ಕಲರವ

ಸಣ್ಣ ಕಥೆಗಳ ಜನಕ

Posted on: ಫೆಬ್ರವರಿ 27, 2008

ಓದು ಎನ್ನುವುದು ನಮ್ಮ ಜೀವನದಲ್ಲಿ ನಿರಂತರ ಪ್ರಕ್ರಿಯೆಯಾಗಿರಬೇಕು, ದಿನಾ ನೋಡುವ ಧಾರಾವಾಹಿಯಂತೆ. ಪುಸ್ತಕದ ಮೂಲಕ ನಾವು ಜಗತ್ತಿನ ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಭೇಟಿ ಮಾಡುತ್ತೇವೆ. ಆತನನ್ನು ಮಾತನಾಡಿಸುತ್ತೇವೆ. ಆತ ಹೇಳುವುದನ್ನು ಕೇಳುತ್ತೇವೆ. ಆತನಿಗೆ ನಾವು ಹೇಳುವುದನ್ನು ಕೇಳು ಅನ್ನುತ್ತೇವೆ. ಆತನ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುತ್ತೇವೆ, ಪ್ರಶ್ನೆ ಮಾಡುತ್ತೇವೆ, ತಕರಾರು ಎತ್ತುತ್ತೇವೆ. ಆತನೊಂದಿಗೆ ಜಗಳ ಮಾಡುತ್ತೇವೆ, ರಾಜಿಯಾಗುತ್ತೇವೆ. ಕೋಪಿಸಿಕೊಂಡು ದೂರ ಮಾಡುತ್ತೇವೆ. ಅಪ್ಪಿ ಮುದ್ದಾಡುತ್ತೇವೆ. ಪ್ರೀತಿಯಿಂದ ಎದೆಗೊತ್ತಿಕೊಳ್ಳುತ್ತೇವೆ. ಯಾವ ಪೊಸೆಸೀವ್‌ನೆಸ್ ಇಲ್ಲದೆ ಆತನನ್ನು ಇನ್ನೊಬ್ಬರಿಗೆ ಪರಿಚಯ ಮಾಡಿಸಿಕೊಡುತ್ತೇವೆ. ಆತನಿಗೆ ಇವನನ್ನು ಪ್ರೀತಿಸು ಎಂದು ಮುಕ್ತವಾಗಿ ಶಿಫಾರಸ್ಸು ಮಾಡುತ್ತೇವೆ. ಸಮಯ ಕಳೆದಾಗ ಯಾವ ನೋವೂ, ಅನುಮಾನ, ಮುರಿದ ಮನಸ್ಸಿಲ್ಲದೆ ಬೇರೊಬ್ಬ ವ್ಯಕ್ತಿಯೆಡೆಗೆ ನಡೆದುಬಿಡುತ್ತೇವೆ, ಹೆಚ್ಚು ಪ್ರಬುದ್ಧರಾಗಿ. ಪುಸ್ತಕಗಳ ಜಗತ್ತೇ ಇಂಥದ್ದು! ಇಂತಹ ಪುಸ್ತಕ ಲೋಕದ ಪರಿಚಯ: ಇಂಥದ್ದೊಂದು ಪುಸ್ತಕ ಓದಿದ್ದೆ…!

ಮಾಸ್ತಿ ಎಂದೊಡನೆಯೇ ‘ಸಣ್ಣ ಕಥೆಗಳ ಜನಕ’ ಎಂಬ ಅವರ ಬಿರುದು ನೆನಪಿಗೆ ಬಾರದಿರದು.ಕನ್ನಡದಲ್ಲಿ ಸಣ್ಣ ಕಥೆಗಳ ಪ್ರಕಾರವನ್ನು ಸಾಕಷ್ಟು ಪ್ರಭಾವಿಸಿದ ಹಾಗೂ ಶ್ರೀಮಂತಗೊಳಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಕತೆ ಹೇಳುವಿಕೆ ಎಂಬ ಪರಂಪರೆ ನಮ್ಮ ನಾಗರೀಕತೆ ಹಾದಿಯ ಬದಿಯಲ್ಲೇ ಸಾಗಿಬಂದದ್ದು. ನಾವು,ನಮ್ಮ ಅಪ್ಪ, ಅಜ್ಜಂದಿರೆಲ್ಲಾ ತಮ್ಮ ಅಜ್ಜಿ-ಅಜ್ಜಂದಿರಿಂದ ಕಥೆ ಕೇಳುತ್ತಲೇ ಬೆಳೆದವರು. ಕಥೆ ಕೇಳುವಿಕೆಯ ಸಂಪ್ರದಾಯ ಕಡಿಮೆಯಾಗುತ್ತಾ ಬಂದತೆಲ್ಲಾ ಕಥೆ ಹೇಳುವ ಕಲಾಗಾರಿಕೆಯೂ, ಸಹಜವಾದ ಪ್ರತಿಭೆಯೂ ಮರೆಯಾಗುತ್ತಾ ಕಥೆ ಹೇಳುವುದು ಹೇಗೆ ಎಂದು ಕೇಳುವ ಹಂತವನ್ನು ನಾವು ತಲುಪಿಕೊಂಡಿದ್ದೇವೆ.book review copy.jpg

ಅದೇನೇ ಇರಲಿ, ಮಾಸ್ತಿಯವರ ಕಥೆಗಳು ಬಹುಮುಖ್ಯವಾಗಿ ಕಥೆ ಹೇಳುವ ಸಂಸ್ಕೃತಿಯ ಮುಂದುವರಿಕೆಯಂತೆ ನಮಗೆ ಕಾಣುತ್ತವೆ. ಅವರ ವಿವರೆಣೆ ತೀರಾ ಸಹಜವಾಗಿ ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತವೆ, ನಮ್ಮ ಯಾವ ಬೌದ್ಧಿಕ ಕಸರಿತ್ತಿನ ಹಂಗೂ ಇಲ್ಲದೆ ನಮ್ಮ ಕಲ್ಪನಾ ಜಗತ್ತಿನಲ್ಲಿ ಮಾಸ್ತಿಯವರ ಪಾತ್ರಗಳು ಅನಾಯಾಸವಾಗಿ ಪ್ರವೇಶ ಪಡೆದುಬಿಡುತ್ತವೆ. ಇಲ್ಲಿ ಮಾಸ್ತಿಯವರು ಕೇವಲ ಒಬ್ಬ ನಿರೂಪಕರಾಗಿ, ಪಾತ್ರಗಳು ಹೇಳುವುದನ್ನು ಕೇಳಿ ನಮಗೆ ಹೇಳುವ ಕೆಲಸವನ್ನು ಮಾಡುವವರಾಗಿ ಮಾತ್ರ ಕಾಣಿಸುತ್ತಾರೆ. ಅಲ್ಲಿ ಕಥೆಗಾರ ಮಾಸ್ತಿ ಮರೆಯಾಗಿಬಿಟ್ಟಿರುತ್ತಾರೆ, ಅವರ ಪಾತ್ರಗಳು ನಮ್ಮ ಮನೋವೇದಿಕೆಯನ್ನು ಆಕ್ರಮಿಸಿಕೊಂಡುಬಿಡುತ್ತವೆ. ಪಾತ್ರಗಳ ಸೃಷ್ಟಿಕರ್ತನಿಗಿಂತ ಪ್ರಭಾವಶಾಲಿಯಾಗಿ ಬೆಳೆಯುವ ಪಾತ್ರಗಳೇ ಅಲ್ಲವೇ ನಮಗೆ ಕಡೆತನಕ ಮನಸ್ಸಿನಲ್ಲಿ ಉಳಿಯುವುದು. ಆಗಲೇ ಕಥೆಗಾರ ಗೆಲ್ಲುವುದು.

ಶಾಸ್ತ್ರೀಯವಾಗಿ ಮಾಸ್ತಿಯವರ ಕಥೆಗಳನ್ನು ಯಾವ ರೀತಿಯಲ್ಲಿ ವಿಂಗಡಣೆ ಮಾಡುತ್ತಾರೋ ನನಗೆ ತಿಳಿದಿಲ್ಲ. ಆದರೆ ಅವರ ಕಥೆಗಳ ಅನನ್ಯನತೆಯ ಅನುಭವವನ್ನು ಮಾತ್ರ ನಿಮ್ಮೊಂದಿಗೆ ಹಂಚಿಕೊಳ್ಳಬಯಸುವೆ. ಕಥೆ ಕಥೆಗಾರನ ಒಂದು ಕಲಾಕೃತಿ. ಅದು ತನ್ನಷ್ಟಕ್ಕೆ ತಾನೇ ಸ್ವಯಂ ಸಂಪೂರ್ಣವಾದದ್ದಾಗಬೇಕು. ಕಥೆಯ ಹರಿವಿನ ನಡುವೆ ಕಥೆಗಾರ ನುಸುಳಿ ಏನಾದರೂ ಸಂದೇಶ ಕೊಡಹೊರಟರೆ ಕಥೆ ರಾಜಕೀಯ ಪ್ರಣಾಳಿಕೆಯಾಗುತ್ತದೆ. ಕಥೆಯ ಪಾತ್ರಗಳು ಕಥೆಗಾರನ ಅಭಿಪ್ರಾಯ, ಅನುಭವ ಜಗತ್ತಿನ ಹಂಗಿಗೆ ಒಳಗಾದರೆ ಕಥೆ ಬರಹಗಾರನ ಆತ್ಮಕಥೆಯಾಗುತ್ತದೆ. ಕಥೆ ಒಂದು ಕಲಾಕೃತಿಯಾಗಬೇಕಾದರೆ ಅಲ್ಲಿ ಕೇವಲ ಪಾತ್ರಗಳಿರಬೇಕು ಹಾಗೂ ಪಾತ್ರಗಳ ನಡುವೆ ಪಾರದರ್ಶಕವಾದ ಸಂವಾದವಿರಬೇಕು. ಇವುಗಳಿಗೆಲ್ಲಾ ಸಿದ್ಧ ಮಾದರಿಯ ಹಾಗೆ ಅತ್ಯುತ್ತಮ ಉದಾಹರಣೆಯಾಗಿ ನಮಗೆ ಸಿಗುವಂಥವು ಮಾಸ್ತಿಯವರ ಸಣ್ಣ ಕಥೆಗಳು.2202649087_faafa01e4b.jpg

ಮಾಸ್ತಿಯವರು ತಾವು ನಡೆಸುತ್ತಿದ್ದ ‘ಜೀವನ’ ಎಂಬ ಪತ್ರಿಕೆಯಲ್ಲಿ ನಿಯಮಿತವಾಗಿ ಕಥೆಗಳನ್ನು ಪ್ರಕಟಿಸುತ್ತಿದ್ದರು. ಅವುಗಳನ್ನು ಸಂಗ್ರಹಿಸಿ ಅನೇಕ ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ನನಗೆ ಸಿಕ್ಕ ಸಂಪುಟವೊಂದರಲ್ಲಿ ನಾನು ಕಂಡ ಕಥಾ ಜಗತ್ತಿನ ಚಿತ್ರಣವನ್ನು ನಿಮ್ಮ ಮುಂದೆ ಬಿಚ್ಚಿಡಬಯಸುವೆ.

ರಂಗಸ್ವಾಮಿ ತುಂಬಾ ಸ್ಫುರದ್ರೂಪಿಯಾದವ. ಆತನ ಹೆಂಡತಿಯೂ ಸುರಸುಂದರಿಯೇ. ಆದರೆ ಆತನಿಗೆ ಆಕೆಯಲ್ಲಿ ತಾನು ಕಾಣಬಯಸುವ ಗುಣವೊಂದರ ಕೊರತೆ ಕಂಡುಬರುತ್ತದೆ. ಸರಿ, ಆ ಗುಣವಿರುವ ಹೆಂಗಸನ್ನು ಹುಡುಕಿಕೊಂಡು ಹೊರಡುತ್ತಾನೆ. ಅಂಥವಳೊಬ್ಬಳನ್ನು ಹಿಂಬಾಲಿಸುತ್ತಾನೆ. ಕಪಾಳಮೋಕ್ಷವಾಗುವುದರ ಜೊತೆಗೆ ಆತನಿಗೆ ಕವಿದ ಮಂಕು ಮೋಕ್ಷ ಕಾಣುತ್ತದೆ. ಪ್ರೀತಿ ಎಂದರೆ ಕೇವಲ ಹದಿಹರೆಯದವರ ಎದೆಯ ಮಿಡಿತ ಎಂಬಂತೆ ಬಿಂಬಿಸುವ ಸಿದ್ಧಮಾದರಿಯ ಕಥೆಗಾರರಿಗಿ ದಕ್ಕದ ಪ್ರೀತಿಯ ನೈಜ ಚಿತ್ರಣವನ್ನ ಮಾಸ್ತಿಯವರು ಕಟ್ಟಿಕೊಡುತ್ತಾರೆ. ಪ್ರೀತಿಯಲ್ಲಿ ಬಿದ್ದವರ ಅವಿವೇಕ, ತಾವು ಪ್ರೀತಿಸುವವರು ತೋರುವ ಸಹಜವಾದ ಗೌರವ, ಆತ್ಮೀಯತೆ, ನಗು ಎಲ್ಲವನ್ನೂ ತಮ್ಮೆಡೆಗಿನ ಪ್ರೀತಿಯೆಂದು ಭಾವಿಸುವ ಹೆಡ್ಡತನವನ್ನು ‘ರಂಗಸ್ವಾಮಿಯ ಅವಿವೇಕ’ದಲ್ಲಿ ಬಿಂಬಿಸಿದ್ದಾರೆ.

‘ಮಸುಮತ್ತಿ’ ಎನ್ನುವ ಕಥೆಯಲ್ಲಿ ಸೂಕ್ಷ್ಮವಾದ ಸಮಸ್ಯೆಯೊಂದನ್ನು ಕೈಗೆತ್ತಿಕೊಳ್ಳುತ್ತಾರೆ ಮಾಸ್ತಿ. ಪ್ರಾಚೀನವಾದ, ಆರ್ಷೇಯವಾದ ಸಂಗತಿಗಳನ್ನೆಲ್ಲಾ ಎತ್ತಿಕೊಂಡು ಹೋಗಿ ಮ್ಯೂಸಿಯಮ್ಮಿನ ಟ್ಯೂಬ್ ಲೈಟ್‌ನ ಬೆಳಕಿನಲ್ಲಿ ಇಟ್ಟು ಪ್ರಸಿದ್ಧಿಯನ್ನು ತಂದು ಕೊಡಲು ಬಯಸುವ ಪಾಶ್ಚೀಮಾತ್ಯ ಮನಸ್ಥಿತಿ ಹಾಗೂ ತಮ್ಮ ಹಿತ್ತಿಲಲ್ಲೇ ಇರುವಂತಹ ಇತಿಹಾಸದ ಪಳೆಯುಳಿಕೆಯನ್ನು ಅವುಗಳ ಬೆಲೆಯರಿಯದೆ ಅಸಡ್ಡೆಯಿಂದ ಕಾಣುವೆ ಈ ನೆಲದ ಜನರ ಮನಸ್ಥಿತಿಯ ಚಿತ್ರಣ ನಮಗಿಲ್ಲಿ ಸಿಗುತ್ತದೆ.

ಕುರುಡು ಹೆಂಗಸಾದ ಲಕ್ಷ್ಮಮ್ಮ ತನ್ನ ಬದುಕಿನಲ್ಲಿ ಎದುರಿಸುವ ಸಂಕಷ್ಟ, ಗಂಡನೆಡೆಗಿನ ಆಕೆಯ ಭಕ್ತಿ ಅದರ ಫಲವಾಗಿ ಉಂಟಾಗುವ ಮತಿವಿಭ್ರಾಂತಿಯ ಕಥೆ ‘ಮಾಲೂರಿನ ಲಕ್ಷ್ಮಮ್ಮ’ದಲ್ಲಿ ಬಂದುಹೋದರೆ, ‘ವೆಂಕಟ ಶಾಮಿಯ ಕಥೆ’ಯಲ್ಲಿ ಮನೆಯವರ ವಿರೋಧಕ್ಕೆ ಅಂಜದೆ ದೊಂಬರದ ಹುಡುಗಿಯನ್ನು ಮದುವೆಯಾಗಬಯಸುವ ಯುವಕ ವೆಂಕಟಶಾಮಿಯ ದುರಂತ ಪ್ರೇಮ ಕಥೆಯಿದೆ.

‘ಜೋಗ್ಯೋರ ಅಂಜಪ್ಪನ ಕೋಳಿ ಕಥೆ’ಯಲ್ಲಿ ಬದುಕಿನಲ್ಲಿ ಎದುರಾಗುವ ಕೆಲವು ಅನಿರೀಕ್ಷಿತ ಘಟನೆಗಳಿಂದ ಸಿಗುವ ಪಾಠದ ವಿವರಣೆಯಿದೆ. ಮನುಷ್ಯ ಸ್ವಭಾವಗಳ ನಿಗೂಢ ತಂತುಗಳ ಅನಾವರಣವಿದೆ. ಮನೆ ಮೆನೆಗೆ ತಿರುಗಿ ಪದ ಹಾಡಿ ಭಿಕ್ಷೆ ಪಡೆಯುವ ಅಂಜಪ್ಪ ಹುಡುಗಿಯೊಬ್ಬಳು ನೀಡಿದ ಕೋಳಿಯನ್ನು ತಾನೇ ಕದ್ದದ್ದು ಎಂದು ಒಪ್ಪಿಕೊಂಡು ಹುಡುಗಿಯ ಹೆಸರು ಉಳಿಸುತ್ತಾನೆ. ಆದರೆ ಆ ಮಹಾಪ್ರಚಂಡ ಹುಡುಗಿ ಹಿಂದೆ ತನ್ನ ಪ್ರಿಯತಮನಿಗೆ ಒಂದೆರಡು ಕೋಳಿ ಕೊಟ್ಟದ್ದನ್ನು ಮರೆಮಾಚಲು ಕೋಳಿ ಕಳ್ಳತನವಾಗಿವೆ ಎನ್ನುವುದನ್ನು ಸಾಧಿಸಲು ಅಂಜಪ್ಪನನ್ನು ಸಿಕ್ಕಿಸಿಹಾಕುತ್ತಾಳೆ.

‘ಮೊಸರಿನ ಮಂಗಮ್ಮ’ ಕಥೆಯಲ್ಲಿ ಬಹುತೇಕ ಮನೆಗಳಲ್ಲಿ ಅತ್ತೆ ಸೊಸೆಯರ ಜಗಳಕ್ಕೆ ಕಾರಣವಾಗುವ ಮಗನೆಡೆಗಿನ ತಾಯಿಯ ಅತಿಯಾದ ಪೊಸೆಸಿವ್ ನೆಸ್ ಹಾಗೂ ಅದನ್ನೇ ಪ್ರೀತಿಯೆಂದು ಭಾವಿಸುವ ದುರಂತವಿದೆ. ತನ್ನ ದರ್ಪ ಹಾಗೂ ಯಜಮಾನಿಕೆಗೆ ಆದ ಅತಿಕ್ರಮಣವನ್ನು ಸಹಿಸಲಾಗದೆ ಅದನ್ನು ತನ್ನ ಹೆಂಡತಿಯೆಡೆಗಿರುವ ಮಗನ ಸಹಜವಾದ ಮೋಹವನ್ನು ಟೀಕಿಸುವುದರಲ್ಲಿ ನಿವಾರಿಸಿಕೊಳ್ಳಬಯಸುವ ತಾಯಿಯ ಚಿತ್ರಣ ಸಿಕ್ಕುತ್ತದೆ.

ಪ್ರಕೃತಿ ಸಹಜವಾದ ಕಾಮದ ವಾಂಛೆ ಹಾಗೂ ಅದು ಮಾನವ ಸಂಬಂಧಗಳ ಮೇಲೆ ಬೀರುವ ಪರಿಣಾಮಗಳನ್ನು ‘ಗೋತಮಿ ಹೇಳಿದ ಕಥೆ’ಯಲ್ಲಿ ಕಾಣಬಹುದು. ಮನುಷ್ಯನ ಸಂಬಂಧಗಳೆಲ್ಲವೂ ನಾಗರೀಕತೆಯ ಫಲವಾದಂಥವು ಆದರೆ ಕಾಮ ಪ್ರಾಕೃತಿಕ. ಅದು ನಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರುವುದು ಸ್ವಾಭಾವಿಕ. ಇದನ್ನು ತಡೆಯಲು ಸಂಯಮ ಇರಬೇಕು ಎನ್ನುವುದು ಕಥೆಯಲ್ಲಿ ಮಾರ್ಮಿಕವಾಗಿ ಬಿಂಬಿತವಾಗಿದೆ.

ಒಳ್ಳೆಯತನ ಯಾವಾಗಲೇ ಕೆಡುಕಿನ ಮೇಲೆ ಗೆಲ್ಲುತ್ತದೆ ಎಂಬ ಲೋಕರೂಢಿಯ ಮಾತನ್ನು ಮರುಮಾಪನ ಮಾಡುವ ‘ಬೈಚೇಗೌಡ’ ಕಥೆಯಲ್ಲಿ ಊರಿನ ದುರಾಚಾರಿ ಶಾನುಭೋಗನನ್ನು ತನ್ನ ಒಳ್ಳೆಯತನದ ಬಲದಿಂದ ಮಣಿಸುವಲ್ಲಿ ವಿಫಲನಾಗುವ ಬೈಚೇಗೌಡನ ಕಥೆಯಿದೆ. ಮದುವೆಯೆಂಬ ಸಮಾಜದ ವ್ಯವಸ್ಥೆಗೆ ಬಲಿಯಾಗುವ ಹೆಣ್ಣು ಜೀವದ ದಾರುಣ ಕಥೆ, ಸಮಾಜದ ಢೋಂಗಿ ನಡವಳಿಕೆ ತೆರೆದಿಡುವ ‘ದುರದೃಷ್ಟದ ಹೆಣ್ಣು’, ಹಾಗೆಯೇ ಉಳಿದ ಕಥೆಗಳಾದ ‘ಟಾಂಗಾ ಹುಸೇನ’, ‘ಆಚಾರವಂತ ಅಯ್ಯಂಗಾರ್ರು’, ‘ಸಂನ್ಯಾಸ ಅಲ್ಲದ ಸಂನ್ಯಾಸ’ ನಮ್ಮನ್ನು ಹಿಡಿದಿಡುವಲ್ಲಿ ಸಫಲವಾಗುತ್ತವೆ.

ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿ ಅಧ್ಯಯನ ಮಾಡುವವರಿಗೆ ಮಾಸ್ತಿಯವರ ಕೆಲವು ಕಥೆಗಳು ಕೇವಲ ಕೇಳಿದ, ನೋಡಿದ, ನಡೆದ ಘಟನೆಗಳ ಚಿತ್ರಣದಂತೆ ಕಂಡು ನಿರಾಶೆಯಾಗಬಹುದಾದರೂ ಅವರ ಕಥನ ಕ್ರಿಯೆಗೆ ಮಾರುಹೋಗದೆ ಅವುಗಳನ್ನು ಓದುವುದು ಅಸ್ವಾಭಾವಿಕವೆನಿಸುತ್ತದೆ ಎಂಬುದು ಸುಳ್ಳಲ್ಲ.

ಕೆ.ಎಸ್.ಎಸ್

1 Response to "ಸಣ್ಣ ಕಥೆಗಳ ಜನಕ"

Hello,

Nice blog, especially refreshing to see content that appeals to the Kannada audience. I would like to introduce you to a quick and easy method of typing Kannada on the Web.
You can try it live on our website, in Kannada!

http://www.lipikaar.com

Download Lipikaar FREE for using it with your Blog.

No learning required. Start typing complicated words a just a few seconds.

> No keyboard stickers, no pop-up windows.
> No clumsy key strokes, no struggling with English spellings.

Supports 14 other languages!

Thanking you,

Badal Dixit

(Content Designer – lipikaar.com)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 71,866 hits
ಫೆಬ್ರವರಿ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
2526272829  

Top Clicks

  • ಯಾವುದೂ ಇಲ್ಲ
%d bloggers like this: