ಕಲರವ

Archive for ನವೆಂಬರ್ 2008

He was all in his tears. A man who had demonstrated tremendous character in grilling times on court and conquered the world with a tennis racquet in hand was crying like a child who’s forcefully taken away from his mother. Yes it was Pete Samprass, the snapshots are still fresh in our memory when he sat in his chair after his last match and wept covering his face. “Good bye” is one of the hardest things to say I felt, that too for one last time is even harder. And now its Dada’s turn to say it to all his fans and supporters the same two words- good bye. 1559_photo.jpg

He could’ve done it two years ago when he was sacked from the Indian cricket team and when that ugly episode of the spat with Greg Chappel consumed his stature. To him controversies were nothing new but this one along with the horrible run of form he was in, it was shutters closed as for as his cricketing carrier was concerned. It seemed like Ganguly would be either a coach or a commentator the next time we would be seeing him. But then it was the adversity that got the better out of him. He was not the one to give up. Like a true champion he battled his way through all the odds and demonstrated one of the most staggering comebacks in the history of cricket. Ganguly who was once welcomed with short pitched stuff every time he went out to bat made his comeback in the fast and bouncy pitches of South Africa. And from then on to two years down the lane he never looked back for once. And now when he lines himself up to play his last test series against the Aussies, every single game he leaves us with the impression that he is not finished yet!

Many say he is not the most elegant of batsman, his not the soundest of techniques, he not very swift between the wickets and he is not very athletic fieldsman to meet the international standards. Yes of course, I know we all have a bad habit of comparing him with Sachin and Rahul for elegance and technique. But still Saurav was Saurav all the way. He holds a record that would make anyone proud. With just his hand eye co-ordination and pure talent defining his batting craft he has over 17000 runs in international cricket. Moreover he has played at the highest level for almost 16 years since his debut in 1992. He played the game in the hard way. That itself is a greatest tribute to any player. ps.jpg

The “Prince of Calcutta” has had his share of ups and downs in his career like everybody has. He was a man of aggression and met fire with fire. He has been the most successful Indian captain and most charismatic of all Indian captains. He was a captain with far-sightedness and it was he who brought Yuvraj, Kaif, Sehwag, Zaheer, H.Singh into Indian team. Whenever India toured down under the entire Australian media would be activated just because of him. He was the one who played mind games with the aussies that too in their soil. He was the one who took his shirt off and made those open chested celebrations in England . Dada has left a lasting impression on Indian cricket and he will be missed for these things in the future.

There are many questions to be answered as he announces his retirement. His exclusion from the Irani cup was really unfair given any justification. Yet he decided to walk out on his own terms. He couldn’t have asked for a better time than the ongoing series. Breaking the Aussie supremacy in world cricket in a very convincing manner would be the most satisfying thing in his carrier. And as I complete this article Saurav completed his century in second test at Mohali. What a way to say goodbye to the Aussies!

For a player who has spent his entire life pursuing his love in the heat of expectations both by the people and the self, to wake up in the morning and think all those are a thing of past is a real hard feeling, how big or small the player might be in terms of numbers and statistics. Sometimes this sporting world would be a cruel place. You retire at a age when you actually start to mature. The time here is so short and the space here is so less. Well thats life isn’t it? When you say goodbye…..

ಟ್ಯಾಗ್ ಗಳು: , ,

– ಹೇಮಾ ಪವಾರ್, ಬೆಂಗಳೂರು

ಬೆಳಿಗ್ಗೆಯಿಂದ ಆ ಮುಖಾನೇ ಕಾಡ್ತಿದೆ. ಸಿಗ್ನಲ್ನಲ್ಲಿ ಸಿಂಬಳ ಸೋರುತ್ತಿರುವ ಮಗುವನ್ನು ಎತ್ತಿಕೊಂಡು ಭಿಕ್ಷೆ ಬೇಡುತ್ತಿದ್ದ ಆ ಹೆಣ್ಣಿನ ಮುಖ. ಅವಳನ್ನ ದಿನಾ ನೋಡ್ತಿದ್ದೆ, ಇವತ್ತು ಆ ಮುಖ ಪದೇ ಪದೇ ನೆನಪಾಗ್ಲಿಕ್ಕೆ ಕಾರಣ, ಪತ್ರಿಕೆಯಲ್ಲಿ ಈ ಸಿಗ್ನಲ್ ಭಿಕ್ಷುಕರ ಬಗ್ಗೆ ಓದಿದ್ದ ಲೇಖನ. ಅವರು ಮಕ್ಕಳನ್ನ ಭಿಕ್ಷೆ ಬೇಡೋಕೆ ಅಂತಾನೆ ದುಡ್ಡುಕೊಟ್ಟು ತರ್ತಾರಂತೆ!! ಒಮ್ಮೆ ಪೋಲೀಸರಿಗೆ ಸಿಕ್ಕಿಹಾಕಿಕೊಂಡ ಒಬ್ಬ ಭಿಕ್ಷುಕಿಯ ಸೆರಗಿನ ಗಂಟಲ್ಲಿ ಭರ್ತಿ ನಲವತ್ತು ಸಾವಿರ ಸಿಕ್ತಂತೆ!! ಇದೆಲ್ಲ ನಿಜವಾ? ಅವಳ ದೀನ ಮುಖ, ಸಿಂಬಳ ಸುರಿಸುತ್ತಿದ್ದ ಆ ಮುಗ್ದ ಮಗು, ಅರೆ ಹಾಲೂಡಿಸುತ್ತಿದ್ದಳಲ್ಲ ಅದೂ ಸುಳ್ಳೇ? ಮನ ಕಲಕಿತ್ತು. ಈ ಜನಕ್ಕೆ ಅದೇನು ಬಂದಿದೀಯೋ. ಭಿಕ್ಷಾಟನೇನು ಬಿಸಿನೆಸ್ ಆಗಿ ಹೋಯ್ತೆ? ಆ ಹುಡುಗಿ ಮಗುವನ್ನಿಟ್ಟುಕೊಂಡು ತನ್ನ ಹೆಣ್ತನವನ್ನು ಎನ್‌ಕ್ಯಾಶ್ ಮಾಡಿಕೊಳ್ತಿತ್ತಾ? ಛೆ ಅಷ್ಟೊಂದು ಮುಗ್ದತೆ ಇತ್ತು ಮುಖದಲ್ಲಿ, ಅದರ ಹಿಂದೆ ಅಂಥಾ ಸ್ವಾರ್ಥವಿತ್ತಾ? ಸ್ವಾರ್ಥ ಅಂದೇಕೆ ಅಂದುಕೊಳ್ಳಬೇಕು ಅದು ಅವಳ ನೆಸೆಸಿಟಿ ಇರಬಹುದು, ಓದಿಲ್ಲದ, ಮನೆಯಿಲ್ಲದ ಅವಳಿಗೆ ಕೆಲಸ ಯಾರು ಕೊಡ್ತಾರೆ? ಯೋಚಿಸಿಕೊಂಡೇ ಬಸ್ ಹತ್ತಿದೆ. ಈ ಬಸ್ ಕಾರ್ಪೊರೇಷನ್ಗೆ ಹೋಗುತ್ತ… ಕಂಡಕ್ಟರನ್ನ ಕೇಳುತ್ತಿದ್ದ ಹುಡುಗಿ ಬಸ್ ಹತ್ತಿ ಸೀದಾ ನನ್ನ ಪಕ್ಕ ಬಂದು ಕೂತು, ಕಾರ್ಪೋರೇಷನ್ ಬಂದ್ರೆ ಹೇಳ್ತೀರಾ? ಅಂತ ಇಂಗ್ಲೀಷ್ನಲ್ಲಿ ಕೇಳಿದಾಗಲೆ ನನಗೆ ಎಚ್ಚರವಾಗಿದ್ದು. ಆಫ್ ಕೋರ್ಸ್ ಅಂತ ನಾನೂ ಸ್ಟೈಲಾಗಿ ಉಲಿದು ಇಷ್ಟಗಲ ಮುಗುಳ್ನಕ್ಕೆ. ಅಷ್ಟೇ ಸಾಕು ಅಂತ ಆ ಹುಡುಗಿ ಮಾತಿಗೆ ಶುರುವಿಡ್ತು. ಅವಳ ಕೆಲಸ, ಗಂಡ, ಆರು ತಿಂಗಳ ಮಗು ಇನ್ನು ಏನೇನೋ ನಮ್ಮ (ಅವಳ) ಮಾತಿನ ನಡುವೆ ಬಂತು. ಕಾರ್ಪೋರೇಷನ್ ಬಂದಿದ್ದೆ ಗೊತ್ತಾಗ್ಲಿಲ್ಲ. ಆ ಹುಡುಗಿ ತಡಬಡಾಯಿಸಿ ನನಗೊಂದು ಬಾಯ್ ಹೇಳಿ, ನಾನು ಕೊಟ್ಟಿದ್ದ ಅದೇ ಇಷ್ಟಗಲ ಮುಗುಳ್ನಗುವನ್ನು ನನಗೇ ಮರಳಿಸಿ ಇಳಿದು ಹೋದಳು. ಮನಸ್ಸು ಆ ಭಿಕ್ಷುಕಿಯೊಡನೆ ಇವಳನ್ನು ಹೋಲಿಸುತಿತ್ತು. ಹಿಂದೆಯೇ ಗುದ್ದಿಕೊಂಡು ಆ ಹೆಣ್ಣಿನ ನೆನಪು ಬಂದಿತ್ತು.

ಮೊದಲು ನಾನು ನೋಡಿದ್ದು ಅವಳ ಗಂಡನನ್ನು. ಅವಳು ಅವನನ್ನ ಬಿಟ್ಟು ಹೋಗಿದ್ದಳು. ಅವನನ್ನಷ್ಟೇ ಅಲ್ಲ ಅವಳ ಎರಡು ಮಕ್ಕಳನ್ನೂ ಬಿಟ್ಟು ಹೋಗಿದ್ದಲ್ಲದೇ ಅವಳ ಗಂಡನಿಂದ ಜೀವನಾಂಶ ಕೋರಿ ಕೋರ್ಟಿನಲ್ಲಿ ಕೇಸೊಂದನ್ನು ಹಾಕಿದ್ದಳು. ಆ ಮನುಷ್ಯನನ್ನು ನೋಡಿದಾಗ ನನಗೆ ಎಲ್ಲಿಲ್ಲದ ಕೋಪ ಬಂದಿತ್ತು. ಇರೋ ಎರಡು ಮಕ್ಕಳನ್ನು ಬಿಟ್ಟು ಹೋಗಬೇಕೆಂದರೆ ಅದಿನ್ನೆಂತಾ ಹಿಂಸೆ ಕೊಟ್ಟಿರಬೇಕು ಈ ಪ್ರಾಣಿ ಅಂತ ಬೈದುಕೊಂಡಿದ್ದೆ. ಬರೋ ಸಂಬಳ ಮಕ್ಕಳ ಊಟಕ್ಕೆ, ಸ್ಕೂಲ್ fee ಸಾಲೋಲ್ಲ ಸಾರ್ ಜೀವನಾಂಶ ಅಂದ್ರೆ ತೊಂದರೆಯಗುತ್ತೆ ಹೇಗಾದ್ರೂ ರಾಜಿ ಮಾಡ್ಸಿ ಸಾರ್ ಅಂತ ಲಾಯರನ್ನ ಅಂಗಲಾಚುತ್ತಿದ್ದ. ರಾಜಿಗೆ ಅಂತ ಕರೆಸಿದಾಗ ನೋಡಿದ್ದೆ ಅವಳನ್ನು, ಆಗ್ಲೇ ನನಗೆ ಗೊತ್ತಾಗಿದ್ದು ಅವಳು ಇನ್ನೊಬ್ಬ ಗಂಡಿನೊಂದಿಗೆ ಸಂಸಾರ ಮಾಡುತ್ತಿದ್ದಾಳೆಂದು. ಬೆಳೆಯುತ್ತಿರುವ ಇಬ್ಬರು ಮಕ್ಕಳನ್ನು, ಅಷ್ಟು ವರ್ಷ ಸಂಸಾರ ಮಾಡಿದ್ದ ಗಂಡನನ್ನು ಬಿಟ್ಟು ಇನ್ನೊಬ್ಬ ಗಂಡಿನೊಂದಿಗೆ ಹೋಗಿದ್ದು ತಪ್ಪೋ ಸರಿಯೋ ಗೊತ್ತಿಲ್ಲ. ಆದರೆ ಅವಳಲ್ಲಿ ಒಂದಿಷ್ಟೂ ಪಶ್ಚಾತಾಪವಿರಲಿಲ್ಲ! ಗಂಡ ಬೈದಿದ್ದು, ಅವನು ಹೊಡೆದಿದ್ದರ ಬಗ್ಗೆ ಸಾಲು ಸಾಲಾಗಿ ವರದಿಯೊಪ್ಪಿಸಿ ಬೈತಿದ್ದವಳು, ಮಕ್ಕಳ ವಿಷಯ ಬಂದಾಗ, ಅವನೇ ಹುಟ್ಟಿಸಿದ್ದಲ್ಲವೇ ಸಾಕಲೀ ಬೇಕಾದ್ರೆ ಅಂದಿದ್ದಳು. ತೀರಾ ಹಳ್ಳಿಯವಳಾದ, ಅದರಲ್ಲೂ ಹೆಣ್ಣಾದ ಆಕೆಯಲ್ಲಿ ಅಷ್ಟು ಕ್ರೌರ್ಯವಿರಲು ಹೇಗೆ ಸಾಧ್ಯ? ನನ್ನ ಮನಸ್ಸು ಒಪ್ಪಿಕೊಳ್ಳಲು ತಯಾರಿರಲಿಲ್ಲ ಆದರೆ ವಾಸ್ತವ ಕಣ್ಣಿಗೆ ರಾಚುತ್ತಿತ್ತು.

hemantaranga.png

ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಷಯದಲ್ಲಿ ಎಂಜಿನಿಯರಿಂಗ್ ಮುಗಿಸಿ, ಸಾಫ್ಟ್ ವೇರ್ ಎಂಜಿನಿಯರ್ ಆಗಿ ಮೂರು ವರ್ಷದಿಂದ ಕೆಲಸ ಮಾಡುತ್ತಿದ್ದ ರಚನ, ಹೆರಿಗೆಗಾಗಿ ಮೂರು ತಿಂಗಳಷ್ಟೇ ರಜ ಹಾಕಿ ತೀರ ಎರಡು ತಿಂಗಳ ಮಗುವನ್ನು ಮನೇಲಿ ಬಿಟ್ಟು ಅರ್ಧ ದಿನ ಆಫೀಸಿಗೆ ಹೋಗಿಬರಲೇ ಬೇಕಾದ ಅನಿವಾರ್ಯತೆ, ಅವಳ ಮುಖದಲ್ಲಿ ಮಗುವಿನ ಬಗ್ಗೆ ಇದ್ದ ಪ್ರೀತಿ, ಕಾಳಜಿ, ಆತಂಕ, ಅವಳ ಕೆಲಸ ಬಿಡಲಾರದ ಪರಿಸ್ಥಿತಿ, ನಾಲ್ಕು ತಿಂಗಳಿಂದ ಅದನ್ನು ನಿಭಾಯಿಸುತ್ತಿದ್ದ ಅವಳ ಬುದ್ದಿವಂತಿಕೆ, ಬಸ್ಸಿನಲ್ಲಿ ಅವಳೊಡನೆ ಮಾತಾಡಲು ಸಿಕ್ಕ ಇಪ್ಪತ್ತು ನಿಮಿಷಕ್ಕೇ ಅವಳ ಬಗ್ಗೆ ಆರಾಧನಾ ಭಾವವನ್ನು ಮೂಡಿಸಿತ್ತು. ಗಂಡ ಹೇಗಿದ್ದರೂ ಅವನು ಗಂಡನೆಂಬ ಒಂದೇ ಕಾರಣಕ್ಕೆ ಜೀವಮಾನವಿಡೀ ಸಣ್ಣ ಬಿಕ್ಕಳಿಕೆಯೊಂದಿಗೇ ಬದುಕಿಬಿಡುವ ಎಷ್ಟೋ ಜನ ಹೆಣ್ಣುಮಕ್ಕಳ ಮಧ್ಯೆ, ಇಬ್ಬರು ಮಕ್ಕಳಿದ್ದುಕೊಂಡು ಗಂಡನನ್ನು ಬಿಟ್ಟು ಬೇರೆ ಗಂಡಿನೊಂದಿಗೆ ಹೋಗಿದ್ದಲ್ಲದೆ, ಅವನು ಕಿರುಕುಳ ನೀಡುತ್ತಿದ್ದ ಎಂದು domestic violence act ಕೆಳಗೆ ಜೀವನಾಂಶ ಕೇಳಿ ಕೇಸು ಬರೆಸಿದ್ದ ಆ ಹೆಣ್ಣು ಅದೇಕೋ ನನ್ನ ದೃಷ್ಠಿಯಲ್ಲಿ ದುಡ್ಡಿಗಾಗಿ ಮಗುವನ್ನಿಟ್ಟುಕೊಂಡು ಭಿಕ್ಷೆಬೇಡುತ್ತಿದ್ದ ಆ ಭಿಕ್ಷುಕಿಗಿಂತ ಕೀಳಾಗಿ ಹೋಗಿದ್ದಳು. “ಮನೆ ಮನೆಯಲಿ ದೀಪ ಉರಿಸಿ, ಹೊತ್ತು ಹೊತ್ತಿಗೆ ಅನ್ನ ಉಣಿಸಿ, ತಂದೆ ಮಗುವ ತಬ್ಬಿದಾಕೆ, ನಿನಗೆ ಬೇರೆ ಹೆಸರು ಬೇಕೆ… ಸ್ತ್ರೀ ಅಂದರೆ ಅಷ್ಟೇ ಸಾಕೆ?” ಬಸ್ಸಿನ ರೇಡಿಯೋದಲ್ಲಿ ಬರುತ್ತಿದ್ದ ಹಾಡು ನನ್ನನ್ನು ಅಣಕಿಸುತ್ತಿತ್ತು.


-ಅಂತರ್ಮುಖಿ

ನಾವು ಬುದ್ಧಿವಂತರು. ಸಮಗ್ರವಾಗಿ ಆಲೋಚಿಸದೆ, ಸರಿ ತಪ್ಪುಗಳ ನಿಷ್ಕರ್ಷೆಯನ್ನು ಮಾಡದೆ, ಉದ್ದೇಶಗಳನ್ನುlahari 1.png ಸ್ಪಷ್ಟ ಪಡಿಸಿಕೊಳ್ಳದೆ, ಗುರಿಗಳನ್ನು ಕಂಡುಕೊಳ್ಳದೆ ನಾವು ಯಾವ ಕೆಲಸವನ್ನೂ ಮಾಡುವುದಿಲ್ಲ. ಏನನ್ನೇ ಮಾಡಬೇಕೆಂದರೂ ನಮಗೆ ಅದರಲ್ಲಿ ಒಂದು ಠಿuಡಿಠಿose ಇರಬೇಕು. ಉಪಯೋಗವಿಲ್ಲದ ಯಾವ ಕೆಲಸವನ್ನು ಮಾಡುವುದಕ್ಕೂ ನಾವು ಇಷ್ಟ ಪಡುವುದಿಲ್ಲ. ಉದ್ದೇಶವಿಲ್ಲದೆ ಮಾತನಾಡುವವರು, ಉದ್ದೇಶವಿಲ್ಲದೆ ಕೆಲಸ ಮಾಡುವವರು, ಆಕಾರವಿಲ್ಲದ ಚಿತ್ರದಲ್ಲಿ ಕುಂಚ ಅಲ್ಲಾಡಿಸುವವರು, ಏನನ್ನೂ ಹೇಳದ ಸಿನೆಮಾ ಮಾಡಿದವರು ನಮ್ಮಲ್ಲಿ ಲೂಸ್‌ಗಳು ಎಂದು ಗುರುತಿಸಲ್ಪಡುತ್ತಾರೆ. ಉದ್ದೇಶವಿಲ್ಲದೆ ನಗುತ್ತಾ ರಸ್ತೆಯಲ್ಲಿ ಸಾಗುವವನು ನಮ್ಮ ಅನುಕಂಪಕ್ಕೆ ತುತ್ತಾಗುತ್ತಾನೆ. ಯಾವ ಕಾರಣವೂ ಇಲ್ಲದೆ ಮುಗುಳ್ನಗುವವನು ನಮ್ಮಲ್ಲಿ ಸಂಶಯ ಹುಟ್ಟಿಸುತ್ತಾನೆ. ಏನನ್ನೂ ಕೇಳದೆ ನಮಗೆ ಬೇಕಿದ್ದನ್ನೆಲ್ಲಾ ಕೊಡುವವರು ನಮ್ಮಲ್ಲಿ ಆತಂಕವನ್ನು ಹುಟ್ಟಿಸುತ್ತಾರೆ. ನಮ್ಮೆಲ್ಲಾ ಚಟುವಟಿಕೆಗಳು ಅರ್ಥ ಪೂರ್ಣವೆನಿಸಿಕೊಳ್ಳುವುದು ಈ ‘ಉದ್ದೇಶ’ ಎಂಬ ಮಾಂತ್ರಿಕ ಶಕ್ತಿಯಿಂದ.

ಇಷ್ಟು ಬುದ್ಧಿವಂತರಾದ ನಾವು ಎಂದಾದರೂ ‘ಈ ಬದುಕಿನ ಉದ್ದೇಶವೇನು’ ಎಂದು ಕೇಳಿಕೊಂಡಿದ್ದೇವೆಯೇ? ನಾವು ಹುಟ್ಟಿದ್ದು ಯಾಕೆ? ನಾವು ಬದುಕುವುದಕ್ಕೆ ಇರುವ ಕಾರಣಗಳು ಯಾವುವು ಎನ್ನುವುದನ್ನು ಕೇಳಿಕೊಳ್ಳುವ ಧೈರ್ಯವನ್ನು ನಾವು ಒಂದು ಕ್ಷಣಕ್ಕಾದರೂ ಮಾಡಿದ್ದಿದೆಯೇ? ಒಂದು ಸಣ್ಣ ಚಪ್ಪಾಳೆ ತಟ್ಟುವುದಕ್ಕೆ ಹತ್ತಾರು ಕಾರಣಗಳನ್ನು, ಚಪ್ಪಾಳೆ ತಟ್ಟಿಸಿಕೊಳ್ಳುವವನ ಅರ್ಹತೆಗೆ ನೂರೆಂಟು ಸಮಜಾಯಿಷಿಗಳನ್ನು ಬಯಸುವ ನಾವು ಎಪ್ಪತ್ತು, ಎಂಭತ್ತು ವರ್ಷಗಳ ಬದುಕನ್ನು ಏನೂ ಪ್ರಶ್ನಿಸಿಕೊಳ್ಳದೆ, ಯಾವ ಕಾರಣಗಳನ್ನೂ ಕೇಳದೆ ಕಳೆದುಬಿಡುತ್ತೇವಲ್ಲಾ ಇದಕ್ಕಿಂತ ವಿಪರ್ಯಾಸ ಬೇರೊಂದಿದೆಯೇ?

existence.png

‘ನಾವು ಹುಟ್ಟಿದ್ದು ಏಕೆ?’ ಎಂಬುದು ತುಂಬಾ ಸರಳವಾದ ಪ್ರಶ್ನೆ. ಪ್ರಶ್ನೆ ಸರಳವಾದಷ್ಟೂ ಉತ್ತರಗಳು ಕ್ಲಿಷ್ಟವಾಗುತ್ತಾ ಹೋಗುವ ಸೋಜಿಗವನ್ನು ಗಮನಿಸಿದ್ದೀರಾ? ‘ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯ?’ ಎಂಬುದು ನಿಮ್ಮ ಯಾವುದೇ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಿಂತ ಸರಳವಾದದ್ದು. ಆದರೆ ಇದಕ್ಕೆ ಉತ್ತರಿಸುವುದು, ಉತ್ತರದಿಂದ ಪ್ರಶ್ನೆ ಕೇಳಿದವರನ್ನು ತೃಪ್ತಿ ಪಡಿಸುವುದು ಎಂದಾದರೂ ಸಾಧ್ಯವೇ? ‘ನೀನು ಯಾರು’ ಎಂಬುದು ತೀರಾ ಸಿಲ್ಲಿ ಪ್ರಶ್ನೆ. ಉತ್ತರ? ಆದಿಮಾನವನಿಂದ ಹಿಡಿದು, ಅತ್ಯಾಧುನಿಕ ಲ್ಯಾಬರೋಟರಿಯಲ್ಲಿ ಕುಳಿತ ಆಧುನಿಕ ಮನುಷ್ಯನವರೆಗೆ ಉತ್ತರ ರೂಪುಗೊಳ್ಳುತ್ತಿದೆ. ಉತ್ತರ ಬೆಳೆಯುತ್ತಲೇ ಹೋಗುತ್ತಿದೆ, ನೂರಾರು ಕವಲುಗಳನ್ನು ತನ್ನೊಳಗೆ ಸೆಳೆದುಕೊಳ್ಳುತ್ತಾ, ಹತ್ತಾರು ರೆಂಬೆಗಳಾಗಿ ಟಿಸಿಲೊಡೆಯುತ್ತಾ ಬೆಳೆಯುತ್ತಲೇ ಇದೆ. ಆದರೆ ಎಂದಿಗೂ ಅದು ಸಂಪೂರ್ಣ ಉತ್ತರವಾಗಲು ಸಾಧ್ಯವೇ ಇಲ್ಲ. ಇದನ್ನೆಲ್ಲಾ ಯೋಚಿಸಿದಾಗ ಈ ಜಗತ್ತಿನಲ್ಲಿ ಪ್ರಶ್ನೆಗಳೆಂಬುವವು ಇಲ್ಲವೇ ಇಲ್ಲ ಅನ್ನಿಸುತ್ತದೆ. ನಾವು ಕಂಡುಕೊಂಡ, ರೂಪಿಸಿದ, ಕಟ್ಟಿಬೆಳೆಸಿದ ಉತ್ತರಗಳಿಗೆ ಸಾರ್ಥಕ್ಯವೊಂದನ್ನು ಕರುಣಿಸುವುದಕ್ಕಾಗಿ ನಾವು ಪ್ರಶ್ನೆಗಳನ್ನು ಅನ್ವೇಷಿಸಿದೆವೆನೋ ಅನ್ನಿಸುತ್ತದೆ.

ಮತ್ತೆ ನಮ್ಮ ಮೂಲ ಪ್ರಶ್ನೆಗೆ ಹಿಂದಿರುಗೋಣ: ನಾವು ಈ ಭೂಮಿಯ ಮೇಲಿರುವುದು ಏತಕ್ಕೆ? ನಾನು ಈ ಇಡೀ ಬ್ರಹ್ಮಾಂಡದಲ್ಲಿ ಎಲ್ಲಿ ಬೇಕಾದರೂ ಹುಟ್ಟಬಹುದಿತ್ತು. ಆದರೂ ಈ ಭೂಮಿಯ ಮೇಲೆಯೇ ಹುಟ್ಟಿದ್ದೇನೆ. ಭೂಮಿಯ ಮೇಲಿನ ಕೋಟ್ಯಾನುಕೋಟಿ ಜೀವ ಜಂತುಗಳಲ್ಲಿ ಒಂದಾಗಿ ಹುಟ್ಟಬಹುದಿತ್ತು. ನಾನು ಮನುಷ್ಯನಾಗಿಯೇ ಹುಟ್ಟಿದ್ದೇನೆ. ಮನುಷ್ಯನಾಗಿ ನಾನು ಏಳು ಖಂಡಗಳಲ್ಲಿ ಬೇರೆಲ್ಲಾದರೂ ಹುಟ್ಟಬಹುದಿತ್ತು. ಏಷ್ಯಾ ಎಂಬ ಖಂಡದಲ್ಲಿ, ಭಾರತವೆಂಬ ದೇಶದಲ್ಲಿ, ಕನ್ನಡ ಎಂಬ ಭಾಷೆಯನ್ನಾಡುವ ಜನ ಸಮುದಾಯದಲ್ಲೇ ಹುಟ್ಟಿದ್ದೇನೆ. ನಾನು ಬೇರೊಂದು ಜಾತಿಯಲ್ಲಿ ಹುಟ್ಟಬಹುದಿತ್ತು. ನಾನು ಬಂಗಲೆಯಲ್ಲಿ ಹುಟ್ಟಬಹುದಿತ್ತು, ಗುಡಿಸಲಿನಲ್ಲಿ ಕಣ್ತೆರೆಯಬಹುದಾಗಿತ್ತು, ಹೆಣ್ಣಾಗಿ ಹುಟ್ಟಬಹುದಾಗಿತ್ತು, ಹುಟ್ಟುತ್ತಲೇ ಮಾತು, ದೃಷ್ಟಿ ಇಲ್ಲದವನಾಗಬಹುದಿತ್ತು. ನಾನು ಹಿಂದೆ, ಭಾರತಕ್ಕೆ ಬ್ರಿಟೀಷರು ಬರುವುದಕ್ಕೆ ಮುನ್ನವೇ ಹುಟ್ಟಬಹುದಿತ್ತು, ಗಾಂಧಿ ತಾತ ಬದುಕಿದ್ದಾಗ ಹುಟ್ಟಬಹುದಿತ್ತು, ಮುಂದೆಂದಾದರೋ ಹುಟ್ಟಬಹುದಿತ್ತು. ಅಸಲಿಗೆ ನಾನು ಹುಟ್ಟದೆಯೂ ಇರಬಹುದಿತ್ತು. ಆದರೂ ಹುಟ್ಟಿರುವೆ, ಏಕೆ?

ನೀವು ದೇವರಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಧರ್ಮ ಗ್ರಂಥಗಳು ಹೇಳುವುದನ್ನು ಭಕ್ತಿ ಹಾಗೂ ಶ್ರದ್ಧೆಯಿಂದ ಕೇಳುವವರಾಗಿದ್ದರೆ, ನಿಮಗೆ ವರ್ಚಸ್ವೀ ಹಿರಿಯರ, ಜ್ಞಾನಿಗಳ ಸಂಪರ್ಕವಿದ್ದರೆ ಹತ್ತಾರು ಉತ್ತರಗಳು ಸಿಕ್ಕುತ್ತವೆ. ‘ದೇವರು ಈ ಸೃಷ್ಟಿಯನ್ನು ಮಾಡಿದ. ಆತನ ಇಚ್ಛೆಯಂತೆ ನೀನಿಲ್ಲಿ ಹುಟ್ಟಿರುವುದು. ಇದರಲ್ಲಿ ನಿನ್ನ ಆಯ್ಕೆಯೇನೂ ಇಲ್ಲ. ನೀನು ಇಲ್ಲಿ ಹುಟ್ಟಿರುವುದು ನಿನ್ನ ಕರ್ಮ ಫಲವನ್ನು ತೀರಿಸುವುದಕ್ಕಾಗಿ. ಕರ್ಮದ ಬಂಧನದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹುಟ್ಟು ಸಾವುಗಳ ಚಕ್ರದಿಂದ ಮುಕ್ತರಾಗಿ ದೇವರನ್ನು ಸೇರುವುದೇ ಬದುಕಿನ ಉದ್ದೇಶ. ಇಲ್ಲಿ ಈ ಬದುಕಿನಲ್ಲಿ ಯಾವ ಅರ್ಥವೂ ಇಲ್ಲ. ಇಡೀ ವಿಶ್ವ ಮಾಯೆ. ಈ ಶರೀರ, ಈ ಬದುಕು ನಶ್ವರ. ಶಾಶ್ವತವಾದದ್ದು ಪರಮಾತ್ಮ. ನಮ್ಮ ಆತ್ಮವನ್ನು ಪರಮಾತ್ಮನಲ್ಲಿಗೆ ಸೇರಿಸಿದಾಗಲೇ ನಮ್ಮ ಜೀವಿತಕ್ಕೆ ಸಾರ್ಥಕ್ಯ ದೊರಕುವುದು….’ ಹೀಗೆ ಪುಂಖಾನುಪುಂಖವಾಗಿ ಧಾರ್ಮಿಕ ಗ್ರಂಥಗಳ, ಧರ್ಮಬೀರುಗಳ ವಿವರಣೆಗಳು ದೊರಕುತ್ತವೆ. ಹೆಚ್ಚೆಚ್ಚು ವಿವರಣೆ ತಿಳಿದಷ್ಟೂ ಸಂಶಯ ಹೆಚ್ಚುತ್ತಾ ಹೋಗುತ್ತದೆ. ಒಂದು ವೇಳೆ ಈ ಎಲ್ಲಾ ವಿವರಣೆಗೆ ಮೂಲವಾದ ದೇವರ ಅಸ್ತಿತ್ವವನ್ನೇ ನಿರಾಕರಿಸಿಬಿಟ್ಟರೆ? ಮೊದಲ ಹಂತದಲ್ಲೇ ದೇವರನ್ನು ಒಪ್ಪದೇ ಹೋದರೆ ಮೇಲಿನ ಯಾವ ವಿವರಣೆಯೂ ಉಪಯೋಗಕ್ಕೆ ಬರುವುದಿಲ್ಲ.

ದೇವರನ್ನು, ಧರ್ಮಗಳು ಉಪದೇಶಿಸಿದ ಸತ್ಯಗಳನ್ನು ನಿರಾಕರಿಸಿ ಸ್ವತಂತ್ರ ಆಲೋಚನೆ, ಸ್ವಂತ ಅನುಭವದ ಮೇಲೆ ನಂಬಿಕೆ ಇರಿಸಿಕೊಂಡು ಈ ಪ್ರಶ್ನೆಯನ್ನು ಎದುರುಗೊಂಡರೆ? ನಾವು ಹುಟ್ಟಿದ್ದು ಏಕೆ… ನಮ್ಮ ಹುಟ್ಟು ಕೇವಲ ಆಕಸ್ಮಿಕ. ಇದಕ್ಕೆ ಯಾವ ಉದ್ದೇಶವೂ ಇಲ್ಲ. ಆತ್ಮವೆಂಬುದೇ ಇಲ್ಲವಾದಾಗ ಹುಟ್ಟು ಸಾವಿನ ಚಕ್ರದ ಪ್ರಶ್ನೆಯೇ ಅಸಂಬದ್ಧ. ಕರ್ಮಫಲ, ದೇವರ ಇಚ್ಛೆ ಎಂಬುವೆಲ್ಲಾ ಕೆಲಸಕ್ಕೆ ಬಾರದ ತತ್ವಗಳು. ಯಾವ ಕಾರಣವೂ ಗೊತ್ತಿಲ್ಲದೆ ಹುಟ್ಟಿದ್ದೇವೆ, ಹುಟ್ಟಿದ್ದೇವೆ ಎಂಬ ಕಾರಣಕ್ಕೆ ಒಂದು ದಿನ ಸಾಯುತ್ತೇವೆ. ಸತ್ತ ನಂತರ ಏನೂ ತಿಳಿಯದು. ನಾವು ಹುಟ್ಟಿದ್ದು ಏತಕ್ಕೆ, ಬದುಕಬೇಕಿದ್ದು ಯಾವ ಪುರುಷಾರ್ಥ ಸಾಧನೆಗೆ, ನಾವು ಹುಟ್ಟಿದ ಉದ್ದೇಶ ಪೂರ್ಣವಾಗದಿದ್ದರೆ ಏನಾದೀತು ಎಂಬ ಸಂಶಯಗಳಿಗೆ ಸಾವೆಂಬುದು ಉತ್ತರ ಕೊಡುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಆದರೆ ದುರದೃಷ್ಟಕ್ಕೆ ಬದುಕಿನ ಕಡೆಯ ಕ್ಷಣದವರೆಗೆ ಈ ಯಾವ ಸಂಶಯಗಳೂ ಕೊನೆಗೊಳ್ಳುವುದಿಲ್ಲ. ಈ ಬದುಕಿನಲ್ಲಿರುವ ಉದ್ದೇಶಗಳೆಲ್ಲವೂ ನಾವು ಸೃಷ್ಟಿಸಿಕೊಂಡಿರುವಂಥವು. ಒಂದು ದಿನ ಹುಟ್ಟುತ್ತೇವೆ. ಅತ್ತು ಕರೆದು ದಣಿವಾದಾಗ ಹಸಿವು ಕಾಡುತ್ತದೆ, ನಿದ್ರೆ ಬೇಕೆನಿಸುತ್ತದೆ. ಹಸಿವು ಆಹಾರ ಸಂಪಾದಿಸಿಕೊಳ್ಳುವ ಉದ್ದೇಶವನ್ನು ಬದುಕಿಗೆ ಕೊಡುತ್ತದೆ. ಹೊಟ್ಟೆಗೆ ಆಹಾರ ಬಿದ್ದ ಮೇಲೆ ದೇಹದ ಆಯಾಸ ಕರಗಿದ ಮೇಲೆ ಉದ್ದೇಶದ ಜಾಗ ಖಾಲಿ ಉಳಿಯುತ್ತದೆ. ಜಗತ್ತನ್ನು ನೋಡುವ, ಕಲಿಯುವ, ಕುಣಿಯುವ, ಅಂಬೆ ಕಾಲಿಕ್ಕುವ, ಎದ್ದು ನಡೆಯುವ, ವಿದ್ಯೆ ಕಲಿಯುವ, ಕ್ಲಾಸಿನಲ್ಲಿ ಫರ್ಸ್ಟ್ ಬರುವ, ಹುಡುಗಿಯ ಮನಗೆಲ್ಲುವ, ಒಳ್ಳೆಯ ಗಂಡನನ್ನು ಪಡೆಯುವ, ವಂಶ ಮುಂದುವರೆಸುವ, ಮಕ್ಕಳನ್ನು ಬೆಳೆಸುವ, ಕನಸನ್ನು ನನಸಾಗಿಸಿಕೊಳ್ಳುವ, ಒಳ್ಳೆಯ ಪ್ರಜೆಯಾಗುವ, ಆದರ್ಶ ವ್ಯಕ್ತಿಯಾಗುವ, ಯಶಸ್ವಿಯಾಗುವ ಉದ್ದೇಶಗಳು ಒಂದೊಂದಾಗಿ ಆ ಜಾಗವನ್ನು ತುಂಬುತ್ತಾ ಹೋಗುತ್ತವೆ. ಮೊದಲಿಗೆ ಆ ಜಾಗ ಖಾಲಿಯಿತ್ತು. ಒಂದೊಂದೇ ಉದ್ದೇಶ ಈಡೇರುತ್ತಾ ಹೋದಂತೆ ಅದು ಖಾಲಿಯಾಗಿ ಆ ಜಾಗದಲಿ ಮತ್ತೊಂದು ಉದ್ದೇಶ ಪ್ರತಿಷ್ಠಾಪಿತಗೊಳ್ಳುತ್ತಾ ಹೋಗುತ್ತದೆ… ನಾವು ಪ್ರತಿಷ್ಠಾಪಿಸಿಕೊಳ್ಳುವ ಈ ಉದ್ದೇಶಗಳಿಂದಾಗಿಯೇ ನಮ್ಮ ಬದುಕಿಗೆ ಅರ್ಥ ಬಂದುಬಿಡುತ್ತದೆ. ಸಾರ್ಥಕತೆ ದಕ್ಕಿಬಿಡುತ್ತದೆ!

ನಾವು ಏನೇ ಕಡಿದು ಕಟ್ಟೆ ಹಾಕಿದರೂ ಇಡೀ ವಿಶ್ವದಲ್ಲಿ ಏನೇನೂ ಬದಲಾವಣೆಯಾಗದು. ವಿಶ್ವವೇ ಉದ್ದೇಶವಿಲ್ಲದೆ ಸ್ಪೋಟಗೊಳ್ಳುತ್ತಾ… ಸಂಕುಚಿಸುತ್ತಾ… ಸ್ಪೋಟಗೊಳ್ಳುತ್ತಾ… ಸಾಗುತ್ತಿದೆ. ಹೀಗಿರುವಾಗ ನಮ್ಮ ಹುಟ್ಟಿಗೆ ಇರುವ ಉದ್ದೇಶವಾದರೂ ಏನು?

gandhi1.jpg 19.jpg

ಓಶೋ ರಜನೀಶ್ ಜಗತ್ತು ಕಂಡ ಅತ್ಯಂತ ವಿವಾದಾಸ್ಪದ ವ್ಯಕ್ತಿ. ಮಧ್ಯಪ್ರದೇಶದ ಜೈನ ಕುಟುಂಬವೊಂದರಲ್ಲಿ ಹುಟ್ಟಿದ ರಜನೀಶ್ ಬಾಲ್ಯದಿಂದಲೇ ಸ್ವತಂತ್ರ ಚಿಂತನೆಯೆಡೆಗೆ ಒಲವು ಹೊಂದಿದ್ದ. ತನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ ತನಗೆ ಜ್ಞಾನೋದಯವಾಯಿತು ಎಂದು ಹೇಳಿಕೊಳ್ಳುವ ಈತ ಜಗತ್ತಿನ ಎಲ್ಲಾ ಧರ್ಮಗಳ ಬಗ್ಗೆ ಅತ್ಯಂತ ವಸ್ತುನಿಷ್ಠವಾದ, ಹಿಂದೆ ಯಾರೂ ಹೇಳಿರದಿದ್ದ ಸಂಗತಿಗಳನ್ನು ಹೇಳಿದ. ನಂಬಿಕೆಗಳನ್ನು ಬಿತ್ತುವ, ಆ ಮೂಲಕ ಸ್ವತಂತ್ರ ಚಿಂತನೆಯನ್ನು ನಾಶ ಮಾಡುವ ಎಲ್ಲಾ ವ್ಯವಸ್ಥೆಗಳನ್ನೂ ಖಂಡಿಸಿದ. ಮನುಷ್ಯ ತತ್‌ಕ್ಷಣಕ್ಕೆ ಮಾತ್ರ ಸ್ಪಂದಿಸಬೇಕು. ಯಾವ ಪೂರ್ವಾಗ್ರಹವಿಲ್ಲದೆ, ಭವಿಷ್ಯತ್ತಿನ ಬಗ್ಗೆ ಯೋಜನೆಯಿಲ್ಲದೆ ಈ ಕ್ಷಣದಲ್ಲಿ ಬದುಕಬೇಕು ಎಂದು ಹೇಳಿದ. ಜಗತ್ತಿನ ಯಾವ ವ್ಯಕ್ತಿಯನ್ನೂ, ನಂಬಿಕೆಗಳನ್ನೂ ಬಿಡದೆ ಜಾಲಾಡಿದವ ಈತ. ೧೯೯೦ರಂದು ಹೃದಯಾಘಾತದಿಂದ ನಿಧನನಾದ.

ಇಡೀ ಜಗತ್ತೇ ಮಹಾತ್ಮಾ ಗಾಂಧಿಯನ್ನು ಅಹಿಂಸಾ ಮಾರ್ಗದ ಅನ್ವೇಷಕ ಎಂದು ಕೊಂಡಾಡಿದರೆ ಈತ ಗಾಂಧಿಯನ್ನು ಕುಟಿಲ ರಾಜಕಾರಣಿ ಎಂದು ಕರೆದ. ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ, ಸತ್ಯಾಗ್ರಹವೆಲ್ಲವೂ ಕೇವಲ ರಾಜಕೀಯ ತಂತ್ರಗಳು ಎಂದು ವಾದಿಸಿದ. ಗಾಂಧೀಜಿಯ ಸರಳತೆ ಢೋಂಗಿಯದು ಎಂದು ಜರೆದ. ಅವರ ಆಧ್ಯಾತ್ಮ, ಶಿಸ್ತು, ಬ್ರಹ್ಮಚರ್ಯ, ದೇವರ ಕಲ್ಪನೆ ಎಲ್ಲವನ್ನೂ ಲೇವಡಿ ಮಾಡಿದ.

ನಿಜವಾದ ಚಿನ್ನವನ್ನು ಯಾವ ಒರಗೆ ಹಚ್ಚಿದರೂ ತನ್ನ ಹೊಳಪನ್ನು ಹೆಚ್ಚಿಸಿಕೊಳ್ಳುತ್ತದೆಯೇ ಹೊರತು ಕಳೆಗುಂದುವುದಿಲ್ಲ. ಹೀಗಾಗಿ ಗಾಂಧಿಜಯಂತಿಯನ್ನು ಆಚರಿಸಿರುವ ಈ ತಿಂಗಳಿನಲ್ಲಿ ಓಶೋ ರಜನೀಶ್ ಗಾಂಧಿಯ ಬಗ್ಗೆ ಮಾತಾಡಿರುವ ಬಗ್ಗೆ ಸ್ವಲ್ಪ ತಿಳಿಯೋಣ. ಇದರಲ್ಲಿ ನಮಗೆ ಗಾಂಧೀಜಿಯ ವ್ಯಕ್ತಿತ್ವದ ಬಗ್ಗೆ, ಘನತೆಯ ಬಗ್ಗೆ ಹೊಸತೊಂದು ಆಯಾಮ ಸಿಕ್ಕಬಹುದು. ಯಾರನ್ನೂ ಕಣ್ಣು ಮುಚ್ಚಿ ಒಪ್ಪಬಾರದು ಎಂಬ ಎಚ್ಚರಿಕೆಯಿದ್ದರೆ ನಮ್ಮ ಪ್ರಯತ್ನ ಹೆಚ್ಚು ಪ್ರಯೋಜನಕಾರಿಯಾಗಬಲ್ಲದು.

***

… ನನ್ನ ಪ್ರಕಾರ ಮಹಾತ್ಮ ಗಾಂಧಿ ಒಬ್ಬ ಕಪಟ ರಾಜಕಾರಣಿ. ಅಹಿಂಸೆಯನ್ನು ಅಳವಡಿಸಿಕೊಳ್ಳುವ ಮೂಲಕ ಆತ ಎಷ್ಟೋ ಸಂಗತಿಗಳನ್ನು ತನಗೆ ಹಿತವಾಗುವಂತೆ ನಿರ್ವಹಿಸಿದ. ಎಲ್ಲಾ ಜೈನರು ಆತನ ಅನುಯಾಯಿಗಳಾದರು. ತಾವು ನಂಬಿದ ಅಂಹಿಸೆಯ ತತ್ವವನ್ನು ಬೆಂಬಲಿಸುವ ಒಬ್ಬ ವ್ಯಕ್ತಿಯನ್ನು ಅವರು ಆತನಲ್ಲಿ ಕಂಡಿದ್ದರು. ಗಾಂಧಿ ಜೈನನಾಗಿರಲಿಲ್ಲ. ಆತ ಕೇವಲ ಶೇ ೯ರಷ್ಟು ಜೈನನಾಗಿದ್ದ. ನಾನು ಗಾಂಧಿಯನ್ನು ಹೀಗೆ ವರ್ಣಿಸಲು ಇಚ್ಚಿಸುತ್ತೇನೆ: ಆತ ಹುಟ್ಟಿನಿಂದ ಹಿಂದು ಆದರೆ ಆತ ಕೇವಲ ಶೇ ೧ರಷ್ಟು ಹಿಂದು. ಆತ ಹುಟ್ಟಿದ್ದು ಜೈನರು ಹೆಚ್ಚು ಸಂಖ್ಯೆಯಲ್ಲಿದ್ದ ಗುಜರಾತಿನಲ್ಲಿ ಹೀಗಾಗಿ ಆತ ಶೇ ೯ರಷ್ಟು ಜೈನ. ಉಳಿದ ಶೇ ೯೦ರಷ್ಟು ಆತ ಕ್ರಿಶ್ಚಿಯನ್ ಆಗಿದ್ದ. ಮೂರು ಬಾರಿ ಆತ ಕ್ರೈಸ್ತನಾಗಿ ಮತಾಂತರವಾಗುವ ಹಂತದಲ್ಲಿದ್ದ.
ಅಹಿಂಸೆಯ ಮೂಲಕ ಆತ ಜೈನರ ಬೆಂಬಲ ಪಡೆದ, ಹಿಂಸೆಯ ಅಭ್ಯಾಸವಿಲ್ಲದ ಮೇಲ್ವರ್ಗದ ಹಿಂದುಗಳ ಬೆಂಬಲವೂ ಗಾಂಧಿಗೆ ಸಿಕ್ಕಿತು. ಕ್ರಿಸ್ತ ಪ್ರತಿಪಾದಿಸಿದ ಅಹಿಂಸೆ ಹಾಗೂ ಶಾಂತಿಯ ಬಗ್ಗೆ ಮಾತಾಡಿದ್ದಕ್ಕಾಗಿ ಕ್ರಿಶ್ಚಿಯನ್ ಮಿಶಿನರಿಗಳನ್ನು ಪ್ರಭಾವಿಸುವಲ್ಲಿ ಆತ ಯಶಸ್ವಿಯಾದ. ಇವೆಲ್ಲವಕ್ಕಿಂತಲೂ ಮುಖ್ಯವಾದ ಸಂಗತಿಯೊಂದಿದೆ. ಭಾರತ ಎರಡು ಸಾವಿರ ವರ್ಷಗಳಿಂದ ಒಂದು ಗುಲಾಮ ರಾಷ್ಟ್ರವಾಗಿತ್ತು. ಸ್ವಾತಂತ್ರ್ಯ ಎಂದರೇನು ಎಂಬುದನ್ನೇ ಅದು ಮರೆತುಹೋಗಿತ್ತು. ಈಗಲೂ ಈ ದೇಶ ಸ್ವತಂತ್ರವಾಗಿಲ್ಲ, ಇದರ ಮನಸ್ಸು ಇನ್ನೂ ಗುಲಾಮಗಿರಿಯಲ್ಲೇ ಉಳಿದಿದೆ…

ಭಾರತೀಯರು ಹೋರಾಡಲು ಭಯ ಪಡುತ್ತಾರೆ. ಹಿಂದೆಯೂ ಅವರೆಂದೂ ಹೋರಾಡಿದವರಲ್ಲ. ಸಣ್ಣ ಗುಂಪೊಂದು ಇಡೀ ದೇಶವನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಸಾಧ್ಯವಿತ್ತು. ಈ ದೇಶದ ಯಾಜಮಾನ್ಯ ಒಂದು ಗುಂಪಿನಿಂದ ಮತ್ತೊಂದಕ್ಕೆ ವರ್ಗಾವಣೆಯಾಗುತ್ತಾ ಬಂದಿತೇ ವಿನಾ ಭಾರತ ಗುಲಾಮಗಿರಿಯಿಂದ ಹೊರಬರಲಿಲ್ಲ.
ಎರಡನೆಯದಾಗಿ, ಭಾರತೀಯರು ಹೋರಾಡುವುದಕ್ಕೆ ಸಿದ್ಧರಿಲ್ಲ ಹಾಗೂ ಹೋರಾಟಕ್ಕೆ ಅಗತ್ಯವಾದ ಶಸ್ತ್ರಾಸ್ತ್ರ ಭಾರತೀಯರಲ್ಲಿ ಇಲ್ಲ ಎಂಬುದನ್ನು ಬುದ್ಧಿವಂತ ಗಾಂಧಿ ಅರಿತಿದ್ದ.
ಮೂರನೆಯದಾಗಿ, ಬ್ರಿಟನ್ ವಿಶ್ವದ ಶಕ್ತಿಶಾಲಿ ಸಾಮ್ರಾಜ್ಯ ಎಂಬುದರ ಅರಿವು ಗಾಂಧಿಗಿತ್ತು. ಅವರೊಂದಿಗೆ ಶಸ್ತ್ರ ಸಜ್ಜಿತವಾಗಿ ಸೆಣಸಿ ಗೆಲ್ಲುವುದು ಅಸಾಧ್ಯದ ಮಾತಾಗಿತ್ತು. ಭಾರತೀಯರ ಬಳಿ ಶಸ್ತ್ರಾಸ್ತ್ರಗಳಿರಲಿಲ್ಲ, ಯುದ್ಧ ಪರಿಣಿತಿ ಪಡೆದ ಯೋಧರಿರಲಿಲ್ಲ, ಯುದ್ಧದ ಬಗ್ಗೆ ಏನೂ ತಿಳಿದಿರಲಿಲ್ಲ.

ಈ ಸಂದರ್ಭದಲ್ಲಿ ಅಹಿಂಸೆಯೆಂಬುದು ಗಾಂಧಿ ಬಳಸಿದ ಅತ್ಯಂತ ಯಶಸ್ವಿ ರಾಜಕೀಯ ತಂತ್ರಗಾರಿಕೆಯಾಗಿತ್ತು…
ಹೀಗಾಗಿ ಗಾಂಧೀಜಿಯ ಅಹಿಂಸೆ ಆಧ್ಯಾತ್ಮಿಕ ತತ್ವವಲ್ಲ. ಇದು ಅನೇಕ ತಥ್ಯಗಳಿಂದ ಸಾಬೀತೂ ಆಗಿದೆ. ‘ಭಾರತ ಸ್ವತಂತ್ರವಾದ ತಕ್ಷಣ ಸೈನ್ಯವನ್ನು ವಿಸರ್ಜಿಸಲಾಗುವುದು, ಶಸ್ತ್ರಾಸ್ತ್ರಗಳನ್ನೆಲ್ಲಾ ಸಮುದ್ರಕ್ಕೆ ಎಸೆಯಲಾಗುವುದು’ ಎಂದು ಗಾಂಧಿ ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಮಾಣ ಮಾಡಿದ್ದರು. ‘ನೀವು ಹೀಗೆ ಮಾಡಿದರೆ ಬೇರೆಯವರು ಆಕ್ರಮಣ ಮಾಡುತ್ತಾರೆ. ಆಗ ಏನು ಮಾಡುವಿರಿ?’ ಎಂದು ಕೇಳಿದಾಗ, “ನಾವು ಅವರನ್ನು ನಮ್ಮ ಅತಿಥಿಗಳೆಂದು ಭಾವಿಸಿ ನಮ್ಮ ದೇಶಕ್ಕೆ ಸ್ವಾಗತಿಸುತ್ತೇವೆ. ‘ನಾವು ಇಲ್ಲಿ ವಾಸವಿದ್ದೇವೆ, ನೀವೂ ನಮ್ಮ ಜೊತೆ ವಾಸಿಸಬಹುದು’ ಎಂದು ಅವರಿಗೆ ಹೇಳುತ್ತೇವೆ” ಎಂದಿದ್ದರು.

ಸ್ವಾತಂತ್ರ್ಯ ಬಂದ ನಂತರ ಇದೆಲ್ಲವೂ ಮರೆತುಹೋಯ್ತು. ಸೈನ್ಯವನ್ನು ವಿಸರ್ಜಿಸಲಿಲ್ಲ, ಶಸ್ತ್ರಾಸ್ತ್ರಗಳನ್ನು ಸಮುದ್ರಕ್ಕೆ ಎಸೆಯಲೂ ಇಲ್ಲ. ವಿಪರ್ಯಾಸವೆಂದರೆ ಸ್ವತಃ ಗಾಂಧಿಯೇ ಪಾಕಿಸ್ತಾನದ ಮೇಲಿನ ಮೊದಲ ಯುದ್ಧವನ್ನು ಆಶೀರ್ವದಿಸಿದ್ದರು. ಭಾರತೀಯ ವಾಯು ಸೇನೆಯ ಮೂರು ಯುದ್ಧ ವಿಮಾನಗಳು ಅವರ ಆಶೀರ್ವಾದ ಪಡೆಯಲು ಧಾವಿಸಿದ್ದವು. ಗಾಂಧೀಜಿ ತಮ್ಮ ಮನೆಯಿಂದ ಹೊರಬಂದು ವಿಮಾನಗಳನ್ನು ಹರಸಿದ್ದರು. ತನ್ನ ಬದುಕಿಡೀ ಮಾತಾಡಿದ ಅಹಿಂಸೆಯನ್ನು ಆತ ಸಂಪೂರ್ಣವಾಗಿ ಮರೆತಿದ್ದ…

***

ಹಿಂದೂ ಮುಸ್ಲೀಮರು ಬೇರೆಯಲ್ಲ. ಇಬ್ಬರೂ ಒಂದೇ, ಇಬ್ಬರ ನಡುವೆ ವ್ಯತ್ಯಾಸವಿಲ್ಲ ಎಂಬ ಗಾಂಧಿಯ ಹಾಡು ಶುದ್ಧ ಸುಳ್ಳು ಎಂಬುದು ಸಾಬೀತಾಗಿದೆ. ಇದಕ್ಕೆ ಗಾಂಧಿಯ ಮಗ ಹರಿದಾಸ್‌ನ ಉದಾಹರಣೆ ಸಾಕು. ಆತ ಹುಟ್ಟಿನಿಂದಲೇ ಬಂಡಾಯಗಾರನಾಗಿದ್ದ. ಆತನನ್ನು ನಾನು ತುಂಬಾ ಇಷ್ಟ ಪಡುತ್ತೇನೆ, ತನ್ನ ತಂದೆಗಿಂತ ಆತ ಎಷ್ಟೋ ಮೇಲು.
ಹರಿದಾಸ್ ಶಾಲೆಗೆ ಹೋಗಬಯಸಿದ್ದ. ಆದರೆ ಗಾಂಧಿ ಆತನಿಗೆ ಅನುಮತಿ ಕೊಡಲಿಲ್ಲ. ಶಾಲೆಯ ಶಿಕ್ಷಣ ಜನರನ್ನು ಕಲುಷಿತಗೊಳಿಸುತ್ತದೆ ಎಂಬುದು ಗಾಂಧಿಯ ನಂಬಿಕೆಯಾಗಿತ್ತು. ಹೀಗಾಗಿ ತನ್ನ ಮಕ್ಕಳಿಗೆ ಶಾಲೆಯ ಶಿಕ್ಷಣ ಬೇಡ ಎಂಬುದು ಆತನ ನಿಲುವಾಗಿತ್ತು. ತನ್ನ ಮಕ್ಕಳು ಧಾರ್ಮಿಕ ಗ್ರಂಥಗಳನ್ನು ಓದಲು ಶಕ್ಯವಾಗುವಂತೆ ತಾನೇ ಅವರಿಗೆ ಬೋಧಿಸುತ್ತೇನೆ ಎಂದು ಗಾಂಧಿ ಹೇಳುತ್ತಿದ್ದ. ಆದರೆ ಹರಿದಾಸ್ ಹಠಮಾರಿಯಾಗಿದ್ದ. ತನ್ನ ಓರಗೆಯ ಹುಡುಗರು ಕಲಿಯುವುದನ್ನು ತಾನೂ ಕಲಿಯಬೇಕು ಎಂದು ಹಠಹಿಡಿದಿದ್ದ. ‘ಒಂದು ವೇಳೆ ನೀನು ಶಾಲೆಗೆ ಹೋದರೆ ನನ್ನ ಮನೆಯಲ್ಲಿ ನಿನಗೆ ಸ್ಥಾನವಿಲ್ಲ’ ಎಂದು ಗಾಂಧಿ ಬೆದರಿಕೆ ಹಾಕಿದ.

ಅಹಿಂಸಾತ್ಮಕ ವ್ಯಕ್ತಿಯ ವರ್ತನೆ ಹೀಗಿರುತ್ತದೆ ಎಂದು ನಿಮಗನ್ನಿಸುತ್ತದೆಯೇ, ಅದರಲ್ಲೂ ಅಬೋಧನಾದ ತನ್ನ ಮಗನ ಬಗೆಗೆ? ಆತನ ಬೇಡಿಕೆಯೇನು ಅಪರಾಧವಾಗಿರಲಿಲ್ಲ. ತಾನು ವೇಶ್ಯೆಯ ಬಳಿಗೆ ಹೋಗಬೇಕು ಎಂದೇನು ಆತ ಕೇಳಿರಲಿಲ್ಲ. ತಾನು ಶಾಲೆಗೆ ಹೋಗಬೇಕು ಹಾಗೂ ಉಳಿದೆಲ್ಲಾ ಹುಡುಗರ ಹಾಗೆ ಕಲಿಯಬೇಕು ಎಂಬುದಷ್ಟೇ ಆತನ ಬೇಡಿಕೆಯಾಗಿತ್ತು. ಹರಿದಾಸನ ವಾದ ಸರಿಯಾಗಿತ್ತು. ಆತ ಹೇಳಿದ, “ನೀವೂ ಶಾಲೆಯ ಶಿಕ್ಷಣವನ್ನು ಪಡೆದಿದ್ದೀರಿ ಆದರೆ ಕಲುಷಿತಗೊಂಡಿಲ್ಲ. ಹೀಗಿರುವಾಗ ನಿಮಗೆ ಭಯ ಏಕೆ? ನಾನು ನಿಮ್ಮ ಮಗ. ನೀವು ಪಾಶ್ಚಾತ್ಯ ಶಿಕ್ಷಣ ಪಡೆಯಬಹುದಾದರೆ, ಬ್ಯಾರಿಸ್ಟರ್ ಪದವಿಯನ್ನು ಪಡೆಯಬಹುದಾದರೆ ನಾನೇಕೆ ಪಡೆಯಕೂಡದು? ನಿಮಗೇಕೆ ಇಷ್ಟು ಅಪನಂಬಿಕೆ?”

ಗಾಂಧಿ ಹೇಳಿದರು, “ನನ್ನ ಕೊನೆಯ ಮಾತನ್ನು ನಾನು ಹೇಳಿದ್ದೇನೆ. ನನ್ನ ಜೊತೆ ಈ ಮನೆಯಲ್ಲಿ ಇರಬೇಕೆಂದರೆ ಶಾಲೆಗೆ ಹೋಗಕೂಡದು. ಒಂದು ವೇಳೆ ಶಾಲೆಗೆ ಹೋಗಬೇಕೆಂಬುದೇ ನಿನ್ನ ನಿರ್ಧಾರವಾದರೆ ಈ ಮನೆಯಲ್ಲಿ ನಿನಗೆ ಜಾಗವಿಲ್ಲ.”

ಆ ಹುಡುಗ ನನಗೆ ಇಷ್ಟವಾಗುತ್ತಾನೆ. ಆತ ಮನೆಯನ್ನು ಬಿಡಲು ನಿರ್ಧರಿಸುತ್ತಾನೆ. ತಂದೆಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಬೇಡುತ್ತಾನೆ. ಗಾಂಧಿ ಆಶಿರ್ವಾದ ನೀಡಲು ಅಶಕ್ತರಾಗಿರುತ್ತಾರೆ.

ನನಗೆ ಗಾಂಧಿಯ ವರ್ತನೆಯಲ್ಲಿ ಅಹಿಂಸೆಯಾಗಲೀ, ಪ್ರೀತಿಯಾಗಲೀ ಕಾಣುವುದಿಲ್ಲ. ಇಂಥ ಸಣ್ಣ ಸಣ್ಣ ಘಟನೆಗಳಲ್ಲಿ ನೀವು ನಿಜವಾದ ಮನುಷ್ಯನನ್ನು ಕಾಣಲು ಸಾಧ್ಯವೇ ಹೊರತು ಭಾಷಣಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಅಲ್ಲ.

ಮನೆ ತೊರೆದ ಹರಿದಾಸ ತನ್ನ ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡು ಶಾಲೆಗೆ ಹೋಗುತ್ತಾನೆ. ಎಷ್ಟೋ ವೇಳೆ ತನ್ನ ತಾಯಿಯನ್ನು ನೋಡುವುದಕ್ಕೆ ಪ್ರಯತ್ನಿಸಿ ಮನೆಗೆ ಹೋಗುತ್ತಾನೆ ಆದರೆ ಅವನಿಗೆ ಆಕೆಯನ್ನು ನೋಡಲಾಗುವುದಿಲ್ಲ. ಆತ ಪದವಿಯನ್ನು ಪಡೆದ ನಂತರ ಗಾಂಧಿ ಹಿಂದೂ ಮುಸ್ಲಿಂ ಐಕ್ಯತೆಯ ಬಗ್ಗೆ ಎಷ್ಟು ಸತ್ಯ ನಿಷ್ಠರಾಗಿದ್ದಾರೆ ಎಂದು ಪರೀಕ್ಷಿಸಲು ಮಹಮ್ಮದೀಯನಾಗುತ್ತಾನೆ. ಆತ ನಿಜಕ್ಕೂ ವರ್ಣರಂಜಿತ ವ್ಯಕ್ತಿತ್ವದವನು.

ಆತ ಮಹಮ್ಮದೀಯನಾದ ನಂತರ ‘ಹರಿದಾಸ’ ಎಂಬ ಅರ್ಥವನ್ನೇ ಕೊಡುವ ಅರೇಬಿಕ್ ಹೆಸರನ್ನು ಇಟ್ಟುಕೊಳ್ಳುತ್ತಾನೆ. ಅಬ್ದ್ ಎಂದರೆ ಅರೇಬಿಕ್ ಭಾಷೆಯಲ್ಲಿ ದೇವರು. ಅಬ್ದುಲ್ಲಾ ಎಂದರೆ ದೇವರ ಸೇವಕ. ಹೀಗೆ ಹರಿದಾಸ್ ಗಾಂಧಿ ಅಬ್ದುಲ್ಲಾ ಗಾಂಧಿಯಾಗುತ್ತಾನೆ.

ಈ ಸಂಗತಿಯನ್ನು ತಿಳಿದ ಗಾಂಧಿ ತೀವ್ರವಾದ ಆಘಾತಕ್ಕೊಳಗಾಗುತ್ತಾರೆ. ಕುಪಿತರಾಗುತ್ತಾರೆ. ಕಸ್ತೂರ ಬಾ, “ಏಕಿಷ್ಟು ಕೋಪಗೊಳ್ಳುತ್ತೀರಿ? ಪ್ರತಿ ಮುಂಜಾವು, ಪ್ರತಿ ಸಾಯಂಕಾಲಗಳಲ್ಲಿ ನೀವು ಹಿಂದೂ ಮುಸಲ್ಮಾನರು ಇಬ್ಬರೂ ಒಂದೇ ಎಂದು ಹೇಳುತ್ತೀರಿ. ನೀವು ಹೇಳಿದ್ದನ್ನೇ ಆತ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿರಬಹುದು. ‘ಹಿಂದೂ ಮುಸಲ್ಮಾನರಿಬ್ಬರೂ ಒಂದೇ ಎನ್ನುವುದಾದರೆ, ಇಷ್ಟು ದಿನ ಹಿಂದೂ ಆಗಿ ಬಾಳಿದ್ದೇನೆ. ಇನ್ನು ಮುಂದೆ ಮುಸಲ್ಮಾನನಾಗಿ ಬದುಕಿ ನೋಡೋಣ’ ಎಂದು ತೀರ್ಮಾನಿಸಿರಬಹುದು” ಎನ್ನುತ್ತಾರೆ ನಗುತ್ತಾ.

ಗಾಂಧೀಜಿ ವ್ಯಗ್ರರಾಗಿ, “ಇದು ನಗುವಂತಹ ಸಂಗತಿಯಲ್ಲ. ಈ ಕ್ಷಣದಿಂದ ಆತನಿಗೆ ನನ್ನ ಆಸ್ತಿಯ ಮೇಲೆ ಯಾವ ಒಡೆತನವೂ ಇಲ್ಲ. ಆತ ನನ್ನ ಮಗನೇ ಅಲ್ಲ. ಇನ್ನೆಂದೂ ಆತನನ್ನು ನಾನು ನೋಡಲು ಇಚ್ಚಿಸುವುದಿಲ್ಲ.” ಎನ್ನುತ್ತಾರೆ. ಭಾರತದಲ್ಲಿ ಒಬ್ಬ ವ್ಯಕ್ತಿ ಸತ್ತಾಗ ಆತನ ಚಿತೆಗೆ ಬೆಂಕಿ ಕೊಡುವ ಕರ್ತವ್ಯ ಆ ವ್ಯಕ್ತಿಯ ಹಿರಿಯ ಮಗನದ್ದು. ಗಾಂಧೀಜಿ ತಮ್ಮ ವಿಲ್‌ನಲ್ಲಿ ಹೀಗೆ ಬರೆಸುತ್ತಾರೆ: “ಹರಿದಾಸ ನನ್ನ ಮಗನಲ್ಲ. ನಾನು ಸತ್ತ ನಂತರ ಆತ ನನ್ನ ಚಿತೆಗೆ ಬೆಂಕಿ ಇಡಬಾರದು ಎಂಬುದು ನನ್ನ ಇಚ್ಛೆ.”

ಎಂಥಾ ಕೋಪ! ಎಂಥಾ ಹಿಂಸೆ!

ಹರಿದಾಸನನ್ನು ನಾನು ವೈಯಕ್ತಿಕವಾಗಿ ಬಲ್ಲೆ. ಆತ ಹೇಳಿದ, “ನನ್ನ ತಂದೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವುದಕ್ಕಾಗಿಯೇ ನಾನು ಮಹಮ್ಮದೀಯನಾದದ್ದು. ನಾನು ಎಣಿಸಿದಂತೆಯೇ ಅವರು ವರ್ತಿಸಿದರು. ಅವರು ಹೇಳಿದ ಧರ್ಮಗಳ ಸಮಾನತೆ – ಹಿಂದು, ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ ಧರ್ಮಗಳೆಲ್ಲಾ ಸಮಾನ- ಎಂಬುದು ಅರ್ಥಹೀನ. ಇದೆಲ್ಲ ಕೇವಲ ರಾಜಕೀಯ. ಅದನ್ನೇ ನಾನು ಸಾಬೀತು ಪಡಿಸಬೇಕಿತ್ತು, ಸಾಬೀತು ಪಡಿಸಿದೆ.”

ಇವತ್ತಿನ ಪರಿಸ್ಥಿತಿಯಲ್ಲಿ ಕೋಮುವಾದ, ಮತೀಯವಾದ, ಭಯೋತ್ಪಾದನೆಯ ಬಗ್ಗೆ ಮಾತಾಡುವುದು ಅಷ್ಟು ಸುಲಭವಲ್ಲ. ಯಾವ ಸಂದರ್ಭದಲ್ಲಿ, ಯಾರ ಎದುರು ನಾವು ಮಾತಾಡುತ್ತೇವೆ ಎಂಬುದರಿಂದ ಹಿಡಿದು ಯಾವ ಸ್ಥಾನದಿಂದ ನಾವು ಮಾತಾಡುತ್ತೇವೆ ಎಂಬುದೂ ಮುಖ್ಯವಾಗುತ್ತದೆ. ಇಬ್ಬರು ಹಿಂದೂಗಳು ಮಾತಾಡುವಾಗ ಭಯೋತ್ಪಾದನೆ ಹಾಗೂ ಇಸ್ಲಾಮಿನ ನಂಟಿನ ಬಗ್ಗೆ ಉಡಾಫೆಯಿಂದ ಮಾತಾಡಿಬಿಡಬಹುದು. ಆದರೆ ಅದೇ ಗೆಳೆಯರ ಗುಂಪಿನ ಮುಸ್ಲೀಂ ಯುವಕನೊಬ್ಬ ಬಂದ ತಕ್ಷಣ ಮಾತಿನ ವರಸೆ ಬದಲಾಯಿಸಿಬಿಡಬೇಕಾಗುತ್ತದೆ. ಪತ್ರಿಕೆಯ ಸಂಪಾದಕನಾದವನು, ಧಾರ್ಮಿಕ ಮುಖಂಡನಾದವನು, ಸಾಹಿತಿಯಾದವನು, ರಾಜಕಾರಣಿಯಾದವನು ತನ್ನ ಮಾತಿನ ಮೇಲೆ, ಅದು ಧ್ವನಿಸುವ ಅರ್ಥದ ಮೇಲೆ ಸದಾ ಗಮನವಿಟ್ಟುಕೊಂಡಿರಬೇಕಾಗುತ್ತದೆ. ಎಡ ಅಥವಾ ಬಲ ಪಂಥೀಯತೆಯ ಹಣೆ ಪಟ್ಟಿ ಹತ್ತಿಸಿಕೊಳ್ಳದೆ ಏನನ್ನೂ ಮಾತಾಡಲು ಸಾಧ್ಯವೇ ಆಗದು. ಏನು ಮಾತಾಡಿದರೂ ಲೇಬಲಿಂಗ್ ನಡೆದೇ ನಡೆಯುತ್ತದೆ. ಹಾಗಂತ ಮಾತಾಡದೆ ಸುಮ್ಮನೆ ಉಳಿಯುವುದು ಪ್ರಜ್ಞಾವಂತರ ಲಕ್ಷಣವಲ್ಲ. ಮಾತಾಡಿಯೇ ಆಡುತ್ತೇವೆ. ಅದರಿಂದ ಅಂಟಿಕೊಳ್ಳುವ ಹಣೆಪಟ್ಟಿಯನ್ನು ಉಳಿಸಿಕೊಳ್ಳಲು ಇಲ್ಲವೇ ಅದರಿಂದ ಪಾರಾಗಲೂ ಮತ್ತೆ ಏನನ್ನಾದರೂ ಮಾತಾಡುತ್ತೇವೆ. ಹೊಸ ಹಣೆಪಟ್ಟಿಯನ್ನು ಅಂಟಿಸಿಕೊಳ್ಳುತ್ತೇವೆ. ಹಣೆಪಟ್ಟಿಗಳ ಚಕ್ರವ್ಯೂಹದಲ್ಲಿ ಕಳೇದುಹೋಗಿಬಿಡುತ್ತೇವೆ. ಹೀಗಾಗಿಯೇ ಹೊಸ ಚಿಂತನೆಯು ಹುಟ್ಟುವುದಿಲ್ಲ. ಅಪ್ಪಟ ಪ್ರಾಮಾಣಿಕವಾದ, ಮಾನವೀಯತೆಯ ನಿಲುವುಗಳು ಹೊರಬರುವುದಿಲ್ಲ. ಯಾವ ಸಮಸ್ಯೆಗೂ ಪರಿಹಾರಗಳು ಹೊಳೆಯುವುದಿಲ್ಲ. ಚರ್ಚೆಗಳು ನಮ್ಮನ್ನು ಬೆಳೆಸದೆ, ನಮ್ಮನ್ನು ಒಂದುಗೂಡಿಸದೆ ಹೋಗುತ್ತವೆ.

police.png

ಇತ್ತೀಚಿನ ಎರಡು ವಿದ್ಯಮಾನಗಳನ್ನೇ ಗಮನಿಸಿ. ದೇಶದಾದ್ಯಂತ ಅಸಂಖ್ಯಾತ ಬಾಂಬ್ ಸ್ಪೋಟಗಳು (ಇತ್ತೀಚಿನ ಪತ್ರಿಕಗಳಲ್ಲಿ ವರದಿಯಾಗುತ್ತಿರುವ ಆತಂಕಕಾರಿ ಅಂಶವೆಂದರೆ ಭಯೋತ್ಪಾದಕ ಕೃತ್ಯಗಳ ಹಿಂದೆ ಕೆಲವು ಹಿಂದೂಗಳ ಕೈವಾಡವೂ ಇದೆ. ಮಲೆಗಾಂವ್‌ನಲ್ಲಿ ನಡೆದ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದ ಹಾಗೆ ಸಾಧ್ವಿ ಪ್ರಜ್ಞಾ, ಶ್ರೀಕಾಂತ್ ಪುರೋಹಿತ್ ಎಂಬ ಸೈನ್ಯಾಧಿಕಾರಿ ಹಾಗೂ ಪಾಂಡೆ ಎಂಬ ಧರ್ಮ ಗುರುವನ್ನು ಬಂಧಿಸಲಾಗಿದೆ) ನಡೆಯುತ್ತಿವೆ. ಇವ್ಯಾವೂ ಆಕಸ್ಮಿಕಗಳಲ್ಲ. ಇಂತಹ ಕೃತ್ಯ ನಡೆಸುವುದಕ್ಕೆ ದೊಡ್ಡ ಮಟ್ಟದ ಸಂಘಟನೆ ಹಾಗೂ ಯೋಜನೆ ಬೇಕು. ಆ ಸಂಘಟನೆಗೆ ಒಂದು ಐಡಿಯಾಲಜಿ ಅದನ್ನು ಆರ್ಥಿಕವಾಗಿ, ಭಾವುಕವಾಗಿ ಬೆಂಬಲಿಸುವ ವರ್ಗ ಬೇಕೇ ಬೇಕು. ಅದ್ಯಾವುದೂ ಇಲ್ಲದೆ ಇಷ್ಟು ವ್ಯಾಪಕವಾಗಿ ಬಾಂಬ್ ಸ್ಪೋಟಗಳು ನಡೆಯಲು, ಮುಗ್ಧರ ಜೀವ ಹೋಗಲು ಸಾಧ್ಯವೇ ಇಲ್ಲ. ಆದರೆ ಭಯೋತ್ಪಾದನೆಯ ಬಗ್ಗೆ ಮಾತನಾಡುವಾಗ ನಮಗೆ ಎದುರಾಗುವ ಪರಿಸ್ಥಿತಿಯಾದರೂ ಎಂಥದ್ದು? ರಾಜಕಾರಣಿಗಳನ್ನು ಬಿಟ್ಟು ಬಿಡಿ, ಇಂದು ಬಿಜೆಪಿಯಲ್ಲಿರುವ ವ್ಯಕ್ತಿ ಭಯೋತ್ಪಾದನೆಗೆ ಮುಸ್ಲೀಂ ಮೂಲಭೂತವಾದವೇ ಕಾರಣ ಎಂದು ಹೇಳಿದರೆ ಮರುದಿನ ಕಾಂಗ್ರೆಸ್ಸಿಗೆ ಹಾರಿ ಇದು ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರಲ್ಲಿ ಕಹಿಯನ್ನು ಬಿತ್ತಲು ಪಟ್ಟ ಭದ್ರ ಹಿತಾಸಕ್ತಿಗಳು ನಡೆಸುತ್ತಿರುವ ಕೃತ್ಯ ಎಂದು ಮಾತನಾಡುತ್ತಾನೆ. ಅಸಲಿಗೆ ರಾಜಕಾರಣಿಗೆ ಭಯೋತ್ಪಾದನೆಯ ಬಗ್ಗೆ ಮಾತಾಡಲಿಕ್ಕೆ ಅರ್ಹತೆ ಏನಿದೆ? ಭಯೋತ್ಪಾದನೆಯನ್ನು ಭದ್ರತೆಯ ಸಮಸ್ಯೆಯಾಗಿ ಪರಿಶೀಲಿಸಲು ಆತನೇನು ಪೊಲೀಸ್ ಅಧಿಕಾರಿಯಲ್ಲ. ಅದನ್ನೊಂದು ವೈಚಾರಿಕ ಭಿನ್ನಮತೀಯತೆಯಾಗಿಯೋ, ಚಳುವಳಿಯ ಇಲ್ಲವೇ ಪ್ರತಿಕ್ರಿಯೆಯ ಪ್ರಕ್ರಿಯೆಯಾಗಿ ಪರಿಶೀಲಿಸಿ ಮಾತಾಡಲು ಆತ ಸಮಾಜ ವಿಜ್ಞಾನಿಯೂ ಅಲ್ಲ. ಆತ ಕೇವಲ ತನ್ನ ಹಿತಾಸಕ್ತಿಗೆ ಪೂರಕವಾಗುವ ನೆಲೆಯಿಂದ ಮಾತಾಡಬಲ್ಲ. ಆದರೆ ನಮ್ಮ ಮಾಧ್ಯಮಗಳ ಬಹುಪಾಲು ಸ್ಪೇಸ್‌ನ್ನು ಆಕ್ರಮಿಸಿಕೊಳ್ಳುವವರು ಇವರೇ. ನಮಗೆ ಗುಪ್ತಚರ ಇಲಾಖೆಯ ಅಧಿಕಾರಿಯ ಅಭಿಪ್ರಾಯಗಳು ತಿಳಿಯುವುದಿಲ್ಲ, ಸಮಾಜ ತಜ್ಞರ ತರ್ಕದ ಬಗ್ಗೆ ಯಾವ ಪತ್ರಿಕೆಗಳೂ ತಿಳಿಸುವುದಿಲ್ಲ. ಹೀಗಾಗಿ ಭಯೋತ್ಪಾದನೆಯಾಗಲೀ, ಚರ್ಚ್ ಮೇಲಿನ ದಾಳಿಯನ್ನಾಗಲೀ ಕೇವಲ ಲಾ ಅಂಡ್ ಆರ್ಡರ್ ಸಮಸ್ಯೆಯೆಂದು ಪರಿಗಣಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಪೊಲೀಸರಿಗೆ ತಮ್ಮ ಕೆಲಸವನ್ನು ತಾವು ಮಾಡಲು ಬಿಡದೆ ಎಲ್ಲರೂ ಮಾತಾಡಲು ಶುರುಮಾಡುತ್ತೇವೆ. ರಾಜಕಾರಣಿಗಳು ಒಂದು ರೀತಿಯಲ್ಲಿ ಚರ್ಚೆಯನ್ನು ಕ್ಲಿಷ್ಟಗೊಳಿಸಿದರೆ, ನಮ್ಮ ಸಂಸ್ಕೃತಿ ಚಿಂತಕರು, ಸಾಹಿತಿಗಳು ರಂಗ ಪ್ರವೇಶ ಮಾಡಿ ಮತ್ತಷ್ಟು ಗೊಂದಲ ಹುಟ್ಟಿಸುತ್ತಾರೆ.

ಬಾಂಬ್ ಸ್ಪೋಟವನ್ನು ಒಂದು ದೇಶದ ಭದ್ರತೆಯ ಸಮಸ್ಯೆಯಾಗಿ ಪರಿಗಣಿಸಿದರೆ ಸಮಸ್ಯೆ ಎಷ್ಟೋ ಪರಿಹಾರವಾದಂತಾಗಿಬಿಡುತ್ತದೆಯಲ್ಲವೇ? ಬಾಂಬ್ ಸ್ಪೂಟವನ್ನು ಒಂದು ಕೋಮಿನೊಂದಿಗೆ ಗುರುತಿಸಿದಾಗ, ಪೊಲೀಸರ ಕಗ್ಗೊಲೆಯನ್ನು, ಭೂ ಮಾಲೀಕರ ಕೊಲೆಯನ್ನು ಒಂದು ಐಡಿಯಾಲಜಿಯೊಂದಿಗೆ ಗುರುತಿಸಿದಾಗ ಅನವಶ್ಯಕವಾದ ಗೊಂದಲ ಹುಟ್ಟಿಕೊಳ್ಳುತ್ತದೆ. ಭಯೋತ್ಪಾದನೆಯ ನಿಯಂತ್ರಣದ ಕೆಲಸವನ್ನು ಪೊಲೀಸರಿಗೆ ಒಪ್ಪಿಸಿ ಆ ಇಲಾಖೆ ತನ್ನ ಗರಿಷ್ಠ ಸಾಮರ್ಥ್ಯವನ್ನು ಬಳಸಿ ಅದನ್ನು ಮಾಡಲು ಬಿಟ್ಟು ರಾಜಕಾರಣಿಗಳು ತಣ್ಣಗೆ ಏಕಿರಬಾರದು? ನಮ್ಮ ಸಂಸ್ಕೃತಿ ಚಿಂತಕರು ಸಾಹಿತಿಗಳು ಚರ್ಚ್ ಮೇಲೆ ನಡೆದ ದಾಳಿ, ಮಕ್ಕಳು- ಮರಿಯನ್ನದೆ ಅಮಾಯಕರ ಜೀವ ತೆಗೆದು, ನನ್‌ಗಳ ಮಾನಹರಣ ಮಾಡಿ ಬೆತ್ತಲಾಗಿ ಪರೇಡ್ ನಡೆಸಿದ್ದನ್ನೆಲ್ಲಾ ಲಾ ಅಂಡ್ ಆರ್ಡರ್ ಸಮಸ್ಯೆ ಎಂದು ಬಗೆದು ಅದನ್ನು ಬದಿಗಿಟ್ಟು ಮತಾಂತರದ ಕೆಡುಕು ಹಾಗೂ ಕ್ರಿಶ್ಚಿಯಾನಿಟಿಯ ಆಕ್ರಮಣಕಾರಿ ಸ್ವಭಾವದ ಬಗ್ಗೆ ಚರ್ಚೆ ನಡೆಸಲು ಏನು ಧಾಡಿ? ಒಂದು ಐಡಿಯಾಲಜಿ ಎಷ್ಟೇ ಉದಾತ್ತವಾಗಿರಬಹುದು ಹಾಗಂತ ಅದರಿಂದುಂಟಾಗುವ ಹಿಂಸೆ, ಪ್ರಾಣನಾಶ, ಆಸ್ಥಿ ನಾಶವನ್ನೆಲ್ಲಾ ಸಮರ್ಥಿಸಿಕೊಳ್ಳುವುದು ತಪ್ಪು. ಪೊಲೀಸರು ಅಮಾಯಕ ಮುಸಲ್ಮಾನರನ್ನು ಬಂಧಿಸಿ ಹಿಂಸಿಸುತ್ತಿದ್ದಾರೆ ಎಂದು ಆರೋಪಿಸುವ ಮಾನವ ಹಕ್ಕು ರಕ್ಷಣೆಯ ಯೋಧರಿಗೂ, ಕ್ರೈಸ್ತರ ಮೇಲಿನ ದಾಳಿಗೆ ಹಿಂದೂ ದೇವತೆಗಳ, ಹಿಂದೂ ಧರ್ಮದ ಅವಹೇಳನದಿಂದ ಹುಟ್ಟಿದ ಆವೇಶವೇ ಕಾರಣ ಎನ್ನುವ ಹಿಂದೂ ಧರ್ಮ ರಕ್ಷಣೆಯ ಸೈನಿಕರಿಗೂ ಇದು ಅರ್ಥವಾಗಬೇಕು. ಬಜರಂಗ ದಳದ ಕಾರ್ಯಕರ್ತನಿಗಾಗಲೀ, ಸಿಮಿಯ ಸದಸ್ಯನಿಗಾಗಲಿ ತನ್ನ ತತ್ವ ಪ್ರತಿಪಾದಿಸಲು ತಾನು ನಂಬಿದ್ದು ಶ್ರೇಷ್ಠ ಎಂದು ವಾದಿಸಲು ಹಕ್ಕು ಇದೆಯಾದರೂ ಪ್ರಾಣ ಹಾನಿ, ಗದ್ದಲ ಮಾಡಿದರೆ ಅದನ್ನು ಒಂದು ಭದ್ರತೆಯ ಸವಾಲಿನ ಹಾಗೆ ಕಾಣಬೇಕು. ಕಲ್ಲು ತೂರಿದವ ಯಾರು ಎಂದು ನೋಡಿ ಲಾಠಿ ಬೀಸುವ ಅನಿವಾರ್ಯತೆ ಪೊಲೀಸರಿಗಿರಬಾರದು. ಏಕೆಂದರೆ ತೂರಿದ ಕಲ್ಲಿಗೆ ಯಾವ ಪಂಥೀಯತೆಯೂ, ಯಾವ ವೈಚಾರಿಕತೆಯೂ, ಯಾವ ಧಾರ್ಮಿಕತೆಯೂ ಇರದು. ಅದನ್ನು ಎದುರಿಸುವ ಪೊಲೀಸರ ಬ್ಯಾರಿಕೇಡಿಗೂ ಅದಿರಬಾರದು.
ಏನಂತೀರಿ?

ಸುಪ್ರೀತ್.ಕೆ.ಎಸ್

(ಹಿಂದಿನ ಸಂಚಿಕೆಯಿಂದ)

ನೀನು ನನ್ನ ಬದುಕಿನಲ್ಲಿ ಬಂದ ಮೇಲೆ ನಾನು ಅದೆಷ್ಟು ಬದಲಾಗಿ ಹೋಗಿದ್ದೆನಲ್ಲವಾ? ನಿನ್ನ ಪರಿಚಯ, ಸಾಹಚರ್ಯದಿಂದಾಗಿ ನನ್ನಲ್ಲಿ ಹೊಸತೊಂದು ಹುಮ್ಮಸ್ಸು ಹುಟ್ಟಿಕೊಂಡಿತ್ತು.  ನಿನ್ನೊಂದಿಗೆ ಪ್ರತಿದಿನ ಒಂದಷ್ಟು ಸಮಯ ಕಳೆದರೆ ವಿಲಕ್ಷಣವಾದ ಧೈರ್ಯ ಬರುತ್ತಿತ್ತು. ನೀನು ನನ್ನ ಬೆರಳುಗಳ ನಡುವೆ ನುಲಿಯುತ್ತಿರುವಾಗ ನಾನು ಇಡೀ ಜಗತ್ತನ್ನೇ ಜಯಿಸುವ ಕನಸನ್ನು ಕಾಣುತ್ತಿದ್ದೆ. ಸುತ್ತಲಿನ ಜಗತ್ತೂ ಕೊಂಚ ಬದಲಾದ ಹಾಗೆ ಅನ್ನಿಸುತ್ತಿತ್ತು. ಅದುವರೆಗೂ ಕಣ್ಣೆತ್ತಿಯೂ ನೋಡದವರೆಲ್ಲಾ ನಾನು ನಿನ್ನೊಂದಿಗಿರುವಾಗ ನಮ್ಮಿಬ್ಬರನ್ನು ದುರುದುರನೆ ನೋಡಿ ಮುಂದೆ ಹೋಗುತ್ತಿದ್ದರು. ಕೆಲವರ ಕಣ್ಣಲ್ಲಿ ನಾನು ನೀನು ಆದರ್ಶ

ಪ್ರೇಮಿಗಳಾಗಿದ್ದೆವು. ನಾನು ಒಬ್ಬನೇ ತಿರುಗಾಡುವಾಗ ಎದುರಲ್ಲಿ ಕಂಡ ಕೆಲವು ಹುಡುಗರ ಕಣ್ಣಲ್ಲಿನ ಭಯ, ಭಕ್ತಿ, ಗೌರವ ಬೆರೆತ ಭಾವವನ್ನು ಗು

ರುತಿಸುತ್ತಿದ್ದೆ. ಕೆಲವು ಮುದುಕರು ವಾಕಿಂಗ್ ಸ್ಟಿಕ್ಕನ್ನು ಕುಟ್ಟುತ್ತಾ ಎದುರು ಸಾಗುವಾಗ ನನ್ನ ಮೇಲೆ ದುಸುಮುಸು ಮಾಡಿಕೊಳ್ಳುತ್ತಿದ್ದನ್ನೂ ಕಂಡಿದ್ದೆ. ಆದರೆ ನನಗೆ ಅವ್ಯಾವೂ ಮುಖ್ಯವಾಗಿರಲಿಲ್ಲ. ನಾನು ಹಾಗೂ ನೀನು ಇಬ್ಬರೇ ಇಡೀ ಜಗತ್ತಿನಲ್ಲಿ ಸಮಯ ಕೊನೆಯಾಗುವರೆಗೆ ಹಾಯಾಗಿರಬೇಕು ಅನ್ನಿಸುತ್ತಿತ್ತು.


ನಿನ್ನೊಳಗೆ ನಾನು, ನನ್ನೊಳಗೆ ನೀನು ಬೆರೆತು ಹೋಗಿ ಇಬ್ಬರೂ ಇಲ್ಲವಾಗಿ ಬಿಡಬೇಕು ಎಂಬ ಕಾತರ ನನ್ನಲ್ಲಿದ್ದರೂ ಈ ಸುತ್ತಲ ಸಮಾಜದ ನಿಯಮಗಳು ಅದಕ್ಕೆ ಅವಕಾಶಕೊಡುವುದಿಲ್ಲ ಎಂಬುದು ನಮ್ಮಿಬ್ಬರಿಗೂ ಗೊತ್ತಿತ್ತು. ನಾನು ನೀನು ಎಲ್ಲೆಂದರಲ್ಲಿ ಸಂಧಿಸುವ ಹಾಗಿರಲಿಲ್ಲ. ನಮ್ಮ ಸಮಾಗಮಕ್ಕಾಗಿ ಅತೀ ಎಚ್ಚರಿಕೆಯಿಂದ ಸಮಯವನ್ನೂ, ಸ್ಥಳವನ್ನೂ ನಾವು ಆಯ್ಕೆ ಮಾಡಿಕೊಳ್ಳಬೇಕಿತ್ತು.  ಕಾಲೇಜು ಇರುವಾಗಲೆಲ್ಲಾ ಇಲ್ಲಿ ಹಾಸ್ಟೆಲ್ಲಿನಲ್ಲಿ ಉಳಿದುಕೊಂಡಾಗ ನನಗಷ್ಟು ತೊಂದರೆಯಾಗುತ್ತಿರಲಿಲ್ಲ. ನೀನು ಯಾವ ಘಳಿಗೆಯಲ್ಲಿ ಕಳೆದರೂ ಉಟ್ಟ ಬಟ್ಟೆಯಲ್ಲಿ ಧಾವಿಸುವಷ್ಟು ಸ್ವಾತಂತ್ರ್ಯವಿರುತ್ತಿತ್ತು. ನನ್ನನ್ನು ತಡೆಯುವುದಕ್ಕೆ ಯಾರಿಗೂ ಸಾಧ್ಯವಿರಲಿಲ್ಲ. ಮೇಲಾಗಿ ಈ ಊರಿಗೆ ನಾನು ಅಪರಿಚಿತ. ಈ ಬೆಂಗಳೂರಿನ ಸಂಗತಿ ನಿನಗೆ ಗೊತ್ತಿಲ್ಲ ಅನ್ನಿಸುತ್ತೆ, ಇಲ್ಲಿ ನಿನ್ನ ಬೆನ್ನ ಹಿಂದಿರುವ ಒಂದು ಅಡಿ ದಪ್ಪನೆಯ ಗೋಡೆಯ ಆಚೆ ಬದಿಯಲ್ಲಿ ಕೂತ ವ್ಯಕ್ತಿಗೆ ನಿನ್ನ ಪರಿಚಯವಿರುವುದಿಲ್ಲ. ಪಕ್ಕದ ಮನೆಯಲ್ಲಿ ಮನುಷ್ಯರು ಇದ್ದಾರೆ, ಅವರು ಇನ್ನೂ ಉಸಿರಾಡುತ್ತಿದ್ದಾರೋ ಇಲ್ಲವೋ ಎಂಬುದು ಇಲ್ಲಿನವರಿಗೆ ಆಸಕ್ತಿಯ ವಿಷಯವಾಗುವುದಿಲ್ಲ. ಹೀಗಾಗಿ ನಾನು ಹಾಸ್ಟೆಲ್ಲಿನ ಕಾಂಪೌಂಡು ದಾಟುತ್ತಿದ್ದ ಹಾಗೆಯೇ ಕಿಸೆಯಲ್ಲಿ ಭದ್ರವಾಗಿದ್ದ ನಿನ್ನನ್ನು ಹೊರಕ್ಕೆಳೆದು ಪ್ರೀತಿಯಿಂದ ಕಿಚ್ಚು ಹೊತ್ತಿಸುವಾಗಲೂ ಭಯವಾಗುತ್ತಿರಲಿಲ್ಲ. ತೀರಾ ನನ್ನ ಕಾಲೇಜಿನವರು, ನನ್ನ ವರ್ತಮಾನವನ್ನು ಊರಿಗೆ ತಲುಪಿಸುವಂಥವರು, ಕಾಲೇಜಿನ ಲೆಕ್ಛರುಗಳು- ಇವರ ಕಣ್ಣಿಗಾದರೂ ನಾವಿಬ್ಬರೂ ಒಟ್ಟಾಗಿರುವುದು ಬೀಳದಂತೆ  ಎಚ್ಚರ ವಹಿಸುತ್ತಿದ್ದೆ.

ದಿನಕ್ಕೆ ಒಂದು ಬಾರಿ ಎರಡು ಬಾರಿಯೆಲ್ಲಾ ಸಂಧಿಸುವುದರಿಂದ ನನಗೆ ತೃಪ್ತಿಯಾಗುತ್ತಿರಲಿಲ್ಲ. ಐದು, ಆರು ಕಡೆ ಕಡೆಗೆ ಹತ್ತು ಹದಿನೈದು ಸಲವಾದರೂ ನಿನ್ನ ಮಡಿಲಿಗೆ ನನ್ನನ್ನು ನಾನು ಒಪ್ಪಿಸಿಕೊಂಡುಬಿಡಲು ಶುರು ಮಾಡಿದೆ. ನೀನೂ ಏನೂ ಅಷ್ಟು ಸುಲಭಕ್ಕೆ ಸಿಕ್ಕುವವಳಾಗಿರಲಿಲ್ಲ. ನಿನ್ನ ಬೇಡಿಕೆಯೇನು ಸಣ್ಣ ಪ್ರಮಾಣದ್ದಲ್ಲ. ಮನೆಯಿಂದ ಬರುತ್ತಿದ್ದ ತಿಂಗಳ ಕಾಸಿನಲ್ಲಿ ಒಂದಷ್ಟನ್ನು ಕದ್ದು ಮುಚ್ಚಿ ನಿನಗೆ ತಲುಪಿಸುತ್ತಿದ್ದೆ. ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದೆನಾದ್ದರಿಂದ ನಿನ್ನನ್ನು ಸಾಕಲು ಕಷ್ಟವಾಗುತ್ತಿರಲಿಲ್ಲ. ಆದರೆ ಕೆಲವೊಮ್ಮೆ ವಿಪರೀತವಾಗಿ ಕೈ ಕಟ್ಟಿ ಹೋಗಿ ಬಿಡುತ್ತಿತ್ತು. ಕೈಲಿ ಬಿಡುಗಾಸೂ ಇರುತ್ತಿರಲಿಲ್ಲ. ಹಿಂದೆಂದೂ ಅಮ್ಮನಿಗೆ ಸುಳ್ಳು ಹೇಳದ ನಾನು ಆಕೆಗೆ ಅರ್ಥವಾಗದ ಪುಸ್ತಕಗಳ ಹೆಸರು ಹೇಳಿ ಬ್ಯಾಂಕ್ ಅಕೌಂಟು ತುಂಬಿಸಿ ಕೊಳ್ಳುತ್ತಿದ್ದೆ.  ನಮ್ಮ ಪ್ರೀತಿಗಾಗಿ ನಾನು ಅಪ್ರಮಾಣಿಕನಾದೆ, ಸ್ವಾಭಿಮಾನವನ್ನೂ ಕಳೆದುಕೊಂಡು ಗೆಳೆಯರ ಬಳಿ ಅಂಗಲಾಚಿದೆ. ಆಪ್ತರ ಕಣ್ಣಲಿ ಸಣ್ಣವನಾದೆ, ಆದರೆ ನಿನ್ನ ಕಣ್ಣಲ್ಲಿ ನಾನು ದೊಡ್ಡವನಾಗುತ್ತಿದ್ದೆ ಎಂದುಕೊಂಡಿದ್ದೆ. ನಾನು ನಿನ್ನ ಕಾಣುವುದಕ್ಕಾಗಿ, ನಿನ್ನನ್ನು ಸೇರುವುದಕ್ಕಾಗಿ ಇಷ್ಟೆಲ್ಲಾ ತ್ಯಾಗಗಳನ್ನು ಮಾಡುತ್ತಿದ್ದೆ. ಆದರೆ ನೀನೋ ಅಂತಃಪುರದ ಮಹಾರಾಣಿಯ ಹಾಗೆ ಕೂದಲೂ ಸಹ ಕೊಂಕದ ಹಾಗೆ ಇರುತ್ತಿದ್ದೆ.  ಪಾಪ ಇದರಲ್ಲಿ ನಿನ್ನದೇನೂ ತಪ್ಪಿರಲಿಲ್ಲ ಬಿಡು. ನಿನಗೆ ನನ್ನ ಎಷ್ಟೇ ಪ್ರೀತಿಯಿದ್ದರೂ ನೀನಾದರೂ ಏನು ಮಾಡಲು ಸಾಧ್ಯವಿತ್ತು? ನೀನು ಅಬಲೆ, ಅಸಹಾಯಕಿ ನಾನು ನಿನ್ನ ಪೊರೆಯುವ, ಸದಾ ನಿನ್ನ ಹಿತವನ್ನು ಕಾಯುವ, ನಿನ್ನ ಕೋಮಲತೆಯನ್ನು ಕಾಪಾಡುವ ಶಕ್ತಿವಂತ ಯೋಧನಾಗಿದ್ದೆ. ನಮ್ಮಿಬ್ಬರ ಮಿಲನಕ್ಕೆ ನಾನು ಈ ಸುಂಕವನ್ನು ತೆರಲೇ ಬೇಕಿತ್ತು.

ನಿಜಕ್ಕೂ ನನಗೆ ಹಾಗೆ ಅನ್ನಿಸುತ್ತಿತ್ತೋ ಅಥವಾ ಅದು ಕೇವಲ ನನ್ನ ಭ್ರಮೆಯಾಗಿತ್ತೋ ನನಗಿನ್ನೂ ಸರಿಯಾಗಿ ತೀರ್ಮಾನಿಸಲು ಸಾಧ್ಯವಾಗುತ್ತಿಲ್ಲ. ಆಗಿನ ನನ್ನ ಬದುಕಿಗೇ ನೀನೇ ಸ್ಪೂರ್ತಿಯಾಗಿದ್ದೆ. ನನ್ನ ಅಂತರಂಗದ ಪ್ರೇರಕ ಶಕ್ತಿಯಾಗಿದ್ದೆ. ನಾನು ಹೆದರಿ ಹೆಜ್ಜೆ ಹಿಂದಿಟ್ಟಾಗಲೆಲ್ಲಾ ನೀನು ಧೈರ್ಯ ತುಂಬಿ ಮುಂದಕ್ಕೆ ತಳ್ಳುತ್ತಿದ್ದೆ. ದಣಿದು ಕುಳಿತಾಗಲೆಲ್ಲಾ ಶಕ್ತಿಯನ್ನು ಧಾರೆಯೆರೆದು ಜಿಗಿದು ನಿಲ್ಲುವಂತೆ ಮಾಡುತ್ತಿದ್ದೆ. ನನ್ನ ಸೃಜನಶಿಲತೆ, ನನ್ನ ಸಾಧನೆಗಳಿಗೆ ನೀನೇ ಬೆಂಬಲವಾಗಿದ್ದೆ. ಒಮ್ಮೆ ನಿನ್ನೊಡನೆ ಕೈಯೊಳಗೆ ಕೈ ಬೆಸೆದುಕೊಂಡು ಕುಳಿತು ಐದು ನಿಮಿಷ ಕಳೆದರೆ ನನ್ನೆಲ್ಲಾ ಸಭಾ ಕಂಪನ ಕಾಣೆಯಾಗಿ ನೂರಾರು ಮಂದಿಯೆದುರು ನಿರ್ಭಯವಾಗಿ, ಅದ್ಭುತವವಾಗಿ ಮಾತಾಡುತ್ತಿದ್ದೆ. ಹಿಂದೆಲ್ಲಾ ಪದಗಳು ಸಿಕ್ಕದೆ ತಡವರಿಸುತ್ತಿದ್ದವನು ನಾನೇನಾ ಎಂದು ಆಶ್ಚರ್ಯ ಪಡುವಷ್ಟರ ಮಟ್ಟಿಗೆ ನಿನ್ನ ಸ್ಪೂರ್ತಿ ನನ್ನನ್ನು ಬದಲಾಯಿಸಿತ್ತು. ಅಪರೂಪಕ್ಕೆ ಕಾಲೇಜಿನ ಪತ್ರಿಕೆಗಾಗಿಯೋ, ಇಲ್ಲವೇ ‘ಮಯೂರ’, ‘ತುಷಾರ’ಕ್ಕಾಗಿಯೋ ಕಥೆಯೊಂದನ್ನು ಬರೆಯುವುದಕ್ಕೆ ಕೂತಾಗ ಗಂಟೆ ಗಟ್ಟಲೆ ಮೇಜಿನ ಮುಂದೆ ಜಿಮ್ನಾಸ್ಟಿಕ್ ನಡೆಸಿದರೂ, ಹಾಸಿಗೆಯ ಮೇಲೆ ಶೀರ್ಷಾಸನ ಹಾಕಿದರೂ ಹೊಳೆಯದಿದ್ದ ವಿಚಾರಗಳು, ಕೈಯಿಂದ ತಪ್ಪಿಸಿಕೊಂಡು ಓಡುತ್ತಿದ್ದ ಕಥೆಯ ಎಳೆಗಳು ನಿನ್ನನ್ನು ಜೊತೆಯಲ್ಲಿಟ್ಟುಕೊಂಡು ಕೂತೊಡನೆ ಬಾಲ ಮುದುರಿಕೊಂಡ ಬೆಕ್ಕಿನ ಮರಿಯ ಹಾಗೆ ಕಾಗದದ ಮೇಲೆ ಇಳಿಯುತ್ತಿದ್ದವು. ನಾನು ನನ್ನ ಬದುಕಿನ ಅತಿ ಶ್ರೇಷ್ಠ ಕಥೆಗಳನ್ನು, ಕವಿತೆಗಳನ್ನು ಬರೆದದ್ದು, ತುಂಬಾ ಒಳ್ಳೆಯ ಐಡಿಯಾಗಳನ್ನು ಪಡೆದದ್ದು ನಿನ್ನೊಂದಿಗಿದ್ದಾಗಲೇ. ಅದ್ಯಾರೋ ಮಹಾನ್ ಲೇಖಕ, ‘ಬರೆಯುವಾಗ ಯಾರೆಂದರೆ ಯಾರೂ ಇರಬಾರದು ನನ್ನನ್ನೂ ಸೇರಿಸಿ’ ಎಂದು ಹೇಳಿದ್ದಾನೆ. ಆ ಸ್ಥಿತಿಯನ್ನು ತಲುಪಿಕೊಳ್ಳಲು ನೀ ನನಗೆ ನೆರವಾಗುತ್ತಿದ್ದೆ ಎಂದುಕೊಳ್ಳುತ್ತಿದ್ದೆ. ಕಾರಂತರು, ಲಂಕೇಶರು, ಅಡಿಗರು, ರವಿ ಬೆಳಗೆರೆಯಂಥವರೆಲ್ಲಾ ನಿನ್ನ ಪರಿವಾರವನ್ನು ನೆಚ್ಚಿಕೊಂಡವರು ಎಂದು ತಿಳಿದು ಪುಳಕಿತನಾಗುತ್ತಿದ್ದೆ. ಕಡೆ ಕಡೆಗೆ ಅದ್ಯಾವ ಪರಿ ನಿನ್ನನ್ನು ಹಚ್ಚಿಕೊಂಡೆನೆಂದರೆ ನೀನಿಲ್ಲದೆ ನನ್ನಲ್ಲಿ ಕಥೆಯಿರಲಿ, ಒಂದು ಸಾಲು ಕೂಡ ಹುಟ್ಟಲು ಸಾಧ್ಯವಾಗುತ್ತಿರಲಿಲ್ಲ. ನಿನ್ನೊಡನೆ ಇರದಿದ್ದ ಘಳಿಗೆಯಲ್ಲಿ ಯಾರಾದರೂ ಬಂದು ಈ ಐಡಿಯಾಗಳು ನಿಮ್ಮದೇನಾ ಅಂತ ಕೇಳಿಬಿಟ್ಟರೆ ಎಂದು ಕಲ್ಪಿಸಿಕೊಂಡು ಭಯವಾಗಿ ನಡುಗಿಹೋಗುತ್ತಿದ್ದೆ.

(ಮುಂದಿನ ಸಂಚಿಕೆಗೆ)

271435806_7530553cb3

ವೀಣೆ ಇದೆ, ತಂತಿ ಇದೆ
ನುಡಿಸೋ ಬೆರಳುಗಳಲಿ
ಕಸುವು ಇದೆ
ತಾಣವಿದೆ, ಮೌನವಿದೆ
ಆಲಿಸುವ ಕಿವಿಗಳಲಿ
ಹಸಿವು ಇದೆ
ಕಂಪನದಿ ಸ್ವರ
ಕಾಣದಾಗಿದೆ.

ಪದಗಳಿವೆ, ಧ್ವನಿಗಳಿವೆ
ನಲಿಯುವ ಕೈಗಳಲಿ
ಕತ್ತಲು ಬೆಳಕಾಗಿದೆ
ಧ್ಯಾನವಿದೆ, ಅರ್ಥವಿದೆ
ಓಡುವ ಕಣ್ಣಿನಲಿ
ಬೆತ್ತಲು ಬಯಲಾಗಿದೆ
ಬೆಸೆದ ಸೇತುವೆಗೆ
ಮುಪ್ಪಾಗಿದೆ.

ರೂಪವಿದೆ, ದೀಪವಿದೆ
ಕಟೆದ ಮೂರ್ತಿಯಲಿ
ಹೊಳಪು ಇದೆ
ಭಾವವಿದೆ, ಭಕುತಿಯಿದೆ
ಜೋಡಿಸಿದ ಕರಗಳ
ಮುಡಿಪು ಇದೆ
ಪಂಜರದಿ ಪಕ್ಷಿ
ಸತ್ತಿದೆ.

– ‘ಅಂತರ್ಮುಖಿ’

539w

ಆತ ಬಲರಾಮ ಹಲವಾಯಿ ಭಾರತದ ಲಕ್ಷಾಂತರ ಕುಗ್ರಾಮಗಳಂತೆಯೇ ಇದ್ದ ಒಂದು ಗ್ರಾಮದಲ್ಲಿ ಹುಟ್ಟಿದವ. ಆತನ ತಂದೆ ತಾಯಿಗೆ ಆತನಿಗೊಂದು ಹೆಸರಿಡಬೇಕೆನ್ನುವ ಅರಿವೂ ಇರುವುದಿಲ್ಲ.ಆತನನ್ನು ಮುನ್ನಾ ಎಂದಷ್ಟೇ ಕರೆಯುತ್ತಿರುತ್ತಾರೆ. ಇಡೀ ಹಳ್ಳಿಯ ಒಡೆತನ ಜಮೀನುದಾರನ ಕೈಲಿರುತ್ತದಾದ್ದರಿಂದ ಆತನ ತಂದೆ ತಾಯಿಯಂತೆಯೇ ಅನೇಕರು ತಮ್ಮ ಬದುಕಿರುವುದು ಜಮೀನುದಾರರ ಸೇವೆ ಮಾಡುವುದಕ್ಕೆ ಎಂತಲೇ ಭಾವಿಸಿರುತ್ತಾರೆ. ಇಂಥ ಪರಿಸರದಲ್ಲಿ ಬೆಳೆದ ಬಲರಾಮ ಚೂಟಿ ಹುಡುಗ. ಶಾಲೆಗೆ ಬಂದ ಇನ್ಸ್‌ಪೆಕ್ಟರ್ ಈತನ ಬುದ್ಧಿಮತ್ತೆಯನ್ನು ಹೊಗಳುವಷ್ಟು ಚಾಲಾಕಿ.ಆದರೆ ತನ್ನ ತಂಗಿಯ ಮದುವೆಯನ್ನು ಮಾಡುವುದಕ್ಕಾಗಿ ಆತನ ಶಾಲೆಯನ್ನು ಬಿಟ್ಟು ಹೊಟೇಲಿನಲ್ಲಿ ಕಪ್ ತೊಳೆಯಬೇಕಾಗುತ್ತದೆ. ಶಾಲೆಯಲ್ಲಿ ತನ್ನ ಚಾಲಾಕಿತನದಿಂದಾಗಿ ‘ಬಿಳಿ ಹುಲಿ’ ಎಂದು ಕರೆಸಿಕೊಂಡಿದ್ದ ಬಲರಾಮ ಮುಂದೆ ತಾನು ಕೆಲಸ ಮಾಡುತ್ತಿದ್ದ ಶ್ರೀಮಂತ ಯಜಮಾನನ ಪ್ರಾಣವನ್ನೇ ತೆಗೆದು ದೊಡ್ಡ ವ್ಯಾಪಾರ ಪ್ರಾರಂಭಿಸಿ ಶ್ರೀಮಂತನಾಗುತ್ತಾನೆ. ಬೆಂಗಳೂರಿಗೆ ಭೇಟಿ ನೀಡಲಿದ್ದ ಚೀನಾದ ಅಧ್ಯಕ್ಷನಿಗೆ ಅದ್ಯಾಕೋ ತನ್ನ ಕಥೆಯನ್ನೆಲ್ಲಾ ಹೇಳಿಕೊಳ್ಳಬೇಕು ಅನ್ನಿಸುತ್ತದೆ. ಏಳು ರಾತ್ರಿಗಳಲ್ಲಿ ಆತ ತನ್ನ ಬದುಕಿಅ ಚಿತ್ರಣವನ್ನು ಕಟ್ಟಿಕೊಡುತ್ತಾ ಹೋಗುತ್ತಾನೆ.ಆತ ಚೀನಾದ ಅಧ್ಯಕ್ಷನಿಗೆ ಬರೆಯುವ ಸುದೀರ್ಘ ಪತ್ರವೇ ‘ದಿ ವೈಟ್ ಟೈಗರ್’ ಕಾದಂಬರಿಯ ಪುಟಗಳಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ.

ಈ ಕೃತಿಗೆ ೨೦೦೮ರ ಸಾಲಿನ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿ ಸಂದಾಯವಾಗಿದೆ. ಕಾಮನ್ ವೆಲ್ತ್ ಒಕ್ಕೂಟದ ರಾಷ್ಟ್ರಗಳು ಇಲ್ಲವೇ ಐರ್ಲೆಂಡಿನ ಒಂದು ಶ್ರೇಷ್ಠ ಕೃತಿಗೆ ಪ್ರತಿವರ್ಷ ಐವತ್ತು ಸಾವಿರ ಯುರೋ ಮೌಲ್ಯದ ಬಹುಮಾನ ಕೊಟ್ಟು ಗುರುತಿಸಲಾಗುತ್ತದೆ. ೨೦೦೨ರಿಂದ ಮ್ಯಾನ್ ಗ್ರೂಪ್ ಎಂಬ ಹಣಕಾಸು ವ್ಯವಹಾರದ ಸಂಸ್ಥೆಯೊಂದು ಈ ಪ್ರಶಸ್ತಿಯನ್ನು ಪ್ರಾಯೋಜಿಸುತ್ತಾ ಬಂದಿದೆ. ಈ ಬಾರಿ ಪ್ರಶಸ್ತಿ ಪಡೆದಿರುವ ಅರವಿಂದ್ ಅಡಿಗ ಮೂಲತಃ ಕನ್ನಡಿಗರು ಹಾಗೂ ಮುವತ್ನಾಲ್ಕು ವರ್ಷದ ತರುಣರು(?) ಎಂಬುದು ಗಮನಿಸಬೇಕಾದ ಸಂಗತಿ. ಅಡಿಗರಲ್ಲದೆ ಇತರ ಮೂವರು ಭಾರತೀಯರು(ಸಲ್ಮಾನ್ ರಶ್ದಿ, ಅರುಂಧತಿ ರಾಯ್, ಕಿರಣ್ ದೇಸಾಯ್) ಈಗಾಗಲೇ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಅರವಿಂದ್ ೧೯೭೪ರಲ್ಲಿ ಮದ್ರಾಸಿನಲ್ಲಿ ಹುಟ್ಟಿದರಾದರೂ ಅವರ ತಂದೆ ತಾಯಿ ಕನ್ನಡಿಗರು, ಮಂಗಳೂರಿನವರು. ಓದಿದ್ದು ಬೆಳೆದದ್ದು ಮಂಗಳೂರಿನಲ್ಲಿ. ಅನಂತರ ಇಡೀ ಕುಟುಂಬ ಆಸ್ಟ್ರೇಲಿಯಾಕ್ಕೆ ವಲಸೆ ಹೋಗುತ್ತದೆ. ಕೊಲಂಬಿಯಾ ಕಾಲೇಜ್ ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಅಭ್ಯಸಿಸಿದ ಅಡಿಗ ನ್ಯೂಯಾರ್ಕಿನ ‘ಟೈಮ್’ ಪತ್ರಿಕೆಗೆ ದಕ್ಷಿಣ ಏಷ್ಯಾದ ಪ್ರತಿನಿಧಿಯಾಗಿ ನೇಮಕಗೊಂಡರು. ಪತ್ರಕರ್ತರಾಗಿದ್ದ ಅವಧಿಯಲ್ಲಿ ಭಾರತದಲ್ಲಿ ಸಂಚರಿಸಿ ದೇಶದ ಆಗುಹೋಗುಗಳನ್ನು, ಆರ್ಥಿಕ ಪಲ್ಲಟಗಳನ್ನು ಸೂಕ್ಷ್ಮವಾಗಿ ಗಮನಿಸಿ ಭಾರತದ ಜನಸಾಮಾನ್ಯರ ನಾಡಿಮಿಡಿತವನ್ನು ಅರಿತ ಅಡಿಗರು ಭಾರತದಲ್ಲಿ ಹುಟ್ಟಿಕೊಳ್ಳುತ್ತಿರುವ ಹೊಸ ಬಗೆಯ ಅಸಮಾನತೆಯ ಬಗ್ಗೆ ಗಮನ ಹರಿಸಿದರು. ಜಾತಿಗಳ ನಡುವಿನ ಅಸಮಾನತೆಗಿಂತ ವ್ಯಾಪಕವಾಗಿ ಬೆಳೆಯುತ್ತಿರುವ ಬಡವ ಹಾಗೂ ಶ್ರೀಮಂತರ ನಡುವಿನ ಕಂದರದ ಮೇಲೆ ಬೆಳಕು ಚೆಲ್ಲುವ, ಶ್ರೀಮಂತಿಕೆಯನ್ನು ಬೆನ್ನಟ್ಟಿ ಹೊರಡುವ ಹೊಸ ಆದರ್ಶದ ಬೆಳಕಿನಲ್ಲಿ ಮಾನವೀಯತೆ, ಆತ್ಮಸಾಕ್ಷಿ, ಮೌಲ್ಯಗಳಿಗೆಲ್ಲಾ ಕುರುಡಾಗುತ್ತಾ ಸಾಗುವ ಬೆಳವಣಿಗೆಯನ್ನು ಎಳೆ-ಎಳೆಯಾಗಿ ಬಿಡಿಸಿಡುವ ಕಾದಂಬರಿಯನ್ನು ಬರೆದರು. ಅದಕ್ಕೆ ‘ದಿ ವೈಟ್ ಟೈಗರ್’ ಎಂದು ಹೆಸರಿಟ್ಟರು. ವೈಟ್ ಟೈಗರ್ ಎಂದರೆ ಅಪರೂಪದ ಪ್ರಾಣಿ, ಶತಮಾನದಲ್ಲಿ ಒಮ್ಮೆ ಅವತರಿಸುವ ಜೀವಿ ಎಂದರ್ಥ. ಅಡಿಗರು ತಮ್ಮ ಮೊದಲ ಪ್ರಯತ್ನಕ್ಕೇ ಬಹುದೊಡ್ಡ ಮಾನ್ಯತೆಯನ್ನು ಪಡೆದಿದ್ದಾರೆ.

ಬುಕರ್ ಪ್ರಶಸ್ತಿ ಸಿಕ್ಕೊಡನೆ ಆ ಲೇಖಕನ ಕೃತಿಗಳಿಗೆಲ್ಲಾ ಅಪಾರವಾದ ಬೇಡಿಕೆ ಬರುವುದು ಸಾಮಾನ್ಯ. ಈ ಪ್ರಶಸ್ತಿ ಬೇರೇನು ಮಾಡದಿದ್ದರೂ ಲೇಖಕನಿಗೆ ಆರ್ಥಿಕವಾಗಿ ಲಾಭ ಮಾಡಿಕೊಡುತ್ತದೆ. ಲೇಖಕ ಜಗದ್ವಿಖ್ಯಾತನಾಗುತ್ತಾನೆ. ಕನ್ನಡಿಗರಾದ ಅಡಿಗರ ಸಾಧನೆಯನ್ನು ಮೆಚ್ಚಿಕೊಂಡಾಡುವವರು ಇದ್ದ ಹಾಗೆಯೇ ಕಾದಂಬರಿಯಲ್ಲಿ ಭಾರತದ ಬಗ್ಗೆ ಕೇವಲ ಋಣಾತ್ಮಕವಾದ ಅಂಶಗಳೇ ತುಂಬಿಕೊಂಡಿವೆ.ಭಾರತವನ್ನು, ಭಾರತೀಯರನ್ನು ಮನಸಾರೆ ಬೈಯ್ಯಲಾಗಿದೆ, ಲೇವಡಿ ಮಾಡಲಾಗಿದೆ ಎಂಬ ಆರೋಪ ಹಲವರದ್ದು. ಇದೊಂದು ಆತ್ಮವಿಮರ್ಶೆಯ ಪ್ರಯತ್ನ. ಭಾರತ ಪ್ರಕಾಶಿಸುತ್ತಿದೆ ಎಂದು ಜಗತ್ತಿಗೆ ನಾವು ತೋರಿಸಲಿಚ್ಚಿಸುತ್ತಿರುವ ಮುಖದ ಹಿಂದೆ, ನಮ್ಮ ಜಿಡಿಪಿ ಬೆಳವಣಿಗೆ, ಚಂದ್ರಯಾನ, ಪರಮಾಣು ಒಪ್ಪಂದಗಳನ್ನು ಮೀರಿದ ವ್ಯಕ್ತಿತ್ವವೊಂದು ಭಾರತಕ್ಕಿದೆ ಎಂಬುದು ಅವರ ವಿಚಾರ. ಜಾಗತಿಕ ಮಟ್ಟದ ಪತ್ರಿಕೆಯೊಂದರ ಪ್ರತಿನಿಧಿಯಾಗಿ ಕೆಲಸ ಮಾಡಿದ ಅಡಿಗರು ನಮ್ಮೆಲ್ಲರಿಗಿಂತ ಹೆಚ್ಚು ಚೆನ್ನಾಗಿ ಜಗತ್ತನ್ನು ಬಲ್ಲವರು ಹಾಗೂ ಆ ಪಕ್ವ ದೃಷ್ಟಿಕೋನದಲ್ಲಿ ಭಾರತವನ್ನು ಸಮರ್ಪಕವಾಗಿ ಚಿತ್ರಿಸಬಲ್ಲರು ಎಂಬುದು ನನ್ನಂಥ ಅನೇಕರ ವಿಶ್ವಾಸ!

-ಕೆ.ಎಸ್.ಎಸ್

ನಾನು ಉಪವಾಸ ಮಾಡಲ್ಲ!

ಒಮ್ಮೆ ಗಾಂಧೀಜಿ ಉಪವಾಸ ಪ್ರಾರಂಭಿಸಿದರು. ಪಕ್ಕದಲ್ಲೇ ವಲ್ಲಭಭಾಯಿ ಪಟೇಲರು ನಿಂತಿದ್ದರು. ಗಾಂಧೀಜಿ ಅವರಿಗೆ ಹೇಳಿದರು: ‘ವಲ್ಲಭ ಭಾಯಿ, ನಿಮಗೂ sardar_vallabhbhai_patel1ಅಪ್ಪಣೆ ಕೊಡುತ್ತೇನೆ ಉಪವಾಸ ಮಾಡಬಹುದು.’
‘ಬೇಡಿ ಬಾಪೂಜಿ, ಖಂಡಿತಾ ಬೇಡಿ. ನಾನಂತೂ ಉಪವಾಸ ಪ್ರಾರಂಭಿಸೋಲ್ಲ’ ಎಂದರು ವಲ್ಲಭಭಾಯಿ.
‘ಏಕೆ?’ ಆಶ್ಚರ್ಯದಿಂದ ಕೇಳಿದರು ಗಾಂಧೀಜಿ.
‘ನೀವು ಉಪವಾಸ ಮಾಡಿದರೆ ಬೇಡ ಎಂದು ಬೇಡಿಕೊಳ್ಳುವವರು ನೂರಾರು ಜನ. ಹಾಗೆ ಮಾಡಿ ನೀವು ಉಪವಾಸ ಮಾಡುವುದನ್ನು ತಪ್ಪಿಸುತ್ತಾರೆ. ನಾನು ಉಪವಾಸ ಮಾಡಿದರೆ ಬೇಡ ಎಂದು ಹೇಳಿ ನಿಲ್ಲಿಸುವವರು ಯಾರೂ ಇಲ್ಲವಲ್ಲ!’
………………………………

ಓಹ್ ಹೌದಾ?

ಭೂಮಿಯ ಮೇಲೆ ಪ್ರತಿ ಸೆಕಂಡಿಗೆ ಸರಾಸರಿ ೧೦೦ ಸಿಡಿಲುಗಳು ಅಪ್ಪಳಿಸುತ್ತವೆಯಂತೆ. ಸಿಡಿಲಿನ ಉದ್ದ ೩೦-೬೦ ಮೀಟರ್ ಇರುತ್ತದೆ. ಇದು ಸೆಕೆಂಡಿಗೆ ೧೬೦-೧೬೦,೦೦೦ ಕಿಮೀ ವೇಗದಲ್ಲಿ ಅಪ್ಪಳಿಸುತ್ತವೆ. ಇದರಿಂದ ಉತ್ಪತ್ತಿಯಾಗುವ ಶಾಖ ೧೭,೦೦೦- ೨೮,೦೦೦ ಸೆ.ನಷ್ಟು ಅಂದರೆ ಸೂರ್ಯನ ತಾಪಮಾನಕ್ಕಿಂತ ಮೂರು ಪಟ್ಟು ಹೆಚ್ಚು!

ಪ್ಲಾಬೋ ಪಿಕಾಸೊ ಎಂಬ ಶ್ರೇಷ್ಠ ಚಿತ್ರ ಕಲಾವಿದನ ಹೆಸರು ನೀವು ಕೇಳಿರಬಹುದು. ಆದರೆ ಆತನ ಪೂರ್ಣ ಹೆಸರನ್ನು ಕೇಳಿರಲಾರಿರಿ. ಇಲ್ಲಿದೆ ನೋಡಿ: ಪ್ಯಾಬ್ಲೋಪೀಗೋ ಜೋಸ್ ಫ್ರಾನ್ಸಿನ್ಕೋಸ್ಕೋಡಿ ಪವುಲಾ ಸಿಸೀನ್ ನೇಪೋಮಿಯೂಸಿನೋ ಕ್ರಿಸ್ಟಿನ್ ಕ್ರಿಸ್ಟೀಯಾನೋ ಡಿಲಾ ಸಾಂಡಿಸಿಮಾ ಪಿಕಾಸೋ !
………………………………

ಖಗೋಳ ಶಾಸ್ತ್ರಜ್ಞ

ಒಬ್ಬ  ಖಗೋಳಶಾಸ್ತ್ರಜ್ಞನಿಗೆ ರಾತ್ರಿಯಲ್ಲಿ  ಹೊರಹೋಗಿ ನಕ್ಷತ್ರಗಳನ್ನು ವೀಕ್ಷಿಸುವ ಹವ್ಯಾಸವಿತ್ತು. ಒಂದು ರಾತ್ರಿ ಅವನು ನಕ್ಷತ್ರವೀಕ್ಷಣೆ ಮಾಡುತ್ತ ಮಾಡುತ್ತ  ಊರ ಹೊರಗಿನ ಪ್ರದೇಶಕ್ಕೆ ಹೊರಟುಹೋದ. ಗಮನವೆಲ್ಲ ಆಕಾಶದಲ್ಲಿ ನೆಟ್ಟಿದ್ದರಿಂದ ಅವನು ಆಯತಪ್ಪಿ ಒಂದು ಬಾವಿಯಲ್ಲಿ ಬಿದ್ದುಬಿಟ್ಟ. ತನಗಾದ ನೋವು, ತರಚುಗಾಯಗಳಿಗಾಗಿ ಅವನು ಗೋಳಿಡುತ್ತ ‘ಕಾಪಾಡಿ!! ಕಾಪಾಡಿ !!’ಎಂದು ಕೂಗುತ್ತಿರುವಾಗ ಒಬ್ಬ ನೆರೆಯವನು ಅವನ ಕೂಗು ಕೇಳಿ ಬಾವಿಯ ಬಳಿ ಹೋದನು.ನಡೆದುದನ್ನು ಕೇಳಿ ಆತ ಬಾವಿಯಲ್ಲಿನ ಖಗೋಳಶಾಸ್ತ್ರಜ್ಞನಿಗೆ ಹೇಳಿದನು “ ಅಯ್ಯಾ ಮೂರ್ಖ ಮುದುಕ, ಆಕಾಶದ ಮೇಲಿರುವ ನಕ್ಷತ್ರದ ಮೇಲೆ ಗಮನ ಕೊಡುವ ನೀನು ನೆಲದ ಮೇಲೇನಿದೆ ಎಂದು ನೋಡುವುದಿಲ್ಲವಲ್ಲ!!”.
(ಈಸೋಪನ ಕಥೆ)
………………………………

ಲಾಲೂ ಬ್ರೈನ್!

ಭಾರತದ ಎಲ್ಲಾ ಷರತ್ತುಗಳಿಗೆ ಒಪ್ಪಿ ಪಾಕಿಸ್ತಾನ ಜಗಳವನ್ನು ನಿಲ್ಲಿಸಿತು.ಸಲೀಸಾಗಿ ಪರಿಹರಿಸಿದ ಲಾಲೂವನ್ನು ಪತ್ರಕರ್ತರೆಲ್ಲಾ ಸುತ್ತುವರೆದರು. ಎಲ್ಲರಲ್ಲೂ ಒಂದೇ ಪ್ರಶ್ನೆ. ಹೇಗೆ ಪರಿಹರಿಸಿದಿರಿ ಎಂದು.
ಲಾಲೂ “ಪಾಕಿಸ್ತಾನದ ಪ್ರಧಾನಿಗೆ ನಾ ಹೇಳಿದ್ದಿಷ್ಟೇ… ಒಂದು ಕಂಡೀಷನ್ ಮೇಲೆ ಕಾಶ್ಮೀರ ನಿಮಗೆ ನೀಡಲಾಗುತ್ತೆ…. ಕಾಶ್ಮೀರದ ಜತೆ ಬಿಹಾರವನ್ನೂ ಫ್ರೀಯಾಗಿ ತೆಗೆದುಕೊಳ್ಳಬೇಕೆಂದೆ…ಅಷ್ಟೇ..”

ಸ್ಯಾಲರಿ ಎಕ್ಸ್‌ಪೆಕ್ಟೆಡ್

ಕೆಲಸದ ಅರ್ಜಿಯನ್ನು ಗುಂಡ ಬಹಳ ಸಮಯದಿಂದ ಗುರಾಯಿಸುತ್ತಿದ್ದ.
ಯಾರ ಕಾಪಿಯನೂ ಮಾಡದೇ ಎಲ್ಲಾ ಜಾಗವನ್ನು ಪ್ರಥಮ ಸಲ ತುಂಬಿದ ಬಳಿಕ ಆತ್ಮವಿಶ್ವಾಸದ ನಂತರ ಇದೊಂದು ಪ್ರಶ್ನೆ ತೀವ್ರವಾಗಿ ತಲೆ(?!) ತಿನ್ನುತಿತ್ತು.
ಬಹಳ ಅಲೋಚಿಸಿದ ಬಳಿಕ ಸ್ಯಾಲರಿ ಎಕ್ಸ್ಪ್ ಪೆಕ್ಟೆಡ್ ಎದುರು ಕೊನೆಗೂ ಯೆಸ್ ಅಂತ ಬರೆದ.
………………………………

ಬುದ್ಧಿವಂತಿಕೆ ಮತ್ತು ಸಂತೋಷ

ಬುದ್ಧಿವಂತಿಕೆ ಮತ್ತು ಸಂತೋಷದ ನಡುವಿನ ವ್ಯತ್ಯಾಸ ಇಷ್ಟೇ.
ತಾನು ಸಂತೋಷವಾಗಿದ್ದೇನೆ ಎಂದುಕೊಳ್ಳುವವನು ನಿಜಕ್ಕೂ ಸಂತೋಷವಾಗಿರುತ್ತಾನೆ. ಆದರೆ ತಾನು ಬುದ್ಧಿವಂತ ಎಂದುಕೊಳ್ಳುವವನು ನಿಜವಾದ ಮೂರ್ಖನಾಗಿರುತ್ತಾನೆ.
– ಚಾರ್ಲ್ಸ್ ಕಾಲ್ಟನ್
………………………………

ಪುರುಷ ಹಾಗೂ ಮಹಿಳೆ

ಪುರುಷನು ಮಾಡುವುದೆಲ್ಲ ಮಹಿಳೆಯನ್ನು ಮೆಚ್ಚಿಸುವುದಕ್ಕಾಗಿ, ಮಹಿಳೆಯು ಮಾಡುವುದೆಲ್ಲ ಕನ್ನಡಿಯನ್ನು ಮೆಚ್ಚಿಸುವುದಕ್ಕಾಗಿ!
………………………………

Murphy`s Laws on Love

The nicer someone is, the farther away (s)he is from you.

Brains x Beauty x Availability = Constant. This constant is always zero.

The amount of love someone feels for you is inversely proportional to how much you love them.

Money can’t buy love, but it sure gets you a great bargaining position.

Availability is a function of time. The minute you get interested is the minute they find someone else.

The more beautiful the woman is who loves you, the easier it is to leave her with no hard feelings.

ಪ್ರಿಯ ಆತ್ಮಬಂಧು,
ಹೌದು ನಿನ್ನ ಹೀಗಂತ ಮಾತ್ರ ಕರೆಯಲು ಸಾಧ್ಯ. ಒಮ್ಮೆ ಹೀಗೆ ಕರೆದುಬಿಟ್ಟ ನಂತರ ನನ್ನಲ್ಲಿ ಅದೆಷ್ಟು ನಿರಾಳತೆ ಆವರಿಸಿಕೊಂಡಿದೆ ಎಂಬುದು ನಿನಗೆ ತಿಳಿಯುವುದಿಲ್ಲ. ಇಷ್ಟು ವರ್ಷಗಳಲ್ಲಿ ನಾನು ನಿನ್ನಲ್ಲಿ ಹುಡುಕುತ್ತಿದ್ದದ್ದು ಏನನ್ನು ಎನ್ನುವುದು ತಿಳಿಯದೆ ಗೊಂದಲಗೊಂಡಿದ್ದೆ, ಕ್ಷಣಕ್ಷಣವೂ ಮುಂದೆ ಏನಾಗುವುದೋ ಎಂಬ ಆತಂಕದಲ್ಲೇ ನಾನು ನನ್ನ ಎಂ.ಬಿ.ಬಿ.ಎಸ್ ಮುಗಿಸಿದೆ. ರಾತ್ರಿ ಕಳೆದು ಹಗಲಾಗುವುದರೊಳಗೆ ನನ್ನ ನಿನ್ನ ನಡುವಿನ ಸಂಬಂಧ ಯಾವ ರೂಪವನ್ನು ತಳೆದು ಕಣ್ಣ ಮುಂದೆ ಎದ್ದು ನಿಂತು ಬಿಡುವುದೋ ಎಂಬ ಕಳವಳದಲ್ಲಿ ರಾತ್ರಿಗಳನ್ನು ತಳ್ಳುತ್ತಿದ್ದೆ. ನನ್ನ ಬಗ್ಗೆ ನಿನ್ನ ಮನಸ್ಸಿನಲ್ಲಿರುವ ಭಾವನೆಯೇನು ಎಂಬುದನ್ನು ತಿಳಿದುಕೊಳ್ಳುವ ಇಂದ್ರಜಾಲದ ವಿದ್ಯೆಯಾವುದಾದರೂ ಇದ್ದರೆ ನನಗೆ ಕಲಿಸಪ್ಪ ಎಂದು ನಾನು ದೇವರನ್ನು ಪ್ರಾರ್ಥಿಸುವಾಗಲೆಲ್ಲಾ ಬೇಡಿಕೊಳ್ಳುತ್ತಿದ್ದೆ. ನಿನ್ನಲ್ಲಿ ನನ್ನೆಡೆಗೆ ಯಾವ ಭಾವನೆಯಿದು ಎನ್ನುವುದು ತಿಳಿಯುವುದಿರಲಿ, ನನೆಗೆ ನಿನ್ನ ಬಗ್ಗೆ ಏನು ಅನ್ನಿಸುತ್ತಿದೆ ಎಂಬುದನ್ನು ಗ್ರಹಿಸುವುದಕ್ಕೇ ನಾನು ವಿಫಲಳಾಗಿದ್ದೆ.

ಆ ಐದು ವರ್ಷಗಳಲ್ಲಿ ಏನೇನೆಲ್ಲಾ ನಡೆಯಿತು ಅಲ್ಲವಾ? ಗಾರ್ಮೆಂಟ್ ಕೆಲಸಕ್ಕೆ ಎಂದು ಸೇರಲು ತಯಾರಾಗಿದ್ದ ನಾನು ಡಾಕ್ಟರ್ ಆಗಬಹುದು ಎಂದು ಕನಸಿನಲ್ಲಷ್ಟೇ ಬಯಸಬಹುದಾಗಿದ್ದ ಸವಲತ್ತಾಗಿತ್ತು. ನೀನು ನನ್ನ ಕನಸನ್ನು ನನಸು ಮಾಡಿದೆ. ನಮ್ಮೆಲ್ಲಾ ಕಥೆಗಳಲ್ಲಿ ರಾಜಕುಮಾರಿಯರಿಗೆ ಕನಸಿನಲ್ಲಿ ರಾಜಕುಮಾರರು ಕಾಣಿಸಿಕೊಂಡು ತಮ್ಮ ಪರಾಕ್ರಮ ತೋರುತ್ತಾರಂತೆ! ನೀನು ನನ್ನ ಕನಸಿನಲ್ಲಿ ಬರುವ ಕಷ್ಟವನ್ನು ತೆಗೆದುಕೊಳ್ಳಲಿಲ್ಲ. ನನ್ನ ಕನಸನ್ನೇ ಎಳೆದು ತಂದು ಬದುಕಾಗಿಸಿದೆ. ಆ ಬದುಕಿನಲ್ಲಿ ಸಹಜವಾಗಿ ನೀನು ಇದ್ದೆ.

ನೀನು ಬರುವ ಮುಂಚೆ ನನ್ನ ಬದುಕು ಹೇಗಿತ್ತು? ಅಲ್ಲಿ ಇರಬೇಕಾದದ್ದೆಲ್ಲಾ ಕನ್ನಡಿಯೊಳಗಿನ ಗಂಟಾಗಿತ್ತು. ಅಪ್ಪನಿಗೆ ಮತಿಭ್ರಮಣೆ. ತಾನು ಮಾಡುತ್ತಿರುವುದೇನು ಎಂಬುದನ್ನು ಅರ್ಥ ಮಾಡಿಕೊಳ್ಳಲಾಗದ ಅಸಹಾಯಕತೆ. ಕೆಲವೊಮ್ಮೆ ದಿನವಿಡೀ ಮಂಕಾಗಿ ಕುಳಿತರೆ ಮತ್ತೊಂದಷ್ಟು ದಿನ ವಿನಾಕಾರಣದ ರಗಳೆಗಳನ್ನು ಮಾಡಿ, ಕೂಗಾಡಿ ಗದ್ದಲವೆಬ್ಬಿಸಿ ಎಲ್ಲರ ನೆಮ್ಮದಿಯನ್ನು ಕೆಡಿಸುತ್ತಿದ್ದ. ಇದನ್ನೆಲ್ಲಾ ನನ್ನಮ್ಮ ಹೇಗೋ ಸಹಿಸಿಕೊಳ್ಳುತ್ತಿದ್ದಳು. ಇವೆಲ್ಲದರ ಮಧ್ಯೆಯೂ ನಮ್ಮಿಬ್ಬರಿಗೆ – ನಾನು ಹಾಗೂ ತಮ್ಮನಿಗೆ- ಅಪ್ಪನ ಬಗ್ಗೆ ಅಗೌರವ, ಅಸಹ್ಯ ಬರದ ಹಾಗೆ ಆಕೆ ನಡೆಸಿಕೊಳ್ಳುತ್ತಿದ್ದಳು. ಆಕೆಯ ಮುಖದಲ್ಲೆಂದೂ ಅಪ್ಪನ ಬಗೆಗೆ ಅಪ್ರಸನ್ನತೆಯ ಗೆರೆ ಮೂಡಿರಲಿಲ್ಲ. ಆದರೆ ಅಂಥಾ ಸಂಯಮಿಯೂ ತಾಳ್ಮೆ ಕಳೆದುಕೊಳ್ಳಬೇಕಾಯ್ತು. ಅಪ್ಪ ತನಗಿದ್ದ ಮತಿಭ್ರಮಣೆಯ ಜೊತೆಗೆ ಕುಡಿತದ ಹುಚ್ಚನ್ನೂ ಅಂಟಿಸಿಕೊಂಡು ಬಿಟ್ಟ. ಅಮ್ಮನಿಗೆ ಸಂಯಮ ತಪ್ಪಿಹೋಯ್ತು. ದಿನವೂ ಕುಡಿಯಲು ಕಾಸು ಬೇಡುತ್ತಾ ನಿಲ್ಲುವ ಅಪ್ಪನನ್ನು ನಿಷ್ಕೃಷ್ಟ ಪ್ರಾಣಿಯ ಹಾಗೆ ಅಮ್ಮ ಕಾಣಲು ಶುರುವಾದಾಗಿನಿಂದ ಮನೆಯಲ್ಲಿ ನೆಮ್ಮದಿಯೆಂಬುದು ಕಾಣೆಯಾಯ್ತು. ಅಲ್ಲಿಯವರೆಗೂ ಅಸಮಾಧಾನ, ದುಸುಮುಸುಗಳು ದೇವರ ಕೋಣೆಯಲ್ಲಿ, ಮಲಗುವ ಕೋಣೆಯ ದಿಂಗಿನ ಹೆಗಲಲ್ಲಿ ಇಳಿದು ಹೋಗುತ್ತಿದ್ದವು. ನಾನು ಪಿಯುಸಿ ಮುಗಿಸಿ ಸಿಇಟಿ ಪರೀಕ್ಷೆ ಬರೆದು ವೈದ್ಯಳಾಗುವ ಕನಸನ್ನು ಕಾಣುತ್ತಾ ದಿನಗಳನ್ನು ಕಳೆಯುತ್ತಲಿದ್ದೆ. ರಜೆಯಲ್ಲಿ ಅಮ್ಮನಿಗೆ ನೆರವಾಗಲೆಂದು ಇಂಗ್ಲೀಷ್ ಗ್ರಾಮರ್ ಕಲಿಸುವ ಶಾಲೆಯೊಂದರಲ್ಲಿ ಕೆಲಸ ಮಾಡಲು ಶುರು ಮಾಡಿದೆ.

ಸಿಇಟಿಯಲ್ಲಿ ಒಳ್ಳೆಯ ರಿಸಲ್ಟೇನೋ ಬಂತು ಆದರೆ ಆ ರ್ಯಾಂಕಿಗೆ ಮೆಡಿಕಲ್ ಸೀಟು ಕಟ್ಟಲು ಬೇಕಾದಷ್ಟು ಹಣವಿರಲಿಲ್ಲ. ಬ್ಯಾಂಕಿನಲ್ಲಿ ಸಾಲ ಎತ್ತಲು ಏನನ್ನಾದರೂ ಅಡವಿಡಲೇ ಬೇಕಲ್ಲವೇ? ನಮ್ಮ ಬಳಿ ಹೇಳಿಕೊಳ್ಳುವಂಥದ್ದೇನೂ ಇರಲಿಲ್ಲ. ಪ್ರತಿ ದಿನ ಗ್ರಾಮರ್ ಕಲಿಸುವ ಶಾಲೆಯ ಸೈಬರಿನಲ್ಲಿ ಕುಳಿತು ದಿನ ದಿನಕ್ಕೆ ಕರಗುತ್ತಿದ್ದ ಮೆಡಿಕಲ್ ಸೀಟುಗಳನ್ನು, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ಲಾಟ್ ಫಾರಂ ಬಿಟ್ಟು ಹೊರಡುವ ಬಸ್ಸುಗಳನ್ನು ನೋಡಿದ ಹಾಗೆ ನೋಡುತ್ತಾ ಕುಳಿತಿದ್ದಾಗ ನಿನ್ನ ತಂಗಿಗೆ ನನ್ನ ನೆನಪಾದದ್ದು. ನನ್ನ ಮನೆಯ ಸ್ಥಿತಿಯನ್ನು ಹೇಳಿಕೊಂಡು ಸಮಾಧಾನ ಪಡೆಯಲು ನಾನು ಆಯ್ದುಕೊಂಡದ್ದು ತರಗತಿಯಲ್ಲಿನ ಮೂವತ್ತು ಮಂದಿ ಹುಡುಗಿಯರಲ್ಲಿ ನಿನ್ನ ತಂಗಿಯನ್ನೇ. ಆಕೆಯಲ್ಲಿನ ಮುಗ್ಧತೆ, ಅಪಾರ ಸಹಾನುಭೂತಿ ಹಾಗೂ ಆ ವಯಸ್ಸಿನಲ್ಲಿ ಹುಡುಗಿಯರಿಗೆ ಸಹಜವಾಗಿ ಇರುವ ಮತ್ಸರದ ಲವಲೇಶವೂ ಇಲ್ಲಂಥ ಆಕೆಯನ್ನು ಕಂಡಾಗ ನನಗೆ ಜನುಮವಿಡೀ ಹುಡುಕುತ್ತಿದ್ದ ಗೆಳತಿ ಸಿಕ್ಕಂತಾಗಿತ್ತು. ತನ್ನ ಕಷ್ಟಗಳಲ್ಲೇ ಹೈರಾಣಾಗಿ ಹೋಗಿದ್ದ ಅಮ್ಮ, ಏನೂ ತಿಳಿಯದ, ಅರ್ಥಮಾಡಿಕೊಳ್ಳಲಾಗದ ತಮ್ಮ -ಇವರಲ್ಲಿ ನನಗೆ ಬೇಕಾದ ಭಾವನಾತ್ಮಕ ವಾತಾವರಣ ಸಿಕ್ಕದೆ ನಾನು ಭಾವನೆಗಳಿಲ್ಲದ ಸೂತ್ರದ ಬೊಂಬೆಯಂತಾಗಿ ಹೋಗಿದ್ದೆ. ಬಡವರು, ಕಷ್ಟದಲ್ಲಿರುವವರು ಸೂಕ್ಷ್ಮ ಮನಸ್ಸಿನವರಾಗಬಾರದು, ಆರ್ದ್ರತೆ, ಭಾವನಾತ್ಮಕತೆ ಎಂಬುವೆಲ್ಲಾ ಬಡವರ ಬಜೆಟ್ಟಿಗೆ ದಕ್ಕದ ಸಂಗತಿಗಳು ಎಂದು ಕಂಡುಕೊಂಡು ಕಲ್ಲು ಮನಸ್ಸಿನವಳಾಗಿದ್ದೆ. ಸುಮ ಸಿಕ್ಕ ಮೇಲೆ ನನ್ನ ಭಾವನೆಗಳಿಗೂ ಬೆಲೆಯಿದೆ ಎನ್ನಿಸತೊಡಗಿತು. ಅಂಥ ವಯಸ್ಸಿನಲ್ಲಿ ಆಕೆಯಲ್ಲಿ ತಾಯಿಯಂತಹ ವ್ಯಕ್ತಿತ್ವ ಹೇಗೆ ಬೆಳೆಯಿತು ಎಂದು ನಾನು ಆಗಾಗ ಯೋಚಿಸುತ್ತಿದ್ದೆ.

ನನ್ನ ಕೌನ್ಸೆಲಿಂಗಿಗೆ ಮೂರು ದಿನಗಳಿವೆ ಎಂದಾಗ ಅಮ್ಮ ಅಲ್ಲಿ ಇಲ್ಲಿ ಕೈಲಾದಲ್ಲೆಲ್ಲಾ ಪ್ರಯತ್ನಿಸಿ ಫೀಸು ಕಟ್ಟುವುದಕ್ಕೆ ಬೇಕಾವ ಹಣವನ್ನು ಹೊಂದಿಸುವ ಪ್ರಯತ್ನ ಕೈ ಬಿಟ್ಟಿದ್ದಳು. ಆಕೆ ಅದೆಷ್ಟೇ ಕಷ್ಟ ಪಟ್ಟರೂ ಫೀಸಿಗೆ ಬೇಕಾದ ದುಡ್ಡಿನ ಅರ್ಧ ಭಾಗವೂ ಸೇರಿರಲಿಲ್ಲ. ಇನ್ನು ಮೆಡಿಸಿನ್ ಮಾಡುವುದೆಂದರೆ ಸುಮ್ಮನೆಯಲ್ಲ, ಕಾಲೇಜು ಫೀಸಿನ ಜೊತೆಗೆ ದೊಡ್ಡ ದೊಡ್ಡ ಪುಸ್ತಕಗಳು.. ಇತರ ಖರ್ಚುಗಳು… ಸರಿ ಡಾಕ್ಟರಾಗಬೇಕೆಂಬ ಗುರಿಗೆ ರಾತ್ರಿಯ ಕನಸಿನಲ್ಲಿ ಬರುವ ಆದೇಶವನ್ನು ಕೊಟ್ಟು ಇದ್ದ ದುಡ್ಡಿನಲ್ಲಿ ಸಿಕ್ಕುವ ವಿದ್ಯಾಭ್ಯಾಸವನ್ನು ಪಡೆದರಾಯಿತು ಎಂದು ತೀರ್ಮಾನಿಸಿದ್ದೆ. ನನ್ನ ಕನಸನ್ನು ನನಸಾಗಿಸಿಕೊಳ್ಳಲು ಬೇಕಾದ ನೆರವು ನೀಡಲಾಗದ ಅಪ್ಪ-ಅಮ್ಮನ ಮೇಲೆ ಸಿಟ್ಟು ಉಕ್ಕಿ ಉಕ್ಕಿ ಬರುತ್ತಿತ್ತು. ಅಪ್ಪನಿಗೆ ಏನೂ ನಾಟವುದಿಲ್ಲ, ಅಮ್ಮನಿಗೆ ಏನೂ ಮಾಡಲಾಗದ ಅಸಹಾಯಕತೆ. ಇನ್ನು ತಮ್ಮನ ವಿದ್ಯಾಭ್ಯಾಸವೂ ನಡೆಯಬೇಕು. ಬಡತನವೆಂಬ ರಕ್ಕಸ ಹೇಗೆ ಕನಸುಗಳೆಂಬ ಅಬೋಧ ಶಿಶುಗಳನ್ನು ಹೊಸಕಿ ಹಾಕುತ್ತದೆ ಎಂದು ರಸವತ್ತಾಗಿ ಕಥೆ ಹೇಳುತ್ತಾ ತಮ್ಮನು ಮಲಗುತ್ತಿದ್ದ ಹಾಗೆ ಆ ಕಥೆಯ ವಿಸ್ತರಣೆಯನ್ನು ಕನಸಲ್ಲಿ ಎಳೆದುಕೊಂಡು ಆ ರಕ್ಕಸನನ್ನು ಸದೆಬಡಿದು ಮೇಲಕ್ಕೇಳುವ ಸಾಹಸ ಮೆರೆದು ಬೆಳಗಾಗೆದ್ದು ಮುಸುರೆ ತಿಕ್ಕುವುದಕ್ಕೆ ಸಿದ್ಧಳಾಗುತ್ತಿದ್ದೆ.

ಅಂದು ವಿಪರೀತ ದುಃಖದಲ್ಲಿದ್ದೆ. ಎರಡು ದಿನ ಕಳೆದರೆ ಸಿಇಟಿ ಕೌನ್ಸೆಲಿಂಗು. ನನ್ನ ಪ್ರತಿಭೆಗೆಯನ್ನು ಪರೀಕ್ಷಿಸಿ ನನಗೆ ನ್ಯಾಯಯುತವಾಗಿ ದಕ್ಕಬೇಕಾದ ವಿದ್ಯಾಭ್ಯಾಸವನ್ನು ಕೊಡುವ ದಿನ. ನನ್ನದು ಮಾತ್ರ, ಯಾವ ಅರ್ಹತೆಯೂ ಇಲ್ಲದಿದ್ದರೂ ಅಪ್ಪನ ಸಂಪಾದನೆ ಎಂಬ ‘ಪ್ರಭಾವಿ ವ್ಯಕ್ತಿ’ಯ ಮುಖ ತೋರಿಸಿ ಬೇಕಾದ ವಿದ್ಯಾಭಾಸದ ಹಕ್ಕನ್ನು ಪಡೆಯುವವರನ್ನು ಅಸಹನೆಯಿಂದ ನೋಡುತ್ತಾ ಕೂರುವ ಕರ್ಮ. ಇನ್ನು ನನಗೆ ಬದುಕಿಡೀ ಇದೇ ವೃತ್ತಿಯಾಗಬಹುದು ಎಂದು ಆಲೋಚಿಸುತ್ತಾ, ಮುಂದೆ ಎಷ್ಟೇ ಕಷ್ಟವಾದರೂ ನನ್ನ ಮಗಳಿಗೆ ಮೆಡಿಕಲ್ ಓದಿಸಬೇಕು ಎಂದು ಯೋಜನೆ ಹಾಕುತ್ತಾ, ಅಪ್ಪನಂತಲ್ಲದ ಗಂಡನನ್ನು ವರಿಸುವ ಕನಸು ಕಾಣುತ್ತಾ ಹೊಸ್ತಿಲ ಮೇಲೆ ಕುಳಿತಿದ್ದೆ. ಮೆಲ್ಲಗೆ ಎದುರು ನಿಂತ ನೆರಳು, ‘ಹಾಯ್, ರಂಜು…’ ಎಂದಂತಾಯ್ತು. ತಲೆ ಎತ್ತಿ ನೋಡಿದೆ, ಸುಮ! ಅಂದು ತಾನೆ ಆಕೆ ಕೌನ್ಸೆಲಿಂಗ್ ಮುಗಿಸಿಕೊಂಡು ತನಗೆ ಸಿಕ್ಕ ಮೆಡಿಕಲ್ ಸೀಟಿನ ಆರ್ಡರ್ ಕಾಪಿ, ಒಂದು ಪೊಟ್ಟಣದಲ್ಲಿ ಸ್ವೀಟು ಹಿಡಿದು ಬಂದಿದ್ದಳು. ಕಾಟಾಚಾರದ ಹೆಲೋ, ಹಾಯ್‌ಗಳು ಮುಗಿದ ಮೇಲೆ ಆಕೆ ನನ್ನ ಕೌನ್ಸೆಲಿಂಗಿಗೆ ಡಿಡಿ ಮಾಡಿಸಿಯಾಯ್ತಾ ಎಂದು ಕೇಳಿದಳು. ನನ್ನ ಪರಿಸ್ಥಿತಿಯ ಅರಿವಿದ್ದ ಆಕೆಗೆ ವಿವರಿಸಿ ಹೇಳುವುದು ಕಷ್ಟವಾಗಲಿಲ್ಲ. ಎರಡು ಕ್ಷಣ ಸುಮ್ಮನಿದ್ದ ಆಕೆ ಒಡನೆಯೇ ಸರಬರನೆ ತನ್ನ ಪುಟ್ಟ ವ್ಯಾನಿಟಿ ಬ್ಯಾಗಿನಿಂದ ಚೆಂದದ ಮೊಬೈಲ್ ತೆಗೆದುಕೊಂಡು ಕೊಂಚ ಮರೆಗೆ ಹೋಗಿ ಯಾರಿಗೋ ಕರೆ ಮಾಡಿದಳು. ಎರಡು ನಿಮಿಷ ಮಾತಾಡಿದವಳೇ ನನ್ನ ಬಳಿಗೆ ಬಂದು ಮೊಬೈಲ್ ಕೈಯಲ್ಲಿ ತುರುಕಿ, ‘ನಮ್ಮಣ್ಣ… ಮಾತಾಡಬೇಕಂತೆ’ ಅಂದ್ಳು.

ನಾನು ಗಾಬರಿಯಾಗಿ ಏನು ಮಾತಾಡುವುದು ಎಂದು ತೋಚದೆ, ಒಣಗಿದ ಗಂಟಲಿನಿಂದ ಪ್ರಯಾಸ ಪಟ್ಟು ಹೊರಡಿಸಲು ಸಾಧ್ಯವಾದದ್ದು ‘ಹೆಲೋ’ ಎಂಬಂತೆ ಕೇಳಿಸುವ ಶಬ್ಧವನ್ನು ಮಾತ್ರ. ‘ಹ್ಹ ಹೆಲೋ ರಂಜಿತಾನಾ? ನನ್ನ ಹೆಸರು ಸುನೀಲ್. ನಿಮ್ಮಮ್ಮ ಇದ್ದಾರಾ ಮನೆಯಲ್ಲಿ..’ ಕೇಳಿದ್ದೆ ನೀನು. ಮೊದಲ ಮಾತಲ್ಲೇ ನಮ್ಮಿಬ್ಬರ ನಡುವಿನ ಅಪರಿಚಿತತೆಯ ಗೋಡೆಯನ್ನು ಕೆಡವಿ ಹಾಕಿದ್ದೆ. ನಾಲ್ಕು ನಿಮಿಷ ಮಾತಾಡುವಷ್ಟರಲ್ಲಿ ಜಗತ್ತಿನಲ್ಲಿ ನೀನೊಬ್ಬನಿದ್ದರೆ ನನಗೆ ಯಾವ ಅಂಜಿಕೆಯೂ ಇಲ್ಲ ಎನ್ನುವ ಧೈರ್ಯವನ್ನು ಮೂಡಿಸಿಬಿಟ್ಟಿದ್ದೆ.

(ಮುಂದಿನ ಸಂಚಿಕೆಗೆ)


Blog Stats

  • 71,866 hits
ನವೆಂಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12
3456789
10111213141516
17181920212223
24252627282930

Top Clicks

  • ಯಾವುದೂ ಇಲ್ಲ