆ ಸುತ್ತುತ್ತಿದ್ದವು.

" ಮನುಷ್ಯರೆಲ್ಲಾ ಸ್ವಾರ್ಥಿಗಳು..ಪ್ರೇಮವೆಂದರೆ ಕೇವಲ ಕೊಡುವುದು ಅನ್ನುವುದನ್ನು ಮರೆತಿದ್ದಾರೆ.ಎಲ್ಲರೂ ಕಿತ್ತುಕೊಳ್ಳಲು ನೋಡುತ್ತಾರೆ. ನನ್ನ ಸೌಂದರ್ಯ, ಹಣ ನೋಡಿದ ಕೂಡಲೇ ಎಲ್ಲರೂ ಮದುವೆಯಾಗಲು ಒಪ್ಪಿಕೊಳ್ಳುತ್ತಾರೆ. ಆದರೆ ನನ್ನಲ್ಲಿ ಕೇವಲ ಒಂದು ಕೆಟ್ಟ ಗುಣವಿದ್ದರೆ ಹಾವನ್ನು ಕಂಡಂತೆ ಹೆದರಿ ಓಡುಹೋಗುತ್ತಾರೆ.." ಎಂಬುದೇ ಆಕೆಯ ಮನಸಿನಲ್ಲಿ ತಾಳಮದ್ದಳೆ ಆಡುತ್ತಿದೆ.

ಆಗ ಅವಳ ತಂದೆ ಅವಳ ರೂಮನ್ನು ಪ್ರವೇಶಿಸಿದರು.

ಅವಳು ಅವರತ್ತ ನಿರ್ವಿಕಾರವಾಗಿ ನೋಡಿದಳು.ಅವರ ಕಣ್ಣಲ್ಲಿ ಆರ್ದ್ರತಾಭಾವ ನಲಿದಾಡುತಿತ್ತು. " ಅಮ್ಮಾ.." ನಿಲ್ಲಿಸಿ ಸ್ವಲ್ಪ ಸಮಯದ ನಂತರ "…. ನನ್ನ ಚಿನ್ನದಂಥಾ ಮಗಳನ್ನು ಯಾರೊಬ್ಬನೂ ಒಪ್ಪಿಕೊಳ್ಳದಿರುವುದನ್ನು ನೋಡಿ ನನಗಾಶ್ಚರ್ಯವಾಗುತ್ತಿತ್ತು. ಅವರ ಬಳಿ ಕಾರಣ ಕೇಳಿದರೂ ಹೇಳುತ್ತಿರಲಿಲ್ಲ. ಅದಕ್ಕೆ ನಾನೇ ತಿಳಿದುಕೊಳ್ಳಬೇಕೆಂಬ ಹಂಬಲ ಬೆಳೆಯಿತು. ಅದಕ್ಕೆ…. ನೀನು ಮಹೇಂದ್ರನ ಬಳಿ ಮಾತಾಡಿದ್ದನ್ನು ಕದ್ದು ಕೇಳಿಸಿಕೊಂಡೆನಮ್ಮಾ…"
ಅವಳು ಚಕ್ಕನೆ ತಲೆಯೆತ್ತಿ ಅಳುವುದನ್ನು ನಿಲ್ಲಿಸಿ ತಂದೆಯತ್ತ ನೋಡಿದಳು.

ಅವರು ಮುಂದುವರಿಸಿದರು." ನಿನ್ನ ನೋವು ನನಗರ್ಥವಾಗುತ್ತದಮ್ಮಾ.. ತಾನು ಸಾಯುತ್ತಿದ್ದೇನೆಂದು ತಂದೆಗೆ ತಿಳಿಸಲಾಗದೇ ಒಳಗೊಳಗೇ ಸ್ವಲ್ಪ ಸ್ವಲ್ಪವಾಗಿ ನಶಿಸಿಹೋಗುತ್ತಾ, ತನ್ನ ತಂದೆ ಒಬ್ಬೊಬ್ಬರೇ ಹುಡುಗರನ್ನು ಮದುವೆಗಾಗಿ ಕರೆತರುತ್ತಿದ್ದರೆ ತಂದೆಯೆದುರಿಗೆ ಏನೂ ಹೇಳಲಾಗದೇ ಮನಸ್ಸು ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.. ಪ್ರತೀ ಹುಡುಗನ ಬಳಿಯೂ ನನಗೆ ಏಯ್ಡ್ಸ್ ಇದೆ ಎಂದು ಹೇಳಿದ ಬಳಿಕ ನಂತರ ಅವರ ಮೌನದ ಚಾಟಿಯೇಟನ್ನು ನಾನು ಗುರುತಿಸಲಾಗದೇ ಹೋಗುತ್ತೇನೆಂದು ತಿಳಿದಿದ್ದೀಯಾ?"

ಅವಳು ತಲೆತಗ್ಗಿಸಿಕೊಂಡು ತಂದೆಯ ಮಾತನ್ನು ಆಶ್ಚರ್ಯದಿಂದ ಆಲಿಸುತ್ತಿದ್ದಳು.

ಅವರ ನೋವನ್ನು ಅವರ ಮಾತುಗಳೇ ಸ್ಪಷ್ಟವಾಗಿ ಪ್ರತಿಧ್ವನಿಸುತ್ತಿದ್ದವು.ಪ್ರತಿಯೊಂದು ಶಬ್ದವೂ ಅವಳನ್ನು ಇರಿಯುತ್ತಿದ್ದವು. ಅವರ ಮಾತು ಅವಳ ಬಾಯನ್ನು ಕಟ್ಟಿಹಾಕಿತ್ತು.
ಅವರು ತಮ್ಮ ಮಾತನ್ನು ನಿಲ್ಲಿಸಿದರು.

ಇರುವೆ ಚಲಿಸಿದರೂ ಕೇಳುವಷ್ಟು ನಿಶ್ಯಬ್ದ ಆವರಿಸಿಕೊಂಡಿತ್ತು. ಆ ನಿಶ್ಯಬ್ದದಲ್ಲಿ ಆ ತಂದೆಯ ಹೃದಯ ಮಗಳಿಗಾಗಿ ವಿಲವಿಲ ಒದ್ದಾಡುತಿತ್ತು.

ಒಂದು ನಿರ್ಧಾರಕ್ಕೆ ಬಂದವರಂತೆ, " ನೀನು ಹೋಗುವ ಸಮಯದಲ್ಲೂ ವಿಷಾದ ಇಟ್ಟುಕೊಂಡು ಎದುರಿಗಿರುವವರ ಸಂತೋಷ ಬಯಸಿದ್ದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಆದರೆ ನೀನು ಹೀಗೆ ಅಳುತ್ತಿರುವುದು ನನಗೆ ನೆಮ್ಮದಿ ನೀಡದು.. ಕೊನೆಯ ದಿನಗಳಲ್ಲಿ ನಿನ್ನನ್ನು ಆನಂದದಿಂದ ಕಳುಹಿಸಿಕೊಡುವೆನಮ್ಮಾ…"ಎಂದು ನುಡಿದರು.

ಉಕ್ಕಿಬಂದ ಅಳುವನ್ನು ತಡೆದುಕೊಳ್ಳುತ್ತಾ ರೂಮಿನಿಂದ ಹೊರಕ್ಕೆ ಹೋದ ತಂದೆಯತ್ತ ನಂತರ ಶೂನ್ಯದತ್ತ ನೋಡುತ್ತಾ ನಿಂತುಬಿಟ್ಟಳು ಶ್ಯಾಮಲಾ.

********

ಈಗ ಅವಳು ಮನುಷ್ಯರೆಲ್ಲಾ ಸ್ವಾರ್ಥಪರರು ಎಂದು ಆಲೋಚಿಸುತ್ತಿರಲಿಲ್ಲ. ಏನೋ ಮಾಡಲು ಹೋಗಿ ಅದು ಏನೇನೋ ಆಗುತ್ತಿದ್ದುದನ್ನು ಗಮನಿಸುತ್ತಿದ್ದಳು. ತನ್ನ ತಂದೆ ತನ್ನೆದುರೇ ಅಪಾರ್ಥ ಮಾಡಿಕೊಂಡು ನೋವನುಭವಿಸುತ್ತಿರುವುದನ್ನು ಕಂಡಿದ್ದಳು.
ಅವಳಿಗೆ ರಾತ್ರಿಯಿಡೀ ನಿದ್ದೆ ಬರಲಿಲ್ಲ. ಮತ್ತೆ ಮತ್ತೆ ಆಲೋಚಿಸಿದಳು.

ನಂತರ ಒಂದು ನಿರ್ಧಾರಕ್ಕೆ ಬಂದಳು. ಅದು ತನ್ನ ತಂದೆಗೆ ಎಲ್ಲ ನಿಜವನೂ ಹೇಳುವ ನಿರ್ಧಾರ. ನಂತರ ಎಲ್ಲ ಸರಿಹೋಗುತ್ತದೆಂದು ಅನ್ನಿಸಿ ನಿಟ್ಟುಸಿರಿಟ್ಟಳು.

ಆದರೆ ವಿಧಿಬರಹ ಬರೆಯುವವನು ಅವಳನ್ನು ನೋಡಿ ಮರುಕಪಟ್ಟ. ಏಕೆಂದರೆ ಅವಳಿಗೆ ಮರುದಿನವೇ ಮತ್ತೊಂದು ಆಘಾತ ಕಾದಿತ್ತು.

******

ಅರುಣೋದಯವಾಗಿತ್ತು. ಸೂರ್ಯನ ಕಿರಣಗಳು ಎಲ್ಲೆಂದರಲ್ಲಿ ಚೆಲ್ಲುತ್ತಿದ್ದವು.

ಅವಳು ತಂದೆಯನ್ನು ಮನೆಯಲ್ಲೆಲ್ಲಾ ಹುಡುಕಿದಳು. ಎಲ್ಲೂ ಇರಲಿಲ್ಲ. ತೋಟಕ್ಕೆ ಹೋದಾಗ ಮರದ ಕೆಳಗೆ ಖುರ್ಚಿ ಹಾಕಿಕೊಂಡು ಶೂನ್ಯದತ್ತ ನೋಡುತ್ತಾ ಸಿಗರೇಟು ಸೇದುತ್ತಾ ಕುಳಿತಿದ್ದರು.

"ಸಿಗರೇಟ್ ಮತ್ತೆ ಪ್ರಾರಂಭಿಸಿದೆಯಾ ಅಪ್ಪಾ?"

"ಓ.. ಬಾಮ್ಮಾ… ಸಿಗರೇಟ್.. ಇದೀಗ ಅವಶ್ಯಕತೆ ಅನ್ನಿಸಿದೆಯಮ್ಮಾ.."

"ಅಪ್ಪಾ.. ಅದು.. ನಾನು ನಿಮಗೊಂದು ವಿಷಯ ಹೇಳಬೇಕು. ಕೋಪ ಮಾಡಿಕೊಳ್ಳೋಲ್ಲ ತಾನೆ?"

"ಕೋಪ? ಇಲ್ಲಮ್ಮಾ.. ಸಿಗರೇಟನ್ನು ಶುರು ಮಾಡಿದ ನಂತರ ಕೋಪ, ಆನಂದ, ವಿಷಾದ ಎಲ್ಲವನ್ನೂ ಬಿಟ್ಟಿದ್ದೇನೆ"

"ಅಪ್ಪಾ.. ನನಗೆ.. ನನಗೆ ಏಯ್ಡ್ಸ್ ಇಲ್ಲವಪ್ಪ.. ನಾನು ಸುಳ್ಳು ಹೇಳಿದ್ದೆ!"

" ಇನ್ನೂ ನನಗೆ ನೋವುಂಟು ಮಾಡಬಾರದೆಂಬ ಆಲೋಚನೆಯೇನಮ್ಮಾ..?"

"ಇಲ್ಲಪ್ಪ. ನಾನು ನಿಜ ಹೇಳ್ತಿದ್ದೀನಿ. ನ..ನ..ಗೆ ಏಯ್ಡ್ಸ್ ಇಲ್ಲ.."

ತಕ್ಷಣದ ಅವರ ಖುಷಿಗೆ ಪಾರವೇ ಇರಲಿಲ್ಲ. ನಂಬಲಾಗದಷ್ಟು ಖುಷಿಯಾಗ್ತಿದೆ ಅನ್ನುತ್ತಾ ಸಂತೋಷದಿಂದ ಅವಳನ್ನೆತ್ತಿ ಎರಡು ಸುತ್ತು ತಿರುಗಿಸಿದರು. ಅವರ ಖುಷಿ ಆನಂದ ನೋಡಿ ಅವಳೂ ಸಂತಸಪಟ್ಟಳು. ಅವರ ಕಣ್ಣಿನಿಂದ ಆನಂದ ಭಾಷ್ಪವೊಂದು ಕೆನ್ನೆ ಸವರಿಕೊಂಡು ಕೆಳಕ್ಕೆ ಜಾರಿ ಮಣ್ಣುಪಾಲಾಯಿತು.

ಸ್ವಲ್ಪ ಹೊತ್ತಿನ ಬಳಿಕ " ಆದರೂ.. ಒಮ್ಮೆ ಪರೀಕ್ಷೆ ಮಾಡಿ ನೋಡಬೇಕು" ಎಂದರು.

*********

"ನೀನು ಯಾಕೆ ಹೀಗೆ ಮಾಡಿದಿ?" ಎಂದು ತಂದೆ ಶ್ಯಾಮಲಳ ಬಳಿ ಕೇಳಿದರು.

" ಹಿಂದೆ ವಧುಪರೀಕ್ಷೆ ಇದ್ದ ಹಾಗೆ ಇದು ವರ ಪರೀಕ್ಷೆಯಪ್ಪ. ಕಾಲೇಜಿನಲ್ಲಿ ಓದುತ್ತಿದ್ದಾಗ ಅನೇಕ ಹುಡುಗರು ’ಐ ಲವ್ ಯೂ’ ಎನ್ನುತ್ತಾ ನನಗೋಸ್ಕರ ಏನು ಮಾಡಲೂ ತಯಾರಾಗಿ ಬರುತ್ತಿದ್ದರು. ನನ್ನ ಬಳಿ ಹಣವಿದೆಯೆಂದೋ, ರೂಪಕ್ಕಾಗಿಯೋ ನಾನು ಕೇಳದಿದ್ದರೂ ನನಗೆ ಸಹಾಯ ಮಾಡುತ್ತಿದ್ದರು. ಇವರ ನಿಜಾಂಶ ತಿಳಿದುಕೊಳ್ಳುವುದಕ್ಕೋಸ್ಕರ ಒಂದು ಮಾಸ್ಟರ್ ಪ್ಲಾನ್ ಮಾಡುತ್ತಿದ್ದೆ. ಆಗಲೇ ನಿರ್ಧರಿಸಿದ್ದೆ. ನನಗೆ ಮಾರಣಾಂತಿಕ ಖಾಯಿಲೆಯಿದ್ದರೂ ನನ್ನನ್ನು ಮದುವೆಯಾಗುತ್ತೇನೆನ್ನುವವನೇ ನನಗೆ ಸರಿಯಾದ ಗಂಡು ಎಂದು…. ಆದರೆ ಇದುವರೆಗೂ ಸ್ವಾರ್ಥವಿಲ್ಲದ ಪುರುಷರು ಸಿಗಲಿಲ್ಲವಪ್ಪಾ… "

"ಇದು ತಪ್ಪಮ್ಮಾ.. ನೀನು ಊಹಿಸಿದಂತಹ ಗುಣವುಳ್ಳವರು ಯಾವ ಕಾಲದಲ್ಲಾದರೂ ಸಿಗುವುದಿಲ್ಲ. ಸ್ವಾರ್ಥವಿಲ್ಲದೇ ಬದುಕುವುದೇ ಅಸಾಧ್ಯ. ಅಂತಹ ಬೇಡಿಕೆಯನ್ನು ಮರೆತುಬಿಡಮ್ಮ.. ಅಂತವರ್ಯಾರೂ ಸಿಗಲಾರರು.." ಅವರ ಅನುಭವವೇ ಈ ಮಾತನ್ನು ಆಡಿಸಿತ್ತು.

"ಇನ್ನು ಒಂದು ವರ್ಷ ಅಷ್ಟೇ ಅಪ್ಪ. ಅಲ್ಲಿಯವರೆಗೂ ಹುಡುಕುತ್ತೇನೆ. ಅಷ್ಟರವರೆಗೂ ಸಿಗಲಿಲ್ಲವಾದರೆ ನೀವು ಹೇಳಿದ ಗಂಡನ್ನೇ ಮದುವೆಯಾಗುವೆ"

ನಿನ್ನಿಷ್ಟವಮ್ಮಾ.." ನಿಟ್ಟುಸಿರು ಬಿಡುತ್ತ ಶ್ಯಾಮಲಳ ತಂದೆ ಹೇಳಿದರು.

******

ಮಗಳು ಎಷ್ಟು ಬಾರಿ ಹೇಳಿದರೂ ಕೇಳದೇ ಟೆಸ್ಟ್ ಮಾದಿಸಿದರೇನೆ ಮನ್ಸಿಗೆ ನೆಮ್ಮದಿ ಎಂದರು ಶ್ಯಾಮಲಳ ತಂದೆ. ಒಂದು ದಿನ ಡಾಕ್ಟರನು ಭೇಟಿಯಾಗಲು ಹೊರಟರು.

"ಡಾಕ್ಟರ್.. ನನ್ನ ಮಗಳಿಗೆ ಏಯ್ಡ್ಸ್ ಇಲ್ಲವೆಂಬ ರಿಪೋರ್ಟ್ ನೀಡುವ ಟೆಸ್ಟ್ ಮಾಡಿಸಬೇಕಾಗಿತ್ತು.."

" ಈಕೆ ಶ್ಯಾಮಲಳಲ್ಲವೇ?"

ತಂದೆ ಆಶ್ಚರ್ಯದಿಂದ, " ಅರೆ.. ನಿಮಗೆ ಹೇಗೆ ಗೊತ್ತು ನನ್ನ ಮಗಳು?" ಕೇಳಿದರು.

"ನಿಮ್ಮ ಮಗಳ ಕಾಲೇಜಿನ ಕನ್ಸಲ್ಟಿಂಗ್ ಡಾಕ್ಟರ್ ನಾನೇ. ಇವಳು ಡಿಸ್ಟಿಂಕ್ಷನ್ ಸ್ಟೂಡೆಂಟ್ ಎಂದ ಬಳಿಕ ಮರೆಯಲು ಸಾಧ್ಯವೇ?"

ಶ್ಯಾಮಲ ಮಾತ್ರ ಅವರತ್ತ ಆಶ್ಚರ್ಯದಿಂದ ನೋಡಿದಳು. ಹಿಂದೆಂದೂ ನೋಡಿದ ನೆನಪಿರಲಿಲ್ಲ ಆ ಚಹರೆಯನ್ನು.

ಡಾಕ್ಟರ್ ಮುಗುಳ್ನಗೆಯೊಂದಿಗೆ "ನರ್ಸ್… ಎಲಿಸಾ ಟೆಸ್ಟಿಗೆ ತಯಾರಿ ಮಾಡಿ" ಎಂದರು.

*********

ಸಂಜೆಯಾಗಿತ್ತು.

’ಎಲಿಸಾ’ ಪರೀಕ್ಷೆಯ ಫಲಿತಾಂಶಕ್ಕಾಗಿ ಎದುರುನೋಡುತ್ತಿದ್ದಾರೆ, ತಂದೆ ಮತ್ತು ಮಗಳು. ನರ್ಸ್ ’ಒಳಕ್ಕೆ ಹೋಗಿ’ ಎಂದಾಗ ಉದ್ವೇಗದಿಂದ ಒಳ ನಡೆದರು.

ಡಾಕ್ಟರ್ ನ ಮುಖ ನಿರ್ಲಿಪ್ತತೆಯಿಂದ ತುಳುಕಾಡುತ್ತಿತ್ತು.

"ಏನಾತು ಡಾಕ್ಟ್ರೇ" ಎಂದರು ತಂದೆ ಉದ್ವೇಗದಿಂದ.

"ಕುಳಿತುಕೊಳ್ಳಿ" ಎಂದರು. "ಮನಸ್ಸು ಸ್ವಲ್ಪ ಗಟ್ಟಿಮಾಡಿಕೊಳ್ಳಿಸರ್ .. ಎಲ್ಲರಿಗೂ ಹಣೆಬರಹ ಮೊದಲೇ ಬರೆದಿಟ್ಟಿರುತ್ತಾರೆ ಆ ದೇವರು…" ಎಂದು ಸ್ವಲ್ಪ ಕಾಲ ಮೌನವಹಿಸಿ, ನಿಟ್ಟುಸಿರಿಟ್ಟು "ನಿಮ್ಮ ಮಗಳಿಗೆ ಏ…ಯ್ಡ್ಸ್.. ಇ..ದೆ..!" ಎಂದರು.

ಶ್ಯಾಮಲಳ ತಂದೆ ತತ್ತರಿಸಿ ಹೋದರು.

ಅವಳಿಗೆ ಭೂಮಿ ಬಾಯ್ತೆರೆದು ತನ್ನನ್ನು ಒಳಕ್ಕೆಳೆದುಕೊಳ್ಳಬಾರದೇ ಎನಿಸಿತು. ಮನದಲ್ಲಿ ವಿಷಾದದ ಜ್ವಾಲಾಮುಖಿಯೊಂದು ಹತ್ತಿ ಉರಿಯಿತು. ನೀರಸತ್ವವೆಂಬ ಲಾವಾರಸ ಉಕ್ಕಿ ಹರಿಯಿತು.
ಏನೋ ತಮಾಷೆಗಾಗಿ ’ ಏಯ್ಡ್ಸ್ ಇದೆ’ ಎನ್ನುವುದಕ್ಕೂ, ನಿಜಕ್ಕೂ ಏಯ್ಡ್ಸ್ ಬಂದರೆ ಹೇಗಿರುತ್ತದೆಂದು ಮನಸು ಊಹಿಸಿಯೇ ಇರಲಿಲ್ಲ. ಅಷ್ಟು ವಿಷಾದವನ್ನು ಅವಳ ಮನಸ್ಸು ಸಹಿಸುತ್ತಿಲ್ಲ. ಕಾಣದ ಕೈಯ್ಯೊಂದು ಹೃದಯವನ್ನು ಹಿಂಡಿದಂತಾಗುತ್ತಿದೆ ಅವಳಿಗೆ.
ಮೃತ್ಯು ತನ್ನನ್ನು ಗಬಳಿಸಲು ಹೊಂಚು ಹಾಕುತ್ತಿದೆಯೆಂದು ಊಹಿಸಿದೊಡನೆ ಮೈ ನಡುಗಲಾರಂಭಿಸಿತು.
ಯಾರಾದರೂ ಇದುವರೆಗೆ ತನ್ನನ್ನು ಮದುವೆಯಾಗಿದ್ದರೆ ಅವರ ಗತಿ ಊಹಿಸಿಕೊಂದಳು. ವಿಧಿಗೆ ಏಟು ಕೊಡಬೇಕೆಂದುಕೊಂಡಿದ್ದಳು; ಆದರೆ ವಿಧಿ ತನಗೆ ಈ ರೀತಿಯಾದ ಶಿಕ್ಷೆ ಕೊಡುತ್ತದೆಂದು ಅವಳು ಕಿಂಚಿತ್ತೂ ಊಹೆ ಮಾಡಿರಲಿಲ್ಲ.
ತಂದೆ ಹೃದಯವೇ ಹೋಳಾದಂತೆ ಕುಳಿತಿದ್ದರು.

ಆಗ ಆ ರೂಮನ್ನು ಮಹೇಂದ್ರ ಪ್ರವೇಶಿಸಿದ.

**********

ಹಠಾತ್ತನೆ ಬಂದಿದ್ದರಿಂದ ಡಾಕ್ಟರ್ ಒಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಆಶ್ಚರ್ಯಗೊಂಡರು.

ಶ್ಯಾಮಲಳ ಬಳಿ ತೆರಳಿ," ನನ್ನನ್ನು ಮದುವೆಯಾಗುತ್ತೀಯಾ ಶ್ಯಾಮಲಾ?" ಎಂದು ಮಹೇಂದ್ರ ಶಾಂತವಾಗಿ ಕೇಳಿದನು.

nireekshe ಎರಗಿ ಬಂದ ಪ್ರಶ್ನೆಗೆ ಅವಳು ತಕ್ಷಣಕ್ಕೆ ಉತ್ತರಿಸದಾದಳು. ನಂತರ ಸಾವರಿಸಿಕೊಂಡು, "ನನಗೆ ಏಯ್ಡ್ಸ್ ಇದೆ ಮಹೇಂದ್ರ" ಅವಳ ದನಿ ಅವಳಿಗೇ ಕೇಳಿಸಲಿಲ್ಲ. ಕಣ್ಣೀರು ಕೆನ್ನೆಯನ್ನೆಲ್ಲಾ ಒದ್ದೆ ಮಾಡಿಬಿಟ್ಟಿತು.

"ನನ್ನ ಪ್ರಶ್ನೆಗೆ ಉತ್ತರ ಅದಲ್ಲ, ನಿನಗೆ ನಾನು ಇಷ್ಟವಾಗಿರುವೆನಾ?"

ಅವಳ ನಿರೀಕ್ಷೆ ದುಃಖದೇಟಿನಿಂದ ಸತ್ತಿತ್ತು. ಜಂಬವೆಲ್ಲ ನೀರಿನಂತೆ ಕರಗಿತ್ತು. "ಹ..ಹೌ..ದು!" ಎಂದು ಮತ್ತಷ್ಟು ಅತ್ತಳು.

ಅವಳ ತಂದೆ ಈ ಪರಿಣಾಮಗಳನ್ನು ಎವೆಯಿಕ್ಕದೇ ನೋಡುತ್ತಿದ್ದರು.

ಮಹೇಂದ್ರನಿಗೆ ಅವಳ ಪಶ್ಚಾತ್ತಾಪ ಸ್ಪಷ್ಟವಾಗಿ ತಿಳಿಯುತ್ತಿತ್ತು. ಇನ್ನೂ ಮುಚ್ಚಿಟ್ಟು ಪ್ರಯೋಜನವಿಲ್ಲವೆಂದು ಅರಿತು," ಐ ಯಾಮ್ ರಿಯಲಿ ಸಾರಿ. ನಾನೂ ಈ ಡಾಕ್ಟರ್ ಇಬ್ಬರೂ ಸ್ನೇಹಿತರು. ಕೊಲೀಗ್ಸ್ ಕೂಡ. ಇಲ್ಲೀಗ ನಡೆದದ್ದು ಸುಳ್ಳು. ಈ ಕಪಟ ನಾಟಕದ ಸೂತ್ರಧಾರಿ ನಾನೇ"

ಶ್ಯಾಮಲ ತಕ್ಷಣ "ಹಾಗಾದರೆ ನನಗೆ ಏಯ್ಡ್ಸ್ ಇ..ಲ್ಲ…ವಾ..?" ಏನೋ ಅದ್ಭುತವಾದದ್ದನ್ನು ಕೇಳುವಂತೆ ಕೇಳಿದಳು.

ಆಗ ಡಾಕ್ಟರ್, " ಇಲ್ಲ. ನಾನು ಸುಮ್ಮನೇ ಸುಳ್ಳು ಹೇಳಿದೆ. ಮೊದಲು ಆಗೋಲ್ಲವೆಂದೆ. ಒಬ್ಬ ಪೇಷೆಂಟ್ ಗೆ ಹೀಗೆ ಸುಳ್ಳು ಹೇಳಲಾರೆನೆಂದೆ. ಆದರೆ ಮಹೇಂದ್ರ ಕಾರಣ ಹೇಳಿದಾಗ ಒಪ್ಪಿಕೊಂಡೆ. ನನ್ನಿಂದ ತಪ್ಪಾಗಿದ್ದಲ್ಲಿ ಕ್ಷಮಿಸಿ. ಐ ಯಾಮ್ ಸಾರಿ.."

ಅವಳ ತಂದೆ ಇದನ್ನೇ ಎಂಟನೇ ಅದ್ಭುತವೆಂಬಂತೆ ನೋಡುತ್ತಿದ್ದರು.

**********

"ಅವನೇ ನನ್ನ ಗಂಡ" ಸಿನೆಮಾ ಬಿಟ್ಟಿತು. ಜನಸಂದಣಿಯ ಮಧ್ಯದಲ್ಲಿ ಶ್ಯಾಮಲಾ ಮತ್ತು ಮಹೇಂದ್ರ ನಗುತ್ತಾ ಬರುತ್ತಿದ್ದರು.

"ನಿನ್ನ ಗಂಡ ಹೇಗಿರಬೇಕು?" ತುಂಟತನದಿಂದ ಕೇಳಿದನು.

ಅದಕ್ಕವಳು," ನಿನ್ನ ಹಾಗಂತೂ ಇರಕೂಡದು" ಎಂದಳೂ ಚೂಟಿಯಾಗಿ.

ಇಬ್ಬರೂ ನಕ್ಕರು.


Blog Stats

  • 71,866 hits
ಜೂನ್ 2009
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
1234567
891011121314
15161718192021
22232425262728
2930  

Top Clicks

  • ಯಾವುದೂ ಇಲ್ಲ