ಕಲರವ

Archive for ಡಿಸೆಂಬರ್ 2008

– ‘ಅಂತರ್ಮುಖಿ’

‘ಎಷ್ಟನೆ ಸಲದ ದಂಡ ಯಾತ್ರೆಯಪ್ಪಾ ಇದು?’ ಹಾಗಂತ ಕಾಫಿಗೆ ಕರೆಯುವ ಗೆಳೆಯರನ್ನು ರೇಗಿಸುತ್ತಿರುತ್ತೇನೆ. ಹಾಸ್ಟೆಲ್ಲಿನ ಹುಡುಗರು ಕಾಫಿಗೆ ಹೋಗುವ ಸಂಭ್ರಮವೇ ಬೇರೆ. ಬೆಳಿಗಿನ ಚಳಿಯಲ್ಲಿ ಧೈರ್ಯ ಮಾಡಿ ಎದ್ದವರು ಮಾಡಿಟ್ಟ ಕಾಫಿಯನ್ನು ತಮ್ಮ ಕೆಪಾಸಿಟಿಗೆ ತಕ್ಕಂತ ಹೀರಿಬಿಟ್ಟಿರುತ್ತರಾದ್ದರಿಂದ ನನ್ನಂಥ ಸೂರ್ಯದ್ವೇಷಿಗಳಿಗೆ, ಏಳು ಗಂಟೆಯ ಮೊದಲು ಎದ್ದು ಬಿಡುವುದು ನೈತಿಕ ಅಧಃಪಥನ ಎಂದು ಭಾವಿಸಿರುವವರಿಗೆ ಖಾಲಿ ಕಾಫಿ ಜಗ್ ಮಾತ್ರ ಕಾದಿರುತ್ತದೆ!

ಎಲ್ಲಾ ಹುಡುಗರು ಇದ್ದಾಗ ಹಾಸ್ಟೆಲ್ಲಿನ ವಾತಾವರಣ ಕಲಕಲ ಎನ್ನುತ್ತಿರುತ್ತದೆ. ಎಲ್ಲರಿಗೂ ಕಾಲೇcoffee_man ಜು ರಜೆಯಿದ್ದರೆ, ಇಲ್ಲವೇ ಪರೀಕ್ಷೆಗಳಿಗೆ ಓದಲು ಕಾಲೇಜಿನವರೇ ರಜೆ ಕರುಣಿಸಿ ಓಡಿಸಿದ್ದರೆ ಕಾಫಿ ಟೀ ಕುಡಿಯಲು ಸಮೀಪದ ಕಾಫಿ ಬಾರ್‌ಗೆ ದಂಡು ದಂಡು ಸಮೇತ ಲಗ್ಗೆ ಹಾಕುವುದನ್ನು ನೋಡುವುದು ಕಣ್ಣಿಗೆ ಹಬ್ಬ. ಬೆಳಗಿನ ತಿಂಡಿ ಮುಗಿಸಿಕೊಂಡ ನಂತರ ಒಂದು ಸುತ್ತು, ಮಧ್ಯಾನದ ಊಟಕ್ಕೂ, ತಿಂಡಿಗೂ ನಡುವಿನ ಸಮಯದಲ್ಲಿ ಓದಿ ಓದಿ ಸುಸ್ತಾದವರಿಗಾಗಿ ಒಂದು ಸುತ್ತು, ಮಧ್ಯಾನದ ಊಟ ಮುಗಿಸಿ ಗಡದ್ದಾಗಿ ನಿದ್ದೆ ಹೊಡೆದು ಸಂಜೆಗೆ ಎದ್ದು ಒಂದು ಸುತ್ತು, ರಾತ್ರಿ ಊಟವಾದ ಮೇಲೆ ಓದುತ್ತಾ ಕೂರಲು ಎನರ್ಜಿ ಬೇಕಾದವರದ್ದು ಒಂದು ಸುತ್ತು ಕಾಫಿ ಬಾರ್ ಪರ್ಯಟನೆ- ಇದು ನಮ್ಮ ದೈನಂದಿನ ಅವಿಭಾಜ್ಯ ಅಂಗ. ಕೆಲವೊಮ್ಮೆ ಕಾಲೇಜು ಗೆಳೆಯರು ನಮ್ಮ ಭೇಟಿಗೆ ಹಾಸ್ಟೆಲ್ಲಿಗೇ ಬಂದಾಗ, ಒಲ್ಲದ ಅತಿಥಿ ರೂಮಿನಲ್ಲಿ ಒಕ್ಕರಿಸಿಕೊಂಡು ಕೊರೆತದಿಂದ ರೋಧನೆ ಕೊಡುವಾಗ ಅವನನ್ನು ಸಾಗಿ ಹಾಕಲು ಈ ‘ಕಾಫಿ’ ಆಪದ್ಭಾಂದವನ ಹಾಗೆ ನೆರವಿಗೆ ಬರುವುದೂ ಇದೆ.

ಕಾಫಿಗೆ ದಂಡು ಕಟ್ಟಿಕೊಂಡು ಹೋಗುವ ಸಮಯ ಬರುತ್ತಿದ್ದ ಹಾಗೆಯೇ ಇಡೀ ಹಾಸ್ಟೆಲ್ಲಿನಲ್ಲಿ ಸದ್ದುಗದ್ದಲ ತಣ್ಣಗಾಗುತ್ತದೆ. ಆ ಮೌನದಲ್ಲಿ ಗಾಳಿ ಕೊಂಚ ವೇಗವಾಗಿ ಬೀಸಿದರೂ ಸದ್ದು ಮಾಡಿ ಅಸಭ್ಯ ಎನ್ನಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯಿಂದ ಬೀಸಲು ಶುರು ಮಾಡಿರುತ್ತದೆ. ಕಾಫಿಗೆ ಹೋಗಬೇಕೆಂಬುದು ಎಲ್ಲರ ಇರಾದೆಯಾದರೂ ಯಾರೂ ಏಕಾಏಕಿ ರೂಮುಗಳೆಂಬ ಗೂಡುಗಳಿಂದ ಹೊರಬಂದು ಬಿಡುವುದಿಲ್ಲ. ಮೇಲಿನ ಫ್ಲೋರಿನ ಕೊನೆಯ ರೂಮಿನ ದಂಡನಾಯಕ ತನ್ನ ಮೊಬೈಲಿಗೆ ಬಂದ ಮೆಸೇಜುಗಳನ್ನು ಓದಿಕೊಳ್ಳುತ್ತಾ ಮತ್ತೊಂದು ಕೈಯನ್ನು ಪ್ಯಾಂಟಿನ ಜೇಬಿನೊಳಕ್ಕೆ ಇಳಿಬಿಟ್ಟು ‘ಬನ್ರಪ್ಪಾ, ಕಾಫಿಗೆ.’ ಅನ್ನಬೇಕು. ಆಗ ಕಾವು ಇಳಿದ ಕುಕ್ಕರು ಉಶ್ ಎಂದು ನಿಟ್ಟುಸಿರಿಟ್ಟ ಹಾಗೆ ಸದ್ದು ಮಾಡಿ ಮಾಡುತ್ತಿದ್ದ ಕೆಲಸಗಳನ್ನು ಬಿಟ್ಟು ಹೋಗಬೇಕೆಂಬ ನೋವನ್ನು ನಟಿಸಿ ಒಬ್ಬೊಬ್ಬರೇ ಚಪ್ಪಲಿ ಮೆಟ್ಟಿಕೊಂಡು ಹೊರಬರುತ್ತಾರೆ. ‘ಎಲ್ಗೆ? ಗೋವಿಂದಣ್ಣನಾ, ರಾಘವೇಂದ್ರನಾ?’ ಅಂತ ಕೆಲವರು ಚರ್ಚೆಗೆ ನಿಲ್ಲುತ್ತಾರೆ. ‘ಇಲ್ಲೇ ಗೋವಿಂದಣ್ಣನ ಅಂಗ್ಡಿಗೇ ಹೋಗಣ, ಅಷ್ಟು ದೂರ ಯಾರು ಹೋಗ್ತಾರೆ?’ ಎಂದು ಕೆಲವರು ಮೈಮುರಿದು ವಟಗುಟ್ಟುತ್ತಾರೆ. ಮತ್ತೆ ಕೆಲವರು, ‘ರಾಘವೇಂದ್ರದಲ್ಲಿ ಒಂದ್ರುಪಾಯಿ ಜಾಸ್ತಿ ಮಾಡಿದಾರೆ’ ಎಂದು ನೆನಪಿಸುತ್ತಾನೆ. ಮಳೆ ಬರುವ ಮುನ್ನ ಕಪ್ಪು ಮೋಡ ಮೆಲ್ಲ ಮೆಲ್ಲಗೆ ಸುತ್ತಮುತ್ತಲಿನ ಮೋಡದ ತುಣುಕುಗಳನ್ನು ಅಪ್ಪಿಕೊಂಡು ದೊಡ್ಡದಾಗಿ ವ್ಯಾಪಿಸಿಕೊಳ್ಳುತ್ತಾ ಹೋದಂತೆ ಒಬ್ಬೊಬ್ಬರನ್ನೇ ರೂಮಿನಿಂದ ಹೊರಗೆಳೆದು ತರುತ್ತಾ ನಮ್ಮ ಗುಂಪು ದೊಡ್ಡದಾಗುತ್ತದೆ. ಕೆಲವರು ಮೊಬೈಲು ತಮ್ಮ ಕಿವಿಯ ಜೊತೆಗೇ ಬ್ರಹ್ಮ ಕಳುಹಿಸಿಕೊಟ್ಟ accessory ಏನೋ ಎಂಬಂತೆ ವರ್ತಿಸುತ್ತಿರುತ್ತಾರೆ. ಅವರು ನಮ್ಮೊಂದಿಗೆ ಹೆಜ್ಜೆ ಹಾಕುತ್ತಿದ್ದರೂ, ಅವರ ಒಡನಾಟವೆಲ್ಲಾ ‘ಅಶರೀರ ವಾಣಿ’ ಯ ಜೊತೆಗೇ.

ನಮ್ಮ ಹಾಸ್ಟೆಲ್ಲಿನ ಉದ್ದನೆಯ ಕಾರಿಡಾರನ್ನು ದಾಟಿ ರಸ್ತೆಗೆ ಕಾಲಿರಿಸುತ್ತಿದ್ದ ಹಾಗೆಯೇ ಇಡೀ ರಸ್ತೆಯ ತುಂಬ ಎಂಥದ್ದೋ ಕಂಪನ. ಸಲಗಗಳ ಗುಂಪು ನಡೆದದ್ದೇ ದಾರಿ ಎಂಬಂತೆ ನಾವು ನಮ್ಮೊಳಗೇ ಕಲಕಲ ಮಾತನಾಡುತ್ತಾ ಅಕ್ಕ ಪಕ್ಕದ ಮನೆಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಹಂಚಿಕೊಳ್ಳುತ್ತಾ ಸಾಗುತ್ತೇವೆ. ಗುಂಪಿಗೆ ಸೇರದ ಪದದ ಹಾಗೆ ಗುಂಪನ್ನು ಬಿಟ್ಟು ಹಿಂದೆ ಯಾರಾದರೂ ಒಬ್ಬರೇ ಸೆಲ್ ಫೋನಿನಲ್ಲಿ ಮಾತನಾಡುತ್ತಾ ಬರುತ್ತಿದ್ದಾರೆಂದರೆ ಅವರು ಮಾತನಾಡುತ್ತಿರುವುದು ಗರ್ಲ್ ಫ್ರೆಂಡ್ ಒಟ್ಟಿಗೆ ಇಲ್ಲವಾದರೆ ಮನೆಯಿಂದ ಫೋನ್ ಬಂದಿರುತ್ತದೆ ಎಂದೇ ತಿಳಿಯಬೇಕು. ಹಾಸ್ಟೆಲ್ಲಿನಲ್ಲಿರುವಾಗ ತೊಟ್ಟ ಬರ್ಮುಡಾ ಚೆಡ್ಡಿ, ನೈಟ್ ಪ್ಯಾಂಟುಗಳಲ್ಲೇ ಬೀದಿಗಿಳಿದ ಕೆಲವರಿಗೆ ಅಕ್ಕಪಕ್ಕದ ಮನೆಯ ಮಂದಿ ಏನೆಂದುಕೊಳ್ಳುತ್ತಾರೋ ಎಂಬ ಮುಜುಗರ. ಹಾಗೆ ದಂಡು ಕಾಫಿ ಹೀರುವ ಮಹೋದ್ದೇಶಕ್ಕಾಗಿ ಸಾಗುತ್ತಿರುವಾಗ ಮಾತಿಗೆ ಇಂಥದ್ದೇ ವಿಷಯಬೇಕು ಅಂತೇನಿಲ್ಲ. ಜಾರ್ಜ್ ಬುಶ್‌ನಿಂದ ಹಿಡಿದು ಹಾಸ್ಟೆಲ್ಲಿನ ಹಿಂದಿನ ಮನೆಗೆ ಹೊಸತಾಗಿ ಬಂದ ರಾಜಸ್ಥಾನದ ದಂಪತಿಗಳವರೆಗೆ ಯಾವುದಾದರೂ ನಡೆದೀತು. ಅಸಲಿಗೆ ಯಾವ ವಿಷಯವೂ ಇಲ್ಲದಿದ್ದರೂ ಆದೀತು. ಮಾತಿಗೆ ವಿಷಯವೇ ಬೇಕು ಎಂಬ ದಾರಿದ್ರ್ಯದ ಸ್ಥಿತಿಗೆ ಹುಡುಗರು ಎಂದೂ ತಲುಪೋದೇ ಇಲ್ಲ. ಅವರಿವರನ್ನು ರೇಗಿಸಿಕೊಂಡು, ಇಟ್ಟ ಅಡ್ಡ ಹೆಸರುಗಳನ್ನು ಕರೆದುಕೊಂಡು ಪೋಲಿ ಜೋಕುಗಳನ್ನು ಕಟ್ ಮಾಡುತ್ತಾ ಪರೇಡ್ ಸಾಗುತ್ತಿರುತ್ತದೆ.

ಗುಂಪಿನಲ್ಲಿ ಹತ್ತು ಹನ್ನೆರಡು ಮಂದಿ ಇದ್ದರೂ ಎಲ್ಲರೂ ಒಟ್ಟಾಗಿ ಹೋಗಲು ಅದೇನು ಮಾರ್ಚ್ ಫಾಸ್ಟೇ? ಮೂರು ನಾಲ್ಕು ಮಂದಿ ಕ್ಲಸ್ಟರ್ ಕ್ಲಸ್ಟರ್‌ಗಳಾಗಿ ಚದುರಿಕೊಂಡು ಗಲಗಲಿಸುತ್ತಾ ಸಾಗುತ್ತಿರುತ್ತೇವೆ. ಅನೇಕ ವೇಳೆ ಇಂಥ ಕ್ಲಸ್ಟರ್‌ಗಳು ಸಹಜವಾದ ಪರ್ಮುಟೇಶನ್, ಕಾಂಬಿನೇಶನ್ನಿನ ಮೇಲೆ ರೂಪುಗೊಂಡಿರುತ್ತದಾದರೂ ಕೆಲವೊಮ್ಮೆ ಗುಂಪುಗಾರಿಕೆ, ‘ಭಿನ್ನ ಮತೀಯತೆ’ಯಿಂದ ಹುಟ್ಟು ಪಡೆದಿರುತ್ತವೆ. ಹಾಸ್ಟೆಲ್ಲಿನಲ್ಲಿ ಯಾರೆಷ್ಟೇ ಗುಂಪುಗಾರಿಕೆ ಮಾಡಿಕೊಂಡು, ಒಬ್ಬರ ಮೋಲೊಬ್ಬರು ಕತ್ತಿ ಮಸೆಯುತ್ತಾ ಓಡಾಡಿಕೊಂಡರೂ ಕಾಫಿಗೆ ಹೊರಡುವಾಗ ಮಾತ್ರ ಎಲ್ಲರೂ ಬಂದೇ ಬರುವರು. ಅದೊಂದು ಕದನ ವಿರಾಮದ ಹಾಗೆ. ಹಾಗಂತ, ವೈರ ಕರಗಿ ಮಾತು ಅರಳಿಬಿಡುತ್ತದೆ ಅಂತಲ್ಲ. ಎಲ್ಲರೂ ಕಲೆತು ಹೊರಗಿನವರಿಗೆ ನಾವೆಲ್ಲರೂ ಒಂದು ಎಂದು ಕಂಡುಬಂದರೂ ಒಳಗೊಳಗೆ ಕ್ಲಸ್ಟರುಗಳಿಂದ ಹೊರಗೆ ಮಾತು ಹರಿಯುವುದಿಲ್ಲ. ಭಾಷೆ ಬೇರೆ, ಆಚಾರ ಬೇರೆಯಾದರೂ ಭಾರತವೆಂಬ ಒಂದೇ ದೇಶದ ಮುಖ ನೋಡಿಕೊಂಡು ಸುಮ್ಮಗಿರುವ ರಾಜ್ಯಗಳ ಹಾಗೆ ನಮ್ಮ ಗುಂಪುಗಾರಿಕೆ ತಣ್ಣಗೆ ಸಾಗುತ್ತಿರುತ್ತದೆ.

ಬೇರಾವ ಕೆಲಸಕ್ಕೆ ಪಾರ್ಟನರ್ ಇಲ್ಲದಿದ್ದರೂ ನದೆಯುತ್ತದೆಯೇನೋ, ಆದರೆ ಕಾಫಿ ಹೀರುವುದಕ್ಕೆ ಜೊತೆ ಇಲ್ಲವೆಂದರೆ ಏನನ್ನೋ ಕಳೆದುಕೊಂಡ ಭಾವ. ಜೊತೆಯಲ್ಲಿ ಹರಟೆಗೆ ಯಾರೂ ಇರದಿದ್ದರೆ ಹಬೆಯಾಡುವ ಕಾಫಿ ಗಂಟಲೊಳಕ್ಕೆ ಇಳಿಯುವುದೇ ಇಲ್ಲ. ಜೊತೆಗಿರುವ ಜನರ ಸಂಖ್ಯೆ ಹೆಚ್ಚಾದಷ್ಟೂ ಕಾಫಿ ರುಚಿಗಟ್ಟುತ್ತಾ ಹೋಗುತ್ತದೆ. ಆರೆಂಟು ಮಂದಿಯ ಗುಂಪು ಪುಟ್ಟ ಕಾಫಿ ಬಾರಿನೆದುರು ಜಮಾಯಿಸಿ ಒಬ್ಬೊಬ್ಬರು ತಮ್ಮ ಆಸಕ್ತಿ, ಅಭಿರುಚಿಗನುಸಾರವಾಗಿ ಕಾಫಿ, ಟೀ, ಬಾದಾಮಿ ಹಾಲುಗಳಿಗೆ ಆರ್ಡರ್ ಮಾಡುತ್ತಾರೆ. ಮುಂದುವರೆದ ವರ್ಗದ ಕೆಲವರು ನಮಗೆ ತಿಳಿಯದ ಕೋಡ್ ವರ್ಡ್‌ಗಳನ್ನು ಹೇಳಿ ಸಿಗರೇಟು ಪಡೆಯುತ್ತಾರೆ. ಹೊಸದಾಗಿ ಗುಂಪಿಗೆ ಸೇರಿದವರು ಈ ಮುಂದುವರಿದವರನ್ನು ತುಸು ಹೆಮ್ಮೆಯಿಂದ, ತುಸು ಕುತೂಹಲದಿಂದ ನೋಡುತ್ತಿರುತ್ತಾರೆ. ಉಳಿದವರಿಗೆ ಅಂಥಾ ಯಾವ ಕುತೂಹಲವೂ ಉಳಿದಿರುವುದಿಲ್ಲ. ತಿಂಗಳ ಕೊನೆ ಬರುತ್ತಿದ್ದಂತೆಯೇ ಈ ಮುಂದುವರಿದವರು ನಮ್ಮೆಲ್ಲರ ಮುಂದೆ ಮೊಣಕಾಲೂರಿ ಕುಳಿತು ಪ್ರಾರ್ಥಿಸಿ ಒಂದೊಂದು ಸಿಗರೇಟು ಗಿಟ್ಟಿಸಿಕೊಳ್ಳುವುದನ್ನು ಕಂಡ ನಾವು ಅವರ ಬಗ್ಗೆ ಹೆಚ್ಚೆಂದರೆ ಅನುಕಂಪವನ್ನು ತಾಳಬಹುದು ಅಷ್ಟೇ, ಹೆಮ್ಮೆಯಂತೂ ದೂರದ ಮಾತು!

ಕಂಠ ಬಿಟ್ಟು ಸೊಂಟ ಹಿಡಿದರೆ ನಲುಗಿ ಒಳಗಿರುವುದನ್ನೆಲ್ಲಾ ಹೊರಗೆ ಕಕ್ಕಿ ಕವುಚಿಕೊಳ್ಳುವ ಪುಟಾಣಿ ಪ್ಲಾಸ್ಟಿಕ್ ಕಪ್ಪುಗಳನ್ನು ಹಿಡಿದುಕೊಂಡು ಪಟ್ಟಾಂಗಕ್ಕೆ ಸೂಕ್ತ ಜಾಗವನ್ನು ಆಯ್ದುಕೊಂಡು ಎಲ್ಲರೂ ಆಸೀನರಾಗುವುದರೊಳಗೆ ಹತ್ತಾರು ಸಂಗತಿಗಳು ಚರ್ಚಿತವಾಗಿರುತ್ತವೆ. ಬರುಬರುತ್ತಾ ಕಾಫಿ ಲೋಟ ಸಣ್ಣದಾಗುತ್ತಿದೆಯಲ್ಲ ಎಂಬ ಕಳವಳ ಕೆಲವರದಾದರೆ, ಮುಂದಿನ ತಿಂಗಳಿನಿಂದ ಈ ಕಾಫಿ, ಟೀ ಅಭ್ಯಾಸವನ್ನೆಲ್ಲಾ ಬಿಟ್ಟು ಬಿಡಬೇಕು- ದಿನಕ್ಕೆ ಹತ್ತು ರೂಪಾಯಿ ಉಳಿಸಬಹುದು ಅನ್ನುವ ಯೋಜನೆ ಕೆಲವರದ್ದು. ಮೆಲ್ಲಗೆ ನಮ್ಮ ನಮ್ಮ ಕೈಲಿರುವ ಪಾನೀಯವನ್ನು ಹೀರುತ್ತಾ, ಧೂಮಪಾನಿಗಳ ದಾಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳುತ್ತಾ ನಾವು ಮತ್ತೆ ನಮ್ಮ ಗಾಢ ಆಲೋಚನೆಗಳಲ್ಲಿ ಮುಳುಗಿಹೋಗುತ್ತೇವೆ. ಹುಡುಗರಿಗೆ ಸಾಮಾನ್ಯವಾಗಿ ಮಾತನಾಡುವುದಕ್ಕೆ ಏನಿರುತ್ತದೆ ಎಂಬುದು ಹಲವು ಹುಡುಗಿಯರ ಕುತೂಹಲದ ಪ್ರಶ್ನೆ. ಅವರ ಕುತೂಹಲ ಸಹಜವಾದದ್ದೇ, ಏಕೆಂದರೆ ಲೋಕದ ದೃಷ್ಟಿಯಲ್ಲಿ ಹೆಂಗಸರು ಮಾತುಗಾರ್ತಿಯರು. ಆದರೆ ಇಲ್ಲಿ ಲೋಕದ ದೃಷ್ಟಿ ಎಂದರೆ ‘ಗಂಡಸರ ದೃಷ್ಟಿ’ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ! ಸೂಜಿ ಮೊನೆಯಿಂದ ಹಿಮಾಲಯದವರೆಗೆ ಯಾವ ವಿಷಯ ಸಿಕ್ಕರೂ ಬೇಜಾರಿಲ್ಲದೆ ಚಹಾದ ಜೊತೆಗೆ ಮೆಲ್ಲುವುದು ಹುಡುಗರಿಗೇನು ಕಷ್ಟವಲ್ಲ. ಮಾತುಕತೆಯ ಬಹುಪಾಲು ಸಮಯ ಹುಡುಗಿಯರ ವಿಷಯದಲ್ಲೇ ವ್ಯರ್ಥವಾಗುತ್ತದೆ ಎಂಬ ಆರೋಪ ಸತ್ಯವೇ ಆದರೂ ಆ ಜಾಗದಲ್ಲಿ ಬೇರೆ ವಿಷಯ ಇದ್ದರೆ ಆಗುವ ಉಪಯೋಗವೇನು ಎಂದು ಯಾರೂ ಹೇಳರು.

ಬರಿದಾದ ಕಾಫಿ ಕಪ್ಪುಗಳನ್ನು ಕುಳಿತಲ್ಲಿಂದಲ್ಲೇ ಗುರಿಯಿಟ್ಟು ಕಸದ ಬುಟ್ಟಿಗೆ ಎಸೆದು ಸಂಪಾದಕನೊಬ್ಬ ಪತ್ರಿಕೆಯ ಚಂದಾ ಹಣಕ್ಕಾಗಿ ಪರದಾಡುವಂತೆ ದಿನಕ್ಕೊಬ್ಬ ಚಿಲ್ಲರೆಯನ್ನು ಆಯುತ್ತಾ ಅಷ್ಟೂ ಮಂದಿಯ ಖರ್ಚನ್ನು ಹೊಂದಿಸಿ ಅಂಗಡಿಯವನಿಗೆ ಪಾವತಿಸಿ ಹಿಂದಿನ ಸಾಲಕ್ಕೆ ಕೆಲವೊಮ್ಮೆ ಬಾಲಂಗೋಚಿ ಅಂಟಿಸಿ ಕಾಲ್ಕಿತ್ತುವುದು ಸಂಪ್ರದಾಯ. ಕಾಫಿ ಬಾರಿನಿಂದ ವಾಪಸ್ಸು ಹಾಸ್ಟೆಲ್ಲಿಗೆ ಬರುವಾಗ ಹಿಂದೆ ಹೇಳಿದ ಸಂಗತಿಗಳೆಲ್ಲಾ ಪುನರಾವರ್ತನೆಗೊಳ್ಳುವುದು ಸಾಮಾನ್ಯ. ಹದಿನೇಳು ಬಾರಿ ಸೋಮನಾಥ ದೇವಾಲಯಕ್ಕೆ ದಂಡ ಯಾತ್ರೆ ಮಾಡಿದ ನಂತರ ಮಹಮ್ಮದ್ ಘೋರಿಯಾದರೂ ದಣಿದಿದ್ದನೇನೋ ನಾವು ಮಾತ್ರ ದಿನಕ್ಕೆ ಇಪ್ಪತ್ತು ಬಾರಿ ಯಾತ್ರೆ ಕೈಗೊಂಡರೂ ಚೂರೂ ದಣಿಯದೆ, ಕಾಫಿ ತುಂಬಿ ಕೊಂಡು ಚುರುಕಾದ ಮೈಮನಗಳೊಂದಿಗೆ ಹಿಂದಿರುಗುತ್ತೇವೆ.

ಯೂಥ್ ಫೋಕಸ್: ಬಂಗಾರದ ಬಿಂದ್ರಾ

ಭಾರತದಲ್ಲಿ ಕ್ರೀಡೆಯೊಂದೇ ಅಲ್ಲ, ಯಾವ ವ್ಯವಸ್ಥೆಯೂ ಸರಿಯಿಲ್ಲ. ಇಂಥ ಪರಿಸ್ಥಿತಿಯಲ್ಲೂ ಪದಕ ಗೆದ್ದಿರುವ ಮೂವರಿಗೂ ನನ್ನ ಅಭಿನಂದನೆಗಳು.. – ಎಂ.ಜಿ.ಹರೀಶ್ (ಬ್ಲಾಗಿನಲ್ಲಿ ಬಂದದ್ದು)

ನಿಮ್ಮ ಪತ್ರಿಕೆ ಉತ್ತಮವಾಗಿ ಮೂಡಿ ಬರುತ್ತಿದೆ. ನಿಮ್ಮ ಪತ್ರಿಕೆ ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸುತ್ತೇನೆ. – ಗುರುಪ್ರಸಾದ್.ಎಸ್.ಹಟ್ಟಿಗೌಡರ್

ಇಂತಿ ನಿನ್ನ ಪ್ರೀತಿಯ: ಮೆಸೇಜು ಡಬ್ಬಿ ತೆಗೆದು ಕುಟ್ಟಿ ಕಳಿಸಿದ್ದು ಒಂದೇ ಸಾಲು

ಹಮ್.. ಚನ್ನಾಗಿದೆ.. ನಿಜ, ಮೊದಲ ಸಲದ ಪ್ರೀತಿಯಲ್ಲಿ ಇರೊ excitment, curosity, ಕನಸುಗಳು.. ವಿಶೇಷ.. ಚನ್ನಾಗಿ ಬರೀತೀರಿ. – ನಿವೇದಿತಾ (ಬ್ಲಾಗಿನಲ್ಲಿ ಬಂದದ್ದು)

Excellent, I have also the same feeling! -Guru (In blog)

ಹೇಮಾಂತರಂಗ: ಹುಡುಗೀರ್ಯಾಕೆ ಹೀಗೆ?

ತುಂಬಾ ಚೆನ್ನಾಗಿದೆ. ಹೀಂಗೆ ಕೂತ್ಕೊಂಡು ಫ್ರೆಂಡ್ಸ್ ಜೊತೆ ಮಾತನಾಡಿದ ಹಾಗೆ ಬರಹ ಸರಾಗವಾಗಿ ಓದಿಸಿಕೊಳ್ಳುತ್ತೆ.

ಇನ್ನು ಬದಲಾಗುವ ವಿಷಯಕ್ಕೆ ಬಂದ್ರೆ ಹೆಣ್ಣು ಗಂಡು ಎಲ್ಲಾ ಒಂದೆ. ಬದುಕನ್ನು ನೋಡುವ ನಮ್ಮ ಕಣ್ಣುಗಳು ಬದಲಾದ ಹಾಗೆ ಗೊತ್ತಿದ್ಡೋ ಗೊತ್ತಿಲ್ಲದೆಯೋ ಬೇಕಂತಲೆಯೋ.. ಬೇಡವಾದರೂ..ಎಲ್ಲರೂ ಬದಲಾಗಿಯೇ ಆಗುತ್ತಾರೆ… – ವಿಜಯ್‌ರಾಜ್ (ಬ್ಲಾಗಿನಲ್ಲಿ ಬಂದದ್ದು)

ಹೇಮಾ, ನಮ್ಮ (ಹೆಣ್ಣುಗಳ) ವಿಷಯಕ್ಕೆ ಬಂದಾಗ ಪ್ರತಿ ನಡೆಯೂ ಅರ್ಥವಾಗದ ಸಂಗತಿಯೇ ಆಗಿಬಿಡುತ್ತಲ್ವಾ?

ಕಾಲೇಜಲ್ಲಿರ್ತ ಫ್ಲರ್ಟ್ ಅನಿಸ್ಕೊಂಡ ಹುಡುಗಿ ಆಮೇಲೆ ಸತಿ ಸಾವಿತ್ರಿ ಹಾಗೆ ಬಾಳ್ತಿರೋದನ್ನ ನೋಡಿದೀನಿ. ಹಾಗೇ, ಗೌರಮ್ಮ ಅನಿಸ್ಕೊಳ್ತಿದ್ದ ಹುಡುಗಿ ಕಾಳಿಯಾಗಿದ್ದನ್ನೂ! ಚೆನ್ನಾಗಿದೆ ಬರಹ. – ಚೇತನಾ ತೀರ್ಥಹಳ್ಳಿ (ಬ್ಲಾಗಿನಲ್ಲಿ ಬಂದದ್ದು)

ದಿ ಡಿಬೇಟ್: ದೇಶಪ್ರೇಮಿ V/s ವಿಶ್ವಮಾನವ

ಈ ಇಡಿಯ ಚರ್ಚೆ ಸಕಾಲಿಕ ಮತ್ತು ಸುಸಂಬದ್ಧವಾಗಿದೆ. ಇಂತಹದು ಮತ್ತಷ್ಟು ನಡೆಯಲಿ ಎಂದು ಅಶಿಸುವೆ.

– ಚೇತನಾ ತೀರ್ಥಹಳ್ಳಿ (ಬ್ಲಾಗಿನಲ್ಲಿ ಬಂದದ್ದು)

ನಾನ್ರೀ ಎಡಿಟರ್: ಎರಡು ಸಿನೆಮಾ ಹಾಗೂ ಒಂದು ಮಾತು!

ತುಂಬಾ ಅದ್ಭುತವಾಗಿ ಬರೆದಿದ್ದೀರ ಸುಪ್ರೀತ್. ನಾನು ಕೂಡ ಈ ಸಿನೆಮಾ ನೋಡಿದೆ… ಇದರ ಬಗ್ಗೆ ವಿಮರ್ಶಾತ್ಮಕವಾಗಿ ಬರೆಯಬೇಕು ಅಂದುಕೊಂಡೆ ಆದರೆ ಚಿತ್ರದ ಇಂಪ್ಯಾಕ್ಟಿನಲ್ಲಿ ಮುಳುಗಿ ಹೊಗಿದ್ದೆ… ಹಾಗಾಗಿ ನನ್ನ ಬ್ಲಾಗಿನಲ್ಲಿ ಸುಮ್ಮನೆ ಪರಿಚಯ ತರಹ ಬರೆದಿದ್ದೆ.

ನಿಮ್ಮ ಲೇಖನ ನೊಡಿ ಎಷ್ಟು ಖುಶಿಯಾಯಿತೆಂದರೆ, ಈ ಎರಡೂ ಸಿನೆಮಾ ನೋಡಿದಾಗ ಆದಷ್ಟು…

  • ವಿಜಯ್‌ರಾಜ್ (ಬ್ಲಾಗಿನಲ್ಲಿ ಬಂದದ್ದು)

ನಾನಿನ್ನೂ ‘ಮುಂಬೈ ಮೇರಿ ಜಾನ್’ ನೋಡಿಲ್ಲ. ‘ಎ ವೆಡ್‌ನೆಸ್ ಡೇ’ ನೋಡಿದ್ದೇನೆ. ನಾನು ನೋಡಿದ ಅತ್ಯುತ್ತಮ ಚಿತ್ರಗಳಲ್ಲಿ ಖಂಡಿತಾ ಇದೂ ಒಂದು. – ಎಂ.ಜಿ.ಹರೀಶ್

ಕಳೆದ ಎರಡು ‘ಸಡಗರ’ ನೋಡಿದೆ. ತುಂಬಾ ಚೆನ್ನಾಗಿ ಬಂದಿದೆ. ‘ನಾವೆಷ್ಟು ಸ್ವತಂತ್ರರು?’ ಲೇಖನ ತುಂಬಾ ಚೆನ್ನಾಗಿ ಬರೆದಿದ್ದೀರಿ. ನಿಜಕ್ಕೂ ನನಗೆ ಹಿಡಿಸಿತು. ಇನ್ನೂ ಹೆಚ್ಚು, ಹೆಚ್ಚು ಮನದ ವಿಷಯಗಳು ಇರಲಿ. “ಫ್ರೆಂಡ್‌ಷಿಪ್ ಕಾಲಂ” ಒಂದು ಇದ್ದಿದ್ದರೆ ತುಂಬಾ ಮೆರಗು ಬರುತ್ತಿತ್ತು. ಇರಲಿ ಯಾವುದಕ್ಕೂ ನಿಮ್ಮ ಪ್ರಯತ್ನಕ್ಕೆ. ಶುಭವಾಗಲಿ.

– ನಂದಕಿಶೋರ ಗೌಡರ,ಹುಕ್ಕೇರಿ

– ಅಜಿತ ಚಂದ್ರ.ಎಸ್, ಬೆಂಗಳೂರು

ನಮ್ಮ ಬದುಕಿನ ಪಯಣ ಎಲ್ಲಿಗೆ?….. ಪ್ರಶ್ನೆ ವಿಚಿತ್ರ ಎನಿಸಿದರೆ ಅದು ಸಹಜ. ಆದರೆ ಆತ್ಮಾವಲೋಕನೆಗೆ ಕುಳಿತರೆ ಎಲ್ಲರ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದೇ ಎಂಬುದು ನನ್ನ ನಂಬಿಕೆ.

ಬದುಕು ಸಾಗುವ ಬಗೆಗೆ ಕುಳಿತು ಯೋಚಿಸಿದಾಗ ಎಲ್ಲರ ಮನಸ್ಸನ್ನು ಹೊಕ್ಕುವ ಯೋಚನೆ- ನನ್ನ ಬದುಕಿನ ಗುರಿ ಯಾವುದು?? ಅದರೆಡೆಗಿನ ಹಾದಿ ಎಷ್ಟು ಹಸನಾಗಿದೆ?? ಬದುಕಿನ ಪಯಣದ ಹಾದಿಯಲ್ಲಿ ಬಂದ ಸಂತಸದ ಆ ಮನತುಂಬಿದ ಸವಿಘಳಿಗೆಗಳು, ಅವುಗಳ ಸಿಹಿ ನೆನಪುಗಳು……. ಅಲ್ಲಲ್ಲಿ ಮನಸ್ಸನ್ನು ಕಲಕುವ, ಮರೆಯಲೇ ಬೇಕೆಂದಿದ್ದರೂ ಮರೆಯಲಾಗದ ಘಟನೆಗಳು, ದುಗುಡ-ದುಮ್ಮಾನಗಳು… ಹೀಗೆ ಮನಸ್ಸಿನಲ್ಲಿಯೇ ಮಂಥನ ನಡೆದರೆ ಎಲ್ಲರಿಗೂ ಎಂದಿಗೂ ಗೋಚರಿಸುವ ಒಂದು ಸತ್ಯ- ಬಾಳು ಸುಖ-ದುಃಖಗಳ ಮಿಲನ ಎಂಬುದು. ಪ್ರತಿಯೊಬ್ಬರ ಬದುಕೂ ನೆರಳು-ಬೆಳಕಿನ ನಡುವೆ..

ತನ್ನ ಹಸಿವನ್ನು ಹಿಂಗಿಸುವ ಸಲುವಾಗಿ ಹೂವಿಂದ ಹೂವಿಗೆ ಹಾರಿ ಮಕರಂದವನ್ನು ಹೀರುವ ದುಂಬಿಯಂತೆ ಪ್ರತಿಯೊಬ್ಬರ ಮನಸ್ಸು ತನ್ನನ್ನು ಅರಿತು ಪ್ರೀತಿಸುವ, ತನ್ನ ಮನಸ್ಸಿಗೆ ಸ್ಪಂದಿಸುವ ಮನಸ್ಸನ್ನು ಅರಸಿ ಸಾಗುತ್ತದೆ. ಹೀಗೆ ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಬ್ಬನ ಮನಸ್ಸು ತನ್ನ ಬದುಕಿನ ಪಯಣದ ಯಾವುದೇ ಹಂತದಲ್ಲಾದರೂ ತನಗೆ ಸ್ಪಂದಿಸುವ ಮನಸ್ಸನ್ನು ಬಯಸಿ ಅದರ ಹುಡುಕಾಟದಲ್ಲಿರುತ್ತದೆ. ಮನಸ್ಸು ತನ್ನ ನೆಮ್ಮದಿಗಾಗಿ ಪ್ರೀತಿ-ನಂಬಿಕೆಗಳನ್ನು ಗಳಿಸಲು ಅದನ್ನು ಹಂಚಿಕೊಳ್ಳಲು ಬಯಸುತ್ತದೆ. ಮೂಲಭೂತವಾಗಿ ಎಲ್ಲರ ಮನಸ್ಸು ನೆಮ್ಮದಿಯ ಬೆಳಕನ್ನು ಕಾಣಬಯಸುತ್ತದೆ.

ಕನಸಿನಿಂದಲೇ ಮನುಷ್ಯನಿಗೊಂದು ಗುರಿ ಎಂದು ಸಿಗುವುದು. ಆ ಗುರಿಯನ್ನು ತಲುಪುವುದರೆಡೆಗೆ ಅವನ ಶಕ್ತಿಯ, ಬುದ್ಧಿಯ ವಿನಿಯೋಗ… ಗುರಿ ತಲುಪಿದಾಗ ಮನುಷ್ಯನ ಸಂತೋಷಕ್ಕೆ ಆಕಾಶವೇ ಅಂಚು… ಏನಾದರೂ, ಆ ಸಂತಸ ಕ್ಷಣಿಕ. ಕಣ್ಣಿನಲ್ಲಿ ಮತ್ತೊಂದು ಕನಸು, ಗುರಿ… ಅಲ್ಲಿಂದ ಅದರೆಡೆಗೆ ನಮ್ಮ ಪಯಣ. ಹೀಗೆ ನಿರಂತರ ಪಯಣವೇ ಜೀವನ. ದಾರಿಯಲ್ಲಿ ಸಿಗುವ, ಗುರಿ ತಲುಪಿದಾಗ ಮನಸ್ಸು ಹೊಂದುವ ಆ ಕ್ಷಣಿಕ ಸಂತೋಷಗಳು ಕತ್ತಲಲ್ಲಿ ಹತಾಶೆಯ ಹೊಂದಿ ಪಯಣವನ್ನು ನಿಲ್ಲಿಸುವ ಹಂತ ತಲುಪಿದ ಮನಸ್ಸುಗಳಲ್ಲಿ ಆಸೆಯ ಚಿಲುಮೆಯನ್ನು ಮತ್ತೆ ಮೂಡಿಸುವ ಸಾಧನ. ಎಲ್ಲರ ಪಯಣವೂ ದೂರದಲ್ಲೆಲ್ಲೋ ಗೋಚರಿಸುವ ಪ್ರಕಾಶiiನವಾದ ಬೆಳಕಿನ ಕಡೆಗೆ…

ಹೀಗೆ ಮನುಷ್ಯನ ಜೀವನದಲ್ಲಿ, ತನ್ನ ಬದಲಾಗುವ ಗುರಿಗಳ ಕಡೆಗಿನ ಪಯಣದಲ್ಲಿ ಎಂದಿಗೂ ಎಡವದೆ ಮುಂದೆ ಹೋಗಲು ಸಧ್ಯವಿಲ್ಲ. ಸೋಲೇ ಗೆಲುವಿನ ಮೆಟ್ಟಿಲು ಎಂಬ ಹಿರಿಯರ ಅನುಭವದಿಂದ ಹೊರಹೊಮ್ಮಿದ iiತು ಈ ವಿಷಯವನ್ನು ಪುಷ್ಠೀಕರಿಸುತ್ತದೆ. ಹೀಗೆ ಎಡವಿ-ದಡವೀ ಸಾಗುವ ಬದುಕಿನ ಪಯಣದಲ್ಲಿ ಕೆಲವೊಮ್ಮೆ ಮನಸ್ಸು ದಿಶೆ ತಪ್ಪಿ ಹತಾಶವಾಗುತ್ತದೆ. ತನ್ನ ಆಸೆಗಳನ್ನು ಕಳೆದುಕೊಂಡು ಗುರಿಯಿಂದ ವಿಮುಖವಗುತ್ತದೆ. ಭಾವನೆಗಳ ತೊಳಲಾಟದಲ್ಲಿ ಮುಳುಗಿ ನೆಮ್ಮದಿಯೆಂಬ ಬೆಳಕಿನಿಂದ ದೂರವಾಗುತ್ತದೆ. ಬದುಕಿನ ಇನ್ನೊಂದು ಬಣ್ಣವಾದ ಕತ್ತಲಿನಲ್ಲಿ ಕಳೆದುಹೋಗುತ್ತದೆ.

ಬೆಳಕಿನ ದಿಕ್ಕಿನಲ್ಲೇ ಬೆಳೆಂiವ ಬಳ್ಳಿಯಂತೆ ನಮ್ಮು ಮನಸ್ಸೂ ಸಹ ಎಲ್ಲ ಅಡೆತಡೆಗಳನ್ನೂ ದಾಟಿ, ಅದರ ಚೈತನ್ಯವನ್ನೆಲ್ಲ ಒಟ್ಟುಗೂಡಿಸಿಕೊಂಡು ಮತ್ತೆ ತನ್ನ ಗುರಿಯ ಕಡೆಗೆ ಪಯಣಿಸುವ ಸಕಲ ಪ್ರಯತ್ನವನ್ನೂ ಮಾಡುತ್ತದೆ. ಆ ಮೂಲಕ ನೆಮ್ಮದಿ ಪಡೆಯುತ್ತದೆ. ಆ ಚೈತನ್ಯವನ್ನು ಮೈಗೂಡಿಸಿಕೊಳ್ಳಲು ಅಥವಾ ಅಂಥದೊಂದು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಲು ಒಂದು ಮಾತನ್ನು ನೆನಪಿನಲ್ಲಿಡಬೇಕು- ಬದುಕು ನೆರಳು-ಬೆಳಕಿನ ನಡುವೆ.

– ಮಚೆಂಪು

ದೀಪಾವಳಿಯಲ್ಲಿ ಹಾಯಾಗಿ ಪಟಾಕಿಗೆ ಬೆಂಕಿ ಹಚ್ಚಿ ಕುಣಿದು ಕುಪ್ಪಳಿಸಿದ ನಂಗೆ ಮಾರನೆಯ ದಿನಾನೇ ತಲೇಮೇಲೆ ಬೆಂಕಿ ಇಟ್ರು ನಂ universityನವ್ರು. Exam dates unfortunately prepone ಆಗ್ಬಿಟ್ಟಿದೆ. ಕನ್ನಡಕವನ್ನು ತಿರುಗಿಸಿ, ಮುರುಗಿಸಿ, ಉಜ್ಜಿ, ಒರೆಸಿ ನೋಡಿದ್ರೂ ಅದೇ date. ಎಲ್ಲಾ unexpectedಉ. Full tensionಉ. ಏನ್ಮಾಡೋದು ಅನ್ನೋದೆ questionಉ.

ವರ್ಷದ beginning ನಿಂದ ಇಲ್ಲಿಯವರೆಗೆ ಆಗಿರೋ ಎಲ್ಲಾ portion Greek and Latin dmbtest ಆಗಿಬಿಟ್ಟಿದೆ. Internalsನಲ್ಲಂತೂ ಹೆಂಗೋ ಆ ಕಡೆ, ಈ ಕಡೆ ತಲೆಯಾಡಿಸಿಕೊಂಡು, paperನಲ್ಲಿ ಪುಳಿಯೋಗರೆ ಮಾಡಿ pass ಆಗ್ಬಿಟ್ಟೆ. ಆದ್ರೆ ಇದು ದೊಡ್ಡ examಉ. Squad, examiner, invigilator ಅಂತ ನೂರಾರು ಜನ CIDಗಳು, ಹೆಂಗೆ ಹುಡ್ಗೂರನ್ನ catch ಹಾಕೋದು ಅಂತ ಬಾಲ ಸುಟ್ಟ ಬೆಕ್ಕಿನ ಥರ ಓಡಾಡ್ತಿರ್ತಾರೆ. ಬೆಂಚುಗಳ middleನಲ್ಲಿ ಕಿಲೋಮೀಟರ್‌ಗಟ್ಲೆ gap. Friendshipನ ಇದೊಂದು ಕೆಲಸಕ್ಕೆ ನಿಯತ್ತಾಗಿ ಉಅಪಯೋಗಿಸ್ಕೊಂತಿದ್ದೆ. ಅದಕ್ಕೂ ಕಲ್ಲು ಬಿದ್ದದೆ.

ಕೊನೇ ೨೦ ದಿನ. ಏನಾದ್ರೂ ಆಗ್ಲಿ text bookನ ಅಟ್‍ಲೀಸ್ಟ್ ಹಂಗೆ ಒಮ್ಮೆ ತಿರುಗಾಡಿಸಿ ನೋಡಣ ಅಂತ ರೀಡಿಂಗ್ ರೂಮಿನಲ್ಲಿ ಹೋಗಿ ಕೂತ್ರೆ, ಹಂಗೆ ತಂಪಾಗಿ ನಿದ್ದೆ ಕಣ್ಮೇಲೆ ಬಂದು settle ಆಗ್ಬಿಡುತ್ತೆ. ಅದ್ರಲ್ಲೂ, ನಮ್ಮ hostelನಲ್ಲಿ ಬೆಳಿಗ್ಗೆ ಏನಾದ್ರೂ ದೋಸೆ ತಿಂದಿದ್ದೆ ಅಂದ್ರೆ, ಮುಗೀತು; ಅವತ್ತು ಹಂಗೇ flat. ನಿದ್ದೆ ಬರ್ಬೇಕು, ಆದ್ರೆ ಹೀಗೆ ಬರ್ಬಾರ್ದ timeನಲ್ಲಿ ಬಂದು ಅಟಕಾಯಿಸಿಕೊಂಡ್ರೆ, ನಾನು ಬರ್ಬಾದು ಆಗೋಗ್ಬಿಡ್ತೀನಿ ಅಷ್ಟೇ!

ಇನ್ನೊಂದು ಕಡೆಯಿಂದ ನಮ್ಮ ಹುಡ್ಗೂರು ಬೇರೆ ಟೆನ್ಷನ್ ಕೊಡ್ತಾ ಇದಾರೆ. Bathroom ಗೋದ್ರೂ ಬುಕ್ ಬಿಡಾಕಿಲ್ಲ ಅಂತ ಶಪಥ ಮಾಡ್ಬಿಟ್ಟಿದ್ದಾರೆ. ವರ್ಷ ಇದೀ ತಲೆ ಬಗ್ಗಿಸ್ಕೊಂಡು ಓದಿದಾರೆ, ಈಗ್ಲೂ ‘ಲೋ ಬನ್ರೋ, ಎಷ್ಟು ಓದ್ತೀರಾ? Bore ಆಗ್ತಾ ಇದೆ. ಹಂಗೆ ಕುಕ್ರಳ್ಳಿ ಕೆರೆಗೆ ಹೋಗಿ ಬರಾಣ’ ಅಂದ್ರೆ, “ಮುಂದೋಗಲೋ ಬಂದ್ಬಿಟ್ಟ. ಈ ಸಾರಿ ಪಾಸ್ ಆಗ್ಬೇಕು ಅಂತ ಕನಸು ಕಾಣ್ತಾ ಇದೀವಿ. Disturb ಮಾಡ್ಬೇಡ. ಕಳಚಿಕೋ!” ಅಂತ full fledge ಆಗಿ dialogue ಹೊಡೀತಾ ಇದ್ದಾರೆ. ಈ ಕಡೆ moodಉ ಇಲ್ಲ, ಆ ಕಡೆ foodಉ ಇಳೀತಿಲ್ಲ. ಹಿಂಗಾಗ್ಬಿಟ್ಟಿದೆ ನನ್ನ ಪರಿಸ್ಥಿತಿ.

Actually classes ಇನ್ನೂ ಹತ್ತು ದಿನ ನಡಿಲಿಕ್ಕಿದೆ. ಆದ್ರೆ, classನಲ್ಲಿ ಒಂದು ನರಪಿಳ್ಳೆನೂ ಕಾಣ್ತಾಇಲ್ಲ. ವರ್ಷ ಪೂರ್ತಿ ಥಿಯೇಟರ್‌ನಲ್ಲೇ ಪಾಠ ಕೇಳಿದ ನಂಗೆ, attendance shortage ಆಗಿ, ಯಾರೂ ಇಲ್ಲ ಅಂದ್ರೂ, ಕೂತ್ಕಂಡು ಪಾಠ ಕೇಳೋ ಪರಿಸ್ಥಿತಿ. ನನ್ನ ಹೆಸರು ಎಲ್ಲಾ lecturersಗೂ ಚಿರಪರಿಚಿತ. ಪಾಠ ಮಾಡಿದ್ನ ಕೂದ್ಲೆಲ್ಲಾ ಹರ್ಕಂಡು, ತಲೆ ಒಳಕ್ಕೆ ಒಂದೆರಡು ಅಕ್ಷರಾನ ತೂರಿಸೋಣ ಅಂತ ಹರಸಾಹಸ ಮಾಡಿದ್ರೂ, no use. ಇಡೀ ಒಂದ್ಗಂಟೆ ಪಾಠ ಮಾಡಿ ಕೊನೆಗೆ ಪಾಠದ ಹೆಸರೇನು ಅಂತ ಗೊತ್ತಿರಲಿಲ್ಲ ಅಂತ ಅವರಿಗೆ ತಿಳಿದು ಹೋಗಿದ್ದಕ್ಕೆ ಮೂರು ದಿನ assignment ಕೊಟ್ಟು, ಇರೋ ಅಲ್ಪಸ್ವಲ್ಪ timeನೂ ನುಂಗಿ ನೀರು ಕುಡೀತಾ ಇದಾರೆ.

ಎಲ್ರೂ ನಿದ್ದೆ ಬರ್ಬಾರ್ದು ಅಂತ ಟೀ ಕುಡುದ್ರೆ, ಹಾಳಾದ್ದು, ನಾನು ಟೀ ಕುಡುದ್ರೆ ನಿದ್ದೆ ಇನ್ನೂ accelerate ಆಗುತ್ತೆ. ಆದ್ರೂ ಈ ಟ್ರೆಂಡ್‌ನ ಮಾತ್ರ ನಾನು ಬಿಡದಿಲ್ಲ. Canteen uncleಉ, “ಏನ್ಸಾರ್? ನೀವು ಓದಕ್ಕೆ reading roomಗೆ ಬರ್ತೀರೋ ಅಥವಾ canteenಗೆ ಬರ್ತೀರೋ?” ಅಂತ ಓಪನ್ ಆಗಿ question ಕೇಳಿ ಇರೋ ಚೂರುಪಾರು ಮರ್ಯಾದೀನೂ ಹರಾಜಿಗೆ ಎಳೆದುಬಿಟಿದ್ರು. ಹೆಂಗೋ ಸುಧಾರಿಸಿಕೊಂಡು ದಿನಚರ್ಯಾನಾ ಮುಂದುವರೆಸ್ತಾ ಇದೀನಿ.

ಓದಕ್ಕೆ kgಗಟ್ಲೇ ಇದೆ. ಆದ್ರೆ time ಇರೋದು seconds ಲೆಕ್ಕದಲ್ಲಿ. Last benchನ ‘ದಾದಾ’ ಆದ ನಂಗೆ ಇದು ಕಾಮನ್ನು. ಆದ್ರೆ, ಹೆದರಿಕೆ ಅನ್ನೋದು ನನ್ನಲ್ಲೂ ಇದೆ ಅಂತ ಮೆತ್ತಗೆ ಬಾಯ್ಬಿಡ್ತಾ ಇದೀನಿ. ಯಾರೂ ತಪ್ಪು ತಿಳ್ಕೋಬೇಡಿ. ಇದೊಂದೇ ಸರಿ ನಾನು ಮೊದಲನೆಯ ಬೆಂಚಿನ brilliants ಹತ್ರ ಮೊರೆಹೋಗಿ, ಶರಣಾಗಿ, ಅದೂ ಇದೂ ಹೇಳಿಸಿಕೊಂಡು ಪಾಸ್ ಆಗೋದು. So, once again thanks to them.

Friends! Next time I am going to bring about a change in my writing. Presently ಬರೀತಾ ಇರೋ style ಬೊರ್ ಬಂತು ಅಂತ ಸುಮಾರು ಜನ ಹೇಳಿದ ಪ್ರಕಾರ, ಈ decision ತೆಗೆದುಕೊಂದಿದೀನಿ. ಇದಕ್ಕೆ ತಮ್ಮದೇನಾದ್ರೂ suggestions ಅಥವಾ ಯಾವ ಥರ ಬರೀಬೇಕು ಅನ್ನೋ idea ಏನಾದ್ರೂ ಇದ್ರೆ, ಹಂಗೆ ನಮ್ಮ Editor ಸಾಹೇಬ್ರಿಗೆ ಬಿಸಾಕಿ ಪುಣ್ಯ ಕಟ್ಕಳಿ.

Wishing you belated Diwali wishes…

ನಿಮ್ಮ ಮನೆ ಹುಡುಗ,

ಮಚೆಂಪು

– ‘ಅಂತರ್ಮುಖಿ’

ಹೈಸ್ಕೂಲು ದಿನಗಳಿಂದಲೂ ಪತ್ರಕರ್ತರ ಬಗ್ಗೆ ನನಗೆ ವಿಲಕ್ಷಣವಾದ ಕುತೂಹಲ ಬೆಳೆದಿತ್ತು. ಯಾವ ಹಾಲಿವುಡ್ ಹೀರೋನ ಸಾಹಸಗಳಿಗೂ ಕಡಿಮೆಯಿರದ ‘ಹಾಯ್ ಬೆಂಗಳೂರ್’ ಸಂಪಾದಕರಾದ ರವಿ ಬೆಳಗೆರೆಯವರ ಚಿತ್ರ ವಿಚಿತ್ರ ಸಾಧನೆಗಳು, ಮೈಲುಗಲ್ಲುಗಳು ಹಾಗೂ ರೋಮಾಂಚನಕಾರಿ ಸಾಹಸಗಳು, ಅವುಗಳಷ್ಟೇ ಥ್ರಿಲ್ಲಿಂಗಾಗಿರುತ್ತಿದ್ದ ಅವರ ಬರವಣಿಗೆ ಪತ್ರಕರ್ತ ಎಂದರೆ ಸಿನೆಮಾದಲ್ಲಿ ಅಕರಾಳ-ವಿಕಾರಾಳವಾಗಿ ಮುಖಭಾವ ಪ್ರಕಟಿಸುತ್ತಾ ಆಕ್ರಮಣ ಮಾಡುವ ಹತ್ತಾರು ಮಂದಿ ದಾಂಢಿಗರಿಗೆ ಒದೆ ಕೊಟ್ಟು ಗರಿ ಮುರಿಯದ ಶರ್ಟನ್ನೊಮ್ಮೆ ಕೊಡವಿ ನಿಂತು ಕೈ ಬೀಸುವ ಸಣಕಲ ಹೀರೋನ ಹಾಗೆ ಎಂಬ ಭ್ರಮೆಯನ್ನು ಮೂಡಿಸುತ್ತಿದ್ದವು. ಪತ್ರಿಕೋದ್ಯಮವೆಂಬುದು ಅತ್ಯಂತ ತ್ಯಾಗಮಯವಾದ, ನಿಸ್ವಾರ್ಥದಿಂದ ಕೂಡಿದ ಉದ್ಯಮ ಎಂಬುದು ಆಗಿನ ಗ್ರಹಿಕೆಯಾಗಿತ್ತು. ಸತ್ಯದ ಉಪಾಸಕರನ್ನು ಪತ್ರಕರ್ತರು ಎಂಬ ಹೆಸರಿನಿಂದ ಕರೆಯುತ್ತಾರೆ, ಜಗತ್ತಿಗೆ ಎಂದಾದರೂ ಪ್ರಾಮಾಣಿಕತೆ, ನಿಷ್ಠುರತೆ, ವಸ್ತುನಿಷ್ಠತೆ, ಧೈರ್ಯಗಳ ಕೊರತೆ ಬಿದ್ದರೆ ಇವರಿಂದ ಕಡ ಪಡೆಯಬಹುದು ಎಂಬುದು ಮುಗ್ಧ ನಂಬಿಕೆಯಾಗಿತ್ತು. ಪತ್ರಿಕೆಗಳಲ್ಲಿ ಪ್ರಕಟವಾಗುವುದು ಗಾಸ್ಪೆಲ್ ಟ್ರುಥ್ ಎಂದು ಈಗಲೂ ಶ್ರದ್ಧೆಯಿಂದ ನಂಬುವ ‘ಭಕ್ತಾದಿ’ಗಳಲ್ಲಿ ನಾನೂ ಒಬ್ಬನಾಗಿದ್ದೆ. ಪತ್ರಿಕೆಗಳ ಬಗ್ಗೆ, ಪತ್ರಕರ್ತರ ಬಗ್ಗೆ ನನ್ನ ಕ್ರೇಜು ಅದೆಷ್ಟರ ಮಟ್ಟಿಗೆ ಹುಚ್ಚುತನದ ಪರಿಧಿಯನ್ನು ಮುಟ್ಟುತ್ತಿತ್ತೆಂದರೆ ನ್ಯೂಸ್ ಸ್ಟಾಂಡಿನಲ್ಲಿ ಕಣ್ಣಿಗೆ ಬೀಳುವ ಪ್ರತಿಯೊಂದು ಹೊಸ ಪತ್ರಿಕೆಯನ್ನೂ ತಂದಿಟ್ಟುಕೊಂಡು ಜೋಪಾನ ಮಾಡುತ್ತಿದ್ದೆ. Paper Man

ಅಳಿಕೆಯಲ್ಲಿ ಕಾಲೇಜು ಓದುವುದಕ್ಕೆ ಸೇರಿದಾಗ ನನ್ನ ಅನೇಕ ಹುಚ್ಚಾಟಗಳಿಗೆ ಅನಿವಾರ್ಯವಾಗಿ ಕಡಿವಾಣ ಹಾಕಿಕೊಳ್ಳಬೇಕಿತ್ತು. ಕಾಲೇಜಿನ ಇನ್ನೂರು ಚಿಲ್ಲರೆ ಹುಡುಗರಿಗೆ ಸೇರಿ ಅಲ್ಲಿಗೆ ನಾಲ್ಕು ಪೇಪರುಗಳು ಬರುತ್ತಿದ್ದವು. ಎರಡು ಇಂಗ್ಲೀಷು, ಎರಡು ಕನ್ನಡ. ಜೊತೆಗೆ ಜಗತ್ತಿನಲ್ಲಿ ಇರಬಹುದಾದ ಅತ್ಯಂತ ಸಪ್ಪೆಯಾದ, ಎಂಥಾ ಸಾಹಸಿಗಾದರೂ ಬೋರು ಹೊಡೆಸುವ ಆಧ್ಯಾತ್ಮಿಕ ಮಾಸ ಪತ್ರಿಕೆಗಳು ಬಿಟ್ಟರೆ ಬೇರಾವ ಸರಕೂ ನಮ್ಮ ಕೈಗೆ ಸಿಕ್ಕುತ್ತಿರಲಿಲ್ಲ. ಇದ್ದುದರಲ್ಲಿ ಟೈಮ್ಸಾಫಿಂಡಿಯಾದ ಮನರಂಜನೆಯ ಪುಟಗಳು, ವಿಜಯಕರ್ನಾಟಕದ ಕೆಲವು ಜನಪ್ರಿಯ ಅಂಕಣಗಳು ನಮ್ಮ ಹಸಿವನ್ನು ತಣಿಸುತ್ತಾ ನಮ್ಮ ಪ್ರಾಣವನ್ನು ಉಳಿಸಿದ್ದವು ಎನ್ನಬಹುದು! ಬೆಳಗಿನ ತಿಂಡಿಯನ್ನು ಮುಗಿಸಿಕೊಂಡು ಒಲಂಪಿಕ್ಸಿನಲ್ಲಿ ಓಡಿದಂತೆ ನಾವು ರೀಡಿಂಗ್ ರೂಮಿಗೆ ಓಡುತ್ತಿದ್ದೆವು. ಸಾಮಾನ್ಯವಾಗಿ ಈ ರೇಸಿನಲ್ಲಿ ಭಾಗವಹಿಸುವವರ ಸಂಖ್ಯೆ ನಾಲ್ಕಕ್ಕಿಂತ ಹೆಚ್ಚು ಇರುತ್ತಿರಲಿಲ್ಲ. ಒಂದು ವೇಳೆ ಈ ಸಂಖ್ಯೆ ನಾಲ್ಕನ್ನು ದಾಟಿ ಹತ್ತು-ಹದಿನೈದರ ಗಡಿಯನ್ನು ಮುಟ್ಟಿತು ಎಂದರೆ ಹಿಂದಿನ ದಿನ ಯಾವುದೋ ಕ್ರಿಕೆಟ್ ಮ್ಯಾಚ್ ನಡೆದಿರಬೇಕು ಎಂತಲೇ ತಿಳಿಯಬೇಕು. ಪ್ರಪಂಚದ ಹೊಸ ಹೊಸ ಆವಿಷ್ಕಾರಗಳನ್ನು, ವಿದ್ಯಮಾನಗಳನ್ನು ಅರಗಿಸಿಕೊಂಡು ಗಟ್ಟಿಗರಾಗಲು ತಯಾರಾಗುತ್ತಿದ್ದ ನಮ್ಮಂತಹ ನೂರಾರು ವಿದ್ಯಾರ್ಥಿಗಳಿಗೆ ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಯಾರು ಗೆದ್ದರು ಎಂಬುದು ತಿಳಿಯುವುದಕ್ಕೆ ಸುಮಾರು ಹತ್ತು ಹನ್ನೆರಡು ತಾಸು ಬೇಕಾಗಿತ್ತು ಎಂಬುದನ್ನು ತಿಳಿದರೆ ಸಂಪರ್ಕ ಕ್ರಾಂತಿಯ ಪಿತಾಮಹ ಎದೆ ಒಡೆದು ಸಾಯುತ್ತಿದ್ದುದು ಖಂಡಿತ!

ಹೀಗೆ ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ಎಂಬ ಡಾರ್ವಿನನ್ನ ಸಿದ್ಧಾಂತವನ್ನು ಅತ್ಯಂತ ಸಮರ್ಕಪವಾಗಿ ಅನುಷ್ಠಾನಕ್ಕೆ ತಂದು ಸುದ್ದಿ ಸಮಾಚಾರಗಳನ್ನು ತಿಳಿದುಕೊಂಡು, ಜಗತ್ತಿನ ವಿದ್ಯಮಾನದ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಭವ್ಯ ಭಾರತದ ಜವಾಬ್ದಾರಿಯುತ ಪ್ರಜೆಯಾಗುವ ಹಾದಿಯಲ್ಲಿ ಸಮರ್ಪಕವಾಗಿ ನಡೆಯುತ್ತಿದ್ದೇವೆ ಎಂದು ನಮ್ಮನ್ನು ನಾವು ಸಂತೈಸಿಕೊಳ್ಳುತ್ತಿದ್ದೆವು. ಹೈಸ್ಕೂಲಿನಲ್ಲಿದ್ದಾಗ ಕಂಡಕಂಡ ಪತ್ರಿಕೆ, ಮ್ಯಾಗಜೀನುಗಳನ್ನು ಗುಡ್ಡೆ ಹಾಕಿಕೊಂಡು ಶೂನ್ಯ ಸಂಪಾದನೆ ಮಾಡುತ್ತಿದ್ದ ನನಗೆ ನಮ್ಮ ಕಾಲೇಜಿನ ರೀಡಿಂಗ್ ರೂಮೆಂಬುದು ಪ್ರತಿದಿನ ಮೃಷ್ಟಾನ್ನ ತಿಂದು ಹಾಲಿನಲ್ಲಿ ಕೈತೊಳೆಯುವವನಿಗೆ ಗಂಜಿ ಕುಡಿಸಿ ಕೈತೊಳೆಯಲು ಬೀದಿ ನಲ್ಲಿ ತೋರಿದ ಹಾಗಾಗಿತ್ತು. ಆದರೂ ಮರುಭೂಮಿಯಲ್ಲಿನ ಓಯಸ್ಸಿಸಿನ ಹಾಗೆ ನನ್ನ ಹಾಗೂ ನನ್ನಂಥ ತಿಕ್ಕಲರ ದಾಹವನ್ನು ತೀರಿಸುವುದಕ್ಕಾಗಿ ವಿಜಯ ಕರ್ನಾಟಕ, ಟೈಮ್ಸಾಫಿಂಡಿಯ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್‌ಗಳು ಕೈಲಾದ ಪ್ರಯತ್ನ ಮಾಡುತ್ತಿದ್ದವು. ವಿಜಯ ಕರ್ನಾಟಕವನ್ನು ಅದೆಷ್ಟು ಗಾಢವಾಗಿ ಓದುತ್ತಿದ್ದೆವೆಂದರೆ ಪತ್ರಿಕೆಯ ಮಧ್ಯದ ಸಂಪಾದಕೀಯ ಪುಟವನ್ನು ನೋಡಿಯೇ ಇವತ್ತು ಯಾವ ದಿನ ಎಂಬುದನ್ನು ಹೇಳಬಲ್ಲ ಕೌಶಲ್ಯವನ್ನು ಸಂಪಾದಿಸಿಕೊಂಡಿದ್ದೆವು. ಗುರುವಾರವೆಂದರೆ ವಿಶ್ವೇಶ್ವರ ಭಟ್ಟರ ನೂರೆಂಟು ಮಾತು, ಆ ಜಾಗದಲ್ಲಿ ಚೂಪು ನೋಟದ ಬೈತೆಲೆ ಕ್ರಾಪಿನ ಯುವಕನೊಬ್ಬನ ಫೋಟೊ ಪ್ರಕಟವಾಗಿದೆಯೆಂದರೆ ನಿಸ್ಸಂಶಯವಾಗಿ ಅದು ‘ಬೆತ್ತಲೆ ಜಗತ್ತು’ ಎಂದು ಹೇಳಿಬಿಡಬಹುದಿತ್ತು,ಜೊತೆಗೆ ಅಂದು ಶನಿವಾರ ಎಂಬುದನ್ನು ಯಾವ ಪಂಚಾಂಗದ ನೆರವಿಲ್ಲದೆ ಹೇಳಿಬಿಡುತ್ತಿದ್ದೆವು. ಭಾನುವಾರವೆಂಬ ‘ಸಬ್ಬತ್ ದಿನ’ವನ್ನು ನಾವು ಪರಮ ಶ್ರದ್ಧಾವಂತ ಯಹೂದಿಗಿಂತ ಶ್ರದ್ಧೆಯಿಂದ ಆಚರಿಸುತ್ತಿದ್ದೆವು. ಆ ದಿನ ಕೆಲಸಕ್ಕೆ ರಜೆ. ಯಾವ ಕೆಲಸವನ್ನೂ ಮಾಡಬಾರದು ಎಂಬುದು ಯಹೂದಿಗಳ ನಂಬಿಕೆ. ನಾವದನ್ನು ಅಕ್ಷರಶಃ ಪಾಲಿಸುತ್ತಿದ್ದೆವು. ಭಾನುವಾರ ನಮ್ಮ ಪಠ್ಯಪುಸ್ತಕಗಳ ಮುಖವನ್ನೂ ನೋಡುವ ಕಷ್ಟ ತೆಗೆದುಕೊಳ್ಳುತ್ತಿರಲಿಲ್ಲ. ರೆಕಾರ್ಡ್ ಬರೆಯುವುದಂತೆ, ನೋಟ್ಸ್ ಮಾಡಿಕೊಳ್ಳುವುದಂತೆ, ಸಿಇಟಿಗೆ ಓದಿಕೊಳ್ಳುವುದಂತೆ – ಹೀಗೆ ನಾನಾ ಕೆಲಸಗಳಲ್ಲಿ ಮುಳುಗಿ ಹೋಗಿರುತ್ತಿದ್ದ ಓರಗೆಯ ಗೆಳೆಯರನ್ನು ಅಧರ್ಮಿಯನ್ನು ಕನಿಕರದಿಂದ, ಸಹಾನುಭೂತಿಯಿಂದ ನೋಡುವ ಧರ್ಮಿಷ್ಟರ ಹಾಗೆ ನೋಡುತ್ತಿದ್ದೆವು. ಮೌನವಾಗಿ ‘ದೇವರೇ ತಾವೇನು ಮಾಡುತ್ತಿದ್ದೇವೆಂಬುದನ್ನು ಇವರರಿಯರು, ಇವರನ್ನು ಕ್ಷಮಿಸು’ ಎಂದು ಪ್ರಾರ್ಥಿಸಿ ನಮ್ಮ ‘ಸಬ್ಬತ್’ ಆಚರಣೆಯಲ್ಲಿ ಭಕ್ತಿಯಿಂದ ಮಗ್ನರಾಗುತ್ತಿದ್ದೆವು.

ನಮ್ಮ ಭಾನುವಾರದ ‘ಸಬ್ಬತ್’ ಆಚರಣೆಗೆ ಕೆಲವೊಂದು ಅನುಕೂಲ ಸಿಂಧುಗಳನ್ನು ಮಾಡಿಕೊಂಡಿದ್ದೆವೆಂಬುದನ್ನು ತಿಳಿಸಬೇಕು. ಆ ದಿನ ಯಾವ ಕೆಲಸವನ್ನೂ ಮಾಡಬಾರದು (ಉಳಿದ ದಿನಗಳಲ್ಲಿ ನಾವು ಮಾಡುತ್ತಿದ್ದದ್ದು ಅಷ್ಟರಲ್ಲೇ ಇತ್ತು!) ಎಂದು ನಾವು ನಿಯಮ ವಿಧಿಸಿಕೊಂಡಿದ್ದರೂ ಸಾಪ್ತಾಹಿಕ ಸಂಚಿಕೆಗಳನ್ನು ಓದುವುದಕ್ಕಾಗಿ ನಿಯಮವನ್ನು ಸಡಿಲಿಸಿಕೊಳ್ಳುತ್ತಿದ್ದೆವು. ಕೆಲವೊಮ್ಮೆ ನಾನಾ ಮೂಲಗಳಿಂದ ಅಕ್ರಮವಾಗಿ ಸಂಪಾದಿಸಿಕೊಂಡಿರುತ್ತಿದ್ದ ‘ಹಾಯ್ ಬೆಂಗಳೂರು’, ಮಾಂಡೋವಿ, ಹೇಳಿ ಹೋಗು ಕಾರಣ, ಪರಿಸರದ ಕಥೆ, ವಿಶ್ವ ವಿಸ್ಮಯದಂತಹ ಪುಸ್ತಕಗಳ ಓದಿಗಾಗಿ ನಮ್ಮ ಭಾನುವಾರವನ್ನು ಮೀಸಲಿಡುತ್ತಿದ್ದೆವು. ತರಗತಿಗೆ ಸಂಬಂಧ ಪಟ್ಟ ಪುಸ್ತಕ ಓದುವುದು ಬಿಟ್ಟು ಕೆಲಸಕ್ಕೆ ಬಾರದವುಗಳನ್ನು ಓದುತ್ತಿದ್ದ ನಮ್ಮನ್ನು ಕಂಡು ಅನೇಕ ಗೆಳೆಯರು ಪ್ರಾಮಾಣಿಕವಾಗಿ ಸಂತಾಪ ಸೂಚಿಸುತ್ತಿದ್ದರಾದರೂ ನಮ್ಮ ಸಾಂಕ್ರಾಮಿಕ ಖಾಯಿಲೆ ಅವರಿಗೂ ತಗುಲಿಕೊಂಡೀತೆಂದು ಹತ್ತಿರ ಬರಲು ಹೆದರುತ್ತಿದ್ದುದರಿಂದ ಭಾನುವಾರಗಳಲ್ಲಿ ನಾವು ಅವರ ‘ಧರ್ಮ ಬೋಧನೆ’ಯಿಂದ ಪಾರಾಗುತ್ತಿದ್ದೆವು!

Ignorance is bliss ಎಂದು *ತಿಳಿದವರು* ಹೇಳುತ್ತಾರೆ. ಅದರಂತೆ ಆ ತಿಳುವಳಿಕೆಯಿಲ್ಲದ ದಿನಗಳಲ್ಲೇ ನಮ್ಮ ಬದುಕು pause ಆಗಿಬಿಟ್ಟಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅನ್ನಿಸುತ್ತದೆ. ತಿಳುವಳಿಕೆ ಬರುತ್ತಾ ನಾವು ಭಾವಿಸಿಕೊಂಡಿದ್ದ ದೇವ-ದೇವತೆಗಳ ನಿಜಬಣ್ಣ ಬಯಲಾಗತೊಡಗಿತು. ಪರದೆಯ ಮೇಲೆ ಕಂಡ ಬೆಳ್ಳಿ ಬಣ್ಣದ ಹೀರೋ ಮೇಕಪ್ ಕಳಚಿ ಎದುರು ಬಂದಾಗ ಆಗುವ ಆಘಾತ ಪತ್ರಕರ್ತರ ನಿಜಮುಖ ತಿಳಿದಾಗ ಆಗತೊಡಗಿತು. ಹಿಂದೆ ಭಾವಿಸಿದ್ದ ಹಾಗೆ ಪತ್ರಕರ್ತರು ಜಗತ್ತಿಗೆ ಪ್ರಾಮಾಣಿಕತೆ, ಅಕೌಂಟೆಬಿಲಿಟಿ, ದಕ್ಷತೆ ಮುಂತಾದ ಸದ್ಗುಣಗಳನ್ನು, ಆದರ್ಶದ ಸಗಟನ್ನು ಸಾಲ ಕೊಡಬಲ್ಲ ಧನಿಕರು ಅಲ್ಲ ಎಂಬುದು ತಿಳಿಯತೊಡಗಿತು. ಅಸಲಿಗೆ ಬಹುತೇಕರಲ್ಲಿ ಈ ದಾಸ್ತಾನಿನ ಕೊರತೆ ತೀವ್ರವಾಗಿರುತ್ತದೆ. ಹಲವು ಸಂದಭ್ರಗಳಲ್ಲಿ ನಮ್ಮಂತಹ ಸಾಮಾನ್ಯರು ಒಟ್ಟುಗೂಡಿ ಕೈಲಾದ ಸಹಾಯ ಮಾಡದ ಹೊರತು ಅವರು ಸಂಪೂರ್ಣ ದಿವಾಳಿಯೆದ್ದು ಹೋಗುತ್ತಾರೆ ಎಂಬ ಜ್ಞಾನೋದಯವಾಗುತ್ತಿದ್ದ ಹಾಗೆ ಕಟ್ಟಿಕೊಂಡಿದ್ದ ಆಶಾಗೋಪುರಗಳು ಕಣ್ಣ ಮುಂದೆ ಕುಸಿದು ಬೀಳಲು ಶುರುವಾದವು. ಇಡೀ ಕಟ್ಟಡವೇ ಕುಸಿದು ಬಿದ್ದ ನಂತರವೂ ಆಕಾಶದತ್ತ ಮುಖ ಮಾಡಿ ಅಪರಿಮಿತ ಆಶಾಭಾವದೊಂದಿಗೆ ಹಲ್ಲು ಕಚ್ಚಿ ಹಿಡಿದು ನಿಂತಿರುವ ಪಿಲ್ಲರುಗಳ ಹಾಗೆ ಅಲ್ಲಲ್ಲಿ ಕಂಡ ಕೆಲವು ಅಪವಾದಗಳು ನಿಂತಿವೆಯಾದರೂ ಮನಸ್ಸನ್ನೆಲ್ಲಾ ಕುಸಿದು ಬಿದ್ದ ಕಟ್ಟಡದ ಧೂಳು ಆಕ್ರಮಿಸಿಕೊಂಡಿದೆ.

– ‘ಯಶೋಧತನಯ’

ಓದುವುದಕ್ಕಾಗಿಯೋ, ಕೆಲಸ ಸಿಕ್ಕ ಕಾರಣಕ್ಕೋ ಮನೆಯಿಂದ ಹೊರಗೆ ಮನೆ ಮಾಡಲು ಹೊರಟಾಗ ಕಾಡುವ ಮನದ ವಿರಹಕ್ಕೆ, ಒಂದು ಜಾತಿಯ ಬಾಯಿತಿಗೆ ‘ಹೋಂ ಸಿಕ್‌ನೆಸ್’ ಅಂತ ಹೆಸರು. ಪ್ರತಿಯೊಬ್ಬರೂ ಬಾಳಿನ ಯಾವುದೋ ಘಟ್ಟದಲ್ಲಿ ಅನುಭವಿಸಬೇಕಾದ ತಹತಹವಿದು.

ಹುಟ್ಟಿದಾಗಿನಿಂದ ‘ಪರಾವಲಂಬಿ’ ಸಸ್ಯವನ್ನು ಮನದಲ್ಲಿ ಪೋಷಿಸುತ್ತಿರುವವರೇ ಎಲ್ಲರೂ. ಮಗುವಾಗಿದ್ದಾಗ ಆಹಾರದಿಂದ ಹಿಡಿದು ಎಲ್ಲ ಕೆಲಸಕ್ಕೂ ತಾಯಿಯ ಸಹಾಯಬೇಕು. ಬೆಳೆಯುತ್ತಾ ಹೋದಂತೆ ಸ್ವಲ್ಪ ಸ್ವಲ್ಪವಾಗಿ ತಮ್ಮ ಕೆಲಸ ತಾವೇ ಮಾಡುವಷ್ಟಕ್ಕೆ ಬಂದರೂ ಮಾನಸಿಕವಾಗಿ ಪರಿವಾರದೊಡನೆ ಅವಲಂಬಿತವಾಗಿರಲೇಬೇಕು. ತಾತ್ಕಾಲಿಕವಾಗಿ ಯಾವುದೇ ಕಾರಣಕ್ಕೆ ಮನೆ ಬಿಟ್ಟು ಬೇರೆಡೆ ವಾಸಿಸಬೇಕಾದಾಗ ಮಾನಸಿಕವಾಗಿ ಅದಕ್ಕೆ ನಾವು ತಯಾರಿರುವುದಿಲ್ಲ. ಪರಾವಲಂಬಿ ಸಸ್ಯ ಮರವಾಗಿರುತ್ತದೆ. ಜೀವನ ಯುದ್ಧಕ್ಕೆ ಅಣಿಯಾದಾಗ, ಒಮ್ಮೆಲೇ ಆ ಮರವನ್ನು ಕಡಿಯಬೇಕಾದಾಗ ನೋವಾಗುವುದು ಸಹಜ. ನಿಜವಾಗಿಯೂ ಆ ನೋವು ತಮ್ಮ ಕೆಲಸ ತಾವೇ ಮಾಡಿಕೊಳ್ಳಬೇಕಲ್ಲ ಎಂಬ ಆಲಸ್ಯದಿಂದ ಹುಟ್ಟಿದ ನೋವಲ್ಲ. ಸುತ್ತ ಮುತ್ತಲೆಲ್ಲಾ ತಮ್ಮನ್ನೇ ಪ್ರೀತಿಸುವ ಜನರಿರುವ ಪರಿಸರವನ್ನು ಬಿಟ್ಟು ಬೇರೊಂದು ವಿಚಿತ್ರ ವಿಶ್ವಕ್ಕೆ ಕಾಲಿರಿಸಿದಾಗ ಉಂಟುಆಗುವ ಮನಸ್ಸಿನ ಬೇಗೆ ಅದು. ಆ ವಿಶ್ವದಲ್ಲಿ ಎಲ್ಲರೂ ತಂತಮ್ಮ ಕೆಲಸ ಮಾಡಿಕೊಂಡು ಹೋಗುವವರೇ.

ಕಾಲೇಜಿನಿಂದ ಬಂದಾಗ ‘ಹಸಿವಾಗ್ತಿದೆಯೇನೋ ಮಗಾ?’ ಎಂದು ಕೇಳುವ ಅಮ್ಮ ಇಲ್ಲದೇ, ಸದಾ ಜಗಳಾಡುವ ತಮ್ಮನಿಲ್ಲದೆ , ಚಿಕ್ಕ ಚಿಕ್ಕ ವಿಷಯಕ್ಕೂ ಅಳುವ ತಂಗಿಯ ಸಂತೈಸಲಾಗದೆ, ಫಕ್ಕನೆ ಹಣಕ್ಕೆ ತೊಂದರೆ ಬರಲು ನೀಡಲು ತಂದೆಯಿಲ್ಲದೆ ಮನೆಯ ನೆನಪುಗಳು ಸೂಜಿಯಂತೆ ಚುಚ್ಚುವ ಅವಧಿಯಿದು. ಒಂದು ರೀತಿ ‘ಟೆಂಪರರಿ ಅನಾಥ’ರೆನ್ನುವ ಭಾವ ಮೂಡಿಸುವ ಘಳಿಗೆಗಳು!

ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವಾತಂತ್ರ್ಯವಿದ್ದರೂ ಆ ಪ್ರತಿ ನಿರ್ಧಾರಗಳಲ್ಲೂ ತಂದೆ ತಾಯಿ ಇಣುಕದೆ ಇರುವುದಿಲ್ಲ. ಹೊಸ ಗೆಳೆಯರು ಸಿನೆಮಾಕ್ಕೆ ಕರೆದಾಗ ‘ಹೂಂ’ ಅಂದರೂ ‘ಅಪ್ಪ ಇದ್ದಿದ್ದರೆ ಬಯ್ಯುತ್ತಿದ್ದರೇನೋ’ ಅಂತ ಅನ್ನಿಸಿ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು. ನಂತರ ಅದೇ ಅಭ್ಯಾಸ ಬಲವಾಗಿ ಅತಿ ಸ್ವಾತಂತ್ರ್ಯ ಬಾಳಿಗೆ ಮುಳುವಾದರೂ ಅಚ್ಚರಿಯಿಲ್ಲ. ಏಕೆಂದರೆ ಹದಿಹರೆಯ, ಬದುಕನ್ನು ಎತ್ತಬೇಕಾದರೆ ಅತ್ತ ಎಸೆಯಬಲ್ಲ ಬಿರುಗಾಳಿ. ಇಂತಹ ಸಮಯದಲ್ಲಿ ಪಾಲಕರು ದೂರದಲ್ಲಿದ್ದರೂ ಮಕ್ಕಳ ಮೇಲೆ ಕಣ್ಣಿರಿಸಬೇಕಾದ್ದು ಅಗತ್ಯ ಮತ್ತು ಅನಿವಾರ್ಯ.

ಮನಸ್ಸಿನ ಮರುಕಕ್ಕೆ ಮತ್ತೊಂದು ಕಾರಣವಾಗಿರುವುದು ಆರೋಗ್ಯ. ಮನೆಯಲ್ಲಾದರೆ ಅಮ್ಮನ ಪ್ರೀತಿಯ ಔಷಧಿಯಿದೆ; ಇಲ್ಲಿ ಅನಾರೋಗ್ಯವಾದರೆ ಏನು ಗತಿ? ಎಂಬ ಪ್ರಶ್ನೆ ಹಾಸ್ಟೆಲಿಗೆ ಬರುವ ಪ್ರತಿ ಹುಡುಗನನ್ನೂ ಕಾಡದೆ ಇರದು.

ಹಾಸ್ಟೆಲ್ಲುಗಳೆಂದರೆ ಹೋಂ ಸಿಕ್‌ನೆಸ್ ನ ಗೂಡು. ಹಾಸ್ಟೆಲ್ಲಿನ ಪ್ರತಿಗೋಡೆಗೂ ನೂರಾರು ಕತೆಗಳು ಗೊತ್ತು. ತವರಿನ ಹಂಬಲ ತಾಳಲಾರದೆ ರಾತ್ರೋ ರಾತ್ರಿ ಮನೆಗೆ ಫೋನ್ ಮಾಡಿ ಗಳ ಗಳನೆ ಅತ್ತು ನೂರಾರು ರೂಪಾಯಿ ಬಿಲ್ ಮಾಡಿದ ಹುಡುಗರು; ಸುತ್ತಲೂ ಪ್ರೀತಿಯಿರದೆ, ಪ್ರೀತಿಗಾಗಿ ನಾಲಿಗೆ ಚಾಚುವ ಮನಕ್ಕೆ ಯಾವುದೋ ಹುಡುಗಿಯ ಚಿಕ್ಕ ಮಾತು ಪ್ರೀತಿಯಂತಾಗಿ ಮೋಸಹೋಗುವ ಹುಡುಗರು; ಮನೆಯ ನೆನಪು ಕಾಡಿ ಕಾಡಿ ಓದಿನ ಮೇಲೆ, ಕಡೆಗೆ ಬದುಕಿನ ಮೇಲೆ ವೈರಾಗ್ಯ (ತಾತ್ಕಾಲಿಕ!) ತಾಳುವ ಹುಡುಗರೂ ಕಡಿಮೆಯಿಲ್ಲ. ಹುಡುಗಿಯರಿಗೂ ಈ ಎಲ್ಲಾ ಮಾತುಗಳು ಅನ್ವಯವಾಗುತ್ತವೆ.

‘ಹೋಂ ಸಿಕ್ ನೆಸ್’ ಎಂಬುದು ಎಷ್ಟು ನೋವುದಾಯಕ ಎನ್ನಿಸಿದರೂ ಅದು ಪ್ರತಿ ವ್ಯಕ್ತಿಗೂ ತನ್ನ ಮೇಲೆ ತಾನು ಅವಲಂಬಿತನಾಗಲು ಮೊದಲ ಮೆಟ್ಟಿಲು. ಸೈಕಲ್ ಕಲಿಯುವಾಗ ಪ್ರಾರಂಭದಲ್ಲಿ ಬೀಳುವುದು ತಪ್ಪದು. ಆ ನೋವು ಇಲ್ಲದೆ ಕಲಿಯಲಾಗದು. ಹಾಗೆ ಬದುಕನ್ನು ಕಲಿಯಲು – ಅರಿಯಲು ನೋವುಗಳು ಅಗತ್ಯ.

ಒಬ್ಬರ ಸಾಂಗತ್ಯದಲ್ಲಿರಲು ಅಲ್ಲಿದ್ದ ಪ್ರೀತಿಯ ಘಮ ಮನಕ್ಕೆ ಅಡರುವುದಿಲ್ಲ. ಅವರಿಲ್ಲದಾಗಲೇ ಅವರ ಇರುವಿನ ಮಹತ್ವ, ಆ ಪ್ರೀತಿಯ ಗಂಧ ಅರಿವಾಗುವುದು. ಮನೆಯಲ್ಲಿ ಸದಾ ಜಗಳಾಡುವ ಮಗ ದೂರದ ಹಾಸ್ಟೆಲಿನಲ್ಲಿದ್ದಾಗ ಪ್ರೀತಿಯಿಂದ ಪತ್ರ ಬರೆಯುವುದಕ್ಕೂ, ಫೋನಿನಲ್ಲಿ ಮಾತು ಮೃದುವಾಗುವುದಕ್ಕೂ ಅದೇ ಕಾರಣ. ದೂರ ಸನಿಹದ ಮಹತ್ವ ಸೂಚಿಸುತ್ತದೆ.

ಮನುಷ್ಯ ಹರಿವ ನೀರಿನಂತಾಗಬೇಕು. ಹೊಸ ಮಣ್ಣು, ಹೊಸ ಗಾಳಿಗೆ ಒಗ್ಗಿಕೊಳ್ಳಬೇಕು. ಹೊಸತೆನ್ನುವುದು ಎದೆಯೊಳಗಿಳಿಯುತ್ತಿದ್ದಂತೆಯೇ ‘ಹೋಂ ಸಿಕ್ ನೆಸ್’ ಇಲ್ಲವಾಗುತ್ತದೆ. ಯಾವ ಮನುಷ್ಯನೂ ಪ್ರತಿಭೆ ಇಲ್ಲದೆ ಹುಟ್ಟಿರಲಾರ. ಅದನ್ನು ಹೊಸ ಜಗದೆಡೆಗೆ ತೋರಿಸಿದರೆ ಜಗತ್ತು ನಿಬ್ಬೆರಗಾಗಿ ನೋಡುತ್ತದೆ. ಹೊಸ ಜಗತ್ತಿನ ಮಂದಿ ಇಷ್ಟ ಪಡುತ್ತಾರೆ. ಇಷ್ಟ ಪ್ರೀತಿಯಾಗಿ ಮನುಷ್ಯರ ನಡುವಿನ ಕೊಂಡಿಯಾಗುತ್ತದೆ!

 

– ಪಲ್ಲವಿ.ಎಸ್, ಧಾರವಾಡ

ಬೆಳ್ಳಂಬೆಳಿಗ್ಗೆ ಒಮ್ಮೊಮ್ಮೆ ಬಸ್‌ಸ್ಟ್ಯಾಂಡ್ ಕಡೆ ಸುಮ್ಮನೇ ಹೋಗುತ್ತೇನೆ.

ಚಳಿ ಅಲ್ಲೆಲ್ಲ ಮಡುಗಟ್ಟಿ ನಿಂತಿರುತ್ತದೆ. ಉಗಿಮಂಜಾಗಿ ತೇಲುತ್ತಿರುತ್ತದೆ. ಬಸ್‌ಸ್ಟ್ಯಾಂಡ್‌ನ ಸುತ್ತಮುತ್ತಲಿನ ಹೋಟೆಲುಗಳಲ್ಲಿ ನಿಜವಾದ ಬಿಸಿ ಉಗಿ ಚಹದ ಪಾತ್ರೆಯಿಂದ, ಇಡ್ಲಿ ಸ್ಟ್ಯಾಂಡ್‌ನಿಂದ, ಕಾಯ್ದ ಎಣ್ಣೆಯಿಂದ ಏಳುತ್ತಿರುತ್ತದೆ. ಇನ್ನೂ ಬಸ್ ಬಂದಿಲ್ಲ ಎಂದು ತಮ್ಮೊಳಗೇ ಪಿಸುಗುಟ್ಟುತ್ತ ಕೂತವರ ಬಾಯಿಂದಲೂ ಅದೇ ಬಿಸಿ ಉಗಿ.

ಅವರೆಲ್ಲ ಊರಿಗೆ ಹೊರಡಲು ಕಾಯ್ದವರು. ಮೊದಲ ಬಸ್ ಬಂದು ನಿಂತಿದೆಯಾದರೂ ಅದರೊಳಗೆ ಚಾಲಕನಿಲ್ಲ. ಕಂಡಕ್ಟರ್ ಜೊತೆಗೆ ಆತ ಅಲ್ಲೆಲ್ಲೋ ಚಹ ಕುಡಿಯುತ್ತಿರಬೇಕು. ತಣ್ಣಗಿರುವ ಬಸ್ ಒಳಗೆ ಹೆಣ್ಣುಮಕ್ಕಳು ಹಾಗೂ ಮಕ್ಕಳು ಹತ್ತಿ ಕೂತಿದ್ದಾರೆ. ಇದ್ದಬದ್ದ ಬಟ್ಟೆಗಳನ್ನು ಬಿಗಿಯಾಗಿ ಅವಚಿ ಹಿಡಿಯುವ ಮೂಲಕ ಚಳಿಯನ್ನು ಹೊರಹಾಕಲು ಯತ್ನಿಸುತ್ತಿದ್ದಾರೆ. ಅವರನ್ನು ಅಲ್ಲಿ ಕೂಡಿಸಿ ಚಾದಂಗಡಿ ಕಡೆ ನಡೆದಿರುವ ಯಜಮಾನ ಪ್ಲಾಸ್ಟಿಕ್‌ನ ಕಪ್‌ಗಳಲ್ಲಿ ಚಹ ತಂದು ಕಿಟಕಿ ಮೂಲಕ ಕೊಡುತ್ತಿದ್ದಾನೆ. ಒಳಗೆ ಕೂತವರ ಕಣ್ಣಲ್ಲಿ ಎಂಥದೋ ಬೆಚ್ಚನೆಯ ಖುಷಿ. indiabus

ಇನ್ನೊಂದಿಷ್ಟು ಬಸ್‌ಗಳು ಬಂದು ನಿಲ್ಲುತ್ತವೆ. ಅವುಗಳ ಚಾಲಕರೂ ಇಂಜಿನ್ ಚಾಲೂ ಇಟ್ಟು ಚಾದಂಗಡಿಗಳ ಕಡೆ ನಡೆದಿದ್ದಾರೆ. ಇಡೀ ಜೀವನ ಚಾದಂಗಡಿಯ ಬೆಚ್ಚನೆಯ ಉಗಿ ತುಂಬಿದ ವಾತಾವರಣಕ್ಕೆ ಆಕರ್ಷಿತವಾದಂತಿದೆ. ಪೇಪರ್ ಹುಡುಗರು ಪುರವಣಿಗಳನ್ನು ಸೇರಿಸುತ್ತಿದ್ದಾರೆ. ಇನ್ನೊಂದಿಷ್ಟು ಹುಡುಗರು ಎಣಿಸಿ ಜೋಡಿಸಿಟ್ಟುಕೊಂಡ ಪೇಪರ್‍ಗಳನ್ನು ಸೈಕಲ್‌ಗಳಲ್ಲಿ ನೇತಾಕಿರುವ ಕ್ಯಾನ್ವಾಸ್ ಚೀಲಗಳಿಗೆ ಹುಷಾರಾಗಿ ತುಂಬುತ್ತಿದ್ದಾರೆ. ಆಗಲೇ ತಡವಾಗುತ್ತಿದೆ ಎಂಬ ಧಾವಂತ. ಮುಖವೇ ಕಾಣದಂತೆ ಬಿಗಿದು ಕಟ್ಟಿದ ಮಫ್ಲರ್, ಅಳತೆ ಮೀರಿದ ಹಳೆಯ ಸ್ವೆಟರ್‌ನೊಳಗಿನ ಜೀವಗಳು ಬೆಚ್ಚಗಿವೆ. ತುಂಬಿದ ಚಳಿಯಲ್ಲೂ ನಗುತ್ತ, ತಡವಾಗಿದೆ ಎಂದು ಅವಸರ ಮಾಡುತ್ತ ಅವರೆಲ್ಲ ಒಬ್ಬೊಬ್ಬರಾಗಿ ಬಸ್‌ಸ್ಯಾಂಡ್‌ನಿಂದ ಹೊರಬೀಳುತ್ತಿದ್ದಾರೆ.

ಪೇಪರ್‌ಗಳು ಬೆಚ್ಚಗಿವೆ. ಅದರೊಳಗಿನ ಸುದ್ದಿಗಳೂ ಬೆಚ್ಚಗಿವೆ. ಅಲ್ಲೆಲ್ಲೋ ಬೆಚ್ಚನೆಯ ಮನೆಯಲ್ಲಿ, ಬಿಸಿಬಿಸಿ ಕಾಫಿ ಕುಡಿಯುತ್ತಿರುವ ಜೀವಗಳು, ಈ ಬಿಸಿ ಬಿಸಿ ಪೇಪರ್‌ಗಾಗಿ ಕಾಯುತ್ತಿವೆ. ಎಲ್ಲ ಸುದ್ದಿಗಳನ್ನು ನಿನ್ನೆಯೇ ಟಿವಿಯಲ್ಲಿ ನೋಡಿದ್ದರೂ, ಪೇಪರ್‌ನ ಬಿಸಿಯನ್ನೊಮ್ಮೆ ತಾಕದಿದ್ದರೆ ಅವರಿಗೆ ಸಮಾಧಾನವಿಲ್ಲ. ಕಾಯುತ್ತಿರುವ ಅವರಿಗೆ ಪೇಪರ್ ತಲುಪಿಸುವವರೆಗೆ ಈ ಹುಡುಗರಿಗೆ ನೆಮ್ಮದಿಯಿಲ್ಲ. ಬೇಗ ಹೋಗ್ರೋ ಎಂದು ಪೇಪರ್ ಏಜೆಂಟ್ ಅವಸರ ಮಾಡುತ್ತಿದ್ದಾನೆ.

ಹೂ ಮಾರುವವಳು ನಡುಗುತ್ತ ಬರುತ್ತಾಳೆ. ನೀರು ಚಿಮುಕಿಸಿಕೊಂಡು ತಣ್ಣಗಿರುವ ಹೂವಿನ ಸರಗಳು ದೇವರ ಫೊಟೊ ಏರಲು, ಆಟೊ ಎದುರು ತೂಗಲು, ತವರಿಗೆ ಹೊರಟ ಹೆಂಗಳೆಯರ ಮುಡಿ ಸೇರಲು ಕಾಯುತ್ತಿವೆ. ಬೆಳ್ಳಂಬೆಳಿಗ್ಗೆ ಹೂವಾಡಗಿತ್ತಿ ಹೆಚ್ಚು ಚೌಕಾಸಿ ಮಾಡುವುದಿಲ್ಲ. ಮೊದಲ ಕಂತಿನ ಹೂವಿನ ಸರಗಳನ್ನು ಆಕೆ ಬೇಗ ಮಾರಿ, ಬೆಚ್ಚಗೆ ಹೊದಿಸಿ ಬಿಟ್ಟು ಬಂದ ಕಂದಮ್ಮ ಏಳುವುದರೊಳಗೆ ಮನೆಗೆ ಹೋಗಬೇಕಿದೆ.

ನಡುಗುತ್ತಿರುವ ಬಸ್‌ಗಳ ಇಂಜಿನ್‌ಗಳು ಅಷ್ಟೊತ್ತಿಗೆ ಸಾಕಷ್ಟು ಬೆಚ್ಚಗಾಗಿವೆ. ಬಸ್‌ನಲ್ಲಿ ಕೂತ ಪೋರರು ಬಾನೆಟ್‌ಗೆ ಕೈಯೊತ್ತಿ, ಆ ಬಿಸಿಯನ್ನು ನರನಾಡಿಗಳಿಗೆ ಹರಿಸಿಕೊಂಡು ಬೆಚ್ಚನೆಯ ಖುಷಿ ಅನುಭವಿಸುತ್ತಿದ್ದಾರೆ. ಅವರನ್ನೇ ಹುಸಿ ಗದರುತ್ತ ತಾಯಂದಿರು ತಮ್ಮೊಳಗೇ ಸಣ್ಣಗೆ ಮಾತಿಗಿಳಿದಿದ್ದಾರೆ. ಹೊಲದಲ್ಲಿರುವ ಪೈರು, ಬರಬಹುದಾದ ಸುಗ್ಗಿ, ತೀರಿಸಬೇಕಾದ ಸಾಲದ ಬಗ್ಗೆ ಮಾತುಗಳು ಹೊರಬರುತ್ತಿವೆ. ಮಾತಾಡುತ್ತ ಆಡುತ್ತ ಅವರು ಯಾವುದೋ ಲೋಕದಲ್ಲಿ ಇಲ್ಲವಾಗುತ್ತಿದ್ದಾರೆ.

ಸೂರ್ಯ ಆಕಳಿಸುತ್ತ ಕಣ್ತೆರೆಯುತ್ತಾನೆ. ಅಲ್ಲೆಲ್ಲೋ ದೂರದ ಮರಗಳ ತುದಿ ಹೊನ್ನ ಬಣ್ಣದಲ್ಲಿ ತೇಲುತ್ತವೆ. ಎತ್ತರದ ಕಟ್ಟಡದ ಮೇಲ್ಭಾಗ ಬೆಳಕಲ್ಲಿ ಮೀಯುತ್ತದೆ. ಒಂದಿಷ್ಟು ಹಕ್ಕಿಗಳ ಮೆಲು ಉಲಿ ಗಾಳಿಯನ್ನು ತುಂಬುತ್ತದೆ. ಬಸ್‌ಸ್ಟ್ಯಾಂಡ್‌ನ ಹೊರಗೆ ಒಂದಿಷ್ಟು ಆಟೊಗಳು ಬಂದು ನಿಲ್ಲುತ್ತವೆ. ಅವುಗಳ ಚಾಲಕರು ಕೊಳೆಯಾದ ಬಟ್ಟೆಯಿಂದ ಆಟೊದ ಮೈಯನ್ನು ತಿಕ್ಕಿ ತಿಕ್ಕಿ ಸ್ಚಚ್ಛಗೊಳಿಸುತ್ತಾರೆ. ಅಲ್ಲೇ ಚಾದಂಗಡಿಯಲ್ಲಿರುವ ನೀರಿನ ಮಗ್‌ನಿಂದ ಕೈತೊಳೆದು, ಆಟೊದೊಳಗಿನ ದೇವರಿಗೆ ಊದುಬತ್ತಿ ಹಚ್ಚುತ್ತಾರೆ. ಹೂ ಏರಿಸುತ್ತಾರೆ. ಸಿದ್ಧಾರೂಢರ ಸುಪ್ರಭಾತದ ಕ್ಯಾಸೆಟ್‌ಗೆ ಜೀವ ತುಂಬಿ, ತಾವು ಬಿಸಿ ಬಿಸಿ ಚಾ ಕುಡಿಯಲು ಅಂಗಡಿಗೆ ಬಂದು ಕೂತಿದ್ದಾರೆ.

ಮಂಡಾಳ ಒಗ್ಗರಣೆ, ಮಿರ್ಚಿ, ಭಜಿ, ಪೂರಿಗಳಿಗೆ ಜೀವ ಬಂದಿದೆ. ಇಡ್ಲಿ ತಿನ್ನುವವರೂ ಮಿರ್ಚಿಯ ಕಡೆ ಆಸೆಯ ಕಣ್ಣು ಹೊರಳಿಸಿದ್ದಾರೆ. ಅದನ್ನು ಅರಿತವನಂತೆ ಮಾಲೀಕ, ಬಿಸಿಯಾಗಿವೆ ತಗೊಳ್ರೀ ಎಂದು ಒಂದು ಪ್ಲೇಟ್ ಮಿರ್ಚಿ ತಂದಿಟ್ಟಿದ್ದಾನೆ. ಘಮ್ಮೆನ್ನುವ ಮಿರ್ಚಿ ಇಡ್ಲಿಯ ಆರೋಗ್ಯ ಪ್ರವಚನದ ಬಾಯಿ ಮುಚ್ಚಿಸಿದೆ. ಬಿಸಿ ಬಿಸಿ ಮಿರ್ಚಿಯಲ್ಲಿ ಹುದುಗಿಕೊಂಡಿದ್ದ ಮೆಣಸಿನಕಾಯಿ ಬಾಯೊಳಗೆ ಒಲೆ ಹೊತ್ತಿಸಿದೆ. ಅದರೊಳಗಿಂದ ಉಕ್ಕಿದ ಕಾವು ಇಡೀ ದೇಹದ ನರನಾಡಿಗಳನ್ನು ಚಾಲೂ ಮಾಡಿದೆ. ಹೊರಗಿನ ಚಳಿಯನ್ನು ಹಿತವಾಗಿಸಿದೆ.

ಅದನ್ನು ಕಂಡ ಇನ್ನೊಂದಿಷ್ಟು ಜನ ತಾವೂ ಮಿರ್ಚಿಗೆ ಆರ್ಡರ್ ಮಾಡಿದ್ದಾರೆ. ಮಿರ್ಚಿ ಕರಿಯುವವ ತರಾತುರಿಯಿಂದ ಕೆಲಸ ಮುಂದುವರೆಸಿದ್ದಾನೆ. ಉಗಿಯಾಡುವ ಬಿಸಿ ಎಣ್ಣೆಯಲ್ಲಿ ಹಳದಿ ಕವಚ ತೊಟ್ಟ ಮಿರ್ಚಿಗಳು ಈಜಿಗಿಳಿದಿವೆ. ಅದನ್ನೇ ನೋಡುತ್ತ ನೋಡುತ್ತ ಜನ ಪುಳಕಗೊಂಡಿದ್ದಾರೆ. ಎಂಥದೋ ಭರವಸೆ ತಂದುಕೊಂಡಿದ್ದಾರೆ.

ಮಂಡಾಳ ಒಗ್ಗರಣೆಯ ಗುಡ್ಡ ಕರಗುತ್ತದೆ, ಮಿರ್ಚಿಗಳು ಮಾಯವಾಗುತ್ತವೆ, ಕೆಟಲ್‌ನಿಂದ ಬಿಸಿ ಬಿಸಿ ಚಾ ಕಪ್‌ಗಳಿಗೆ ಇಳಿದು ಜನರೊಳಗೆ ಇಲ್ಲವಾಗುತ್ತದೆ. ಮಂಡಾಳ ಒಗ್ಗರಣೆ, ಮಿರ್ಚಿ ಕಂಡು ಸೂರ್ಯನಿಗೂ ಆಸೆಯಾದಂತಿದೆ. ಬಸ್ ಸ್ಟ್ಯಾಂಡ್‌ನ ಛಾವಣಿಗೂ ಆತನ ಬಿಸಿಲು ತಾಕುತ್ತದೆ.

ಈಗ ಗಡಿಯಾರ ನೋಡುತ್ತ ಡ್ರೈವರ್ ಮತ್ತು ಕಂಡಕ್ಟರ್ ಲಗುಬಗೆಯಿಂದ ಎದ್ದು ಬಸ್‌ನತ್ತ ಹೆಜ್ಜೆ ಹಾಕುತ್ತಾರೆ. ಎಲ್ಲರೂ ಹತ್ತಿ ಕೂತಿದ್ದು ಗೊತ್ತಿದ್ದರೂ ಅಭ್ಯಾಸಬಲದಿಂದ ಕಂಡಕ್ಟರ್ ಸೀಟಿ ಊದಿ ಬಾಗಿಲು ಹಾಕಿಕೊಳ್ಳುತ್ತಾನೆ. ಅದುವರೆಗೆ ವಿಕಾರವಾಗಿ ಗುರುಗುಡುತ್ತ ಅಲುಗುತ್ತಿದ್ದ ಬಸ್, ಗೇರ್‌ನ ತಾಳಕ್ಕೆ ಮೆದುವಾದಂತೆ ಗುಟುರು ಹಾಕುತ್ತದೆ. ಬಸ್‌ಸ್ಟ್ಯಾಂಡ್ ತುಂಬಿರುವ ಗುಂಡಿಗಳಲ್ಲಿ ಏರಿಳಿಯುತ್ತ ಬಸ್ ಹೊರಗಿನ ರಸ್ತೆಗೆ ಇಳಿಯುತ್ತದೆ. ನಿಧಾನವಾಗಿ ವೇಗ ಹೆಚ್ಚಿಸಿಕೊಳ್ಳುತ್ತದೆ.

ಪೇಪರ್‌ನವನ ಹತ್ತಿರ ಒಂದೆರಡು ಪೇಪರ್ ಕೊಳ್ಳಲು ಬಂದವಳು ಮೋಡಿಗೆ ಒಳಗಾದಂತೆ ಸುಮ್ಮನೇ ನಿಂತುಕೊಳ್ಳುತ್ತೇನೆ. ಬಿಸಿ ಮಿರ್ಚಿಗಳು ನನ್ನಲ್ಲೂ ಆಸೆ ಹುಟ್ಟಿಸುತ್ತವೆ. ಆರು ಮಿರ್ಚಿ ಪಾರ್ಸೆಲ್ ಕೊಡಪ್ಪಾ ಎಂದು ಕಟ್ಟಿಸಿಕೊಂಡು, ಸ್ಕೂಟಿಯ ಮುಂದಿರುವ ಕೊಂಡಿಗೆ ಮಿರ್ಚಿ ತುಂಬಿರುವ ಪ್ಲಾಸ್ಟಿಕ್ ಚೀಲ ಇರಿಸಿ ಹೊರಡುತ್ತೇನೆ. ಅಲ್ಲಾಡುವ ಚೀಲ ದಾರಿಯುದ್ದಕ್ಕೂ ಕಾಲಿಗೆ ಬೆಚ್ಚಗೆ ತಾಕುತ್ತದೆ.

ಹೊರ ಭರವಸೆ ಹುಟ್ಟಿಸುತ್ತದೆ.

-ರಂಜಿತ್ ಅಡಿಗ, ಕುಂದಾಪುರ

ಕಿಟಕಿಯಾಚೆ ಜೋರಾಗಿ ’ಗಣಪತಿ ಬಪ್ಪಾ ಮೊರ್ಯಾ’ ಕೇಳುತ್ತಿದೆ. ಅಸಹನೆಯಿಂದ ಕಿಟಕಿ ಮುಚ್ಚಿ ಕೂತರೆ, ಈ ಸಲ ಗೆಳೆಯರ್ಯಾರೂ ಹಬ್ಬಕ್ಕೆ ಮನೆಗೆ ಕರೆಯದೇ ಹೋದರಾ ಎಂಬ ಆಲೋಚನೆ. ಇಂಟರ್ನೆಟ್ಟು ತೆಗೆದರೆ ಸಾಕು ’ಹ್ಯಾಪಿ ಗಣೇಶ ಚತುರ್ಥಿ’ಯದೇ ರಗಳೆ. ಚುರುಗುಟ್ಟುವ ಹೊಟ್ಟೆ, ಆಗಷ್ಟೇ ಖಾಲಿಯಾದ ಅಡುಗೆ ಮನೆಯ ಡಬ್ಬಿಯನ್ನು ನೆನಪಿಸುತ್ತದೆ. ದರ್ಶಿನಿಯ ಹುಡುಗರೂ ತಮ್ಮ ಗುಂಪುಗಳಲ್ಲೇ ಹಬ್ಬ ಆಚರಿಸುತ್ತಿದ್ದಾರೆ. ಪಾತ್ರೆ ತೊಳೆಯುವ ಚಿಣ್ಣ ಇವತ್ತು ಕಾಲು ತುರಿಸಿಕೊಳ್ಳುವಂತಿಲ್ಲ. ಬಚ್ಚಲು ಮನೆಯ ಚೌಕಟ್ಟಿನಿಂದ ಹೊರಗೆ ಇಣುಕುತವೆ ಇಂದವನ ಕಣ್ಣುಗಳು.

ಗೋಡೆಗೆ ನೇತು ಹಾಕಿಕೊಂಡ ಕ್ಯಾಲೆಂಡರೂ ಭಾರಿಯಾದ ಗಣಪತಿ ಪೋಟೋವನ್ನು ಹೊತ್ತಿದೆ, ಅವನ ಪಕ್ಕದ ಇಲಿ ಲಾಡನ್ನು ಮೆಲ್ಲುತ್ತಾ ಮೆಲ್ಲಗೆ ನನ್ನನ್ನು ಉರಿಸುತ್ತಿದೆ.

ಹರಿದಿದ್ದರಿಂದ ಸೂಟ್ ಕೇಸಿನ ಜೈಲಿನೊಳಗೆ ಸೇರಿಸಲ್ಪಟ್ಟ ದುಬಾರಿ ಪ್ಯಾಂಟು ’ಯಾವಾಗ ಊರಿಗೆ ಹೋಗ್ತಿಯಪ್ಪಾ?’ ಅಂತ ದೈನ್ಯತೆಯಿಂದ ಬೇಡಿಕೊಳ್ಳುತ್ತಿದೆ, ಅದಕ್ಕೆ ಅಮ್ಮನ ಕೈಯಿಂದಲೇ ಆಪರೇಷನ್ ಆಗಬೇಕಿದೆ. ಹಬ್ಬದ ಸಡಗರವಿಲ್ಲದ ಜೀವ ಸುಮ್ಮನೆ ಅದರ ನೆನಪನ್ನು ಮೂಲೆಗೆ ತಳ್ಳಿ ’ಮುಂದಿನ ಸಲ ಊರಿಗೆ ಯಾವಾಗ ಹೋಗೋಣ?’ ಅಂತ ಖುಷಿಯಿಂದ ಚಿಂತಿಸುತ್ತ ಎಲ್ಲ ದುಃಖವನ್ನೂ ಮೀರುವ ಪ್ರಯತ್ನ ಮಾಡುತಿದೆ.

ಇವೆಲ್ಲ ತಮ್ಮ ಮನೆ ಬಿಟ್ಟು ತಮ್ಮನ್ನು ಬೇರೆ ಜಾಗದಲ್ಲಿ ಅನಿವಾರ್ಯತೆಯಿಂದಲೋ ಅಥವಾ ಬೇರೆ ಬೇರೆ ಕಾರಣಗಳಿಂದಲೋ ಉಳಿಯಬೇಕಾಗಿ ಬಂದವರ ಮನದ ಒಳಸುಳಿಯ ಕತೆಗಳು. ಅಲ್ಲಿ ಭೋರೆಂದು ಅಳುವ ದುಃಖವಿರುವುದಿಲ್ಲ. ದುಃಖ ಒಳಗೆಲ್ಲೋ ಮೆಲ್ಲಗೆ ತನ್ನಷ್ಟಕ್ಕೆ ಹರಿಯುತ್ತಿರುತ್ತದೆ. ಮುಖದ ಮೇಲೆ ಅದನ್ನೆಲ್ಲಾ ತಳ್ಳಿ ಹಾಕುವುದಕ್ಕೋಸ್ಕರವೇ ತೇಪೆ ಹಚ್ಚಿದಂತಿರುವ ನಗು ಪೇಲವವಾಗಿ ಕಾಣಿಸುತ್ತಿರುತ್ತದೆ. hakki

ಹಿಂದಿನ ಕಾಲದ ಕೂಡು ಕುಟುಂಬ ವ್ಯವಸ್ಥೆಯಲ್ಲಿ ಮನೆಯಿಂದ ಹೊರಹೋಗುವ ಅವಕಾಶಗಳೇ ಕಡಿಮೆ. ಇಂತಹ ನೋವು ಮದುವೆಯಾಗಿ ಹೋಗುವ ಹುಡುಗಿಗೆ ಮಾತ್ರವಿತ್ತು. ಅದನ್ನು ಪಾತ್ರೆಯನ್ನು ತೀರ್ವ ಆಕ್ರೋಶದಿಂದ ಉಜ್ಜುತ್ತಲೋ ಅಥವಾ ದುಃಖವನ್ನೆಲ್ಲಾ ಈರುಳ್ಳಿ ಕತ್ತರಿಸುವ ನೆಪದಲ್ಲೋ ಹೊರಹಾಕುತ್ತಿದ್ದಿರಬೇಕು. ಈಗಿನ ನ್ಯೂಕ್ಲಿಯರ್ ಫ್ಯಾಮಿಲಿ ಅವತಾರದಲ್ಲಿ ಹಣಕ್ಕಾಗಿ, ಒಳ್ಳೆಯ ಭವಿಷ್ಯಕ್ಕಾಗಿ ಮನೆಬಿಟ್ಟು ತಮ್ಮನ್ನು ಬೇರೆ ಕಡೆಯಲ್ಲಿ ನೆಟ್ಟು ಹೋರಾಟ ಮಾಡಲೇ ಬೇಕಾದ ಪರಿಸ್ಥಿತಿ.

ಮುಖ್ಯವಾಗಿ ಓದಲೆಂದು ಕಡಿಮೆ ವಯಸ್ಸಿನಲ್ಲಿ ಮನೆಯಿಂದ ಹೊರತಳ್ಳಲ್ಪಟ್ಟ ಹುಡುಗರ ವ್ಯಥೆಗೆ ಭಾರ ಹೆಚ್ಚು. ಅಮ್ಮನ ಸಹಾಯ ಅಪ್ಪನ ಪ್ರೀತಿ ಮತ್ತು ಪರ್ಸಿನ ಮೇಲೆಯೇ ಅವಲಂಬಿತರಾದ ಮಕ್ಕಳು ಅವರ ಹೊರತಾದ ’ಪ್ರೀತಿ ಸರಕು ಕಾಣದ ಸಂತೆಯ’ ಪ್ರಪಂಚದಲ್ಲಿ ಒಗ್ಗಿಕೊಳ್ಳಲು ಪಡುವ ಪರಿಪಾಡು ದೇವರಿಗೇ ಪ್ರೀತಿ. ಹೃದಯವ ಗಟ್ಟಿ ಮಾಡಿಕೊಂಡಿರುವ ಮೊಬೈಲು, ಅವರ ಮನೆಯ ನೆನಪುಗಳಿಗೆ, ದುಃಖಗಳಿಗೆ ಎಂದೂ ಅಳದು.

ಕಾಲೇಜಿನಿಂದ ಮನೆಗೆ ನಡೆದು ಬರುವಾಗ ಸಿಗುವ ಅನಾಥಾಶ್ರಮ ನೋಡಿ, ಊರು ಬಿಟ್ಟು ಬಂದ ತಾನೂ ಒಂದು ರೀತಿ ಇದೇ ಅಲ್ಲವೇ? ಅಂದುಕೊಳ್ಳುತ್ತಾ, ಹಾಸ್ಟೆಲುಗಳಿಗೆ ’ಟೆಂಪರರಿ ಅನಾಥರ ಆಶ್ರಮ’ ಅಂದ್ಯಾಕೆ ಕರೆಯಬಾರದು ಎಂದು ತನಗೆ ತಾನೇ ಜೋಕು ಮಾಡಿಕೊಳ್ಳುತ್ತದೆ ಮನಸು.

’ನೋಡಿಕೊಳ್ಳಲು ಅಮ್ಮನಿಲ್ಲ ಪಾಪ!’ ಅಂದುಕೊಳ್ಳೂತ್ತ ಅವರೆಡೆಗೆ ಬರದೇ ಕರುಣೆ ತೋರುತ್ತವೆ ಖಾಯಿಲೆಗಳು. ಒಂದು ವೇಳೆ ಬಂದರೆ ಗಂಚಿ ಯಾರು ಕುಡಿಸುವವರು? ಬೈದು ಮಾತ್ರೆಯನ್ನು ಜೇನುತುಪ್ಪದಲ್ಲಿ ಕೊಡುವವರಾರು? ಇಂಜಕ್ಷನ್ನಿಗೆ ಹೆದರಿದರೆ, (ಬಲವಂತದಿಂದ) ಡಾಕ್ಟರ್ ಹತ್ತಿರ ಕರೆದೊಯ್ಯುವವರಾರು? ಎನ್ನುತ್ತಾ ಸುಮ್ಮಸುಮ್ಮನೆ ಆತಂಕಕ್ಕೊಳಗಾಗುವ ಹುಡುಗಿ ನಿಷ್ಕರುಣಿ ದಿಂಬಿಗೆ ಎಲ್ಲ ದುಃಖವನ್ನು ಕಣ್ಣೀರ ಮೂಲಕ ಹೇಳಿಕೊಳ್ತಾಳೆ.

ಆದರೆ ಬಹಳ ದಿನವಿರದು ಇಂಥ ತೊಳಲಾಟ. ಮನಸ್ಸು ಎಲ್ಲದಕ್ಕೂ ಅಡ್ಜಸ್ಟ್ ಆಗುತ್ತದೆ. ತನ್ನದೇ ಪ್ರೀತಿಯ ವಲಯವೊಂದು ಕಟ್ಟಿಕೊಳ್ಳುತ್ತದೆ. ಪ್ರತಿಭೆಯೊಂದರ ಮೂಲಕ ಎಲ್ಲರ ಮೆಚ್ಚುಗೆಗಳಿಸುತ್ತದೆ. ಹೇಗಾದರೂ ಕಷ್ಟಪಟ್ಟು ತನ್ನ ಬದುಕನ್ನು ಸಹನೀಯವಾಗಿಸುತ್ತವೆ.

ಹಾಗೆಯೇ ಈ ದೂರಗಳು ಒಂದು ನೀತಿಪಾಠವನ್ನು ಮೌನವಾಗಿ ಕಲಿಸುತ್ತದೆ. ಮನೆಯಲ್ಲಿದ್ದಾಗ ರುಚಿಯಿಲ್ಲ ಅಂತ ಎಸೆದ ತಿಂಡಿ ಹಾಸ್ಟೆಲಿನ ಅನಿವಾರ್ಯ ಆಹಾರಗಳನ್ನು ಕಷ್ಟಪಟ್ಟು ಬಾಯೊಳಗೆ ಸೇರಿಸಿಕೊಳ್ಳುವಾಗ ಅಮ್ಮ ನೆನಪಾಗ್ತಾಳೆ. ಮತ್ತೆಂದೂ ಅಮ್ಮನ ಪ್ರೀತಿಯ ತಿಂಡಿ ರುಚಿ ತಪ್ಪುವುದಿಲ್ಲ.

ಅತ್ತೆ ಮಾವನಿಂದ ಉಗಿಸಿಕೊಂಡು ಸೊಸೆ ಬಾಗಿಲು ಹಾಕಿಕೊಂಡು ಒಂಟಿಯಾಗಿ ರೂಮಿನಲ್ಲಿದ್ದಾಗ ಅಪ್ಪ-ಅಮ್ಮನೇ ಕಾಣಿಸುತ್ತಾರೆ. ಅವರ ಕಣ್ಣೊಳಗಿನ ಪ್ರೀತಿಯು ಈ ಹಿಂದೆಂದೂ ಕಾಣದಷ್ಟು ಇಷ್ಟವಾಗಿ ದಟ್ಟವಾಗಿ ಹೊಳೆಯುತ್ತಿರುತ್ತದೆ.

ಇಂತಹ ’ಹೋಮ್ ಸಿಕ್ ನೆಸ್’ ಅಂತ ಕರೆಸಿಕೊಳ್ಳುವ ಖಾಯಿಲೆಗೆ ಮದ್ದೆಂದರೆ, ತಮ್ಮದೇ ಹೊಸ ಪ್ರಪಂಚ ಸೃಷ್ಠಿಸಿಕೊಳ್ಳುವುದು. ಮಾನಸಿಕ ಪರಾವಲಂಬಿತನ ಹೊಡೆದೋಡಿಸಿಕೊಳ್ಳೂತ್ತಾ ನಿರ್ಣಯಗಳಿಗೆಲ್ಲ ತಮ್ಮನ್ನು ತಾವೇ ಒಡ್ಡಿಕೊಂಡು ಅದರ ಫಲಿತಾಂಶದ ಹೊಣೆಯನ್ನು ತಮ್ಮ ಹೆಗಲಿಗೇ ಹಾಕಿಕೊಳ್ಳುವುದು. ತಮ್ಮ ಪ್ರತಿಭೆ ಪ್ರಪಂಚಕ್ಕೆ ಅರಿವಾಗುತ್ತಿದ್ದಂತೆ ಮೆಚ್ಚಿಕೊಳ್ಳುವ ಜನ ಹತ್ತಿರಾಗುತ್ತಾರೆ. ಹೊಸ ಪ್ರಪಂಚದ ಗೆಳೆಯರಾಗುತ್ತಾರೆ. ಹೊಸತನ್ನು ಜೀರ್ಣಿಸಿಕೊಳ್ಳುವಂತಹ ಶಕ್ತಿ ಒಳಗಿನಿಂದಲೇ ಚಿಮ್ಮುತ್ತದೆ.

ಗೂಡಿನ ಹೊರಗೂ ಹಾರುವ ಹಕ್ಕಿ ಇಡಿ ವಿಶ್ವವೇ ತನ್ನ ಕಾಲ್ಗೆಳಗಿರುವುದನ್ನು ಕಂಡು ತನ್ನಷ್ಟಕ್ಕೆ ತಾನೇ ಹೆಮ್ಮೆಯಿಂದ ನಗುತ್ತದೆ!

– ಅಂತರ್ಮುಖಿ

ನಮ್ಮ ಸಮಾಜದಲ್ಲಿ ನಾವಿಷ್ಟು ಗೌರವನ್ನು, ಪ್ರಾಮುಖ್ಯತೆಯನ್ನು ಕೊಡುತ್ತಿರುವ ಕುಟುಂಬ ವ್ಯವಸ್ಥೆ ಹುಟ್ಟಿಕೊಂಡಿದ್ದೇ ಸ್ವಾತಂತ್ರ್ಯದ, ಮುಕ್ತ ಅವಕಾಶದ ಬಯಕೆಯಿಂದಾಗಿ ಎನ್ನುತ್ತಾರೆ ಬುಡಕಟ್ಟುಗಳಲ್ಲಿ ಜೀವಿಸುತ್ತಿದ್ದ ಆದಿ ಮಾನವರ ಬದುಕನ್ನು ಅಧ್ಯಯನ ಮಾಡಿದವರು. ಒಂದು ಬುಡಕಟ್ಟಿನ ಪಂಗಡದಲ್ಲಿ ಒಬ್ಬ ಬಲಿಷ್ಠವಾದ ನಾಯಕನಿರುತ್ತಾನೆ. ಆತನೇ ಇಡೀ ಪಂಗಡದ ಆಗುಹೋಗುಗಳ ಮೇಲೆ ಹಕ್ಕುಳ್ಳವನಾಗಿರುತ್ತಾನೆ. ಆತನ ಸ್ಥಾನಮಾನ ಇಡೀ ಗುಂಪಿನಲ್ಲಿ ಶ್ರೇಷ್ಠವಾಗಿರುತ್ತದೆ. ಆ ಪಂಗಡದಲ್ಲಿನ ಸಮಸ್ತ ವೈಭೋಗ, ಸುಖ, ಸಂಪತ್ತು ಆತನ ಒಡೆತನದಲ್ಲಿರುತ್ತದೆ, ಗುಂಪಿನ ಎಲ್ಲಾ ಸುಂದರ ಹೆಣ್ಣುಗಳನ್ನು ಆತನೇ ಇಟ್ಟುಕೊಂಡಿರುತ್ತಾನೆ. ಆತನು ಬಳಸಿ ಬಿಟ್ಟದ್ದು ಗುಂಪಿನ ಇತರ ಸದಸ್ಯರು ಉಪಯೋಗಿಸಬಹುದು. ಇಲ್ಲಿ ವ್ಯಕ್ತಿಯೊಬ್ಬನಿಗೆ ಪ್ರತ್ಯೇಕವಾದ ಐಡೆಂಟಿಟಿ ಇರುವುದಿಲ್ಲ. ಆತ ಆ ಪಂಗಡದ ಒಬ್ಬ ಸದಸ್ಯ ಮಾತ್ರ. ವ್ಯಕ್ತಿಯ ಸ್ವಂತ ಆಲೋಚನೆಗಳಿಗೆ, ನಿರ್ಧಾರಗಳಿಗೆ ಅಲ್ಲಿ ಬೆಲೆಯಿರುವುದಿಲ್ಲ. ಯಾರೊಂದಿಗೆ ಕೂಡಬೇಕು ಯಾರಲ್ಲಿ ಮಕ್ಕಳನ್ನು ಪಡೆಯಬೇಕು, ಎಷ್ಟು ಸಂಪಾದನೆ ಮಾಡಬೇಕು ಯಾರೊಂದಿಗೆ ಜೀವನವನ್ನು ಕಳೆಯಬೇಕು, ಯಾವ ಕೆಲಸ ಮಾಡಬೇಕು ಎಂಬ ಸಂಗತಿಗಳಲ್ಲಿ ಆತನ ವೈಯಕ್ತಿಕ ಆಯ್ಕೆಗೆ ಅವಕಾಶವೇ ಇರುವುದಿಲ್ಲ. ಪಂಗಡದ ನಾಯಕ ಯುದ್ಧಕ್ಕೆ ಹೊರಟರೆ ಸದಸ್ಯರೆಲ್ಲರೂ ಆತನ ಹಿಂದೆ ಶಸ್ತ್ರ ಹಿಡಿದು ಸಜ್ಜಾಗಿ ನಿಲ್ಲಬೇಕು. ಬೇಟೆಗೆ ಹೊರಟರೆ ಅಲ್ಲಿಗೆ ಹೊರಡಲು ತಯಾರಾಗಬೇಕು. ಪಂಗಡದ ಹಿರಿಯನ ಆಜ್ಞೆಯನ್ನು ಉಲ್ಲಂಘಿಸುವ ಪ್ರಯತ್ನ ಮಾಡಿದವರಿಗೆ ಕಠಿಣಾತಿಕಠಿಣ ಶಿಕ್ಷೆಯನ್ನು ಕೊಡಲಾಗುತ್ತಿತ್ತು.

ಮನುಷ್ಯನ ಜೀವಕೋಶಗಳಲ್ಲೇ ಈ ಗುಣ ಅಡಗಿ ಕುಳಿತಿದೆಯೇನೋ! ಆತ ಎಂದಿಗೂ ಸ್ವಾತಂತ್ರ್ಯವನ್ನು, ಸ್ವೇಚ್ಛೆಯನ್ನು, ಮುಕ್ತ ಅವಕಾಶಗಳಿಗೆ ಬೇರೆಲ್ಲವುಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾನೆ. ಸಾವಿರ ವರ್ಷಗಳಿಂದ ಗುಲಾಮಗಿರಿಯಲ್ಲಿ ನರಳುತ್ತಿದ್ದರೂ ಆತನೊಳಗೆ ಬಿಡುಗಡೆಯ, ಸ್ವಾತಂತ್ರ್ಯದ, ಬಂಡಾಯದ ಬೀಜಗಳಿರುತ್ತವೆ. ಪಂಗಡದಲ್ಲಿನ ಶ್ರೇಷ್ಠ ವಸ್ತುಗಳು, ಸಕಲ ವೈಭೋಗ, ಸಮಸ್ತ ಸುಂದರಿಯರು ವಯಸ್ಸಾದ ಮುಖಂಡನ ಪಾಲಾಗುವುದನ್ನು ಆ ಪಂಗಡದ ಯುವ ತಲೆಗಳು ಎಷ್ಟು ದಿನ ತಾನೆ ಸಹಿಸಿಯಾವು? ಒಂದು ದಿನ ಎಲ್ಲಾ ಯುವ ತಲೆಗಳು ಸೇರಿ ಆ ಮುಖಂಡನ ತಲೆಯನ್ನು ತೆಗೆದು ಹಾಕಿದವು. ಒಮ್ಮೆ ನಾಯಕ ಎಂಬ ಸ್ಥಾನದ ಹಿಡಿತದಿಂದ ಪಂಗಡ ತಪ್ಪಿಸಿಕೊಂಡಾಗ, ಆ ವ್ಯವಸ್ಥೆಯು ನಾಶವಾದಾಗ ಬದಲಿ ವ್ಯವಸ್ಥೆಯ ಆವಶ್ಯಕತೆ ಕಂಡಿತು. ಹಿಂದಿನ ವ್ಯವಸ್ಥೆಯಲ್ಲಿನ ಬಂಡಾಯಕ್ಕೆ ಕಾರಣವಾಗಿದ್ದ ಕನಸುಗಳು, ಆಸೆಗಳು ಸೇರಿಕೊಂಡು ಹೊಸ ವ್ಯವಸ್ಥೆಯ ಜನ್ಮವಾಯಿತು. ಒಬ್ಬನ ಒಡೆತನದಲ್ಲಿ ಇಡೀ ಪಂಗಡ ಬಾಳುವ ವ್ಯವಸ್ಥೆಯಿಂದ ಬೇರ್ಪಟ್ಟು ನಾಲ್ಕೈದು ಮಂದಿಯ ಸಣ್ಣ ಸಣ್ಣ ಗುಂಪುಗಳು ಒಗ್ಗೂಡಿ ಸಮಾಜವಾಗುವ ವ್ಯವಸ್ಥೆಗೆ ಜನರು ಒಗ್ಗಿಕೊಂಡರು. ಹೀಗೆ ಬಳಕೆಗೆ ಬಂದ ಕುಟುಂಬ, ಕೌಟುಂಬಿಕ ವ್ಯವಸ್ಥೆ, ತಂದೆ-ತಾಯಿ-ಮಕ್ಕಳ ಸಂಬಂಧ ಎಲ್ಲಕ್ಕೂ ಮೂಲಕಾರಣ ಸ್ವಾತಂತ್ರ್ಯದ, ಸಮಾನ ಅವಕಾಶಗಳ ಹಂಬಲ. ಸರ್ವಾಧಿಕಾರಿ ನಾಯಕನ ಹಿಡಿತದಿಂದ ತಪ್ಪಿಸಿಕೊಂಡು ಸ್ವತಂತ್ರರಾಗಬೇಕೆನ್ನುವ ಅಭಿಲಾಷೆ.

Read the rest of this entry »

Enso2

ಕತ್ತಿವರಸೆಯನ್ನು ಕಲಿಯುವುದರಲ್ಲಿ ಆಸಕ್ತನಾಗಿದ್ದ ಯುವಕನೊಬ್ಬ ಝೆನ್ ಗುರುವಿನ ಬಳಿಗೆ ಬಂದ.

"ನಾನು ನಿಮ್ಮ ಬಳಿ ಕತ್ತಿವರಸೆಯ ಕೌಶಲ ಕಲಿಯಬೇಕೆಂದಿದ್ದೇನೆ. ಪರಿಣತಿಯನ್ನು ಪಡೆಯಲು ಎಷ್ಟು ಕಾಲ ಬೇಕಾದೀತು?" ಎಂದು ಕೇಳಿದ.

ತೀರ ಸಹಜವೆಂಬಂತೆ ಗುರು "ಹತ್ತು ವರ್ಷ" ಎಂದ.

"ನನಗೆ ಬೇಗ ಕಲಿಯಬೇಕೆಂದು ಇಷ್ಟ. ಪ್ರತಿ ದಿನವೂ, ದಿನಕ್ಕೆ ಹದಿನೆಂಟು ಗಂಟೆಯ ಕಾಲ ಬೇಕಾದರೆ ಅಭ್ಯಾಸ ಮಾಡಬಲ್ಲೆ. ಹಾಗಾದರೆ ಎಷ್ಟು ಕಾಲ ಹಿಡಿದೀತು?" ಆತುರದಿಂದ ಯುವಕ ಕೇಳಿದ.

ಗುರು ಒಂದು ಕ್ಷಣ ಯೋಚನೆ ಮಾಡಿ "ಇಪ್ಪತ್ತು ವರ್ಷ" ಎಂದ.

………………………………………..

ಶಿಷ್ಯನೊಬ್ಬ ಗುರುವನ್ನು ಕೇಳಿದ: "ಗುರುವೇ, ಜ್ಞಾನೋದಯ ಎಂದರೆ ಏನು?"

ಗುರು ಹೇಳಿದ: "ಹಸಿವಾದಾಗ ಉಣ್ಣು, ಬಾಯಾರಿದಾಗ ನೀರು ಕುಡಿ, ನಿದ್ರೆ ಬಂದಾಗ ಮಲಗು"

………………………………………..

ಗುರು ಗ್ಯುಡೊನನ್ನು ಚಕ್ರವರ್ತಿ ಕೇಳಿದ.

‘ಜ್ಞಾನಿಯಾದವನು ಸತ್ತಮೇಲೆ ಏನಾಗುತ್ತದೆ?’

‘ನನಗೇನು ಗೊತ್ತು?’ ಅಂದ ಗ್ಯುಡೊ.

‘ಗೊತ್ತಿರಬೇಕು, ನೀವು ಗುರು’ ಅಂದ ಚಕ್ರವರ್ತಿ.

‘ನಿಜ. ಆದರೆ ಸತ್ತಿಲ್ಲ’ ಎಂದ ಗ್ಯುಡೊ.

………………………………………..

ಒಂದು ದಿನ ಚಾಂಗ್ ತ್ಸು ಮತ್ತು ಅವನ ಗೆಳೆಯ ನದಿಯಪಕ್ಕದಲ್ಲಿ ನಡೆಯುತ್ತಿದ್ದರು.

‘ಈಜುತ್ತಿರುವ ಮೀನು ನೋಡು, ಎಷ್ಟು ಖುಷಿಯಾಗಿವೆ’ ಅಂದ ಚಾಂಗ್ ತ್ಸು.

‘ನೀನು ಮೀನಲ್ಲ. ಆದ್ದರಿಮದ ಅವು ಖುಷಿಯಾಗಿವೆಯೋ ಇಲ್ಲವೋನಿನಗೆ ಗೊತ್ತಾಗುವುದು ಸಾಧ್ಯವಿಲ್ಲ’ ಅಂದಗೆಳೆಯ.

‘ನೀನು ನಾನಲ್ಲ, ಮೀನು ಖುಷಿಯಾಗಿವೆ ಅನ್ನುವುದು ನನಗೆಗೊತ್ತಿಲ್ಲ ಅಂತ ನಿನಗೆ ಹೇಗೆ ಗೊತ್ತಾಯಿತು?’ ಅಂದ ಚಾಂಗ್ ತ್ಸು.


Blog Stats

  • 71,866 hits
ಡಿಸೆಂಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
1234567
891011121314
15161718192021
22232425262728
293031  

Top Clicks

  • ಯಾವುದೂ ಇಲ್ಲ