ಕಲರವ

Archive for ಮಾರ್ಚ್ 2008

ಹೌದು,
ಫೆಬ್ರವರಿ ತಿಂಗಳ ಸಂಚಿಕೆಯನ್ನು ಹೊರತಂದ ದಣಿವು ಆರುವುದರೊಳಗೆ ಮನಸ್ಸು ಮಾರ್ಚ್ ತಿಂಗಳ ಸಂಚಿಕೆಯ ಅಡುಗೆ ಮಾಡಲು ಸಿದ್ಧವಾಗಿದೆ.

ಕಳೆದ ಸಂಚಿಕೆಯಲ್ಲಿ ಪ್ರೀತಿ ಅಂದರೇನು ಎನ್ನುವ ಎಂದೂ ಉತ್ತರ ಕಾಣಲು ಸಾಧ್ಯವಿಲ್ಲದ ಪ್ರಶ್ನೆಯನ್ನು ಬೆನ್ನತ್ತಿ ಹೋದ ನಮ್ಮ ಪ್ರಯತ್ನವನ್ನು ಮೆಚ್ಚಿ ಹಲವರು ಬೆನ್ನು ತಟ್ಟಿದ್ದಾರೆ. ಆ ಪ್ರೋತ್ಸಾಹದ ಹುಮ್ಮಸ್ಸಿನಲ್ಲಿ ಈ ಬಾರಿ ನಮ್ಮ ಮುಖಪುಟದ ಚರ್ಚೆಯ ವಿಷಯವಾಗಿ ಆರಿಸಿಕೊಂಡಿರುವುದು, ‘ಫ್ರೆಂಡ್ ಶಿಪ್’. ಏನೀ ಗೆಳೆತನದ ಗಮ್ಮತ್ತು? ಏನಿದರ ಮರ್ಮ? ನಾವೊಂದಿಷ್ಟು ಮಂದಿ ಗೆಳಯರು ಕಲೆತು ಚರ್ಚೆ ಮಾಡಿ ಒಂದಷ್ಟು ಬರಹಗಳನ್ನು ತಯಾರು ಮಾಡಲಿದ್ದೇವೆ.

ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನಿಮ್ಮ ಪ್ರಕಾರ ಗೆಳೆತನ ಅಂದರೆ ಏನು? ನಿಮ್ಮ ಜೀವನದಲ್ಲಿ ಕಂಡ ಗೆಳೆತನದ ವಿವಿಧ ಮಗ್ಗಲುಗಳು ಯಾವುವು? ತಿಳಿಸ್ತೀರಲ್ಲ?


-ಸಂಪಾದಕ

Technorati Tags: ,

ನಮ್ಮ ಪತ್ರಿಕೆಯ ಮುದ್ರಣ ಪ್ರತಿ ಹೇಗಿರುತ್ತದೆ ಎಂದು ತಿಳಿಯುವ ಕುತೂಹಲವಿದೆಯೇ? ಮುದ್ದಾದ ಬ್ಲಾಗಿನ ಹಾಗೆಯೇ ಕಾಗದದ ಮೇಲೆ ಹೇಗೆ ಮುದ್ರಿತವಾಗುತ್ತದೆ ಎಂಬುದನ್ನು ತಿಳಿಯಬೇಕೆ ಹಾಗಾದರೆ ಈ ಕೊಂಡಿಯನ್ನು ಎಡತಾಕಿ. ಇಲ್ಲಿಂದ ನೀವು ‘ಸಡಗರ’ ಪತ್ರಿಕೆಯ ಫೆಬ್ರವರಿ ಸಂಚಿಕೆಯ ಪಿ.ಡಿ.ಎಫ್ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಂದು ಓದಬಹುದು.

– ಸಂಪಾದಕ

ಟ್ಯಾಗ್ ಗಳು: ,

ಭಯೋತ್ಪಾದನೆ, ಭಯೋತ್ಪಾದಕ ಎಂಬ ಪತ್ರಿಕೆಗಳಲ್ಲಿ ಓದಿದ, ಸುದ್ದಿ ವಾಹಿನಿಗಳಲ್ಲಿ ಕೇಳಿದ ಪದಗಳು ನಮ್ಮ ಪಕ್ಕದಲ್ಲೇ ಕುಳಿತು ನಮ್ಮ ಕಿವಿಗಳೊಳಗೇ ಪಿಸುಗುಟ್ಟಿದ ಅನುಭವವಾಗುತ್ತಿದೆ.editor copy.jpg ದೂರದಲ್ಲೆಲ್ಲೋ ಅಲ್ಲ, ಇಲ್ಲೇ ನಮ್ಮ ದಾವಣಗೆರೆಯಲ್ಲಿ ಇಬ್ಬರು ಭಯೋತ್ಪಾದಕರು ಪೋಲೀಸರಿಗೆ ಸಿಕ್ಕುಬಿದ್ದಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ನಂತಹ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿನ ವಿದ್ಯಾರ್ಥಿಗಳ ನಡುವೆಯೇ ಭಯೋತ್ಪಾದನೆಯ ಬೀಜಗಳು ಮೊಳೆತಿರುವುದು ಬೆಳಕಿಗೆ ಬರುತ್ತಲಿದೆ. ನಮ್ಮ ಮಧ್ಯೆ ಓಡಾಡಿಕೊಂಡಿದ್ದ ವ್ಯಕ್ತಿಗಳು ನಮ್ಮ ನೆತ್ತರನ್ನು ನೆಲದ ಮೇಲೆ ಹರಿಸುವ ಹೊಂಚು ಹಾಕುತ್ತಿದ್ದುದನ್ನು ಅರಿಯದ ಹಾಗಿದ್ದ ನಮಗೀಗ ಬೆನ್ನ ಹುರಿಯಗಂಟ ನಡುಕ! ಹೌದು ಭಯೋತ್ಪಾದಕ, ನಮ್ಮ ಮನೆಯ ಹೊಸ್ತಿಲು ದಾಟಿ ಒಳಬಂದಿದ್ದಾನೆ!

ಈ ಸಂದರ್ಭದಲ್ಲಿ ದೇಶದ ಸಾಮಾನ್ಯರಾದ ನಾವು ಯಾವ ರೀತಿ ಪ್ರತಿಕ್ರಿಯಿಸಬೇಕು? ಮಾಧ್ಯಮಗಳ ಅತಿರಂಜಿತ ವರದಿಗಳನ್ನು, ರಾಜಕಾರಣಿಗಳ ಎಂದಿನ ಮತೀಯ ಓಲೈಕೆಯನ್ನು ಯಾವ ರೀತಿಯಲ್ಲಿ ಎದುರಿಸಬೇಕು? ಜನಸಾಮಾನ್ಯರು ಯಾವ ನಿಲುವಿಗೆ ಬರಬೇಕು? ಈ ಬಗ್ಗೆ ಕ್ಷಕಿರಣ ಬೀರುವ ಒಂದು ಹಳೆಯ ಅಪ್ರಕಟಿತ ಬರಹ ಇಲ್ಲಿದೆ:

ನಮ್ಮದೇ ಶ್ರದ್ಧೆ, ಮೂಢನಂಬಿಕೆ, ಅಭಿಮಾನ, ತರ್ಕವಿಲ್ಲದ ಹೆಮ್ಮೆ, ಸರಿಪಡಿಸಲಾಗದ ನ್ಯೂನ್ಯತೆಗಳನ್ನಿಟ್ಟುಕೊಂಡೂ ನಾವು ಅದು ಹೇಗೆ ಇತರರ ನಂಬಿಕೆಗಳನ್ನು, ಹೆಮ್ಮೆಯನ್ನು ಜರಿಯುವ, ಪ್ರವಾದಿಯಾಂತೆ ಬೋಧಿಸುವ ಧೈರ್ಯವನ್ನು ಪಡೆಯುತ್ತೇವೆ ಎಂಬುದೇ ಸೋಜಿಗ! ಮನುಷ್ಯನ ಭಾವಲೋಕದ ಅತಿಸೂಕ್ಷ್ಮ ಅಂಶವಾದ ಧಾರ್ಮಿಕ ನಂಬಿಕೆಗಳ ವಿಚಾರವಾಗಿ ಮಾತನಾಡುವಾಗಲಂತೂ ಈ ಸೋಜಿಗ ಮತ್ತಷ್ಟು ಗಾಢವಾಗುತ್ತದೆ. ಒಂದು ಧರ್ಮವನ್ನು ಒಪ್ಪಿಕೊಂಡವನಿಗೆ ತನ್ನದೇ ಧರ್ಮ ಶ್ರೇಷ್ಠ ಎನ್ನಿಸುತ್ತದೆ. ಹಾಗೆ ಆತ ಭಾವಿಸುವಾಗ ತನ್ನ ವೈಯಕ್ತಿಕ ಅಹಂ ಕೂಡಾ ಸೇರಿಕೊಂಡು ತಾನು ಈ ಧರ್ಮೀಯನಾಗಿರುವುದಕ್ಕೇ ಈ ಧರ್ಮ ಶ್ರೇಷ್ಠ ಎಂಬ ಭಾವವೂ ಅದರಲ್ಲಿ ಬೆರೆತಿರುತ್ತದೆ. ಹಾಗಾಗಿ ತನ್ನ ಧರ್ಮದ ಉಗಮದ ಬಗ್ಗೆ, ಅದರ ಬೋಧನೆಯ ಬಗ್ಗೆ ಏನನ್ನೂ ಸಹ ತಿಳಿಯದವನು ತನ್ನ ಧರ್ಮದಲ್ಲಿನ ಅನೀತಿಯ ಬಗ್ಗೆ ಪ್ರಶ್ನೆಯೆದ್ದಾಗ ತಕ್ಷಣ ಅದನ್ನು ಪರಾಮರ್ಶಿಸುವ, ತಪ್ಪನ್ನು ಒಪ್ಪಿ ತಿದ್ದಿಕೊಳ್ಳುವ ಯೋಚನೆಯನ್ನು ಮಾಡುವ ಬದಲು ಅದನ್ನು ಸಮರ್ಥಿಸಿಕೊಳ್ಲಲು ಪ್ರಯತ್ನಿಸುತ್ತಾನೆ. ಒಬ್ಬ ಹಿಂದುವಿಗೆ ಮನುಸ್ಮೃತಿಯಲ್ಲಿ ಸಮಾಜ ವಿಂಗಡಣೆಯಿದೆ, ಅಸಮಾನತೆಯಿದೆ ಎಂದು ಹೇಳಿ ನೋಡಿ, ಆತ ಮನುಸ್ಮೃತಿ ಸೂಚಿಸುವ ಬೇರೆ ಯಾವ ಆಚರಣೆಯನ್ನು ಪಾಲಿಸದಿದ್ದರೂ, ಅಸಲಿಗೆ ಮನುಸ್ಮೃತಿಯನ್ನೇ ಓದಿರದಿದ್ದರೂ ‘ಜಾತಿ ಪದ್ಧತಿ ಒಂದು ಕಾಲದಲ್ಲಿ ಸಮಾಜದ ಸಮರ್ಥ ವ್ಯವಸ್ಥೆಯಾಗಿತ್ತು?’ ಎಂದು ಸಮರ್ಥನೆಗೆ ತೊಡಗುತ್ತಾನೆ. ಇದೇ ಉದಾಹರಣೆಯನ್ನು ಎಲ್ಲಾ ಧರ್ಮಗಳಿಗೂ, ವಿಜ್ಞಾನವೇ ಸರ್ವಸ್ವ, ಕಮ್ಯುನಿಸಂ ಒಂದೇ ಜಗತ್ತಿನ ಉಳಿವಿಗೆ ಆಧಾರ ಎನ್ನುವವರಿಗೆ ಅನ್ವಯಿಸಬಹುದು.

ಹೀಗೆ ಯೋಚಿಸಲು ಕಾರಣವಾದದ್ದು ವಿಜಯ ಕರ್ನಾಟದಲ್ಲಿ ಪ್ರತಿಶನಿವಾರ ‘ಬೆತ್ತಲೆ ಜಗತ್ತು’ ಎಂಬ ಅಂಕಣ ಬರೆಯುವ ಪ್ರತಾಪ್ ಸಿಂಹರ ಒಂದು ಲೇಖನ. ನವೆಂಬರ್ ೨೪ರ ಲೇಖನದ ಶೀರ್ಷಿಕೆ ” ಭಾರತೀಯ ಮುಸ್ಲಿಮರಿಗೆ ಇವರೇಕೆ ಮಾದರಿ ವ್ಯಕ್ತಿಗಳಾಗಲ್ಲ? “. ಮುಸ್ಲಿಂ ಸಮಾಜದಲ್ಲಿ ನಾನಾ ಕ್ಷೇತ್ರಗಳಲ್ಲಿ ಹೆಸರು ಮಾಡಿದ ಮಹನೀಯರು ಕಣ್ಣ ಮುಂದಿದ್ದರೂ ಮುಸಲ್ಮಾನರು ಮದನಿ, ಮಸೂದ್, ಮಲ್ಲಿಕ್, ಮಸ್ತಾನ್‌ಗಳಂತಹ ದೇಶದ್ರೋಹಿ, ಭಯೋತ್ಪಾದಕರನ್ನು ಮಾದರಿ ವ್ಯಕ್ತಿಗಳಾಗಿ ತೆಗೆದುಕೊಳ್ಳುತ್ತಾರೆ ಎಂಬುದು ಅವರ ಪ್ರಶ್ನೆ. ಈ ಪ್ರಶ್ನೆಗೆ ಕಾರಣವಾಗಿದ್ದು ತಸ್ಲೀಮಾ ನಸ್ರೀನ್ ಎಂಬ ಬಾಂಗ್ಲಾ ಲೇಖಕಿಯ ‘ದ್ವಿಖಂಡಿತೋ’ ಪುಸ್ತಕವನ್ನು ವಿರೋಧಿಸಿ ಕೊಲ್ಕತ್ತಾದಲ್ಲಿ ‘ಆಲ್ ಇಂಡಿಯಾ ಮೈನಾರಿಟಿ ಫ್ರಂಟ್’ ನಡೆಸಿದ ದಾಂಧಲೆ. ಅದಕ್ಕೂ ಮುನ್ನ ಹೈದರಾಬಾದಿನಲ್ಲಿ ತಸ್ಲಿಮಾಳ ಮೇಲೆ ನಡೆದ ಹಲ್ಲೆ ಯತ್ನ. ಇದನ್ನು ಉದಾಹರಿಸಿ ಲೇಖಕರು ಮುಸ್ಲೀಮರು ಹೀಗೇಕೆ ಎಂದು ಪ್ರಶ್ನಿಸುತ್ತಾರೆ.

ತಸ್ಲಿಮಾ ಪ್ರಕರಣದ ಬಗ್ಗೆ ಮಾತನಾಡುವ ಮುನ್ನ ಈಕೆ ಯಾರು, ಈಕೆಯ ಬರಹದಲ್ಲಿ ಮುಸ್ಲಿಮರನ್ನು ಕೆಣಕುವ ಅಂಶವಾದರೂ ಯಾವುದು ಎಂಬುದನ್ನು ತಿಳಿಯೋಣ.೧೯೬೨ರಲ್ಲಿ ಬಾಂಗ್ಲಾದೇಶದಲ್ಲಿ ಜನಿಸಿದಳು ತಸ್ಲೀಮಾ ನಸ್ರೀನ್. ನಿಮಗೆ ಆಶ್ಚರ್ಯವಾಗಬಹುದು, ತನ್ನ ಬರವಣಿಗೆಗಿಂತ ಹೆಚ್ಚಾಗಿ ವಿವಾದದಿಂದಲೇ ಪ್ರಚಾರ ಪಡೆದ ತಸ್ಲೀಮಾ ಮೈಮನ್ ಸಿಂಗ್ ಮೆಡಿಕಲ್ ಕಾಲೇಜಿನಲ್ಲಿ ಮೆಡಿಸಿನ್ ಓದಿದ್ದಳು. ಕೆಲವು ವರ್ಷ ಸರಕಾರಿ ವೈದ್ಯಯಾಗಿಯೂ ಸಹ ಕೆಲಸ ಮಾಡಿದ್ದಳು. ಆದರೆ ಆಕೆ ಅನಂತರ ಆಯ್ದುಕೊಂಡದ್ದು ಹೈಸ್ಕೂಲ್ ದಿನಗಳಿಂದ ತನ್ನ ಒಡನಾಡಿಯಾಗಿದ್ದ ಬರವಣಿಗೆಯನ್ನು. ತನ್ನ ಬರವಣಿಗೆಯ ಕಾರಣದಿಂದ ಆಕೆ ದೇಶ ತೊರೆದು ಅಲೆದಾಡಬೇಕಾಯಿತು. ಭಾರತಕ್ಕೆ ಬಂದ ನಂತರ ಆಕೆ ಅನೇಕ ವರ್ಷಗಳಿಂದಲೂ ಕೊಲ್ಕತ್ತಾದಲ್ಲಿ ನೆಮ್ಮದಿಯಿಂದಿದ್ದಳು. ಅಲ್ಲಿ ಇಲ್ಲಿ ಕೆಲವು ಧರ್ಮಾಂಧ ಸಂಘಟನೆಗಳು ಉಡಾಫೆಯಿಂದ ಆಕೆಯ ಮೇಲೆ ಫತ್ವಾ ಹೊರಡಿಸುತ್ತಿದ್ದದ್ದು ಬಿಟ್ಟರೆ ಸಾಮಾನ್ಯ ಮುಸಲ್ಮಾನರು ಬೀದಿಗಿಳಿದು ತಸ್ಲಿಮಾಳನ್ನು ದೇಶದಿಂದ ಹೊರಕ್ಕೆ ಅಟ್ಟಬೇಕು ಅಂತ ಒತ್ತಾಯಿಸಿರಲಿಲ್ಲ. ಹೈದರಾಬಾದಿನಲ್ಲಿ ಆಕೆಯ ಮೇಲೆ ಹಲ್ಲೆಗೆ ಮುಂದಾದ ಎಂಐಎಂನ ಸದಸ್ಯರು ಸಹ ಅದನ್ನು ರಾಜಕೀಯ ಲಾಭಕ್ಕಾಗಿ ಮಾಡಿದ್ದರೇ ವಿನಃ ಅವರ ಕೃತ್ಯದ ಹಿಂದೆ ಇಡೀ ಮುಸ್ಲಿಂ ಸಮಾಜದ ಬೆಂಬಲವಿರಲಿಲ್ಲ. ಆದರೆ ಕೊಲ್ಕತ್ತಾದಲ್ಲಿ ಬೀದಿಗಿಳಿದ ಮುಸಲ್ಮಾನರು ಆಕೆಯನ್ನು ಗಡಿಪಾರು ಮಾಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂಬ ಎಚ್ಚರಿಕೆಯನ್ನು ರವಾನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಆದರೆ ಇಲ್ಲೊಂದು ಸೂಕ್ಷ್ಮವಾದ ಅಂಶವನ್ನು ಗಮನಿಸಬೇಕಿದೆ. ನಿಜವಾಗಿಯೂ ತಸ್ಲಿಮಾಳ ‘ದ್ವಿಖಂಡಿತೊ’ ಪುಸ್ತಕದಲ್ಲಿ ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ನೋವಾಗುವ ಅಂಶವಿದ್ದದ್ದೇ ಆದರೆ ಅದು ಬಿಡುಗಡೆಯಾಗಿ ಅನಾಮತ್ತು ನಾಲ್ಕು ವರ್ಷಗಳ ನಂತರವೇಕೆ ಈ ಹೋರಾಟ, ಹಾರಾಟ? ಅಲ್ಲಿಯವರೆಗೆ ಯಾವ ಮುಸಲ್ಮಾನರ ಧಾರ್ಮಿಕ ನಂಬಿಕೆಗೂ ಪೆಟ್ಟಾಗಿರಲಿಲ್ಲವೇ? ಕಣ್ಣಿಗೆ ಕಾಣುವ ಘಟನೆಯ ಹಿಂದಿನ ರಹಸ್ಯವೇ ಬೇರೆ. ತಸ್ಲಿಮಾಳ ವಿರುದ್ಧ ಘೋಷಣೆ ಕೂಗುತ್ತಾ ಬೀದಿಗಿಳಿದವರಲ್ಲಿ ಅಸಲಿಗೆ ಎಷ್ಟು ಮಂದಿ ಆಕೆಯ ಪುಸ್ತವನ್ನು ಓದಿರಬಹುದು, ಊಹಿಸಿ… ನಂದಿಗ್ರಾಮದಲ್ಲಿ ಮಾರಣಹೋಮವನ್ನೇ ನಡೆಸಿದ ಪಶ್ಚಿಮ ಬಂಗಾಳದ ಸರಕಾರ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ತಸ್ಲಿಮಾಳನ್ನು ನೆಪವಾಗಿ ಬಳಸಿಕೊಂಡಿರಬಹುದಲ್ಲವೇ? ಇಲ್ಲವಾದರೆ ನಂದಿಗ್ರಾಮದ ಕ್ರೌರ್ಯ ಇನ್ನೂ ಹೊಗೆಯಾಡುತ್ತಿರುವ ಸಮಯಕ್ಕೆ ಸರಿಯಾಗಿ ಮುಸ್ಲಿಮರ ಶ್ರದ್ಧೆಗೆ ಘಾಸಿಯಾದದ್ದು ಹೇಗೆ?

ಇಷ್ಟು ಸಣ್ಣ ಸಂಗತಿಯನ್ನು ಅರಿಯಲಾಗದ ನಾವು ಯಾವುದೋ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳ ಕೆಲಸವನ್ನು ಒಂದಿಡೀ ಸಮಾಜದ ಮೇಲೆ ಹೊರೆಸುವ ತಪ್ಪನ್ನೇಕೆ ಮಾಡುತ್ತೇವೆ? ಆಧುನಿಕ ಶಿಕ್ಷಣದಿಂದ ಮನುಷ್ಯನ ಧಾರ್ಮಿಕ ನಂಬಿಕೆಗಳ ಮೇಲೆ ಜಿಗುಟು ಮೋಹ ಅಳಿಯುತ್ತದೆ ಎಂದು ನಾವೆಲ್ಲಾ ಭಾವಿಸಿದ್ದು ಬಹುಶಃ ತಪ್ಪೇನೋ. ಮನುಷ್ಯನ ಸುಪ್ತಪ್ರಜ್ಞೆಯಲ್ಲಿ, ಆತನ ಅನುಭವ ಲೋಕದಲ್ಲಿ ದಾಖಲಾದ ಧಾರ್ಮಿಕ ನಂಬಿಕೆ, ಸ್ವ-ಧರ್ಮದ ಬಗೆಗಿನ ಹೆಮ್ಮೆಯನ್ನು ಹೋಗಲಾಡಿಸಲು ನಮ್ಮ ಆಧುನಿಕ ಶಿಕ್ಷಣವೂ ವಿಫಲವಾಗುತ್ತಿದೆಯೇನೊ ಅನ್ನಿಸುತ್ತದೆ.ಇದಕ್ಕೆ ಕಾರಣವಿಲ್ಲದಿಲ್ಲ. ಪೆನ್ಸಿಲ್ವೇನಿಯಾ ಯೂನಿವರ್ಸಿಟಿಯ ಮಾರ್ಕ್ ಸೇಜ್‌ಮನ್ ನಡೆಸಿದ ಅಧ್ಯಯನದ ಪ್ರಕಾರ ಭಯೋತ್ಪಾದನೆಯ ಕೃತ್ಯಗಳನ್ನು ಯೋಜಿಸುವವರು ಅನಕ್ಷರರಲ್ಲ, ಮದರಸಾಗಳಲ್ಲಿ ಬೆಳೆದವರಲ್ಲ ವಿಶ್ವದ ಪ್ರತಿಷ್ಠಿತ ಯೂನಿವರ್ಸಿಟಿಗಳಲ್ಲಿ ಪದವಿ ಪಡೆದಿರುವವರು. ಇಂದಿಗೂ ಎಷ್ಟು ಮಂದಿ ಸುಶಿಕ್ಷಿತ ಹಿಂದೂಗಳು ಜಾತಿಪದ್ಧತಿಯನ್ನು, ಅಸ್ಪೃಶ್ಯತೆಯನ್ನು ಸಮರ್ಥಿಸುತ್ತಾರೆ ಎಂಬುದನ್ನು ಕೇಳಿ ನೋಡಿ.

ಇಂದು ಭಾರತ ನಿಜಕ್ಕೂ ಸೆಕ್ಯುಲರ್! ಎಲ್ಲಾ ಧರ್ಮಗಳು, ಜಾತಿಗಳು, ಉಪಜಾತಿ, ಒಳಜಾತಿಗಳು ಸಮಾನವಾದ ಅಗ್ರೆಶನ್ ಹೊಂದಿವೆ. ಸಣ್ಣ ಸಣ್ಣ ವಿಚಾರಗಳಿಗೂ ಜನರ ಭಾವನೆಗಳು ಕೆರಳಲ್ಪಡುತ್ತವೆ. ಒಂದು ಮಸೀದಿಯನ್ನು ಕೆಡವಿ ರೈಲು ಕಂಬಿಹಾಕುವುದು ಎಷ್ಟು ಅಪಾಯಕಾರಿಯೋ, ರಸ್ತೆ ಮಧ್ಯದಲ್ಲಿರುವ ಅನಾಮಧೇಯ ‘ಉದ್ಭವ’ ಲಿಂಗ, ಬಸವಮೂರ್ತಿಗಳನ್ನು ಕಿತ್ತುಹಾಕು ರಸ್ತೆಗೆ ಟಾರು ಹಾಕುವುದೂ ಅಷ್ಟೇ ಅಸಾಧ್ಯದ ಕೆಲಸ. ಮುಸಲ್ಮಾನರ ಓಲೈಕೆಯ ಬಗ್ಗೆ ಮಾತನಾಡುವ ನಾವು ನಮ್ಮ ಕಣ್ಣೆದುರೇ ಲಿಂಗಾಯತು, ಒಕ್ಕಲಿಗರ ಓಲೈಕೆಗಳು, ರಾಜಕೀಯಗಳು ನಡೆಯುವುದನ್ನು ನೋಡುವುದಿಲ್ಲವೇ? ಒಬ್ಬರ ಹುಳುಕನ್ನು ಒಬ್ಬರು ಹೆಕ್ಕುತ್ತಾ ಕೂರುವುದೇ ಬೆಳವಣಿಗೆಯ ಲಕ್ಷಣವೇ?


Technorati : , , ,

ದೂರದಲ್ಲೆಲ್ಲೋ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿದೆ ಎಂದು ಕೇಳಿ ಬರುತ್ತಿದ್ದ ಭಯೋತ್ಪಾದನೆ, ಅಲ್ಲೆಲ್ಲೋ ಒರಿಸ್ಸಾ, ಗುಜರಾಥದಲ್ಲಿ ಬಂಧಿತರಾಗುತ್ತಿದ್ದ ಉಗ್ರರು, ಅಲ್ಲೆಲ್ಲೋ ಮುಂಬೈ, ಹೈದರಾಬಾದುಗಳ ಬಳಿಯಿಂದ ಕೇಳಿಬರುತ್ತಿದ್ದ ಬಾಂಬ್ ಸ್ಫೋಟದ ಸದ್ದು ಇದೀಗ ನೇರವಾಗಿ ನಮ್ಮ ನೆಲದೊಳಗಿಂದಲೇ ಕೇಳಿಬರಲಾರಂಭಿಸಿದೆ. ಮತ್ತೆ ಅದೇ ಬಗೆಯ ಪ್ರತಿಕ್ರಿಯೆಗಳು. ಮಾಧ್ಯಮಗಳ ರಂಜಿತ ವರದಿ, ರಾಜಕಾರಣಿಗಳ ‘ಬೆಣ್ಣೆಯಿಂದ ಕೂದಲು ತೆಗೆಯುವ’ ನಾಜೂಕಿನ ಉತ್ತರಗಳು, ಶಂಕರ್ ಬಿದರಿಯವರಂತಹ ಪೋಲೀಸರಿಂದಲೇ ತದ್ವಿರುದ್ಧವಾದ ಹೇಳಿಕೆಗಳು, ಬುದ್ಧಿಜೀವಿಗಳಲ್ಲಿ ಉಸಿರಾಡಿದರೂ ಕೇಳುವಂತಹ ಸಂಶಯಾಸ್ಪದವಾದ ಮೌನ! ಇವೆಲ್ಲಾ ಎಲ್ಲೋ ದೂರದಲ್ಲಿ ನಡೆಯುತ್ತಿದ್ದ ಹಾಗೆಯೇ ಇಲ್ಲೂ ನಡೆಯುತ್ತಿವೆ.

ಈ ಎಲ್ಲಾ ಪ್ರಕ್ರಿಯೆಗಳ ನಡುವೆ ತೂರಿ ಬರುತ್ತಿರುವ ಸಿದ್ಧ ಮಾದರಿಯ ವಾದಗಳ ಬಗ್ಗೆ ಕೊಂಚ ನನ್ನ ಗಮನ ಹರಿದಿದೆ. ‘ಮುಸ್ಲೀಮರು ಯಾಕೆ ಹೀಗೆ? ಅವರು ಬದಲಾಗೋದು ಯಾವಾಗ?’ ಎಂದು ಪ್ರಾಮಾಣಿಕವಾಗಿ ಕಾಳಜಿ ವ್ಯಕ್ತ ಪಡಿಸುವವರು ಮಂಡಿಸುವ ವಾದದ ಪ್ರಕಾರ ಮುಸ್ಲೀಮರು ಬಹುಸಂಖ್ಯಾತರಾಗಿರುವ ಯಾವ ರಾಷ್ಟ್ರಗಳೂ ನೆಮ್ಮದಿಯಲ್ಲಿಲ್ಲ. ಭಾರತದಲ್ಲಿರುವ ಮುಸ್ಲೀಮರು ಎಂದಿಗೆ ಧರ್ಮಕ್ಕಿಂತ ದೇಶ ದೊಡ್ಡದು ಎಂದು ಭಾವಿಸತೊಡಗುತ್ತಾರೋ ಅಂದಿಗೆ ಇಲ್ಲಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ.wqw.png

ಇಸ್ಲಾಂ ಹೆಸರಿನಲ್ಲಿ ನಡೆಯುತ್ತಿರುವ ಮತಾಂಧತೆಯ ಕೃತ್ಯಗಳ್ಯಾವುವೂ ಕ್ಷಮಾರ್ಹವಲ್ಲ. ಧರ್ಮಾಂಧತೆ ಎಂದಿಗೂ ಮಾನವತೆಗೆ ವಿರೋಧಿಯಾದದ್ದು. ಅಸಲಿಗೆ ಒಂದು ಪಂಥ, ತತ್ವ, ಸಿದ್ಧಾಂತದ ಹೆಸರಿನಲ್ಲಿ ಬೇರೊಬ್ಬ ಮನುಷ್ಯನ ರಕ್ತ ಹರಿಸುವುದು ಎಂದಿಗೂ ಸಮ್ಮತವಾದದ್ದಲ್ಲ. ಎಲ್ಲಾ ತತ್ವಗಳಿಗಿಂತ ಮಾನವೀಯತೆ ಮೇಲು. ಈಗ ನಮ್ಮ ಚರ್ಚೆಯ ವಿಷಯಕ್ಕೆ ಬರುವುದಾದರೆ, ಭಾರತದ ಮುಸ್ಲೀಮರು ಎಂದಿಗೂ ದೇಶವನ್ನು ಧರ್ಮಕ್ಕಿಂತ ದೊಡ್ಡದು ಎಂದು ಭಾವಿಸುವುದಿಲ್ಲ ಹಾಗಾಗಿ ಅವರಿಗೆ ಶತೃ ದೇಶದ ಬಗ್ಗೆ ಯಾವಾಗಲೂ ಮನಸ್ಸಿನಲ್ಲಿ ಸಾಫ್ಟ್ ಕಾರ್ನರ್ ಇರುತ್ತದೆ, ಎನ್ನುವುದು ಕೆಲವರ ವಾದ. ಈ ದೇಶ ಹಾಗೂ ಧರ್ಮದ ವಿಚಾರವನ್ನೇ ಗಮನಿಸೋಣ. ನಾವು ಮುಸ್ಲೀಮರನ್ನು ಇನ್ನೂ ವಿದೇಶಿಯರು, ಆಕ್ರಮಣಕಾರರು ಎಂದು ಪರಿಗಣಿಸಿ ಮಾತಾಡತೊಡಗಿದರೆ ಇಂತಹ ನಿರ್ಧಾರಗಳಿಗೆ ಬರಲು ಸಾಧ್ಯ. ನಾವು ಎಂದೂ ಮುಸ್ಲೀಮರನ್ನು ನಮ್ಮ ಹಾಗೆಯೇ ದೇಶದ ಪ್ರಜೆಗಳು, ನಮ್ಮ ಹಾಗೆಯೇ ದೇಶದ ಮೇಲೆ ಹಕ್ಕುಳ್ಳವರು ಎಂದು ಭಾವಿಸಿದ್ದೇವೆಯೇ? ವೀಸಾದ ಮೇಲೆ ಕೆಲಸಕ್ಕೆ ಅಥವಾ ವಿದ್ಯಾಭ್ಯಾಸಕ್ಕೆ ಬಂದು ತಮ್ಮ ಬೇರುಗಳನ್ನೆಲ್ಲಾ ತಮ್ಮ ದೇಶದಲ್ಲೇ ಉಳಿಸಿಕೊಂಡು ತಮ್ಮ ನಿಷ್ಠೆಯನ್ನೆಲ್ಲಾ ತಮ್ಮ ದೇಶಕ್ಕೇ ಧಾರೆಯೆರೆಯುತ್ತ ಕೊನೆಗೊಂದು ದಿನ ತಮ್ಮ ದೇಶಕ್ಕೆ ವಾಪಸಾಗುವ ಪ್ರವಾಸಿಗರ ಹಾಗೆ ಮುಸ್ಲೀಮರನ್ನು ಕಾಣುವ ದೃಷ್ಟಿ ಬದಲಾಯಿಸಿಕೊಳ್ಳದೆ ಹೋದಲ್ಲಿ ಅವರಿಗೆಂದೂ ಭಾರತೀಯರು ಎಂಬ ಮನ್ನಣೆ ದೊರೆಯುವುದಿಲ್ಲ.

ಇನ್ನು ಭಾರತದ ಮುಸಲ್ಮಾನರಿಗೆ ದೇಶಕ್ಕಿಂತ ಧರ್ಮವೇ ಮೇಲು ಎಂಬ ಆರೋಪ. ಇಲ್ಲಿ ಯಾರಿಗೆ ದೇಶಕ್ಕಿಂತ ತಮ್ಮ ಧರ್ಮ ಮೇಲು ಎಂಬ ಭಾವನೆ ಇಲ್ಲ ಹೇಳಿ? ಹಿಂದೂಗಳ ಸಂಖ್ಯೆ ಹೆಚ್ಚಾಗಿರುವ ಭಾರತವನ್ನು ಒಂದು ಹಿಂದೂ ರಾಷ್ಟ್ರ ಎಂದು ಕರೆಯಬಹುದೇ? ಮುಸ್ಲೀಮರ ಪ್ರಾಬಲ್ಯವಿರುವ ದೇಶಗಳನ್ನು ಇಸ್ಲಾಮಿಕ್ ದೇಶಗಳೆಂದು ಕರೆದು ಧರ್ಮದ ಆಧಾರದ ಮೇಲೆ ದೇಶವನ್ನು ಕಟ್ಟಿಕೊಂಡ ಹಾಗೆ ನಾವು ಮಾಡಲಾದೀತೇ? ಖಂಡಿತಾ ಸಾಧ್ಯವಿಲ್ಲ. ನಮ್ಮ ಧರ್ಮ ಆ ಹಂತವನ್ನು ದಾಟಿ ಕೋಟ್ಯಂತರ ನಂಬಿಕೆಗಳಿಗೆ, ಆಚರಣೆಗೆಳಿಗೆ ದಾರಿ ಮಾಡಿಕೊಟ್ಟು ಅದೊಂದು ಜೀವನ ವಿಧಾನವಾಗಿ, ಬದುಕನ್ನು ಕಾಣುವ ದೃಷ್ಟಿಯಾಗಿದೆ. ಹೀಗಾಗಿ ಭಾರತ ಎಂದಿಗೂ ಹಿಂದೂ ರಾಷ್ಟ್ರವಾಗದು. ಹೀಗಿದ್ದಾಗ್ಯೂ ನಾವು ದೇಶಪ್ರೇಮವನ್ನು ಧಾರ್ಮಿಕ ಶ್ರದ್ಧೆಯ ಭಾಗವಾಗಿಯೇ ಬೆಳೆಸಿಕೊಂಡವರು. ಭಾರತ ನಮಗೆ ತಾಯಿ. ತಾಯಿ ನಮಗೆ ದೇವರು. ಭಾರತವನ್ನು ಭಾರತ ಮಾತೆಯ ಸ್ವರೂಪದಲ್ಲಿ ನಾವು ಆರಾಧಿಸುತ್ತೇವೆ. ದೇಶಪ್ರೇಮಕ್ಕೆ, ನೆಲದ ಮೇಲಿನ ಅಭಿಮಾನಕ್ಕೆ ನಮಗೆ ಶ್ರೀರಾಮ ಚಂದ್ರನೇ ರಾಷ್ಟ್ರೀಯ ಆದರ್ಶ. ಇವೆಲ್ಲಾ ನಮ್ಮ ಧಾರ್ಮಿಕ ನಂಬಿಕೆಗಳ ವಿಸ್ತರಣೆಯೇ ಆಗಿದೆ. ಈ ಭಾವನೆಗಾದರೂ ಸಂಪೂರ್ಣ ಹಿಂದೂ ಸಮೂಹದ ಬೆಂಬಲವಿದೆಯೇ? ಊಹುಂ, ಹಿಂದುಗಳ ಅರ್ಧದಷ್ಟು ಜನಸಂಖ್ಯೆಯಿರುವ ದಲಿತರಿಗೆ, ಹಿಂದುಳಿದವರಿಗೆ ಈ ವೈದಿಕ ಪರಂಪರೆಯ ಪ್ರತೀಕಗಳು ಒಪ್ಪಿಗೆಯಾಗುವುದಿಲ್ಲ. ಇನ್ನು ಅಲಾಹುವನ್ನು ಬಿಟ್ಟು ಉಳಿದ ಯಾವುದೂ ಪೂಜಾರ್ಹವಲ್ಲ ಎಂಬುದಾಗಿ ನಂಬಿದ ಮುಸ್ಲೀಮರಿಗೆ ಈ ದೇಶದ, ದೇಶಪ್ರೇಮದ ರೀತಿ ರಿವಾಜುಗಳು ಸಂಪೂರ್ಣವಾಗಿ ತಮ್ಮ ಧಾರ್ಮಿಕ ಭಾವನೆಗಳಿಗಿಂತ ಭಿನ್ನವಾಗಿ ಕಂಡರೆ ಅವರ ತಪ್ಪೇನು?
ಇಲ್ಲಿ ನಾವು ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯವನ್ನು ಮತಾಂಧತೆ ಎನ್ನುವ ಹುಂಬತನಕ್ಕೆ ಕೈ ಹಾಕಬಾರದು. ರಾಮನ ಅಸ್ತಿತ್ವದ ಬಗ್ಗೆ, ರಾಮ ಸೇತುವೆಯ ಬಗ್ಗೆ ಧಾರ್ಮಿಕ ಭಾವನೆಗಳನ್ನು ದೇಶದ ಹಿತಾಸಕ್ತಿ ಅಥವಾ ಪ್ರಗತಿಗಿಂತ ಶ್ರೇಷ್ಠದ್ದಾಗಿ ಭಾವಿಸಲು ಹಿಂದೂಗಳಿಗೆ ಹೇಗೆ ಅವಕಾಶವಿದೆಯೋ ಹಾಗೆಯೇ ಇತರ ಧರ್ಮದವರಿಗೂ ಅವಕಾಶ ಲಭ್ಯವಾಗಬೇಕು. ಆದರೆ ನಮ್ಮ ಆದರ್ಶಗಳ ಕಲ್ಪನೆಗಳೆಲ್ಲಾ ಒಂದು ವರ್ಗದ ಸೃಷ್ಟಿಗಳು ಹೀಗಾಗಿ ಉಳಿದೆಲ್ಲರಿಗೂ ತಮ್ಮ ಜಾತಿ, ಮತ, ಧರ್ಮಗಳೇ ಮೊದಲ ಆದ್ಯತೆಯಾಗುತ್ತವೆ. ಅವುಗಳೇ ತಮ್ಮ ಐಡೆಂಟಿಟಿಗಳಾಗಬೇಕೆಂದು ಜನ ಬಯಸುತ್ತಾರೆ. ದೇಶದ ಐಡೆಂಟಿಟಿಯನ್ನು ಒಂದು ಧರ್ಮದ ಐಡೆಂಟಿಟಿಯಾಗಿ ಕಾಣುವ ದೃಷ್ಟಿ ಬದಲಾಗದೆ ಈ ಸಮಸ್ಯೆಗೆ ಪರಿಹಾರವಿಲ್ಲ. ನೀವೇನಂತೀರಿ…

– ಕೆ.ಎಸ್.ಎಸ್


Technorati : , , ,

ನಮ್ಮಲ್ಲೇಕೆ ‘ತಾರೆ ಜಮೀನ್ ಪರ್’ ರೀತಿಯ ಸಿನೆಮಾಗಳಿಲ್ಲ? ನಾವ್ಯಾಕೆ ‘ಚಕ್ ದೇ’ ತರಹದ ಸಿನೆಮಾ ಮಾಡಲು ಮುಂದಾಗುವುದಿಲ್ಲ ಎಂದು ಹಲುಬುವವರಿಗೆ ಇಲ್ಲಿ ಉತ್ತರ ಕೊಟ್ಟಿದ್ದಾರೆ ‘ಚಿತ್ರ’.

ನೆಲಕ್ಕಿಳಿದ ತಾರೆ ಹಾಗೂ ಆಗಸಕ್ಕೆ ಹಾರಿದ ಗಾಳಿಪಟ!

ಹೌದು, ಅಕ್ಷರಶಃ ಈ ಶೀರ್ಷಿಕೆ ಕನ್ನಡ ಹಾಗೂ ಬಾಲಿವುಡ್ ಚಿತ್ರೋದ್ಯಮದ ಮನಸ್ಥಿತಿಗಳ ನಡುವಿನ ವ್ಯತ್ಯಾಸವನ್ನು ಬಿಂಬಿಸುತ್ತದೆ. ಆಕಾಶದಲ್ಲಿ ಹೊಳೆಯುವ ತಾರೆಯನ್ನು ವಾಸ್ತವದ ನೆಲದ ಮೇಲೆ ತರುವ ಪ್ರಯತ್ನ ಹಿಂದಿಯಲ್ಲಿ ಕಂಡು ಬಂದರೆ, ಕೇವಲ ಒಂದು ಎಳೆಯ ದಾರದ ಸೂತ್ರದ ಹಿಡಿತದಲ್ಲಿ ಗಾಳಿಪಟವನ್ನು ಆಗಸಕ್ಕೆ ಹಾರಿಬಿಡುವ ಮನಸ್ಥಿತಿ ಕನ್ನಡ ಚಿತ್ರಗಳದ್ದು.

ಹೆಚ್ಚಿನ ಚರ್ಚೆ ನಡೆಸುವ ಮೊದಲು ನಾವು ಮೂಲಭೂತವಾದ ಆದರೆ ಚರ್ವಿತ ಚರ್ವಣವಾದ ಈ ಪ್ರಶ್ನೆಯನ್ನು ಕೇಳಿಕೊಳ್ಳಲೇ ಬೇಕು: ನಾವು ಸಿನೆಮಾ ನೋಡುವುದು ಅಥವಾ ಮಾಡುವುದು ಏತಕ್ಕಾಗಿ? ಬೇರೆಲ್ಲಾ ಉದ್ದಿಮೆಗಳಿದ್ದ ಹಾಗೆ ಇದೂ ಒಂದು ಉದ್ದಿಮೆ ಎಂದು ವಾದಿಸುವವರ ಪ್ರಕಾರ ಬಹುಜನರ ಬೇಡಿಕೆ, ಡಿಮ್ಯಾಂಡ್ ಏನಿದೆಯೋ ಅದನ್ನು ಕೊಡುವುದಷ್ಟೇ ಚಿತ್ರ ತಯಾರಕರ ಕೆಲಸ. ಇನ್ನುಳಿದದ್ದೆಲ್ಲಾ ಸೆಕೆಂಡರಿ. ಚಿತ್ರಕಥೆ, ಸಂದೇಶ, ಸಾಮಾಜಿಕ ಕಳಕಳಿ ಇವೆಲ್ಲಾ ಕಣ್ಣೊರೆಸುವ ಅಂಶಗಳು. ಮಾರುಕಟ್ಟೆ ಬೇಡಿಕೆಗಳ ಅಸ್ಥಿಪಂಜರವನ್ನಿಟ್ಟುಕೊಂಡು ಅದಕ್ಕೆ ಉಳಿದೆಲ್ಲಾ ಸೃಜನಶೀಲತೆಯ ರಕ್ತ ಮಾಂಸವನ್ನು ತುಂಬುವುದು ಸಿನೆಮಾ ಮಾಡುವವರ ಕೆಲಸ ಎನ್ನುವುದು ಇವರ ವಾದ. ಆದರೆ ಇನ್ನೊಂದು ವರ್ಗವಿದೆ. ಅವರಿಗೆ ಸಿನೆಮಾವನ್ನು ಉದ್ದಿಮೆಯಾಗಿ ಬೆಳೆಸುವ ಹಪಹಪಿಯಿಲ್ಲ. ಅವರಿಗೆ ಸಿನೆಮಾ ಕಲಾಭಿವ್ಯಕ್ತಿಯ ಮಾಧ್ಯಮ. ಸಾಹಿತ್ಯ, ಚಿತ್ರ ಕಲೆ, ಸಂಗೀತದಲ್ಲಿ ಹೊಸ ಅನ್ವೇಷಣೆಗಳನ್ನು ಮಾಡುತ್ತಾ ಹೋಗುವಂತೆ ಸಿನೆಮಾವನ್ನೂ ಸಹ ಅವರು ಒಂದು ಮಾಧ್ಯಮವಾಗಿ ಬಳಸಿಕೊಳ್ಳುತ್ತಾರೆ. ಇಲ್ಲಿ ಕಥೆ, ಚಿತ್ರಕಥೆಯೇ ಸಿನೆಮಾದ ಜೀವಾಳ ಇದಕ್ಕೆ ಪೂರಕವಾಗುವ ಇನ್ನಿತರ ಸಿನೆಮಾ ಆವಶ್ಯಕತೆಗಳು ಬಂದುಹೋಗುತ್ತವೆ. ಆದರೆ ಇವರ ಉದ್ದೇಶ ಸಿನೆಮಾವನ್ನು ಉದ್ದಿಮೆಯ ಪ್ರಾಡಕ್ಟ್ ಮಾಡುವುದಲ್ಲ. 1360040069_e5d831cf24.jpg

2007011901850102.jpgಹೀಗೆ ಎರಡು ವಿಭಾಗಗಳು ಹುಟ್ಟಿಕೊಂಡಾಗ ಅಲ್ಲಲ್ಲಿ ಇವೆರಡೂ ದಡಗಳನ್ನು ಬೆಸೆಯುವಂತಹ ಪ್ರಯತ್ನಗಳು ಶುರುವಾದವು. ಇವನ್ನು ಬ್ರಿಡ್ಜ್ ಸಿನೆಮಾಗಳೆಂದು ಕರೆಯಲಾರಂಭಿಸಿದರು. ಇವುಗಳ ಮೂಲ ಉದ್ದೇಶ ಒಳ್ಳೆಯ ಕಲಾತ್ಮಕವಾದ ಸಿನೆಮಾ ಜನರನ್ನು ತಲುಪುವಂತೆ ಮಾಡಬೇಕು ಎನ್ನುವುದೇ ಆದರೂ ಅವರು ಅದಕ್ಕೆ ಬದ್ಧರಾಗಿರಬೇಕು ಎಂದೇನೂ ಇಲ್ಲ. ಜನರನ್ನು ತಲುಪುವ ಭರದಲ್ಲಿ ಕಲಾತ್ಮಕತೆಯ ಜಾಗವನ್ನು marketing tactics ಆವರಿಸಿಕೊಳ್ಳಬಹುದು. ಅನೇಕ ಹಂತದಲ್ಲಿ ಕಥೆ ರಾಜಿಯಾಗಬೇಕಾಗಿಬರುವುದು. ಈ ಬಗೆಯ ಪ್ರಯತ್ನದಲ್ಲಿಯೂ ಒಂದು ಬಹುದೊಡ್ಡ ಅಪಾಯವಿದೆ. ‘ಎಲ್ಲರನ್ನೂ ಸಮಾಧಾನ ಪಡಿಸುವುದಕ್ಕೆ ಆ ದೇವರಿಗೂ ಸಾಧ್ಯವಿಲ್ಲ’ ಎನ್ನುವ ಹಾಗೆ ಈ ಬಗೆಯ ಬ್ರಿಡ್ಜ್ ಸಿನೆಮಾ ಎರಡು ಬದಿಗಳನ್ನು ಹೊಸೆಯಲು ಹೋಗಿ ತನ್ನ ಸತ್ವವನ್ನೇ ಕಳೆದುಕೊಳ್ಳಬಹುದು.

ಇಷ್ಟೆಲ್ಲಾ ಪೀಠಿಕೆ ಹಾಕಲಿಕ್ಕೆ ಕಾರಣ ಈ ತಿಂಗಳು ನಮ್ಮ ಚರ್ಚೆಯಲ್ಲಿ ನುಸುಳಿರುವ ಎರಡು ಸಿನೆಮಾಗಳು. ಒಂದು ‘ಮುಂಗಾರು ಮಳೆ’ಯಂತಹ ಅದ್ಭುತ ಯಶಸ್ಸಿನ ಚಿತ್ರವನ್ನು ನೀಡಿದಂತಹ ಯೋಗರಾಜ್ ಭಟ್‌ರವರ ಬಹುನಿರೀಕ್ಷೆಯ ಚಿತ್ರ ‘ಗಾಳಿಪಟ’. ಮತ್ತೊಂದು ಅದ್ಭುತ ಪ್ರತಿಭಾವಂತ ನಟನಾದ ಅಮೀರ್ ಖಾನ್ ನಿರ್ದೇಶಿಸಿರುವ ಚಿತ್ರ ‘ತಾರೆ ಜಮೀನ್ ಪರ್’. ಸಿನೆಮಾ ನೋಡದವರಿಗೆ ಇವುಗಳನ್ನು ಪರಿಚಯಿಸುವುದಾದರೆ, ‘ಗಾಳಿಪಟ’ ನಗರದಲ್ಲಿ ಬೆಳೆದ ಮೂರು ಮಂದಿ ಪಡ್ಡೆ ಹುಡುಗರ ಪ್ರೇಮದ ಕಥೆ. ಒಳ್ಳೆಯ ಗೀತ ಸಾಹಿತ್ಯ, ತಲೆದೂಗಬಹುದಾದಂತಹ ಸಂಗೀತ, ಲವಲವಿಕೆಯ ಸಂಭಾಷಣೆ, ಗಣೇಶ್ ಅಭಿಮಾನಿಗಳಿಗೆ ಬೇಕಾಗುವಂತಹ ಆತನ ಮ್ಯಾನರಿಸಂಗಳು, ಬೇಟೆ-ಕಾಡು ಮುಂತಾದ ಸಂಗತಿಗಳಿಗೆ ತೆರೆದುಕೊಂಡಿರದ ನಗರವಾಸಿ ಯುವಕರಿಗೆ ಮೈ ನವಿರೇಳಿಸುವಂತಹ ಕಾಡುಹಂದಿ ಬೇಟೆ, ಸಾಮಾನ್ಯವಾದ ಕಥೆ -ಇದಿಷ್ಟು ‘ಗಾಳಿಪಟ’ದ ಹೈಲೈಟ್ಸು. ಇನ್ನು ‘ತಾರೆ…’ಯ ಬಗ್ಗೆ ಹೇಳುವುದಾದರೆ, ಡಿಸ್ಲೆಕ್ಸಿಯಾ ಎಂಬ ಅಧ್ಯಯನ ಸಂಬಂಧಿ ಮಾನಸಿಕ ವ್ಯಾಧಿಯಲ್ಲಿ ಬಳಲುವ ಅನೇಕ ಬುದ್ಧಿವಂತ ಮಕ್ಕಳು ಹೇಗೆ ವ್ಯವಸ್ಥೆಯೆ ರೂಪು-ನೀತಿಗಳಿಗೆ ಹೊಂದಿಕೊಳ್ಳಲಾರದೆ ತೊಳಲಾಡುತ್ತವೆ ಎನ್ನುವುದು ಚಿತ್ರದ ಕಥೆ. ಈ ತೊಂದರೆಯಿಂದಾಗಿ ಸ್ವಭಾವತಃ ಎಷ್ಟೇ ಚುರುಕಾದ ಮಕ್ಕಳೂ, ಪ್ರತಿಭಾವಂತರೂ ಮೂರ್ಖರು ಎನ್ನುವ ಹಣೆಪಟ್ಟಿಯಲ್ಲಿ ನರಳಬೇಕಾಗುತ್ತದೆ ಎನ್ನುವುದನ್ನು ಆತ್ಮೀಯವಾಗಿ ಬಿಂಬಿಸುತ್ತದೆ ಚಿತ್ರ.

ಒಂದೊಂದು ಚಿತ್ರವನ್ನೂ ಅದರ ಗುಣ, ಅವಗುಣಗಳ ಆಧಾರದಲ್ಲಿ ವಿಮರ್ಶಿಸಿ ಕೈತೊಳೆದುಕೊಳ್ಳಲು ಒಪ್ಪದವರಿಗೆ ಒಂದನ್ನೊಂದು ಹೋಲಿಸಿ ನೋಡುವ ಚಟ ಹತ್ತಿಕೊಳ್ಳುತ್ತದೆ. ಹೀಗೆ ವಿಮರ್ಶಿಸುವವರು ಕೊಂಚ ಸಿನಿಕರಾದರಂತೂ ಮುಗಿಯಿತು. ‘ಅಯ್ಯೋ, ನಮ್ಮವರು ಯಾವಾಗ ಅಂತಹ ಸಿನೆಮಾ ಮಾಡುವುದು…’, ‘ಅವರನ್ನು ನೋಡಿ ಇವರು ಕಲಿಯಬಾರದಾ…’ ಎಂದು ಹಲುಬುತ್ತಾರೆ.

ಒಂದು ಒಳ್ಳೆಯ ಸಿನೆಮಾವನ್ನೋ, ನಮ್ಮ ಮನಸ್ಸಿಗೆ ತಟ್ಟಿದಂತಹ ಕಾದಂಬರಿಯನ್ನೋ ನೋಡಿದಾಗ ಇಂಥದ್ಯಾಕೆ ನಮ್ಮಲ್ಲಿ ಇಲ್ಲ ಎನ್ನುವ ಆಲೋಚನೆ ಬರುವುದು ಸಹಜ. ಅದು ತಾತ್ಕಾಲಿಕವಾದ ಅನುಭವ. ಇಂಥ ಅನುಭವ ಎಲ್ಲಾ ಭಾಷಿಕರಿಗೂ, ಎಲ್ಲಾ ಪ್ರದೇಶದವರಿಗೂ ಆಗುವುದು ಸಾಮಾನ್ಯ. ಹಿಂದಿಯಲ್ಲಿ ಅದೇ ಅತ್ತೆ ಸೊಸೆಯರ ಯುದ್ಧ-ಕದನ ವಿರಾಮದ ಕಥೆಯನ್ನು ಸಾವಿರ ಎಪಿಸೋಡುಗಟ್ಟಲೆ ಎಳೆಯುತ್ತಿದ್ದ ಸಮಯದಲ್ಲಿ ಕನ್ನಡದಲ್ಲಿ ಸಾಮಾಜಿಕ ಕಾಳಜಿಯನ್ನು ಹೊತ್ತ, ಸಮಾಜ ಮುಖಿಯಾದ ‘ಮುಕ್ತ’ದಂತಹ ಧಾರಾವಾಹಿ ಪ್ರಸಾರವಾದಾಗ ನಮಗೆ ಹೇಗೆ ಅಪ್ರಯತ್ನಪೂರ್ವಕವಾಗಿ ಹೆಮ್ಮೆ ಮೂಡುತ್ತದೆಯೋ ಹಾಗೆಯೇ ಇತರ ಭಾಷೆಯಲ್ಲಿರುವ ಒಳ್ಳೆಯ ಸರಕನ್ನು ನೋಡಿದಾಗ ನಮ್ಮಲ್ಲೇಕೆ ಇಂಥದ್ದಿಲ್ಲ ಎನ್ನುವ ಭಾವ ಮೂಡುತ್ತದೆ. ಒಂದು ಹಂತದವರೆಗೆ ಇದು ಆರೋಗ್ಯಕರವಾದದ್ದೇ, ಅಂತಹ ಸರಕನ್ನು ನಮ್ಮ ಭಾಷೆಯಲ್ಲೂ ತೋರುವ ಪ್ರಯತ್ನಕ್ಕೆ ಇದು ನಾಂದಿ ಹಾಡಿದರೆ ಸಂತೋಷದ ವಿಷಯವೇ. ಆದರೆ ಈ ಬಗೆಯ ಹಪಹಪಿ ವಿಪರೀತವಾದರೆ ನಮ್ಮ ಭಾಷೆಯಲ್ಲಿ ನಡೆದಿರುವ ಶ್ರೇಷ್ಠ ಹಾಗೂ ಅನನ್ಯವಾದ ಪ್ರಯತ್ನಗಳು ಮರೆಯಾಗಿ ವಿನಾಕಾರಣದ ಕೀಳರಿಮೆ ಮೂಡುತ್ತದೆ. ಹೀಗೆ ಕೀಳರಿಮೆ ಬೆಳೆಸಿಕೊಳ್ಳುವುದರಿಂದ ಯಾವ ಸಾಧನೆಯೂ ಆದಂತಾಗುವುದಿಲ್ಲ.2118881967_eb716cf331.jpg

ಹಿಂದಿಯಲ್ಲಿ ಸಾಲು ಸಾಲು ಸೀರಿಯಲ್ಲುಗಳನ್ನು ಮಾಡುವ ಎಕ್ತಾ ಕಪೂರ್ ಇದ್ದಂತೆಯೇ ಕನ್ನಡದಲ್ಲಿಯೂ ಜನರ ನಾಡಿಮಿಡಿತ ಅರಿತ ಎಸ್.ನಾರಾಯಣ್, ಬಿ.ಸುರೇಶ್‌ರಂತಹ ಧಾರಾವಾಹಿ ನಿರ್ಮಾಪಕರಿದ್ದಾರೆ. ಕರಣ್ ಜೋಹಾರ್‍ನಂತಹ ಅಪ್ಪಟ ಕಮರ್ಷಿಯಲ್ ಸಿನೆಮಾ ಮಾಡುವಂತಹ ನಿರ್ದೇಶಕರು ಕನ್ನಡದಲ್ಲಿದ್ದಾರೆ. ‘ಲಗಾನ್’,’ಸ್ವದೇಶ್’,ಇತ್ತೀಚಿನ ‘ಜೋಧಾ ಅಕ್ಬರ್’ ಚಿತ್ರಗಳ ನಿರ್ದೇಶಕ ಆಶುತೋಷ್ ಗೋವಾರಿಕರ್‌ರ ಚಿತ್ರಗಳಂಥವನ್ನು ಕನ್ನಡದಲ್ಲಿ ನಿರ್ಮಿಸಿದ ನಾಗಾಭರಣರಂತಹ ನಿರ್ದೇಶಕರಿದ್ದಾರೆ. ಪಿ.ಶೇಷಾದ್ರಿಯವರು ನಿರ್ದೇಶಿಸುದ ‘ತುತ್ತೂರಿ’ ಮುಂತಾದ ಮಕ್ಕಳ ಚಿತ್ರಗಳು ಅಮೀರ್‌ನ ‘ತಾರೆ..’ಗಿಂತ ಯಾವ ಮಾಪನದಲ್ಲೂ ಕಡಿಮೆಯಿಲ್ಲ. ಆದರೆ ಕನ್ನಡದ ಮಾರುಕಟ್ಟೆ ಸೂಕ್ಷ್ಮಗಳು, ಅಬ್ಬರದ ಪ್ರಚಾರದಿಂದ ದೂರ ಉಳಿಯುವ ಸಂಕೋಚ ಹೊಂದಿರುವ -ಆ ಮೂಲಕವೇ ತಮ್ಮ ಸೃಜನಶೀಲತೆಯನ್ನು ಉಳಿಸಿಕೊಂಡಿರುವ- ನಿರ್ದೇಶಕರ ಪ್ರಯತ್ನವನ್ನು ಗುರುತಿಸಿ ಪ್ರೋತ್ಸಾಹಿಸದೆ ಕೇವಲ ಬಾಯಿ ಚಪಲಕ್ಕಾಗಿ ‘ನಮ್ಮಲ್ಲೇನಿದೆ, ಅವರನ್ನ ನೋಡ್ರಿ’ ಅಂತ ಹಲುಬುವುದು ಕೇವಲ ಮಾನಸಿಕ ವ್ಯಾಧಿಯಷ್ಟೇ.

ಕನ್ನಡದಲ್ಲಿ ಎಲ್ಲಿಯವರೆಗೆ ಅಪ್ಪನ ವಯಸ್ಸಿನ ನಾಯಕ ಮಗಳ ವಯಸ್ಸಿನ ನಾಯಕಿಯೊಂದಿಗೆ ಮರ ಸುತ್ತುತ್ತಾ ಹಾಡು ಹಾಡುತ್ತಾ ತಿರುಗುತ್ತಿರುವ ಚಿತ್ರಗಳಿಗೆ ಬೇಡಿಕೆಯಿರುತ್ತದೆಯೋ ಅಲ್ಲಿಯವರೆಗೆ ಕನ್ನಡದಲ್ಲಿ ಅಂತಹ ಚಿತ್ರಗಳು ತಯಾರಾಗುತ್ತಿರುತ್ತವೆ. ಆದರೆ ಯಾವಾಗ ಜನ ಅಂತಹ ಸರಕನ್ನು ಮೂಸುವುದಿಲ್ಲ ಎಂಬ ಸುಳಿವು ಚಿತ್ರ ನಿರ್ಮಾಪಕರಿಗೆ ರವಾನೆಯಾಗುತ್ತದೆಯೋ ಆಗ ಅವರೂ ಹೊಸ ಅಲೆಗೆ ತೆರೆದುಕೊಳ್ಳುತ್ತಾರೆ. ಅಷ್ಟಕ್ಕೂ ಹಿಂದಿಯಲ್ಲಿ ಬರುತ್ತಿರುವ ಸಿನೆಮಾಗಳಿಂದ ಹಿಂದಿ ಭಾಷಿಕರು, ಮಾಧ್ಯಮದವರು ಸಂಪೂರ್ಣ ಸಂತೃಪ್ತರಾಗಿದ್ದಾರೆಯೇ? ಖಂಡಿತಾ ಇಲ್ಲ, ನೋಡಿ ಅಲ್ಲಿ ಹಾಲಿವುಡ್‌ನಲ್ಲಿ ವಾಸ್ತವಕ್ಕೆ ಸನಿಹದಲ್ಲಿರುವ ಎಷ್ಟು ಚಿತ್ರಗಳು ಬರುತ್ತಿವೆ. ‘ಟೈಟಾನಿಕ್’ನಂತಹ ಒಂದು ಚಿತ್ರವನ್ನು ಬಾಲಿವುಡ್‌ನಲ್ಲಿ ಮಾಡೋಕೆ ಸಾಧ್ಯನಾ? ‘ಎ ಬ್ಯೂಟಿಫುಲ್ ಮೈಂಡ್’ನಂತಹ ಸಿನೆಮಾ ಬಾಲಿವುಡ್ಡಿನಲ್ಲಿ ಬರೋದು ಯಾವಾಗ? ‘ಸಿಕೊ'(sicko) ರೀತಿಯ ಡಾಕುಮೆಂಟರಿ ಮಾಡಲು ನಮ್ಮವರಿಗೇನು ಧಾಡಿ, ಸಿನೆಮಾದಲ್ಲಿ ಹಾಡು, ಹೀರೋಯಿಸಂ ಇಟ್ಟುಕೊಳ್ಳುವುದು ಎಷ್ಟು ಬಾಲಿಶವಲ್ಲವಾ ಎನ್ನುವ ಆರೋಪಗಳು ಇದ್ದೇ ಇವೆ. TaareZameenPar.jpg

ಒಟ್ಟಿನಲ್ಲಿ ಇಂತಹ ಆರೋಪಗಳು ಎಷ್ಟರ ಮಟ್ಟಿಗೆ ಆರೋಗ್ಯಪೂರ್ಣವಾಗಿರುತ್ತವೆಯೋ ಅಷ್ಟರ ಮಟ್ಟಿಗೆ ಅವುಗಳಿಂದ ಚಿತ್ರೋದ್ಯಮಕ್ಕೆ ಸಹಾಯವಾಗುತ್ತದೆ. ಇಲ್ಲವಾದಲ್ಲಿ ಇದು ನಮ್ಮೊಳಗೇ ಕೀಳರಿಮೆಯನ್ನು ಬೆಳೆಸುವ ಮಾನಸಿಕ ವ್ಯಾಧಿಯಾಗುತ್ತದೆ. ಏನಂತೀರಿ?


Technorati : , , , , ,

The author of this piece is Manjunath.A.N

What is this life if , full of care,

We have no time to stand and stare?

Decades ago when W.H.Davies wrote these lines, he was probably worried about the gradual disappearance of love among humans for each other. If he had lived unto this day, he would have buried himself to death unable to bear the question of what love is and if it really exists?

The growth of commercialization started asserting values to everything in the process of building a better civilization. Nature, love, selfless care were valued lower than that of fame, name, monetary success. Thus the craze of man to evolve as a more civilized being has blindfolded him to love. As a result of which, we have a crippled social being instead of a man with a lovely heart.

We have all agreed or are compelled to look at the world with an expectant view of life. There lies the basic problem. True love exists when there is a selfless goodness at heart. It is what a mother showers on her child, a true teacher on his student and two good friends between them!l13.png

The Bible says “Whoever does not love does not know God, for God is love. No one has ever seen God, but if we love one another, God lives in union with us and his love is made perfect in us.” It is love for each one of our fellow beings, that has sustained life on earth.

I read in one of Paulo Coelho’s books about a girl in Brasilia who was brutally beaten by her parents and had lost the ability to move and speak. Once admitted to hospital, she was cared for by a nurse who said to her everyday: ‘ I love you.’ Although the doctors assured her that the child could not hear and that all her efforts were in vain, the nurse continued to say:’ I love you.’ Three weeks later the child recovered the power of movement. Four weeks later, she could again talk and smile. And Coelho ends this simple incident with one phrase: love cures.

It is love by which we need to stand, so as to make this place better for ourselves to live in. As Shakespeare said “like as the waves make towards the pebbled shore, so do our minutes hasten to their end.” To add value and flavors to a life moving to its end, love towards each other would probably be the only recipe.


Technorati : , , ,

ಈ ಸಂಚಿಕೆಯ ಮುಖಪುಟ ಲೇಖನದ ಲೇಖಕರು ಸುಪ್ರೀತ್.ಕೆ.ಎಸ್

ಈ ಪ್ರೀತಿ ಅಂದರೆ ಏನು?
ಹಾಗಂತ ಕೇಳಿ ನೋಡಿ ಪ್ರೀತಿಯಲ್ಲಿ ಬಿದ್ದವರಿಗೆ ಮಾತನಾಡಲು ಪದಗಳೇ ಸಿಕ್ಕುವುದಿಲ್ಲ. ಎಂದೂ ಪ್ರೀತಿಸಿರದವರಿಗೆ ಮಾತನಾಡಲಿಕ್ಕೆ, ವಾದಿಸುವುದಕ್ಕೆ ಸಾವಿರ ಸಾವಿರ ಸಂಗತಿಗಳು ಸಿಕ್ಕುತ್ತವೆ. ನೂರಾರು ಥಿಯರಿಗಳು ಕೈಗೆ ಎಟುಕುತ್ತವೆ. ಹತ್ತಾರು ಶ್ರೇಷ್ಠ ಚಿಂತಕರು ಹೇಳಿದ ಸಿದ್ಧಾಂತಗಳು ನೆರವಿಗೆ ಬರುತ್ತವೆ. ಆದರೆ ಪ್ರೀತಿಯಲ್ಲಿ ಮುಳುಗಿದವರನ್ನು ಕೇಳಿ, ಅವರಿಗೆ ಮಾತೇ ಬರದು, ಅವರು ಪ್ರೀತಿ ಕೊಡಮಾಡುವ ಮಧುರ ಅನುಭೂತಿಯನ್ನು ಸವಿಯುವುದರಲ್ಲಿ ಮಗ್ನರಾಗಿರುತ್ತಾರೆ, ಮಾತು ಮರೆತಿರುತ್ತಾರೆ.l1.png

ಧರ್ಮವೆಂದರೆ ಏನು, ದೇವರು ಇದ್ದಾನಾ? ಅಂತೆಲ್ಲಾ ಕೇಳಿದಾಗ ದೈವತ್ವದ ಅನುಭವವನ್ನು, ತನ್ನನ್ನೇ ತಾನು ಕಳೆದುಕೊಳ್ಳುವ ಮಗ್ನತೆಯನ್ನು ಎಂದೂ ಕಂಡಿರದವ ಮಾತ್ರ ಉಗ್ರವಾಗಿ ವಾದ ಮಾಡಬಲ್ಲ. ದೇವರಿದ್ದಾನೆ, ಅವನನ್ನು ನಂಬದವರು ದುರುಳರು ಎಂದು ಅಬ್ಬರಿಸಬಲ್ಲ. ದೇವರು ಎಂಬುದು ನಮ್ಮ ದೌರ್ಬಲ್ಯ, ನಮಗೆ ನಾವು ಮಾಡಿಕೊಳ್ಳುವ ವಂಚನೆ ಎಂದು ಉಪದೇಶಿಸಬಲ್ಲ. ಆದರೆ ದೇವರನ್ನು ಅನುಭವಿಸಿದವ ಮಾತ್ರ ಯಾವ ಮಾತನ್ನೂ ಆಡದೆ ಮೌನವಾಗಿ ಹಿಮಾಲಯದ ನಿಶ್ಯಬ್ಧ, ನಿರ್ಮಾನುಶ ಗುಹೆಗಳಲ್ಲಿ ಧ್ಯಾನಿಸುತ್ತಿರುತ್ತಾನೆ. ಖಾಲಿಯಾದ ಡಬ್ಬಗಳು ಜೋರಾಗಿ ಸದ್ದು ಮಾಡುತ್ತಾ ಬಡಿದುಕೊಳ್ಳುತ್ತಿರುತ್ತವೆ! ಎಂದಿನಂತೆ!

ಎರಡು ವಿಪರೀತಗಳು

ಪ್ರೀತಿಯ ಅನುಭವವನ್ನು ಹಂಚಿಕೊಳ್ಳುವಾಗ, ಪ್ರೀತಿಯನ್ನು ವ್ಯಾಖ್ಯಾನಿಸಲು ಕೂರುವಾಗ ನಾವು ಎರಡು ವಿಪರೀತಗಳಿಗೆ ಹೋಗುವ ಅಪಾಯವಿರುತ್ತದೆ. ಪ್ರೀತಿಯನ್ನು ತೀರಾ ಭಾವುಕವಾಗಿ ವರ್ಣಿಸುತ್ತಾ, ಪ್ರೀತಿ ಈ ಜಗತ್ತಿನದ್ದೇ ಅಲ್ಲ. ಅದು ಇಂದ್ರಿಯಗಳಿಗೆ ನಿಲುಕದ್ದು, ಅದು ಎಂಥಾ ವಿರೋಧವನ್ನಾದರೂ ಎದುರಿಸಬಲ್ಲದು. ಇಡೀ ಪ್ರಪಂಚವನ್ನೇ ಬೇಕಾದರೂ ಎದುರು ಹಾಕಿಕೊಂಡು ಪ್ರೀತಿ ಬದುಕಬಲ್ಲದು. ಪ್ರೀತಿಗೆ ಹಣ, ಅಂತಸ್ತಿನ ಹಂಗು ಇಲ್ಲ. ಅದು ಮುಖ ನೋಡಿ, ಭವಿಷ್ಯವನ್ನು ಆಲೋಚಿಸಿ ಪ್ರೀತಿಗೆ ಬೀಳಿಸುವುದಿಲ್ಲ. ಪ್ರೀತಿಯೆಂಬುದು ಒಂದು ಪವಾಡ. ನಮ್ಮ ನಿಯಂತ್ರಣವೇ ಇಲ್ಲದ ಆದರೆ ನಮ್ಮೆಲ್ಲರನ್ನೂ ನಿಯಂತ್ರಿಸುವ ಅಗೋಚರವಾದ ಶಕ್ತಿ ಪ್ರೀತಿ. ಪ್ರೀತಿಸಿದವರಿಗೆ ಪ್ರೀತಿಯೇ ದೇವರು. ಪ್ರೀತಿಗಿಂತ ದೊಡ್ಡದು ಅವರಿಗೆ ಬೇರೇನೂ ಕಾಣುವುದಿಲ್ಲ. ನಮ್ಮ ಜೀವನದ ಏಕೈಕ ಗುರಿಯೇ ಪ್ರೀತಿ. ಅಂತೆಲ್ಲಾ ಭಾವುಕವಾಗಿ ಪ್ರೀತಿಯ ಅಗಾಧತೆಯನ್ನು ಮೆರೆಸುವ ಭರದಲ್ಲಿ ವಾಸ್ತವದಿಂದ ದೂರಾಗುವ, ತೀರಾ ಎಮೋಶನಲ್ ಆಗುವ ಅಪಾಯವಿದೆ.

ಹಾಗೆಯೇ ಪ್ರೀತಿ ಎಂದ ಕೂಡಲೇ ಕೊಂಕಾಗಿ ನಗುತ್ತ, ಪ್ರೀತಿ ಅನ್ನೋದೆಲ್ಲಾ ಭ್ರಮೆ. ಪ್ರೀತಿ ಅನ್ನೋದು ಆತ್ಮವಂಚನೆ, ತಮ್ಮ ದೌರ್ಬಲ್ಯಗಳಿಗೆ, ತಮ್ಮ ಲೈಂಗಿಕ ಹಸಿವಿಗೆ ಗಂಡು ಹೆಣ್ಣು ಕಂಡುಕೊಳ್ಳುವ ಸಭ್ಯವಾದ ಹೆಸರು. ಪ್ರೀತಿಯಲ್ಲಿ ಬಿದ್ದವರು ಮೇಲೇಳಲು ಸಾಧ್ಯವೇ ಇಲ್ಲ. ಹುಡುಗನ ಹಣ, ಆತನ ಇಮೇಜು, ಅವನ ಫ್ಯಾಮಿಲಿ, ಅವನ ಹೆಸರು, ಅಂತಸ್ತು ನೋಡಿ ಅವನೆಡೆಗೆ ಆಕರ್ಷಿತಳಾಗುವ ಹುಡುಗಿ, ಹುಡುಗಿಯ ಅಂದ ಚೆಂದ, ಆಕೆಯ ಯೌವನಕ್ಕೆ ಪಿಗ್ಗಿ ಬೀಳುವ ಹುಡುಗರು ‘ಪ್ರೀತಿ ಕುರುಡು’ ಅಂತ ಹೇಳುತ್ತಾ ಓಡಾಡುವುದು ಆತ್ಮವಂಚನೆಯಲ್ಲದೆ ಮತ್ತೇನು? ಪ್ರೀತಿ ಮಾರುಕಟ್ಟೆಯಲ್ಲಿ ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಬಿಕರಿಯಾಗಬಲ್ಲ ಸರಕು. ಅದೇ ಕಾರಣಕ್ಕೆ ನಮ್ಮ ಕವಿಗಳಿಗೆ, ಸಿನೆಮಾ ಮಾಡುವವರಿಗೆ, ಧಾರವಾಹಿಗಳನ್ನು ಸುತ್ತುವ ‘ಸೀರಿಯಲ್ ಕಿಲ್ಲರ್’ಗಳಿಗೆ ಪ್ರೀತಿ ಕೇಳಿದ್ದನ್ನೆಲ್ಲಾ ಕೊಡುವ ಕಾಮಧೇನು. ವಾಸ್ತವವನ್ನು ಮರೆಸಿ ಭ್ರಮಾ ಲೋಕಕ್ಕೆ ನಮ್ಮನ್ನು ತಳ್ಳಿ ಕೊಂಚ ಕಾಲದವರೆಗೆ ವಾಸ್ತವ ಜಗತ್ತಿನ ಕಷ್ಟಕೋಟಲೆ, ಕಠಿಣತೆಗಳನ್ನು ಮರೆಯುವಂತೆ ಮಾಡುವ ಅಫೀಮಿನಂತೆ ಈ ಪ್ರೀತಿ. ಪ್ರೀತಿ ಕುರುಡಲ್ಲ, ಪ್ರೀತಿ ನಮ್ಮನ್ನು ವಾಸ್ತವಕ್ಕೆ, ನಮ್ಮ ಜವಾಬ್ದಾರಿಯೆಡೆಗೆ, ನಮ್ಮ ಗುರಿ-ಸಾಧನೆಯೆಡೆಗೆ ಕುರುಡಾಗಿಸುತ್ತದೆ. ಎಂದು ವೈಚಾರಿಕ ಮದದಲ್ಲಿ ಅಬ್ಬರಿಸುವವರ ಮಧ್ಯೆ ಪ್ರೀತಿಯ ಮಧುರ ಅನುಭವ ಜೀವಂತಿಕೆ ಕಳೆದುಕೊಳ್ಳುತ್ತದೆ.

ಮಕ್ಕಳು ಪ್ರೀತಿಗೇಕೆ ಬೀಳುತ್ತಾರೆ?

ಹೀಗೆ ವಿಪರೀತವಾಗಿ ಯೋಚನೆಗೆ ಬೀಳುವವರು ತಂದೆ ತಾಯಿಗಳು. ತಮ್ಮ ಮಕ್ಕಳು ಯಾಕೆ ಪ್ರೀತಿಗೆ ಬೀಳುತ್ತಾರೆ ಎಂಬುದು ಅವರಿಗೆ ಚಿದಂಬರ ರಹಸ್ಯ.
ಸ್ವಲ್ಪ ಕಾಲದ ಮಟ್ಟಿಗೆ ಈ ಒಂದು ವಾದ ಚಾಲ್ತಿಯಲ್ಲಿತ್ತು. ಮನೆಯಲ್ಲಿ ಸಿಗದ ಪ್ರೀತಿಯನ್ನು ಹುಡುಕಿಕೊಂಡು ಹೊರಡುವ ಮಕ್ಕಳು ಪ್ರೀತಿಯಲ್ಲಿ ಬೀಳುತ್ತಾರೆ. ತಂದೆಯ ಅಭಯ, ಪ್ರೀತಿ, ನಾನಿದ್ದೇನೆ ಎನ್ನುವ ಧೈರ್ಯದ ಸಾಂತ್ವನ ಇಲ್ಲದೆ ಬೆಳೆದ ಹುಡುಗಿಯರು ತಮ್ಮ ಓರಗೆಯ ಹುಡುಗರಲ್ಲಿ ಆ ಪ್ರೀತಿಯನ್ನು, ಸಾಂತ್ವನವನ್ನು ಪಡೆಯುತ್ತಾರೆ. ಹಾಗಾಗಿ ಅವರೊಂದಿಗೆ ಪ್ರೀತಿಗೆ ಬೀಳುತ್ತಾರೆ. ಇನ್ನು ಹುಡುಗರು ಮನೆಯಲ್ಲಿ ತಮಗೆ ದೊರೆಯದ ಪ್ರೀತಿ, ಪ್ರಾಮುಖ್ಯತೆ, ‘ನೀನು ಇಂಪಾರ್ಟೆಂಟ್’ ಎನ್ನುವ ಮೆಚ್ಚುಗೆಯನ್ನು ಪ್ರೀತಿಸುವ ಹುಡುಗಿಯಲ್ಲಿ ಕಂಡುಕೊಳ್ಳುತ್ತಾನೆ. ಹಾಗಾಗಿ ಆತ ಹುಡುಗಿಯಲ್ಲಿ ಮೋಹಿತನಾಗುತ್ತಾನೆ. ಈ ರೀತಿಯ ವಾದ ಇತ್ತೀಚಿನವರೆಗೂ ಚಾಲ್ತಿಯಲ್ಲಿತ್ತು.
ಮನೆಯಲ್ಲಿ ಸಿಕ್ಕದ ಪ್ರೀತಿಗಾಗಿ ಮಕ್ಕಳು ಹೊರಗೆ ಕೈಚಾಚುತ್ತಾರೆ. ದಾಂಪತ್ಯದಲ್ಲಿ ಸಿಕ್ಕದ ಒಲವಿಗಾಗಿ ಮದುವೆಯಾಚೆಗಿನ ಸಂಬಂಧಕ್ಕೆ ವಿವಾಹಿತರು ಕೈಚಾಚುತ್ತಾರೆ ಎಂಬ ವಾದಗಳು ಬೋಗಸ್. ಮನೆಯಲ್ಲಿ ಅಪ್ಪ ಅಮ್ಮ ಎಷ್ಟೇ ಪ್ರೀತಿ ತೋರಿದರೂ ಮಕ್ಕಳು ಪ್ರೀತಿಯಲ್ಲಿ ಬೀಳುವುದನ್ನು ತಪ್ಪಿಸಲಾಗುವುದಿಲ್ಲ. ಅಸಲಿಗೆ ತಂದೆ ತಾಯಿ ತಮ್ಮ ಪ್ರೀತಿಯನ್ನು ಎಷ್ಟೇ ಧಾರೆಯೆರೆದರೂ ಮಕ್ಕಳಿಗೆ ‘ಹರೆಯದ ಪ್ರೀತಿ’ಯ ಅನುಭವ ಕೊಡಲಾರರು. ಹುಡುಗನಿಗೆ ತಾನು ಮೆಚ್ಚಿದ ಹುಡುಗಿಯ ಸಾನಿಧ್ಯದಲ್ಲಿ ದೊರೆಯುವ ಮಧುರ ಭಾವವನ್ನು ಯಾವ ಮನೆಯೂ ಕೊಡಲಾಗದು. ಹುಡುಗಿಗೆ ತನ್ನ ಪ್ರಿಯತಮನಲ್ಲಿ ಸಿಕ್ಕುವ ಸಾಂತ್ವನವನ್ನು ಎಷ್ಟೇ ಕಕ್ಕುಲಾತಿಯಿರುವ ತಾಯ್ತಂದೆಯರೂ ಕೊಡಲಾರರು.
ನಮ್ಮಲ್ಲಿ ಬಯಲಾಗುತ್ತಿರುವ ಎಷ್ಟೋ ವಿವಾಹೇತರ ಸಂಬಂಧಗಳಿಗೆ ಅಸಲಿಗೆ ಇಂಥದ್ದೇ ಅಂತ ಕಾರಣವೇ ಇರುವುದಿಲ್ಲ. ಅವಳಿಗೆ ಮನೆಯಲ್ಲಿ ಗಂಡನ ಕಾಳಜಿಗೆ, ಮಕ್ಕಳ ಪ್ರೀತಿಗೆ ಯಾವ ಕೊರತೆಯೂ ಇರುವುದಿಲ್ಲ. ಇವನಿಗೆ ತನ್ನ ಹೆಂಡತಿಯ ಮೇಲಿನ ಪ್ರೀತಿ ಕೊಂಚವೂ ಮುಕ್ಕಾಗಿರುವುದಿಲ್ಲ ಆದರೂ ಆತನ ಮನಸ್ಸು ಹೊರಗಿನ ಸಂಬಂಧಕ್ಕೆ ಹಾತೊರೆಯುತ್ತಿರುತ್ತದೆ. ಎಷ್ಟೋ ವೇಳೆ ಕೇವಲ ಹೊಸ ಅನುಭವದ ರೋಮಾಂಚನಕ್ಕಾಗಿ ಇಂಥ ಸಂಬಂಧಗಳು ಹುಟ್ಟಿಕೊಳ್ತವೆ.
ಈಗ ಹೇಳಿ, ಜನರು ಪ್ರೀತಿಗೆ ಬೀಳುವುದೇಕೆ?

ದೇವರೂ ಪ್ರೀತಿಯೂ…

ಮುಂಚೆ ಹೇಳಿದ ಎರಡು ವೈಪರೀತ್ಯಗಳನ್ನು ಗಮನಿಸಿದರೆ ನಮಗೆ ದೇವರ ಬಗೆಗಿನ ಚರ್ಚೆಯಲ್ಲಿ ಕಂಡು ಬರುವ ಎರಡು extremesಗಳ ನೆನಪಾಗದಿರದು. ತಮ್ಮನ್ನು ತಾವು ಕಳೆದುಕೊಂಡು ಧ್ಯಾನದಲ್ಲಿ, ಭಜನೆಯಲ್ಲಿ, ಪೂಜೆಯಲ್ಲಿ, ಜಾತ್ರೆ, ಯಜ್ಞ-ಯಾಗಾದಿಗಳಲ್ಲಿ ಮಗ್ನರಾಗುವ ದೈವ ಭಕ್ತರಿಗೆ ತಾವು ಪಡೆದ ಅನುಭವದ ಅನನ್ಯತೆಯ ಬಗ್ಗೆ ಅಪಾರ ನಂಬಿಕೆಯಿರುತ್ತದೆ. ಧ್ಯಾನದಲ್ಲಿ, ದೇವರ ಪೂಜೆಯಲ್ಲಿ, ದೇವರ ಮೇಲಿನ ನಂಬಿಕೆಯಲ್ಲಿ ಅವರ ಮನಸ್ಸಿಗೆ ಸಿಕ್ಕುವಂತಹ ಸಮಾಧಾನದ ಬಗ್ಗೆ ಅವರಿಗೆ ಮೋಹವಿದೆ. ತಮ್ಮ ಅನುಭವವನ್ನು ಅವರು ಅಲ್ಲಗಳೆಯಲು ಸಾಧ್ಯವಾಗುವುದಿಲ್ಲ. ಒಬ್ಬ ದೇವ ಪುರುಷನ ಸಂಗಡದಲ್ಲಿ ಅವರಿಗೆ ದೊರೆಯುವಂತಹ ಸಂತೃಪ್ತಿ, ಆತ್ಮ ಸಮಾಧಾನ, ಭರವಸೆಯನ್ನು ಆ ಪವಾಡ ಪುರುಷನ ಪವಾಡಗಳನ್ನೆಲ್ಲಾ ತಾನೂ ಮಾಡಿ ಆತನನ್ನು ಢೋಂಗಿ ಎಂದು ಸಾಬೀತು ಪಡೆಸುವ ವಿಜ್ಞಾನಿಯು ಕೊಡಲಾರ. ಹರಕೆ, ಮುಡಿಪು ಕಟ್ಟುವುದರಲ್ಲಿ ಜನರಿಗೆ ಸಿಗುವ ಆಶಾಭಾವವನ್ನು ಯಾವ ಚಿಂತಕನೂ ಅವರಿಗೆ ನೀಡಲಾರ. ಹೀಗೆ ದೈವಿಕತೆಯ ಬಗ್ಗೆ ಅಪಾರ ನಂಬಿಕೆಯಿರುವ ಆಸ್ತಿಕರು ದೇವರ ಬಗ್ಗೆ ಮಾತನಾಡುವಾಗ ತೀರಾ ಭಾವುಕರಾಗುತ್ತಾರೆ. ವಾಸ್ತವದಿಂದ ತೀರಾ ದೂರಾಗಿ ನಿಂತು ಮಾತನಾಡುತ್ತಾರೆ. ತಾರ್ಕಿಕತೆಗೆ ಸಂಪೂರ್ಣವಾಗಿ ತಿಲಾಂಜಲಿಯಿಟ್ಟು ವರ್ಣನೆಗೆ ಇಳಿಯುತ್ತಾರೆ. ಅವರ ಬಾಯಲ್ಲಿ ‘ದೇವರೆಂಬ ಅನುಭವ’ ಸರ್ವಶಕ್ತನ, ಸರ್ವಾಂತರ್ಯಾಮಿಯ, ನಿರ್ಗುಣ, ಸರ್ವಜ್ಞನ ರೂಪವನ್ನು ಪಡೆಯುತ್ತದೆ. ವರ್ಣನೆಗೆ ನಿಲುಕದ ಅನುಭೂತಿಗೆ ಅಕ್ಷರದ ರೂಪ ಕೊಡುವಾಗ ಅವು ತೀರಾ ವಾಚ್ಯವೆನಿಸುತ್ತವೆ. ಹೆಸರಿಡಲು ಸಾಧ್ಯವೇ ಇಲ್ಲದ ಅನುಭೂತಿಗೆ ಸಹಸ್ರನಾಮಗಳು ಹುಟ್ಟಿಕೊಳ್ಳುತ್ತವೆ. ತೀರಾ ವೈಯಕ್ತಿಕವಾದ ಅನುಭವಕ್ಕೆ ನೂರಾರು ಪಂಥಗಳು ಹುಟ್ಟಿಕೊಂಡು ಲಕ್ಷಾಂತರ ಸಿದ್ಧಾಂತಗಳು ಜನ್ಮ ಪಡೆಯುತ್ತವೆ.

ಇನ್ನು ‘ದೇವರು ಜನ ಸಾಮಾನ್ಯರ ಪಾಲಿನ ಅಫೀಮು’ ಎಂದು ಕರೆದು ತಮ್ಮ ಬೌದ್ಧಿಕತೆಯನ್ನು ಸಾಣೆಯಲ್ಲಿ ಮಸೆದುಕೊಂಡು ಬರುವ ನಾಸ್ತಿಕರು ಮತ್ತೊಂದು ವಿಪರೀತವನ್ನು ತಲುಪಿಕೊಳ್ಳುತ್ತಾರೆ. ಆಸ್ತಿಕರು ದೈವಿಕತೆ, ದೇವರು ಎಂದು ಕರೆಯುವುದು ತಮ್ಮ ವೈಯಕ್ತಿಕ ಅನುಭವವನ್ನು ಎಂಬ ಪ್ರಾಥಮಿಕ ಹಾಗೂ ಸರಳ ಸತ್ಯವನ್ನು ಅರಿಯದೆ ಆಸ್ತಿಕರು ತಮ್ಮ ಅನುಭವವನ್ನು ವರ್ಣಿಸುವುದಕ್ಕೆ, ವೈಯಕ್ತಿಕವಾದ ಅನುಭವವನ್ನು ಸಾರ್ವತ್ರಿಕ ಸತ್ಯವಾಗಿಸುವುದಕ್ಕೆ ಬಳಸಿಕೊಂಡ ವ್ಯಾಖ್ಯಾನಗಳನ್ನು ಹಿಡಿದು ವಾದಿಸಲು ಕುಳಿತುಕೊಳ್ಳುತ್ತಾರೆ. ಆಸ್ತಿಕರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು, ಒಲವನ್ನು ಜಾಗತಿಕ ಶ್ರದ್ಧೆಯಾಗಿಸುವ ಭರದಲ್ಲಿ ಅನುಸರಿಸುವ ಮಾರ್ಗಗಳ ಮೇಲೆ ಕ್ಷ-ಕಿರಣ ಬೀರಿ ತೀರ್ಮಾನಗಳಿಗೆ ಬರಲು ನಾಸ್ತಿಕರು ಸಿದ್ಧರಾಗುತ್ತಾರೆ. ದೇವರು ಸರ್ವಶಕ್ತ ಎಂದು ಹೇಳಿದಾಗ ಆತನಿಗೇಕೆ ಜಗತ್ತಿನ ದುಃಖವನ್ನು, ಪೀಡೆಯನ್ನು, ರೋಗ ರುಜಿನವನ್ನು ನಿವಾರಿಸುವುದಕ್ಕೆ ಆಗಿಲ್ಲ ಎಂದು ಪ್ರಶ್ನಿಸುತ್ತದೆ ನಾಸ್ತಿಕತೆ. ದೇವರು ನಿರ್ಗುಣನು ಎಂದಾಗ, ಹಾಗಾದರೆ ಕೋಪವೇ ಮೈವೆತ್ತ ಶಿವ, ಸೌಮ್ಯತೆಯ ಸಾಕಾರ ಮೂರ್ತಿಯಾದ ವಿಷ್ಣುವಿನ ನಂಬಿಕೆಗಳೆಲ್ಲಾ ಕಾಲ್ಪನಿಕವಾ ಎಂದು ಕೊರಳಪಟ್ಟಿ ಹಿಡಿದು ಉತ್ತರಕ್ಕಾಗಿ ಪೀಡಿಸುತ್ತಾನೆ ನಾಸ್ತಿಕ. ಆತ ಎದುರಾಳಿಯ ವಾದವನ್ನು ಖಂಡತುಂಡ ಮಾಡುವ ಭರದಲ್ಲಿ ಏಕಾಂತದ ಮೌನದಲ್ಲಿ ದೊರೆಯುವ ದೈವಿಕತೆಯ ಅನುಭೂತಿಯನ್ನು ಗ್ರಹಿಸಲಾರದಷ್ಟು ಗದ್ದಲವನ್ನು ಸೃಷ್ಟಿಸಿಕೊಂಡುಬಿಟ್ಟಿರುತ್ತಾನೆ.
ಥೇಟ್ ಇದೇ ರೀತಿಯಲ್ಲಿ ನಡೆಯುತ್ತದೆ ಪ್ರೀತಿಯ ಬಗೆಗಿನ ನಮ್ಮ ವಾದ-ವಿವಾದ.

ಭಾವನೆಗಳ ಅತಾರ್ಕಿಕತೆ

ಭಾವನೆಗಳು ತರ್ಕಕ್ಕೆ ನಿಲುಕದಂಥವು. Emotions are illogical. ಭಾವನೆಗಳಿಗೆ ಕಾರಣಗಳನ್ನು ಕೊಡಲು ಯಾರಿಗೂ ಸಾಧ್ಯವಿಲ್ಲ. ಕಾರಣ ಕೊಡುವ ಒತ್ತಾಯವಿದ್ದರೆ ಅಲ್ಲಿ ಆ ಭಾವನೆ ಸತ್ವ ಕಳೆದುಕೊಳ್ಳುತ್ತದೆ. ನಿರ್ಜೀವವಾಗುತ್ತದೆ. ಅರಳಿನಿಂತ ಗುಲಾಬಿ ತೋಟವನ್ನು ನೋಡಿದಾಗ ಮನಸ್ಸಿಗೇಕೆ ಉಲ್ಲಾಸವಾಗುತ್ತದೆ ಎಂದು ಕೇಳಿದರೆ ಉತ್ತರ ಸಿಗುತ್ತದೆಯೇ? ಕಿಲ ಕಿಲ ನಗುವ l7.pngಮಗುವಿನ ಮುಖ ನೋಡಿದಾಗ ನಮ್ಮೆಲ್ಲಾ ಕ್ರೂರತೆ ಒಂದು ಕ್ಷಣ ಮರೆತು ಹೋಗಿಬಿಡುತ್ತಲ್ಲಾ ಅದರ ಬಗ್ಗೆ ಏನಂತ ವಿವರಣೆ ಕೊಡಲು ಸಾಧ್ಯ? ಅಗಾಧವಾದ ಜಲರಾಶಿ ಕಾಲು ಮುರಿದುಕೊಂಡು ಬಿದ್ದಂತಿರುವ ಸಮುದ್ರದೆದುರು ನಾವೆಷ್ಟು ಸಣ್ಣವರು ಅನ್ನಿಸುತ್ತದೆಯಲ್ಲ, ಹಾಗೇಕೆ ಅಂತ ಕೇಳಿದರೆ ಉತ್ತರ ಕೊಡಲು ಸಾಧ್ಯವಾ? ಪರೀಕ್ಷಯಲ್ಲಿ ಫೇಲಾಗಿ ಕುಳಿತಾಗ, ಎಲ್ಲರೂ ನಮ್ಮನ್ನು ಮರೆತಾಗ ಮೆಲ್ಲಗೆ ಭುಜದ ಮೇಲೆ ಕೈಯಿರಿಸಿ ಅಕ್ಕರೆಯ ಮಾತನಾಡುವ ಗೆಳೆಯನಿಗೆ ಸರಿಸಾಟಿಯಾದ ವ್ಯಕ್ತಿ ಈ ಜಗತ್ತಿನಲ್ಲೇ ಇಲ್ಲ ಅನ್ನಿಸುತ್ತದೆಯಲ್ಲಾ ಅದನ್ನು ಭ್ರಮೆ ಅನ್ನಲು ಸಾಧ್ಯವಾ? ಬದುಕಿನಲ್ಲಿ ಇನ್ನು ಆಶಾಕಿರಣ ಕಾಣಲು ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿ ಕುಳಿತವನಿಗೆ ದೇವರ ಮುಂದೆ ನಿಂತಾಗ ಮೂರ್ತಿಯ ಬಲಭಾಗದಿಂದ ಬಿದ್ದ ಹೂವು ಹೊಸ ಸಾಹಸಕ್ಕೆ ಕೈ ಹಾಕುವಂತೆ ಮಾಡುತ್ತದೆಯಲ್ಲಾ ಅದನ್ನು ಭ್ರಾಂತಿ ಎಂದು ಕರೆಯಲು ಸಾಧ್ಯವಾ? ಹೀಗೆಯೇ ಪ್ರೀತಿ ಕೂಡ, ಪ್ರೀತಿಯಲ್ಲಿ ಬಿದ್ದವರಿಗೆ ದೊರೆಯುವ ಅನುಭವ, ರೋಮಾಂಚನ, ಕ್ಷಣಕ್ಕೂ ಹುಟ್ಟಿಕೊಳ್ಳುವ ಹುರುಪು, ಸುತ್ತಲಿನದೆಲ್ಲವನ್ನೂ ಮರೆತು ಒಳಗೊಳಗೇ ಕಚಗುಳಿಯಿಟ್ಟುಕೊಂಡು ನಗುವ ಉಲ್ಲಾಸ ಎಲ್ಲವನ್ನೂ ಭ್ರಮೆ ಎಂದು ತಳ್ಳಲು ಸಾಧ್ಯವಾಗುವುದಿಲ್ಲ. ತರ್ಕದ ಪಂಡಿತರು ಏನೇ ಹೇಳುತ್ತಿದ್ದರೂ ಪ್ರೇಮಿಗೆ ತನ್ನ ಜಗತ್ತೇ ಮಹತ್ತಾಗಿ ಕಾಣಿಸುತ್ತದೆ.

ಜಗತ್ತೇ ಶತೃವಾಗುತ್ತದೆ!

ಅದು ಕೇವಲ ಪ್ರೀತಿಯಲ್ಲಿ ಬಿದ್ದವರಿಗಾಗುವ ಅನುಭವವಲ್ಲ. ಬೆಳೆಸಿದ ತಂದೆ ತಾಯಿಯರೇ ಹಿತಶತೃಗಳಾಗಿ ಕಾಣುತ್ತಿರುತ್ತಾರೆ. ಆಪ್ತರ, ಹಿತಚಿಂತಕರ ಬುದ್ಧಿ ಮಾತುಗಳು ಕಾದ ಸೀಸದ ಹಾಗೆ ಕಿವಿಗೆ ಬಿದ್ದಂತೆ ಅನ್ನಿಸುತ್ತಿರುತ್ತದೆ. ಯಾರು ಏನೇ ಹೇಳಿದರೂ ನಮಗೆ ನಮ್ಮನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಲವು ಬಾರಿ ನಮಗೇ ಇದು ಸರಿಯಲ್ಲ, ಅಪ್ಪ ಅಮ್ಮ ಹೇಳುವುದು ಸರಿ ಅನ್ನಿಸಿದರೂ ಬದಲಾಗಲಾಗುವುದಿಲ್ಲ.
ನಾಟಕದ ಗೀಳಿಗೆ ಬಿದ್ದವರು, ಸಿನೆಮಾದಲ್ಲಿ ಹೀರೋ ಆಗುತ್ತೇನೆ ಅಂತ ಅಲೆಯುವವರು, ಕಥೆ-ಕವನ ಅಂತ ಸಾಹಿತ್ಯ ರೂಢಿಸಿಕೊಂಡವರು, ಓದುತ್ತ ಕುಳಿತಿರುವಾಗ ಕದ್ದು ಪುಸ್ತಕದ ಹಿಂದಿನ ಪುಟಗಳಲ್ಲಿ ಚಿತ್ರ ಬರೆಯುವವರು, ಕ್ಲಾಸಲ್ಲಿ ಕೂತು ಪಾಠ ಕೇಳದೆ ಬಿಸಿಲಲ್ಲಿ ಗಂಟೆ ಗಟ್ಟಲೆ ಕ್ರಿಕೆಟ್ ಆಡುವವರು- ಇವರೆಲ್ಲರಿಗೂ ಹೀಗೇ, ಆ ಸಮಯದಲ್ಲಿ ಜಗತ್ತೇ ಶತೃವಾಗಿರುತ್ತದೆ. ಬುದ್ಧಿಮಾತುಗಳಿಗೆಲ್ಲಾ ಅವರ ಕಿವಿ ಕಿವುಡಾಗಿರುತ್ತವೆ.
ತಾವು ಇಷ್ಟಪಟ್ಟ ಸಂಗತಿಯಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಅವರಿಗೆ ವಿಪರೀತವಾದ ಸಮಾಧಾನ ಸಿಕ್ಕುತ್ತಿರುತ್ತದೆ. ಆತ್ಮ ತೃಪ್ತಿ ಸಿಗುತ್ತಿರುತ್ತದೆ. ತಾವು ಮಾಡುವ ಕೆಲಸವನ್ನು ಅವರು ಅಪಾರವಾಗಿ ಪ್ರೀತಿಸುತ್ತಿರುತ್ತಾರೆ. ಅದಕ್ಕಾಗಿ ಅವರು ಪಡುವ ಶ್ರಮ, ಅದರಿಂದಾಗುವ ಆಯಾಸ ಅವರಿಗೆ ಆಪ್ಯಾಯಮಾನವಾಗಿ ಕಾಣುತ್ತದೆ. ಯಾರೆಷ್ಟೇ ವಿರೋಧ ಮಾಡಿದರೂ ಅವರ ಕಣ್ಣು ತಪ್ಪಿಸಿಯಾದರೂ ಅವರು ತಮ್ಮ ಪ್ರಿಯವಾದ ಸಂಗತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಪ್ರೀತಿಯ ಕಲ್ಪನೆ

ವಯಸ್ಸಿಗೆ ಬಂದ ಹುಡುಗನಿಗೆ ತಾನು ಮೆಚ್ಚಿದ ಹುಡುಗಿ ಒಮ್ಮೆ ತನ್ನ ನೋಡಿ ನಕ್ಕುಬಿಟ್ಟರೆ ಜಗತ್ತನ್ನೇ ಗೆದ್ದ ಸಂಭ್ರಮವಾಗುತ್ತದೆ. ಈತನ ಕಳ್ಳನೋಟಕ್ಕೆ ಆಕೆಯ ಕಡೆಯಿಂದ ಗ್ರೀನ್ ಸಿಗ್ನಲ್ ದೊರೆತು ಬಿಟ್ಟರೆ ಇವನ ಕಾಲುಗಳು ನೆಲದ ಮೇಲೆ ನಿಲ್ಲುವುದೇ ಇಲ್ಲ. ಒಮ್ಮೆ ಒಬ್ಬರಿಗೊಬ್ಬರು ಇಷ್ಟವಾಗಿದ್ದೇವೆ ಎನ್ನುವ ಸುಳಿವು ಇಬ್ಬರಿಗೂ ಸಿಕ್ಕರೆ ಆಗ ಅವರು ಸಾಮಾನ್ಯ ಹುಡುಗ-ಹುಡುಗಿಯರಾಗಿ ಉಳಿದಿರುವುದಿಲ್ಲ. ಅವರಾಗಲೇ ಪ್ರೇಮಿಗಳಾಗಿರುತ್ತಾರೆ. ತಮ್ಮನ್ನು ತಾವು ಪ್ರೇಮಿಗಳು ಎಂದೇ ಭಾವಿಸಿಕೊಳ್ಳುತ್ತಾರೆ.

ಮಜವಿರುವುದೇ ಇಲ್ಲಿ. ಒಬ್ಬರನ್ನೊಬ್ಬರು ಇಷ್ಟಪಡುವ ಹುಡುಗ ಹುಡುಗಿಗೆ ಪ್ರೀತಿಯ ಬಗ್ಗೆ, ಪ್ರೇಮಿಗಳು ಹೇಗಿರುತ್ತಾರೆ, ಪ್ರೇಮಿಗಳು ಹೇಗಿರಬೇಕು ಎನ್ನುವುದರ ಬಗ್ಗೆ ತಿಳಿಯುವುದೇ ಈ ಸಮಾಜದಿಂದ. ಇಲ್ಲಿನ ಉದಾಹರಣೆಗಳೇ ಅವರಿಗೆ ತಾವು ಪ್ರೀತಿಸುತ್ತಿದ್ದೇವೆ, ತಾವು ಪ್ರೇಮಿಗಳು ತಾವು ಇನ್ನು ಮುಂದೆ ಹೇಗೆ ವರ್ತಿಸಬೇಕು ಎಂಬುದನ್ನು ಹೇಳಿಕೊಟ್ಟಿರುತ್ತವೆ. ಹೀಗಿರುವಾಗ ಒಮ್ಮೆ ಅವರು ಪ್ರೀತಿಸಲು ತೊಡಗಿದರೆ ಇಡೀ ಸಮಾಜವನ್ನೇ ಶತೃವಾಗಿ ಕಾಣಲಾರಂಭಿಸುತ್ತಾರೆ. ಸಮಾಜ ನಮ್ಮನ್ನು ಬೇರೆ ಮಾಡಲು ಹಗಲು ರಾತ್ರಿ ಶ್ರಮಿಸುತ್ತಿದೆ ಅಂತ ಕಲ್ಪಿಸಿಕೊಂಡು ಸುಖಿಸುತ್ತಿರುತ್ತಾರೆ, ಪಾಪ ಸಮಾಜಕ್ಕೆ ಮಾಡಲು ಬೇರೆ ಕೆಲಸವೇ ಇಲ್ಲ ಎಂಬಂತೆ! ಇವರು ಪ್ರೀತಿಯ ಬಗ್ಗೆ ತಿಳಿದುಕೊಂಡಿರುವುದೆಲ್ಲಾ ಸಮಾಜದಿಂದ, ತಾವು ನೋಡಿದ ಸಿನೆಮಾಗಳಿಂದ ಪ್ರೇಮಿಗಳು ಹೇಗಿರುತ್ತಾರೆ, ಪ್ರೇಮಿಗಳಿಗೆ ಸಮಾಜ ಯಾವ ರೀತಿಯ ಸ್ಥಾನಮಾನ ಕೊಡುತ್ತದೆ ಎಂಬುದನ್ನು ನೋಡಿ ಕಲ್ಪಿಸಿಕೊಂಡಿರುತ್ತಾರೆ. ತಾವೂ ಈಗ ಹಾಗೆಯೇ ಇದ್ದೇವೆ ಎಂದುಕೊಂಡು ಬೀಗುತ್ತಿರುತ್ತಾರೆ. ಸಿನೆಮಾದ ಅತಿಭಾವುಕತೆ, ನಾಟಕೀಯತೆ ಅವರ ವರ್ತನೆಯಲ್ಲಿ ಬೆರೆತಿರುತ್ತದೆ. ಇವೆಲ್ಲವೂ ಪ್ರೀತಿ ತಮಗೆ ಕಲಿಸಿದ್ದು ಎಂದು ಭಾವಿಸಿರುತ್ತಾರೆ, ಪೆದ್ದರು, ಇದೆಲ್ಲಾ ತಮಗೆ ಕಲಿಸಿದ್ದು ಸಮಾಜವೇ ಎಂಬುದು ಅವರಿಗೆ ತಿಳಿಯುವುದೇ ಇಲ್ಲ!

ರೂಢಿಗೆ ಬಂಧಿತರು

ಈ ಪ್ರೀತಿಯ ಮಾಯೆಯೇ ಅಂಥದ್ದು. ತನ್ನ ತಂಗಿ ಯಾರನ್ನೋ ಪ್ರೀತಿಸುತ್ತಿದ್ದಾಳೆ ಎಂದು ತಿಳಿದಾಗ ಅಣ್ಣನಾದವನು ಎಷ್ಟು ಸಿಟ್ಟಿಗೆ ಒಳಗಾಗುತ್ತಾನೆ. ತನ್ನ ತಂಗಿ ದಾರಿ ತಪ್ಪುತ್ತಿದ್ದಾಳೆ ಅಂತ ಹಪಹಪಿಸುತ್ತಾನೆ, ಪ್ರೀತಿಯಿಂದ ಆಕೆಯ ಭವಿಷ್ಯವೇ ಹಾಳಾಗಬಹುದು ಅಂತ ಆಕೆಗೆ ತಿಳಿದಿಲ್ಲವಾ ಎಂದು ಹಳಹಳಿಸುತ್ತಾನೆ, ಆಕೆಯೇನೋ ಅಪರಾಧ ಮಾಡಿದ್ದಾಳೆಯೋ ಎಂಬಂತೆ ಆಕೆಯನ್ನು ದ್ವೇಷಿಸುತ್ತಾನೆ. ಆದರೆ ತಾನು ಪ್ರೀತಿಸುತ್ತಿರುವ ಹುಡುಗಿ ಸಹ ಯಾರೋ ಒಬ್ಬ ಅಣ್ಣನಿಗೆ ತಂಗಿಯಾಗಿರಬಹುದು. ಒಬ್ಬ ತಂದೆಗೆ ಮಗಳಾಗಿರುತ್ತಾಳೆ ಎನ್ನುವುದನ್ನು ಆತ ಕಲ್ಪಿಸಿಕೊಳ್ಳಲು ಸಾಧ್ಯವಾ?

ಖಂಡಿತಾ ಇಲ್ಲ. ಪ್ರೀತಿ ಎನ್ನುವುದು ತೀರಾ ವೈಯಕ್ತಿಕ ಅನುಭವ ಎಂದು ಹೇಳಿದ್ದೆನಲ್ಲ, ಹಾಗಾಗಿ ಸ್ವತಃ ಪ್ರೀತಿಸಿದವರಿಗೂ ಇನ್ನೊಬ್ಬರ ಪ್ರೀತಿಯ ಆಳವನ್ನು, ಅವರ ಅನುಭವವನ್ನು ಗೌರವಿಸಲು ಸಾಧ್ಯವಾಗುವುದಿಲ್ಲ. ಚಿಕ್ಕವರಿದ್ದಾಗ ಯಾರೋ ಎದುರು ಮನೆಯ ಹುಡುಗ ಪಕ್ಕದ ಮನೆಯಾಕೆ ಜೊತೆ ನಗುತ್ತಾ ಮಾತನಾಡಿದರೆ ಲೈನು ಹೊಡಿತಿದ್ದಾನೆ ಅಂತ ಯೋಚಿಸುತ್ತಿರುತ್ತಾರಲ್ಲ ಥೇಟು ಹಾಗೆಯೇ ಎಷ್ಟೇ ವಯಸ್ಸಾದರೂ ಯೋಚಿಸುತ್ತಾರೆ. ಅದಕ್ಕಾಗಿಯೇ ಸ್ವತಃ ಪರಸ್ಪರ ಪ್ರೀತಿಸಿ ಮನೆಯಿಂದ ಓಡಿಹೋಗಿ ಮದುವೆಯಾದ ಅಪ್ಪ ಅಮ್ಮಂದಿರು ಸಹ ತಮ್ಮ ಮಕ್ಕಳು ಯಾರನ್ನೋ ಪ್ರೀತಿಸಿದ್ದಾರೆ ಎಂದರೆ ದಿಗಿಲಿಗೆ ಬೀಳುತ್ತಾರೆ. ಅನವಶ್ಯಕ ಆತಂಕಕ್ಕೆ ಒಳಗಾಗುತ್ತಾರೆ. ತಮ್ಮ ತಂದೆ ತಾಯಿಗಳು ಮಾಡಿದಂತೆ ಮಕ್ಕಳನ್ನು ಹದ್ದು ಬಸ್ತಿನಲ್ಲಿಡುವ ವ್ಯರ್ಥ ಪ್ರಯತ್ನಗಳಿಗೆ ಕೈ ಹಾಕುತ್ತಾರೆ.

ಸಮಾಜದ ಟ್ರಿಕ್ಕು

ಪ್ರೀತಿ ಕುರುಡು, ಪ್ರೀತಿ ಮುಖ ನೋಡಿ, ಅಂತಸ್ತು, ವಯಸ್ಸು ನೋಡಿ ಹುಟ್ಟುವುದಲ್ಲ. ಪ್ರೀತಿಗೆ ಯಾರೂ ಬೇಲಿ ಹಾಕಲು ಸಾಧ್ಯವಿಲ್ಲ ಎಂದೆಲ್ಲಾ ಆದರ್ಶದ ಮಾತುಗಳನ್ನಾಡುವ ಪ್ರೇಮಿಗಳು ಸಹ ತಮಗೆ ಗೊತ್ತಿಲ್ಲದೆಯೇ ಸಮಾಜದ ಟ್ರಿಕ್ಕಿಗೆ ಬಲಿಯಾಗಿರುತ್ತಾರೆ. ಪ್ರೀತಿ ಕುರುಡು, ಯಾರ ಮೇಲೆ ಯಾರಿಗೆ ಬೇಕಾದರೂ ಪ್ರೀತಿ ಬೆಳೆಯಬಲ್ಲದು ಎಂಬುದನ್ನು ವೇದವಾಕ್ಯ ಎಂದು ನಂಬಿಕೊಂಡ ಹುಡುಗನಿಗೆ ತನ್ನ ಹುಡುಗಿ ಇನ್ಯಾರೋ ಹುಡುಗನನ್ನು ಇಷ್ಟ ಪಡುತ್ತಿದ್ದಾಳೆ ಎಂಬ ಸಂಶಯ ಬಂದೊಡನೆ ಕುದ್ದು ಹೋಗುತ್ತಾನೆ. ಪ್ರೀತಿಯಲ್ಲಿ ಭಿನ್ನಾಭಿಪ್ರಾಯಗಳು, ಜಗಳಗಳು ಇರುವುದಿಲ್ಲ ಎಂದು ಭಾವಿಸಿದ ಹುಡುಗಿಗೆ ತನ್ನ ಹುಡುಗ ಪೆದ್ದು ಪೆದ್ದಾಗಿ ವರ್ತಿಸುವುದು ವಿಪರೀತ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಬೇರೆಲ್ಲಾ ಸಂಗತಿಗಳಲ್ಲಿ ಆದರ್ಶವೇ ಬೇರೆ ವಾಸ್ತವವೇ ಬೇರೆಯಾದಂತೆಯೇ ಪ್ರೀತಿಯ ಆದರ್ಶ ಪಾಲಿಸುವಾಗ ಪ್ರೇಮಿಗಳು ತಮ್ಮ ವ್ಯಕ್ತಿತ್ವದ ದೌರ್ಬಲ್ಯಗಳಿಂದ ಹೊರ ಬರಲು ಸಾಧ್ಯವಾಗುವುದಿಲ್ಲ.

ಪ್ರೀತಿ ಅಮರ ಎಂದು ಹಾಡಿದ ಪ್ರೇಮಿಗಳು ಮದುವೆಯಾಗಿ ಒಂದೆರಡು ವರ್ಷ ಕಳೆಯುವಷ್ಟರಲ್ಲಿ ಒಬ್ಬರ ಸಾಂಗತ್ಯ ಒಬ್ಬರಿಗೆ ಉಸಿರುಗಟ್ಟಿಸುವಂತಿರುತ್ತದೆ. ಅವರಿಬ್ಬರ ಪ್ರೀತಿ ಅಕ್ಷರಶಃ ಮದುವೆಯಲ್ಲಿ ಅಂತ್ಯವಾಗಿರುತ್ತದೆ. ಪಡ್ಡೆ ವಯಸ್ಸಿನಲ್ಲಿ ಪ್ರೇಮಿಗಳು ವ್ಯವಸ್ಥೆಯ ವಿರುದ್ಧ ಹೋರಾಡುವವರು, ಸಮಾಜಕ್ಕೆ ಅಂಜದವರು ಎಂದೆಲ್ಲಾ ಬಡಾಯಿ ಹೊಡೆಯುವವರು ಮದುವೆಯಾದ ಮೇಲೆ ಸಮಾಜ ವಿಧಿಸಿದ ರೂಲುಗಳಿಗೆ ಅನುಗುಣವಾಗಿಯೇ ವರ್ತಿಸಲು ಶುರು ಮಾಡುತ್ತಾರೆ. ತಮ್ಮ ಪ್ರೀತಿ, ಮಧುರ ಭಾವಗಳಿಗೆ ತಿಲಾಂಜಲಿ ಇತ್ತು ಇಡೀ ಬದುಕನ್ನು ಕರೆಂಟು ಬಿಲ್ಲು, ರೇಷನ್ನು, ಸೇವಿಂಗ್ಸ್‌ನ ವಿಚಾರದ ಚರ್ಚೆಯಲ್ಲೇ ಕಳೆದುಬಿಡುತ್ತಾರೆ. ಭಾವುಕ ಮಟ್ಟದಲ್ಲಿರುವ ಪ್ರೀತಿಯ ಆದರ್ಶ ವಾಸ್ತವಕ್ಕೆ ಹೊಂದಿಕೆಯಾಗದಿದ್ದಾಗಲೇ ಹೀಗಾಗುವುದು.

ಪ್ರೀತಿ ಮರೀಚಿಕೆ?

ಇಷ್ಟೆಲ್ಲಾ ಹೇಳಿದ ನಂತರವೂ ನಾವು ಪ್ರೀತಿಯನ್ನು ಕಂಡುಕೊಳ್ಳಲು ಸಾಧ್ಯವಾಗದು. ಪಂಡಿತನಾದವನು ಆತ್ಮಸಾಕ್ಷಾತ್ಕಾರದಿಂದ ದೂರ ಹೋಗುತ್ತಾನೆ ಎಂಬ ಮಾತಿದೆ. ಹಾಗೆಯೇ ಪ್ರೀತಿಯೂ. ಹೆಚ್ಚು ಮಾತನಾಡುವವನಿಗೆ ಪ್ರೀತಿ ಮರೀಚಿಕೆಯಾಗುತ್ತದೆ. ಪ್ರೀತಿಯ ಬಗ್ಗೆ ಏನೇ ಮಾತಾಡಲಿ, ಪ್ರೀತಿಯನ್ನು ಆತ ವಿಸ್ಮಯ ಎಂದು ಬಣ್ಣಿಸಲಿ, ಭ್ರಮೆ ಎಂದು ಕರೆಯಲಿ ಆತ ಪ್ರೀತಿಗೆ ತನ್ನನ್ನು ಒಡ್ಡಿಕೊಳ್ಳುವವರೆಗೆ ಆತನಿಗೆ ಪ್ರೀತಿಯ ಅನುಭವ ದಕ್ಕದು.

ಹಾಗಾದರೆ ಪ್ರೀತಿ ಎಂದರೇನು? ಪ್ರೀತಿ ಕುರುಡಾ, ಪ್ರೀತಿ ವಿಸ್ಮಯವಾ, ಪ್ರೀತಿ ಭ್ರಮೆಯಾ, ಪ್ರೀತಿ ವಂಚನೆಯಾ, ಪ್ರೀತಿ ಜೀವನ ವಿಧಾನವಾ, ಪ್ರೀತಿ ನಮ್ಮ ವ್ಯಕ್ತಿತ್ವದ ಅಭಿವ್ಯಕ್ತಿಯಾ? ಮಾತಾಡಬೇಕೆಂದಾದರೆ ಎಲ್ಲವೂ ಹೌದು, ಪ್ರೀತಿ ಮಾಡುವವರಿಗೆ ಅದು ಯಾವುದೂ ಅಲ್ಲ. ಅದೊಂದು… ಹೋಗಲಿ ಬಿಡಿ, ಮತ್ಯಾಕೆ ಮಾತು!


Technorati : , , , ,

ಈ ಬರಹದ ಲೇಖಕರು ‘ಅಂತರ್ಮುಖಿ’.

Love is only a dirty trick played on us to achieve continuation of the species.
-W. Somerset Maugham

ಪ್ರಸ್ತುತ ನಮ್ಮ ಸುತ್ತಲಿರುವ ಮಾಧ್ಯಮಗಳ ಮನಸ್ಥಿತಿ, ನಮ್ಮ ಸಾಹಿತ್ಯ, ನಮ್ಮ ಸಿನೆಮಾಗಳಲ್ಲಿನ ಪ್ರೀತಿಯ ವೈಭವೀಕರಣವನ್ನು ಗಮನಿಸಿದರೆ, ನಿರ್ಭಾವುಕರಾಗಿ ಅವಲೋಕಿಸುವ ಪ್ರಯತ್ನ ಮಾಡಿದರೆ ‘ಹುಮನ್ ಬಾಂಡೇಜ್’ನಂತಹ ಶ್ರೇಷ್ಠ ಕೃತಿಯನ್ನು ರಚಿಸಿದ ಸೊಮರ್‍ಸೆಟ್ ಮಾಮ್‌ ಹೇಳಿದ ಈ ಮೇಲಿನ ಮಾತು ಎಷ್ಟು ಸಕಾಲಿಕವಾದದ್ದು ಹಾಗೂ ಸರ್ವಕಾಲೀನವಾದದ್ದು ಎಂಬುದರ ಅರಿವಾದೀತು.

ನಮ್ಮ ಬದುಕಿನಲ್ಲಿ ಏಕೆ ಬೇರಾವ ಮಾನವೀಯ ಸಂಬಂಧಗಳಿಗೂ ಇಲ್ಲದಂತಹ ಪ್ರಾಮುಖ್ಯತೆ ಹೆಣ್ಣು ಹಾಗೂ ಗಂಡಿನ ನಡುವಿನ ಸಂಬಂಧಕ್ಕೆ ಕೊಡುತ್ತೇವೆ. ನಮ್ಮ ಸಮಾಜವೇಕೆ ಬೇರಾವ ಸಂಗತಿಗಳಿಗೆ ಕೊಡದಷ್ಟು ಮಹತ್ವವನ್ನು ಮದುವೆ, ದಾಂಪತ್ಯದ ರಗಳೆಗೆ ಕೊಡುತ್ತದೆ? ನಮ್ಮ ಮಾಧ್ಯಮಗಳಲ್ಲೇಕೆ ಹೆಣ್ಣು-ಗಂಡಿನ ನಡುವಿನ ಪ್ರೀತಿಗೆ ಅತಿಭಾವುಕವಾದ, ವಾಸ್ತವದಿಂದ ದೂರಾದ ಪ್ರತಿಕ್ರಿಯೆ ದೊರೆಯುತ್ತದೆ? ನಾವಿರೋದೇ ಹೀಗಾ, ನಮ್ಮ ಬದುಕಿನಲ್ಲಿ ಪ್ರೀತಿಯೇ ಪ್ರಮುಖವಾದದ್ದು , ನಮ್ಮ ಜೀವನದ ಸತ್ಯಗಳನ್ನೇ ಕಲೆ ಪ್ರತಿಬಿಂಬಿಸುತ್ತದೆಯಾ?l15.png

ಬಹುಶಃ ದೇವರ ಇರುವಿಕೆಯ ಬಗ್ಗೆ, ದೇವರ ಗುಣಗಳ ಬಗ್ಗೆ ನಡೆದಿರುವ ಚರ್ಚೆ, ವಾದಗಳನ್ನು ಹೊರತು ಪಡಿಸಿದರೆ ಆ ಮಟ್ಟಿಗೆ ಚರ್ಚೆಗೆ, ಚಿಂತನೆಗೆ, ಅನುಭವದ ಜಗತ್ತಿಗೆ ಹತ್ತಿರವಾದದ್ದು ಪ್ರೀತಿಯೇ. ಇಲ್ಲಿ ಪ್ರೀತಿಗಿರುವ ಸಹಸ್ರಾರು ವ್ಯಾಖ್ಯಾನಗಳು, ನೂರಾರು ಅರ್ಥಗಳು, ವಿಶಾಲವಾದ ವ್ಯಾಪ್ತಿಯನ್ನು ಮನ್ನಿಸಿ ಚರ್ಚೆ ನಡೆಸಲು ಮುಂದಾದರೆ ನಾವು ಎಡವುವುದು ಖಂಡಿತಾ. ತಾಯಿಗೆ ಮಗುವಿನ ಮೇಲಿರುವ ಮಮತೆ, ಮಗಳಿಗೆ ತಂದೆಯ ಮೇಲಿರುವ ಅಭಿಮಾನ, ತಂಗಿಗೆ ಅಣ್ಣನ ಮೇಲಿರುವ ಮೆಚ್ಚುಗೆ, ಶಾಲೆಯಲ್ಲಿನ ಟೀಚರ್‍ಗೆ ಚೂಟಿಯಾದ ಹುಡುಗನ ಮೇಲಿರುವ ಒಲುಮೆ, ತಮ್ಮ ನಾಯಕನ ಮೇಲೆ ಹಿಂಬಾಲಕರಿಗಿರುವ ಗೌರವ, ಸಿನೆಮಾ ನಟನ ಬಗ್ಗೆ ಪಡ್ಡೆ ಹುಡುಗಿಯರಿಗಿರುವ ಆಕರ್ಷಣೆ, ಸಾಧನೆ ಮಾಡಿದ ವ್ಯಕ್ತಿಯ ಬಗ್ಗೆ ಇರುವ ಅನನ್ಯವಾದ ಭಾವ, ದೇಶದ ಬಗ್ಗೆ ಸೈನಿಕನೊಬ್ಬನಿಗಿರುವ ಹೆಮ್ಮೆ, ದೇವರ ಮೇಲೆ ಭಕ್ತನಿಗಿರುವ ಶ್ರದ್ಧೆ, ತನ್ನ ಕೆಲಸದ ಬಗ್ಗೆ ಕಾರ್ಮಿಕನಿಗಿರುವ ಮೋಹ, ತನ್ನ ಪ್ರತಿಭೆಯ ಬಗ್ಗೆ ಕಲಾವಿದನಿಗಿರುವ ಗೀಳು – ಈ ಎಲ್ಲಾ ಪರಸ್ಪರ ವೈರುಧ್ಯದ ಭಾವಗಳಿಗೆಲ್ಲಾ ನಾವು ಪ್ರೀತಿ ಎಂಬ ಹೆಸರನ್ನು ಕೊಟ್ಟು ಪ್ರೀತಿಯ ಬಗ್ಗೆ ಮಾತನಾಡಲು ಕುಳಿತರೆ ಅತಿಭಾವುಕತೆಗೆ, ಅತಾರ್ಕಿಕ ತೀರ್ಮಾನಗಳಿಗೆ ತಲುಪುವ ಅಪಾಯವಿದ್ದೇ ಇದೆ.

ಮೇಲೆ ಹೇಳಿರುವ ಸಕಲೆಂಟು ಭಾವಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದ್ದರೂ ಪ್ರೀತಿಗೆ, ಅಂದರೆ ಹೆಣ್ಣು-ಗಂಡಿನ ನಡುವಿನ ಸಂಬಂಧಕ್ಕೆ ಮಾತ್ರ ನಾವು ಈ ಮಟ್ಟಿಗಿನ ಪ್ರಾಮುಖ್ಯತೆಯನ್ನೇಕೆ ಕೊಟ್ಟಿದ್ದೇವೆ? ನಮ್ಮ ಸಿನೆಮಾಗಳಲ್ಲಿ, ಕತೆ, ಕಾದಂಬರಿಗಳಲ್ಲಿ, ಪತ್ರಿಕೆಗಳಲ್ಲಿ, ಟಿವಿ ಚಾನಲ್ಲುಗಳ ಸೀರಿಯಲ್ಲುಗಳಲ್ಲಿ, ಗೆಳೆಯರ ನಡುವಿನ ಸಂಭಾಷಣೆಯಲ್ಲಿ ಯಾಕೆ ಪ್ರೀತಿ ಇಷ್ಟು ಪರಿಣಾಮಕಾರಿಯಾಗಿ ಸುಳಿದಾಡುತ್ತದೆ? ಬಹುಶಃ ಸೋಮರ್‌ಸೆಟ್ ಮಾಮ್ ಹೇಳಿದ ಮಾತೇ ಇದಕ್ಕೆ ಕಾರಣವಿರಬೇಕು. ತೀರಾ ಪ್ರಾಕೃತಿಕವಾದ, ಆಹಾರ, ನಿದ್ರೆಯಷ್ಟೇ ಸ್ವಾಭಾವಿಕ ಹಾಗೂ ಅನಿವಾರ್ಯವಾದ ಲೈಂಗಿಕತೆಯನ್ನು ನಾವು ಹೀಗೆ ಎಲ್ಲರಿಗೂ ಒಪ್ಪಿಗೆಯಾಗುವಂತಹ,ನಮಗಿಷ್ಟವಾಗುವ ಮಡಿ ಮಡಿಯಾದ ರೀತಿಯಲ್ಲಿ ಪ್ರೆಸೆಂಟ್ ಮಾಡುವುದಕ್ಕಾಗಿ ಈ ಪ್ರೀತಿ, ಪ್ರೇಮ, ಒಲವು ಎಂಬ ದೊಡ್ಡ ದೊಡ್ಡ ಆದರ್ಶಗಳನ್ನು ಕಟ್ಟಿಕೊಂಡಿದ್ದೇವೆಯೇ? ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ’ ಎಂದು ಹಾಡಿದ ಪುರಂದರ ದಾಸರು ವೇದ ಶಾಸ್ತ್ರಗಳನ್ನು ಓದಿಕೊಂಡು, ಪುರಾಣ-ಪಂಚಾಗ ತಿಳಿದುಕೊಂಡ ಪಂಡಿತನಾಗಲೀ, ಹೆಂಟೆ ಒಡೆದು ಮಣ್ಣಿನ ನೆಲವನ್ನು ಉತ್ತುವ ರೈತನಾಗಲೀ, ಸಂನ್ಯಾಸಿ-ಜಂಗಮ ಜೋಗಿಯ ವೇಷ ಹಾಕಿದವರಾಗಲೀ, ಜಟ್ಟಿ-ಮೊಂಡ-ಬೈರಾಗಿಯಾಗಲೀ, ಮೈಮೇಲೆ ಆಭರಣದ ಅಂಗಡಿಯನ್ನೇ ಹೊತ್ತು ಓಡಾಡುವ ರಾಜನಾಗಲೀ ಎಲ್ಲವನ್ನೂ ಮಾಡುವುದು ಹೊಟ್ಟೆಗಾಗಿ ಎಂದು ಸರಳವಾಗಿ ನಿರೂಪಿಸಿದ್ದಾರೆ. ಹಾಗೇನಾ ಈ ನಮ್ಮ ಪ್ರೀತಿ ಎಂಬ ಆದರ್ಶ?

ಪ್ರಕೃತಿ ಸಹಜವಾದ, ಹೆಣ್ಣು ಗಂಡಿನ ನಡುವಿನ ಲೈಂಗಿಕ ಆಕರ್ಷಣೆ ಎಷ್ಟು ಶಕ್ತಿಶಾಲಿಯಾದದ್ದೆಂದರೆ ಅದನ್ನು ಹತ್ತಿಕ್ಕಲು ನಮ್ಮ ಸಮಾಜ ಮಾಡಿದ ಎಲ್ಲಾ ಉಪಾಯಗಳು, ಸಾಹಸಗಳು ಚೂರೂ ಕೆಲಸಕ್ಕೆ ಬಾರದೆ ಹೋದವು. ನಮ್ಮೆಲ್ಲಾ ಧರ್ಮಗಳು,ಧಾರ್ಮಿಕ ಸಂಸ್ಥೆಗಳು, ಧರ್ಮ ಗ್ರಂಥಗಳು ಲೈಂಗಿಕತೆಯನ್ನು ಪಾಪವೆಂಬಂತೆ, ಹೆಣ್ಣು ಗಂಡಿನ ನೈಸರ್ಗಿಕವಾದ ಸಮಾಗಮವನ್ನು ಧರ್ಮ ಬಾಹಿರ, ಹೀನ ಕೃತ್ಯವೆಂದು ಬಿಂಬಿಸಿ ಮನುಷ್ಯನ ಲೈಂಗಿಕ ಹಸಿವನ್ನು ಇಂಗಿಸುವ ವ್ಯವಸ್ಥಿತ ಹುನ್ನಾರ ಮಾಡಿತು. ಆದರೆ ಪ್ರಕೃತಿಯ ಶಕ್ತಿಯ ಎದುರು ಮನುಷ್ಯನ ಯಾವ ಕೃತಕ ಧಾರ್ಮಿಕ ಕಟ್ಟಳೆಗಳೂ ಇಲ್ಲಲಾಗಲಿಲ್ಲ. ಯಾವಾಗ ಮನುಷ್ಯನ ಲೈಂಗಿಕ ಹಸಿವನ್ನು ಬಾಹ್ಯ ಬಲ ಪ್ರಯೋಗದಿಂದ ಹತ್ತಿಕ್ಕಲು ಅಸಾಧ್ಯ ಎಂಬುದು ಅರಿವಾಯಿತೋ ಆಗ ಸಮಾಜ ದಾಂಪತ್ಯ ವ್ಯವಸ್ಥೆಯ ಶರಣು ಹೋಯಿತು. ಮದುವೆಯೆಂಬುದನ್ನು ಲೈಂಗಿಕತೆಗೆ ಸಮಾಜ ನೀಡಲಾರಂಭಿಸಿದ ಲೈಸೆನ್ಸ್ ಎಂಬುದಾಗಿ ಬಿಂಬಿಸಲಾಯ್ತು. ಮದುವೆಯಾಚೆಗಿನ ಲೈಂಗಿಕತೆಗೆ, ಆಕರ್ಷಣೆಗೆ ಕಡಿವಾಣ ಹಾಕುವುದಕ್ಕಾಗಿ ದಾಂಪತ್ಯದ ಆದರ್ಶಗಳನ್ನು ಜನರ ಮನಸ್ಸಿನಲ್ಲಿ ಬೇರೂರಿಸಲು ಪ್ರಯತ್ನಿಸಲಾಯಿತು. ಆದರೆ ಮನುಷ್ಯನ ಸಹಜ ಹಸಿವನ್ನು, ಆಕರ್ಷಣೆಯನ್ನು ಸಮಾಜ ಸಂಪೂರ್ಣವಾಗಿ ಹತ್ತಿಕ್ಕಲು ಸಾಧ್ಯವಾಗಲಿಲ್ಲ. ಆಹ ಹುಟ್ಟಿಕೊಂಡದ್ದೇ ಕಣ್ಣಿಗೆ ಮಣ್ಣೆರೆಚುವ ತಂತ್ರಗಳು. ಮನುಷ್ಯ ತನ್ನ ಈ ಲೈಂಗಿಕ ದೌರ್ಬಲ್ಯಗಳನ್ನು ಮರೆಮಾಚಲು ಪ್ರೀತಿಯ ಆದರ್ಶವನ್ನು ಬಿತ್ತಿದ. ಹೆಣ್ಣಿಗೆ ಗಂಡು ಆಕರ್ಷಿತವಾಗುವುದು, ಗಂಡಿನ ಸಾಂಗತ್ಯಕ್ಕಾಗಿ ಹೆಣ್ಣು ಹಪಹಪಿಸುವುದು ದೈವಿಕವಾದ ಭಾವನೆ ಎಂದು ತನ್ನನ್ನೇ ತಾನು ಭ್ರಮೆಗೆ ತಳ್ಳಿಕೊಂಡ. ಪ್ರೀತಿ ಕುರುಡು, ಪ್ರೇಮಿಗಳಿಗೆ ಸಾವಿಲ್ಲ, ಒಲವೆಂಬ ವಿಸ್ಮಯ ಎಂದು ಹುಚ್ಚು ಹುಚ್ಚಾಗಿ ಆಲಾಪಿಸತೊಡಗಿದ. ಆದರೆ ಇವೆಲ್ಲಕ್ಕೂ ತಾರ್ಕಿಕವಾದ ಕೊನೆಯಿರುವುದು ಲೈಂಗಿಕ ಸಮಾಗಮದಲ್ಲೇ ಎಂಬ ಕಹಿ-ಸತ್ಯವನ್ನು ಆತ ನಿರಾಕರಿಸಲು ಸಾಧ್ಯವಾಗಲಿಲ್ಲ. ಆತ ಅದೇಷ್ಟೇ ಪ್ರಯತ್ನ ಪಟ್ಟರೂ ದೈಹಿಕ ಒಂದಾಗುವಿಕೆಗೆ ಸಹಾಯಕವಾದ ಪ್ರೀತಿಯ ಬಗ್ಗೆ ಆತನಿಗೆ ಗೌರವ ಉಳಿಯಲಿಲ್ಲ. ಆದರೂ ಆತ ಪ್ರೀತಿಯ ಆದರ್ಶದ ಹೆಸರಿನಲ್ಲಿ ತನ್ನನ್ನು ತಾನು ಮೋಸ ಮಾಡಿಕೊಳ್ಳುವುದನ್ನು ಬಿಟ್ಟಿಲ್ಲ.

ಈಗ ಹೇಳಿ, ಪ್ರೀತಿ ರೋಮಾಂಚನವಾ, ಪ್ರೀತಿ ಆತ್ಮವಂಚನೆಯಾ?


Technorati : , , , , ,


Blog Stats

  • 71,866 hits
ಮಾರ್ಚ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12
3456789
10111213141516
17181920212223
24252627282930
31  

Top Clicks

  • ಯಾವುದೂ ಇಲ್ಲ