ಕಲರವ

Icon

ಇದು ಬ್ಲಾಗ್ ಲೋಕದ ‘ಸಡಗರ’!

ಆತ್ಮಗಳ ಸಮ್ಮಿಲನವಲ್ಲ; ಆವಶ್ಯಕತೆಗಳ ಪೂರೈಕೆ

ಮಾರ್ಚ್ ೨೦೦೮ರ ಸಂಚಿಕೆಯ ಮುಖಪುಟವನ್ನು ಸ್ನೇಹದ ಬಗೆಗಿನ ಚರ್ಚೆಗೆ ಮೀಸಲಿರಿಸಲಾಗಿತ್ತು. ಗೆಳೆತನ ಹುಟ್ಟುವುದು ಕೇವಲ ಪರಸ್ಪರರಲ್ಲಿನ ಆವಶ್ಯಕತೆಗಾಗಿ ಎನ್ನುತ್ತಾರೆ ಬಾಲುಪ್ರಸಾದ್.ಆರ್.

ಸ್ನೇಹ ಅಂದರೇನು?

ಒಂದೇ ಮನೋಭಾವ, ಒಂದೇ ಆಸಕ್ತಿ-ನಿರಾಸಕ್ತಿ, ಒಂದೇ ಆಯ್ಕೆ-ವಿಮುಖತೆ- ಹೀಗೆ ಹಲವು ‘ಒಂದೇ’ಗಳನ್ನು ಹೊಂದಿರುವ ಇಬ್ಬರ ನಡುವಿನ ಸಂಬಂಧವಾ? ಹೌದು ಅಂತೀನಿ. ಸ್ನೇಹ ಅಂತಸ್ತು, ಗೌರವ, ಸ್ಥಾನಮಾನಗಳ ಹಾರೈಕೆಯಲ್ಲಿ ಬೆಳೆಯುತ್ತಾ? ಅದಕ್ಕೂ ಹೌದು ಅಂತೀನಿ. ಯಾಕಂದ್ರೆ, ಸ್ನೇಹ ಹುಟ್ಟುವುದು basically ಆವಶ್ಯಕತೆಗೆ. ನಮ್ಮ ಚಿಂತನೆಗೆ ಮನ್ನಣೆಯ ಆವಶ್ಯಕತೆ, ಸಂಕಷ್ಟಕ್ಕೆ ಸಾಂತ್ವನ, ಹಾಸ್ಯಕ್ಕೆ ನಗು, ಸಾಧನೆಗೆ ಮೆಚ್ಚುಗೆ, ಸಹಾಯಕ್ಕೆ ಕೃತಜ್ಞತೆಗಳನ್ನು ನಮ್ಮ ಮನಸ್ಸು ನಿರೀಕ್ಷಿಸುತ್ತದೆ. ಇಷ್ಟೇ ಅಲ್ಲದೆ ನಾವು ನಮ್ಮ ವ್ಯವಹಾರಗಳಲ್ಲಿ, ನಮ್ಮ ಆಯ್ಕೆಗಳಲ್ಲಿ, ಮತ್ತೊಬ್ಬರ ಬದುಕಿನಲ್ಲಿ ಐಡೆಂಟಿಟಿಯನ್ನು ಸ್ಥಾಪಿಸ ಬಯಸುತ್ತೀವಿ. ಒಟ್ಟಾರೆ ನಮ್ಮ ಭಾವಕ್ಕೆ ನಾವು ನಿರೀಕ್ಷಿಸಿದ ಪ್ರತಿಭಾವ ಎಲ್ಲಿ ದೊರೆಯುತ್ತೋ ಅಲ್ಲಿ ಒಂದು ನಂಬಿಕೆ ಮೊಳಕೆಯೊಡೆಯುತ್ತದೆ. ಕ್ರಮೇಣ ಈ ನಂಬಿಕೆಯಿಂದಾಗಿ ಆವಶ್ಯಕತೆಗಳು ತಂತಾನೇ ಪೂರೈಕೆಯಾಗಿ ಮಧುರ ಹೊಂದಾಣಿಕೆಗೆ ಎಡೆಮಾಡಿಕೊಡುತ್ತದೆ.

ಸ್ನೇಹ ಅಂತಸ್ತು, ಸ್ಥಾನಮಾನ, ಪರಸ್ಪರ ಗೌರವಗಳ ಹಾರೈಕೆಯಲ್ಲಿ ಬೆಳೆಯುತ್ತೆ. ಸಮಾನ ಸ್ಥಿತಿವಂತರ ನಡುವಿನ ಸಮಾನವಾದ ಪರಿಸ್ಥಿತಿಗಳು ಬಹುಬೇಗ ಅವರ ನಡುವೆ ಸಂಬಂಧವನ್ನು ಏರ್ಪಡಿಸುತ್ತವೆ. ಇನ್ನು ವಿಭಿನ್ನ ಸ್ಥಿತಿವಂತರ ನಡುವೆ ಅದು ಬೇರೆಯದೇ ನೆಲೆಯಲ್ಲಿ ಕೆಲಸ ಮಾಡುತ್ತದೆ. ಸ್ನೇಹಕ್ಕೆ ಬಾಹ್ಯದ ಪರಿವಿಲ್ಲ. ಎಲ್ಲರೊಟ್ಟಿಗೆ ಬೆರೆಯಬೇಕು ಎಂಬ ಆದರ್ಶ ಹಾಕುವ ಬಯಕೆ. ಕೆಲವೊಮ್ಮೆ ಅದರ ಬಗ್ಗೆ ಇತರರಿಂದ ಮೆಚ್ಚುಗೆಯ ನಿರೀಕ್ಷೆ. ಕೃಷ್ಣನಿಗೆ ಅವ್ಯಕ್ತ ಕನಿಕರ; ಕುಚೇಲನಿಗೆ ತನ್ನ ಸ್ಥಿತಿಯ ಮೇಲೆ ತಿರಸ್ಕಾರವಿಟ್ಟುಕೊಳ್ಳದ ಕೃಷ್ಣನನ್ನು ಕಂಡರೆ ಮೆಚ್ಚು. ಅವನಂತಹ ಸಖ ದೊರೆತನಲ್ಲ ಎಂಬ ಹೆಮ್ಮೆಯ ಭಾವ. ಕೃಷ್ಣನ ಸಾಮೀಪ್ಯದ ಮೂಲಕ ಹೆಮ್ಮೆ ಪಡುವುದರ ಮೂಲಕ ತನ್ನ ಗೌರವ ಗಳಿಕೆ.

ಬಂಧುವು ನಾವು ಶ್ರೀಮಂತರಾಗಲೀ, ಬಡವರಾಗಲೀ ಯಾವಾಗಲೂ ನಮ್ಮ ಜೊತೆ ಇರುತ್ತಾನೆ. ಹಾಗೇ, ಸ್ನೇಹ ಕೂಡ ಬಾಂಧವ್ಯವಾದಾಗ ಇನ್ನಷ್ಟು ಗಟ್ಟಿಗೊಳ್ಳುತ್ತಾ? ಖಂಡಿತಾ ಇಲ್ಲ. ಬಂಧುಗಳು ನಾವು ಹುಟ್ಟಿದಾಗಿನಿಂದ ಸಾಯುವ ತನಕವೂ ಇರುತ್ತಾರೆ. ಆದ್ದರಿಂದಲೇ ಅವರ ಬಗೆಗೊಂದು ಭಯ ಕೂಡ ಇರುತ್ತದೆ. ಎಲ್ಲಿ ನಮ್ಮ ಆವಶ್ಯಕತೆ-ಪರಿಸ್ಥಿತಿಗಳು ಅವರಿಗೆ ಹೊರೆಯಾಗಿ ಬಿಡುತ್ತವೆಯೋ ಅನ್ನೋ ಭಯ. ಆದ್ದರಿಂದಲೇ ಅವರು ಸ್ನೇಹಿತರಿಗಿಂತ ಹೆಚ್ಚು ಅಂತರ ಕಾಯ್ದುಕೊಳ್ಳುತ್ತಾರೆ. ಸ್ನೇಹದಲ್ಲಿ ಹಾಗಲ್ಲ. ನಮ್ಮ ಎಲ್ಲಾ ನಿರೀಕ್ಷೆ-ಆವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯ ಸ್ನೇಹಿತರಲ್ಲಿರುತ್ತೆ. ಅದಕ್ಕಿಂತ ಮುಖ್ಯವಾಗಿ, ಇವೆಲ್ಲಾ ಅವರಿಗೆ ಹೊರೆಯೆನಿಸಿದಾಗ, ನಮ್ಮಿಂದ ದೂರವಾಗುವ ಸ್ವಾತಂತ್ರ್ಯ ಅವರಿಗಿರುತ್ತದೆ. ಆದರೆ ಬಂಧುವಿಗೆ ಅಗಲುವಿಕೆಯ ಸ್ವಾತಂತ್ರ್ಯ ಇರುವುದಿಲ್ಲ. ಈ ಅಗಲುವಿಕೆಯ ಸ್ವಾತಂತ್ರ್ಯ ಸ್ನೇಹವನ್ನು ಬಾಂಧವ್ಯಕ್ಕಿಂತ ಒಂದು ಸ್ತರ ಮೇಲಿಡುತ್ತದೆ, ಒಂದು ಹೆಜ್ಜೆ ಹತ್ತಿರ ತರಿಸುತ್ತೆ.

ಸ್ನೇಹದಲ್ಲಿ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಗಂಡ ಹೆಂಡತಿ ಉತ್ತಮ ದಂಪತಿಗಳಾಗೋದು ಅವರು ಉತ್ತಮ ಸ್ನೇಹಿತರಾದಾಗ; ಬೆಳೆದ ಮಕ್ಕಳು ಹಾಗೂ ತಂದೆ ತಾಯಿಗಳ ನಡುವಿನ ಬಾಂಧವ್ಯ ಉತ್ತಮವಾಗುವುದು ಅವರು ಒಳ್ಳೆಯ ಗೆಳೆಯರಾದಾಗ ಅಂತ ಹೇಳ್ತಾರೆ. ಯಾಕಂದ್ರೆ ಸ್ನೇಹದಲ್ಲಿ ಸ್ವಾತಂತ್ರ್ಯ ಇರುತ್ತದೆ. ಸ್ವತಂತ್ರ ಚಿಂತನೆಗಳಿಗೆ, ಸ್ವತಂತ್ರ ನಿರ್ಧಾರಗಳಿಗೆ, ಸ್ವಂತ ಆಶೆಗಳಿಗೆ-ಆಯ್ಕೆಗಳಿಗೆ ಅವಕಾಶಗಳಿರುತ್ತವೆ. ಆ ಸ್ವಾತಂತ್ರ್ಯದ ಅಂತರ ಸ್ನೇಹವನ್ನು ಗಟ್ಟಿಗೊಳಿಸುತ್ತದೆ.

ಹೀಗಾಗಿ, ಸ್ನೇಹ ಅನ್ನೋದು ಆತ್ಮಗಳ ಸಮ್ಮಿಲನವಲ್ಲ; ಆವಶ್ಯಕತೆಗಳ ಪೂರೈಕೆ ಅಷ್ಟೇ. ಆವಶ್ಯಕತೆಗಳ ಬಯಕೆಯಾಗಲೀ ಅವುಗಳ ಪೂರೈಕೆಯಾಗಲೀ ತಪ್ಪಲ್ಲ. Infact, ಈ ಕ್ರಿಯೆಗಳಲ್ಲೇ ಮನುಷ್ಯ ಸಂಬಂಧ ಉಸಿರಾಡೋದು. ಅದನ್ನು ಒಳಗೊಂಡ ಕ್ರಿಯೆಗಳಲ್ಲಿ ಸ್ವಾರ್ಥ, ಅಸೂಯೆಗಳು ತುಂಬಿದರೆ, ಅಲ್ಲಿ ದ್ರೋಹ ತಲೆಹಾಕುತ್ತದೆ. ಕರ್ಣ ದುರ್ಯೋಧನರ ಸ್ನೇಹ ಇದಕ್ಕೆ ಉತ್ತಮ ನಿದರ್ಶನ. We live in a need based society, mind you!

Filed under: ಮುಖಪುಟ ಲೇಖನ , , , , , , , , , , , , ,

Leave a Reply

ಕನ್ನಡ ದಿನಪತ್ರಿಕೆಗಳು

ಕನ್ನಡ ನಿಯತಕಾಲಿಕೆಗಳು

ಕನ್ನಡ ಪೋರ್ಟಲ್‌ಗಳು

ಕನ್ನಡ ಸಾಮಗ್ರಿ

ಕನ್ನಡ ಹಾಡುಗಳು

ಕನ್ನಡದ ಬ್ಲಾಗುಗಳು

ಚಿತ್ರ ವಾರ್ತೆ